ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ನವೆಂಬರ್ 12, 2017

ಸಂಕುಚಿತತೆಯ ಬೇಲಿ ಕಿತ್ತೊಗೆಯಬೇಕಿದೆ!


     "ಈಗಲೂ ನಮ್ಮ ರೀತಿ-ನೀತಿಗಳನ್ನು ಬದಲಾಯಿಸಿಕೊಳ್ಳಲು ಸಮಯವಿದೆ. ಅರ್ಥವಿಲ್ಲದ, ಸ್ವಭಾವತಃ ವಿವೇಕಯುತವಲ್ಲದ ಸಂಗತಿಗಳ ಕುರಿತು ಎಲ್ಲಾ ಹಳೆಯ ಚರ್ಚೆಗಳನ್ನು, ಹಳೆಯ ಸಂಘರ್ಷಗಳನ್ನು ಬಿಟ್ಟುಬಿಡಬೇಕು. ಹಿಂದಿನ ಆರು ಅಥವ ಏಳು ಶತಮಾನಗಳಲ್ಲಿ ಆಗಿರುವ ಕೆಳಗೆ ಜಾರುವ ಪ್ರಕ್ರಿಯೆಗಳ ಬಗ್ಗೆ, ನಾವು ಒಂದು ಲೋಟ ನೀರನ್ನು ಬಲಗೈಯಿಂದ ಕುಡಿಯಬೇಕೋ, ಎಡಗೈಯಿಂದ ಕುಡಿಯಬೇಕೋ, ನಾವು ಐದು ಸಲ ಬಾಯಿ ಮುಕ್ಕಳಿಸಬೇಕೋ, ಆರು ಸಲವೋ, ಎಂಬಂತಹ ಚರ್ಚೆಗಳ ಬಗ್ಗೆ ಹಿರಿಯರು ಹಲವಾರು ವರ್ಷಗಳವರೆಗೆ ನಡೆಸಿದ ಚರ್ಚೆಗಳ ಬಗ್ಗೆ  ಯೋಚಿಸಿ, ಇಂತಹ ಕ್ಷುಲ್ಲಕ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಂಡು ಜೀವಿಸಿದ ಮತ್ತು ಅವುಗಳ ಕುರಿತು ದರ್ಶನ ಗ್ರಂಥಗಳನ್ನು ಬರೆದಂತಹ ಜನರಿಂದ ನಾವು ಏನು ತಾನೇ ನಿರೀಕ್ಷಿಸಬಲ್ಲೆವು? ನಮ್ಮ ಧರ್ಮ ಅಡುಗೆಮನೆಯನ್ನು ಸೇರಿಕೊಳ್ಳುವ ಅಪಾಯವಿದೆ. ನಾವು ಹೆಚ್ಚಿನವರು ವೇದಾಂತಿಗಳೂ ಅಲ್ಲ, ಅತ್ತ ಪುರಾಣಿಕರೂ ಅಲ್ಲ ಅಥವ ತಾಂತ್ರಿಕರೂ ಅಲ್ಲ. ನಾವು ಕೇವಲ ಅಸ್ಪೃಷ್ಯರು. ನಮ್ಮ ಧರ್ಮ ಅಡುಗೆಮನೆಯಲ್ಲಿದೆ. ನಮ್ಮ ದೇವರೆಂದರೆ ಅಡುಗೆ ಮಾಡುವ ಪಾತ್ರೆ ಮತ್ತು ನಮ್ಮ ಧರ್ಮವೆಂದರೆ, 'ನನ್ನನ್ನು ಮುಟ್ಟಬೇಡ, ನಾನು ಪವಿತ್ರ'. ಇದು ಇನ್ನು ಒಂದು ಶತಮಾನದವರೆಗೆ ಮುಂದುವರೆದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಹುಚ್ಚಾಸ್ಪತ್ರೆಯಲ್ಲಿರಬೇಕಾಗುತ್ತದೆ. ಜೀವನದ ದೊಡ್ಡ ಸಮಸ್ಯೆಗಳ ಬಗ್ಗೆ ಗ್ರಹಿಸಲಾಗದಿರುವುದು ನಮ್ಮ ಮೆದುಳು ಬಲಹೀನವಾಗುತ್ತಿರುವ ಸ್ಪಷ್ಟ ಚಿಹ್ನೆ; ನಮ್ಮ ಮೂಲಸ್ವಭಾವ ಕಳೆದುಹೋಗುತ್ತದೆ, ಮೆದುಳು ತನ್ನೆಲ್ಲಾ ಶಕ್ತಿಯನ್ನು, ಚಟುವಟಿಕೆಗಳನ್ನು ಕಳೆದುಕೊಳ್ಳುತ್ತದೆ ಮತ್ತು ಅದು ತಾನು ಕಾಣುವ ಕೇವಲ ಅತ್ಯಂತ ಸಣ್ಣ ತಿರುವಿನ ಸುತ್ತಲೇ ಸುತ್ತುತ್ತಿರಲು ಹವಣಿಸುತ್ತದೆ."
     ಮೇಲಿನ ಮಾತುಗಳನ್ನು ಆಡಿದವರು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರು! ಅವರು ಈ ಮಾತುಗಳನ್ನು ಹೇಳಿ ಒಂದೂವರೆ ಶತಮಾನವೇ ಕಳೆದಿದೆ. ಅವರ ಮಾತು ನಿಜವಾಗುತ್ತಿದೆಯೆಂಬಂತೆ ಇಂದು ವಿಚಾರಗಳನ್ನು ಬದಿಗಿಟ್ಟು ಕುರುಡು ಆಚಾರಗಳನ್ನೇ ಪಾಲಿಸಿಕೊಂಡು ಬರುತ್ತಾ, ಅದನ್ನೇ ಇತರರ ಮೇಲೆ ಹೇರುವ ಪ್ರಯತ್ನಗಳು ಬಲವಾಗಿ ಮಾನವತ್ವ ಕಡೆಗಣಿತವಾಗುತ್ತಿದೆ ಮತ್ತು ಮೆದುಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಧರ್ಮವೇ ಬೇರೆ, ನಾವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಮತವೇ ಬೇರೆ, ನಮ್ಮ ರೀತಿಯೇ ಬೇರೆ ಇತ್ಯಾದಿ ವಾದಗಳಲ್ಲಿ ಎಲ್ಲವನ್ನೂ ಬೇರೆ ಬೇರೆ ಮಾಡುತ್ತಾ ಸಮಾಜವನ್ನು ಒಗ್ಗೂಡಿಸಬೇಕಾದ ಸಂಗತಿಗಳೇ ಸಮಾಜವನ್ನು ವಿಘಟಿಸುವ ಹಂತಕ್ಕೆ ತಂದಿವೆ. ಇಷ್ಟೇ ಆದರೆ ಪರವಾಗಿಲ್ಲ, ಎಲ್ಲರೂ ನಮ್ಮ ವಾದವನ್ನೇ ಒಪ್ಪಬೇಕು, ನಮ್ಮ ವಿಚಾರವನ್ನೇ ಅಂಗೀಕರಿಸಬೇಕು ಎನ್ನುವ ಹಟ ಎಲ್ಲಾ ಕೂಪಮಂಡೂಕ ಪ್ರಭೃತಿಗಳಿಗೂ ಇರುವುದು ಪರಿಸ್ಥಿತಿಯನ್ನು ಜಟಿಲಗೊಳಿಸುತ್ತಿದೆ. ಮತೀಯ ಹುಚ್ಚಾಟ ಭಯೋತ್ಪಾದಕತೆ, ಮಾನವ ಜೀವಗಳ ಮಾರಣಹೋಮಕ್ಕೆ ಕಾರಣವಾಗಿದೆ. ಮಾನವ ಹತ್ಯೆಯನ್ನೂ ಧರ್ಮಸಮ್ಮತ ಎಂದು ನಂಬುವವರು, ಪಾಲಿಸುವವರು ವಿಚಾರ ಮಾಡುವ ಶಕ್ತಿಯನ್ನು ಕಳೆದುಕೊಂಡ ಮಾನವರೂಪಿ ರಾಕ್ಷಸರಲ್ಲದೇ ಮತ್ತೇನೂ ಅಲ್ಲ. ವೈಚಾರಿಕತೆಯನ್ನು ಒಪ್ಪದ ಯಾವುದೇ ಧರ್ಮ ಧರ್ಮವೇ ಅಲ್ಲ, ಧರ್ಮಶಾಸ್ತ್ರಗಳು ಧರ್ಮಶಾಸ್ತ್ರಗಳೇ ಅಲ್ಲ.   
     ಭಾರತೀಯ ಸನಾತನ ಧರ್ಮ ತನ್ನಲ್ಲಿ ಅನೇಕ ವೈಚಾರಿಕ ಭೇದಗಳನ್ನು ಹೊಂದಿರುವವರಿಗೂ ಆಶ್ರಯ ನೀಡಿದೆ. ವಿವಿಧ ಮತ, ಪಂಥಗಳಿದ್ದರೂ ಅವರವರ ವಿಚಾರ, ರೀತಿ-ನೀತಿಗಳನ್ನು ಗೌರವಿಸುವ ಮನೋಭಾವವನ್ನು ಜನರಲ್ಲಿ ಬಿತ್ತಿದೆ. ದೇವರಿಲ್ಲ ಎನ್ನುವ ಚಾರ್ವಾಕರನ್ನೂ ಅದು ತನ್ನ ಮಡಿಲಿನಲ್ಲಿ ಹೊಂದಿದೆ. ಕಾಲಕ್ಕೆ ತಕ್ಕಂತೆ ಅನೇಕ ರೂಢಿಗತ ಸಂಪ್ರದಾಯಗಳೂ ಬದಲಾವಣೆ ಕಂಡಿವೆ. ಇಷ್ಟಿದ್ದೂ ಸಹ ಅನೇಕ ಸಂಪ್ರದಾಯವಾದಿಗಳು ಹಿಂದಿನ ರೀತಿ-ನೀತಿಗಳಿಗೇ ಜೋತುಬಿದ್ದು, ಅದನ್ನು ಅನುಸರಿಸದವರನ್ನು ನಿಕೃಷ್ಟವಾಗಿ ಕಾಣುವುದೂ ಇದೆ. ಇಂತಹ ಮನೋಭಾವದವರೇ ತಮ್ಮ ಧರ್ಮ, ಜಾತಿ, ಮತಗಳಿಗೆ ಕೆಟ್ಟ ಹೆಸರು ತರುವವರು ಮತ್ತು ಇದರಿಂದಾಗಿ ಇಡೀ ಸಮೂಹವನ್ನೇ ದೂಷಣೆಗೆ ಒಳಪಡಿಸುವವರು ಎಂಬ ಮಾತಿನಲ್ಲಿ ಹುರುಳಿದೆ. ಅಂತಹ ಒಂದು ಸಂಗತಿಯನ್ನು ಸಂಕ್ಷಿಪ್ತ ಮತ್ತು ಸೂಕ್ಷ್ಮವಾಗಿ ಇಲ್ಲಿ ಚರ್ಚಿಸಿದೆ.
     ಅಪೌರುಷೇಯವೆನ್ನಲಾಗುವ ವೇದಗಳು ಕೇವಲ ಮಾನವ ಮಾತ್ರರಲ್ಲ, ಸಕಲ ಚರಾಚರ ಜೀವ ಸಂಕುಲವೆಲ್ಲದರ ಹಿತ, ಸುಖ, ಶಾಂತಿ, ನೆಮ್ಮದಿ ಬಯಸುವ ಅತ್ಯುನ್ನತ ಮತ್ತು ಅತ್ಯುತ್ತಮ ಜ್ಞಾನಭಂಡಾರ. ಈ ಜ್ಞಾನ ಕೇವಲ ಕೆಲವರ ಸ್ವತ್ತಲ್ಲ ಮತ್ತು ಆಗಬಾರದು ಕೂಡಾ. ವೇದಗಳಲ್ಲಿನ ವಿಶಾಲತೆಯನ್ನು ಪೌರಾಣಿಕರು, ಸಾಂಪ್ರದಾಯಿಕರು ಸಂಕುಚಿತಗೊಳಿಸಿದ್ದಾರೆ, ಬೇಲಿ ಹಾಕಿ ಸೀಮಿತಗೊಳಿಸಿದ್ದಾರೆ ಎಂದರೆ ಅದು ಕಟುವಾದ ಸತ್ಯವೇ ಸರಿ. ಅನೇಕ ಸಂಪ್ರದಾಯಗಳು, ರೀತಿ ನೀತಿಗಳು ಪ್ರಾರಂಭಗೊಂಡ ಸಮಯದಲ್ಲಿ ಅಂದಿನ ಜೀವನ ಪದ್ಧತಿಗೆ, ರೀತಿ-ನೀತಿಗಳಿಗೆ, ಸಮಾಜದ ಹಿತಕ್ಕೆ ಪೂರಕವಾಗಿದ್ದಿರಬಹುದು. ಆದರೆ ಸಮಾಜ ಬದಲಾದಂತೆ, ಸಮಾಜದ ರೀತಿ-ನೀತಿಗಳು ಬದಲಾದಂತೆ ಸಂಪ್ರದಾಯಗಳೂ ಸೂಕ್ತವಾಗಿ ಬದಲಾಗಬೇಕಾಗುವುದು ಅಗತ್ಯ ಮತ್ತು ಅನಿವಾರ್ಯ. ಅನೇಕ ಸಂಪ್ರದಾಯಗಳು ಬದಲಾದ ರೀತಿಯಲ್ಲಿ ಆಚರಿಸಲ್ಪಡುತ್ತಿರುವುದೂ ವಾಸ್ತವ. ಆದರೂ ಕೆಲವು ಸಂಗತಿಗಳು, ಸಂಪ್ರದಾಯಗಳು ಇನ್ನೂ ಬದಲಾಗದ ಭದ್ರ ಚೌಕಟ್ಟಿನ ಒಳಗೇ ಇರುವುದೂ ವಾಸ್ತವವೇ. ಅಂತಹ ಒಂದು ಸಂಗತಿಯೇ ವೇದಾಭ್ಯಾಸ. ವೇದಗಳನ್ನು ಉಪನಯನವಾದವರು ಮಾತ್ರ ಅಧ್ಯಯನ ಮಾಡಬಹುದು, ಉಪನಯನಕ್ಕೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮೂರು ವರ್ಣದವರು ಮಾತ್ರ ಅರ್ಹರು, ಶೂದ್ರರು ಮತ್ತು ಸ್ತ್ರೀಯರು ವೇದಾಧ್ಯಯನ ಮಾಡುವಂತಿಲ್ಲ ಎಂಬುದು ಸಾಂಪ್ರದಾಯಿಕರ ಸಿದ್ಧಾಂತವಾಗಿದೆ. ಈ ಸಾಂಪ್ರದಾಯಿಕರ ನಿಲುವಿಗೆ ವಿರುದ್ಧವಾದ ಅಂಶಗಳು ಮತ್ತು ಸಂಗತಿಗಳು ವೇದಗಳಲ್ಲೇ, ವೇದಕಾಲದ ಸಾಕ್ಷ್ಯಗಳಿಂದಲೇ ಲಭ್ಯವಿವೆ. ಇಂದಿನ ವಸ್ತುಸ್ಥಿತಿಯೇ ಭಿನ್ನವಾಗಿದೆ. ಇಂದಿನ ಪರಿಸ್ಥಿತಿಗೆ ತಕ್ಕಂತೆ ನಮ್ಮ ನಿಲುವನ್ನು ವೇದಗಳು ಸಾರುವ ವಿಶಾಲತೆಯ ಹಿನ್ನೆಲೆಯಲ್ಲಿ ಮಾರ್ಪಡಿಸಿಕೊಳ್ಳದಿದ್ದರೆ ಅಮೂಲ್ಯವಾದ ಜ್ಞಾನಭಂಡಾರವನ್ನು ನಾವು ಕಳೆದುಕೊಳ್ಳುವ ದಿನಗಳು ದೂರವಿಲ್ಲ.
