ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 19, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೮:

     ಉಪಾಸನಾ -  ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ. ಆಲಿಸಿರಿ:-
ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ |
ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ || (ಯಜು. ೩೭.೨.)
     [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ [ವಿಪಶ್ಚಿತಃ] ವಿದ್ವಾಂಸರು [ಬೃಹತಃ ವಿಪ್ರಸ್ಯ] ಮಹಾನ್ ಹಾಗೂ ವಿಶಿಷ್ಟ ಪ್ರಜ್ಞನಾದ ಪ್ರಭುವಿನಲ್ಲಿ [ಮನಃ ಯುಂಜತೇ] ಮನಸ್ಸನ್ನು ನಿಲ್ಲಿಸುತ್ತಾರೆ. [ಉತ] ಹಾಗೆಯೇ [ಧಿಯಃ ಯುಂಜತೇ] ಬುದ್ಧಿಗಳನ್ನು ನಿಲ್ಲಿಸುತ್ತಾರೆ. [ಏಕ ಇತ್ ವಯುನಾವಿತ್] ಏಕಮಾತ್ರ ಪಥಜ್ಞನೂ, ಲೋಕಜ್ಞನೂ ಆದ ಪ್ರಭುವು [ಹೋತ್ರಾ] ಸಂಯೋಗಜನ್ಯವಾದ ನಾನಾ ಜಗತ್ತುಗಳನ್ನು [ವಿದಧೇ] ವಿವಿಧ ರೀತಿಯಲ್ಲಿ ಧರಿಸಿದ್ದಾನೆ. [ಸವಿತುಃ ದೇವಸ್ಯ] ಜಗದುತ್ಪಾದಕ ಹಾಗೂ ಪ್ರೇರಕನಾದ, ಸರ್ವದಾತೃ, ಪ್ರಕಾಶಸ್ವರೂಪ ಭಗವಂತನ, [ಪರಿಸ್ತುತಿಃ ಮಹೀ] ಉನ್ನತ ಸ್ತುತಿ ಮಹತ್ತಾದುದು. 
     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗೆಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ.
***************
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಆಗಸ್ಟ್ 9, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೭:

     ಇನ್ನು ಧರ್ಮದ ಮೂರನೆಯ ಅವಿಚ್ಛಿನ್ನ ಅಂಗ, ವೈದಿಕ ಭಾಷೆಯಲ್ಲಿ ಇದನ್ನು ಉಪಾಸನಾ ಎನ್ನುತ್ತಾರೆ. ಭಕ್ತಿ, ಪೂಜೆ ಇದೆಲ್ಲಾ ಈಚೀಚೆಗೆ ಉದ್ಭವಿಸಿದ ಶಬ್ದಗಳು. ಜೀವಾತ್ಮನು ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಸರ್ವಥಾ ಬೇರ್ಪಡಿಸಿ, ರೂಪ, ರಸ, ಗಂಧ, ಶಬ್ದ, ಸ್ಪರ್ಷ - ಈ ಐದು ಇಂದ್ರಿಯ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾತ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ಪ್ರಭುಸಾಮೀಪ್ಯವನ್ನು ಅನುಭವಿಸುವ ಕ್ರಿಯೆಯನ್ನೇ ಉಪಾಸನೆ ಎನ್ನುತ್ತಾರೆ. ವೈದಿಕ ಧರ್ಮದಲ್ಲಿ ಜೀವಂತ ಮೂರ್ತಿಗಳಾದ ತಾಯಿ-ತಂದೆ-ಆಚಾರ್ಯ-ಗುರು-ಹಿರಿಯರು ಇವರ ಪೂಜೆಗೆ, ಅಂದರೆ ಅವರ ಸತ್ಕಾರಕ್ಕೆ ಅವಕಾಶವಿದೆಯೇ ಹೊರತು, ಜಡಧಾತುಗಳ, ಕಲ್ಲು-ಮರಗಳ ವಿಗ್ರಹಗಳನ್ನು ದೇವರೆಂದು ತಿಳಿದು, ಧೂಪ-ದೀಪ-ನೈವೇದ್ಯಾದಿಗಳಿಂದ ಅರ್ಚಿಸುವ ಪದ್ಧತಿಗೆ ಅವಕಾಶವೇ ಇಲ್ಲ. ಪರಮಾತ್ಮನು ಸರ್ವವ್ಯಾಪಕ. ಅದೇ ಕಾರಣದಿಂದ ಸರ್ವಥಾ ನಿರಾಕಾರ. ಅವನು ಅವತಾರವನ್ನು ಎತ್ತುವ ಸಂಭವವಿಲ್ಲ ಎಂದು ಪಾಠಕರು ಮೊದಲೇ ಅರಿತಿದ್ದಾರೆ. ನಿರಾಕಾರನ ಮೂರ್ತಿ ರಚನೆ ಸರ್ವಥಾ ಅಸಂಭವ. ಚಿತ್ತದ ಏಕಾಗ್ರತೆಯ ಸಾಧನೆಗಾಗಿ ಮೂರ್ತಿಪೂಜೆ ಎಂದರೆ, ವ್ಯಾಪ್ಯದಲ್ಲಿ ಮನಸ್ಸನ್ನು ನಿಲ್ಲಿಸಲು ಕಲಿತರೂ, ವ್ಯಾಪಕನ ಧ್ಯಾನಕ್ಕೆ ಅದು ನೆರವಾಗಲಾರದು. ಅಲ್ಲದೆ ಉಪಾಸನೆ ಮಾಡುವುದು ಬೇರೆ ಎಲ್ಲಿಯೂ ಸಿಗದ ಆನಂದವನ್ನು ತುಂಬಿಕೊಳ್ಳುವುದಕ್ಕಾಗಿ. ಹೀಗಿರುವಾಗ, ಸಚ್ಚಿದಾನಂದ ಸ್ವರೂಪನಾದ ಪ್ರಭುವಿಗೆ ಬದಲು ನಿರಾನಂದನಾದ ಪ್ರಕೃತಿಯಲ್ಲಿ, ಪ್ರಾಕೃತ ವಿಗ್ರಹಗಳಲ್ಲಿ ಚಿತ್ತ ನಿಲ್ಲಿಸಲು ಕಲಿತು ಸಾಧಿಸುವುದಾದರೂ ಏನಿದೆ? ಸಚ್ಚಿತ್ಸ್ವರೂಪನಾದ ಜೀವ, ಸತ್ವರೂಪಿಣಿಯಾದ ಪ್ರಕೃತಿಗಿಂತ ಶ್ರೇಷ್ಠನಾಗಿರುವುದರಿಂದ, ವಿಗ್ರಹಗಳ ಮುಂದೆ ತಲೆ ಬಾಗುವುದರಲ್ಲಿ ಆತ್ಮಾಪಮಾನ ಒಂದನ್ನು ಬಿಟ್ಟು ಬೇರಾವ ಮಹತ್ವವಿದೆ?
     ವೇದಗಳಲ್ಲಿ ಮೂರ್ತಿಪೂಜಾ ವಿಧಾನವಿಲ್ಲ. ಅದಕ್ಕೆ ವಿರುದ್ಧವಾಗಿ, ಈ ಕೆಳಗಿನ ಮಂತ್ರದಂತಹ ವಿಚಾರ ಪ್ರಚೋದಕವಾದ ಮಂತ್ರಗಳು ಸಿಕ್ಕುತ್ತವೆ.
ಪ್ರ ತುವಿದ್ಯುಮ್ನಸ್ಯ ಸ್ಥವಿರಸ್ಯ ಘೃಷ್ವೇರ್ದಿವೋ ರರಪ್ಶೇ ಮಹಿಮಾ ಪೃಥಿವ್ಯಾಃ |
ನಾಸ್ಯ ಶತ್ರುರ್ನ ಪ್ರತಿಮಾನಮಸ್ತಿ ನ ಪ್ತತಿಷ್ಠಿಃ ಪುರುಮಾಯಸ್ಯ ಸಹ್ಯೋಃ || (ಋಕ್. ೬.೧೮.೧೨.)
     [ಪ್ರ ತುವಿದ್ಯುಮ್ನಸ್ಯ] ಮಹಾವೇಗಯುಕ್ತ ಶಕ್ತಿಸಂಪನ್ನನೂ [ಸ್ಥವಿರಸ್ಯ] ಅನಾದಿಯೂ, {ಘೃಷ್ವೇಃ] ಪರಮಾಣುಗಳಲ್ಲಿ ಚಲನೆ ನೀಡುವವನೂ ಆದ ಪರಮಾತ್ಮನ, [ಮಹಿಮಾ] ಮಹಿಮೆಯು, [ದಿವಃ ಪೃಥಿವ್ಯಾಃ ರರಪ್ಯೇ] ದ್ಯುಲೋಕ, ಪೃಥಿವೀ ಲೋಕಗಳನ್ನು ಮೀರಿಸಿದೆ. [ಅಸ್ಯ ಪುರುಮಾಯ ಸಹ್ಯೋಃ] ಈ ಮಹಾಪ್ರಜ್ಞನೂ, ಸಹನಶೀಲನೂ ಆದ ಪ್ರಭುವಿನ, [ಶತ್ರುಃ] ಶತ್ರುವು, [ನ] ಯಾವನೂ ಇಲ್ಲ. [ಪ್ರತಿಮಾನಂ ನ ಅಸ್ತಿ] ಪ್ರತಿಮಾನವೂ ಇಲ್ಲ. [ಪ್ರತಿಷ್ಠಿಃ ನ] ಆಧಾರವೂ ಇಲ್ಲ.
     ಇಷ್ಟು ಸ್ಪಷ್ಟವಾಗಿ ಪ್ರತಿಮಾರ್ಚನದ ನಿರಾಕರಣ ವೇದಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಯ ಏಕ ಇತ್ ತಮುಷ್ನುಹಿ (ಋಕ್.೬.೪೫.೧೬.) - ಯಾವನು ಕೇವಲ ಒಬ್ಬನೇ ಒಬ್ಬನಿದ್ದಾನೋ, ಅವನನ್ನು ಮಾತ್ರ ಸ್ತುತಿಸು
ಮಾ ಚಿದನ್ಯದ್ ವಿ ಶಂಸತ ಸಖಾಯೋ ಮಾ ರಿಷಣ್ಯತ |
ಇಂದ್ರಮಿತ್ ಸ್ರೋತಾ ವೃಷಣಂ ಸಚಾ ಸುತೇ ಮುಹುರುಕ್ಥಾ ಚ ಶಂಸತ || (ಋಕ್. ೮.೧.೧.)
     [ಅನ್ಯತ್ ಚಿತ್] ಬೇರಾವುದನ್ನೂ [ಮಾ ವಿಶಂಸತಾ] ಪ್ರಶಂಸಿಸಬೇಡಿ. [ಸಖಾಯಃ] ಮಿತ್ರರೇ, [ಮಾ ರಿಷಣ್ಯತಾ] ನಾಶ ಹೊಂದಬೇಡಿ. [ಸುತೇ ಸಜಾ] ಈ ಸೃಷ್ಟಿಯಲ್ಲಿ ಒಟ್ಟಾಗಿ [ವೃಷಣಂ ಇಂದ್ರಂ ಇತ್] ಸುಖವರ್ಷಕನಾದ ಇಂದ್ರನನ್ನು, ಸರ್ವಶಕ್ತಿಮಾನ್ ಪ್ರಭುವನ್ನು ಮಾತ್ರ [ಶಂಸತ] ಸ್ತುತಿಸಿರಿ. [ಮುಹುರುಕ್ಥಾ ಚ] ಮತ್ತು ಬಾರಿ ಬಾರಿ ಸ್ತುತಿಪರರಾಗಿ [ಶಂಸತ] ಸ್ತುತಿಸಿರಿ.
    ಈ ರೀತಿ ಕೇವಲ ಒಬ್ಬನೇ ಪ್ರಭುವನ್ನು ಮಾತ್ರ ಸ್ತುತಿಸಿರಿ ಎಂದು ವೇದಗಳು ಸ್ಪಷ್ಟ ಆದೇಶ ನೀಡುತ್ತವೆ.
    ಹೀಗೆ ಜಡಾರ್ಚನೆ ಪರಿತ್ಯಾಜ್ಯ. ಚೇತನೋಪಾಸನೆಯೇ ವೇದೋಕ್ತ ಕ್ರಿಯೆ. ಉಪಾಸನಾ - ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ.
*****************
ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಆಗಸ್ಟ್ 2, 2011

ಇಂತಹವರೂ ಇರುತ್ತಾರೆ!

     ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬರುವವರು ಇರಬಹುದು. ಆದರೆ ಪರಿಚಯವೇ ಇಲ್ಲದ, ಇಂತಹ ಸಮಸ್ಯೆ ಇರುವ ಯಾರಾದರೂ ಕಡುಬಡವರಿಗೆ ತಾವು ಬದುಕಿರುವಾಗಲೇ ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬಂದವರನ್ನು ಕಂಡಿದ್ದೀರಾ? ಅಂತಹ ಧೀಮಂತ ಮಹಿಳೆಯೊಬ್ಬರು ಇದ್ದಾರೆ, ಅವರೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಶ್ರೀಮತಿ ಶಕುಂತಲಾ ಮಂಜುನಾಥರವರು.
               ಪತಿ ಮಂಜುನಾಥ ಮತ್ತು ಮಗ ಪ್ರವೀಣನೊಂದಿಗೆ ಶ್ರೀಮತಿ ಶಕುಂತಲಾ.
     ಸಾಣೇನಹಳ್ಳಿ ಶ್ರೀಗಳು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ನೇತ್ರದಾನ ಶಿಬಿರವೊಂದರಲ್ಲಿ ನೇತ್ರದಾನ ಮಾಡಲು ಮುಂದೆ ಬಂದ ಹಲವರು ಆ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಬರೆದುಕೊಡುತ್ತಿದ್ದರು. ಶ್ರೀಮತಿ ಶಕುಂತಲಾ ಮಂಜುನಾಥರವರು ಬರೆದುಕೊಟ್ಟ ಪತ್ರದಲ್ಲಿದ್ದ ಒಕ್ಕಣೆ:
     "ನಾನು ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ. ಇದು ನಾನು ಮೃತಳಾದ ಮೇಲೆ ಆಗುವ ಕಾಯಕ. ಆದರೆ ನಾನು ಜೀವಿತಾವಧಿಯಲ್ಲೇ ಕಡುಬಡವರಿಗೆ ನನ್ನ ಒಂದು ಮೂತ್ರಪಿಂಡ ಕಿಡ್ನಿ ಕೊಡಲು ಬಯಸಿದ್ದೇನೆ. ದಯವಿಟ್ಟು ಇದಕ್ಕೆ ಅವಕಾಶ ಕಲ್ಪಿಸಿಕೊಡಿ."
     ಈ ವಿಷಯವನ್ನು ಸಂಬಂಧಿಸಿದ ಸಂಸ್ಥೆ/ಆಸ್ಪತ್ರೆಗೆ ತಿಳಿಸುವ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ. ಅಲ್ಲದೆ ಬಡವರಿಗೆ ಒದಗುವ ಖರ್ಚು ಹೊಂದಿಸಲು ಅವರಿಗೆ ಆಗದೇ ಇರಬಹುದಾದ್ದರಿಂದ, ಸ್ವಾಮಿಗಳಿಗೆ ಹೇಳಿದರೆ ಅವರು ಸಹಕಾರ ನೀಡಿ ಒಳ್ಳೆಯದಾಗಬಹುದೆಂಬ ಕಾರಣದಿಂದ ಅವರಿಗೆ ಪತ್ರ ಬರೆದುಕೊಟ್ಟಿದ್ದರು. ೫೦ ವರ್ಷದ ಶ್ರೀಮತಿ ಶಕುಂತಲಾ ಮಂಜುನಾಥರವರ ಪತಿ ಮಂಜುನಾಥರವರು ಒಬ್ಬ ಸಾಮಾನ್ಯ ರೈತ, ತೃಪ್ತ ಜೀವನ ನಡೆಸುತ್ತಿರುವವರಾಗಿದ್ದು ಪತ್ನಿಯ ನಿರ್ಧಾರದ ಬಗ್ಗೆ ಅವರ ಸಂಪೂರ್ಣ ಸಮ್ಮತಿ ಇದೆ. ಅವರ ಇಬ್ಬರು ಹೆಣ್ಣುಮಕ್ಕಳ ಮದುವೆ ಆಗಿದೆ. ಒಬ್ಬ ಗಂಡು ಮಗ ಪ್ರವೀಣ ತಾಯಿ ಮಾಡುವುದಾಗಿ ಹೇಳಿರುವ ಕೆಲಸ ಒಳ್ಳೆಯದಾಗಿದ್ದು ತಾನು ಏನೂ ಹೇಳುವುದಿಲ್ಲವೆನ್ನುತ್ತಾನೆ.
     ನೊಂದವರಿಗಾಗಿ ಮಿಡಿಯುವ ಹೃದಯವೀಣೆಯ ನಾದ ಎಲ್ಲರಿಗೂ ಕೇಳಲಿ, ಇತರರೂ ಪ್ರೇರಿತರಾಗಲಿ ಎಂಬುದೇ ಈ ಕಿರುಬರಹದ ಉದ್ದೇಶ.
********************
-ಕ.ವೆಂ.ನಾಗರಾಜ್.
(ಆಧಾರ: ವಿಜಯ ಕರ್ನಾಟಕ - ದಿ. ೧೦-೦೭-೨೦೧೧).

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೬:

     ಕರ್ಮ ಒಂದು ಬಗೆಯಲ್ಲ, ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸಿರುತ್ತದೆ. ಕರ್ಮ, ಪರರಿಗೆ ಕೇಡಾಗದಂತೆ ತನ್ನ ಹಿತಕ್ಕಾಗಿ, ಸರ್ವಮುಖೀ ಉನ್ನತಿಗಾಗಿ ಮಾಡುವ, ಪರರ ಸರ್ವಮುಖೀ ಉನ್ನತಿಗಾಗಿ ನೆರವಾಗಿ ನಿಂತು ಮಾಡುವ, ಎಲ್ಲ ಕ್ಷೇತ್ರಗಳಲ್ಲಿನ ಕರ್ತವ್ಯಗಳೂ ವೇದಗಳ ದೃಷ್ಟಿಯಲ್ಲಿ ಅವಶ್ಯವಾಗಿ ಮಾಡಲ್ಪಡಲೇಬೇಕಾದುದಾಗಿದೆ. ಅದರಲ್ಲಿಯೂ ರಾಷ್ಟ್ರದ ಹಿತ ಎದುರು ನಿಂತಾಗ ತನ್ನ ಹಿತದ ಸ್ವಾರ್ಥವನ್ನೂ ಬಿಟ್ಟು ಕೇವಲ ಪರಾರ್ಥವನ್ನೇ ನೋಡಬೇಕಾಗುವುದು. ಕರ್ತವ್ಯಕ್ಷೇತ್ರದಿಂದ ಸಂನ್ಯಾಸದ ಅಥವಾ ತ್ಯಾಗದ ಹೆಸರಿನಲ್ಲಿ ಓಡಿಹೋಗುವ ಪ್ರಶ್ನೆ ವೈದಿಕ ಧರ್ಮದಲ್ಲಿ ಇಲ್ಲವೇ ಇಲ್ಲ. ಇಂತಹ ಸಮಸ್ತ ಕರ್ತವ್ಯಗಳನ್ನೂ ಒಟ್ಟು ಸೇರಿಸಿ, ವೇದಗಳು ಯಜ್ಞ ಎಂದು ಕರೆಯುತ್ತವೆ ಮತ್ತು ಯಜ್ಞದ ಬಗೆಗೆ ಈ ಸಂದೇಶವನ್ನು ನೀಡುತ್ತದೆ :-
ಯಜ್ಞೋ ಹಿ ತ ಇಂದ್ರ ವರ್ಧನೋ ಭೂದುತ ಪ್ರಿಯಃ ಸುತಸೋಮೋ ಮಿಯೇಧಃ |
ಯಜ್ಞೇನ ಯಜ್ಞಮವ ಯಜ್ಞಿಯಃ ಸನ್ ಯಜ್ಞಸ್ತೇ ವಜ್ರಮಹಿಹತ್ಯ ಆವತ್ || (ಋಕ್. ೩.೩೨.೧೨.)
     [ಇಂದ್ರ] ದೇಹಾಧೀಶನಾದ, ಇಂದ್ರಿಯವಾನ್ ಜೀವ! [ಹಿ] ನಿಜವಾಗಿ [ಯಜ್ಞಃ] ಯಜ್ಞವೇ [ತೇ ವರ್ಧನಃ] ನಿನಗೆ ಅಭಿವೃದ್ಧಿಕಾರಕವೂ [ಉತ] ಮತ್ತು [ಪ್ರಿಯಃ] ಪ್ರಿಯಕರವೂ [ಸುತಸೋಮಃ] ಹಿಂಡಲ್ಪಟ್ಟ ಆನಂದರಸವನ್ನುಳ್ಳದ್ದೂ [ಮಿಯೇಧಃ] ಮೈತ್ರಿಯನ್ನು ವರ್ಧಿಸತಕ್ಕುದೂ [ಭೂತ್] ಆಗಿದೆ. [ಯಜ್ಞಿಯಃ ಸನ್ ಯಜ್ಞೇನ] ಯಜ್ಞಕರ್ತೃವಾಗಿ ಸತ್ಕರ್ಮದಿಂದಲೇ [ಯಜ್ಞಂ ಅವ] ಯಜ್ಞವನ್ನು, ಸತ್ಕರ್ಮವನ್ನು ರಕ್ಷಿಸು. [ಅಹಿ ಹತ್ಯೇ] ಕುಟಿಲತನವನ್ನು ನಾಶಮಾಡುವುದರಲ್ಲಿ [ಯಜ್ಞಃ] ಯಜ್ಞವು [ತೇ ವಜ್ರಮ್] ನಿನ್ನ ವಜ್ರಾಯುಧವಾಗಿ [ಆ ಆವತ್] ರಕ್ಷಿಸುತ್ತದೆ.
     ಎಂತಹ ಭವ್ಯ ಆದೇಶ! ಸತ್ಕರ್ಮದಿಂದ ನಮ್ಮ ಆತ್ಮಗಳ ರಕ್ಷಣೆಯೂ ಆಗುತ್ತದೆ. ಯಜ್ಞವನ್ನು ನಾವು ರಕ್ಷಿಸಿದರೆ, ಯಜ್ಞ ನಮ್ಮನ್ನು ರಕ್ಷಿಸುತ್ತದೆ. ಯಜ್ಞ-ಸತ್ಕರ್ಮ, ಧರ್ಮದ ಕ್ರಿಯಾತ್ಮಕ ರೂಪ. ಸತ್ಕರ್ಮದಿಂದ ಪುಷ್ಟೀಕರಿಸಲ್ಪಡದ ಜ್ಞಾನ, ಕೇವಲ ಗ್ರಾಂಥಿಕ ಜ್ಞಾನವಾಗಿ ತಲೆಯಲ್ಲೇ ಉಳಿದುಹೋಗುತ್ತದೆ. ಅದೊಂದು ನಿರರ್ಥಕ ಭಾರವಾಗಿ ಪರಿಣಮಿಸುತ್ತದೆ. ಆದಕಾರಣ, ಜ್ಞಾನವನ್ನು ಸಾರ್ಥಕಪಡಿಸಲು ಸತ್ಕರ್ಮಗಳನ್ನು ಮಾಡುತ್ತಲೇ ಜೀವನ ಪೂರ್ತ ಉಸಿರಾಡಲಿಚ್ಛಿಸಬೇಕು.
*****************
-ಪಂ. ಸುಧಾಕರ ಚತುರ್ವೇದಿ

ಸೋಮವಾರ, ಆಗಸ್ಟ್ 1, 2011

ವೇದ ವಿಚಾರ ಚಿಂತನ - ಒಂದು ಸಾರ್ಥಕ ಕಾರ್ಯಕ್ರಮ

     ಬೇಲೂರಿನ ಶ್ರೀ ವಿಶ್ವನಾಥ ಶರ್ಮರು ಕಳೆದ ವಾರ ದೂರವಾಣಿ ಮೂಲಕ ೩೧-೦೭-೨೦೧೧ ರ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ಹಲವಾರು ಆಸಕ್ತರು ವೇದಾಭ್ಯಾಸ ಮಾಡುತ್ತಿದ್ದು, ಕಲಿಯಲು ಪ್ರಾರಂಭಿಸಿ ಒಂದು ವರ್ಷ ಪೂರ್ಣಗೊಂಡ ನಿಮಿತ್ತ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ಕೋರಿದ್ದರು. ಚನ್ನರಾಯಪಟ್ಟಣದ ಚೈತನ್ಯ ವಿದ್ಯಾಸಂಸ್ಥೆಯ ಮುಖ್ಯಸ್ಥರು ಶ್ರೀ ರಮೇಶ್‌ರವರೂ ಸಹ ದೂರವಾಣಿ ಮುಖೇನ ಆಹ್ವಾನಿಸಿದ್ದಲ್ಲದೆ ಆಹ್ವಾನ ಪತ್ರಿಕೆ ಸಹ ಕಳಿಸಿದ್ದರು. ನನಗೂ ಸಹ ವಿಷಯ ಆಸಕ್ತಿದಾಯಕವಾದುದಾದ್ದರಿಂದ ಅಂದು ಬೆಳಿಗ್ಗೆ ೭-೧೫ರ ಬಸ್ಸಿಗೆ ಹೊರಟು ೮-೧೫ಕ್ಕೆ ಸ್ಥಳದಲ್ಲಿದ್ದೆ. ಕಾರ್ಯಕ್ರಮ ಬೆ. ೮-೩೦ಕ್ಕೆ ಆರಂಭವಾಗುತ್ತಿದ್ದರಿಂದ ಪೂರ್ಣ ಕಾರ್ಯಕ್ರಮ ವೀಕ್ಷಿಸುವ ಉದ್ದೇಶ ನನಗಿದ್ದರಿಂದ ಸಕಾಲದಲ್ಲಿ ಅಲ್ಲಿದ್ದೆ. ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಅಲ್ಲಿ ಬಂದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುವೆ.

    
     ವೈದಿಕ ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಾಲ್ಕು ದಂಪತಿಗಳು ಭಾಗವಹಿಸಿದ್ದ ಅಗ್ನಿಹೋತ್ರದ ಮಹತ್ವವನ್ನು ವೇದತರಂಗ ಮಾಸಪತ್ರಿಕೆಯ ಸಂಪಾದಕರಾದ ಬೆಂಗಳೂರಿನ ಶ್ರೀ ಶ್ರುತಿಪ್ರಿಯರವರು ವಿವರಿಸಿದ್ದಲ್ಲದೆ ಪ್ರತಿಮಂತ್ರದ ಅರ್ಥವನ್ನು ಮನಮುಟ್ಟುವಂತೆ ತಿಳಿಹೇಳಿದರು. ಸಮರ್ಪಣಾ ಮನೋಭಾವದಿಂದ ಮಾಡುವ ಅಗ್ನಿಹೋತ್ರದಿಂದ ಆಂತರಿಕ ಹಾಗೂ ಬಾಹ್ಯ ಶುದ್ಧಿಗೆ, ಪರಿಸರ ಶುದ್ಧಿಗೆ ಹೇಗೆ ಸಹಕಾರಿಯಾಗುವುದೆಂದು ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ರಮೇಶ್ ರವರು ವೇದಾಭ್ಯಾಸದ ಕಲಿಕೆ ಕಳೆದ ಒಂದು ವರ್ಷದಿಂದ ನಡೆದ ರೀತಿಯ ಬಗ್ಗೆ, ಅದು ಯಶಸ್ವಿಗೊಳ್ಳಲು ಕಾರಣರಾದವರ ಬಗ್ಗೆ ವಿಸ್ತೃತವಾಗಿ ತಿಳಿಸಿ ಸಂಬಂಧಿಸಿದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಸುಮಾರು ೪೦ ವೇದಾಭ್ಯಾಸಿಗಳು ಕಳೆದ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದು, ತಾವು ಕಲಿತ ಕೆಲವು ವೇದಮಂತ್ರಗಳನ್ನು ಸುಸ್ವರವಾಗಿ ಸಾಮೂಹಿಕವಾಗಿ ಹೇಳಿದ್ದು ಕಲಿಕೆಯ ಸಾರ್ಥಕತೆಯನ್ನು ತೋರಿಸಿತು.

     ಮುಖ್ಯಭಾಷಣ ಮಾಡಿದ ಶ್ರೀ ಶ್ರುತಿಪ್ರಿಯರವರು ಚಿಕ್ಕ ವಯಸ್ಸಿನ ಬಾಲಕರೂ ಸೇರಿದಂತೆ ಎಲ್ಲಾ ವಯೋಮಾನದವರೂ ಕಲಿಕೆಯಲ್ಲಿ ತೊಡಗಿದ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿ ಇದು ಇತರರಿಗೆ ಪ್ರೇರಣೆ ನೀಡುವ ಸಂಗತಿಯೆಂದರು. ವೇದ ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾಗಿರದೆ ಇಡಿಯ ಮನುಕುಲಕ್ಕೆ ಸೇರಿದ್ದಾಗಿದ್ದು, ಎಲ್ಲಾ ಜಾತಿಯವರೂ, ಮಹಿಳೆಯರೂ ವೇದಾಭ್ಯಾಸಕ್ಕೆ ತೊಡಗಬೇಕೆಂದು ಆಶಿಸಿದರು. ಜಾತಿ ವ್ಯವಸ್ಥೆಯ ವಿಷಯವನ್ನು ಭಾಷಣದ ಪ್ರಮುಖ ವಿಷಯವಾಗಿ ಆರಿಸಿಕೊಂಡ ಅವರು ಪ್ರಾಚೀನ ಕಾಲದ ವರ್ಣವ್ಯವಸ್ಥೆಯನ್ನು ಜಾತಿಗಳಾಗಿಸಿ, ಜಾತಿಭೇದ ಹುಟ್ಟುಹಾಕಿ, ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ ಇತ್ಯಾದಿಗಳಿಗೆ ಸಿಲುಕಿಸಲು ಅಜ್ಞಾನ ಮತ್ತು ಸಂಕುಚಿತ ಮನೋಭಾವವೇ ಕಾರಣವೆಂದು ವಿಶ್ಲೇಷಿಸಿದರು. ಜಾತಿ ಹುಟ್ಟಿನಿಂದಲ್ಲ, ಆಚರಣೆಯಿಂದ ಬರುತ್ತದೆ. ತಾವು ಮಾಡುವ ಕರ್ಮಕ್ಕನುಸಾರವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬುದಾಗಿ ಪರಿಗಣಿಸಲಾಗುತ್ತಿದ್ದು, ನಂತರದಲ್ಲಿ ಹುಟ್ಟಿನಿಂದ ಜಾತಿ ಎಂಬುದು ರೂಢಿಗತವಾಗಿ ಬಳಸಲ್ಪಟ್ಟು ವೇದವನ್ನು ತಿಳಿಯದವರು ದೂಷಿಸುವಂತೆ ಆದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ವೇದದಲ್ಲಿ ಎಲ್ಲೂ ಅಸಮಾನತೆಯ ಸೊಲ್ಲಿಲ್ಲ, ಮೇಲು-ಕೀಳುಗಳ ತಾರತಮ್ಯವಿಲ್ಲ, ನಿಜವಾಗಿ ವೇದೋಕ್ತ ರೀತಿಯಲ್ಲಿ ಜೀವನ ನಡೆಸಿದರೆ ಇಂತಹ ಕೀಳು ಆಚರಣೆಗಳು ನಶಿಸುವುದಾಗಿ ಅಭಿಪ್ರಾಯಪಟ್ಟರು. ಸ್ವತಃ ವೇದವ್ಯಾಸರು ಒಬ್ಬ ಬೆಸ್ತನ ಮಗ, ಕೌಂಡಿನ್ಯ ಋಷಿ ಮೂಲತಃ ಕ್ಷೌರಿಕ, ಮಹಾಪತಿವ್ರತೆಯಾಗಿದ್ದ ಅರುಂಧತಿ ಒಬ್ಬ ಅಂತ್ಯಜೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಕ್ಷತ್ರಿಯ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ಮುಂದಿಟ್ಟ ಅವರು ಮಾನವ ಕುಲದ ಏಕತೆಗೆ ವೇದ ಇದೆಯೇ ಹೊರತು ಮತ್ತೇನಲ್ಲವೆಂದರು. ಪರಮಾತ್ಮ ಎಲ್ಲವನ್ನೂ ಕೊಟ್ಟಿದ್ದಾನೆ, ಅದನ್ನು ಪಡೆಯುವ ಬಳಸುವ ರೀತಿಯನ್ನು ನಾವು ಕಲಿತುಕೊಳ್ಳಬೇಕಷ್ಟೆ ಎಂದ ಅವರು ನಮ್ಮ ಸ್ಥಿತಿ ಇಂದು ಬಂಗಾರದ ಬೆಟ್ಟದ ಮೇಲೆ ಕುಳಿತ ಭಿಕ್ಷುಕನಂತಿದೆಯೆಂದು ವಿಷಾದಿಸಿದರು. ಸತ್ಯವನ್ನು ಅರಿಯುವಲ್ಲಿ ಶ್ರದ್ಧೆ, ಬುದ್ಧಿ ಮತ್ತು ತರ್ಕದ ಸಮನ್ವಯವಾದರೆ ಸಾಧ್ಯವೆಂದರು.
     ಶ್ರೀ ವಿಶ್ವನಾಥ ಶರ್ಮರವರು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಆದೇಶದಂತೆ ತಾವು ಪ್ರತಿವಾರ ಚನ್ನರಾಯಪಟ್ಟಣಕ್ಕೆ ಬಂದು ವೇದಪಾಠ ಮಾಡುತ್ತಿದ್ದು, ಅನಿವಾರ್ಯವಾಗಿ ಬರಲಾಗದಿದ್ದ ಸಂದರ್ಭಗಳಲ್ಲಿ ಶ್ರೀ ನಾಗರಾಜಮೂರ್ತಿ, ಗೋಪಿನಾಥ ಶಾಸ್ತ್ರಿ, ವಿಶ್ವನಾಥ, ಮುಂತಾದವರು ಪಾಠ ಮತ್ತು ಅಭ್ಯಾಸ ನಿಲ್ಲದಂತೆ ನೋಡಿಕೊಂಡುದಕ್ಕೆ ಕೃತಜ್ಞತೆ ಹೇಳಿದರು. ತಾವು ಈ ಸ್ಥಿತಿಗೆ ಬರಲು ಕಾರಣೀಭೂತರಾದ ತಮ್ಮ ತಂದೆ-ತಾಯಿ ಮತ್ತು ಗುರುಗಳನ್ನು ಸ್ಮರಿಸಿಕೊಂಡರು. ಮನುರ್ಭವ - ಮಾನವನಾಗು ಎಂದು ವೇದ ಹೇಳುತ್ತದೆ. ತಾನು ಕಲಿತಿದ್ದನ್ನು ಇತರರಿಗೆ ತಿಳಿಸಿ ಜ್ಞಾನ ಪ್ರಸರಣ ಮಾಡುವುದು ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ತಾನು ಮಾಡುತ್ತಿದ್ದೇನೆ ಎಂದ ಅವರು ಪಿತೃ ಋಣ, ಮಾತೃ ಋಣ, ಗುರು ಋಣದಂತೆ ಸಮಾಜ ಋಣ ಸಹ ಇದ್ದು ಜ್ಞಾನ ಪ್ರಸರಣ ಕಾರ್ಯ ಸಮಾಜದ ಋಣ ತೀರಿಸುವ ಕೆಲಸವೆಂದು ವಿನಮ್ರರಾಗಿ ಹೇಳಿದರು.
     ಗೀತಗಾಯನ, ಧನ್ಯವಾದ ಸಮರ್ಪಣೆ, ಸಾಯಂಕಾಲದ ಅಗ್ನಿಹೋತ್ರ, ವೈದಿಕ ರಾಷ್ಟ್ರಗೀತೆ ಮತ್ತು ಶಾಂತಿ ಮಂತ್ರದೊಂದಿಗೆ ಹೀಗೊಂದು ಸಾರ್ಥಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಒಳ್ಳೆಯ ಭೋಜನದ ವ್ಯವಸ್ಥೆಯಾಗಿತ್ತು. ಈ ಕಾರ್ಯಕ್ರಮ ಆಯೋಜಿಸಿದ್ದ ಚೈತನ್ಯ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ರಮೇಶ್ ಮತ್ತು ಸತ್ಸಂಗದ ಎಲ್ಲಾ ಸಹಕಾರಿಗಳು, ವೇದಾಭ್ಯಾಸಿಗಳು, ಗುರುಗಳು ಅಭಿನಂದನಾರ್ಹರಾಗಿದ್ದಾರೆ.
******************
-ಕ.ವೆಂ.ನಾಗರಾಜ್.