ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 11, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೧


     ಮಾನವನು ಸ್ವಭಾವತಃ ಪ್ರಭಾವಗ್ರಾಹಿ. ಬಾಹ್ಯ ಕ್ರಿಯಾಕಲಾಪಗಳ ಮತ್ತು ಆಚಾರ ವ್ಯವಹಾರಗಳ ನಿರ್ದಿಷ್ಟ ಪ್ರಭಾವ, ಅದು ಒಳ್ಳೆಯದೇ ಇರಬಹುದು, ಕೆಟ್ಟದ್ದೇ ಇರಬಹುದು, ಖಚಿತವಾಗಿ ಬಿದ್ದೇ ಬೀಳುತ್ತದೆ. ಈ ರೀತಿ ಬಿದ್ದ ಪ್ರಭಾವವನ್ನು "ಸಂಸ್ಕಾರ" ಎನ್ನುತ್ತಾರೆ. ಧರ್ಮದ ಪರಿಧಿಯಲ್ಲಿ ದುಷ್ಟ ಭಾವನೆಗಳಿಗೆ ಪ್ರವೇಶವೇ ಇಲ್ಲ. ಪ್ರಶ್ನೆ, ಕೇವಲ ಸತ್ ಪ್ರಭಾವಗಳದ್ದೇ ಇರುತ್ತದೆ.  ಸಂಸ್ಕಾರ ಎಂಬ ಶಬ್ದಕ್ಕೆ 'ಮನವನ್ನು ಹದಗೊಳಿಸುವುದು' ಎಂಬ ಅರ್ಥವಿದೆ. ಮನಸ್ಸು ಹದಗೊಂಡರೆ, ಮಾತು-ಮೈಗಳೂ ಹದಗೊಂಡು, ಬಾಳುವೆಯೇ ಹಸನಾಗುವುದರಲ್ಲಿ ಸಂದೇಹವೇ ಇಲ್ಲ. ಈ ಮೂಲಭೂತ ಸಿದ್ಧಾಂತವನ್ನು ಮುಂದಿಟ್ಟುಕೊಂಡೇ ವೈದಿಕ ಧರ್ಮವು ಹದಿನಾರು ಸಂಸ್ಕಾರಗಳನ್ನು ವಿಧಿಸುತ್ತದೆ. 
     ಮೊದಲನೆಯದು ಗರ್ಭಾದಾನ. ವಿವಾಹಿತರಾದ ದಂಪತಿಗಳು ಪ್ರಥಮ ಬಾರಿ ದೇಹಸಂಗ ಮಾಡುವ ಮುನ್ನ ಆಚರಿಸಲ್ಪಡುವ ಸಂಸ್ಕಾರವಿದು. ದೇಹಸಂಗ ಕೇವಲ ಕಾಮಪಿಪಾಸಾ ತೃಪ್ತಿಗಾಗಿ ಮಾಡುವ ಪಾಶವಿಕ ಕರ್ಮವಲ್ಲ. ಭಗವಂತನನ್ನು ಸಾಕ್ಷಿಯಾಗಿಟ್ಟುಕೊಂಡು, ಪ್ರಜಾತಂತುವಿನ ಅವಿಚ್ಛೇದಕ್ಕಾಗಿ ಮಾಡುವ ಕರ್ತವ್ಯಕರ್ಮ -  ಎಂಬಧಾರ್ಮಿಕ ಭಾವನೆಯನ್ನು ದಂಪತಿಗಳ ಚಿತ್ತದ ಮೇಲೆ ಮೂಡಿಸುವುದಕ್ಕಾಗಿ ಮಾಡುವ ಸಂಸ್ಕಾರವಿದು. ಹೋಮದ ಪ್ರಧಾನ ಮಂತ್ರಗಳಲ್ಲಿ ಪತಿಯು - 'ದೇವ ದೇವ! ನಾನು ನಿನ್ನನ್ನೇ ನಮ್ಮ ಜೀವನದ ಸ್ವಾಮಿಯಾಗಿ ಆರಿಸಿದ್ದೇನೆ. ನನ್ನ ಮತ್ತು ಈಕೆಯ ಶರೀರದಲ್ಲಿರಬಹುದಾದ ನಾನಾ ವಿಕಾರಗಳನ್ನು ದೂರೀಕರಿಸು' - ಎಂದು ಬೇಡಿಕೊಳ್ಳುತ್ತಾನೆ.
