ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಏಪ್ರಿಲ್ 29, 2015

ಎಚ್ಚರವಿರಲಿ! ಇದು ಮತ್ಸರ!!


     ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ ಹೆಚ್ಚು ಪ್ರ್ರಾಧಾನ್ಯತೆ ಸಿಗುತ್ತಿದೆಯೆಂದು ಅನ್ನಿಸಿ ಕಿರಿಕಿರಿಯಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ದೇವರು ಇವರ ಭಕ್ತಿಗೆ ಮೆಚ್ಚಿ ಅವರ ಇಷ್ಟಾರ್ಥದ ಬಗ್ಗೆ ವಿಚಾರಿಸಿದ. ತಿಮ್ಮಣ್ಣ ತಾನು ದೊಡ್ಡ ಶ್ರೀಮಂತ ವ್ಯಕ್ತಿಯಾಗಬೇಕು ಎಂದು ಕೇಳಿಕೊಂಡ. ದೇವರು ತಥಾಸ್ತು ಎಂದು ಬೊಮ್ಮಣ್ಣನನ್ನು ವಿಚಾರಿಸಲು ಹೋದ. ಬೊಮ್ಮಣ್ಣ ತಿಮ್ಮಣ್ಣನಿಗೆ ಏನು ವರ ಕೊಟ್ಟಿದ್ದರೂ ಅದರ ಎರಡರಷ್ಟು ನನಗೆ ಸಿಗುವಂತೆ ವರ ಕೊಡು ಎಂದು ಕೇಳಿಕೊಂಡ. ದೇವರು ಆಗಲೂ ತಥಾಸ್ತು ಎಂದ. ತಿಮ್ಮಣ್ಣ ದೊಡ್ಡ ಬಂಗಲೆ ಬಂದರೆ ಬೊಮ್ಮಣ್ಣನಿಗೆ ಅಂತಹುದೇ ಎರಡು ಬಂಗಲೆಗಳು ಬಂದವು. ಅವನಿಗೆ ಒಂದು ಐಷಾರಾಮಿ ಕಾರು ಇದ್ದರೆ ಇವನಿಗೆ ಎರಡು ಕಾರುಗಳು ಬಂದವು. ತಾನು ಏನು ಬಯಸಿದರೂ ಅದರ ಎರಡರಷ್ಟು ಬೊಮ್ಮಣ್ಣನಿಗೆ ಸಿಗುತ್ತಿರುವುದು ಕಂಡು ತಿಮ್ಮಣ್ಣನ ಮತ್ಸರ ಹೆಚ್ಚಾಯಿತು. ಯೋಚಿಸಿ 'ತನ್ನ ಒಂದು ಕಣ್ಣು ಹೋಗಲಿ' ಎಂದು ಕೇಳಿಕೊಂಡ. ತನ್ನ ಒಂದು ಕಣ್ಣು ಹೋದರೆ, ಬೊಮ್ಮಣ್ಣನ ಎರಡು ಕಣ್ಣುಗಳೂ ಹೋದವು. ತನ್ನ ಒಂದು ಕಾಲು ಹೋಗಲಿ ಎಂದು ಕೇಳಿಕೊಂಡಾಗ ತನ್ನ ಒಂದು ಕಾಲು ಹೋದರೂ ಬೊಮ್ಮಣ್ಣನ ಎರಡು ಕಾಲುಗಳೂ ಹೋದದ್ದನ್ನು ಕಂಡು ಖುಷಿಪಟ್ಟ. ಇದು ಕೇವಲ ಕಲ್ಪನೆಯ ಕಥೆಯಾದರೂ ಇದರ ಹಿಂದಿನ ವಿಚಾರ ಮನುಷ್ಯನ ಸ್ವಭಾವದ ಕೈಗನ್ನಡಿಯಾಗಿದೆ. ತನ್ನ ಒಂದು ಕಣ್ಣು ಹೋದರೂ ಪ್ರತಿಸ್ಪರ್ಧಿಯ ಎರಡು ಕಣ್ಣುಗಳೂ ಹೋಗಬೇಕೆಂಬ ಮನೋಭಾವವೇ ಮತ್ಸರದ ವಿಕೃತ ರೂಪ. ಮನುಷ್ಯನ ಆರು ಶತ್ರುಗಳಲ್ಲಿ ಒಂದೆಂದು ಪರಿಗಣಿತವಾದ ಈ ಮತ್ಸರ ಅವನನ್ನು ಮೂರ್ಖನನ್ನಾಗಿಸಿ ಕೆಳಗೆ ಬೀಳಿಸುತ್ತದೆ, ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುತ್ತದೆ. ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಮತ್ಸರ ಅನ್ನುವುದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ ಎನ್ನಬಹುದು. ಸುಮಾರು ಐದು ತಿಂಗಳ ಮಗುವಿನ ಹಂತದಿಂದಲೂ ಈ ಮತ್ಸರ ಇರುವುದನ್ನು ಗಮನಿಸಬಹುದು. ಒಂದು ಮಗು ತನ್ನ ಕೈಯಲ್ಲಿನ ಆಟಿಕೆಗಿಂತ ಇನ್ನೊಂದು ಮಗುವಿನ ಕೈಯಲ್ಲಿನ ಆಟಿಕೆಯ ಬಗೆಗೇ ಆಸಕ್ತಿ ವಹಿಸುತ್ತದೆ ಮತ್ತು ಅದೇ ಬೇಕೆಂದು ಹಟ ಮಾಡುತ್ತದೆ. ಈ ಮತ್ಸರದ ಉತ್ಪನ್ನಗಳೇ ಕೋಪ, ಹತಾಶೆ, ಅಸಹಾಯಕತೆ, ಜಿಗುಪ್ಸೆ, ಇತ್ಯಾದಿಗಳು. ಮತ್ಸರಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ. ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಪ್ರತಿಸ್ಪರ್ಧಿ ಎಂದು ಭಾವಿಸುವವನನ್ನು ಹೀಗಳೆಯುವುದು, ಅವನನ್ನು ಕುಬ್ಜಗೊಳಿಸುವ ಕುತಂತ್ರಗಳನ್ನು ಮಾಡುವುದು, ಅವನ ಪ್ರಗತಿಗೆ ಅಡ್ಡಗಾಲು ಹಾಕುವುದು, ಮುಂತಾದ ಕ್ರಮಗಳು ಮತ್ಸರದ ಪರಿಣಾಮವೇ ಆಗಿದೆ. ವೃತ್ತಿ, ಪ್ರೇಮ, ಮತ, ಧರ್ಮ, ಸಂಸ್ಕೃತಿ, ರೂಪ, ಐಶ್ವರ್ಯ, ದಾರ್ಢ್ಯತೆ, ಇತ್ಯಾದಿಗಳಲ್ಲಿ ಮತ್ಸರ ತನ್ನ ಕರಿನೆರಳು ಚಾಚುತ್ತದೆ.
     ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶ ಪ್ರೇಮ ಮತ್ಸರಕ್ಕೆ ಕಾರಣವಾಗುತ್ತದೆ. ಮೂರನೆಯ ವ್ಯಕ್ತಿಯಿಂದ ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ. 
     ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ. ಈಗ ಬಹುತೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವೇ ಪ್ರಧಾನ ವಿಷಯ. ಆಸ್ತಿಗಾಗಿ, ಅಂತಸ್ತಿಗಾಗಿ, ಅಧಿಕಾರಕ್ಕಾಗಿ ಯಾರು ಯಾರನ್ನು ಬೇಕಾದರೂ ಕೊಲ್ಲಲು ಮಸಲತ್ತು ಮಾಡಬಹುದು ಎಂಬ ಸಂದೇಶಗಳನ್ನು ಪುಂಖಾನುಪುಂಖವಾಗಿ ತೋರಿಸಲಾಗುತ್ತಿದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ತಂದೆ-ತಾಯಿಯರನ್ನು, ಮಕ್ಕಳನ್ನು, ಕೊನೆಗೆ ಏನೂ ಅರಿಯದ ಹಸು ಕಂದಮ್ಮಗಳನ್ನು ಕೊಲ್ಲಲು ಮಾಡುವ ಮಸಲತ್ತುಗಳನ್ನು, ಸಂಚುಗಳನ್ನು ತೋರಿಸುವ ರೀತಿ ಮತ್ಸರವನ್ನು ವೈಭವಿಸುವುದಲ್ಲದೇ ಮತ್ತೇನು? ಇಂತಹ ಋಣಾತ್ಮಕ ಸಂದೇಶಗಳು ಜನಮಾನಸದಲ್ಲಿ ಕುಭಾವನೆಗಳನ್ನು ಮೂಡಿಸುವುದಲ್ಲದೆ, ಜನರು ಹೀಗೆಯೇ ಇರುತ್ತಾರೆ ಎಂದು ಭಾವಿಸುವಂತೆ ಮಾಡಿ ಸಮಾಜದ ಅಧಃಪತನಕ್ಕೆ ಅಪರೋಕ್ಷವಾಗಿ ಕಾರಣರಾಗುತ್ತಿವೆ.      
ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ|| 
[ಟಿಪ್ಪಣಿ: ವೈಶ್ವಾನರ ಎಂದರೆ ಉದರದಲ್ಲಿರುವ, ತಿಂದ ಆಹಾರವನ್ನು ಜೀರ್ಣಿಸಲು ಸಹಕಾರಿಯಾಗುವ ಅಗ್ನಿ.]
     ಮೊದಲೇ ಹೇಳಿರುವಂತೆ ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ. ಮತ್ಸರವೆಂದರೆ ಮತ್ತೇನೂ ಅಲ್ಲ, ನಗುವ ಶತ್ರುಗಳ ನಡುವೆ ಏಕಾಂಗಿಯಾಗಿರುವಂತೆ ಭಾಸವಾಗುವುದೇ ಮತ್ಸರ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಮತ್ಸರ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ನಮ್ಮನ್ನು ನಾವೇ ಇಷ್ಟಪಡದಿದ್ದರೆ ಬೇರೆಯವರು ಇಷ್ಟಪಡಬೇಕೆಂದು ಹೇಗೆ ಬಯಸುವುದು? ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ? 
     ಒಟ್ಟಾರೆಯಾಗಿ ಹೇಳಬೇಕೆಂದರೆ ಮತ್ಸರವೆಂಬುದು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ:
ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪)
ಅರ್ಥ: "ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ."
-ಕ.ವೆಂ.ನಾಗರಾಜ್.
**************
18.3.201ರರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಏಪ್ರಿಲ್ 24, 2015

ಸಾರ್ಥಕ ಹೊತ್ತು, ಸನ್ಮಿತ್ರನಿಗೆ ಅರವತ್ತು!


     ಕಳೆದ ಭಾನುವಾರ ನನ್ನ ದೀರ್ಘಕಾಲದ ಮಿತ್ರ ಶ್ರೀಧರ ೬೦ ವಸಂತಗಳನ್ನು ಕಂಡು ಮುಂದಡಿಯಿಟ್ಟ ದಿನ. ಆ ಸುಸಂದರ್ಭದ ನಿಮಿತ್ತ ಮಿತ್ರನ ಮನೆಯಲ್ಲಿ ಅಗ್ನಿಹೋತ್ರ, ವಿಶೇಷ ಕಾರ್ಯಕಲಾಪಗಳು, ಬಂಧು-ಮಿತ್ರರ ಶುಭ ಹಾರೈಕೆಗಳ ಮೇಳೈಕೆಗಳೊಂದಿಗೆ ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸನ್ಮಾನ್ಯ ಶ್ರೀ ಸು.ರಾಮಣ್ಣನವರ ಆಶೀರ್ವಾದಪೂರ್ವಕ ಸಂದೇಶಸೂಚಕವಾದ ಮಾತುಗಳು, ದೂರವಾಣಿ ಮೂಲಕವೇ ಸಾಂದರ್ಭಿಕವಾಗಿ ಮಾತನಾಡಿದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾತುಗಳು ಶುಭಸಂದರ್ಭವನ್ನು ಮತ್ತಷ್ಟು ಮಹತ್ವಗೊಳಿಸಿದವು. ಸಮ್ಮಿಶ್ರಭಾವದಿಂದ ನನ್ನ ಕಣ್ಣುಗಳಿಂದ ಜಾರಿದ ಒಂದೆರಡು ಹನಿಗಳನ್ನು ಬೇರೆಯವರು ಗಮನಿಸದಂತೆ ಒರೆಸಿಕೊಂಡೆ. ನನ್ನ ಮತ್ತು ಶ್ರೀಧರರ ಗೆಳೆತನ ಸಾಗಿಬಂದ ದಿನಗಳನ್ನು ಮನಸ್ಸು ಮೆಲುಕು ಹಾಕಿತ್ತು.                                                      
     ಅರವತ್ತು ವರ್ಷಗಳು ಜೀವಿಯ ಕಾಲದಲ್ಲಿ ಆತ್ಮಾವಲೋಕನದ ಸಮಯ. ಕಳೆದ ಆ ವರ್ಷಗಳಲ್ಲಿ ಬಾಳಿನಲ್ಲಿ ಕಳೆದುದೆಷ್ಟೋ, ಕೂಡಿದುದೆಷ್ಟೋ, ಗುಣಿಸಿದೆಷ್ಟೋ ಮತ್ತು ಭಾಗಿಸಿದದೆಷ್ಟೋ ಎಲ್ಲ ಲೆಕ್ಕವನ್ನೂ ಮಾಡಿದ ನಂತರ ಉಳಿವ ಶೇಷವೇ ಆ ಸಮಯದ ಬದುಕಿನ ಸ್ಥಿತಿ! ನನ್ನ ಸನ್ಮಿತ್ರನ ಈಗಿನ ಸ್ಥಿತಿಯಲ್ಲಿ ಈ ರೀತಿ ಲೆಕ್ಕ ಹಾಕಿದರೆ ಪುಣ್ಯದ ಲೆಕ್ಕದಲ್ಲಿ ಗಣನೀಯ ಶಿಲ್ಕು ಇರುವುದು ಗೋಚರವಾಗದೇ ಇರದು. ಧನ್ಯತೆ ಮತ್ತು ಮಾನ್ಯತೆ ಎರಡನ್ನೂ ಗಳಿಸಿಕೊಂಡಿರುವುದಕ್ಕೆ ಪೂರ್ವಾರ್ಜಿತ ಕರ್ಮ ಮತ್ತು ಈಗ ಮಾಡಿರುವ ಸುಕರ್ಮಗಳ ಫಲಗಳೇ ಕಾರಣವೆಂದರೆ ತಪ್ಪಿಲ್ಲ.


