ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಡಿಸೆಂಬರ್ 18, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2

     ವೇದಗಳ ಸಿದ್ಧಾಂತದ ಪ್ರಕಾರ, ಚೇತನ ಜೀವಾತ್ಮರು ವಿರಾಟ್ ಚೇತನದಿಂದ ಸರ್ವಥಾ ಬೇರೆಯಾದ ಸ್ವತಂತ್ರ ತತ್ವಗಳು. ಋಗ್ವೇದದ ಈ ಕರೆಯನ್ನು ಗಮನವಿತ್ತು ಆಲಿಸಿರಿ:-
ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ|
ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್  ಕೋ ವಿದ್ವಾಂಸಮುಪ ಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪)
     [ಯತ್ ಅನಸ್ಥಾ] ಮೂಳೆಗಳಿಲ್ಲದ ಯಾವ ಚೇತನನು [ಅಸ್ಥನ್ವಂತಮ್] ಮೂಳೆಗಳಿಂದ ಕೂಡಿದ ದೇಹವನ್ನು [ಬಿಭರ್ತಿ] ಧರಿಸುತ್ತಾನೋ [ಜಾಯಮಾನಂ ಪ್ರಥಮಮ್] ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು [ಕೋ ದದರ್ಶ] ಯಾವನು ನೋಡುತ್ತಾನೆ? [ಭೂಮ್ಯಾ] ಭೌತಿಕ ಜಗತ್ತಿನಿಂದ [ಅಸುಃ ಅಸೃಕ್] ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. [ಆತ್ಮಾ ಕ್ವ ಸ್ವಿತ್] ಆತ್ಮನು ಎಲ್ಲಿಂದ ಬರುತ್ತಾನೆ? [ಏತತ್ ಪ್ರಷ್ಟುಮ್] ಇದನ್ನು ಕೇಳಲು [ಕಃ] ಯಾವನು [ವಿದ್ವಾಂಸಂ ಉಪಗಾತ್] ವಿದ್ವಾಂಸನ ಬಳಿಗೆ ಹೋಗುತ್ತಾನೆ?
     ಈ ಜಿಜ್ಞಾಸೆಗೆ ಪ್ರೇರಣೆ ನೀಡಿ ಆಮೇಲೆ ವೇದಗಳು ಮಾರ್ಗದರ್ಶನ ಮಾಡುತ್ತವೆ.
ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ ವರ್ಧಮಾನಃ|| (ಋಕ್. ೬.೯.೪)
     [ಅಯಂ] ಈ ಜೀವಾತ್ಮನು [ಪ್ರಥಮಃ ಹೋತಾ] ಮೊದಲನೆಯ ಆದಾನ-ಪ್ರದಾನಕರ್ತನು. [ಇಮಂ ಪಶ್ಯತ] ಇವನನ್ನು ನೋಡಿರಿ. [ಮರ್ತ್ಯೇಷು] ಮೃತ್ಯುವಿಗೀಡಾಗುವ ಭೌತಿಕ ಶರೀರದಗಳಲ್ಲಿ [ಇದಂ ಅಮೃತಂ ಜ್ಯೋತಿಃ] ಇದು ಅಮರ ಜ್ಯೋತಿಯಾಗಿದೆ. [ಅಯಂ] ಇವನು [ಸ ಧೃವಃ] ಆ ಶಾಶ್ವತನಾದ ಆತ್ಮನು. [ಅಮರ್ತ್ಯಃ] ಅಮರನಾದ ಆ ಆತ್ಮನು [ಆ ನಿಷತ್ತಃ] ಜಗತ್ತಿನಲ್ಲಿ ಕುಳಿತು [ತನ್ವಾ ವರ್ಧಮಾನಃ] ದೇಹದಿಂದ ವೃದ್ಧಿ ಹೊಂದುತ್ತಾ [ಜಜ್ಞೇ] ಪ್ರಕಟನಾಗುತ್ತಾನೆ.