     ಎರಡನೆಯದಾದ ಪುಂಸವನವು ಗರ್ಭಿಣಿಯ ಶಕ್ತಿಯನ್ನು ಹೆಚ್ಚಿಸುವುದಕ್ಕೂ, ಮೂರನೆಯದಾದ ಸೀಮಂತೋನ್ನಯನವೂ ಆಕೆಯ ಮನಸ್ಸು ಉಲ್ಲಾಸಪೂರ್ಣವಾಗಿ ಇರುವುದಕ್ಕಾಗಿ ಆಚರಿಸಲ್ಪಡುತ್ತದೆ. ಇವೆರಡರಿಂದಲೂ ಗರ್ಭಸ್ಥ ಶಿಶುವಿನ ಮೇಲೆ ಉತ್ತಮ ಸಂಸ್ಕಾರ ಬೀಳುವುದರಲ್ಲಿ ಸಂದೇಹವೇ ಇಲ್ಲ. 
     ನಾಲ್ಕನೆಯದಾದ ಜಾತಕರ್ಮವು ಶಿಶು ಜನನವಾದಾಗ ಮಾಡಲ್ಪಡುತ್ತದೆ. ವಿಶೇಷ ಹೋಮವಾದ ಮೇಲೆ, ತಂದೆ ಬೆಳ್ಳಿ ಅಥವಾ ಚಿನ್ನದ ಸರಳನ್ನು ಜೇನುತುಪ್ಪದಲ್ಲಿ ಅದ್ದಿ, ಮಗುವಿನ ನಾಲಿಗೆಯ ಮೇಲೆ 'ಓಂ' ಎಂದು ಬರೆಯುತ್ತಾನೆ, ಕಿವಿಗಳಲ್ಲಿ 'ವೇದೋsಸಿ' -ನೀನು ಜ್ಞಾನಮಯ-  ಎಂದು ಉಚ್ಚರಿಸುತ್ತಾನೆ. ಆ ಕೂಡಲೇ ಆ ಮಗುವು ಈ ಕ್ರಿಯೆಗಳ ಅರ್ಥವನ್ನು ಗ್ರಹಿಸಲಾರದಾದರೂ, ತಂದೆ-ತಾಯಿಗಳು 'ತಮ್ಮ ಶಿಶುವಿನ ಬಾಯಿಂದ ಸಿಹಿಯಾದ ಮಾತುಗಳೇ ಹೊರಡಲಿ, ಭಗವನ್ನಾಮ ಶಿಶುವಿನ ನಾಲಿಗೆಯ ಮೇಲೆ ಸುಳಿಯಲಿ, ಅದು ಜ್ಞಾನಿಯಾಗಿ ಬೆಳೆಯಲಿ' ಎಂಬ ಪವಿತ್ರ ಸಂಕಲ್ಪವನ್ನು ಹೊತ್ತು, ಅದೇ ರೀತಿ ಅದನ್ನು ಬೆಳೆಸುವ ಯತ್ನ ಮಾಡಬೇಕು. 