ವೇದಭಾರತಿಯ ತಂಡದ ಸಹಕಾರದೊಡನೆ ವಿಶೇಷ ಅಗ್ನಿಹೋತ್ರ
     ಇದು ವಾನಪ್ರಸ್ಥಾಶ್ರಮದ ಸಮಯ. ವಾನಪ್ರಸ್ಥವೆಂದರೆ ಜನರಿಂದ ದೂರವಾಗಿ ಬಾಳುವುದಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು ತಾನು ತಾನಾಗಿರಬೇಕು, ಅರ್ಥಾತ್ ತನಗಾಗಿ ಬಾಳಬೇಕು. ತನಗಾಗಿ ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ನನ್ನ ಮಿತ್ರನ ಸದ್ಯದ ಗುರಿಯೆಂದರೆ ವೇದದ ಕುರಿತು ಪ್ರಚಾರ, ಪ್ರಸಾರದಲ್ಲಿ ತೊಡಗುವುದು, ಅಗ್ನಿಹೋತ್ರವನ್ನು ಜನಪ್ರಿಯಗೊಳಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ಇತರರನ್ನೂ ಆ ದಿಸೆಯಲ್ಲಿ ಪ್ರೇರಿಸುವುದು. ಆತ ಸಾಗುತ್ತಿರುವ ರೀತಿಯಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಕಾಣುತ್ತಿದೆ. ಯಶಸ್ವಿಯೂ ಆಗಲಿ ಎಂಬುದು ಮನದಾಳದ ಹಾರೈಕೆ.
     ೧೯೭೦ರ ದಶಕದ ಸಮಯದಲ್ಲಿ ಶ್ರೀಧರರ ಪರಿಚಯವಾದಾಗ ಆತ ಇನ್ನೂ ಐ.ಟಿ.ಐ. ಓದುತ್ತಿದ್ದ ವಿದ್ಯಾರ್ಥಿ. ನಾನು ಆಗಿನ್ನೂ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ನಾನು ಜಿಲ್ಲಾ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ. ಇಬ್ಬರೂ ಸಂಘದ ಕಾರ್ಯಕರ್ತರಾದ್ದರಿಂದ ಪರಿಚಯ ಸಹಜವಾಗಿ ಆಗಿತ್ತು. ೧೯೭೩ರಲ್ಲಿ ಶ್ರೀಧರ್ ಸಂಘದ ಕಾರ್ಯಾಲಯದಲ್ಲಿ ಇದ್ದುಕೊಂಡು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಆತ ವಾಣಿವಿಲಾಸ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ಶೈಲೇಂದ್ರ ಸಾಯಂಶಾಖೆಯ ಮುಖ್ಯಶಿಕ್ಷಕನಾಗಿದ್ದರೆ, ನಾನು ಭಾಗ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹನಾಗಿ ಜವಾಬ್ದಾರಿ ಹೊಂದಿದ್ದೆ. ಚ.ವಾಸುದೇವ್ ಜಿಲ್ಲಾ ಪ್ರಚಾರಕ್, ಬಿ.ಎನ್.ಹರಿಪ್ರಸಾದ್ (ಈಗಿನ ಬೆಂಗಳೂರಿನ ಜನಪ್ರಿಯ ಶಾಸಕರಾದ ಬಿ.ಎನ್.ವಿಜಯಕುಮಾರರ ತಮ್ಮ) ನಗರ ಪ್ರಚಾರಕ್, ಎ.ವಿ. ಚಂದ್ರಶೇಖರ್ (ಈಗ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು) ವಿಸ್ತಾರಕ್ ಮತ್ತು ಸು.ರಾಮಣ್ಣನವರು ಮೈಸೂರು ವಿಭಾಗ ಪ್ರಚಾರಕರಾಗಿದ್ದ ಸಮಯವದು. ಹೊ.ವೆ.ಶೇಷಾದ್ರಿಯವರು ಪ್ರಾಂತ ಪ್ರಚಾರಕರಾಗಿದ್ದರು. ನಾನು ಪ್ರತಿನಿತ್ಯ ನನ್ನ ವ್ಯಾಪ್ತಿಯಲ್ಲಿನ ಒಂದೊಂದು ಶಾಖೆಗೆ ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆಗೂ ವಾರಕ್ಕೆ ಎರಡು-ಮೂರು ದಿನಗಳು ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಉತ್ತಮದ್ದಾಗಿತ್ತು. ಅವರು ಬಾಲ ಸ್ವಯಂಸೇವಕರೊಂದಿಗೆ ಬೆರೆಯುತ್ತಿದ್ದ ರೀತಿ, ಆಟವಾಡಿಸುತ್ತಿದ್ದ ಶೈಲಿ, ಗಟ್ಟಿ ಕಂಠದಲ್ಲಿ ಹೇಳಿಕೊಡುತ್ತಿದ್ದ ದೇಶಭಕ್ತಿಗೀತೆಗಳು, ಶಾಖೆಗೆ ಬಾರದಿದ್ದ ಬಾಲಕರ ಮನೆಗಳಿಗೆ ಹೋಗಿ ಅವರನ್ನು ಮಾತನಾಡಿಸುತ್ತಿದ್ದುದು, ಮುಂತಾದವು ಹೊಸ ಹೊಸ ಬಾಲಕರನ್ನು ಶಾಖೆಯೆಡೆಗೆ ಸೆಳಯುತ್ತಿದ್ದವು. ಶ್ರೀಧರರ ಇಂದಿನ ಕಾರ್ಯಕ್ಷಮತೆ, ಸಂಘಟನಾಚತುರತೆ, ವಾಕ್ಪಟುತ್ವಗಳಿಗೆ ಅವರು ಶೈಲೇಂದ್ರ ಶಾಖೆಯ ಮುಖ್ಯಶಿಕ್ಷಕನಾಗಿದ್ದುದು, ಮೇಲೆ ತಿಳಿಸಿದ ಮಹನೀಯರ ಮಾರ್ಗದರ್ಶನ, ಜೊತೆಯಲ್ಲಿದ್ದ ಸಮರ್ಥ ಸಂಘದ ಕಾರ್ಯಕರ್ತರ ಸಹವಾಸ, ಬಡತನದ ಕಷ್ಟ-ನಷ್ಟಗಳ ಅರಿವುಗಳು ಗಟ್ಟಿ ತಳಹದಿ ಹಾಕಿತ್ತೆಂಬುದರಲ್ಲಿ ಅನುಮಾನವೇ ಇಲ್ಲ.
     ಅಧಿಕಾರದಾಹದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಜನತೆಯ ಮೇಲೆ ಹೇರಿದ್ದ ೧೯೭೫-೭೭ರ ತುರ್ತುಪರಿಸ್ಥಿತಿ ದೇಶವನ್ನು ಸರ್ವಾಧಿಕಾರಕ್ಕೆ ದೂಡಿತ್ತು. ವಿರೋಧಿಗಳನ್ನೆಲ್ಲಾ ಜೈಲುಪಾಲಾಗಿಸಿದ್ದರು. ಪತ್ರಿಕಾ ಮತ್ತು ಇತರ ಮಾಧ್ಯಮಗಳಿಗೆ ದಿಗ್ಬಂಧನ, ರಾ.ಸ್ವ.ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ನಿಷೇಧ ದೇಶದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ತಂದಿತ್ತು. ಆ ಅವಧಿ ನನ್ನ ಪಾಲಿಗೂ ಕರಾಳ ಅವಧಿಯಾಗಿತ್ತು. ನಾನೂ ಸೇರಿದಂತೆ ಹಲವರನ್ನು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಅಟ್ಟಿದ್ದರು. ನನ್ನ ನೌಕರಿ ಹೋಗಿತ್ತು. ಸುಮಾರು ಆರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿ ಕಳೆದಿದ್ದೆ. ಶ್ರೀಧರ್ ಆ ಸಮಯದಲ್ಲಿ ೧೯೭೪ರಿಂದ೭೭ರವರೆಗೆ ಬೆಂಗಳೂರಿನಲ್ಲಿದ್ದು ತುರ್ತುಪರಿಸ್ಥಿತಿ ಅವಧಿಯಲ್ಲಿ ಭೂಗತನಾಗಿ ತುರ್ತುಪರಿಸ್ಥಿತಿ ವಿರುದ್ಧ ಜನರನ್ನು ಜಾಗೃತಗೊಳಿಸುವ ಕಹಳೆ ಪತ್ರಿಕೆಯ ವಿವಿದೆಡೆಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ತೆರೆಮರೆಯ ಈ ಕೆಲಸ ಅತ್ಯಂತ ಮಹತ್ವದ್ದು ಮತ್ತು ಅಪಾಯಕಾರಿಯಾಗಿದ್ದುದಾಗಿತ್ತು. ಹಲವು ಸಲ ಚಾಣಾಕ್ಷತೆಯಿಂದ ಪೋಲಿಸರ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡಿದ್ದರು. ಆ ಕರಾಳ ಅವಧಿ ನೂರಾರು ಸ್ವಯಂಸೇವಕರ ಜೀವನವನ್ನೇ, ಸಂಸಾರಗಳನ್ನೇ ನಾಶ ಮಾಡಿತ್ತು. ಸಂಘದ ದಿಟ್ಟ ಹೋರಾಟದಿಂದ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದ್ದು ಈಗ ಇತಿಹಾಸ.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕನಾಗಿ
     ೧೯೭೭ರಿಂದ ೭೯ರವರೆಗೆ ಕೆಜಿಎಫ್ ನಲ್ಲಿದ್ದ ಶ್ರೀಧರ್ ೧೯೭೯ರಲ್ಲಿ ಹಾಸನ ಜಿಲ್ಲೆಗೆ ಬಂದವರು ತದನಂತರದಲ್ಲಿ ಹಾಸನ ಜಿಲ್ಲೆಯಲ್ಲಿಯೇ ಕೆಲಸ ಮಾಡಿದರು. ನನ್ನ ಮತ್ತು ಶ್ರೀಧರರ ಮರುಭೇಟಿ ೧೯೮೦ರ ದಶಕದ ಆರಂಭದ ವರ್ಷಗಳಲ್ಲಿ ಹೊಳೆನರಸಿಪುರದಲ್ಲಾಯಿತು. ನಾನು ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಹೋದಾಗ ಅವರು ಕೆ.ಇ.ಬಿ. ನೌಕರರಾಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಸಂಘದ, ವಿಶ್ವಹಿಂದು ಪರಿಷತ್ತಿನ ಅನೇಕ ಚಟುವಟಿಕಗಳಲ್ಲಿ ಇಬ್ಬರೂ ಸಕ್ರಿಯವಾಗಿ ತಡಗಿಸಿಕೊಂಡಿದ್ದೆವು. ನಾನು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಮತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ಆಗಿದ್ದರಿಂದ ಆ ಸಂಘಗಳ ಮೂಲಕವೂ ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ಅವಕಾಶವಾಗಿತ್ತು. ಅಂತಹ ಚಟುವಟಿಕೆಗಳಿಗೆ ಶ್ರೀಧರರ ಸಕ್ರಿಯ ಸಹಕಾರ ಲಭಿಸುತ್ತಿತ್ತು. ಅಲ್ಲಿಂದ ನನಗೆ ವರ್ಗಾವಣೆಯಾದಾಗ ಮತ್ತೆ ಬೇರ್ಪಟ್ಟೆವು.
ಸಂಸ್ಕೃತ ಸಮ್ಮೇಳನದಲ್ಲಿ ಸಮ್ಮೇಳನ ಸಂಯೋಜಕನಾಗಿ
     ಸಕಲೇಶಪುರ, ಬೇಲೂರು, ಮಂಗಳೂರು ಜಿಲ್ಲೆಯ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿ ಹಾಸನಕ್ಕೆ ೧೯೯೧-೯೨ರಲ್ಲಿ ವರ್ಗ ಮಾಡಿಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯ ಮಾಡಲು ಬಂದಾಗ ಶ್ರೀಧರ್ ಸಹ ಹಾಸನದಲ್ಲಿದ್ದರು. ನಾನು ಶಾಂತಿನಗರದ ಸ್ವಂತ ಮನೆಯಲ್ಲಿದ್ದರೆ, ಅವರೂ ಶಾಂತಿನಗರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶ್ರೀಧರ್ ಆಗ ವಿಶ್ವಹಿಂದುಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾಗಿದ್ದರು.ಅದೇ ಸಮಯದಲ್ಲಿ  ಶ್ರೀರಾಮಜನ್ಮಭೂಮಿಮುಕ್ತಿ ಹೋರಾಟ ಆರಂಭವಾಗಿ  ವಿಶ್ವಹಿಂದು ಪರಿಷತ್ತಿನ ಮೇಲೆ ಸರ್ಕಾರವು ನಿಶೇಧವನ್ನು ಹೇರಿದ್ದರಿಂದ ವಿಶ್ವಹಿಂದು ಪರಿಷತ್ತಿನ ಹೆಸರಲ್ಲಿ ಚಟುವಟಿಕೆ ನಡೆಸುವಂತಿರಲಿಲ್ಲ. ಆಗ ರೂಪುಗೊಂಡಿದ್ದೇ ಮನೆ-ಮನೆ ಭಜನೆ ಕಾರ್ಯಕ್ರಮ. ಶ್ರೀಧರ್, ನಾನು, ವಿಶ್ವೇಶ್ವರಯ್ಯ (ಈಗ ಮೈಸೂರಿನಲ್ಲಿದ್ದಾರೆ) ಮತ್ತು ಉಪೇಂದ್ರ (ಈಗ ಚಿಕ್ಕಮಗಳೂರಿನಲ್ಲಿ) ನಾವು ನಾಲ್ವರು ಮಾತನಾಡಿಕೊಂಡು ಪ್ರತಿ ಶನಿವಾರ ಒಂದೊಂದು ಮನೆಯಲ್ಲಿ ಸಾಮೂಹಿಕ ಭಜನೆ ನಡೆಸುವುದೆಂದು ತೀರ್ಮಾನಿಸಿ ಆರಂಭಿಸಿಯೇ ಬಿಟ್ಟೆವು. ಸಾಯಂಕಾಲ ೭ರಿಂದ ೭.