ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 26, 2013

ಚತುರ್ವಿಧ ಪುರುಷಾರ್ಥಗಳು - ೨: ಕಾಮ, ಮೋಕ್ಷ

     ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ.
ಕಾಮ:
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಕಾಮ - ಇದು ಎರಡು ಅಲಗಿನ ಚೂಪಾದ ಖಡ್ಗ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಈ ಕಾಮಕ್ಕೇ! ಕಾಮ ಎಂದಾಕ್ಷಣ ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದು ಎಂಬ ಭಾವನೆ ಮೂಡುವುದು ಸಹಜ. ಆದರೆ ಕಾಮ ಎಂದರೆ ಇಷ್ಟೇ ಅಲ್ಲ, ಇದೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಗಳುಂಟಾಗುತ್ತವೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರೇ, ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸುಳಿಗೆ ಸಿಕ್ಕಿ ಹಾಳಾದವರಿದ್ದಾರೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ. 
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ|| 
     ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     "ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಗೆ ಈ ತೃತೀಯ ಪುರುಷಾರ್ಥದಲ್ಲಿ ಸ್ಥಾನವಿಲ್ಲ.   
ಮೋಕ್ಷ:
     ಚತುರ್ಥ ಪುರುಷಾರ್ಥವಾದ ಮೋಕ್ಷ ಮಾನವಜೀವಿಗಳ ಅಂತಿಮ ಸಾಧನೆಯ ಹಂತ. ಈ ಮೋಕ್ಷ ಎಂದರೆ ಏನು? ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರನ್ನು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ವೇದಗಳು ಮೇಲಿನ ಎಲ್ಲಾ ಕಲ್ಪನೆಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತವೆ. ಸರ್ವವ್ಯಾಪಿಯಾದ ಪರಮಾತ್ಮ ತನಗಾಗಿಯೇ ಒಂದು ಪ್ರತ್ಯೇಕ ವಾಸಸ್ಥಾನವನ್ನು ಹೊಂದಿದ್ದಾನೆಂದರೆ ಅವನ ಸರ್ವವ್ಯಾಪಕತ್ವವನ್ನು ಅಣಕಿಸಿದಂತೆಯೇ ಸರಿ. ಋಗ್ವೇದದ ಈ ಮಂತ್ರ ನೋಡಿ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     "ವಿಶ್ವದ ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಎಲ್ಲೆಡೆಯೂ ಮುಖವುಳ್ಳ, ಎಲ್ಲೆಡೆಯೂ ಬಾಹುಗಳನ್ನುಳ್ಳ, ಎಲ್ಲೆಡೆಯೂ ಪಾದಗಳನ್ನುಳ್ಳ ಸರ್ವಕರ್ತೃ ಒಬ್ಬ ದೇವ ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ, ಸೃಷ್ಟಿ, ಸ್ಥಿತಿ, ಲಯಕಾರಕನಾಗಿ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ" ಎನ್ನುವ ಈ ಮಂತ್ರದಲ್ಲಿ ಬರುವ ಒಬ್ಬ ದೇವರಿಗೆ ಅನೇಕ ಕಣ್ಣುಗಳು, ಕೈಕಾಲುಗಳು ಅಂದರೆ ಆತ ಸರ್ವವ್ಯಾಪಿ, ಸರ್ವಕರ್ತೃ ಎಂದು. ಬ್ರಹ್ಮಾಂಡದ ಅಣು ಅಣುವಿನಲ್ಲಿಯೂ ಇರುವ ಇಂತಹ ದೇವನಿಗೆ ಪ್ರತ್ಯೇಕ ವಾಸಸ್ಥಾನವೇ? ಜೀವಾತ್ಮರೂ ಸಹ ಅನಾದಿ ಮತ್ತು ಅನಂತರು ಎನ್ನುತ್ತದೆ ವೇದ. ಕರ್ಮಫಲಕ್ಕನುಸಾರವಾಗಿ ವಿವಿಧ ಜನ್ಮಗಳನ್ನು ತಾಳುತ್ತಾರೆ ಎಂಬುದನ್ನು ಪೂಜ್ಯ ಶಂಕರರು ಮನನೀಯವಾಗಿ ಹೇಳಿರುವುದು ಹೀಗೆ: "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ. . ." ಮೋಕ್ಷ ಪಡೆಯುವವರೆಗೂ ಈ ಹಾದಿಯನ್ನು ಜೀವರುಗಳು ಸವೆಸುತ್ತಿರುತ್ತಾರೆ. ಹಾಗಾದರೆ ಮೋಕ್ಷವೆಂದರೆ ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದೇ?
     ಈ ಮೋಕ್ಷ ಅನ್ನುವುದು ಸ್ವರ್ಗದಲ್ಲಿದೆ ಅಥವ ಯಾವುದೋ ಲೋಕದಲ್ಲಿದೆ ಎಂಬ ಕಲ್ಪನೆ, ದೇವರ ಆವಾಸಸ್ಥಾನವೇ ಪ್ರತ್ಯೇಕವಾಗಿ ಇದೆ ಎಂಬುದಕ್ಕೆ ಸಮನಾದ ಭ್ರಮೆಯಾಗಿದೆ. ಮೋಕ್ಷ ಅನ್ನುವುದು ಜೀವಾತ್ಮನ ಒಂದು ಸ್ಥಿತಿ ಅಷ್ಟೇ ಆಗಿದೆ. ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದು ಮೋಕ್ಷವೆಂದಾದರೆ, ಮೋಕ್ಷದ ಸ್ಥಿತಿಯಲ್ಲಿ ಜೀವಾತ್ಮಕ್ಕೆ ದೇಹದ ಬಂಧನವಾಗಲೀ, ಇಂದ್ರಿಯ, ಮನಸ್ಸು, ಬುದ್ಧಿಗಳ ಬಂಧನವಾಗಲೀ ಇರದೆ  ಮುಕ್ತ ಸ್ಥಿತಿಯಲ್ಲಿ ಅಶರೀರವಾಗಿರುತ್ತದೆ. ಭೌತಿಕ ಜಗತ್ತಿನ ಸಂಪರ್ಕವಿಲ್ಲದೆ, ಆ ಜಗತ್ತಿನ ತಾಪಗಳಿಂದ ಬಿಡುಗಡೆ ಹೊಂದಿ ಕೇವಲ ಬ್ರಹ್ಮಾನಂದ ಅನುಭವಿಸುತ್ತಿರುತ್ತದೆ ಮತ್ತು ಆ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಚಲಿಸಬಹುದಾಗಿರುತ್ತದೆ. ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹೊಂದಿದ್ದ ಕಾರಣದಿಂದ ಮೊದಲು ಅನುಭವಿಸುತ್ತಿದ್ದ ಸುಖ-ದುಃಖ, ನೋವು-ನಲಿವುಗಳಿಂದ ದೂರವಾಗಿರುತ್ತದೆ. ಈ ಸ್ಥಿತಿ ತಲುಪಬೇಕಾದರೆ ಜೀವಿಯು ಜ್ಞಾನ, ಕರ್ಮ, ಉಪಾಸನೆಗಳಿಂದ ಕೂಡಿದ ಧಾರ್ಮಿಕ ಜೀವನವನ್ನು ಪೂರ್ಣ ರೀತಿಯಲ್ಲಿ ಅನುಸರಿಸಿರಬೇಕಾಗುತ್ತದೆ. ಸಾಧನಾಪಥದಲ್ಲಿ ಸಾಗಿ, ಪರಮಾತ್ಮನ ಸ್ವರೂಪದ ಜ್ಞಾನಾನುಭೂತಿ ಪಡೆಯದೆ ಮೋಕ್ಷದ ಈ ಸ್ಥಿತಿ ತಲುಪಲಾಗದು. ನಮ್ಮ ಎಲ್ಲಾ ಸತ್ಕರ್ಮಗಳು, ಸಾಧನೆಗಳು ಪರಮಾತ್ಮನನ್ನು ಅರಿಯುವಲ್ಲಿ ಪರ್ಯವಸಾನವಾಗುವವರೆಗೆ ಮೋಕ್ಷ ಸಿಗಲಾರದು. ಯಜುರ್ವೇದದ ಈ ಮಂತ್ರ ಹೇಳುತ್ತದೆ:
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | 
ತಮೇವ ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     ಇದರ ಅರ್ಥ ಹೀಗಿದೆ: "ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಈ ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ತಿಳಿದುಕೊಂಡು ಮಾನವನು, ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗವು ಇರುವುದೇ ಇಲ್ಲ." ನಮಗೆ ಮುಕ್ತಿ ಸಿಗಲು ನಾವೇ ಪ್ರಯತ್ನಿಸಬೇಕೇ ಹೊರತು, ಇತರರು ನಮ್ಮನ್ನು ಮಧ್ಯಸ್ತಿಕೆದಾರರಾಗಿ ಆ ಸ್ಥಿತಿಗೆ ತಲುಪಿಸಲಾರರು. ಕಾಯಾ, ವಾಚಾ, ಮನಸಾ ಪರಿಶುದ್ಧರಾಗಿ, ಜ್ಞಾನ, ಕರ್ಮ, ಉಪಾಸನೆಗಳಿಂದ ಧರ್ಮಮಾರ್ಗದಲ್ಲಿ ನಿರ್ಮಲಾಂತಃಕರಣದಿಂದ ನಿಜಮಾನವರಾಗಿ ಬಾಳಿದರೆ ಪರಮಾತ್ಮನ ಸ್ವರೂಪದ ಅರಿವಾಗುವುದರೊಂದಿಗೆ, ಜೀವಿ ತಾಪತ್ರಯಗಳಿಂದ ಹೊರತಾಗಿ ಬ್ರಹ್ಮಾನಂದದ ಸ್ಥಿತಿಯಾದ ಮೋಕ್ಷ ಪಡೆಯಲು ಅರ್ಹನಾದಾನು. ಮೋಕ್ಷದ ಸ್ಥಿತಿ ಅಂದರೇನು ಎಂದು ತಿಳಿಸುವ ಈ ಋಗ್ವೇದವಾಣಿ ಆಲಿಸಿ:
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ | 
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     "ಯಾವ ಸ್ಥಿತಿಯಲ್ಲಿ, ಕಾಮನೆಗಳೆಲ್ಲಾ ತೀರಿಹೋದ ಕಾಮನೆಗಳಾಗಿವೆಯೋ ಮತ್ತು ಯಾವ ಸ್ಥಿತಿಯಲ್ಲಿ ಜಗದ್ಬಂಧುವಾದ ನಿನ್ನ ತಾಪರಹಿತವಾದ ಇರುವಿಕೆದೆಯೋ ಮತ್ತು ಯಾವ ಸ್ಥಿತಿಯಲ್ಲಿ ಆತ್ಮನನ್ನು ಎತ್ತಿಹಿಡಿಯುವ ಆನಂದ ಮತ್ತು ತೃಪ್ತಿ ಇರುವುವೋ, ಆ ಸ್ಥಿತಿಯಲ್ಲಿ ಅಮರನಾದ ನನ್ನನ್ನು ಇಡು. ಬಾಳನ್ನು ಸರಸಗೊಳಿಸುವ ಸ್ವಾಮಿ, ಇಂದ್ರಿಯವಂತನಾದ ಜೀವನಿಗಾಗಿ ಹರಿದು ಬಾ, ಸುರಿದು ಬಾ." ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ - ಇದೇ ಮೋಕ್ಷಾವಸ್ಥೆ. 
     ಜೀವಾತ್ಮ ಅನಾದಿ ಮತ್ತು ಅನಂತವೆನ್ನುತ್ತಾರಲ್ಲಾ? ಜೀವಾತ್ಮರು ಹೊಸದಾಗಿ ಹುಟ್ಟುವುದಿಲ್ಲವೆಂದಾದರೆ ಹುಟ್ಟು-ಸಾವಿನ ಚಕ್ರದಿಂದ ಹೊರಬರುವ ಮೋಕ್ಷ ಅಂತ್ಯವಲ್ಲವೇ ಎನ್ನುವ ಸಂಶಯ ಬರುತ್ತದೆ. ಹೊಸದಾಗಿ ಹುಟ್ಟುವುದಿಲ್ಲವೆಂಬುದು ನಿಜವಾದರೆ, ಒಂದಿಲ್ಲೊಂದು ಕಾಲದಲ್ಲಿ ಎಲ್ಲರೂ ಮೋಕ್ಷಾವಸ್ಥೆಯನ್ನು ತಲುಪುತ್ತಾರೆಂದಾದರೆ ಈ ಜಗತ್ತಿಗೆ ಅರ್ಥವೆಲ್ಲಿ ಉಳಿಯುತ್ತದೆ? ವಾಸ್ತವದಲ್ಲಿ ಮೋಕ್ಷ ಎನ್ನುವುದು ಅಂತ್ಯವಲ್ಲ. ಅದು ದೀರ್ಘಾವಧಿಯವರೆಗೆ ಅಂದರೆ ಒಂದು ಪರಾಂತ ಕಾಲದವರೆಗೆ ಇರುವ ಸ್ಥಿತಿಯಾಗಿದ್ದು ನಂತರದಲ್ಲಿ ಪುನಃ ಹುಟ್ಟು-ಸಾವುಗಳ ಚಕ್ರ ಆರಂಭವಾಗುತ್ತದೆ. ಈ ಪರಾಂತಕಾಲ ಅನ್ನುವುದು ನಮ್ಮ ಕಲ್ಪನೆಗೆ ಎಟುಕದ ಬಹಳ ದೀರ್ಘವಾದ ಕಾಲವಾಗಿದೆ ಮತ್ತು ಇದು ಇಷ್ಟೊಂದು ದೀರ್ಘವಾದ ಕಾಲವಾದುದರಿಂದಲೇ ಮೋಕ್ಷವೆಂದರೆ ಹುಟ್ಟು-ಸಾವುಗಳಾಚೆಗಿನ ಸ್ಥಿತಿಯೆನ್ನುತ್ತಾರೆ. ವೈದಿಕ ಸಿದ್ಧಾಂತದ ಪ್ರಕಾರ ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷಗಳು). ಇದು ಒಂದು ಪರಾಂತಕಾಲ. ಇಷ್ಟು ದೀರ್ಘವಾದ ಕಾಲ ಮುಕ್ತಸ್ಥಿತಿಯಲ್ಲಿ ಇರುವುದೆಂದರೆ ಸಾಮಾನ್ಯವಾದ ಸಂಗತಿಯಲ್ಲ. ಜಿಜ್ಞಾಸುಗಳು, ಸಾಧಕರುಗಳಿಗೆ ಚತುರ್ಥ ಪುರುಷಾರ್ಥಗಳನ್ನು ಸಾಧಿಸಲು ವೇದಗಳು ಅದ್ಭುತ ಮತ್ತು ವಿಚಾರಸಮ್ಮತ ಮಾರ್ಗದರ್ಶನ ನೀಡುತ್ತಿವೆ. 
(ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನಪಥ')
-ಕ.ವೆಂ.ನಾಗರಾಜ್.