     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಶರೀರದ ಭಾಗವಲ್ಲ. ಅದರಿಂದ ಸರ್ವಥಾ ಭಿನ್ನನು. ಆತ್ಮ ಚೇತನ, ದೇಹ ಜಡ. ಆತ್ಮ ಅಮರ, ದೇಹ ಮರಣಕ್ಕೀಡಾಗುವ ವಸ್ತು. ಶರೀರದಲ್ಲಿ ಪಂಚ ಜ್ಞಾನೇಂದ್ರಿಯಗಳು, ನಾಲ್ಕು ಅಂತಃಕರಣಗಳು ಹೋತೃಗಳಾಗಿವೆ, ಕೊಡುವ ತೆಗೆದುಕೊಳ್ಳುವ ಅಂಗಗಳಾಗಿವೆ. ಆದರೆ ಅವೆಲ್ಲಾ ಎಷ್ಟೇ ಚೆನ್ನಾಗಿದ್ದರೂ ಪ್ರಥಮ ಹೋತೃವಾದ, ಮೊದಲನೆಯ ಆದಾತೃ-ಪ್ರದಾತೃವಾದ ಆತ್ಮನಿಲ್ಲದಿದ್ದರೆ, ಶರೀರ ಆರಿಹೋದ ದೀಪದಂತೆ ಅಪ್ರಯೋಜಕ, ನಗರದಿಂದ ಹೊರಸಾಗಿಸಲರ್ಹವಾದ ಶವ ಮಾತ್ರ. ಆತ್ಮನು ಶರೀರದಲ್ಲಿ ಪ್ರವಿಷ್ಟನಾಗುವುದು ಪ್ರಭುವಿನ ಆದೇಶದಂತೆ ಉತ್ಕರ್ಷ ಸಾಧಿಸುವುದಕ್ಕೆ. ಕೇವಲ ತಿನ್ನುವುದಕ್ಕೆ, ಕುಡಿಯುವುದಕ್ಕಲ್ಲ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಡಿಸೆಂಬರ್ 7, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -1

     ಇದುವರೆಗೆ ಭಗವತ್ ಸ್ವರೂಪದ ಬಗೆಗೆ ಸಾಕಾದಷ್ಟು ವಿಚಾರ ಮಥನ ಮಾಡಿಯಾಯಿತು. ವ್ಯಕ್ತಿರೂಪನಲ್ಲದ ಮತ್ತು ಕೇವಲ ಶಕ್ತಿರೂಪನಾದ ಭಗವಂತ ಈ ಅದ್ಭುತ ರಚನೆಯ ಕರ್ತೃ, ಧರ್ತೃ ಮತ್ತು ಸಂಹರ್ತೃ ಎಂಬುದನ್ನು ತಿಳಿದೆವು. ಈಗ ಪ್ರಶ್ನೆ ಉದ್ಭವಿಸುತ್ತದೆ - ಈ ವಿಶ್ವ ಬ್ರಹ್ಮಾಂಡದ ರಚನೆಯನ್ನು ಯಾರ ಸಲುವಾಗಿ ಮಾಡುತ್ತಾನೆ? ತನ್ನ ಸಲುವಾಗಿಯಂತೂ ಅಲ್ಲ. ಏಕೆಂದರೆ ಭಗವಂತ ಪರಿಪೂರ್ಣ ಮತ್ತು ಪ್ರಾಪ್ತಸರ್ವಸ್ವ. ಈ ಸೃಷ್ಟಿಯಿಂದ ಅವನಿಗೆ ಆವರೆಗೆ ಸಿಕ್ಕದಿರುವ ಯಾವುದಾದರೂ ಒಂದು ನೂತನ ವಸ್ತುವಾಗಲೀ, ಅದುವರೆಗೆ ಅನುಭವಕ್ಕೆ ಬಾರದಿರುವ ಹೊಸಬಗೆಯ ತೃಪ್ತಿ, ಸಂತೋಷ ಅಥವಾ ಆನಂದವಾಗಲಿ ಅವನಿಗೆ ಲಭಿಸುತ್ತದೆ ಎಂದು ಹೇಳುವುದು ಭಗವಂತ ಅಪೂರ್ಣ ಎಂದು ಹೇಳಿದಂತೆಯೇ ಸರಿ. ಹಾಗಾದರೆ ಯಾರ ಸಲುವಾಗಿ ಈ ರಚನೆ? ಜಡವಾದ ಪ್ರಕೃತಿಯ ಸಲುವಾಗಿಯೇ? ಹಾಗೆ ತೋರುವುದಿಲ್ಲ. ಏಕೆಂದರೆ ಜಡಪ್ರಕೃತಿ ಅಥವಾ ಪರಮಾಣುಗಳ ಸಂಘಾತ ಭೋಗ್ಯವೇ ಹೊರತು ಭೋಕ್ತ್ಯವಲ್ಲ. ಭೋಕ್ತ್ಯಭಾವ ಚೇತನದಲ್ಲಿ ಸಂಘಟಿಸುವುದೇ ಹೊರತು ಜಡದಲ್ಲಿ ಅಲ್ಲ. ಪೂರ್ಣ ತೃಪ್ತ ಹಾಗೂ ಪ್ರಾಪ್ತಸರ್ವಸ್ವನಾದ ಮಹಾನ್ ಭಗವಂತನೂ ಭೋಕ್ತ್ಯವಲ್ಲ, ಜಡ ಪ್ರಕೃತಿಯೂ ಭೋಕ್ತ್ಯವಲ್ಲ. ಹಾಗಾದರೆ, ಸರ್ವಜ್ಞನಾದ ಭಗವಂತನು ಭೋಕ್ತ್ಯವೇ ಅಲ್ಲದಿರುವಾಗ ಭೋಗ್ಯ ಜಗತ್ತನ್ನು ರಚಿಸಿದನಾದರೂ ಏಕೆ? ಭೋಕ್ತ್ಯ ಯಾವನೋ ಇದ್ದೇ ಇದ್ದಾನೆ. ಮಹಾಚೇತನನಾದ ಪರಮಾತ್ಮನೂ ಅಲ್ಲದ, ಚೇತನರಹಿತನಾದ ಜಡಪ್ರಕೃತಿಯೂ ಅಲ್ಲದ ಮತ್ತೊಬ್ಬ ಚೇತನ - ಹಾಗೆಂದರೆ ತಪ್ಪಾದೀತು - ಬಹುಸಂಖ್ಯಾತರಾದ ಅಲ್ಪಚೇತನರು ಅನಾದಿಕಾಲದಿಂದಲೂ ಇದ್ದೇ ಇದ್ದಾರೆ. ಈ ಪರಿಚ್ಛಿನ್ನ ಚೇತನರನ್ನು ಜೀವಾತ್ಮರು ಎನ್ನುತ್ತಾರೆ.
     ಕೆಲವು ಮತೀಯರು, ಚೇತನ ಜೀವಾತ್ಮರು ಅನಾದಿಗಳಲ್ಲ, ಪರಮಾತ್ಮನು ಅವರನ್ನು ಸೃಜಿಸಿದನು -ಎಂದು ತಿಳಿದಿದ್ದಾರೆ. ಈ ಬಗೆಯ ತಿಳಿವು, ವೈಜ್ಞಾನಿಕ ವಿಶ್ಲೇಷಣದ ಮುಂದೆ ಅರೆಕ್ಷಣವೂ ನಿಲ್ಲಲಾರದು. ಹಾಗೆ ಪರಮಾತ್ಮನು ಈ ಜೀವಾತ್ಮರನ್ನು ಸೃಜಿಸಿದನೆಂದಾದರೆ, ಎಲ್ಲಕ್ಕಿಂತಲೂ ಮೊದಲು ಏಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಾಪ್ತಸರ್ವಸ್ವನಾದ ಪರಮಾತ್ಮನಿಗೆ ಬೇಕಾದುದಾದರೂ ಏನು? ಬೇಕು ಎಂಬ ಭಾವನೆ ಯಾವುದೋ ಒಂದು ಅಭಾವದ ಅನುಭವವಾಗದೆ ಉದ್ಭವಿಸಲಾರದು. ಪರಿಪೂರ್ಣನಾದ ಭಗವಂತನಿಗೆ ಯಾವುದರ, ಯಾವುದೇ ಕಾಮ್ಯತತ್ವದ ಅಭಾವವೂ ಇಲ್ಲ. ಆದುದರಿಂದ ಏಕೆ? ಎಂಬ ಪ್ರಶ್ನೆ ಏಕೋ ಹಾಗೆಯೇ ಉಳಿದುಹೋಗುತ್ತದೆ! ಎರಡನೆಯದಾಗಿ, ಅಭಾವದಿಂದ ಭಾವೋತ್ಪತ್ತಿಯಾಗಲಾರದು. ಆದುದರಿಂದ ಏನಾದರೂ ಆಗಿರಲೊಲ್ಲದೇಕೆ, ಭಗವಂತನು ಯಾವುದರಿಂದ ಜೀವಾತ್ಮರನ್ನು ಸೃಜಿಸಿದನು? - ಎಂಬ ಮತ್ತೊಂದು ಜಟಿಲ ಪ್ರಶ್ನೆ ಉದ್ಭವಿಸುತ್ತದೆ. ಪ್ರಕೃತಿಯಿಂದ - ಎನ್ನುವುದಾದರೆ, ಅದರಿಂದ ಜಡ ಶರೀರದ ಸೃಜನ ಸಾಧ್ಯವೇ ಹೊರತು, ಚೇತನನಾದ ಜೀವಾತ್ಮನ ಸೃಜನ ಎಂದೆಂದಿಗೂ ಸಂಭವವಿಲ್ಲ. ಚೇತನನಾದ ತನ್ನಿಂದಲೇ ಎನ್ನುವುದಾದರೆ, ಅಖಂಡನಾದ ಸರ್ವವ್ಯಾಪಕನಾದ ಭಗವಂತ, ಖಂಡ ಖಂಡವಾಗಿ ತನ್ನನ್ನೇ ತುಂಡರಿಸಿಕೊಳ್ಳಲು ಸಾಧ್ಯವೇ? ತನ್ನ ಎಷ್ಟು ಭಾಗವನ್ನು ಜೀವಾತ್ಮರುಗಳ ರಚನೆಗಾಗಿ ವ್ಯಯ ಮಾಡಿದನು? ಅಷ್ಟು ಭಾಗ ನಷ್ಟವಾದ ಮೇಲೂ ಅವನು ಪರಿಪೂರ್ಣನಾಗಿಯೇ ಉಳಿದನೇ? ಈ ಮೊದಲಾದ ಅರುಚಿಕರ ಮತ್ತು ಉತ್ತರ ಕೊಡಲಾಗದ ಕಹಿ ಪ್ರಶ್ನೆಗಳು ತಲೆಯೆತ್ತುತ್ತವೆ. ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ, ಏತರಿಂದ ಎಂಬ ಪ್ರಶ್ನೆಗೂ ಬುದ್ಧಿಸಂಗತವಾದ ಉತ್ತರವಿಲ್ಲ. ಈ ಪರಿಚ್ಛಿನ್ನ ಚೇತನರಾದ ಜೀವಾತ್ಮರೂ ಕೂಡ ಪರಮಾತ್ಮನಂತೆಯೇ ಅನಾದಿಗಳು, ಪರಮಾತ್ಮನ ಶಾಶ್ವತ ಪ್ರಜೆಗಳು ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ. ಏಕೋ, ಏತರಿಂದಲೋ, ಹೇಗೋ ಪರಮಾತ್ಮ ಜೀವಾತ್ಮರನ್ನು ಸೃಜಿಸಿದನು ಎಂದು ವಾದಿತೋಷನ್ಯಾಯಕ್ಕಾಗಿ ಸ್ವಲ್ಪ ಹೊತ್ತು ಒಪ್ಪಿಕೊಂಡರೂ ಕೂಡ, ಅನಾದಿಗಳಲ್ಲದೇ ಜೀವಾತ್ಮರು ಅನಂತರೂ ಆಗಿರಲಾರರು, ಅವರು ಶೂನ್ಯವಿಲೀನರೂ ಆಗಿಹೋಗುತ್ತಾರೆ. ಈ ಪರಿಸ್ಥಿತಿಯಲ್ಲಿ ಧರ್ಮ, ಮೋಕ್ಷ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಅಲ್ಲದೇ ನಿಷ್ಕಾರಣವಾಗಿ ಕೆಲವರನ್ನು ದುಃಖಿಗಳನ್ನಾಗಿಯೂ, ಕೆಲವರನ್ನು ಸುಖಿಗಳನ್ನಾಗಿಯೂ ಸೃಜಿಸಿದ ಪರಮಾತ್ಮ ಪಕ್ಷಪಾತಿ ಹಾಗೂ ನಿಷ್ಕರುಣ - ಎಂದು ಹೇಳಬೇಕಾಗುತ್ತದೆ. ಅಲ್ಲದೆ ಆ ಸ್ಥಿತಿಯಲ್ಲಿ ಜೀವಾತ್ಮರು ಮಾಡುವ ಪಾಪಕ್ಕೂ, ಪುಣ್ಯಕ್ಕೂ ಭಗವಂತನೇ ಹೊಣೆಯಾಗಬೇಕಾಗುತ್ತದೆ. ತಾತ್ವಿಕ ಹಾಗೂ ದಾರ್ಶನಿಕ ದೃಷ್ಟಿಯಿಂದ, ವೈಜ್ಞಾನಿಕವಾದ ಮತ್ತು ಹೇತುಸಹಿತವಾದ ವಿವೇಚನೆಯ ದೃಷ್ಟಿಯಿಂದ, ಇಂತಹ ಅಪಸಿದ್ಧಾಂತಗಳಿಗೆ ಏನೇನೂ ಬೆಲೆ ಸಿಕ್ಕುವುದಿಲ್ಲ.
     ಮತ್ತೆ ಕೆಲವರು ಜೀವಾತ್ಮ ಬೇರೆ ಯಾವ ತತ್ವವೂ ಅಲ್ಲ, ಶರೀರದಲ್ಲಿಯೇ ಹುಟ್ಟುವ ಒಂದು ಚೈತನ್ಯ ವಿಶೇಷ ಅದು. ಶರೀರದಿಂದಲೇ ಹುಟ್ಟಿ ಶರೀರದಲ್ಲಿಯೇ ಹುಟ್ಟಿ ನಾಶವಾಗುತ್ತದೆ - ಎಂದು ಭಾವಿಸುವುದೂ ಉಂಟು. ಜೀವಾತ್ಮ ಶರೀರದಲ್ಲಿಯೇ ಹುಟ್ಟುವ ಒಂದು ಶಕ್ತಿಯಾಗಿದ್ದರೆ ಶರೀರವಿರುವವರೆಗೂ ಅದಿರಲೇಬೇಕಾಗಿತ್ತು. ಆದರೆ, ನಾವು ಗಟ್ಟಿಮುಟ್ಟಾದ ಶವಗಳನ್ನೂ ನೋಡುತ್ತೇವಲ್ಲ! ಆ ಶಕ್ತಿ ಶರೀರಗಳಿಗೆ ಶವರೂಪವನ್ನಿತ್ತು ಅಡಗಿಹೋದುದೇಕೆ? ಜಡವಾದ ಶರೀರದಿಂದ ಜಡವಸ್ತುಗಳೇನೋ ಹುಟ್ಟಬಹುದು, ಚೇತನ ಉದ್ಭವಿಸುವುದು ಮೂರು ಕಾಲಕ್ಕೂ ಸಾಧ್ಯವಿಲ್ಲ. ಶರೀರದಲ್ಲಿ ಹುಟ್ಟುವ, ನೀವು ಹೇಳುವ ಆ ಚೈತನ್ಯ, ಆ ಶಕ್ತಿ, ಶರೀರದ ಗುಣವೋ, ಅಥವಾ ಬೇರೊಂದು ದ್ರವ್ಯವೋ? ಶರೀರದ ಗುಣವಾಗಿದ್ದಲ್ಲಿ ಅದು ಶರೀರವನ್ನು ಬಿಟ್ಟು ಹೋಗುವಂತಿಲ್ಲ. ಬೇರೊಂದು ದ್ರವ್ಯವಾಗಿದ್ದಲ್ಲಿ ಅದು ಶರೀರದಿಂದ ಬೇರೆಯೇ ಆದ ತತ್ತ್ವವಾಗಿರಬೇಕು. ಏಕೆಂದರೆ, ಅದು ಶರೀರದಂತೆ ಜಡ ದ್ರವ್ಯವಲ್ಲ, ಜ್ಞಾನಸಮನ್ವಿತವಾದ ಚೇತನ. ಅದು ಶರೀರದಲ್ಲಿ ಹುಟ್ಟಿದುದಲ್ಲ.. ಶರೀರದ ಮೂಲಕ ಪ್ರಕಟವಾದ, ಬೇರೆ ಎಲ್ಲಿಂದಲೋ ದೇಹಕ್ಕೆ ಬಂದು ಸೇರಿದ ಸ್ವತಂತ್ರ ಸತ್ತೆ. ಅದು ದೇಹ ಹುಟ್ಟುವ ಮುನ್ನವೂ ಇದ್ದಿತು, ಶರೀರದಲ್ಲಿ ಬಂದು ಸೇರಿತು, ಶರೀರದಿಂದ ಬೇರೆಯಾಗಿ ಹೋಯಿತು. ಹೀಗೆ ನೋಡಿದರೂ ಆ ಪರಿಚ್ಛಿನ್ನ ಚೇತನ ಅನಾದಿ-ಅನಂತವೆಂದೇ ಸಿದ್ಧವಾಗುತ್ತದೆ.