೪೫ರವರೆಗೆ ಭಜನೆ, ೧೦ ನಿಮಿಷಗಳ ಕಾಲ ಸಾಮಯಿಕ ಮಹತ್ವದ ವಿಷಯದ ಕುರಿತು ಯಾರಾದರೂ ಒಬ್ಬರ ಮಾತು, ನಂತರ ಮಂಗಳಾರತಿ (ಯಾರ ಮನೆಯಲ್ಲಿ ಭಜನೆ ನಡೆಯುತ್ತಿತ್ತೋ ಆ ಮನೆಯವರು ಪೂಜಿಸುವ ದೇವರಿಗೆ), ಜೊತೆಗೆ ಭಾರತಮಾತಾ ನಮನವೂ ಇರುತ್ತಿತ್ತು. ಪ್ರಸಾದ ವಿನಿಯೋಗದೊಂದಿಗೆ ೮ರ ವೇಳೆಗೆ ಕಾರ್ಯಕ್ರಮ ಮುಗಿಯುತ್ತಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮ ಶಾಂತಿನಗರ ಮತ್ತು ಹೇಮಾವತಿನಗರದ  ಅನೇಕರ ಮನೆಗಳಲ್ಲಿ ನಡೆದು, ಪರಸ್ಪರರಲ್ಲಿ ಸೌಹಾರ್ದತೆ, ಬಡಾವಣೆಯವರೆಲ್ಲಾ ಒಂದೇ ಕುಟುಂಬದವರು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಫಲವಾಗಿ ಅಂಚೆ-ತಂತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಾವುಗಳೇ ರಾಮನವಮಿ ಉತ್ಸವವನ್ನು ಸುಮಾರು ೧೦ ವರ್ಷಗಳವರೆಗೆ ವಿಜೃಂಭಣೆಯಿಂದ ಮಾಡಿದ್ದೆವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಡ್ಡ ಮೆರವಣಿಗೆಗಳು ನಡೆಯುತ್ತಿದ್ದವು. ನಂತರದಲ್ಲಿ ಶ್ರೀಧರ್ ಸ್ವಂತ ಮನೆ ಈಶಾವಾಸ್ಯಮ್ವಾಸಿಯಾದರೆ ನಾನು ವರ್ಗಾವಣೆಯಾಗಿ ಬೇರೆ ಜಿಲ್ಲೆಗಳಲ್ಲಿ ಸುತ್ತುತ್ತಿದ್ದುದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತು. ಶ್ರೀಧರ್ ಅರಸಿಕೆರೆಯ ತಾಲ್ಲೂಕು ಸಹಕಾರ್ಯವಾಹ ಮತ್ತು ನಂತರದಲ್ಲಿ ಜಿಲ್ಲಾಸಹಕಾರ್ಯವಾಹರಾಗಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಗಣನೀಯ ಕಾರ್ಯ ಮಾಡಿದ್ದಾರೆ. ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ನಾನು ಈ ಸಂಸ್ಥೆಯ ಸಂಯೋಜಕರಾಗಿದ್ದರೆ, ಡಾ. ಗುರುರಾಜ ಹೆಬ್ಬಾರ್ ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್ ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್ ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯ ಖಜಾಂಚಿಯಾಗಿದ್ದರೆ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್‌ರವರು ಇದ್ದರು. ಆ ಸಮಯದಲ್ಲಿ ಶ್ರೀಧರ್ ಸಂಘದ ಜಿಲ್ಲಾ ಸೇವಾಪ್ರಮುಖ್ ಆಗಿ ಜವಾಬ್ದಾರಿ ಹೊಂದಿದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಮಾತ್ರ. ಇದು ವಾಸ್ತವ ಸಂಗತಿ. ಈ ಮೂವರ ತಂಡವನ್ನು  ಸೇವಾ ಆಟೋ ಎಂದು ಸ್ನೇಹಿತರು ಹಾಸ್ಯ ಮಾಡುತ್ತಿದ್ದರು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಸಾಗುತ್ತಿರಲಿಲ್ಲ. ಈ ಆಟೋದ ಎಂಜಿನ್ ಹೆಬ್ಬಾರರಾಗಿದ್ದರು. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾಗರಾಜ್ ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ನಡೆಯುತ್ತಿದ್ದ ಸೇವಾಚಟುವಟಿಕೆಗಳನ್ನು ಮುಂದುವರೆಸಲಾಗಿರಲಿಲ್ಲ. ಸೇವಾಭಾರತಿಯಿಂದ ಹಾಸನದ ಅಂಬೇಡ್ಕರ್ ನಗರ ಮತ್ತು ಸಿದ್ದಯ್ಯನಗರಗಳ ವ್ಯಾಪ್ತಿಯಲ್ಲಿ ೮ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನಿಗಳ ವಿವರ ಸಂಗ್ರಹಿಸಿ ರಕ್ತದಾನ ಮಾಡುವ ವ್ಯವಸ್ಥೆ, ಸೇವಾದಿನದ ಆಚರಣೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಸ್ವದೇಶಿ ಜಾಗರಣ ಆಂದೋಲನ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಂತಿನಗರ ಬಡಾವಣೆಯಲ್ಲಿ ಪಾರ್ಥೇನಿಯಂ ನಿರ್ಮೂಲನಾ ಕಾರ್ಯದ ಜೊತೆಗೆ ವಿನೂತನ ರೀತಿಯ ರಕ್ಷಾಬಂಧನ ಕಾರ್ಯಕ್ರಮ, ಇತ್ಯಾದಿ ಚಟುವಟಿಕೆಗಳು ಸುಮಾರು ನಾಲ್ಕು ವರ್ಷಗಳವರೆಗೆ ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ನಾನು ತಹಸೀಲ್ದಾರನಾಗಿ ಮಂಗಳೂರಿಗೆ, ಲಕ್ಷ್ಮಣ್ ಮೈಸೂರಿಗೆ ವರ್ಗವಾಗಿ ಹೋದನಂತರದಲ್ಲಿ ಸೇವಾಭಾರತಿ ಚಟುವಟಿಕೆ ಸ್ತಬ್ಧವಾಯಿತು. ಈಗಲೂ ಯಾರಾದರೂ ತರುಣರು ಈ ಕಾರ್ಯ ಮುಂದುವರೆಸಲು ಮುಂದೆ ಬಂದಲ್ಲಿ ನನ್ನ ಮತ್ತು ಶ್ರೀಧರರ ಕ್ರಿಯಾತ್ಮಕ ಸಹಕಾರ ಸಿಗಲಿದೆ.
     ನಂತರದ ಮತ್ತು ಈಗಿನ ಚಟುವಟಿಕೆಗಳು ವೇದಭಾರತಿಯ ಯಶೋಗಾಥೆಯದು. ಶಿಕಾರಿಪುರ ಮತ್ತು ಶಿವಮೊಗ್ಗಗಳಲ್ಲಿ ಕಾರ್ಯ ನಿರ್ವಹಿಸಿ ೨೦೦೯ರ ಡಿಸೆಂಬರಿನಲ್ಲಿ ಸ್ವಯಂ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ಶ್ರೀಧರ್ ಸಹ ಒಂದೆರಡು ವರ್ಷಗಳ ನಂತರ ಸ್ವಯಂ ನಿವೃತ್ತಿ ತೆಗೆದುಕೊಂಡರು. ವೇದಸುಧೆ ಅಂತರ್ಜಾಲದ ಬ್ಲಾಗ್ ಅನ್ನು ಶ್ರೀಧರ್ ತೆರೆದರು. ನನ್ನನ್ನು ಗೌರವ ಸಂಪಾದಕರಾಗಿರಲು ಮತ್ತು ಲೇಖನಗಳನ್ನು ಬರೆಯಲು ಕೋರಿದರು. ಈ ಬ್ಲಾಗ್ ಎಷ್ಟು ಜನಪ್ರಿಯವಾಯಿತೆಂದರೆ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ಇದು ಕಂಡಿದೆ. ಬ್ಲಾಗಿನ ವಾರ್ಷಿಕೋತ್ಸವವನ್ನೂ ಆಚರಿಸಿದೆವು. ಶ್ರೀಧರ್ ಮತ್ತು ನನ್ನ ತಮ್ಮನ ಒತ್ತಾಯದ ಮೇರೆಗೆ ನನ್ನ ಮೂಢ ಉವಾಚ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ವಿವರಗಳು ಪ್ರಚುರವಾಗುತ್ತಲೇ ಇರುವುದರಿಂದ ಇಲ್ಲಿ ಪುನಃ ಅ ಬಗ್ಗೆ ವಿವರಿಸಹೋಗುವದಿಲ್ಲ. ತಮ್ಮ ಮನೆಯ ಹಾಲ್ ಅನ್ನೇ ಈ ಚಟುವಟಿಕೆಗಳಿಗೆ ಮೀಸಲಿಟ್ಟು ವೇದಭಾರತಿಯ ಬೆನ್ನೆಲುಬಾಗಿರುವ ಶ್ರೀಧರರಿಗೆ ಸಕ್ರಿಯ ಸಹಕಾರ, ಬೆಂಬಲಗಳನ್ನು ವೇದಭಾರತಿ ಕಾರ್ಯಕರ್ತರು ಹೀಗೆಯೇ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಲಿ ಎಂದು ಹಾರೈಸುವೆ.