ವೇದಸುಧೆ » Vedasudhe

ವೇದಸುಧೆ » Vedasudhe

ಸೋಮವಾರ, ಆಗಸ್ಟ್ 12, 2013

ಚತುರ್ವಿಧ ಪುರುಷಾರ್ಥಗಳು - ೧: ಧರ್ಮ ಮತ್ತು ಅರ್ಥ

     ವೇದ ಎಂಬ ಪದಕ್ಕೆ ಇರುವ ಯೌಗಿಕಾರ್ಥ 'ನಿಷ್ಕಳ ಜ್ಞಾನ' ಎಂಬುದು. ಜೀವರುಗಳ ಪೈಕಿ ವಿವೇಚನಾ ಶಕ್ತಿ ಹೊಂದಿರುವ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಪರಮಾತ್ಮನ ಕೊಡುಗೆಯಾದ ಶರೀರ, ಮನಸ್ಸು, ಇಂದ್ರಿಯಗಳನ್ನು ಉಪಯೋಗಿಸಿಕೊಂಡು ಮಾನವ ಮೇಲೇರಲೂ ಬಲ್ಲ, ಕೆಳಕ್ಕೆ ಜಾರಲೂ ಬಲ್ಲ. ಬದುಕು ಸಾರ್ಥಕತೆ ಕಾಣಬೇಕಾದರೆ ನಾಲ್ಕು ಪುರುಷಾರ್ಥಗಳನ್ನು ಸಾಧಿಸಬೇಕೆಂದು ವೇದ ಹೇಳುತ್ತದೆ. ಋಗ್ವೇದದ ಈ ಮಂತ್ರ ಗಮನಿಸಿ:-
ಏಕಂ ಚಮಸಂ ಚತುರಃ ಕೃಣೋತನ ತದ್ ವೋ ದೇವಾ ಅಬ್ರುವನ್ ತದ್ ವ ಆಗಮಮ್ |
ಸೌಧನ್ವನಾ ಯದ್ಯೇವಾ ಕರಿಷ್ಯಥ ಸಾಕಂ ದೇವೈರ್ಯಜ್ಞಿಯಾಸೋ ಭವಿಷ್ಯಥ || (ಋಕ್.೧.೧೬೧.೨.)
     ಆತ್ಮನಿಗೆ ಬಡಿಸುವ ಜೀವನಸಾರವನ್ನು ನಾಲ್ಕಾಗಿ ವಿಂಗಡಿಸಿರಿ. ವಿದ್ವಾಂಸರುಗಳೂ ನಿಮಗೆ ಅದನ್ನೇ ಹೇಳುತ್ತಾರೆ. ಅದನ್ನೇ ತಂದಿದ್ದೇನೆ. ಹೀಗೆ ಮಾಡುವಿರಾದಲ್ಲಿ ದಿವ್ಯಗುಣ ವಿಶಿಷ್ಟರಾದ ವಿದ್ವಾಂಸರೊಂದಿಗೆ, ನೀವೂ ಆದರಣೀಯರಾಗುವಿರಿ ಎನ್ನುವ ಈ ಮಂತ್ರದಲ್ಲಿ ಉಲ್ಲೇಖಿಸಿರುವ ಅನುಸರಿಸಬೇಕಾದ, ಸಾಧಿಸಬೇಕಾದ ನಾಲ್ಕು ಜೀವನಸಾರಗಳೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮ ಮತ್ತು ಅರ್ಥಗಳ ಕುರಿತು ಈ ಲೇಖನದಲ್ಲಿ ಚರ್ಚಿಸೋಣ.
ಧರ್ಮ:
     'ಧರ್ಮ'ವೆಂದರೆ ಯಾವುದಾದರೂ ಒಂದು ಸಮುದಾಯಕ್ಕೆ, ಒಂದು ಸಂಪ್ರದಾಯಕ್ಕೆ, ಒಂದು ರೀತಿ-ನೀತಿಗೆ ಅನ್ವಯವಾಗುವಂತಿರದೆ, ಸಮಸ್ತ ಮಾನವಕುಲಕ್ಕೆ ಅನ್ವಯವಾಗುವಂತಿರಬೇಕು. ಎಲ್ಲರ ಹಿತ ಕಾಯುವ, ಪಾಲಿಸುವ, ಪೋಷಿಸುವ ಉದಾತ್ತತೆ ಹೊಂದಿರಬೇಕು. ಆಧ್ಯಾತ್ಮಿಕವಾಗಿ ಮುಂದುವರೆಯಲು ಸುಯೋಗ್ಯ ಮಾರ್ಗದರ್ಶನ ನೀಡುವಂತಿರಬೇಕು. ಇವುಗಳಲ್ಲಿ ಯಾವುದಕ್ಕೆ ಲೋಪವಾಗುವುದಾದರೂ ಅದನ್ನು ಧರ್ಮ ಎಂದು ಹೇಳಲು ಬರುವುದಿಲ್ಲ. ಇಂತಹ ಧಾರಕ ಗುಣಗಳನ್ನು ಹೊಂದಿರುವುದೇ ಮಾನವ ಧರ್ಮ. ಇದನ್ನು ಸಾಧಿಸಲು ಆವಶ್ಯಕವಾಗಿರುವ ಜ್ಞಾನ, ಕರ್ಮ ಮತ್ತು ಉಪಾಸನೆಗಳೇ ಧರ್ಮದ ಅಭಿನ್ನ ಮತ್ತು ಅವಿಭಾಜ್ಯ ಅಂಗಗಳಾಗಿವೆ. 
ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ || (ಋಕ್. ೯.೭೩.೬.)
     ಯಾರು ವೇದಜ್ಞಾನದ ಆಶ್ರಯದಲ್ಲಿ ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ, ಪ್ರಭುವನ್ನು ತಿಳಿದವರೂ ಆಗುತ್ತಾರೆ. ಜ್ಞಾನದೃಷ್ಟಿಯಿಂದ ಕುರುಡರೂ ಕಿವುಡರೂ ಆದವರು ಋತದ (ಧರ್ಮದ) ಮಾರ್ಗವನ್ನು ತ್ಯಜಿಸುತ್ತಾರೆ. ದುಷ್ಕರ್ಮನಿರತರು ಪಾರುಗಾಣುವುದಿಲ್ಲ ಎಂಬುದು ಈ ಮಂತ್ರದ ಸಾರ. ವಿವೇಕಯುತವಾದ, ಧರ್ಮಪಾಲಕ ಜ್ಞಾನಿಗಳ ದೃಷ್ಟಿ ಹೇಗಿರುತ್ತದೆಂಬುದು ಈ ಕೆಳಗಿನ ಮಂತ್ರ ಹೇಳುತ್ತದೆ: 
ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ || (ಋಕ್. ೯.೭೩.೮.)
     ಋತದ (ಋತ=ಧರ್ಮ) ರಕ್ಷಕನು ಎಂದಿಗೂ ತುಳಿಯಲಡುವುದಿಲ್ಲ. ಉತ್ತಮ ವಿಚಾರಶೀಲನೂ, ಧರ್ಮಶೀಲನೂ ಆದವನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ಸದಾ ಧರಿಸಿರುತ್ತಾನೆ. ಆ ಜ್ಞಾನಿಯು ಸಮಸ್ತ ಲೋಕಗಳನ್ನೂ ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. ಅಪ್ರಿಯರಾದ ವ್ರತರಹಿತರನ್ನು, ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ. ಎಂತಹ ಉದಾತ್ತತೆಯಿದು! ಅಥರ್ವವೇದ, 'ಉತ್ಥಾಮಾತಃ ಪುರುಷ ಮಾವ ಪತ್ಥಾ' - ಹೇ ಜೀವನೇ, ಮೇಲಕ್ಕೆದ್ದು ನಡೆ, ಕೆಳಗೆ ಬೀಳಬೇಡವೆನ್ನುತ್ತದೆ. ಉದ್ಯಾನಂ ತೇ ಪುರುಷ ನಾವಯಾನಂ - ನಿನ್ನ ಮಾರ್ಗ ಮೇಲಕ್ಕಿದೆ, ಕೆಳಕ್ಕೆ ಹೋಗುವುದಲ್ಲವೆನ್ನುತ್ತದೆ. ಇಂತಹ ನೂರಾರು ದಿವ್ಯ ಮಾರ್ಗದರ್ಶನಗಳನ್ನು ನೀಡುವ ವೇದಮಂತ್ರಗಳು ನಾಲ್ಕು ವೇದಗಳಲ್ಲಿಯೂ ಕಾಣಸಿಗುತ್ತವೆ. ಒಬ್ಬ ಧಾರ್ಮಿಕ (ಧರ್ಮ ಮಾರ್ಗಿ) ಹೇಗಿರುತ್ತಾನೆಂದರೆ: 
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | 
ಋತೇನ ವಿಶ್ವಂ ಭುವನಂ ವಿ ರಾಜಥಃ ಸೂರ್ಯಮಾ ಧತ್ಥೋ ದಿವಿ ಚಿತ್ರ್ಯಂ ರಥಮ್ || (ಋಕ್.೫.೬೩.೭.)
     ಹೇ ಮಾನವರೇ, ಧರ್ಮದಿಂದ ಜ್ಞಾನಿಗಳಾಗುತ್ತೀರಿ. ಪರಮಾತ್ಮನ ಪ್ರಜ್ಞೆಯಿಂದ, ವೇದಜ್ಞಾನದಿಂದ (ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ) ವ್ರತಗಳನ್ನು ರಕ್ಷಿಸುತ್ತೀರಿ. ಯಜ್ಞ ಮತ್ತು ನ್ಯಾಯದಿಂದ ಸಮಸ್ತ ಪ್ರಪಂಚವನ್ನೂ, ಸಿಂಗರಿಸುತ್ತೀರಿ. ಜ್ಞಾನಮಯವಾದ ಸ್ಥಿತಿಯಲ್ಲಿ ಭಗವಂತನನ್ನು ಎಲ್ಲಡೆಯಿಂದಲೂ ಜೀವನಗತವಾಗಿ ಮಾಡಿಕೊಳ್ಳುತ್ತೀರಿ. ವಿಪಶ್ಚಿತಾ, ವ್ರತಾ ಮತ್ತು ಸೂರ್ಯ ಆಧತ್ಥಃ ಎಂಬ ಉಲ್ಲೇಖಗಳು ಅನುಕ್ರಮವಾಗಿ, ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನು ಸೂಚಿಸುತ್ತವೆ. ಧರ್ಮ ಮಾರ್ಗದಲ್ಲಿ ನಡೆಯುವವರು ಜಗತ್ತಿಗೆ ಭೂಷಣಪ್ರಾಯರಾಗಿರುತ್ತಾರೆ ಮಾತ್ರವಲ್ಲದೆ ಜಗತ್ತನ್ನು ಸುಂದರಗೊಳಿಸುತ್ತಾರೆ. ಜೀವರು ಸಾಧಿಸಬೇಕಾದ ಪ್ರಥಮ ಪುರುಷಾರ್ಥವೆಂದರೆ ಇದೇ ಆಗಿದೆ. 