     ಐದನೆಯ ಸಂಸ್ಕಾರ ನಾಮಕರಣ. ಮಗುವು ಹನ್ನೊಂದು ದಿನಗಳದ್ದು, ೧೦೧ ದಿನಗಳದ್ದು ಅಥವಾ ಒಂದು ವರ್ಷವಾದದ್ದಾದಾಗ ವಿಶೇಷ ಹೋಮ ಮಾಡಿ ಮಗುವಿಗೆ ಹೆಸರಿಡಲಾಗುತ್ತದೆ. ವೈದಿಕ ಧರ್ಮದಲ್ಲಿ ಹೆಸರು, ವ್ಯಾವರ್ತನ, ನಿರ್ದೇಶನ ಮತ್ತು ಆದರ್ಶನ, ಎಂದರೆ, ಬೇರೆಯವರಿಂದ ಬೇರ್ಪಡಿಸುವುದು, ಇಂತಹವನೇ ಎಂದು ಗುರುತಿಸುವುದು ಮತ್ತು ಉನ್ನತವಾದ ಗುರಿಯನ್ನಿಡುವುದು, ಈ ಮೂರೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ಇಡಲ್ಪಡುತ್ತದೆ. 'ಹೆಸರಿನಲ್ಲೇನಿದೆ?' ಎಂಬ ಹಗುರವಾದ ಪ್ರಶ್ನೆಗೆ ವೈದಿಕ ಧರ್ಮದಲ್ಲಿ ಅವಕಾಶವಿಲ್ಲ. ಹೆಸರನ್ನಿಡುವಾಗ, ತಂದೆ ಈ ಮಂತ್ರವನ್ನುಚ್ಚರಿಸುತ್ತಾನೆ:-
ಕೋsಸಿ ಕತಮೋsಸಿ ಕಸ್ಯಾಸಿ ಕೋ ನಾಮಾಸಿ || (ಯಜು.೭.೨೯.)
     ಓ ಶಿಶೋ, [ಕಃ ಅಸಿ] ನೀನು ಸುಖಮಯನಾಗಿದ್ದೀಯೆ. [ಕತಮಃ ಅಸಿ] ಅತ್ಯಂತ ಸುಖ ಸ್ವರೂಪನಾಗಿದ್ದೀಯ. [ಕಸ್ಯ ಅಸಿ] ನೀನು ಸುಖ ಸ್ವರೂಪನಾದ ಪ್ರಭುವಿನ ಕಂದನಾಗಿದ್ದೀಯೆ. [ಕಃ ನಾಮ ಅಸಿ] ಸುಖ ಎಂಬುದೇ ನಿನ್ನ ಹೆಸರಾಗಿದೆ. 
     ಈ ಕಾಮನೆಯಿಂದ ಮಗುವನ್ನು ಬೆಳೆಸುವುದು ಮಾತಾ-ಪಿತೃಗಳ ಉತ್ತರದಾಯಿತ್ವ.
     ಆರನೆಯದು ನಿಷ್ಕ್ರಮಣ ಸಂಸ್ಕಾರ. ಮಗುವಿಗೆ ನಾಲ್ಕು ತಿಂಗಳಾದಾಗ ಮೊದಲ ಸಾರಿ ಅದನ್ನು ಮನೆಯ ಹೊರಗಡೆ ಕರೆದುಕೊಂಡು ಹೋಗಲಾಗುತ್ತದೆ. 'ಪುತ್ರ ಅಥವಾ ಪುತ್ರಿ, ನೀನು ನೋಡುತ್ತಿರುವ ಸೂರ್ಯನಂತೆಯೇ ನೀನು ಪ್ರಕಾಶಪುಂಜನಾಗು. ಧೀರ-ವೀರತನದಿಂದ ದೀರ್ಘಾಯುವಾಗಿ ಬಾಳು' -  ಎಂಬರ್ಥದ ಮಂತ್ರವನ್ನುಚ್ಚರಿಸುತ್ತಾನೆ.
     ಏಳನೆಯದು ಅನ್ನಪ್ರಾಶನ ಸಂಸ್ಕಾರ. ಮಗುವಿಗೆ ಅನ್ನವನ್ನು ಅರಗಿಸಿಕೊಳ್ಳುವ ಶಕ್ತಿ ಬಂದಾಗ, ವಿಶೇಷ ಹೋಮವನ್ನು ಮಾಡಿ, ಮಗುವಿಗೆ ಮೃದುವೂ, ರುಚಿಕರವೂ ಆದ ಅನ್ನವನ್ನೇ ತಿನ್ನಿಸಲಾಗುತ್ತದೆ, ಆಗ ಹೇಳುವ ಮಂತ್ರ ಸಂಪೂರ್ಣ ಜೀವನಕ್ಕೇ ಆಹಾರದ ಆದರ್ಶವನ್ನು ಮಂಡಿಸುತ್ತದೆ:-
ಅನ್ನಪತೇsನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣಃ | 
ಪ್ರ ಪ್ರ ದಾತಾರಂ ತಾರಿಷ ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ || (ಯಜು.೧೧.೮೩.)
     [ಅನ್ನಪತೇ] ಆಹಾರದ ಸ್ವಾಮಿಯೇ, [ನಃ] ನಮಗೆ [ಅನಮೀವಸ್ಯ] ರೋಗರಹಿತವೂ, [ಶುಷ್ಮಿಣಃ] ಬಲಪ್ರದವೂ ಆದ [ಅನ್ನಸ್ಯ] ಅನ್ನದ ಭಾಗವನ್ನು [ದೇಹಿ] ಕೊಡು. [ಪ್ರ ದಾತಾರಮ್] ಅನ್ನವನ್ನೊದಗಿಸುವ ಕೃಷಿಕಾರನನ್ನು [ಪ್ರ ತಾರಿಷ] ಕಷ್ಟದಿಂದ ಪಾರು ಮಾಡು. [ನಃ ದ್ವಿಪದೇ ಚತುಷ್ಪದೇ] ನಮ್ಮ ದ್ವಿಪಾದ, ಚತುಷ್ಪಾದ ಜೀವರಿಗೆ [ಊರ್ಜಂ ಧೇಹಿ] ಶಕ್ತಿಯನ್ನು ಕರುಣಿಸು.
     ಜೀವನಪೂರ್ತಿ ಇಂತಹ ರೋಗ ತಾರದ, ಬಲದಾಯಕವಾದ, ಯಾವ ಜೀವಕ್ಕೂ ನೋವನ್ನು ತಾರದ ಆಹಾರವನ್ನೇ ಸೇವಿಸಬೇಕು.
-ಪಂ. ಸುಧಾಕರ ಚತುರ್ವೇದಿ.

ಶುಕ್ರವಾರ, ಮಾರ್ಚ್ 1, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೫.ಬಲಿವೈಶ್ವದೇವ



     ಐದನೆಯ ಮಹಾಯಜ್ಞ ಬಲಿವೈಶ್ವದೇವ. ಇದು ಸಾಧುಗಳಾದ ಮೂಕಪಕ್ಷಿಗಳ, ಗುಣ ಹೊಂದದ ಭಯಂಕರ ರೋಗಿಗಳ ಮತ್ತು ಇತರ ರೀತಿಯಲ್ಲಿ ಅಸಹಾಯಕರಾದ ಮಾನವರ ಸೇವೆ ಮಾಡುವ ಮಹಾಕಾರ್ಯ. ಪ್ರಿಯಃ ಪಶೂನಾಂ ಭೂಯಾಸಮ್ || (ಅಥರ್ವ.೧೭.೧.೪) - ಪ್ರಭೋ, ನಾನು ಪಶುಗಳಿಗೆ ಪ್ರಿಯನಾಗುವೆ -  ಎಂಬ ಹಾರ್ದಿಕ ಪ್ರಾರ್ಥನೆಗೆ ಕ್ರಿಯಾತ್ಮಕ ರೂಪ ಕೊಟ್ಟು ಮಾನವಜನಾಂಗಕ್ಕೆ ನಾನಾ ವಿಧದಲ್ಲಿ ಸಹಾಯಕವಾಗಿರುವ ಪಶು-ಪಕ್ಷಿಗಳಿಗೆ ತಮ್ಮ ಶಕ್ತ್ಯಾನುಸಾರ ಆಹಾರ ಕೊಡುವುದು ಬಲಿವೈಶ್ವದೇವದ ಪ್ರಥಮಭಾಗ. ನಾನಾ ಕಾರಣಗಳಿಂದ, ಅತ್ಯಂತ ದುಃಖಮಯವಾದ ಸ್ಥಿತಿಯಲ್ಲಿರುವ ಮಾನವರ ಕ್ಲೇಶನಿವಾರಣೆಗಾಗಿ ಆಹಾರಾದಿ ಪದಾರ್ಥಗಳನ್ನು ಕೊಡುವುದು ಎರಡನೆಯ ಭಾಗ. ಋಗ್ವೇದ ಹೇಳುತ್ತಿದೆ: 
ಉತ ದೇವಾ ಅವಹಿತಂ ದೇವಾ ಉನ್ನಯಥಾ ಪುನಃ | 
ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನಃ || (ಋಕ್.೧೦.೧೩೭.೧)
     [ದೇವಾಃ ದೇವಾಃ] ದಾನಶೀಲರಾದ ವಿದ್ವಾಂಸರೇ, [ಅವಹಿತಮ್] ಕೆಳಗೆ ಬಿದ್ದವನನ್ನು [ಪುನಃ] ಮತ್ತೆ [ಉನ್ನಯಥಾ] ಮೇಲಕ್ಕೆತ್ತಿರಿ. [ಉತ] ಮತ್ತು [ದೇವಾಃ ದೇವಾಃ] ಪ್ರಕಾಶವಂತರಾದ ಪುಣ್ಯಾತ್ಮರೇ, [ಅಗಃ ಚಕ್ರುಷಮ್] ಪಾಪ ಮಾಡುವವನಲ್ಲಿ, [ಪುನಃ] ಮರಳಿ, [ಜೀವಯಥಾ] ನವಜೀವನವನ್ನು ತುಂಬಿಸಿರಿ.
     ವೈದಿಕ ಧರ್ಮದ ಈ ಔದಾರ್ಯಕ್ಕೆ ವಾಸ್ತವಿಕತೆಯ ರೂಪ ಕೊಡುವುದು ಗೃಹಸ್ಥ-ಗೃಹಿಣಿಯರ ಕರ್ತವ್ಯವೇ ಆಗಿದೆ. ಮತ್ತೂ ಕೇಳಿರಿ:-
ಅಮಾಜುರಶ್ಚಿದ್ಭವಥೋ ಯುವಂ ಭಗೋsನಾಶೋಶ್ಚಿದವಿತಾರಾಪಮಸ್ಯ ಚಿತ್ | 
ಅಂಧಸ್ಯ ಚಿನ್ನಾಸತ್ಯಾ ಕೃಶಸ್ಯ ಚಿದ್ಯುವಾಮಿದಾಹುರ್ಭಿಷಜಾ ರುತಸ್ಯ ಚಿತ್ || (ಋಕ್.೧೦.೩೯.೩)
     [ನಾಸತ್ಯಾ] ಓ ಅಸತ್ಯದೂರರಾದ ದಂಪತಿಗಳೇ, [ಯುವಮ್] ನೀವಿಬ್ಬರೂ, [ಅಮಾಜುರಃ ಚಿತ್] ನಿಜವಾಗಿ ಒಬ್ಬರಿಗೊಬ್ಬರು ಸಮೀಪಸ್ಥರೂ, [ಭಗಃ] ಒಬ್ಬರಿಗೊಬ್ಬರು ಐಶ್ವರ್ಯರೂಪರೂ [ಭವತಃ] ಆಗಿರಿ. [ಅನಾಶೋಃ ಚಿತ್] ಉದರವ್ಯಾಧಿಯಿಂದ ತಿನ್ನಲಾಗದವನ [ಅಪಮಸ್ಯ ಚಿತ್] ಮತ್ತು ಮನೋರೋಗಕ್ಕೆ ತುತ್ತಾದವನ [ಅಂಧಸ್ಯ ಚಿತ್] ಕುರುಡನ [ಕೃಶಸ್ಯ ಚಿತ್] ಕೃಶನಾದವನ [ಅವಿತಾರಾ] ರಕ್ಷಕರಾಗಿರಿ. [ಯುವಾಂ ಇತ್] ನಿಮ್ಮಿಬ್ಬರನ್ನೇ [ರುತಸ್ಯ ಚಿತ್ ಭಿಷಜಾ] ವ್ಯಾಧಿಗ್ರಸ್ಥನ ಚಿಕಿತ್ಸಕರೆಂದು [ಆಹುಃ] ಹೇಳುತ್ತಾರೆ.
ಯುವಂ ಹ ಕೃಶಂ ಯುವಮಶ್ವಿನಾ ಶಯುಂ ಯುವಂ ವಿಧಂತಂ ವಿಧವಾಮುರುಷ್ಯಥಃ | 
ಯುವಂ ಸನಿಭ್ಯಃ ಸ್ತನಯಂತಮಶ್ವಿನಾsಪವ್ರಜಮೂರ್ಣುಥಃ ಸಪ್ತಾಸ್ಯಮ್ || (ಋಕ್.೧೦.೪೦.೮)
     [ಅಶ್ವಿನಾ ಅಶ್ವಿನಾ] ಆತ್ಮವಂತರಾದ ನರ-ನಾರಿಯರೇ, [ಹ] ನಿಜವಾಗಿ [ಯುವಮ್] ನೀವಿಬ್ಬರೂ, [ಕೃಶಂ] ಕ್ಷಯರೋಗಿಯನ್ನೂ, [ಯುವಂ] ನೀವಿಬ್ಬರೂ [ಶಯುಂ] ವ್ಯಾಧಿಗ್ರಸ್ಥನಾಗಿ ಹಾಸಿಗೆ ಹಿಡಿದವನನ್ನೂ [ಯುವಂ] ನೀವಿಬ್ಬರೂ [ವಿಧಂತಮ್] ಸಮಾಜಸೇವೆಯಲ್ಲಿ ದೀನ ದರಿದ್ರರನ್ನೂ ಉದ್ಧರಿಸಲು ನಿಂತವನನ್ನೂ, [ವಿಧವಾಮ್] ವಿಧವೆಯನ್ನೂ [ಉರುಷ್ಕಥಃ] ರಕ್ಷಿಸಿರಿ. [ಸನಿಭ್ಯಃ] ದಾತೃಗಳಿಗೆ [ಸ್ತನಯಂತಮ್] ಉದ್ಗಮದಂತಿರುವ [ಸಪ್ತಾಸ್ಯಮ್] ಪಂಚಜ್ಞಾನೇಂದ್ರಿಯಗಳು ಮತ್ತು ಮನೋಬುದ್ಧಿಗಳಿಂದ ಕೂಡಿದ್ದು [ಅಪವ್ರಜಮ್] ತಪ್ಪುದಾರಿ ಹಿಡಿದ ಇಂದ್ರಿಯಗಳನ್ನುಳ್ಳ ದುರ್ಬಲ ಮನಸ್ಕನನ್ನು [ಊರ್ಣುಥಃ] ಉದ್ಧರಿಸಿರಿ.
     ಪಾಠಕರು ಈ ಎರಡು ಮಂತ್ರಗಳ ಮೇಲೂ ಪೂರ್ಣ ಗಮನ ನೀಡಬೇಕು. ಬಲಿವೈಶ್ವದೇವ - ಎಂದರೆ, ಅಗ್ನಿಯಲ್ಲಿ ಸ್ವಲ್ಪ ಮಧುರಖಾದ್ಯಗಳನ್ನರ್ಪಿಸಿ, "ಆಯಿತು" ಎಂದುಕೊಳ್ಳುವುದಲ್ಲ. ಕುಲ-ಜಾತಿಗಳ ಪ್ರಶ್ನೆಯಲ್ಲ. ಸಮಾಜದಲ್ಲಿ ಶಾರೀರಿಕ-ಮಾನಸಿಕ ವ್ಯಾಧಿಗಳಿಗೆ ತುತ್ತಾದವರಿರುತ್ತಾರೆ. ದೌರ್ಬಲ್ಯದಿಂದ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಲಾರದೆ, ದುರ್ಮಾರ್ಗಕ್ಕಿಳಿದವರಿರುತ್ತಾರೆ. ವೈದಿಕ ಧರ್ಮ "ಪಾಪಿಗಳನ್ನು ದೂರಕ್ಕಟ್ಟು" ಎಂದು ಹೇಳುವ ಸಂಕುಚಿತ ಮನೋಭಾವ ಬೆಳೆಸುವ ಜೀವನಪಥವಲ್ಲ. ಪರಮ ಔದಾರ್ಯ ಆರ್ಯತತ್ತ್ವದ ಜೀವ ಜೀವಾಳ. "ಪಾಪವನ್ನು ದ್ವೇಷಿಸು! ಪಾಪಿಯನ್ನಲ್ಲ" ಎನ್ನುವುದು ವೇದೋಕ್ತ ಜೀವನಾದರ್ಶ. ಧೂರ್ತಿಃ ಪ್ರಣಜ್ ಮರ್ತ್ಯಸ್ಯ || (ಋಕ್.೧.೧೮.೩) - ಮಾನವನ ಧೂರ್ತತನ ನಾಶವಾಗಲಿ - ಎನ್ನುವುದೇ ವೇದಾದರ್ಶ. ಅಥರ್ವವೇದ ಹೇಳುತ್ತದೆ:-
ಸಂ ವೋ ಮನಾಂಸಿ ಸಂ ವ್ರತಾ ಸಮಾಕೂತೀರ್ನಮಾಮಸೀ | 
ಅಮೀ ಯೇ ವಿವ್ರತಾ ಸ್ಥನ ತಾನ್ವಃ ಸಂ ನಮಯಾಮಸಿ || (ಆಥರ್ವ.೬.೯೪.೧)
     [ವಃ ಮನಾಂಸಿ] ನಿಮ್ಮ ಮನಸ್ಸುಗಳು, [ಸಮ್] ಒಳಿತಾಗಿ, ಒಂದಾಗಿ ಇರಲಿ. [ವ್ರತಾ] ಸಂಕಲ್ಪಗಳೂ ಕೂಡ ಒಳಿತಾಗಿ, ಒಂದಾಗಿರಲಿ. [ನಮಾಮಸಿ] ನಾವು ವಿನೀತರಾಗಿ ನಡೆದುಕೊಳ್ಳುತ್ತೇವೆ. [ವಃ] ನಿಮ್ಮ ಮಧ್ಯೆ [ಯೇ ಅಮೀ] ಯಾವ ಈ ಜನರು [ವಿವ್ರತಾಃಸ್ಥನ] ವಿರುದ್ದ ಸಂಕಲ್ಪವುಳ್ಳವರಾಗಿರುತ್ತಾರೋ [ತಾನ್] ಅವರನ್ನು [ಸಮ್] ಒಳಿತಾದ ರೀತಿಯಲ್ಲಿ [ನಮಯಾಮಸಿ] ವಿನೀತರನ್ನಾಗಿ ಮಾಡುತ್ತೇವೆ. ಮಾತ್ರವಲ್ಲ, ಇದನ್ನೂ ಕೇಳಿರಿ:-
ತ್ರಾಯಂತಾಮಿಮಂ ದೇವಾಸ್ತ್ರಾಯಂತಾಂ ಮರುತಾಂ ಗಣಾಃ |
ತ್ರಾಯಂತಾಂ ವಿಶ್ವಾ ಭೂತಾನಿ ಯಥಾಯಮರಪಾ ಅಸತ್ || (ಅಥರ್ವ.೬.೯೪.೧)
     [ಯಥಾ ಅಯಂ ಅರಪಾಃ ಅಸತ್] ಈ ಪಾಪಿಯು ನಿಷ್ಪಾಪನಾಗುವಂತೆ [ದೇವಾಃ] ವಿದ್ವಜ್ಜನರು [ಇಮಂ ತ್ರಾಯಂತಾಮ್] ಇವನನ್ನು ರಕ್ಷಿಸಲಿ. [ಮರುತಾಂ ಗಣಾಃ] ಸಂಯಮಿಗಳು [ತ್ರಾಯಂತಾಮ್] ರಕ್ಷಿಸಲಿ. [ವಿಶ್ವಾ ಭೂತಾನಿ] ಸಮಸ್ತ ಪ್ರಾಣಿಗಳು, [ತ್ರಾಯಂತಾಮ್] ರಕ್ಷಿಸಲಿ.
     ಕ್ಷಯ-ಕುಷ್ಠ ಮೊದಲಾದವು ಶಾರೀರಿಕ ರೋಗಗಳಾದರೆ, ಉನ್ಮಾದ-ಅಪಸ್ಮಾರ ಮೊದಲಾದವು ಮಾನಸಿಕ ರೋಗಗಳಾದರೆ, ಪಾಪ ಆತ್ಮಿಕ ರೋಗ. ಈ ಬಗೆಯ ರೋಗಗಳಿಂದ ಗ್ರಸ್ತರಾದವರೂ ಗೃಹಸ್ಥ-ಗೃಹಿಣಿಯರ ಸಹಾನುಭೂತಿ, ಸೇವಾ-ಶುಶ್ರೂಷೆಗಳಿಗೆ ಪಾತ್ರರೇ ಸರಿ. ಬಲಿವೈಶ್ವದೇವಯಜ್ಞ ವಿಶ್ವದೇವನ ಮಕ್ಕಳೇ ಆದ ಪಶು-ಪಕ್ಷಿಗಳಿಗೂ, ವ್ಯಾಧಿಗ್ರಸ್ತ ಪಾಪಿಷ್ಠ ಮಾನವರಿಗೂ ಭಾಗವನ್ನೆತ್ತಿಡುವ ಈ ಶುಭಕರ್ಮ, ಮನೆಮನೆಯಲ್ಲಿಯೂ ಆಚರಿಸಲ್ಪಟ್ಟರೆ, ಅದೆಷ್ಟು ಸಂಘ-ಸಂಸ್ಥೆ-ಸಮಾಜಗಳನ್ನು ದೀನಹೀನರ ಉದ್ಧಾರಕ್ಕಾಗಿ ಕಟ್ಟಬಹುದೋ?
     ಈ ದೈನಿಕ ಪಂಚಮಹಾಯಜ್ಞಗಳು ವೈದಿಕ ಧರ್ಮವನ್ನು ಜೀವಂತವಾಗಿಡಲು ಅನಿವಾರ್ಯವಾಗಿ ಗೃಹಸ್ಥರೆಲ್ಲರಿಂದಲೂ ಆಚರಿಸಲ್ಪಡಬೇಕು. ಆಗ ಇಹವೂ ಸುಖಮಯ, ಪರವೂ ಸ್ವಯಂಸಿದ್ಧ.
-ಪಂ. ಸುಧಾಕರ ಚತುರ್ವೇದಿ.