      ಹಾಸನದಲ್ಲಿ ನಡೆದ ನಮ್ಮ ಕೆಳದಿ ಕವಿಮನೆತನದವರ ವಾರ್ಷಿಕ ಸಮಾವೇಶದಲ್ಲಿ ಅದು ತಮ್ಮದೇ ಕೆಲಸವೆಂಬಂತೆ ನನ್ನ ಹೆಗಲಿಗೆ ಹೆಗಲಾಗಿ ಶ್ರಮಿಸಿದ ಶ್ರೀಧರರಿಗೆ ನಾನು ಕೃತಜ್ಞ. ಜಿಲ್ಲಾ ಸಂಸ್ಕೃತ ಸಮ್ಮೇಳನದ ಬಗ್ಗೆ ಹೇಳಲೇಬೇಕು. ಸಮ್ಮೇಳನದ ಸಂಯೋಜಕರಾಗಿ ಸಮ್ಮೇಳನವು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಡೆದ ಸಮ್ಮೇಳನಗಳಿಗಿಂತ ಅತ್ಯದ್ಭುತವಾಗಿ ಯಶಸ್ವಿಗೊಳಿಸಲು ಶ್ರೀಧರ್ ವಹಿಸಿದ ಶ್ರಮ ಅಭಿನಂದನೀಯ. ಅವರ ಸಂಘಟನಾ ಚತುರತೆ ಇಲ್ಲಿ ಫಲ ನೀಡಿತು. ಅವರು ಹಾಸನದ ಜನಮಿತ್ರ ಮತ್ತು ಜನಹಿತ ಪತ್ರಿಕೆಗಳಲ್ಲಿ, ವಿಕ್ರಮ ವಾರಪತ್ರಿಕೆಯಲ್ಲಿ ನಿರಂತರವಾಗಿ ವೇದದ ವಿಚಾರಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸಂಗ್ರಹ ಜೀವನವೇದ ನಿಜಕ್ಕೂ ಒಂದು ಅದ್ಭುತ ಕೃತಿಯಾಗಿದ್ದು ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವೂ ಆಗಿ ಜನಪ್ರಿಯವೆನಿಸಿರುವುದು ಹೆಮ್ಮೆಯ ಸಂಗತಿ.
     ಬರೆಯುತ್ತಾ ಹೋದರೆ ಮುಗಿಯಲಾರದು. ಸಂಕ್ಷಿಪ್ತವಾಗಿ ನನ್ನ ಮತ್ತು ಶ್ರೀಧರರ ದಶಕಗಳ ಒಡನಾಟದ ಕೆಲವು ಸಂದರ್ಭಗಳನ್ನು ಸ್ಮರಿಸಿಕೊಂಡಿರುವೆ. ಶ್ರೀಧರರಿಂದ ಇನ್ನೂ ಹೆಚ್ಚು ರಭಸದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇನೆ. ಅವರಿಗೆ ಇನ್ನೂ ಹೆಚ್ಚಿನ ಧನ್ಯತೆ ಮತ್ತು ಮಾನ್ಯತೆ ಎರಡೂ ಸಿಗಲಿ ಎಂದು ಪುನಃ ಹಾರೈಸುತ್ತಾ, ಅವರಿಗೆ ನನ್ನ ಕ್ರಿಯಾತ್ಮಕ ಸಹಕಾರ ಸದಾ ಇರುತ್ತದೆಂದು ತಿಳಿಸುತ್ತಾ ಈ ಕೆಲವು ಸಾಲುಗಳನ್ನು ಅವರ ಅರವತ್ತರ ಸಂದರ್ಭಕ್ಕೆ ಉಡುಗೊರೆಯಾಗಿ ನೀಡಿರುವೆ.
"ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ"
-ಕ.ವೆಂ.ನಾಗರಾಜ್.
**************
ದಿನಾಂಕ 27.04.2015ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:


ಭಾನುವಾರ, ಏಪ್ರಿಲ್ 5, 2015

ಏರಿದ ಮದ ಇಳಿಯಲೇಬೇಕು!


ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ |
ವಿಕಟನರ್ತನಗೈವ ಮದವದವನತಿ ತರದೆ?
ನರಾರಿ ಮದದೀಪರಿಯನರಿ ಮೂಢ ||
     ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನಮಗೆ ಏನೂ ಮಾಡಿರದಿದ್ದರೂ ಅವರ ಬಗ್ಗೆ ಸದಭಿಪ್ರಾಯ ಬರುವುದಿಲ್ಲ. ಇದಕ್ಕೆ ಕಾರಣ ಅವರ 'ಬಾಡಿ ಲಾಂಗ್ವೇಜ್' ಅರ್ಥಾತ್ ಅವರ ನಡವಳಿಕೆಯ ಹೊರರೂಪ! ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರಲ್ಲಾ, ಹಾಗೆ ಅವರ ಮುಖಭಾವದಲ್ಲಿ ಅವರ ವ್ಯಕ್ತಿತ್ವ ಹೊರಸೂಸಿ ನಮ್ಮಲ್ಲಿ ಆ ಭಾವ ಬರುವಂತೆ ಮಾಡಬಹುದು. ಮದ ಸೊಕ್ಕಿ ಮೆರೆಯುವವರು, ದರ್ಪಿಷ್ಟರು ಸಹಜವಾಗಿ ಇತರರಿಗೆ ಸಹನೀಯವೆನಿಸಲಾರರು. ಸಾಮಾನ್ಯವಾಗಿ ಗಮನಕ್ಕೆ ಬರುವ ಈ ಉದಾಹರಣೆಯನ್ನು ನೋಡೋಣ. ಬಸ್ಸಿನಲ್ಲಿ, ರೈಲಿನಲ್ಲಿ ಅಕ್ಕಪಕ್ಕ ಕುಳಿತವರಲ್ಲಿ ಯಾರಾದರೊಬ್ಬರ ಕಾಲು ಇನ್ನೊಬ್ಬರಿಗೆ ಸೋಕಿದಾಗ ತಕ್ಷಣ ಕಾಲನ್ನು ಹಿಂದಕ್ಕೆಳೆದುಕೊಂಡು ಅವರನ್ನು ಕಣ್ಣಿಗೆ ಒತ್ತಿಕೊಂಡು 'ಸಾರಿ' ಅಥವ ಕ್ಷಮಿಸಿ ಎನ್ನುತ್ತೇವೆ. ಇನ್ನು ಕೆಲವರು ಇರುತ್ತಾರೆ. ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಅವರ ಕಾಲು ಇನ್ನೇನು ಪಕ್ಕದವರ ಅಥವ ಮುಂದೆ ಕುಳಿತಿರುವವರನ್ನು ಸೋಕುವಂತಿರುತ್ತದೆ. ಕಾಲು ಸೋಕಬಾರದೆಂದು ಪಕ್ಕದವರೇ ಮುಜುಗರ ಪಟ್ಟುಕೊಂಡು ಸರಿಸಿ ಕುಳಿತಿರುತ್ತಾರೆ. ಅದರ ಅರಿವಿದ್ದೂ ಅರಿವಿಲ್ಲದಂತೆ ಪಾದ ಕುಣಿಸುವವರನ್ನು ಏನೆನ್ನಬೇಕು? ಅಕಸ್ಮಾತ್ ಕಾಲು ತಗುಲಿದರೂ ತಗುಲಿಸಿದವರು ಯಾವ ಭಾವವನ್ನೂ ವ್ಯಕ್ತಪಡಿಸದಿದ್ದರೆ? ಅವರ ಕಾಲನ್ನು ಕುಣಿಸುತ್ತಿರುವುದು ಅವರಲ್ಲ, ಅವರಲ್ಲಿರುವ ಮದ! ಅರಿಷಡ್ವರ್ಗಗಳಲ್ಲಿ ಒಂದಾದ ಈ ಮದ ಮದೋನ್ಮತ್ತರನ್ನು ಅವನತಿಯೆಡೆಗೆ ಜಾರಿಸುತ್ತಿರುತ್ತದೆ. ಇದು ಅರಿವಿಗೆ ಬರುವ ವೇಳೆಗೆ ಕಾಲ ಮಿಂಚಿರುತ್ತದೆ.
     ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವರು ಮಾಡುವ ಕೆಲಸವೇ. ಇಂತಹವರಿಂದ ದೂರವಿರುವುದೇ ಕ್ಷೇಮ. ನನ್ನದೇ ಒಂದು ಉದಾಹರಣೆ ಹೇಳಬೇಕೆನ್ನಿಸುತ್ತಿದೆ. ಉಪವಿಭಾಗದ ಕೇಂದ್ರವೂ ಆಗಿದ್ದ ಒಂದು ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಒಂದು ತುರ್ತು ವಿಷಯಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಯವರೊಡನೆ ಚರ್ಚಿಸಬೇಕಿತ್ತು. ಕಛೇರಿ ಸಮಯವಲ್ಲವಾದುದರಿಂದ ಅವರನ್ನು ಕಾಣಲು ಅವರ ಮನೆಗೇ ಹೋದೆ. ನನ್ನನ್ನು ಕಂಡ ಆಳು (ಅವನು ಅವರ ಕಛೇರಿಯ ಜವಾನನಾಗಿದ್ದು ಮನೆಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು) ಯಾರೇ ಬಂದರೂ ಒಳಕ್ಕೆ ಬಿಡದಂತೆ ಉಪವಿಭಾಗಾಧಿಕಾರಿ ಆತನಿಗೆ ನೀಡಿದ್ದ ಸೂಚನೆಯಂತೆ, ನನ್ನನ್ನು ನಿಲ್ಲಲು ಹೇಳಿ ನಾನು ಬಂದ ವಿಷಯವನ್ನು ಉಪವಿಭಾಗಾಧಿಕಾರಿಗೆ ತಿಳಿಸಿದ. ಆ ಅಧಿಕಾರಿ ಸೌಜನ್ಯಕ್ಕಾದರೂ ನನ್ನನ್ನು ಒಳಕ್ಕೆ ಬರಹೇಳದೆ, ಗೇಟಿನ ಬಾಗಿಲನ್ನೂ ತೆರೆಯದೆ ಅಲ್ಲೇ ನಿಂತು ನನ್ನೊಡನೆ 'ಏನು ವಿಷಯ?' ಎಂದು ಕೇಳಿದರು. ಅವರ ವರ್ತನೆಯಿಂದ ನನಗೆ ಬೇಸರವಾಗಿ ಚರ್ಚಿಸಬೇಕಿದ್ದ ವಿಷಯ ಚರ್ಚಿಸದೆ ಬಂದಿದ್ದಕ್ಕೆ ಏನೋ ನೆಪ ಹೇಳಿ ವಾಪಸು ಬಂದಿದ್ದೆ. ನಂತರದಲ್ಲಿ ನನ್ನದೇ ಸ್ವಂತ ನಿರ್ಧಾರದಿಂದ ಮುಂದುವರೆದಿದ್ದೆ. ವಿಷಯ ತಿಳಿಸದೇ ಇದ್ದುದಕ್ಕೆ ಅವರು ನಂತರದಲ್ಲಿ ಅಕ್ಷೇಪಿಸಿದ್ದರು. ಅವರ ಆಕ್ಷೇಪಕ್ಕೆ ನನ್ನ ಮೌನವೇ ಉತ್ತರವಾಗಿತ್ತು. ಇಂತಹ ಅಧಿಕಾರದ ಮದ ತಲೆಗೆ ಏರಿದ ಅವರು ನನ್ನೊಡನೆ ಮಾತ್ರವಲ್ಲದೆ ಇತರರೊಂದಿಗೂ ಹಾಗೆಯೇ ವರ್ತಿಸುತ್ತಿದ್ದರು. ಹೀಗಾಗಿ ಅವರ ಮತ್ತು ಇತರ ಅಧಿಕಾರಿಗಳ ನಡುವೆ ಎಷ್ಟು ಬೇಕೋ ಅಷ್ಟು ಕನಿಷ್ಟ ಮಟ್ಟದ ಸಂಬಂಧಗಳು ಮಾತ್ರ ಉಳಿದಿದ್ದು, ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತಿತ್ತು.
ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ || 
     ಮೇಲೆ ಉದಾಹರಿಸಿದ ಉಪವಿಭಾಗಾಧಿಕಾರಿಯವರು ನಂತರದಲ್ಲಿ ಜಿಲ್ಲಾಧಿಕಾರಿಯವರಾಗಿ ಬಡ್ತಿ ಹೊಂದಿ ಪ್ರತಿಷ್ಠಿತ ಜಿಲ್ಲೆಗೆ ನೇಮಕವಾದಾಗಲೂ ಅವರ ಈ ಪ್ರವೃತ್ತಿ ಮುಂದುವರೆದಿತ್ತು. ಅವರ ಕುಟುಂಬದವರು ಒಂದು ಅಮ್ಯೂಸ್ ಮೆಂಟ್ ಪಾರ್ಕಿನ ಖಾಯಂ ಸದಸ್ಯರಾಗಿದ್ದು, ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಪಾರ್ಕಿನ ಮಾಲೀಕರು ಬಿಲ್ಲಿನ ಪಾವತಿಗೆ ಒತ್ತಾಯಿಸಿದರು. ಇದರ ಪರಿಣಾಮ ಏನಾಯಿತು ಗೊತ್ತೇ? ಆ ಜಿಲ್ಲಾಧಿಕಾರಿ ಸರ್ಕಾರಿ ಭೂಮಿಯನ್ನು ಪಾರ್ಕಿನ ಮಾಲಿಕರು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಕೆ.ಎ.ಟಿ.ಯಿಂದ ತಡೆಯಾಜ್ಞೆ ಇದ್ದರೂ ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿದ್ದರು. ಪಾರ್ಕಿನ ಮಾಲೀಕರು ಜಿಲ್ಲಾಧಿಕಾರಿಯವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ 'ಉಂಡೂ ಹೋದ, ಕೊಂಡೂ ಹೋದ' ಎಂಬ ಶೀರ್ಷಿಕೆಯಲ್ಲಿ ರಂಜಿತ ಸುದಿಯಾಗಿ ಪ್ರಕಟವಾಗಿತ್ತು. ಇದರೊಂದಿಗೇ ಹಿಂದಿ ಚಲನ ಚಿತ್ರ ನೋಡಲು ಹೋದಾಗ ಥಿಯೇಟರ್ ಮಾಲಿಕ ಹಣ ಕೇಳಿದ್ದಕ್ಕಾಗಿ ಅವರಿಗೆ ನೋಟೀಸು ಕೊಟ್ಟದ್ದು ಮತ್ತು ಯಾವುದೇ ವಾಣಿಜ್ಯ ಮಳಿಗೆಗೆ ಹೋಗಿ ಖರೀದಿ ಮಾಡಿದಾಗ ಹಣ ಕೊಡದೆ ಬರುತ್ತಿದ್ದುದರ ಬಗ್ಗೆಯೂ ಪ್ರಕಟವಾಗಿತ್ತು. (ವಿವರಕ್ಕಾಗಿ ೨೯-೦೬-೨೦೧೧ರ ವಿಜಯ ಕರ್ನಾಟಕ ಪತ್ರಿಕೆ ನೋಡಬಹುದು.) ಈಗ ಈ ಅಧಿಕಾರಿ ರಾಜ್ಯಮಟ್ಟದ ಅಧಿಕಾರಿಯಾಗಿದ್ದಾರೆ. ಇಂತಹವರು ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವರೇ? ಅಧಿಕಾರ ಮದದಿಂದ ಮನಸೋ ಇಚ್ಛೆ ಆಡಳಿತ ನಡೆಸಿದ ಐತಿಹಾಸಿಕ ಪಕ್ಷವನ್ನು ಈಚೆಗೆ ನೆಲಕಚ್ಚಿಸಿದ ಜನತೆ ಇಂತಹ ಅಧಿಕಾರಿಗಳಿಗೂ ಪಾಠ ಕಲಿಸಬೇಕಿದೆ.      
     ಮದಸೊಕ್ಕಿ ಮೆರೆದವರು ಒಮ್ಮೆ ತಮ್ಮ ಮದಕ್ಕೆ ಕಾರಣವಾದ ಸಂಗತಿಯಿಂದ ವಂಚಿತರಾದರೆ ಅವರ ಸ್ಥಿತಿ ಅಧೋಗತಿ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಹ ಸ್ಥಿತಿ ಅವರದಾಗುತ್ತದೆ. ಕೆಲವು ಬರಹಗಾರರಲ್ಲೂ ಈ ಮದ ತಾವೇ ತಿಳಿದವರು, ಇತರರಿಗಿಂತ ಮೇಲಿನವರು, ತಮ್ಮ ಮಾತನ್ನು ಇತರ ಎಲ್ಲರೂ ಗೌರವಿಸಬೇಕು ಎಂದು ಅಪೇಕ್ಷಿಸುವಂತೆ ಮಾಡುತ್ತದೆ. ತುಂಬಿದ ಕೊಡ ತುಳುಕದು ಎಂಬಂತಿರುವ ಸಾಹಿತಿಗಳು ಎಲ್ಲರ ಗೌರವಕ್ಕೆ ಭಾಜನರಾಗುತ್ತಾರೆ. ವಿಪರ್ಯಾಸವೆಂದರೆ ಉತ್ತಮ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರಶಸ್ತಿಗಳು ಇತ್ತೀಚೆಗೆ ಲಾಬಿ ಮಾಡುವವರಿಗೆ ಲಭಿಸುವಂತಾಗಿ ಪ್ರಶಸ್ತಿಯ ಮೌಲ್ಯವೇ ನಶಿಸುತ್ತಿದೆಯೇನೋ ಎಂದು ಅನ್ನಿಸುತ್ತದೆ. ಸಾಹಿತಿಯ ರಾಜಕೀಯ ಒಲವು, ನಿಲುವುಗಳನ್ನು ಅವಲಂಬಿಸಿ ಸಹ ಪ್ರಶಸ್ತಿ ನಿರ್ಧರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇರಲಿ ಬಿಡಿ, ಒಟ್ಟಿನಲ್ಲಿ ಹೇಳಬೇಕೆಂದರೆ ಮದದಿಂದ ಸೊಕ್ಕಿ ನಡೆಯುವವರು ಮೇಲರಿಮೆಯಿಂದ ನರಳುತ್ತಿರುತ್ತಾರೆ. ಪ್ರತಿಭೆ ಅನ್ನುವುದು ದೇವರ ಕೊಡುಗೆ. ಗೌರವ ಜನರು ಕೊಡುವುದು. ಗೌರವಿಸಿದರೆ  ಜನರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ಮದಭರಿತರು ತಮಗೆ ತಾವೇ ಕೊಟ್ಟುಕೊಳ್ಳುವುದು! ಒಣಪ್ರತಿಷ್ಠೆಯಿಂದ ಆಡಿದ ಅಪ್ರಬುದ್ಧ ಮಾತುಗಳಿಂದಾಗಿ ಹಿರಿಯ ಸಾಹಿತಿಯೊಬ್ಬರು ಅವಮಾನ ಮತ್ತು ಮಾತುಗಳ ಕೂರಂಬುಗಳ ಮಹಾಪೂರವನ್ನೇ ಎದುರಿಸಬೇಕಾಗಿ ಬಂದದ್ದನ್ನು ಕಂಡಿದ್ದೇವಲ್ಲವೇ? ಮದ ಮನುಷ್ಯನನ್ನು ಹಾಳು ಮಾಡುತ್ತದೆ. ಸೌಜನ್ಯದ ನಡವಳಿಕೆಗಳು ಗೌರವ ತರುತ್ತವೆ. 
     'ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದರಂತೆ' ಎಂಬಂತೆ ಮದ ತಾವೇ ಇಂದ್ರ, ಚಂದ್ರ, ದೇವೇಂದ್ರ ಎಂಬಂತೆ ಮನುಷ್ಯರಲ್ಲಿ ಭ್ರಮೆ ಮೂಡಿಸುತ್ತದೆ. ಜಂಭದಲ್ಲಿ ಎರಡು ವಿಧ ಇರುತ್ತದೆ- ಕೆಟ್ಟದ್ದು ಮತ್ತು ಒಳ್ಳೆಯದು. ಒಳ್ಳೆಯ ಜಂಭ ನಮ್ಮ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹದು. ಕೆಟ್ಟ ಜಂಭವೆಂದರೆ ಮೇಲರಿಮೆಯಿಂದ ಒಡಮೂಡುವ ಅಹಂಕಾರ, ಒಣ ಪ್ರತಿಷ್ಠೆಗಳು ಮತ್ತು ಇತರರ ಕುರಿತ ಅಸಹನೆ - ಇದೇ ಮದ. ತಮ್ಮನ್ನು ಬಿಟ್ಟರಿಲ್ಲ ಎಂಬಂತೆ ಆಡುತ್ತಿದ್ದ ಚಕ್ರವರ್ತಿಗಳು, ಸಾಮ್ರಾಟರು, ಬಾದಶಹರು, ರಾಜ-ಮಹಾರಾಜರು ಇಂದು ಎಲ್ಲಿದ್ದಾರೆ? ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನರ ನೆನಪೂ ನಮಗಿಲ್ಲ. ಹೀಗಿರುವಾಗ ಇರುವ ಅಲ್ಪ ಅವಧಿಯ ಜೀವನ ಮುಗಿಸಿ ಹೋಗುವ ಮುನ್ನ ಕೆಲವರಾದರೂ 'ಇಂತಹವರೊಬ್ಬರಿದ್ದರು' ಎಂದು ನೆನೆಸಿಕೊಳ್ಳುವಂತೆ ಬಾಳುವುದು ಶ್ರೇಷ್ಠ. ಆದರೆ, ವಿಕಟನರ್ತನಗೈಯುವ ಮದ ಇದಕ್ಕೆ ಅವಕಾಶ ಕೊಟ್ಟೀತೇ? 
ಬಾರರದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||
-ಕ.ವೆಂ.ನಾಗರಾಜ್.
**************
11.03.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: