ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಮಾರ್ಚ್ 28, 2015

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು - ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (28.3.2015) 118ವಸಂತಗಳನ್ನು ಕಂಡು 119ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ  ಇತಿಹಾಸದ ನೈಜ ಜೀವಂತ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು. ಹಾಸನದ ವೇದಭಾರತಿ ಅವರ ವಿಚಾರಗಳನ್ನು ಅನುಷ್ಠಾನಗೊಳಿಸುವತ್ತ ಪುಟ್ಟದಾದರೂ ದಿಟ್ಟ ಹೆಜ್ಜೆಯನ್ನಿಟ್ಟಿದೆ.
-ಕ.ವೆಂ.ನಾಗರಾಜ್.
**************
ಪಂಡಿತರೊಡನೆ: 
[ಮೂರು ವರ್ಷಗಳ ಹಿಂದಿನ ಫೋಟೋ]


ಬುಧವಾರ, ಮಾರ್ಚ್ 25, 2015

ಕೋಪವೋ? ತಾಪವೋ?


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು |
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ || 
     ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರರು. ಮದುವೆಯಾಗಿ ಕೆಲವು ವರ್ಷಗಳಷ್ಟೇ ಆಗಿತ್ತು. ಅನುರೂಪ ದಾಂಪತ್ಯ. 'ಹೇಳಿ ಮಾಡಿಸಿದ ಜೋಡಿ' ಎಂದು ನೋಡಿದವರು, ಅಕ್ಕ-ಪಕ್ಕದವರು ಹೇಳುತ್ತಿದ್ದರು. ಒಮ್ಮೆ ಯಾವುದೋ ವಿಷಯಕ್ಕೆ ಒಬ್ಬರಿಗೊಬ್ಬರಿಗೆ ಮಾತಿನ ಚಕಮಕಿ ನಡೆಯಿತು. ಗಂಡ ಸಿಟ್ಟಿನ ಭರದಲ್ಲಿ ಹೆಂಡತಿಯ ಕೆನ್ನೆಗೆ ಬಾರಿಸಿಬಿಟ್ಟ. ಸೂಕ್ಷ್ಮ ಸ್ಥಳಕ್ಕೆ ಪೆಟ್ಟು ಬಿದ್ದು ಆಕೆ ಅಲ್ಲೇ ಕುಸಿದು ಬಿದ್ದಳು. ದಿಗ್ಭ್ರಮೆಗೊಂಡ ಗಂಡ ಇನ್ನಿಲ್ಲದಂತೆ ಉಪಚರಿಸಿ, ಆಸ್ಪತ್ರೆಗೆ ತುರ್ತಾಗಿ ಕರೆದೊಯ್ದರೆ ಆಕೆ ಸತ್ತಿದ್ದನ್ನು ಅಲ್ಲಿ ಧೃಡಪಡಿಸಿದ್ದರಷ್ಟೆ. ಕ್ಷಣಿಕ ಸಿಟ್ಟು ಒಂದು ಪ್ರಾಣವನ್ನೇ ಬಲಿ ಪಡೆದಿತ್ತು. ಕ್ಷಣಿಕ ಸಿಟ್ಟಿನ ಆವೇಶ ಕೊಲೆ ಮಾಡಿಸುತ್ತದೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ, ಆಡಬಾರದ್ದನ್ನು ಆಡಿಸುತ್ತದೆ, ಮಾಡಬಾರದ್ದನ್ನು ಮಾಡಿಸುತ್ತದೆ. ಅರಿಷಡ್ವರ್ಗಗಳಲ್ಲಿ ಒಂದಾದ ಕೋಪದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
     "ಸಿಟ್ಟು ಬಂದಾಗ ಮಾತನಾಡಿದರೆ ನೀವು ಅತ್ಯುತ್ತಮವಾಗಿ ಮಾತನಾಡುತ್ತೀರಿ, ಎಷ್ಟೆಂದರೆ ಅದಕ್ಕಾಗಿ ನೀವು ಎಂದೆಂದಿಗೂ ವಿಷಾದಿಸುವಷ್ಟು!" ಎಂಬ ಡಾ. ಲಾರೆನ್ಸ್ ಜೆ.ಪೀಟರ್ ಹೇಳಿದ ಮಾತನ್ನು ಎಲ್ಲರೂ, ವಿಶೇಷವಾಗಿ ಗಣ್ಯರು ಎನಿಸಿಕೊಂಡವರು ಸದಾ ನೆನಪಿನಲ್ಲಿಡಬೇಕು. ಸಾಹಿತಿ ಅನಂತಮೂರ್ತಿಯವರು, "ಮೋದಿ ಪ್ರಧಾನ ಮಂತ್ರಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಟ್ಟಿನ ಕ್ಷಣದಲ್ಲಿ ಹೇಳಿದ್ದಷ್ಟೆ, ನಾನು ದೇಶ ಬಿಟ್ಟು ಹೋಗುವುದಿಲ್ಲ" ಎಂದು ಎಷ್ಟು ಸಲ ವಿವರಣೆ ಕೊಡಬೇಕಾಗಿ ಬಂದಿತು! ಅಲ್ಲದೆ ಅವರಿಗೆ ಪೋಲಿಸ್ ರಕ್ಷಣೆ ಸಹ ಬೇಕಾಯಿತು! ಮೋದಿಯವರನ್ನು 'ನರಹಂತಕ' ಎಂದದ್ದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ವಿವರಣೆ ಕೊಡಬೇಕಾಯಿತು ಮತ್ತು ಈಗ ಮೋದಿಯವರ ಭಾವಚಿತ್ರವನ್ನು ತಮ್ಮ ಕೊಠಡಿಯಲ್ಲಿ ಹಾಕಿಕೊಳ್ಳಬೇಕಾದ ಮುಜುಗರದ ಸನ್ನಿವೇಶ ಎದುರಾಗಿದೆ. ಅಸಹನೆಯಿಂದ ಒಡಮೂಡಿದ ಸಿಟ್ಟಿನಲ್ಲಿ ಇಂತಹುದೇ ಮಾತುಗಳನ್ನಾಡಿದ ಇತರ ಗಣ್ಯರುಗಳೂ ತಮ್ಮ ಮಾತುಗಳನ್ನು ತಾವೇ  ನುಂಗಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದನ್ನೂ ಕಂಡಿದ್ದೇವೆ. ಸಿಟ್ಟು ವಿವೇಕವನ್ನು ಹಾಳುಗೆಡವುತ್ತದೆ ಎಂಬುದಕ್ಕೆ ಇವು ಉದಾಹರಣೆಯಾಗುತ್ತವೆ.
ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ || 
     ಕೋಪ ಅನ್ನುವುದು ಸುಮ್ಮ ಸುಮ್ಮನೆ ಕಾರಣವಿಲ್ಲದೆ ಬರುವುದಿಲ್ಲ ಮತ್ತು ಆ ಕಾರಣ ಒಳ್ಳೆಯದಂತೂ ಆಗಿರುವುದಿಲ್ಲ. ಪ್ರೆಷರ್ ಕುಕ್ಕರಿನಂತೆ ಒಂದು ಹಂತದವರೆಗೆ ಮಾತ್ರ ಕೋಪವನ್ನು ಅದುಮಿಡಬಹುದು. ಒತ್ತಡ ಹೆಚ್ಚಾದರೆ ಸಿಡಿದುಬಿಡುತ್ತದೆ. ಸಹಿಸಿಕೊಳ್ಳಬಹುದಾದ ಮಿತಿಯನ್ನು ಮೀರಿ ಇತರರು ವರ್ತಿಸಿದಾಗ, ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪ್ರತಿಕ್ರಿಯೆಯಾಗಿ ಉದಯಿಸುವುದೇ ಈ ಕೋಪ. ಕೋಪ ಬಂದಾಗ ಭೌತಿಕ ಬದಲಾವಣೆಗಳೂ ಆಗುತ್ತವೆ. ಉಸಿರಾಟ ತೀವ್ರವಾಗುತ್ತದೆ, ಹೃದಯದ ಬಡಿತ ಹೆಚ್ಚುತ್ತದೆ, ಕೈಕಾಲುಗಳು