     ಇಂದಿನ ವಸ್ತುಸ್ಥಿತಿಯೆಂದರೆ ಮಾಡುವ ವೃತ್ತಿ ಅನುಸರಿಸಿ ನಿರ್ಧರಿತವಾಗುವ ವರ್ಣಾಶ್ರಮ ಪದ್ಧತಿ ನಶಿಸಿಹೋಗಿ ಯಾವುದೋ ಕಾಲವಾಗಿದೆ. ಈಗ ಇರುವುದು ಮತ್ತು ಜೀವಂತವಾಗಿ ಉಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಕಟಿಬದ್ಧರಾಗಿ ನಿಂತಿರುವುದು ಹುಟ್ಟಿನ ಆಧಾರದ ಜಾತಿಪದ್ಧತಿ ಮಾತ್ರ. ಈಗ ಇರುವುದು ಹುಟ್ಟಿನ ಬ್ರಾಹ್ಮಣರು, ಹುಟ್ಟಿನ ವೈಶ್ಯರು ಮತ್ತು ಹುಟ್ಟಿನ ಆಧಾರದ ಅಸಂಖ್ಯ ಜಾತಿಗಳು! ಈಗ ವರ್ಣಾಶ್ರಮದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರಿಲ್ಲ. ಆದ್ದರಿಂದ ಉಪನಯನ, ವೇದಾಧ್ಯಯನಗಳ ಆಧಾರಸ್ತಂಭಗಳೇ ಮೂಲರೀತಿಯಲ್ಲಿ ಅಸ್ತಿತ್ವದಲ್ಲಿ ಇಲ್ಲ. ಗುರುಕುಲ ಪದ್ಧತಿ ಅಳಿದು ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿ ಬಂದ ಮೇಲಂತೂ ಉಪನಯನದ ಮಹತ್ವವೂ ಅಳಿದುಹೋಗಿದೆ. ವೇದಾಧ್ಯಯನ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ಕೆಲವು ಪೂಜಾ ಮಂತ್ರಗಳು, ಹೋಮ-ಹವನದ ಮಂತ್ರಗಳು, ಇತ್ಯಾದಿಗಳನ್ನು ಕಲಿಸುವವರು ಮತ್ತು ಕಲಿಯುವವರು ಕಂಡುಬರುತ್ತಾರೆ. ಬ್ರಾಹ್ಮಣ್ಯದ ನಿಜವಾದ ಅರ್ಥವನ್ನು ತಿಳಿದು ಅದರಂತೆ ಇರುವ ಎಷ್ಟು ಬ್ರಾಹ್ಮಣರಿದ್ದಾರೆ? ವೇದಗಳನ್ನು ಅರ್ಥಸಹಿತವಾಗಿ ಅಧ್ಯಯನ ಮಾಡಿ ಇನ್ನೊಬ್ಬರಿಗೆ ಹೇಳಿಕೊಡಬಲ್ಲ ಸಾಮರ್ಥ್ಯ ಇರುವವರ ಸಂಖ್ಯೆ ಎಷ್ಟು? ಕಲಿಯಲು ಆಸಕ್ತಿ ಮತ್ತು ಸಮಯ ಇರುವವರೆಷ್ಟು? ಸಾಂಪ್ರದಾಯಿಕರು ಹೇಳುವಂತೆ ಸ್ವತಃ ಉಪನಯನ ಮಾಡಿಕೊಂಡು, ಸ್ವಸಾಮರ್ಥ್ಯದಿಂದ ವೇದಾಧ್ಯಯನ ಮಾಡುವವರದು ಲೌಕಿಕ ಸಾಮರ್ಥ್ಯವಾಗುತ್ತದೆ, ಶಾಸ್ತ್ರೀಯ ಸಾಮರ್ಥ್ಯವಾಗುವುದಿಲ್ಲವೆಂದರೂ, ಇಂದು ಲೌಕಿಕವಾಗಿಯಾದರೂ ವೇದದ ಜ್ಞಾನಭಂಡಾರದ ಪ್ರಯೋಜನವನ್ನು ಪಡೆಯುವುದು ಅಮೂಲ್ಯ ಜ್ಞಾನಸಂಪತ್ತಿನ ಉಳಿಕೆಗೆ ಅತ್ಯಗತ್ಯವಾಗಿದೆ. ಕಲಿತಿರುವ ಜ್ಞಾನವನ್ನು ಆಸಕ್ತರಿಗೆ ಕಲಿಸದವರು ಕಳ್ಳರೇ ಸರಿ ಎಂಬುದು ವೇದ ಸಾರುವ ನೀತಿಯೇ ಆಗಿದೆ. ಸಾಂಪ್ರದಾಯಿಕರು, ಮಠ-ಮಂದಿರಗಳ ಪೀಠಾಧಿಪತಿಗಳು ಲೋಕಹಿತದ ದೃಷ್ಟಿಯಿಂದ ವೇದಗಳು ಸಾರುವ ವಿಶಾಲ ಮನೋಭಾವವನ್ನು ಮೈಗೂಡಿಸಿಕೊಂಡು, ಪಟ್ಟಭದ್ರರು ನಿರ್ಮಿಸಿರುವ ಬೇಲಿಗಳನ್ನು ಕಿತ್ತೊಗೆದು, ವೇದಾಧ್ಯಯನ ಮಾಡಲಿಚ್ಛಿಸುವ ಎಲ್ಲರಿಗೂ ಉಪನಯನ ಸಂಸ್ಕಾರ ನೀಡುವ, ಲೌಕಿಕವಾಗಿಯಾಗಲೀ, ಶಾಸ್ತ್ರೀಯವಾಗಿಯಾಗಲೀ ವೇದಾಧ್ಯಯನಕ್ಕೆ ಮುಕ್ತ ಅವಕಾಶ ನೀಡುವ ಮನಸ್ಸು ಮಾಡಿದರೆ ಅದೊಂದು ಲೋಕಕಲ್ಯಾಣಕ್ಕೆ ಬಹು ದೊಡ್ಡ ಕಾಣಿಕೆಯಾಗುತ್ತದೆ. 
-ಕ.ವೆಂ.ನಾಗರಾಜ್.

ಶುಕ್ರವಾರ, ನವೆಂಬರ್ 10, 2017

ಅಸೂಯೆಗೆ ಮದ್ದೇನು?


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ |
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ ||
     ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಕಾರಿಯಾಗಿರುವ ಜಠರಾಗ್ನಿಯನ್ನು ವೈಶ್ವಾನರ ಎನ್ನುತ್ತಾರೆ. ವೈಶ್ವಾನರ ತಿಂದ ಆಹಾರವನ್ನು ಜೀರ್ಣಿಸಿದರೆ, ಅಸೂಯೆಯಿಂದ ನರಳುವವನು ಕಂಡ ಕಂಡವರನ್ನೆಲ್ಲಾ ಸುಡುತ್ತಾನೆ. ಮಂಕರೊಡನೆ ಮೌನವಾಗಿರುವುದಾದರೂ ಒಳ್ಳೆಯದು, ಆದರೆ ಮತ್ಸರಿಸುವವರೊಂದಿಗೆ ಸ್ನೇಹವೂ ಅಪಾಯಕಾರಿಯೇ ಸರಿ. ಈ ಅಸೂಯೆ ಒಂದು ಋಣಾತ್ಮಕ ಗುಣ. ಮನುಷ್ಯನನ್ನು ಕುಬ್ಜನನ್ನಾಗಿಸುವ ಈ ಗುಣ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ, ಪ್ರಮಾಣ ಹೆಚ್ಚು ಕಡಿಮೆಯಿರಬಹುದು. ಯಾರಾದರೂ ತಾನು ಪಡೆದುಕೊಳ್ಳಬಯಸುವ ಗುಣ, ಸಾಧನೆ, ಗೌರವ, ವಸ್ತು, ಇತ್ಯಾದಿಗಳನ್ನು  ತನಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರೆ ಮತ್ತು ತನಗೆ ಅದು ಸಾಧ್ಯವಾಗದಿದ್ದ ಸಂದರ್ಭಗಳಲಿ ಅಸೂಯೆ ತಲೆ ತೂರಿಸುತ್ತದೆ ಮತ್ತು ಆ ರೀತಿ ಹೊಂದಿದಾತ ಅವುಗಳನ್ನು ಕಳೆದುಕೊಳ್ಳಬೇಕೆಂದು ಬಯಸುತ್ತದೆ ಮತ್ತು ಅವನ ನಾಶವನ್ನು ಬಯಸುತ್ತದೆ. ತನಗೆ ಸಾಧ್ಯವಾಗದಿದ್ದುದು ಅವನಿಗೂ ಸಾಧ್ಯವಾಗಬಾರದು ಎಂದು ಕುತ್ಸಿತ ಕ್ರಿಯೆಗಳನ್ನು ಮಾಡಲು, ಅಡ್ಡಿ ಮಾಡಲು ಪ್ರೇರಿಸುತ್ತದೆ. ಸಾಧಕರು ಮಾತ್ರ ಇಂತಹ ಭಾವನೆಗಳಿಂದ ದೂರವಿದ್ದು ಸತತ ಪ್ರಯತ್ನ, ಶ್ರಮಗಳಿಂದ ತಮ್ಮ ಸಾಧನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ, ಜೀವನದ ಎಲ್ಲಾ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ಅಸೂಯಾಪರರು ಸಾಮಾನ್ಯವಾಗಿ ಕಂಡುಬರುತ್ತಾರೆ.
     ಅಸಂತೋಷದ ಬಲಿಷ್ಠವಾದ ಕಾರಣವೇ ಅಸೂಯೆ. ಅಸೂಯೆಯ ಕಾರಣದಿಂದ ಅಸಂತುಷ್ಟನಾಗಿರುವ ವ್ಯಕ್ತಿ ಇತರರೂ ಅಸಂತೋಷದಿಂದ ನರಳಬೇಕು, ಅವರಿಗೆ ಕೆಡುಕಾಗಬೇಕು ಎಂದು ಹಂಬಲಿಸುತ್ತಾನೆ. ಮನೋವಿಶ್ಲೇಷಕರು ಇತ್ತೀಚೆಗೆ ಎರಡು ವಿಧದ ಅಸೂಯೆಗಳಿದ್ದು, ಒಂದು ದುರುದ್ದೇಶದ ಮತ್ತು ಇನ್ನೊಂದು ಪ್ರೇರಕ ಅಸೂಯೆಯೆಂದು ಗುರುತಿಸಿದ್ದಾರೆ. ದುರುದ್ದೇಶದ ಅಸೂಯೆ ಹೊಂದಿರುವವರು ಯಾರ ಬಗ್ಗೆ ಅಸೂಯೆ ಹೊಂದಿದ್ದಾರೋ ಅವರ ಪತನವನ್ನು ಬಯಸುತ್ತಾರೆ ಮತ್ತು ಅವರ ನೋವು, ದುಃಖಗಳನ್ನು ಸಂಭ್ರಮಿಸುವ ಮನೋಭಾವದವರಾಗಿರುತ್ತಾರೆ. ಇನ್ನೊಂದು ರೀತಿಯವರಿಗೆ ತಾವೂ ಅವರಂತೆಯೇ ಆಗಬೇಕೆಂದು ಪ್ರಯತ್ನಿಸಲು ಅಸೂಯೆ ಪ್ರೇರಕವಾಗುತ್ತದೆ.
     ತಾನು ಹೊಂದಿಲ್ಲದ ಐಷಾರಾಮಿ ಕಾರನ್ನು ಪಕ್ಕದ ಮನೆಯವನು ಹೊಂದಿರುವುದು, ತಾನು ಬಯಸಿದ ಹುದ್ದೆಯಲ್ಲಿ ಇನ್ನೊಬ್ಬರು ಇರುವುದು, ತನಗಿಲ್ಲದ ಪ್ರಾಧಾನ್ಯತೆ ಇನ್ನೊಬ್ಬರಿಗೆ ಸಿಗುವುದು, ಯಾವುದೋ ಸಂಘ-ಸಂಸ್ಥೆಯ ಪದಾಧಿಕಾರ ತನಗೆ ಸಿಗದೆ ಇನ್ನೊಬ್ಬರ ಪಾಲಾಗುವುದು ಅಸೂಯೆ ಹುಟ್ಟಲು ಕಾರಣಗಳಾಗುತ್ತವೆ. ನಾನು ಸರ್ಕಾರಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ನನಗೆ ವರ್ಗಾವಣೆ ಆಗಿದ್ದ ಸ್ಥಳಕ್ಕೆ ಪ್ರಯತ್ನಿಸಿದ್ದ ನನ್ನ ಮಿತ್ರ ಅಧಿಕಾರಿ ನನ್ನ ಮೇಲೆ ವಿನಾಕಾರಣ ದ್ವೇಷ ಸಾಧಿಸತೊಡಗಿದ್ದುದು ನನಗೆ ಆಶ್ಚರ್ಯವಾಗಿತ್ತು. ನಾನು ಬಯಸಿ ಆ ಸ್ಥಳಕ್ಕೆ ಬಂದಿಲ್ಲವೆಂದು, ಬೇಕಿದ್ದರೆ ಇದೇ ಹುದ್ದೆಗೆ ಪ್ರಯತ್ನಿಸಿ ಹಾಕಿಸಿಕೊಳ್ಳಲು ಆತನಿಗೆ ಹೇಳಿದುದನ್ನೂ ಆತ ತಪ್ಪಾಗಿಯೇ ಭಾವಿಸಿದ್ದ. ಅಸೂಯೆ ಬುದ್ಧಿಗೆ ಮಂಕು ಕವಿಸುತ್ತದೆ ಮತ್ತು ಮಿತ್ರತ್ವವನ್ನೂ ನಾಶಪಡಿಸುತ್ತದೆ. ಈ ಅಸೂಯೆಯನ್ನು ನಿಯಂತ್ರಿಸುವ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡ್ತಿ ಸೂಕ್ತ ಪರಿಹಾರಗಳನ್ನು ಮನೋವಿಜ್ಞಾನಿಗಳು ಸೂಚಿಸುವುದು ಅಗತ್ಯವಾಗಿದೆ. ಇಂತಹ ವಿಷಯದಲ್ಲಿ ಯಾರೂ ಆಪ್ತ ಸಮಾಲೋಚಕರ ಸಲಹೆ ಪಡೆಯುವುದಕ್ಕೆ ಹೋಗುವುದಿಲ್ಲ. ಅಸೂಯಾಪರರು ಇತರರು ತಮ್ಮ ಬಗ್ಗೆ ಅಸೂಯೆ ಹೊಂದಿದ್ದಾರೆಂದು ಭಾವಿಸುತ್ತಾರೆ. ತಾವು ಅವರಿಗಿಂತ ಮೇಲಿನವನು ಎಂಬ ಭಾವನೆ ಹೊಂದಿದ ಅಸೂಯಾಪರ ತನ್ನ ಪ್ರತಿಸ್ಪರ್ಧಿಯ ಬಲವನ್ನು ಕುಗ್ಗಿಸಲು ಕೀಳು ಪ್ರಯತ್ನವನ್ನೂ ಮಾಡಲು ಹೇಸುವುದಿಲ್ಲ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ |
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ ||
     'ಇತರರ ಒಳ್ಳೆಯ ಅಭಿವೃದ್ಧಿಯನ್ನು ಕಂಡು ಅನುಭವವಾಗುವ ನೋವೇ ಅಸೂಯೆ' ಎಂದು ಅರಿಸ್ಟಾಟಲ್ ಹೇಳಿರುವುದು ಅರ್ಥವತ್ತಾಗಿದೆ. ಇನ್ನೊಬ್ಬರಿಗಿಂತ ಹೆಚ್ಚು ಅಥವ ಮೇಲು ಅನ್ನಿಸುವ ಎಷ್ಟೋ ಸಂಗತಿಗಳು ಇದ್ದರೂ, ಯಾವುದೋ ಒಂದರಲ್ಲಿ ಇನ್ನೊಬ್ಬರು ತನಗಿಂತ ಮೇಲಾಗಿದ್ದರೆ ಅದು ಅಸಹನೆಗೆ ಕಾರಣವಾಗಿಬಿಡುತ್ತದೆ. ಇದು ಇರುವ ಸಂತೋಷವನ್ನೂ ಕಿತ್ತುಕೊಳ್ಳುತ್ತದೆ. ಮನುಷ್ಯನ ವೈರಿಯಾದ ಮತ್ಸರ ಯಾವುದೇ ರೀತಿಯ ಒಳಿತನ್ನು ಮಾಡದ, ಕೆಡುಕನ್ನೇ ತರುವ ಋಣಾತ್ಮಕ ಗುಣವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ವೈರಿಯ ಎರಡು ಕಣ್ಣೂ ಹೋಗಲಿ ಎಂದು ಬಯಸುವುದೇ ಈ ಮತ್ಸರ. ಇದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಅಸೂಯೆ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ?
     ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪) ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಸೂಯೆ ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
-ಕ.ವೆಂ.ನಾಗರಾಜ್.

ಬುಧವಾರ, ನವೆಂಬರ್ 8, 2017

ಹಠಮಾರಿ ಮನಸ್ಸು


     ಒಬ್ಬ ಸಾಧಕನಿಗೆ ಅಷ್ಟೈಶ್ವರ್ಯ ಸಿದ್ಧಿ ಮಂತ್ರ ಗೊತ್ತಿತ್ತಂತೆ. ಅದನ್ನು ಆತ ಯಾರಿಗೂ ಹೇಳಿಕೊಡುತ್ತಿರಲಿಲ್ಲವಂತೆ. ಒಬ್ಬ ವ್ಯಕ್ತಿಗೆ ಆ ಸಾಧಕನನ್ನು ಹೇಗಾದರೂ ಒಲಿಸಿ ಮಂತ್ರವನ್ನು ಕಲಿಯಬೇಕೆಂದು ಮನಸ್ಸಾಗಿ ಆತನ ಹತ್ತಿರ ಹೋಗಿ ತನ್ನ ಇಷ್ಟವನ್ನು ಬಿನ್ನವಿಸಿಕೊಂಡು ತನಗೆ ಮಂತ್ರೋಪದೇಶ ಮಾಡುವಂತೆ ಗೋಗರೆದ. ತನಗೆ ಅಂತಹ ಯಾವುದೆ ಮಂತ್ರ ಗೊತ್ತಿಲ್ಲವೆಂದು ಸಾಧಕ ಹೇಳಿದರೂ ನಂಬದ ವ್ಯಕ್ತಿ ಪಟ್ಟು ಬಿಡದೆ ಅವನ ಸೇವೆ ಮಾಡುತ್ತಲೇ ಇದ್ದು ಸಾಧಕನನ್ನು ಪೀಡಿಸುತ್ತಲೇ ಇದ್ದ. ಅವನ ಕಾಟ ತಡೆಯಲಾರದೆ ಒಂದು ದಿನ ಆ ಸಾಧಕ ಒಂದು ಚೀಟಿಯಲ್ಲಿ ಏನನ್ನೋ ಬರೆದು ವ್ಯಕ್ತಿಯ ಕೈಗೆ ಮಡಿಸಿ ಕೊಟ್ಟು ಹೇಳಿದನಂತೆ, "ಈ ಚೀಟಿಯನ್ನು ಬಿಡಿಸಿ ನೋಡುವಾಗ ಯಾವುದೇ ಕಾರಣಕ್ಕೂ ನಿನಗೆ ಕೋತಿಯ ನೆನಪು ಬರಬಾರದು. ಹಾಗಾದರೆ ಮಾತ್ರ ನಿನಗೆ ಮಂತ್ರ ಸಿದ್ಧಿಯಾಗುತ್ತದೆ". ಆ ವ್ಯಕ್ತಿ, "ಹಾಗೆಯೇ ಆಗಲಿ. ಧನ್ಯವಾದಗಳು, ಗುರೂಜಿ. ನಾನು ಕೋತಿಯನ್ನು ಏಕೆ ನೆನೆಸಿಕೊಳ್ಳಲಿ? ಯಾವತ್ತೂ ನಾನು ಕೋತಿಯ ಬಗ್ಗೆ ಚಿಂತಿಸಿಯೇ ಇಲ್ಲ" ಎನ್ನುತ್ತಾ ಸಂಭ್ರಮದಿಂದ ಮನೆಗೆ ಹೊರಟ. ಆಗಲೇ ಶುರುವಾಯಿತು ನೋಡಿ, ಕೋತಿಯ ಕಾಟ! ಅವನು ಕೋತಿಯನ್ನು ಜ್ಞಾಪಿಸಿಕೊಳ್ಳಬಾರದು ಎಂದು ಅಂದುಕೊಂಡಷ್ಟೂ ಬರೀ ಕೋತಿಗಳೇ ಅವನ ಕಣ್ಣಮುಂದೆ ಕುಣಿಯತೊಡಗಿದ್ದವು. ಮನೆಗೆ ಹೋಗಿ ಚೀಟಿ ತೆಗೆಯಲು ಜೇಬಿಗೆ ಕೈಹಾಕುತ್ತಿದ್ದಾಗಲೇ ಅವನಿಗೆ ಕೋತಿಯ ನೆನಪಾಗುತ್ತಿತ್ತು. ಎಷ್ಟು ಸಲ ಪ್ರಯತ್ನಿಸಿದರೂ ಹಾಗೆಯೇ ಅಗುತ್ತಿತ್ತು. ಕೋತಿಯ ನೆನಪಿನಿಂದ ಅವನಿಗೆ ಬಿಡುಗಡೆಯೇ ಸಿಗಲಿಲ್ಲ. ಒಂದು ತಿಂಗಳು, ಎರಡು ತಿಂಗಳು, ವರ್ಷ ಕಳೆದರೂ ಅವನಿಗೆ ಚೀಟಿ ತೆಗೆಯಲು ಸಾಧ್ಯವೇ ಆಗಲಿಲ್ಲ. ಅವನಿಗೆ ಹತಾಶೆ, ಸಿಟ್ಟು ಹೆಚ್ಚಾಗಿ ಮತ್ತೆ ಸಾಧಕನಲ್ಲಿಗೆ ಬಂದು ಚೀಟಿಯನ್ನು ಅವರ ಮುಂದೆ ಎಸೆದು ಹೇಳಿದ್ದ, "ನೀವು ಕೋತಿಯ ಬಗ್ಗೆ ಹೇಳದೆ ಚೀಟಿ ಕೊಟ್ಟಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು? ನನಗೆ ಮೋಸ ಮಾಡಿದಿರಿ". ಇಲ್ಲಿ ಮೋಸ ಮಾಡಿದ್ದು ಯಾರು? ನಿಮ್ಮ ಅನಿಸಿಕೆ ಸರಿ, ಯಾವುದನ್ನು ಮಾಡಬಾರದು ಎನ್ನುತ್ತಾರೋ ಅದರ ಬಗ್ಗೆಯೇ ಯೋಚಿಸುವ ಮನಸ್ಸು ನಿಜವಾದ ಮೋಸಗಾರ!
     ನಮ್ಮ ಎಲ್ಲಾ ಸಮಸ್ಯೆಗಳು, ಕಷ್ಟಗಳ ಮೂಲವೇ ಚಂಡಿ ಹಿಡಿಯುವ ಮನಸ್ಸಿನದಾಗಿದೆ. ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ ಹೋಗುವುದು, ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುತ್ತದೆ. ಬೇಗ ಏಳಬೇಕೆಂದು ಅಲಾರಂ ಇಟ್ಟುಕೊಳ್ಳುತ್ತೇವೆ. ಅಲಾರಮ್ ಹೊಡೆದಾಗ ಅದನ್ನು ನಿಲ್ಲಿಸಿ, ಇನ್ನೊಂದೈದು ನಿಮಿಷ ಎಂದುಕೊಂಡು ಮಲಗಿಕೊಂಡರೆ ಮತ್ತೆ ಎಚ್ಚರವಾಗುವುದು ದಿನಾ ಏಳುವ ಸಮಯಕ್ಕೇ! ಬೆಳಗಿನ ಜಾವದ ಐದು ನಿಮಿಷ ಎಂದರೆ ಕನಿಷ್ಠ ಒಂದು ಗಂಟೆ ಆಗಿರುತ್ತದೆ! ಕುಡಿಯುವುದು ಕೆಟ್ಟದ್ದು ಎಂದು ಕುಡುಕರಿಗೆ ಗೊತ್ತಿರುವುದಿಲ್ಲವೇ? ಸಿಗರೇಟು, ತಂಬಾಕು ಸೇವನೆ ಕ್ಯಾನ್ಸರ್ ತರುತ್ತದೆ ಎಂದು ಸೇದುವವರಿಗೆ ತಿಳಿದಿರುವುದಿಲ್ಲವೇ? ಆದರೂ ಅವರುಗಳು ಕುಡಿಯತ್ತಾರೆ, ಸಿಗರೇಟು ಸೇದುತ್ತಾರೆ. ಅವರುಗಳಿಗೆ ತಮಗೆ ಕೆಟ್ಟದಾಗಬೇಕು ಎಂದಿರುತ್ತದೆಯೇ? ಹಾಗೆ ಮಾಡಬಾರದು ಎಂದು ಹೇಳುವ ಮನಸ್ಸೇ ಹಾಗೆ ಮಾಡು ಎಂದು ಉತ್ತೇಜಿಸುತ್ತದೆ.
     ರಾವಣ ವಿದ್ವಾಂಸನಾಗಿದ್ದ, ಸರಿ, ತಪ್ಪುಗಳ ವಿವೇಚನೆ ಮಾಡುವ ಶಕ್ತಿ ಇತ್ತು. ಆದರೂ ಆತ ಸೀತೆಯನ್ನು ಅಪಹರಿಸಿದ. ಪರಸ್ತ್ರೀ ವ್ಯಾಮೋಹ ಸರಿಯಲ್ಲವೆಂದು ತಿಳಿದಿದ್ದರೂ ಆತ ತನ್ನ ಸಮಾಧಾನಕ್ಕಾಗಿ ಸೀತೆಯೇ ತಾನಾಗಿ ತನ್ನನ್ನು ಒಲಿಯುವವರೆಗೆ ಕಾಯಲು ನಿರ್ಧರಿಸಿದ್ದ. ವಿಭೀಷಣ ಮುಂತಾದವರ ಹಿತನುಡಿಗಳನ್ನು ಕೇಳಲು ಅವನು ತಯಾರಿರಲಿಲ್ಲ ಅನ್ನುವುದಕ್ಕಿಂತ ಹಠ ಹಿಡಿದಿದ್ದ ಅವನ ಮನಸ್ಸು ಅವನಿಗೆ ಅವಕಾಶ ಕೊಡಲಿಲ್ಲ. 'ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ| ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ:||' (ವಾ.ರಾ.ಯು.ಕಾಂ.೧೧೪.೧೮) ರಾಮನಿಂದ ರಾವಣನ ವಧೆಯಾದಾಗ ಆತನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ರೋದಿಸಿದ ಮಂಡೋದರಿ ಹೇಳಿದ್ದ ಮಾತುಗಳಿವು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು'. ರಾವಣನ ಚಂಡಿ ಮನಸ್ಸು ಬುದ್ಧಿಯ ಮಾತುಗಳನ್ನು ಕೇಳದಿದ್ದರಿಂದ ಅವನ ಅಂತ್ಯವಾಗಿತ್ತು! ದುರ್ಯೋಧನನೂ ಹೀಗೆಯೇ ಹಠ ಮಾಡಿದ್ದರಿಂದ ಮತ್ತು ಗುರು-ಹಿರಿಯರ ಮಾತುಗಳನ್ನು ಧಿಕ್ಕರಿಸಿ ತನ್ನ ಮನಸ್ಸಿನ ಹಠದಂತೆಯೇ ನಡೆದುಕೊಂಡದ್ದರಿಂದ ಅವನ ಮತ್ತು ಅವನನ್ನು ಅನುಸರಿಸಿದವರ ಸರ್ವನಾಶಕ್ಕೆ ಕಾರಣವಾಯಿತು.
     ಗಾಂಧೀಜಿಯವರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿರುವ ಕೆಲವು ಸಂಗತಿಗಳು, ವಿಶೇಷವಾಗಿ ಕಾಮ ಮತ್ತು ಬ್ರಹ್ಮಚರ್ಯದ ವಿಚಾರಗಳು ಚಂಡಿ ಮನಸ್ಸಿನ ಪ್ರತಾಪವೇ ಎಂದೆನಿಸುತ್ತದೆ. ಗಾಂಧಿಯವರ ತಂದೆ ಮರಣಶಯ್ಯೆಯಲ್ಲಿದ್ದಾಗಲೂ ಗಾಂಧಿ ತಮ್ಮ ಪತ್ನಿಯೊಂದಿಗೆ ಮಲಗುತ್ತಿದ್ದರಂತೆ. ಇಂತಹ ಒಂದು ಸಂದರ್ಭದಲ್ಲೇ ಅವರ ತಂದೆ ಮೃತರಾದದ್ದು ಅವರಲ್ಲಿ ತಪ್ಪಿತಸ್ಥ ಮನೋಭಾವವನ್ನು ಉಂಟುಮಾಡಿತ್ತಂತೆ. ಮುಂದಿನ ದಿನಗಳಲ್ಲಿ ಅವರು ಬ್ರಹ್ಮಚರ್ಯಪಾಲನೆಗೆ ಒತ್ತು ಕೊಟ್ಟು ಮಾತನಾಡುತ್ತಿದ್ದರಂತೆ. ತಮ್ಮ ಕಾಮನಿಗ್ರಹ ಶಕ್ತಿಯನ್ನು ಪರೀಕ್ಷಿಸಲು ನಗ್ನ ಮಹಿಳೆಯರ ಪಕ್ಕದಲ್ಲಿ ನಗ್ನರಾಗಿ ಮಲಗುತ್ತಿದ್ದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಅವರೇನೋ ತಮ್ಮ ಶಕ್ತಿಯನ್ನು ಪರೀಕ್ಷಿಸಿಕೊಂಡರು ಎಂದುಕೊಳ್ಳೋಣ. ಅವರ ಪಕ್ಕ ಮಲಗುತ್ತಿದ್ದವರೂ ಅದೇ ರೀತಿ ಪರೀಕ್ಷೆಗೆ ಒಳಗಾಗುವ ಮನಸ್ಥಿತಿ ಹೊಂದಿದ್ದರೇ ಎಂಬುದು ಯಾರಿಗೆ ತಿಳಿದಿದೆ? ಮನಃಶಾಸ್ತ್ರಜ್ಞರು ಇಂತಹ ವಿಚಾರದ ಬಗ್ಗೆ ಬೆಳಕು ಚೆಲ್ಲಲು ಅವಕಾಶವಿದೆ. ಅವರ ಅದುಮಿಟ್ಟ ಕಾಮದ ಭಾವನೆಗಳು ಈ ರೀತಿ ಹೊರಹೊಮ್ಮಿತ್ತೇ? ಈ ವಿಚಾರದಲ್ಲಿ ಹೆಚ್ಚು ಚರ್ಚಿಸುವುದು ಸೂಕ್ತವಾಗಲಾರದಾದರೂ ಅವರೇ ಪ್ರಸ್ತಾಪಿಸಿದ್ದ ಸಂಗತಿಗಳಾದ್ದರಿಂದ ಓದುಗರು ತಮಗೆ ತಿಳಿದಂತೆ ವಿಶ್ಲೇಷಣೆ ಮಾಡಿಕೊಳ್ಳಬಹುದು. ಇಷ್ಟಂತೂ ಸತ್ಯ, ಕಾಮವನ್ನು ಕಾಮದಿಂದ ಹತ್ತಿಕ್ಕುವುದು ಅಸಾಧ್ಯ. ಕ್ಷಣಿಕ ಆಸೆಗಳಿಗೆ ಬಲಿಬಿದ್ದು ಜೀವನವನ್ನೇ ಹಾಳು ಮಾಡಿಕೊಂಡವರಿದ್ದಾರೆ. ತಪ್ಪು ಎಂದು ಗೊತ್ತಿದ್ದರೂ ತಪ್ಪೆಸಗಲು ಪ್ರೇರಿಸುವುದು ಹಟಮಾರಿ ಮನಸ್ಸೇ ಆಗಿರುತ್ತದೆ.
     ಹಠಮಾರಿ ಮನಸ್ಸು ಕೇವಲ ಕೆಟ್ಟದ್ದನ್ನೇ ಮಾಡುತ್ತದೆ ಎಂತಲೂ ಹೇಳಲುಬರುವುದಿಲ್ಲ. ಯಾರಾದರೂ ಏನಾದರೂ ವಿಷಯದ ಬಗ್ಗೆ 'ಹೀಗೆ ಮಾಡಬೇಡ' ಎಂದರೆ 'ಏತಕ್ಕೆ ಮಾಡಬಾರದು?' ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮಾಡಬಾರದು ಎನ್ನುವ ವಿಷಯ ಮಾಡಬಾರದಂತಹ ಕೆಲಸವಾಗಿದ್ದರೆ ಹೇಳುವುದರಲ್ಲಿ ಅರ್ಥವಿರುತ್ತದೆ. ಆದರೆ ಒಳ್ಳೆಯ ಕೆಲಸವಾಗಿದ್ದು ಕಾರಣರಹಿತ ಅಡ್ಡಿಯಿದ್ದರೆ ಅದನ್ನು ಧಿಕ್ಕರಿಸಿ ಮಾಡಲು ಮನಸ್ಸು ಪ್ರಚೋದಿಸುತ್ತದೆ, ಸವಾಲು ಎಂಬಂತೆ ಸ್ವೀಕರಿಸಿ ಮುನ್ನುಗ್ಗಲು ಹೇಳುತ್ತದೆ. ಸವಾಲು ಸ್ವೀಕರಿಸಿ ಮುನ್ನಡೆಯುವವರು ಸಾಧಕರ ಸಾಲಿಗೆ ಸೇರುತ್ತಾರೆ. ಸಾಧಕರು ಅಡ್ಡಿಯಿಲ್ಲದ ಕೆಲಸಗಳಿಗಿಂತ ಅಡ್ಡಿಯಿರುವ ಕೆಲಸಗಳಲ್ಲಿ ಹೆಚ್ಚು ಸಾಧನೆ ತೋರುತ್ತಾರೆ. ಅಂತಹ ಸಾಧನೆಯ ಹಿಂದಿರುವುದೂ ಅವರ ಹಠ ಹಿಡಿಯುವ ಮನಸ್ಸೇ!
     ನಾನು ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು ನಾನು ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ ನಾನು ಆಗಲಾರದು. ಯಜಮಾನರೆನಿಸಿಕೊಳ್ಳಬೇಕೆಂದರೆ ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ನಾವು ಹೇಳಿದಂತೆ ನಮ್ಮ ಮನಸ್ಸು ಕೇಳುವಂತಾದರೆ ಒಳಿತಾದೀತು. ಬಾಲವೇ ನಾಯಿಯನ್ನು ಆಡಿಸಿದಂತೆ ಮನಸ್ಸು ಹೇಳಿದಂತೆ ಕುಣಿದರೆ ಅನರ್ಥ ಕಟ್ಟಿಟ್ಟ ಬುತ್ತಿ!
-ಕ.ವೆಂ. ನಾಗರಾಜ್.

ಶುಕ್ರವಾರ, ನವೆಂಬರ್ 3, 2017

ನಗುವು ಸಹಜದ ಧರ್ಮ


     ಒಬ್ಬರು ಗುರು ತಮ್ಮ ಶಿಷ್ಯರಿಗೆ ನಿಜವಾಗಿಯೂ ವಿಕಾಸಗೊಂಡ ವ್ಯಕ್ತಿಯೆಂದರೆ ಅತ್ಯಂತ ಕಷ್ಟಗಳ ಮಧ್ಯೆಯೂ ಮಂದಹಾಸವನ್ನು ಮುಂದುವರೆಸಬಲ್ಲವರು ಎಂದು ಒಮ್ಮೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. 'ತುಂಬಾ ಕಷ್ಟಗಳು, ತೊಂದರೆಗಳು ಬಂದಾಗ ನಗುವುದಾದರೂ ಹೇಗೆ ಸಾಧ್ಯ?' ಎಂಬ ಶಿಷ್ಯರ ಪ್ರಶ್ನೆಗೆ ಗುರು, "ನಾನು ನಿಮ್ಮ ಪ್ರಶ್ನೆಗೆ ಉತ್ತರಿಸಲಾರೆ. ನನಗೂ ಕಷ್ಟಗಳ ಸುಳಿಯಲ್ಲಿ ಸಿಕ್ಕಾಗ ನಗಲಾರದವನಾಗಿದ್ದೆ. ಎಷ್ಟೋ ಸಮಯ ನನಗೆ ನಗುವೇ ಮರೆತುಹೋಗಿತ್ತು. ನನಗೊಬ್ಬರು ವ್ಯಕ್ತಿ ಗೊತ್ತಿದ್ದಾರೆ. ಅವರು ತಬ್ಬಲಿ, ಕಾಲುಗಳಲ್ಲಿ ಸ್ವಾಧೀನವಿಲ್ಲದೆ ಓಡಾಡಲಾರರು. ಯಾರಾದರೂ ತಿನ್ನಲು ಕೊಟ್ಟರೆ ಉಂಟು. ಇಲ್ಲದಿದ್ದರೆ ಉಪವಾಸ. ಅವರು ಯಾರನ್ನೂ ಬೇಡುವುದಿಲ್ಲ. ತಮ್ಮ ಬಳಿ ಬಂದವರಿಗೆಲ್ಲಾ ಅವರ ಸಮಸ್ಯೆಗಳಿಗೆ ಸಮಾಧಾನ ಹೇಳುತ್ತಾರೆ. ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಅವರೇ ನಿಮಗೆ ಉತ್ತರ ಹೇಳಬಲ್ಲರು" ಎಂದು ಉತ್ತರಿಸುತ್ತಾರೆ. ಶಿಷ್ಯರು ಆ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಅದೇ ಪ್ರಶ್ನೆಯನ್ನು ಅವರಿಗೆ ಕೇಳುತ್ತಾರೆ. ಆ ವ್ಯಕ್ತಿ ನಗುತ್ತಾ, "ನೀವು ಯಾರೋ ತಪ್ಪು ವ್ಯಕ್ತಿಯನ್ನು ವಿಚಾರಿಸುತ್ತಿದ್ದೀರಿ. ನನಗೆ ಯಾವ ಕಷ್ಟಗಳೂ ಇಲ್ಲ. ದೇವರು ನನ್ನ ಜೊತೆಯೇ ಇದ್ದು, ನನಗೆ ಏನು ಬೇಕೋ ಎಲ್ಲವನ್ನೂ ಒದಗಿಸಿದ್ದಾನೆ. ಕಷ್ಟಗಳೇ ಇಲ್ಲದಿರುವಾಗ, ಅದರ ಮಧ್ಯೆ ನಗುವುದನ್ನು ನಾನು ಹೇಗೆ ತಾನೆ ಹೇಳಬಲ್ಲೆ?" ಅಂದಿದ್ದರಂತೆ.  ಮಿತ್ರ ಎನ್. ಪ್ರಕಾಶರು  ಸೋಮವಾರದ ಪತ್ರ ಎಂಬ ಹೆಸರಿನಲ್ಲಿ ವಾರಕ್ಕೊಮ್ಮೆ ಸುವಿಚಾರದ ಬುತ್ತಿಯನ್ನು ಮಿತ್ರರೆಲ್ಲರಿಗೂ ಇ-ಅಂಚೆ ಮೂಲಕ ಹಂಚುತ್ತಿರುತ್ತಾರೆ. ಅಂತಹ ಒಂದು ಸೋಮವಾರದ ಪತ್ರದಲ್ಲಿ ಉದಾಹರಿಸಿದ್ದ ಸಂಗತಿ ಇದು. ಅವರ ಪತ್ರದಲ್ಲಿ ಉಲ್ಲೇಖಿಸಿದಂತಹ ಸಾಧಕರುಗಳು ಕಾಣಸಿಗುವುದು ಅಪರೂಪ. ಆದರೆ ಅಂತಹ ನಗುವನ್ನು ರೂಢಿಸಿಕೊಳ್ಳಲು ಸಾಧ್ಯವಿದೆ ಎಂಬ ಅಂಶಕ್ಕೆ ಇಲ್ಲಿ ಪ್ರಾಧಾನ್ಯವಿರುವುದು ವಿಶೇಷ.
     ನಿಜ, ನಗುವಿಗೆ ದೊಡ್ಡ ಶಕ್ತಿಯಿದೆ. ಅದಕ್ಕೆ ನಗುವವರ ಕಷ್ಟ ಮಾತ್ರವಲ್ಲ, ಅವರ ಎದುರಿಗೆ ಇರುವವರ ಕಷ್ಟಗಳನ್ನೂ ಮರೆಸುವ ಶಕ್ತಿ ಇದೆ. ನನ್ನ ಬಂಧು ಒಬ್ಬರು ಹಲ್ಲು ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ವೈದ್ಯರ ಕ್ಲಿನಿಕ್ಕಿಗೆ ಹೋದಾಗ ಅವರೊಡನೆ ನಾನೂ ಹೋಗಿದ್ದೆ. ಬಹಳಷ್ಟು ರೋಗಿಗಳು ಅಲ್ಲಿ ಹಾಕಿದ್ದ ಬೆಂಚುಗಳ ಮೇಲೆ ಕುಳಿತಿದ್ದರು. ಒಬ್ಬೊಬ್ಬರ ಮುಖವೂ ನೋವಿನಿಂದ ಕಿವಿಚಿತ್ತು. ಮುಖ ಗಂಟು ಹಾಕಿಕೊಂಡು ನರಳುತ್ತಿದ್ದವರೇ ಬಹುತೇಕರು. ಆಗ ಒಬ್ಬ ತಾಯಿ ಸಹ ಹಲ್ಲು ನೋವಿನ ಕಾರಣದಿಂದಾಗಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದು ಕುಳಿತಳು. ಮಗು ಅಲ್ಲಿ ಕುಳಿತಿದ್ದ ಎಲ್ಲರನ್ನೂ ನೋಡಿತು. ಪಕ್ಕದಲ್ಲಿ ಕುಳಿತಿದ್ದ ಒಬ್ಬರು ವೃದ್ಧರನ್ನೂ ನೋಡಿ, ತಾತಾ ಎಂದಿತು. ಆ ಮುದುಕರು ಮಗುವಿನತ್ತ ತಿರುಗಿಯೂ ನೋಡಲಿಲ್ಲ. ಮಗು ಮತ್ತೊಮ್ಮೆ ಅವರನ್ನು ಮುಟ್ಟಿ 'ತಾತಾ' ಎಂದು ಕರೆಯಿತು. ಕರವಸ್ತ್ರದಿಂದ ಕೆನ್ನೆ ಹಿಡಿದುಕೊಂಡಿದ್ದ ಅವರು ಮಗುವಿನತ್ತ ಓರೆನೋಟ ಬೀರಿ ಮುಖವನ್ನು ಬೇರೆಡೆಗೆ ತಿರುಗಿಸಿಕೊಂಡರು. ಮಗು ಸುಮ್ಮನಿರಲಿಲ್ಲ. ತಾಯಿಯ ತೊಡೆಯಿಂದ ಕೆಳಗಿಳಿದು ಆ ಮುದುಕರ ಎದುರಿಗೆ ಬಂದು ಅವರನ್ನು ಮುಟ್ಟಿ ಮತ್ತೆ 'ತಾತಾ' ಎಂದಿತು. ಮುಖ ಯಾವ ಕಡೆಗೆ ತಿರುಗಿಸಿಕೊಂಡಿದ್ದರೋ ಆ ಕಡೆಗೇ ಬಗ್ಗಿ ನೋಡಿ ನಗಿಸಿತು. ಮುದುಕರಿಗೆ ಮಾತನಾಡಿಸದಿರಲು ಸಾಧ್ಯವಾಗಲಿಲ್ಲ. ಅವರೂ ನಗುತ್ತಾ, 'ಏನೋ ಪುಟ್ಟಾ' ಅಂದರು. ಮಗು ಕೇಕೆ ಹಾಕಿ ನಕ್ಕಿತು. ನಂತರ ಅವರಿಬ್ಬರೂ ಗೆಳೆಯರಾಗಿಬಿಟ್ಟರು. ಅಲ್ಲಿದ್ದ ಇತರರೂ ಅದನ್ನೆಲ್ಲಾ ಗಮನಿಸಿ ಸಂತೋಷಿಸುತ್ತಿದ್ದರು. ಮಗು ಎಲ್ಲರನ್ನೂ ಮಾತನಾಡಿಸುತ್ತಾ, ಕರೆದವರ ಬಳಿ ಕಣಿ ಮಾತನಾಡುತ್ತಾ ಇದ್ದಿತು. ಆ ಸಂದರ್ಭದಲ್ಲಿ ಯಾರಿಗೂ ಹಲ್ಲು ನೋವು ತೊಂದರೆ ಕೊಟ್ಟೇ ಇರಲಿಲ್ಲ. ಡಾಕ್ಟರರ ಕರೆ ಬಂದಾಗಲಷ್ಟೇ ಅವರಿಗೆ ಮತ್ತೆ ನೋವಿನ ನೆನಪಾಗಿತ್ತು. ನಿಷ್ಕಲ್ಮಷ ನಗುವಿನ ಶಕ್ತಿಯೇ ಅಂತಹದು!
     ಮಗುವಿನ ನಿಷ್ಕಲ್ಮಷ ನಗು ನಮಗೂ ಬರುವಂತೆ ಆದಾಗ ನಾವು ಸಾಧಕರಾಗುತ್ತೇವೆ. ಮಗುವಿಗೆ ಆ ನಗು ಬರಲು ಸಾಧ್ಯವಾದುದಾದರೂ ಹೇಗೆ? ಮಗುವಿಗೆ ಬಡವ-ಶ್ರೀಮಂತ, ಆ ಜಾತಿ-ಈ ಜಾತಿ, ಮೇಲು-ಕೀಳು, ದೊಡ್ಡವರು-ಚಿಕ್ಕವರು, ಕರಿಯ-ಬಿಳಿಯ ಇತ್ಯಾದಿ ಭೇದ ಮಾಡುವ ಬುದ್ಧಿ ಇರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ದುಃಖವಾದಾಗ ಅಳುತ್ತದೆ, ಸಂತೋಷವಾದಾಗ ಮುಕ್ತವಾಗಿ ನಗುತ್ತದೆ. ಸಾಧಕರಲ್ಲೂ ಇಂತಹ ಗುಣ ಕಂಡುಬರುತ್ತದೆ. ನಗು ಅನ್ನುವುದು ಎಲ್ಲರ ಹೃದಯಗಳನ್ನು ತೆರೆಯಬಲ್ಲ ಮಾಸ್ಟರ್ ಕೀ, ಜೀವನವನ್ನು ಸುಂದರಗೊಳಿಸುವ ಅದ್ಭುತ ಸಾಧನ. ನಗುವನ್ನು ಮಗು ದೊಡ್ಡವರಿಂದ ಕಲಿಯುತ್ತದೋ ಅಥವ ದೊಡ್ಡವರು ಮಗುವಿನಿಂದ ನಗು ಕಲಿಯುತ್ತಾರೋ? ಈ ಪ್ರಶ್ನೆ ಸರಿಯಾಗುವುದಿಲ್ಲ. ಆದರೆ ಮಗುವಿನ ನಗುವಿನಿಂದ ದೊಡ್ಡವರು ಕಲಿಯಬೇಕು ಅನ್ನುವುದು ಒಳ್ಳೆಯ ಮಾತಾಗಬಹುದು. ದೊಡ್ಡವರ ನಗುವಾದರೋ ದೊಡ್ಡವರಾಗುತ್ತಾ, ಆಗುತ್ತಾ ಕಲುಷಿತಗೊಂಡುಬಿಡುತ್ತದೆ. ಆ ಕಲ್ಮಷವನ್ನು ಕಳೆದುಕೊಳ್ಳಬೇಕಾದರೆ ಮಗುವಿನಂತೆ ನಗುವ ಅಭ್ಯಾಸ ಮಾಡಿಕೊಳ್ಳಬೇಕು.
     ಮಂದಹಾಸ ಬೀರುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ. ಆ ಮಂದಹಾಸ ದೂರದಲ್ಲೆಲ್ಲೂ ಇಲ್ಲ. ನಮ್ಮ ಮೂಗಿನ ಕೆಳಗೇ ಇದೆ. ಆದರೆ ಅದು ಅಲ್ಲಿದೆಯೆಂಬುದನ್ನು ನಾವು ಮರೆತುಬಿಟ್ಟಿರುತ್ತೇವೆ. ನಮ್ಮ ಮತ್ತು ನಮ್ಮ ಸುತ್ತಮುತ್ತಲಿನವರ ಸಂತೋಷದ ಸಲುವಾಗಿ, ಬಿಗಿಯಾದ ವಾತಾವರಣವನ್ನು ಸಡಿಲುಗೊಳಿಸುವ ಸಲುವಾಗಿ ಸ್ವಭಾವತಃ ಗಂಭೀರ ಸ್ವಭಾವದವರಾದ ನನ್ನಂತಹವರೂ ಸೇರಿದಂತೆ ಎಲ್ಲರೂ ಮಂದಹಾಸವನ್ನು ಮುಖದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲೇಬೇಕು. ಯಾರಾದರೂ ನಮ್ಮ ಸ್ನೇಹಿತರ ಬಳಿಯಲ್ಲಿ ಆ ನಗು ಇರದಿದ್ದರೆ ನಮ್ಮಲ್ಲಿರುವ ನಗುವನ್ನೇ ಅವರಿಗೆ ಹಂಚಬಹುದು. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ ಎಂಬ ಆಡುಮಾತಿನಲ್ಲಿ ಸತ್ಯವಿದೆ. ಭಾಷೆಗಳು ನೂರಾರು ಇರಬಹುದು. ಆದರೆ ನಗುವಿನ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಮಾತು, ಭಾಷೆ ಅರ್ಥವಾಗದಿದ್ದರೂ ನಗು ಪರಸ್ಪರರಲ್ಲಿ ಆತ್ಮೀಯತೆ ಬೆಸೆಯಬಲ್ಲದು. ಸಂತೋಷವಿದ್ದಾಗ ನಗು ಸಹಜವಾಗಿ ಬರುತ್ತದೆ. ನಗುವಿನಿಂದಲೂ ಸಂತೋಷ ಬರುತ್ತದೆ. ಸೋತರೂ ನಗುವಂತಹವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಅಕ್ಕ ಪಕ್ಕದಲ್ಲಿರುವ ಎರಡು ದಿನಸಿ ಅಂಗಡಿಗಳಲ್ಲಿ ಒಂದರಲ್ಲಿ ಜನ ತುಂಬಿ ತುಳುಕಿರುತ್ತಾರೆ, ಇನ್ನೊಂದರಲ್ಲಿ ಎಲ್ಲಾ ಪದಾರ್ಥಗಳು ಇದ್ದರೂ ಜನರೇ ಇರುವುದಿಲ್ಲದಂತಹ ಅಂಗಡಿಗಳು ನಮ್ಮ ಗಮನಕ್ಕೆ ಬಂದಿರುತ್ತವೆ. ವ್ಯತ್ಯಾಸ ಇಷ್ಟೆ, ಜನ ತುಂಬಿರುವ ಅಂಗಡಿಯವನು ಎಲ್ಲರನ್ನೂ ಸಮಾಧಾನದಿಂದ ನಗುತ್ತಾ ಮಾತನಾಡಿಸುತ್ತಾನೆ. ಇನ್ನೊಬ್ಬನಲ್ಲಿ ಆ ಗುಣ ಇರುವುದಿಲ್ಲ. ವ್ಯತ್ಯಾಸ ಅರ್ಥವಾದರೆ, ನಾವೂ ನಮ್ಮ ಸ್ವಭಾವವನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದಲ್ಲವೇ? ಇಂತಹ ಸಂಗತಿಗಳೇ ನಮಗೆ ಗುರುವಾಗಬೇಕು.
     ನಗುವಿನಲ್ಲೂ ನಾನಾ ವಿಧಗಳು! ಮೋಹಕ ನಗು, ಬೂಟಾಟಿಕೆಯ ನಗು, ವ್ಯಂಗ್ಯ ನಗು, ಮದಭರಿತ ಕೊಂಕು ನಗು, ಮುಸುಕಿನ ನಗು, ಮುಖವಾಡದ ನಗು, . . ಇನ್ನೆಷ್ಟೋ ಬಗೆಯ ನಗುಗಳು! ಆದರೆ ನಗುವಿನ ರಾಜ ನಿಷ್ಕಲ್ಮಷ ನಗು, ಮಗುವಿನ ನಗು! ಒಂದು ತಮಾಷೆಯೆಂದರೆ ನಗುವವರನ್ನು ಇತರರು ತಮಗಿಂತ ಉತ್ತಮ ಸ್ಥಿತಿಯಲ್ಲಿರುವವರೆಂದು ಭಾವಿಸುತ್ತಾರೆ. ನಮ್ಮ ನಗುವಿನ ಮೂಲಕ ನಮ್ಮ ಹೃದಯದಲ್ಲಿನ ಪ್ರೀತಿಯನ್ನು ಸುತ್ತಮುತ್ತಲಿನವರಿಗೆ ವ್ಯಕ್ತಪಡಿಸಿದರೆ, ಇತರರೂ ನಮ್ಮನ್ನು ಆದರದಿಂದ ಕಂಡೇ ಕಾಣುತ್ತಾರೆ. ನೂರಕ್ಕೆ ನೂರರಷ್ಟು ಸತ್ಯದ ಮಾತಿದು. ಸ್ವತಃ ಪರೀಕ್ಷೆ ಮಾಡಿ, ಫಲ ಕಂಡುಕೊಳ್ಳಿ. ಶತಾಯುಷಿ ಪಂ. ಸುಧಾಕರ ಚತುರ‍್ವೇದಿಯವರು ಸತ್ಸಂಗಗಳಲ್ಲಿ ಹೇಳುತ್ತಿರುತ್ತಾರೆ, "ನಗುವುದು ಮತ್ತು ನಗಿಸುವುದು ಧರ್ಮ. ಅಳುವುದು ಪಾಪ. ಪಾಪ ಮಾಡಬೇಡಿ; ನೀವೂ ನಗಿ, ಇತರರನ್ನೂ ನಗಿಸುತ್ತಾ ಉತ್ತಮ ಮಾನವರಾಗಿ ಬಾಳಿ". ನಗುವುದು ಅಭ್ಯಾಸವಾದರೆ ಕಷ್ಟಗಳೂ ನಮ್ಮನ್ನು ಕಂಡು ದೂರ ಸರಿಯುತ್ತವೆ.
-ಕ.ವೆಂ. ನಾಗರಾಜ್.