ಅರ್ಥ:
   ಇನ್ನು ದ್ವಿತೀಯ ಪುರುಷಾರ್ಥವಾದ ಅರ್ಥದ ಕುರಿತು ಅವಲೋಕಿಸೋಣ. ಹಣ ಸಂಪಾದನೆ, ಅದು ಯಾವ ರೀತಿಯಿಂದಲೇ ಆಗಲಿ ಮಾಡಬೇಕು, ಹೆಚ್ಚು ಶ್ರೀಮಂತರಾಗಬೇಕು ಅನ್ನುವ ಹಪಾಹಪಿತನವನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂದಿನ ಜೀವನರೀತಿಗೆ ಹಣ ಸಂಪಾದನೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ. ಅದರೆ ಅದನ್ನು ಧರ್ಮದ ರೀತಿಯಲ್ಲಿ, ಧರ್ಮದ ಚೌಕಟ್ಟಿನಲ್ಲಿ ಮಾಡಬೇಕು ಅನ್ನುತ್ತದೆ ವೇದ. ಬಡತನ ಕುಕರ್ಮಗಳನ್ನು ಮಾಡಲು ಪ್ರೇರಿಸುವುದರಿಂದ ಅರ್ಥದ ಗಳಿಕೆ ಪುರುಷಾರ್ಥದಲ್ಲಿ ಎರಡನೆಯ ಮಹತ್ವದ ಸ್ಥಾನ ಗಳಿಸಿದೆ. ಅರಾಯಿ ಕಾಣೇ ವಿಕಟೇ ಗಿರಿಂ ಗಚ್ಛ ಸದಾನ್ವೇ || (ಋಕ್.೧೦.೧೫೫.೧.) -ಸದಾ ಪೀಡೆಗಳನ್ನು ಹುಡುಕುತ್ತಿರುವ ಕೆಡುಕಿನ ದರಿದ್ರವೇ, ತೊಲಗು; ವಯಂ ಸ್ಯಾಮ ಪತಯೋ ರುಣಾಮ್ || (ಯಜು.೨೩.೬೫.) -ನಾವು ಸಂಪತ್ತಿನ ಒಡೆಯರಾಗೋಣ, ಇತ್ಯಾದಿ ಉಕ್ತಿಗಳು ಅರ್ಥದ ಮಹತ್ವ ಸಾರುತ್ತಿವೆ.
     ಹಣ ಸಂಪಾದನೆ ಹೇಗೆ ಮಾಡಬೇಕು? ನಮ್ಮ ರಾಜಕಾರಣಿಗಳು ರಾಷ್ಟ್ರದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕಾದ ಕೋಟಿ, ಕೋಟಿ ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಇವರ ಪಾಪದ ಭಾರವನ್ನು ಜನಸಾಮಾನ್ಯರು ಹೊರಬೇಕಾಗಿದೆ. ಬಡವರ ಉದ್ಧಾರದ ಹೆಸರಿನಲ್ಲಿ ಹಣ ಮಾಡುವ ಇವರುಗಳು ದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು, ಭ್ರಷ್ಟಾಚಾರವನ್ನು ವಿರೋಧಿಸುವ ಸಾತ್ವಿಕ ಶಕ್ತಿಗಳನ್ನು ತುಳಿಯುತ್ತಿರುವುದು ನಮ್ಮ ದೌರ್ಭಾಗ್ಯ. ಸಜ್ಜನಶಕ್ತಿ ಜಾಗೃತಗೊಳ್ಳುವವರೆಗೆ, ಜನರು ಎಚ್ಚರಗೊಳ್ಳದಿರುವವರೆಗೆ ಈ ಪರಿಸ್ಥಿತಿಯಿಂದ ನಮಗೆ ಬಿಡುಗಡೆಯಿಲ್ಲ. ಈ ಜಾಗರಣದ ಕೆಲಸವನ್ನು ಪ್ರತಿ ಧಾರ್ಮಿಕ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕು. ಕನಿಷ್ಟ ಪಕ್ಷ ಅಂತಹ ಕೆಲಸ ಮಾಡುವವರಿಗೆ ಸಹಕಾರಿಯಾಗಿಯಾದರೂ ಇರಬೇಕು. ಅಕ್ರಮ ಹಣ ಸಂಪಾದನೆ ಸಲ್ಲದು, ಹಣ ಸಂಪಾದನೆಯೇ ಗುರಿಯಾಗಬಾರದು ಎನ್ನುತ್ತದೆ ಋಗ್ವೇದದ ಈ ಮಂತ್ರ:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     ದಾಳಗಳಿಂದ ಜೂಜಾಡಬಾರದು, ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವ ಹಣದಲ್ಲಿ ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತು,  ದಾಂಪತ್ಯಸುಖವಿದೆ ಎಂದು ಇದರ ಅರ್ಥ. ಇಲ್ಲಿ ದಾಳ ಎಂದರೆ ಪಗಡೆಯಾಟದಲ್ಲಿ ಉಪಯೋಗಿಸುವ ಆಟದ ಸಾಧನವೆಂಬ ಅರ್ಥ ಬರುವುದಾದರೂ, ಅದನ್ನು ಸೂಚ್ಯವಾಗಿ ಬಳಸಲಾಗಿದ್ದು, ಎಲ್ಲಾ ರೀತಿಯ ಜೂಜುಗಳಿಗೂ, ಅಕ್ರಮ ರೀತಿಯಲ್ಲಿ ಹಣ ಸಂಪಾದಿಸುವ ಎಲ್ಲಾ ವಿಧಾನಗಳಿಗೂ (ಉದಾ: ಬೆಟ್ಟಿಂಗ್, ಕಾಳಸಂತೆ, ಲಾಟರಿ, ಲಂಚ, ಇತ್ಯಾದಿ) ಇದು ಅನ್ವಯವಾಗುತ್ತದೆ. 
     ಅಥರ್ವವೇದದ ಈ ಮಂತ್ರ ಅನುಕರಣೀಯ, ಪುರುಷಾರ್ಥದ ನೈಜ ಮೌಲ್ಯ ಇಲ್ಲಿ ಕಾಣಸಿಗುತ್ತದೆ:
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     ನೂರು ಕೈಗಳಿಂದ ಚೆನ್ನಾಗಿ ಸಂಪಾದನೆ ಮಾಡು. ಸಾವಿರ ಕೈಗಳಿಂದ ಚೆನ್ನಾಗಿ ಕೊಡು. ನಿನ್ನ ಕಾರ್ಯದ ವಿಸ್ತಾರ ಈ ರೀತಿ ಸಾಧಿತವಾಗಲಿ ಎಂಬ ಆಶಯ ಎಷ್ಟು ಉದಾತ್ತವಾಗಿದೆ! ಎಷ್ಟು ಕಷ್ಟಪಟ್ಟು ದುಡಿಯಲು ಸಾಧ್ಯವೋ ಅಷ್ಟು ದುಡಿದು ಹೇರಳವಾಗಿ ಹಣ ಸಂಪಾದನೆ ಮಾಡಬೇಕು; ಅದನ್ನು ಧಾರಾಳವಾಗಿ ಅವಲಂಬಿತರಿಗೆ, ಅವಶ್ಯಕತೆಯಿರುವವರಿಗೆ ಉಪಯೋಗಿಸು ಎಂಬುದರಲ್ಲಿ ಜೀವನದ ಸಾರ್ಥಕತೆಯಿದೆ ಎನ್ನುವ ಉದಾತ್ತತೆಗೆ ಸಾಟಿಯಿಲ್ಲ. ಹಣ ಮಾಡಬೇಕು, ಆದರೆ ಅಕ್ರಮವಾಗಿಯಲ್ಲ. ಹಾಗಾದರೆ ಹಣವನ್ನು ಸಂಪಾದಿಸುವುದು ಹೇಗೆ? ಈ ಮಂತ್ರ ದಾರಿ ತೋರಿಸುತ್ತಿದೆ:
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್ || (ಋಕ್.೧೦.೩೧.೨.)
     ಹಣವು ಎಲ್ಲೆಡೆಯೂ ಇದೆ. ಅದಕ್ಕಾಗಿ ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ವಿಧೇಯತೆಂದ ಸಾಗಬೇಕು. ಸದ್ವಿಚಾರ, ಸದಾಚಾರಗಳಿಂದ ಕೂಡಿದ ಮಾತುಗಳನ್ನಾಡಬೇಕು. ಮನಸ್ಸಿನಿಂದ ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ದಾರಿಯಲ್ಲಿ ನಡೆದು ಮಾಡುವ ಸಂಪಾದನೆಯೇ ನೈಜ, ಅರ್ಥಪೂರ್ಣ ಅರ್ಥಸಂಪಾದನೆ. ಸದ್ವಿಚಾರಗಳನ್ನು ಮಾಡೋಣ, ಸದ್ರೀತಿಯಲ್ಲಿ ಸಂಪಾದಿಸೋಣ, ಸಮಾಜದಿಂದ ನಾವು ಗಳಿಸುವ ಹಣವನ್ನು ಸಮುಚಿತ ರೀತಿಯಲ್ಲಿ ಸ್ವಂತದ ಉಪಯೋಗಕ್ಕೆ ಅಲ್ಲದೆ ಸಮಾಜದ ಒಳಿತನ್ನೂ ಗಮನದಲ್ಲಿರಿಸಿ ವಿನಿಯೋಗಿಸೋಣ ಎಂಬ ವೇದದ ಕರೆ ಸದಾಕಾಲಕ್ಕೂ ಒಪ್ಪಿಗೆಯಾಗುವಂತಹದು.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನ ಪಥ'.]


ವೇದೋಕ್ತ ಜೀವನ ಶಿಬಿರ



ವೇದಭಾರತೀ, ಹಾಸನ

ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.

14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ

ಬುಧವಾರ, ಆಗಸ್ಟ್ 7, 2013

ವೇದೋಕ್ತ ಜೀವನ ಶಿಬಿರ


ವೇದಭಾರತೀ, ಹಾಸನ


ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು


ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ

ಶಿಬಿರದ ಬಗ್ಗೆ ಕೆಲವು ಮಾಹಿತಿಗಳು:
1.ಬೆಳಿಗ್ಗೆ ಮತ್ತು ಸಂಜೆ  ಸಂಧ್ಯೋಪಾಸನೆ  ಮತ್ತು ಅಗ್ನಿಹೋತ್ರ ಅಭ್ಯಾಸ
2.ವೇದಮಂತ್ರಾಭ್ಯಾಸ
3.ವೇದೋಕ್ತ ಜೀವನದ ಬಗ್ಗೆ ಶರ್ಮರ ಮಾರ್ಗದರ್ಶನ[ ದಿನದಲ್ಲಿ ನಾಲ್ಕು   ಅವಧಿಗಳು]
4.ಪ್ರತಿದಿನ  ಸಂಜೆ ಶ್ರೀಸುಧಾಕರಶರ್ಮರ ಸಾರ್ವಜನಿಕ ಉಪನ್ಯಾಸ
5.ಮುಕ್ತ ಚರ್ಚೆಗೆ ಅವಕಾಶ
6.ಸರಳವಾದ ಊಟೋಪಚಾರ
7.ತಂಗಲು ವ್ಯವಸ್ಥೆ
8.ಶಿಬಿರಶುಲ್ಕ ರೂ: 500.00

 ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಶಿಬಿರಾರ್ಥಿಗಳು
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
8. ಗುರುಪ್ರಸಾದ್, ಭದ್ರಾವತಿ
9.ಮಹೇಶ್, ಭದ್ರಾವತಿ
10. ಕೆ.ಜಿ.ಕಾರ್ನಾಡ್,ತುಮಕೂರು
11.ಮೋಹನ್ ಕುಮಾರ್, ನಂಜನಗೂಡು
12. ಕವಿ ನಾಗರಾಜ್,ಹಾಸನ
13. ಶ್ರೀನಿವಾಸ್, AIR,ಹಾಸನ
14. ಹರಿಹರಪುರಶ್ರೀಧರ್,ಹಾಸನ
15. ಪ್ರೇಮಾ ಭಗಿನಿ,ಹಾಸನ
16. ಚಿನ್ನಪ್ಪ,ಹಾಸನ
17. ಅಶೋಕ್,ಹಾಸನ
18.ಶ್ರೀಮತೀ ಶೈಲ,ಹಾಸನ
19.ಪಾಂಡುರಂಗ ,ಹಾಸನ      
20.ಸತೀಶ್,ಹಾಸನ
21.ಲೋಕೇಶ್,ಹಾಸನ
22.ಆದಿಶೇಷ್,ಹಾಸನ
23.ಕೇಶವಮೂರ್ತಿ,ಹಾಸನ
24.ಬೈರಪ್ಪಾಜಿ ,ಹಾಸನ
25.ನಿತೀಶ್ ಭಾರಧ್ವಾಜ್,ಹಾಸನ
26. ವಿನಯ್ ಕಾಶ್ಯಪ್,ಬೆಂಗಳೂರು.
27.ಶಿವಶಂಕರ್,ಬೆಂಗಳೂರು
ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
[ಇವರುಗಳು ತಮ್ಮ ಭಾಗವಹಿಸುವಿಕೆಯನ್ನು vedasudhe@gmail.com ಗೆ ಮೇಲ್ ಮಾಡುವುದರ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು  ದೃಢಪಡಿಸಲು ಕೋರಿದೆ]
1. ಶಿವಕುಮಾರ್, ಬೆಂಗಳೂರು
2. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
3. ವಿನಯ್ ಕಾಶ್ಯಪ್, ಬೆಂಗಳೂರು
4 .ಶರಣಪ್ಪ, ಗದಗ್
5. ವಿಜಯ್ ಹೆರಗು, ಬೆಗಳೂರು
6. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
7. ಶ್ರೀ ಹರ್ಷ,ಹಾಸನ
8. ನಟರಾಜ್ ಪಂಡಿತ್,ಹಾಸನ
9. ಶ್ರೀ ನಾಥ್,ಹಾಸನ
10. ಕೆ.ವಿ.ರಾಮಸ್ವಾಮಿ, ಹಾಸನ 

ಶಿಬಿರಶುಲ್ಕವನ್ನು ಈಗಾಗಲೇ ಪಾವತಿಸಿದ್ದು  ಶಿಬಿರಾರ್ಥಿಗಳ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಶಿಬಿರಕ್ಕೆ ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಇಚ್ಛೆಯುಳ್ಳವರು vedasudhe@gmail.com ಗೆ ಮೇಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.

-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ

ಸೋಮವಾರ, ಆಗಸ್ಟ್ 5, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೪. ಮೋಕ್ಷ

     ಕೊನೆಗೆ ಚತುರ್ಥ ಪುರುಷಾರ್ಥ. ಅದನ್ನು ಮೋಕ್ಷವೆಂದು ಕರೆಯುತ್ತಾರೆ. ದೇವರ ವಿಷಯದಲ್ಲಿ ಮತ್ತು ಧರ್ಮದ ವಿಷಯದಲ್ಲಿ ಜನರಿಗೆ ಹೇಗೆ ಭ್ರಾಂತ ಕಲ್ಪನೆಗಳಿವೆಯೋ ಹಾಗೆಯೇ ಈ ಮೋಕ್ಷದ ವಿಷಯದಲ್ಲಿಯೂ ಇದೆ. ತಾವು ನಂಬಿರುವ ಶಿವನೋ, ವಿಷ್ಣುವೋ, ಜೆಹೋವನೋ, ಅಲ್ಲಾನೋ ಯಾವುದೋ ಒಂದು ತಮ್ಮದೇ ಆದ ಲೋಕದಲ್ಲಿದ್ದಾರೆ. ತಮ್ಮ ಮತೀಯ ನಂಬಿಕೆಯಂತೆ ನಡೆದುಕೊಂಡು ಸತ್ತರೆ, ಅಲ್ಲಿಗೆ ಹೋಗಿ ಆನಂದದಿಂದ ಸದಾಕಾಲಕ್ಕೂ ಇದ್ದುಬಿಡಬಹುದು -  ಎಂದು ಜನ ನಂಬಿದ್ದಾರೆ. ಕೆಲವು ಮತೀಯರಿಗಂತೂ ಮಧ್ಯಗಾರರ ಶಿಫಾರಸಿನಲ್ಲಿಯೂ ನಂಬಿಕೆಯಿದೆ. ಆದರೆ, ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವಂತೆ ಭಗವಂತ ಯಾವುದೋ ಒಂದು ಲೋಕದಲ್ಲಿ ಸಾಕಾರನಾಗಿ ಕುಳಿತಿಲ್ಲ. ಅವನು ನಿರಾಕಾರನಾಗಿ ಅಣು ಅಣುವಿನಲ್ಲಿಯೂ ವ್ಯಾಪಕನಾಗಿದ್ದಾನೆ. 
     ಮೋಕ್ಷ ಎನ್ನುವುದು ಯಾವ ನಿಶ್ಚಿತವಾದ ಸ್ಥಳ ಅಥವಾ ಲೋಕವೂ ಅಲ್ಲ. ಅದು ಜೀವಾತ್ಮನ ಒಂದು ಸ್ಥಿತಿ ಮಾತ್ರ. ಆ ಸ್ಥಿತಿಯಲ್ಲಿ ಅವನು, ಅವಳು, ಇಂದ್ರಿಯಗಳು-ಮನಸ್ಸು-ಬುದ್ಧಿಗಳ ಹಿಡಿತದಿಂದ, ದೇಹ ಬಂಧನದಿಂದ ಬಿಡುಗಡೆ ಹೊಂದಿ ಅಶರೀರನಾಗಿರುತ್ತಾನೆ. ಅಧಿದೈವಿಕ, ಅಧಿಭೌತಿಕ ಮತ್ತು ಅಧ್ಯಾತ್ಮಿಕ - ಎಂದರೆ, ಪ್ರಾಕೃತಿಕ ಪ್ರಕೋಪಗಳಿಂದ, ಬೇರೆ ಪ್ರಾಣಿಗಳಿಂದ ಮತ್ತು ತನ್ನ ಸ್ವಂತ ಅಜ್ಞಾನದಿಂದ ಉಂಟಾಗುವ ತಾಪಗಳಿಂದ ಬಿಡುಗಡೆ ಹೊಂದಿ, ಕೇವಲ ಬ್ರಹ್ಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ. ಈ ಸ್ಥಿತಿಯಲ್ಲಿ, ಎಲ್ಲಿ ಬೇಕಾದರೂ ಹೋಗುವನು, ಆದರೆ ಭೌತಿಕಜಗತ್ತಿನ ಸಂಪರ್ಕ ಮಾತ್ರ ಅವನಿಗಿರುವುದಿಲ್ಲ. ಅವನು ಆ ಸ್ಥಿತಿಯನ್ನು ಮುಟ್ಟಬೇಕಾದರೆ ಜ್ಞಾನ-ಕರ್ಮ-ಉಪಾಸನಾಯುಕ್ತವಾದ ಧಾರ್ಮಿಕಜೀವನವನ್ನು ಪೂರ್ಣತಃ ಪಾಲಿಸಬೇಕು. ಕೊನೆಗೆ ಅಧ್ಯಾತ್ಮಿಕಸಾಧನಾಪಥದಲ್ಲಿ ನಡೆದು ಪರಮಾತ್ಮನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬೇಕು. ಪರಮಾತ್ಮನ ಸ್ವರೂಪಜ್ಞಾನಾಭೂತಿಯಿಲ್ಲದೆ ಮೋಕ್ಷ ಅಥವಾ ಮುಕ್ತಿಯ ಪ್ರಾಪ್ತಿ ಸಂಭವವೇ ಅಲ್ಲ. ನಾವು ಮಾಡುವ ಸತ್ಕರ್ಮಗಳು ಮತ್ತು ಉಪಾಸನೆ ಪರಮಾತ್ಮನ ಜ್ಞಾನದಲ್ಲಿ ಸಮಾಪ್ತವಾದಾಗಲೇ ಮೋಕ್ಷ. ಅದಕ್ಕೆ ಬೇರಾವ ಮಾರ್ಗವೂ ಇಲ್ಲ. ಭಗವದ್ವಾಣಿ ಯಜುರ್ವೇದ ಹೇಳುತ್ತಲಿದೆ:-
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | 
ತಮೇವ  ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     [ಅಹಮ್] ನಾನು [ತಮಸಃ ಪರಸ್ತಾತ್] ಅಜ್ಞಾನಾಂಧಕಾರದಿಂದ ಮೇಲೆದ್ದು, [ಏತಮ್] ಈ [ಆದಿತ್ಯವರ್ಣಂ] ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, [ಪುರುಷಮ್] ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು [ವೇದ] ತಿಳಿದಿದ್ದೇನೆ. [ತಂ ಏವ ವಿದಿತ್ವಾ] ಅವನನ್ನೇ ತಿಳಿದುಕೊಂಡು ಮಾನವನು, [ಮೃತ್ಯುಂ ಅತಿ ಏತಿ] ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. [ಅಯನಾಯ] ಆತ್ಮನ ಸದ್ಗತಿಗೆ [ಅನ್ಯಃ ಪಂಥಾ] ಬೇರೆ ಮಾರ್ಗವು [ನ ವಿದ್ಯತೇ] ಇರುವುದೇ ಇಲ್ಲ. 
     ಇದು ಸತ್ಯ, ಪೂರ್ಣ ಸತ್ಯ, ಸಾರ್ವಕಾಲಿಕ ಸತ್ಯ. ತನಗೂ ಭಗವಂತನಿಗೂ ಭೇಟಿಯನ್ನೇರ್ಪಡಿಸುವ ಮಧ್ಯಸ್ಥರಿದ್ದಾರೆಂದು ನಂಬಿ ಕುಳಿತರೆ, ಕೊನೆಗೆ ದುರ್ಗತಿಯೇ ಸಿದ್ಧ. ಸದ್ರೂಪಿಣಿಯಾದ ಪ್ರಕೃತಿಯ ಬಂಧನವನ್ನು ಕಡಿದುಹಾಕಿ, ಸಚ್ಚಿದ್ರೂಪನಾದ ಜೀವಾತ್ಮನು, ಸಚ್ಚಿದಾನಂದ ಸ್ವರೂಪನಾದ ಪರಮಾತ್ಮನನ್ನು ಕಂಡುಕೊಳ್ಳಬೇಕು. ಈ ರೀತಿ ಮಾಡಬೇಕಾದರೆ, ತ್ರಿಕರಣಗಳೂ ಪೂರ್ಣತಃ ಪವಿತ್ರವಾಗಿರಬೇಕು. ಜ್ಞಾನ-ಕರ್ಮೋಪಾಸನೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕು. ಧರ್ಮಾಂಗತ್ರಯದಿಂದ ನಿರ್ಮಲವಾದ ಕರಣತ್ರಯಗಳು ನಿಜವಾದ ಅರ್ಥದಲ್ಲಿ ಅಮಾನವಜೀವನವನ್ನು ಮಾನವಜೀವನವನ್ನಾಗಿ ಮಾಡುತ್ತವೆ, ಆಗ, ತಾಪತ್ರಯಗಳ ವಿಮೋಚನೆ ಮತ್ತು ಬ್ರಹ್ಮಾನಂದಪ್ರಾಪ್ತಿಗೆ ಮಾನವ ಅರ್ಹನಾಗುತ್ತಾನೆ.
     ಮೋಕ್ಷವೆಂಬ ಸ್ಥಿತಿಯ ಸ್ವರೂಪವೇನು? ಈ ಪ್ರಶ್ನೆಗೆ ಋಗ್ವೇದ ಉತ್ತರವನ್ನು ಕೊಡುತ್ತದೆ:-
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ | 
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     [ಯತ್ರ] ಯಾವ ಸ್ಥಿತಿಯಲ್ಲಿ, [ಕಾಮಾಃ] ಕಾಮನೆಗಳೆಲ್ಲಾ [ನಿಕಾಮಾ] ತೀರಿಹೋದ ಕಾಮನೆಗಳಾಗಿವೆಯೋ [ಚ] ಮತ್ತು [ಯತ್ರ] ಯಾವ ಸ್ಥಿತಿಯಲ್ಲಿ [ಬ್ರದ್ನಸ್ಯ] ಜಗದ್ಬಂಧುವಾದ ನಿನ್ನ, [ವಿಷ್ಟಪಮ್] ತಾಪರಹಿತವಾದ ಇರುವಿಕೆಯಿದೆಯೋ, [ಚ] ಮತ್ತು [ಯತ್ರ] ಯಾವ ಸ್ಥಿತಿಯಲ್ಲಿ [ಸ್ವಧಾ] ಆತ್ಮನನ್ನು ಎತ್ತಿಹಿಡಿಯುವ ಆನಂದ, [ಚ] ಮತ್ತು [ತೃಪ್ತಿಃ] ತೃಪ್ತಿ ಇರುವುವೋ, [ತತ್ರ] ಆ ಸ್ಥಿತಿಯಲ್ಲಿ [ಅಮೃತಂ ಮಾ ಕೃಧಿ] ಅಮರನಾದ ನನ್ನನ್ನು ಇಡು. [ಇಂದೋ] ಬಾಳನ್ನು ಸರಸಗೊಳಿಸುವ ಸ್ವಾಮಿ, [ಇಂದ್ರಾಯ] ಇಂದ್ರಿಯವಂತನಾದ ಜೀವನಿಗಾಗಿ [ಪರಿ ಸ್ರವ] ಹರಿದು ಬಾ, ಸುರಿದು ಬಾ. ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ - ಇದೀಗ ಮೋಕ್ಷಾವಸ್ಥೆ. 
     ಪಾಠಕರು ನೆನಪಿಡಬೇಕಾದ ಮತ್ತೊಂದು ಮುಖ್ಯಾಂಶವಿದೆ. ಸಾಧಾರಣವಾಗಿ ಸರ್ವ ಮತೀಯರೂ ತಮ್ಮ ಕಲ್ಪನೆಯ ಮೋಕ್ಷ ಅನಂತ, ಮುಕ್ತಿ ಪಡೆದ ಜೀವರು ಮರಳಿ ಹಿಂದಿರುಗಿ ಬರುವುದೇ ಇಲ್ಲ ಎಂದು ನಂಬುತ್ತಾರೆ. ಆದರೆ ವೈದಿಕ ಧರ್ಮ ಪೂರ್ಣತಃ ವೈಜ್ಞಾನಿಕ ಹಾಗೂ ಬುದ್ಧಿ ಸಂಗತ. ಈ ಮೋಕ್ಷ ಪ್ರಾಪ್ತಿಗಾಗಿ, ಜೀವರು ಮಾಡಿದ ಸಾಧನೆ, ಮೋಕ್ಷವಾದ ಕೂಡಲೇ ಸಮಾಪ್ತವಾಗಿ ಹೋಗುತ್ತದೆ. ಅಂದರೆ, ಆ ಸಾಧನೆ ಅನಂತವಲ್ಲ, ಸಾಂತ. ಸಾಂತ ಸಾಧನೆಯಿಂದ ಅನಂತ ಮೋಕ್ಷವೆಂತು ಸಿಕ್ಕೀತು? ಎರಡನೆಯದಾಗಿ, ಅಲ್ಪಜ್ಞರಾದ ನಮ್ಮ ಎಣಿಕೆಗೆ ಅಂದದಿದ್ದರೂ ಜೀವಾತ್ಮರುಗಳ ಒಂದು ನಿಶ್ಚಿತ ಸಂಖ್ಯೆಯಿದೆ. ಜೀವರೆಲ್ಲಾ ಅನಾದಿ ಅನಂತರಾಗಿರುವುದರಿಂದ ಅವರು ಸಾಯುವಂತಿಲ್ಲ. ಹೊಸ ಜೀವಾತ್ಮರುಗಳು ಹುಟ್ಟುವಂತೆಯೂ ಇಲ್ಲ. ಹೀಗಾಗಿ ಯಾವುದೋ ಒಂದು ಅತಿ ಸುದೂರ ಭವಿಷ್ಯದಲ್ಲಿ - ಆ ಕಾಲ ಮಾತ್ರ ನಮ್ಮ ಬುದ್ಧಿಗೆ ಅಂದದಿರಬಹುದು -  ಎಲ್ಲಾ ಜೀವರೂ ಮುಕ್ತರಾಗುವ ಸಂಭವವಿದ್ದೇ ಇದೆ. ಸಂಭವವೇಕೆ? ನಿಶ್ಚಯವೇ ಆಗಿದೆ. ಮುಕ್ತಿಪ್ರಾಪ್ತ ಜೀವರು ಹಿಂದಿರುಗುವುದಿಲ್ಲವೆಂದರೆ ಆಮೇಲೆ ಪರಮಾತ್ಮ ಸೃಷ್ಟಿ -ಸ್ಥಿತಿ-ಲಯಗಳನ್ನು ಮಾಡದೆ ಅನಂತಕಾಲಕ್ಕೂ ನಿಷ್ಕ್ರಿಯನಾಗಿ ಕೂಡುವನೇ? ಅದು ವಿಶ್ವಚೇತನದ ಲಕ್ಷಣವೇ? ಹೀಗೆ ಆಲೋಚಿಸಿದಲ್ಲಿ, ಪ್ರಾರಂಭವಾದ ಮೋಕ್ಷ, ಸಮಾಪ್ತವೂ ಆಗಲೇಬೇಕು.
     ವೈದಿಕ ಸಿದ್ಧಾಂತಾನುಸಾರ ಪ್ರತಿಯೊಬ್ಬ ಜೀವಾತ್ಮನ ಮೋಕ್ಷಾವಸ್ಥೆ ಒಂದು ಪರಾಂತ ಕಾಲದವರೆಗಿರುತ್ತದೆ. ಅಂದರೆ, ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷ). ಇದು ಒಂದು ಪರಾಂತಕಾಲ. ಇಷ್ಟು ದೀರ್ಘಕಾಲ ಮುಕ್ತಾಷಸ್ಥೆಯಲ್ಲಿರುವುದು ಸಾಮಾನ್ಯ ವಿಷಯವೇ? 
     ಈ ರೀತಿ ವೈದಿಕ ಜೀವನಪಥದ ದ್ವಾದಶ ಅಧ್ಯಾಯಗಳನ್ನು ವಿವರಿಸಿದ್ದೇವೆ. ಇಷ್ಟು ಬುದ್ಧಿಸಂಗತವಾದ ಮಾರ್ಗ ಬೇರಾವುದೂ ಇಲ್ಲವೆಂಬುದು ಖಚಿತ. ಈ ಕೃತಿ ಪಾಠಕರ ಜಿಜ್ಞಾಸೆಯನ್ನು ಕೆರಳಿಸಿ, ಅವರಿಗೆ ವೇದಾಧ್ಯಯನ ಮಾಡಬೇಕು ಎಂಬ ಅಭಿಲಾಷೆಯನ್ನುಂಟುಮಾಡಿದರೆ ನಮ್ಮ ಶ್ರಮ ಸಫಲವಾದಂತೆ.
|| ಓಂ ಶಾಂತಿಃ ಶಾಂತಿಃ ಶಾಂತಿಃ ||
-ಪಂ. ಸುಧಾಕರ ಚತುರ್ವೇದಿ.

ಶುಕ್ರವಾರ, ಆಗಸ್ಟ್ 2, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೩. ಕಾಮ

     ಈಗ ತೃತೀಯ ಪುರುಷಾರ್ಥ. ಅದನ್ನು ಕಾಮ ಎನ್ನುತ್ತಾರೆ. ಈ ಶಬ್ದವನ್ನು ಕೇಳಿದ ಕೂಡಲೇ ಸ್ತ್ರೀ-ಪುರುಷರ ಸಂಬಂಧಕ್ಕೆ ಸೇರಿದುದು ಇದು ಎಂಬ ಭಾವನೆ ಸಹಜವಾಗಿಯೇ ಜನಮನಕ್ಕೆ ಬರುತ್ತದೆ. ಆದರೆ, ವೇದಗಳಲ್ಲಿ ಈ ಶಬ್ದ ಇದೊಂದೇ ಅರ್ಥದಲ್ಲಿ ಬರುವುದಿಲ್ಲ. ಕಾಮ ಎಂದರೆ ಇಚ್ಛೆ ಎಂದರ್ಥ. ಇಚ್ಛೆಗಳು ಅನೇಕ ರೂಪಗಳಲ್ಲಿರುತ್ತವೆ. ಆತ್ಮನಿಗೆ ಉತ್ಕರ್ಷ ತರುವ ಕಾಮನೆಗಳೂ ಇರುತ್ತವೆ, ಅವನನ್ನು ದುರ್ಗತಿಗೆ ತರುವ ಕಾಮನೆಗಳೂ ಇರುತ್ತವೆ. ನಿಷ್ಕಾಮ ಎಂಬ ಪದವನ್ನು ಜನ ಲೀಲಾಜಾಲವಾಗಿ ಉಪಯೋಗಿಸುತ್ತಾರೆ. ಆದರೆ, ಯಾವ ಚೇತನವೂ ಪೂರ್ಣ ನಿಷ್ಕಾಮವಾಗಲಾರದು. ಏನೂ ಬೇಡವೆಂದರೂ ಶಾಂತಿ ಬೇಕು, ಆತ್ಮವಿಕಾಸವಾಗಬೇಕು - ಎಂಬ ಕಾಮನೆಗಳಾದರೂ ಇದ್ದೇ ಇರುತ್ತವೆ.
     ಮಾನವಜನ್ಮವೆತ್ತಿ ಬರುವುದು, ಕೇವಲ ಮರದ ಕೊರಡಿನಂತೆ ಯಾವ ಕಾಮನೆಗಳೂ, ಆಕಾಂಕ್ಷೆಗಳೂ ಇಲ್ಲದೆ ಜಡವಾಗಿ ಬಿದ್ದಿರುವುದಕ್ಕಲ್ಲ. ಪರಲೋಕಸಾಧನೆಗೆ ತನ್ನನ್ನು ಪಾತ್ರನನ್ನಾಗಿ ಮಾಡಿಕೊಳ್ಳಬೇಕಾದರೆ, ಮಾನವನು ಇಹದಲ್ಲಿಯೂ ಮಾಡಲೇಬೇಕಾದ ಅನೇಕ ಕರ್ತವ್ಯಗಳಿರುತ್ತವೆ. ಆದುದರಿಂದ, ಧರ್ಮಕ್ಕನುಸಾರವಾಗಿ ತಾನು ಸಂಪಾದಿಸಿದ ಅರ್ಥವನ್ನು, ಆತ್ಮನಿಗೆ ಘಾತಕವಾಗದಂತೆ, ಇತರರಿಗೂ ಕಷ್ಟವಾಗದಂತೆ, ಎಲ್ಲರಿಗೂ ಹಿತವಾಗುವಂತೆ ಉಪಯೋಗಿಸುವುದೇ ತೃತೀಯ ಪುರುಷಾರ್ಥವಾದ ಕಾಮ. ಕಾಮ ಒಂದು ಪ್ರಬಲವಾದ ಶಕ್ತಿ. ಅದನ್ನು ವಶದಲ್ಲಿಟ್ಟುಕೊಂಡರೆ, ನಾವು ಶತ್ರುರಹಿತರಾಗಿ ಜಗತ್ತಿನಲ್ಲಿ ಬಾಳಬಲ್ಲೆವು. ಈ ಕಾಮದ ಪರಿಧಿಯಲ್ಲಿ, ಗೃಹಸ್ಥಾಶ್ರಮದಲ್ಲಿ ಮಾಡುವ ಸ್ತ್ರೀ-ಪುರುಷರ ಪರಸ್ಪರ ದೇಹಸಂಬಂಧದ ಇಚ್ಛೆಯೂ ಅಡಕವಾಗಿದೆ. ಶಾಸ್ತ್ರೀಯ ಮರ್ಯಾದೆಗನುಸಾರವಾಗಿ ಸ್ತ್ರೀ-ಪುರುಷರ ಲೈಂಗಿಕಜೀವನ ನಡೆದಲ್ಲಿ, ಅದು ಮೋಕ್ಷಕ್ಕೆ ಬಾಧಕವೇನೂ ಅಲ್ಲ. ಕಾಮ, ಉಚ್ಛೃಂಖಲವಾಗಿ ಹೋದರೆ ಮಾತ್ರ ಅಪಾಯ. ಅದೇ ಕಾರಣದಿಂದ ಅಥರ್ವವೇದದಲ್ಲಿ ಹೇಳಿದೆ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     [ಕಾಮ] ಓ ಕಾಮ, [ತೇ ಯಾಃ ತನ್ವಃ] ನಿನ್ನ ಯಾವ ವಿಸ್ತಾರಗಳು ಅಥವಾ ರೂಪಗಳು [ಶಿವಾಃ ಭದ್ರಾಃ] ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ [ಯತ್ ವೃಣೇಷೇ] ಯಾವುದನ್ನು ನೀನು ಬಯಸುತ್ತೀಯೋ [ಸತ್ಯಮ್] ಆ ಸತ್ಯವು [ಯಾಭಿಃ ಭವತಿ] ಯಾವ ನಿನ್ನ ರೂಪಗಳಿಂದ ಲಭಿಸುತ್ತದೆಯೋ [ತಾಭಿಃ] ಆ ರೂಪಗಳೊಂದಿಗೆ [ನಃ ಅಭಿ ಸಂವಿಶಸ್ವ] ನಮ್ಮಲ್ಲಿ ಪ್ರವೇಶ ಮಾಡು. [ಧಿಯಃ ಪಾಪೀಃ] ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು [ಅನ್ಯತ್ರ ಅಪವೇಶಯ] ಬೇರೆಕಡೆಗೆ ಅಟ್ಟಿಬಿಡು.
     ಭಾವ ಸ್ಪಷ್ಟ. ಐಹಿಕ ಜೀವನವನ್ನು ಸರಸ ಸುಂದರವಾಗಿ, ಸುಖ-ಶಾಂತಿಮಯವಾಗಿ ಮಾಡಲು ಬೇಕಾದ ಇಚ್ಛೆಗಳು ಜೀವನಕ್ಕಿಳಿದು ಬರಲಿ. ಪಾಪಮಯವಾದ ಇಚ್ಛೆಗಳಿಗೆ ತೃತೀಯ ಪುರುಷಾರ್ಥ ಕಾಮದಲ್ಲಿ ಎಡೆಯಿಲ್ಲ.
-ಪಂ. ಸುಧಾಕರ ಚತುರ್ವೇದಿ.