ಕಂಪಿಸುತ್ತವೆ, ಅವಡುಗಚ್ಚುತ್ತಾರೆ, ಹಾವಭಾವಗಳು ವಿಚಿತ್ರವಾಗುತ್ತವೆ, ಎತ್ತರದ ಧ್ವನಿಯಲ್ಲಿ ಅರಚುತ್ತಾರೆ, ಕಣ್ಣು ಕೆಂಪಗಾಗುತ್ತದೆ, ವಿವೇಚಿಸುವ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಆಗುವ ಪರಿಣಾಮಗಳು ಹಾನಿಕಾರಕವಾಗಿರುತ್ತದೆ ಮತ್ತು ಹಲವು ಕಾಲದವರೆಗೆ ನೆಮ್ಮದಿಯನ್ನು ಹಾಳುಗೆಡವುತ್ತದೆ. ಬಸ್ಸಿನಲ್ಲಿ ಸೀಟಿಗಾಗಿ ಜಗಳ, ಕಂಡಕ್ಟರನೊಡನೆ ಚಿಲ್ಲರೆಗಾಗಿ ಮಾತುಕತೆ, ಆಕಸ್ಮಿಕವಾಗಿ ಬಾಯಿತಪ್ಪಿ ಆಡುವ ಯಾವುದೋ ಮಾತು, ಇತ್ಯಾದಿಗಳೂ ಇಂತಹ ಸಂದರ್ಭವನ್ನು ಸೃಷ್ಟಿಸಿಬಿಡಬಹುದು. ಮನಃಶಾಸ್ತ್ರಜ್ಞರು ಕೋಪ ಅನ್ನುವುದು ಸಹಜವಾದ ಮೂಲಭೂತ ಗುಣವೆನ್ನುತ್ತಾರೆ. ಇದನ್ನು ತಮಗಾದ ಲೋಪ, ಅನ್ಯಾಯವನ್ನು ಸರಿಪಡಿಸಲು ಉಪಯುಕ್ತವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದೆನ್ನುತ್ತಾರೆ. ಆದರೆ ಅನಿಯಂತ್ರಿತ ಕೋಪ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದಂತೂ ನಿಜ, "ಕೋಪಗೊಳ್ಳಲಾಗದವನು ಮೂರ್ಖ; ಕೋಪ ಮಾಡಿಕೊಳ್ಳದಿರುವವನು ಬುದ್ಧಿವಂತ".
     ಕೋಪವನ್ನು ಮೂರು ವಿಧವಾಗಿ ವಿಂಗಡಿಸಬಹುದೆನ್ನಿಸುತ್ತದೆ - ಆತುರದ ಧಿಡೀರ್ ಕೋಪ, ವ್ಯವಸ್ಥಿತವಾದ ಮತ್ತು ನೆಲೆನಿಂತ ಕೋಪ ಮತ್ತು ಮನೋಪ್ರವೃತ್ತಿಯ ಕೋಪ. ಮೊದಲನೆಯ ಪ್ರಕಾರದಲ್ಲಿ ಸ್ವಂತಿಕೆಯ ಉಳಿಕೆ ಅಥವ ಪ್ರದರ್ಶನಕ್ಕಾಗಿ ಸಣ್ಣ ಸಣ್ಣ ಸಂಗತಿಗೂ ಸಿಟ್ಟಿಗೇಳುವುದನ್ನು ಉದಾಹರಿಸಬಹುದು. ಎರಡನೆಯ ಪ್ರಕಾರದ ಕೋಪ ಅಪಾಯಕಾರಿಯಾದದ್ದು. ನಿರಂತರವಾದ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳಿಂದ ಉಂಟಾದ ಈ ಕೋಪ ಪ್ರತಿಯಾಗಿ ಮತ್ತು ವ್ಯವಸ್ಥಿತವಾಗಿ ಪ್ರತೀಕಾರ ಮಾಡುವುದು, ದಬ್ಬಾಳಿಕೆ ನಡೆಸುವುದು, ಘಾಸಿಯುಂಟುಮಾಡುವುದರ ಬಗ್ಗೆ ಗುರಿಯಿರಿಸಿರುತ್ತದೆ. ಇನ್ನು ಮನೋಪ್ರವೃತ್ತಿಯ ಕೋಪವೆಂದರೆ ತಾವೇ ತಿಳಿದವರೆಂಬ ಭ್ರಮೆಯವರು ಮತ್ತು ಸಿನಿಕತನ ಬೆಳೆಸಿಕೊಂಡಿರುವವರಾಗಿದ್ದು ಪ್ರತಿಯೊಂದರಲ್ಲೂ ಕೊಂಕು ತೆಗೆಯುವುದು, ಹುಳುಕು ಹುಡುಕುವುದು, ಇತ್ಯಾದಿಗಳನ್ನು ಮಾಡುತ್ತಾ ಇತರರನ್ನು ಘಾಸಿಸುತ್ತಾ ಒಂದು ರೀತಿಯ ವಿಕೃತಾನಂದ ಪಡೆಯುವವರೆನ್ನಬಹುದು. ತಾವೂ ಕಿರಿಕಿರಿಪಡುತ್ತಾ ಇತರರನ್ನೂ ಕಿರಿಕಿರಿಗೊಳಪಡಿಸುವವರಿವರು. ಇವರು ಪೂರ್ವಾಗ್ರಹ ಪೀಡಿತ ವಿಚಾರಿಗಳಾಗಿದ್ದು, ತಮ್ಮ ವಿಚಾರ ತಪ್ಪೆಂದು ಮನದಟ್ಟಾದರೂ ಒಪ್ಪಿಕೊಳ್ಳದವರು ಮತ್ತು ತಾವು ಹೇಳುವುದೇ, ನಂಬಿದ್ದೇ ಸತ್ಯವೆಂದು ವಾದಿಸುವವರು ಈ ಪ್ರಕಾರಕ್ಕೆ ಸೇರುತ್ತಾರೆ.
     ಕೋಪವನ್ನು ವ್ಯಕ್ತಪಡಿಸುವಲ್ಲಿ ಎರಡು ರೀತಿಗಳನ್ನು ಗುರುತಿಸಬಹುದು - ಒಂದು ತಡೆಹಿಡಿದ ಕೋಪ ಮತ್ತು ಎದುರು ಬೀಳುವ ರೀತಿಯ ಕೋಪ. ತಡೆಹಿಡಿದ ಕೋಪವನ್ನು ವ್ಯಕ್ತಪಡಿಸುವ ರೀತಿಯೂ ಕುತೂಹಲಕಾರಿಯಾಗಿರುತ್ತದೆ. ಕೃತಕ ನಗು, ಸಂಬಂಧವಿಲ್ಲದಂತೆ ಇರುವುದು, ಮಾತುಗಳಿಗೆ ತಣ್ಣನೆಯ ಪ್ರತಿಕ್ರಿಯೆ ಕೊಡುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವ ಪ್ರತಿಕ್ರಿಯಿಸದೆ ಇರುವುದು, ಅಗತ್ಯವಿದ್ದ ಸಂದರ್ಭದಲ್ಲಿ ಸಹಕರಿಸದೆ ಇರುವುದು, ಸಂಘರ್ಷ ಬಯಸದಿರುವುದು, ಬೆನ್ನ ಹಿಂದೆ ಮಾತನಾಡುವುದು, ಹತಾಶ ಮನೋಭಾವ ತೋರಿಸುವುದು, ಪ್ರತಿಯೊಂದರಲ್ಲೂ ಅತಿರೇಕದ ಪ್ರವೃತ್ತಿ ತೋರಿಸುವುದು, ಇತರರನ್ನು ಮುನ್ನುಗ್ಗಲು ಪ್ರಚೋದಿಸಿ ತಾವು ಹಿಂದೆ ಉಳಿಯುವುದು, ಅನಾರೋಗ್ಯದ ನೆಪ ಹೇಳುವುದು, ಸಂಬಂಧಗಳನ್ನು ಹಾಳು ಮಾಡುವುದು, ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡದಿರುವುದು, ಅನಾಮಧೇಯ ದೂರುಗಳು ಬರುವಂತೆ ಮಾಡುವುದು, ಇತ್ಯಾದಿಗಳನ್ನು ಇದರಲ್ಲಿ ಹೆಸರಿಸಬಹುದು. ಯಾರದೇ ಹೆಸರುಗಳನ್ನು ಹೇಳಹೋಗದೆ, ಇತ್ತೀಚಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದೇ ರಾಜಕೀಯ ಪಕ್ಷಕ್ಕೆ ಸೇರಿದ, ಒಬ್ಬರನ್ನು ಕಂಡರೆ ಒಬ್ಬರಿಗಾಗದ ನಾಯಕರುಗಳು ಪರಸ್ಪರ ವರ್ತಿಸಿದ ರೀತಿ ಈ ರೀತಿಯ ಕೋಪದ ಅಭಿವ್ಯಕ್ತಿಗೆ ಉತ್ತಮ ಉದಾಹರಣೆಗಳಾಗುತ್ತವೆ.
      ಇನ್ನು ಎದುರು ಬೀಳುವ ರೀತಿಯ ಕೋಪದ ಅಭಿವ್ಯಕ್ತಿ ಹೇಗಿರುತ್ತದೆಂದರೆ, ನೇರವಾಗಿ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡುವುದು, ಕಿರುಚುವುದು, ತಳ್ಳಾಡುವುದು, ವ್ಯಕ್ತಿಗಳ ದೌರ್ಬಲ್ಯಗಳನ್ನು ಎತ್ತಿ ಆಡುವುದು, ಗೂಂಡಾಗಿರಿ ಮಾಡುವುದು, ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು, ಇತರರ ಭಾವನೆಗಳಿಗೆ ಬೆಲೆ ಕೊಡದೆ ಅವಮಾನಿಸುವುದು, ತೀರಾ ಕೆಳಮಟ್ಟದಲ್ಲಿ ನಡೆದುಕೊಳ್ಳುವುದು, ಲೈಂಗಿಕ ದಬ್ಬಾಳಿಕೆ ನಡೆಸುವುದು, ಅಶ್ಲೀಲ ಪದಗಳನ್ನು ಬಳಸಿ ಬೈಯುವುದು, ಇತರರನ್ನು ಲೆಕ್ಕಿಸದೆ ತಾವೇ ಪ್ರಥಮ ಆದ್ಯತೆ ಪಡೆದುಕೊಳ್ಳುವ ಸ್ವಾರ್ಥತೆ, ಬೆದರಿಕೆ ಹಾಕುವುದು, ಹೆದರಿಸುವುದು, ತಮ್ಮದೇ ತಪ್ಪಿದ್ದರೂ ಅದಕ್ಕೆ ಇತರರನ್ನು ದೂಷಿಸುವುದು, ದ್ವೇಷ ಸಾಧಿಸುವುದು, ಇತ್ಯಾದಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಇದಕ್ಕೂ ಅನೇಕ ಉದಾಹರಣೆಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಲವರು ನಡೆದುಕೊಂಡ ರೀತಿಯಿಂದ ಸಿಗುತ್ತವೆ. ಯಾರದೇ ಹೆಸರುಗಳನ್ನು ಹೇಳದೆ ಇದನ್ನೂ ಓದುಗರ ಊಹೆಗೇ ಬಿಡುತ್ತೇನೆ. 
ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ || 
      ದೈಹಿಕ ದೌರ್ಬಲ್ಯ, ಅಸಹಾಯಕತೆ, ಕೀಳರಿಮೆ, ಅಭಿಮಾನಕ್ಕೆ ಆಗುವ ಆಘಾತ, ಇತ್ಯಾದಿಗಳೂ ಸಿಟ್ಟಿಗೆ ಕಾರಣವಾಗುವ ಅಂಶಗಳಾಗಿವೆ. ಇವುಗಳನ್ನು ಮೆಟ್ಟಿನಿಲ್ಲಬೇಕೆಂದರೆ ವ್ಯಕ್ತಿಗತವಾಗಿ ದೈಹಿಕ ಧೃಡತೆ ಬೆಳೆಸಿಕೊಳ್ಳುವ, ಸ್ವಪ್ರಯತ್ನ, ಛಲಗಳಿಂದ ಮೇಲೆ ಬರುವ ಕೆಲಸ ಸಂಬಂಧಿಸಿದವರೇ ಮಾಡಬೇಕು. ಇತರರನ್ನು ದೂಷಿಸಿ, ಹೀಯಾಳಿಸುವುದರಿಂದ ತಾವು ಮೇಲೆ ಬರಲಾರೆವೆಂಬುದನ್ನು ಅರಿಯಬೇಕು. ವ್ಯಕ್ತಿಗತವಾಗಿ ಕೋಪ ಸ್ವಂತದ ಅಭಿವೃದ್ಧಿಗೆ ಮಾರಕವಾಗುತ್ತದೆ. ಸಾಂಸಾರಿಕವಾಗಿ ನೋಡಿದರೆ ಕೋಪದ ಫಲವಾಗಿ ಮನೆಯಲ್ಲಿ ಸರಸ-ಸಂತಸಗಳಿರುವುದಿಲ್ಲ, ಮಾತುಕತೆಗಳಿರುವುದಿಲ್ಲ, ನಗುವಿರುವುದಿಲ್ಲ, ಸಾರವಾಗಿ ಹೇಳಬೇಕೆಂದರೆ ಕೋಪಿಷ್ಠರ ಮನೆ ಸೂತಕದ ಮನೆಯಂತಿರುತ್ತದೆ. ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೋಡಬೇಕೆಂದರೆ, ಮತೀಯ ಅಸಹನೆಗಳು, ಜಾತಿ ವೈಷಮ್ಯಗಳು, ವಿವಿಧ ವರ್ಗಗಳ ನಡುವಣ ಕಂದರಗಳು ಜಗತ್ತಿನ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿವೆ. ರಾಷ್ಟ್ರ-ರಾಷ್ಟ್ರಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ, ಗ್ರಾಮ-ಗ್ರಾಮಗಳ ನಡುವೆ, ಮನುಷ್ಯ-ಮನುಷ್ಯರ ನಡುವೆ ಧಗಧಗಿಸುವ ಕ್ರೋಧಾಗ್ನಿ ಜ್ವಲಿಸುತ್ತಿದೆ. ಬುದ್ಧಿಜೀವಿಗಳು, ವಿಚಾರವಾದಿಗಳು ಎನಿಸಿಕೊಂಡವರು ಇಂತಹ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ಸೂಚಿಸುವ ಬದಲಿಗೆ ತಾವೇ ಒಂದೊಂದು ಬಣದ ಪರವಾಗಿ ನಿಂತು ವೈಷಮ್ಯದ ದಳ್ಳುರಿಗೆ ತೈಲ ಎರೆಯುತ್ತಿರುವುದು ವಿಪರ್ಯಾಸವೇ ಸರಿ. ಇಂದಿನ ಅಗತ್ಯವೆಂದರೆ ಯಾವುದೋ ಒಂದು ಬಣದ, ಒಂದು ಗುಂಪಿನ ಪರವಾಗಿ ಅಥವ ವಿರೋಧವಾಗಿ ನಿಲ್ಲುವುದಲ್ಲ. ಸಾಮರಸ್ಯದ, ಸೌಹಾರ್ದತೆಯ ಮಾತುಗಳನ್ನು ತೋರಿಕೆಗಾಗಿ ಆಡದೆ ನೈಜ ಅನುಷ್ಠಾನ ಹೇಗೆ ಮಾಡಬೇಕೆಂದು ಆಲೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ಕಾಲ ಬಂದುಬಿಟ್ಟಿದೆ. ಇತರರ ಧಾರ್ಮಿಕ ಆಚರಣೆಗಳ ಕುರಿತು ಅಸಹನೆಯ ಮನೋಭಾವ ತ್ಯಜಿಸದೆ, ತಮ್ಮ ನಂಬಿಕೆಯನ್ನೇ ಇತರರ ಮೇಲೆ ಹೇರಬಯಸಿ ಮತಾಂತರ, ಭಯೋತ್ಪಾದನೆ, ಇತ್ಯಾದಿಗಳಲ್ಲಿ ತೊಡಗದೆ ಇರುವವರೆಗೆ ಶಾಂತಿ, ನೆಮ್ಮದಿ ಇರಲಾರದು. ಇಂತಹ ಪರಿಸ್ಥಿತಿ ಬಂದೊದಗಿರುವುದಕ್ಕೆ ಸಮಾಜದ, ದೇಶದ ಹಿತ ಬಯಸುವವರಿಗೆ ಸಾತ್ವಿಕ ಕ್ರೋಧ ಬರದೇ ಇರದು. ಅನ್ಯಾಯದ ವಿರುದ್ಧದ ಸಮರಕ್ಕೆ ಕೋಪವೂ ಒಂದು ಅಸ್ತ್ರವಾಗಿದೆ. ಆದರೆ, ಅಂತಹ ಕೋಪ ನಿಯಂತ್ರಿತವಾದುದಾಗಿ, ಅನ್ಯಾಯದ ವಿರುದ್ಧದ ಮಾತ್ರವಾಗಿದ್ದು ವ್ಯಕ್ತಿ ವಿರುದ್ಧವಾಗಿರದಿದ್ದರೆ ಸಮಾಜ ಒಪ್ಪುತ್ತದೆ.
ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣಕಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ |
ರಾಷ್ಟ್ತ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ ||
     "ಭೂತಕಾಲವನ್ನು ಕೋಪದಿಂದ ಹಿಂತಿರುಗಿ ನೋಡದಿರೋಣ, ಭವಿಷ್ಯದೆಡೆಗೆ ಭಯದಿಂದ ಮುನ್ನಡೆಯದಿರೋಣ, ವರ್ತಮಾನದಲ್ಲಿ ಜಾಗೃತರಾಗಿರೋಣ." 
-ಕ.ವೆಂ.ನಾಗರಾಜ್.
**************
04.03.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.


ಮಂಗಳವಾರ, ಮಾರ್ಚ್ 24, 2015

ಕಾಮ: ಶತ್ರುವೂ ಅವನೇ, ಮಿತ್ರನೂ ಅವನೇ!


ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ ||
     ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕಾಮ. ಅದೇ ಮನುಷ್ಯನನ್ನು ಮುಕ್ತಿಯೆಡೆಗೆ ಸಾಗಿಸುವ ನಾಲ್ಕು ಪುರುಷಾರ್ಥಗಳಲ್ಲಿ ಸಹ ಪ್ರಧಾನವಾಗಿರುವುದು ಇದೇ ಕಾಮ. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಎರಡು ಅಲಗಿನ ಚೂಪಾದ ಖಡ್ಗದಂತಿರುವ ಈ ಕಾಮಕ್ಕೇ! ಕಾಮ ಎಂದಾಕ್ಷಣ ನಮಗೆ ನೆನಪಾಗುವುದೇನೆಂದರೆ ಅದು ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದೆಂದು ಅನ್ನಿಸುವುದಲ್ಲವೇ? ಆದರೆ ಕಾಮವೆಂದರೆ ಇಷ್ಟೇ ಅಲ್ಲ, ಕಾಮವೆಂದರೆ ಈ ಅರ್ಥವೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಅಭಿಲಾಷೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂಗವಿಕಲನಾಗದಿರೆಲೋ ಮೂಢ || 
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರೆನಿಸಿಕೊಂಡವರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಹಲವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಅಪಕ್ವ ಮತ್ತು ದುರ್ಬಲ ಮನಸ್ಕರು ಕಾಮದ ಈ ಮುಖದ ಬಲಿಪಶುಗಳಾಗುತ್ತಾರೆ. ಇಂತಹ ಕಾಮಿಗಳ ಬುದ್ಧಿಗೆ ಮಂಕು ಕವಿದಿರುತ್ತದೆ, ಲಜ್ಜೆ, ಮಾನ-ಅಪಮಾನಗಳ ಅರಿವು ಇರುವುದಿಲ್ಲ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬ ನುಡಿಯಂತೆ ಕೆಲವು ಅವಿವೇಕಿಗಳು ತಮ್ಮ ಮಕ್ಕಳು, ಸಂಬಂಧಿಕರು, ಆಶ್ರಿತರು, ಮುಂತಾದವರ ದುರ್ಬಲತೆಯ ದುರ್ಲಾಭ ಪಡೆದು ಅವರನ್ನೂ ಬಲಿಪಶುಗಳನ್ನಾಗಿಸಿರುವ ಪ್ರಸಂಗಗಳ ಬಗ್ಗೆ ತಿಳಿದಾಗ ಹೇಸಿಗೆಯೆನ್ನಿಸುತ್ತದೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು |
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ ||
     ದಾನಗಳಲ್ಲಿ ಅನ್ನದಾನ ಶ್ರೇಷ್ಠವೆಂದು ಹೇಳುತ್ತಾರೆ. ಏಕೆಂದರೆ 'ಸಾಕು' ಎನ್ನಿಸಲು ಸಾಧ್ಯವಿರುವುದು ಅದರಲ್ಲಿ ಮಾತ್ರ. ಹೊಟ್ಟೆ ತುಂಬಿದ ಮೇಲೆ ಎಂತಹ ಸ್ವಾದಿಷ್ಟ ಖಾದ್ಯ ಕೊಟ್ಟರೂ ತಿನ್ನಲಾಗದೆ 'ಸಾಕು, ಸಾಕು' ಎನ್ನಲೇಬೇಕು. ಆದರೆ ಇತರ ಬಯಕೆಗಳ ವಿಷಯದಲ್ಲಿ ಹೀಗೆ ಹೇಳಲಾಗುವುದಿಲ್ಲ. ಎಷ್ಟಿದ್ದರೂ ಸಾಲದು! ಬೇಕುಗಳಿಗೆ 'ಬ್ರೇಕು' ಇರುವುದೇ ಇಲ್ಲ. ತನು, ಮನಗಳ ತೀರದ ದಾಹಗಳೇ ಕಾಮ. ಈ ದಾಹವನ್ನು ತೀರಿಸಲು ಮಾಡುವುದೇ ಕರ್ಮ. ದೇವರ ಆಟವನ್ನು ಬಲ್ಲವರು ಯಾರು? ದಾಹ ತಣಿಯುವುದಿಲ್ಲ, ಕರ್ಮ ನಿಲ್ಲುವುದಿಲ್ಲ. ಈ ಕಾಮವನ್ನು ತಣಿಸಿ ಶಮನಗೊಳಿಸಲು ಕಷ್ಟವೇ ಸರಿ. ತಾತ್ಕಾಲಿಕ ಶಮನವಾದರೂ, ನಂತರದಲ್ಲಿ ಮತ್ತೆ ಆಸೆ ಉದಿಸುತ್ತದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಮಗಳುಂಟಾಗುತ್ತವೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ. 
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು |
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ || 
    ಉನ್ನತಿಗೆ ಕಾರಣವಾಗುವ ಕಾಮ ಮನುಷ್ಯನಿಗೆ ಅಗತ್ಯವಾದ ಪುರುಷಾರ್ಥವೆನಿಸುತ್ತದೆ. ಇದನ್ನು ಸಾಧಿಸಲು ಮನೋನಿಗ್ರಹವಿರಬೇಕು, ಸಮಾಜದ ಸ್ವಾಸ್ಥ್ಯದ ಕಡೆಗೆ ಗಮನವಿರಬೇಕು. ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     "ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಂದ ಸ್ವಂತದ ಬದುಕಿನೊಂದಿಗೆ ಸಮಾಜದ ಆರೋಗ್ಯವೂ ಹಾಳಾಗುತ್ತದೆ.   
-ಕ.ವೆಂ.ನಾಗರಾಜ್.
**************
25-02-2015ರ 'ಜನಹಿತ'ದಲ್ಲಿ ಪ್ರಕಟಿತ :



ಬುಧವಾರ, ಮಾರ್ಚ್ 11, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 11

ಮನಸಾ ಸತತಂ ಸ್ಮರಣೀಯಂ
ವಚಸಾ ಸತತಂ ವದನೀಯಂ
ಲೋಕಹಿತಂ ಮಮ ಕರಣೀಯಂ ||
     ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೈಯಕ್ತಿಕ ಮತ್ತು ಸಮೂಹ ಗೀತೆಗಳು, ಭರತ ನಾಟ್ಯಗಳು, ಕಿರು ಸಂಸ್ಕೃತ ನಾಟಕಗಳು ಪ್ರೇಕ್ಷಕರ ಮನ ರಂಜಿಸಿದವು. ಕೆಲವು ಚೇತೋಹಾರಿ ಕಾರ್ಯಕ್ರಮಗಳ ಚಿತ್ರಗಳು ನಿಮಗಾಗಿ:



















ಹಾಸನದಲ್ಲಿ ಸಂಸ್ಕೃತ ಸಂಭ್ರಮ - 10


     ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಸ್ಕೃತ ಭಾರತಿಯ ಅಧ್ಯಕ್ಷರಾದ ಡಾ. ಪ್ರಸನ್ನ ಎನ್.ರಾವ್ ರವರು ಸಮ್ಮೇಳನ ಯಶಸ್ವಿಯಾಗಿ ನಡೆದ ಕುರಿತು ಹರ್ಷ ವ್ಯಕ್ತಪಡಿಸಿದರು. ಸಂಸ್ಕೃತದ ಅಧ್ಯಯನದಿಂದ ನಮ್ಮ ಸಂಸ್ಕೃತಿ ಉನ್ನತಿ ಕಾಣುವುದೆಂದು ಅವರು ಅಭಿಪ್ರಾಯಿಸಿದರು.


     ಸಂಸ್ಕೃತ ಶಿಕ್ಷಣ ನೀಡುವಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಹಲವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಚ್ಚುಕಟ್ಟಾಗಿ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ ಅಡಿಗೆ ಕಂಟ್ರಾಕ್ಟರ್ ವೆಂಕಟೇಶರನ್ನು ಅಭಿನಂದಿಸಲಾಯಿತು.





     ಸಮ್ಮೇಳನದ ಯಶಸ್ಸಿಗೆ ಶ್ರಮ ವಹಿಸಿ ದುಡಿದ ಸಂಸ್ಕೃತ ಭಾರತಿಯ ದಕ್ಷಿಣ ಕರ್ನಾಟಕದ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಮತ್ತು ವೇದಭಾರತಿಯ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಂಘಟನೆ ಮಾಡಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ ರಕ್ಷಿತ್ ಭಾರದ್ವಾಜರನ್ನೂ ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಮ್ಮೇಳನದ ಯಶಸ್ಸಿಗೆ ಸಂಬಂಧಿಸಿದ ಎಲ್ಲರ ಸಂಘಟಿತ ಪ್ರಯತ್ನ ಕಾರಣವಾಗಿದೆಯೆಂದು ನುಡಿದರು. ವಂದೇಮಾತರಮ್ ನೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಂಡಿತು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
-ಕ.ವೆಂ.ನಾಗರಾಜ್.

ಮಂಗಳವಾರ, ಮಾರ್ಚ್ 10, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 9

     ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಸಂಸ್ಕೃತಕ್ಕಾಗಿ ಕೆಲಸ ಮಾಡಿದ  ಕೆಲವರು ಹಿರಿಯರನ್ನು ಗೌರವಿಸಲಾಯಿತು. ಆ ಸಂಬಂಧಧ ಕೆಲವು ಚಿತ್ರಗಳಿವು:










ಭಾನುವಾರ, ಮಾರ್ಚ್ 8, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 8

     ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಅಂಗವಾಗಿ 'ಸಂಸ್ಕೃತದ ಮಹತ್ವ' ಕುರಿತ ಸಂಸ್ಕೃತ ಭಾಷಣ, 'ಸಂಸ್ಕೃತದಲ್ಲಿ ವಿಜ್ಞಾನ' ಕುರಿತ ಕನ್ನಡ ಭಾಷಣ, ಸಂಸ್ಕೃತ ರಸಪ್ರಶ್ನೆ ಸ್ಪರ್ಧೆ, ಭಾರತೀಯತೆ ಕುರಿತ ಚಿತ್ರ ರಚನಾ ಸ್ಪರ್ಧೆ, ಹೀಗೆ ಹಲವು ಸ್ಪರ್ಧೆಗಳನ್ನು ಏರ್ಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ತತ್ಸಂಬಂಧದ ಕೆಲವು ಚಿತ್ರಗಳಿವು: