ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮಾರ್ಚ್ 18, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೭

     ಗುಣ-ಕರ್ಮ-ಸ್ವಭಾವಗಳಿಂದ ನಾವು ಯಾವುದೇ ವರ್ಣಕ್ಕೆ ಸೇರಿರಲೊಲ್ಲವೇಕೆ? ಆ ಜ್ಯೋತಿರ್ಮಯ ಪ್ರಭುವಿನಲ್ಲಿ ಈ ಕೆಳಗಿನ ಪ್ರಾರ್ಥನೆಯನ್ನು ಹೃತ್ಪೂರ್ವಕವಾಗಿ ಸಲ್ಲಿಸುವ ಮನೋಭಾವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರಬೇಕು:
ರುಚಂ ನೋ ಧೇಹಿ ಬ್ರಾಹ್ಮಣೇಷು ರುಚಂ ರಾಜಸು ನಸ್ಕೃಧಿ|
ರುಚಂ ವಿಶ್ಯೇಷು ಶೂದ್ರೇಷು ಮಯಿ ಧೇಹಿ ರುಚಾ ರುಚಮ್|| [ಯಜು.೧೮.೪೮.]
     ಪ್ರಭೋ! [ನಃ ಬ್ರಾಹ್ಮಣೇಶು] ನಮ್ಮ ಬ್ರಾಹ್ಮಣರಲ್ಲಿ [ರುಚಂ ಧೇಹಿ] ಪ್ರೇಮವನ್ನು ತುಂಬಿಸು. [ನಃ ರಾಜಸು] ನಮ್ಮ ಕ್ಷತ್ರಿಯರಲ್ಲಿ [ರುಚಂ ಕೃಧಿ] ಪ್ರೇಮವನ್ನುಂಟುಮಾಡು. [ವಿಶ್ಯೇಷು ಶೂದ್ರೇಷು] ವೈಶ್ಯರಲ್ಲಿ, ಶೂದ್ರರಲ್ಲಿ [ರುಚಮ್] ಪ್ರೇಮವನ್ನು ತುಂಬಿಸು. ಇದೇ ಪ್ರಾರ್ಥನೆಯನ್ನು ಹೀಗೂ ಸಲ್ಲಿಸೋಣ. [ನಃ] ನಮಗೆ [ಬ್ರಾಹ್ಮಣೇಶಷು ರುಚಂ ಧೇಹಿ] ಬ್ರಾಹ್ಮಣರ ಬಗೆಗೆ ಪ್ರೇಮವನ್ನು ಹುಟ್ಟಿಸು. [ನಃ] ನಮಗೆ [ರಾಜಸು ರುಚಂ ಕೃಧಿ] ಕ್ಷತ್ರಿಯರ ಬಗೆಗೆ ಪ್ರೇಮವನ್ನುಂಟುಮಾಡು. [ವಿಶ್ಯೇಷು ಶೂದ್ರೇಷು] ವೈಶ್ಯರ, ಶೂದ್ರರ ಬಗೆಗೂ [ರುಚಮ್] ಪ್ರೇಮವನ್ನೇ ಬೆಳೆಯಿಸು. [ರುಚಾ] ನಿನ್ನ ದಿವ್ಯಪ್ರೇಮದಿಂದ [ಮಯಿ] ನನ್ನ ಬಗೆಗೂ [ರುಚಂ ಧೇಹಿ] ಎಲ್ಲರಿಗೂ ಪ್ರೇಮವನ್ನುಂಟುಮಾಡು.
     ವಸ್ತುತಃ ಸರ್ವಮಾನವೋದ್ಧಾರಕ್ಕೆ ಸರ್ವೋತ್ಕೃಷ್ಟ ಸಾಧನವಾದ ಈ ವರ್ಣವ್ಯವಸ್ಥೆ, ತನ್ನ ನಿಜರೂಪದಲ್ಲಿ ಪ್ರಕಟವಾದರೆ ಸಮಾಜ ಸ್ವರ್ಗವಾದೀತು. ಆದರೆ, ಗುಣ-ಕರ್ಮಕ್ಕನುಸಾರ ವಿಭಾಗಿಸಲ್ಪಟ್ಟ ಈ ವರ್ಣವ್ಯವಸ್ಥೆ, ಜಾತಿವಾದದಲ್ಲಿ ಇಳಿದು ಬಂದು ಮಾನವ ಸಮಾಜವನ್ನು ನರಕಸದೃಶವನ್ನಾಗಿ ಮಾಡಿತು. ನಮ್ಮ ಕರ್ತವ್ಯಗಳು ಬೇರೆ ಬೇರೆಯಾದರೂ, ನಾವೆಲ್ಲರೂ ಒಂದೇ ಎಂಬ ಭಾವನಾತ್ಮಕ ಏಕತೆಯನ್ನು ಗುರುತಿಸೋಣ.
-ಪಂ.ಸುಧಾಕರ ಚತುರ್ವೇದಿ.
***************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/02/blog-post_17.html
ನನ್ನ ಮಾತು:
     ಹುಟ್ಟಿನಿಂದ ಬರುವ ಜಾತಿ ಆಧರಿಸಿ ಜನರನ್ನು ಗುರುತಿಸುವ ವ್ಯವಸ್ಥೆ ಇರುವವರೆಗೆ, ರಾಜಕೀಯ ಲಾಭಕ್ಕಾಗಿ ಜಾತಿ ಆಧಾರಿತ ಮೀಸಲಾತಿ, ತುಷ್ಟೀಕರಣ ನೀತಿಗಳು ಹೋಗದೆ ಇರುವವರೆಗೆ ಬದಲಾವಣೆ ನಿರೀಕ್ಷೆ ಇಟ್ಟುಕೊಳ್ಳುವುದು ಮರುಭೂಮಿಯ ಮರೀಚಿಕೆಯಂತೆ ಅನ್ನಿಸುತ್ತದೆ. ಆದರೂ ಸಮಾನಮನಸ್ಕರು ಬದಲಾವಣೆಗಾಗಿ ಪ್ರಯತ್ನ ಮುಂದುವರೆಸಲಿ, ಆ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಆಶಿಸಬಹುದಲ್ಲವೇ?
-ಕ.ವೆಂ.ನಾಗರಾಜ್.
**************

5 ಕಾಮೆಂಟ್‌ಗಳು:

  1. Durgaprasad Menda
    ವಸ್ತುಶಃ ವರ್ಣಗಳು ಗುಣಕರ್ಮಾನುಸಾರವೇ ಸ್ವಾಬಾವಿಕವಾಗಿಯೇ ಭಗವಂತನೇ ಮಾಡಿದ ಸಾಮಾಜಿಕ ವಿಂಗಡಣೆ. ಎಲ್ಲರೂ ತಮ್ಮ ತಮ್ಮ ಗುಣಕ್ಕನುಸಾರವಾಗಿ ಕರ್ಮಗಳನ್ನು ಎಸಗಲು ಬದ್ಧರಾಗಿರುತ್ತಾರೆ. ಆದರೆ ಈ ತೆರನಾದ ಗುಣ ಕರ್ಮಾನುಸಾರವಾದ ವರ್ಣಗಳನ್ನು ಆಚರಿಸದೆ ಕೇವಲ ಒಬ್ಬಾತನ ಹುಟ್ಟನ್ನೇ ಆಧಾರವಾಗಿರಿಸಿ "ಇವ ಬ್ರಾಹ್ಮಣ, ಇವ ಶೂದ್ರ" ಎಂದು ಪರಿಗಣಿಸ ತೊಡಗಿದ್ದೇ ವೈದಿಕ ವರ್ಣಾಶ್ರಮ ಪದ್ಧತಿಯ ಅವನತಿಗೆ ಕಾರಣವಾಯಿತು.
    ಈ ರೀತಿಯಾಗಿ ಬ್ರಾಹ್ಮಣ ಎನಿಸಿಕೊಂಡವರು ಶೂದ್ರರೆನಿಸಿಕೊಂಡವರನ್ನು ಕೀಳು ಎಂಬುದಾಗಿ ಕಾಣತೊಡಗಿದರು. ಯಥಾರ್ಥದಲ್ಲಿ ಹೀಗೆ ಕೀಳರಿಮೆಯುಳ್ಳವರು ಬ್ರಾಹ್ಮಣರೇ ಅಲ್ಲ. ಅವರೇ ನಿಜವಾದ ಶೂದ್ರರು. ಹೀಗೆ ಶೂದ್ರರನ್ನು ಕೀಳಾಗಿ ಕಂಡು ತಾರತಮ್ಯ ನಡೆಸಿದಾಗ ಸಮಾಜದಲ್ಲಿ ವರ್ಣಾಶ್ರಮದ ಬದಲಿಗೆ ಜಾತಿ ಪದ್ದತಿಯು ತಲೆಯೆತ್ತಿತು. ಈ ಜಾತಿ ಪದ್ದತಿಯು ಎಷ್ಟೊಂದು ಸಂಕೀರ್ಣವಾಗಿತ್ತೆಂದರೆ ಕೆಳವರ್ಗದ ಜನರಿಗೆ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗಳು ಸಾಮಾನ್ಯವಾಗಿಬಿಟ್ಟಿತು.
    ಇಂತಹಾ ಸಂದರ್ಭದಲ್ಲಿ ಬದಲೀ ವ್ಯವಸ್ಥೆಯೋ ಎಂಬಂತೆ ಕ್ರೈಸ್ತ ಹಾಗೂ ಮುಸಲ್ಮಾನ ಧರ್ಮೀಯರು ಇಲ್ಲಿಗೆ ಬಂದು ಶೋಷಣೆಗೊಳಗಾದವರನ್ನು ಮತಾಂತರಿಸಿಕೊಂಡರು. ಹಾಗಾಗಿ ನಮ್ಮ ಸನಾತವಾದ ವರ್ಣಾಶ್ರಮ ಪದ್ಧತಿಯನ್ನು ಕಡೆಗಣಿಸಿ, ಕೇವಲ ಹುಟ್ಟಿನ ಆಧಾರದ ಮೇಲೆ ವರ್ಣವನ್ನು ಪರಿಗಣಿಸಿ ಸಾಮಾಜಿಕ ಶೋಷಣೆ ಮಾಡಲು ತೊಡಗಿದುದರಿಂದಲೇ ಇಂದು ಜಾತಿ ಪದ್ಧತಿ ಹಾಗೂ ಮತೀಯ ಘರ್ಷಣೆಗಳು ತಲೆದೋರಿವೆ ಎಂದು ಹೇಳುವುದು ಉತ್ಪ್ರೇಕ್ಷೆಯಾಗಲಾರದು.
    ಯಥಾರ್ಥದಲ್ಲಿ ಬ್ರಾಹ್ಮಣ ಎಂದರೆ ಯಾರು? ಹುಟ್ಟಿನಿಂದ ಎಲ್ಲರೂ ಶೂದ್ರರೇ ಆಗಿದ್ದರೂ, ಯಾರು "ಅಥಾತೋ ಬ್ರಹ್ಮ ಜಿಜ್ಞಾಸಾ:" ಅಂದರೆ ಯಾರ ಮನದಲ್ಲಿ ಬ್ರಹ್ಮ ಜಿಜ್ಞಾಸೆ ಹುಟ್ಟುತ್ತದೋ ಅವರು ಎರಡನೇ ಹುಟ್ಟನ್ನು ಪಡೆಯುತ್ತಾರೆ. ಅಲ್ಲಿಗೆ ದ್ವಿಜತ್ವವು ಪ್ರಾಪ್ತವಾಗುತ್ತದೆ. ಆದರೆ ಈ ತೆರನಾದ ಜಿಜ್ಞಾಸೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ವೆದಾಧ್ಯಾಯನ ಅತ್ಯಗತ್ಯ. ಹಾಗಾಗಿ ಯಾರು ವೇದಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿರುತ್ತಾರೋ ಅವರು ವಿಪ್ರರು ಎಂದಾಗುತ್ತಾರೆ. ಆದರೆ ದ್ವಿಜತ್ವವು ಪ್ರಪ್ತವಾಗದೆ ಕೇವಲ ಅಧ್ಯನದ ಉದ್ದೇಶದಿಂದ ವೇದಗಳನ್ನು ಓದಿದವರನ್ನು ವಿಪ್ರರು ಎಂದು ಕರೆಯಲಾಗದು. ಮೊದಲು ಬ್ರಹ್ಮ ಜಿಜ್ಞಾಸೆ ಆಮೇಲೆ ವೇದಾಧ್ಯಾಯನ. ಆಗ ವಿಪ್ರನು ಹುಟ್ಟಿಕೊಳ್ಳುತ್ತಾನೆ. ಆದರೆ ವೇದಗಳನ್ನು ಅಧ್ಯಯನ ಮಾಡಿದರೆ ಸಾಲದು. ಅದನ್ನು ಆಚರಿಸಬೇಕು. ಆಗ ಬ್ರಹ್ಮ ಜ್ಞಾನವು ತನ್ನಿಂದ ತಾನಾಗಿಯೇ ಹೃದಯದಲ್ಲಿ ಪ್ರಕಾಶಗೊಳ್ಳುತ್ತದೆ. ಅಲ್ಲಿಗೆ ಅವನು ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ಈಗ ಹೇಳಿ ನಮ್ಮ ಇಂದಿನ ಸಮಾಜದಲ್ಲಿ ಈ ತೆರನಾದ ಯಥಾರ್ಥದ ಬ್ರಾಹ್ಮಣರು ಎಷ್ಟು ಮಂದಿ ಇದ್ದಾರೆ? ಕೇವಲ ಹುಟ್ಟನ್ನೇ ಆಧಾರವಾಗಿರಿಸಿ ನಾನು ಬ್ರಾಹ್ಮಣ ನೀನು ಶೂದ್ರ ಎಂದು ಬೀಗುವುದು ಕ್ಷುಲ್ಲಕವಾಗುತ್ತದೆ.
    ಹಾಗಂತ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ್ದು ವ್ಯರ್ಥ ಎಂದೇನಿಲ್ಲ. ಯಥಾರ್ಥದ ಬ್ರಾಹ್ಮಣನಿಗೆ ಮಗನಾಗಿ (ದಯವಿಟ್ಟು ಗಮನಿಸಿ- ಯಥಾರ್ಥದ ಬ್ರಾಹ್ಮಣನಿಗೆ ಮಗನಾಗಿ) ಹುಟ್ಟುವುದು ಕೂಡಾ ಪೂರ್ವ ಕರ್ಮದ ಪುಣ್ಯ ವಿಶೇಷದ ಫಲವೇ ಹೌದು. ಯಾಕೆಂದರೆ ನಿಜಾರ್ಥದ ಬ್ರಾಹ್ಮಣನ ಮನೆಯಲ್ಲಿ ಜನಿಸಿದವನಿಗೆ ತಾನು ಕೂಡಾ ನಿಜಾರ್ಥದ ಬ್ರಾಹ್ಮಣನಾಗುವಲ್ಲಿ ಹೆಚ್ಚಿನ ಅವಕಾಶಗಳಿವೆ. ಆದರೆ ಅದಕ್ಕಾಗಿ ಅವನು ಕೂಡಾ ದ್ವಿಜತ್ವ ಹಾಗೂ ವಿಪ್ರತ್ವಗಳನ್ನು ಸಂಪಾದಿಸಲೇ ಬೇಕು.
    ಸಮಾಜದದ ಹಿತದೃಷ್ಟಿಯಿಂದ ಬ್ರಾಹ್ಮಣರ ಮಾರ್ಗದರ್ಶನದಲ್ಲಿ ಕ್ಷತ್ರಿಯರು ಆಡಳಿತವನ್ನು ನಡೆಸಬೇಕು. ಆದರೆ ಮಾರ್ಗದರ್ಶನ ನೀಡಬೇಕಿದ್ದ ಬ್ರಾಹ್ಮಣರೇ ನಿಜಾರ್ಥದಲ್ಲಿ ಬ್ರಾಹ್ಮಣರಲ್ಲದೇ ಇದ್ದಾಗ ಆಡಳಿತವು ಭ್ರಷ್ಟವಾಗಿ ಸಮಾಜವು ಸನಾತನವಾದ ಧರ್ಮಮಾರ್ಗದಿಂದ ಪತನಗೊಳ್ಳುತ್ತದೆ. ಶರೀರದಲ್ಲಿ ತಲೆ ಸರಿಯಿದ್ದರೆ ಇತರ ಇಂದ್ರಿಯಗಳು ಕುಂಟಿತವಾಗಿದ್ದರೂ ಆ ವ್ಯಕ್ತಿಯು ಜೀವನ ಸಾಗಿಸಬಲ್ಲನು. ಅಂತೆಯೇ ಸಮಾಜವು ಕೂಡಾ. ಒಟ್ಟಿನಲ್ಲಿ ಕಲಿಪ್ರಭಾವದಿಂದ ವರ್ಣಾಶ್ರಮ ವ್ಯವಸ್ಥೆಯು ಶಿಥಿಲವಾಗಿದೆ ಎನ್ನುವುದು ಸ್ಪಷ್ಟ.
    ಆದಾಗ್ಯೂ ಇಂದಿಗೂ ಕೂಡಾ ಯಥಾರ್ಥವಾದ ವರ್ಣಾಶ್ರಮ ಪದ್ಧತಿಯನ್ನು ಅನುಸರಿಸುವ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ನಿಜಾರ್ಥದ ಬ್ರಾಹ್ಮಣರು ಜಾತಿ ಬ್ರಾಹ್ಮಣರ ಅಬ್ಬರದ ನಡುವೆ ಕಾಣದೆ ಇರುವುದು ನಮ್ಮ ಸಮಾಜದ ದೌರ್ಭಾಗ್ಯವೆ ಹೌದು. ವರ್ಣಾಶ್ರಮ ವ್ಯವಸ್ಥೆಯನ್ನು ಯಥಾರ್ಥವಾಗಿ ಅನುಸರಿಸಲು ನಾವೆಲ್ಲರೂ ಮನಮಾಡಿ ನಮ್ಮ ಬಿಗುಮಾನವನ್ನು ಬದಿಗಿರಿಸಿದರೆ ಈ ಸನಾತನ ವ್ಯವಸ್ಥೆಯು ಪುನಃ ಉದ್ದೀಪನಗೊಳ್ಳುವಂತಾಗುತ್ತದೆ. ಹೀಗಾಗಲೆಂದು ನಾವೆಲ್ಲರೂ ಆಶಿಸೋಣವೇ ?
    (ಇಲ್ಲಿ ವ್ಯಕ್ತವಾಗಿರುವ ನನ್ನ ಅನಿಸಿಕೆಗಳು ಯಾವುದೇ ಒಂದು ಪಂಗಡವನ್ನು ನೋವುಂಟುಮಾಡುವ ಉದ್ದೇಶದಿಂದ ಬರೆದುದಲ್ಲ. ಹಾಗೊಂದು ವೇಳೆ ಯಾರಿಗಾದರೂ ನೋವುಂಟಾಗಿದ್ದಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೇ ಅಯಾಚಿತವಾಗಿ ನಾನು ಕ್ಷಮೆಯಾಚಿಸುತ್ತೇನೆ.)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಉತ್ತಮ ಪ್ರತಿಕ್ರಿಯೆಗೆ ವಂದನೆಗಳು, ದುರ್ಗಾಪ್ರಸಾದಮೆಂಡರೇ. ನಿಜವಾದ ಅರ್ಥದಲ್ಲಿ ಬ್ರಾಹ್ಮಣರೆನಿಸಿದವರು ನೀವು ಹೇಳಿದಂತೆ ಈಗಲೂ ಇದ್ದಾರೆ. ಅವರನ್ನು, ಅಂತಹವರನ್ನು ಪ್ರೋತ್ಸಾಹಿಸುವ ಕೆಲಸ ಪ್ರಜ್ಞಾವಂತರಿಂದ ಆಗಬೇಕಿದೆ.

      ಅಳಿಸಿ
  2. Edurkala Ishwar Bhat
    Very good post by shree Kavi Nagaraj and related information by Shree Durgaprasad Menda -- Unfortunately the "Varna" word and the systems itself was totally misused by politicians, all the time, Right from mahabhaarata where, "DuryOdhana" used this word "Shoodra" to Mahaamahima "Vidura" many a time.

    ಪ್ರತ್ಯುತ್ತರಅಳಿಸಿ