     ಇನ್ನೂ ಕೆಲವರು, ಜೀವಾತ್ಮ ಬೇರೆ ಅಲ್ಲವೇ ಅಲ್ಲ, ಅವನೂ ಬ್ರಹ್ಮವೇ. ಅಜ್ಞಾನಕ್ಕೆ ಸಿಕ್ಕಿ ಜೀವಭಾವ ಪಡೆದಿದೆ ಬ್ರಹ್ಮತತ್ವ. ಜ್ಞಾನೋದಯವಾದ ಮೆಲೆ ಮತ್ತೆ ಬ್ರಹ್ಮಭಾವ ಹೊಂದುತ್ತದೆ - ಎನ್ನುತ್ತಾರೆ. ಇದಕ್ಕಿಂತ ದುರ್ಬಲವಾದ, ತಿರುಳಿಲ್ಲದ ಸಿದ್ಧಾಂತವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಜ್ಞಾನ ಯಾರಿಗೆ? ಸ್ವತಃ ಪ್ರಜ್ಞಾನ ಸ್ವರೂಪನಾದ ಬ್ರಹ್ಮಕ್ಕೆ? ಬ್ರಹ್ಮದ ಅಷ್ಟೂ ಭಾಗವು ಅಜ್ಞಾನಕ್ಕೆ ಸಿಕ್ಕಿ ಜೀವಭಾವ ತಳೆಯಿತೋ ಅಥವಾ ಯಾವುದಾದರೂ ಅಲ್ಪ ಭಾಗವೋ? ಸಂಪೂರ್ಣ ಬ್ರಹ್ಮಭಾವವೇ ಜೀವಭಾವ ಪಡೆಯಿತೆಂದಾದರೆ, ಈಗ ಬ್ರಹ್ಮ ಇಲ್ಲವೇ ಇಲ್ಲವೇ? ಯಾವುದಾದರೂ ಸ್ವಲ್ಪ ಭಾಗ ಎಂದರೆ ಬ್ರಹ್ಮದ ಅಖಂಡತ್ವ ಎಲ್ಲಿ ಉಳಿಯಿತು? ನಿಮ್ಮ ಸಿದ್ಧಾಂತದ ಪ್ರಕಾರ ಈವರೆಗೆ ಈ ಸೃಷ್ಟಿ ಉದ್ಭವಿಸಿ ಸುಮಾರು ಇನ್ನೂರು ಕೋಟಿ ವರ್ಷಗಳಾಗಿವೆ. ಯಾರೂ ಬ್ರಹ್ಮಭಾವ ಪಡೆದೇ ಇಲ್ಲವೇ? ಪಡೆದಿದ್ದರೆ, ಯಾವ ಕ್ಷಣದಲ್ಲಿ ಮತ್ತೆ ತಲೆಕೆಟ್ಟು ಜೀವಭಾವ ತಾಳುತ್ತಾರೋ, ಪಾಪ!
     ವಸ್ತುತಃ ಇದೊಂದು ಮಾಯಾಜಾಲ. ಅಖಂಡವಾದ ಬ್ರಹ್ಮವು ಖಂಡ ಖಂಡವಾಗುವುದು, ಪ್ರಜ್ಞಾನ ಸ್ವರೂಪ ಬ್ರಹ್ಮವು ಅಲ್ಪಜ್ಞ ಜೀವನಾಗುವುದು, ನಿರ್ವಿಕಾರವಾದ ಬ್ರಹ್ಮ ಸವಿಕಾರವಾಗುವುದು, ನಿರಾಕಾರನಾದ ಬ್ರಹ್ಮ ಜೀವಭಾವ ತಳೆದು ಶರೀರಧಾರಿಯಾಗಿ ಸಾಕಾರವಾಗಿ ಬರುವುದು, ಆನಂದಮಯವಾದ ಬ್ರಹ್ಮ ಸುಖ-ದುಃಖಗಳ ಹೊಯ್ದಾಡಕ್ಕೆ ಸಿಕ್ಕಿ ನರಳುವುದು - ಇವೆಲ್ಲಾ ಆಲೋಚನೆಗಳು ಕೂಡ ಅರ್ಹವಲ್ಲದ ಶಬ್ದಜಾಲ ಮಾತ್ರವಾಗಿದೆ. ಜೀವಾತ್ಮ ಎಂದೆಂದೂ ಬ್ರಹ್ಮವಾಗಿರಲಿಲ್ಲ, ಎಂದಿಗೂ ಬ್ರಹ್ಮವಾಗುವುದೂ ಇಲ್ಲ.
     ಹೀಗೆ ಆಲೋಚಿಸಿದಾಗ, ಈ ಚೇತನ ಜೀವಾತ್ಮ ಪ್ರಕೃತಿಯ ಪರಿಣಾಮವೂ ಅಲ್ಲ, ಪರಬ್ರಹ್ಮ ಪರಮಾತ್ಮನ ವಿಕೃತ ಪರಿಣಾಮವೂ ಅಲ್ಲ. ಅದೇ ಬೇರೆ ಒಂದು ನಿತ್ಯ ಸತ್ಯವಾದ ಅನಾದಿ ತತ್ವ ಎಂದು ಒಪ್ಪಲೇಬೇಕಾಗುತ್ತದೆ.
-ಪಂ. ಸುಧಾಕರ ಚತುರ್ವೇದಿ.

ಸೋಮವಾರ, ನವೆಂಬರ್ 29, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -9

     ಆ ಪರಮಾತ್ಮನು ಶುದ್ಧ, ಬುದ್ಧ, ಮುಕ್ತ ಸ್ವಭಾವನು. ಅವನೆಂದಿಗೂ ಅಶುದ್ಧನಾಗುವುದಿಲ್ಲ.
ಸಹಿ ಶುಚಿಃ ಶತಪತ್ರ ಸ ಶುಂಧ್ಯುಃ|| (ಋಕ್. ೭.೯೭.೭)
ಎಂದರೆ, [ಸ ಹಿ ಶುಚಿಃ] ಆ ಪ್ರಭುವೇ ನಿತ್ಯ ಶುದ್ಧನು. [ಶತಪತ್ರಃ] ನೂರಾರು ಬಗೆಯ ಪತನಗಳಿಂದ ದೂರವಿಟ್ಟು ರಕ್ಷಿಸುವವನು. [ಸ ಶುಂಧ್ಯುಃ] ಅವನೇ ಎಲ್ಲರನ್ನೂ ಪವಿತ್ರಗೊಳಿಸುವವನು - ಎಂದು ಋಗ್ವೇದವು ನಿರ್ದೇಶಿಸುತ್ತಲಿದೆ.
    ಆ ಪ್ರಭುವು ನಿತ್ಯಶುದ್ಧನೂ ಸದಾಜ್ಞಾನಿಯೂ ಆಗಿದ್ದಾನೆ. ಅವನೆಂದಿಗೂ ಭ್ರಾಂತನಾಗುವ ಪ್ರಶ್ನೆಯೇ ಇಲ್ಲ.
ಮೂರಾ ಅಮೂರ ನ ವಯಂ ಚಿಕಿತ್ವೋ ಮಹಿತ್ವಮಗ್ನೇ ತ್ವಮಂಗ ವಿತ್ಸೇ|| (ಋಕ್. ೧೦.೪.೪)
-ಎಂದರೆ [ಅಮೂರ] ಎಂದಿಗೂ ಮೋಹಕ್ಕೆ ಸಿಕ್ಕದಿರುವ [ಚಿಕಿತ್ವ] ನಿತ್ಯಜ್ಞಾನಿಯಾದ ಪ್ರಭುವೇ! [ಮೂರಾ ವಯಂ ನ] ಮೂಢರಾದ ನಮಗೆ ಏನೂ ತಿಳಿಯದು. [ಅಂಗ] ಪ್ರಿಯನೇ [ಮಹಿತ್ವಂ ತ್ವಂ ಏತ್ಸೇ] ಮಹತ್ವವನ್ನು ನೀನೇ ಬಲ್ಲೆ - ಎಂದು ಋಗ್ವೇದ ಹೇಳಿದೆ. 
     ಅದೇ ರೀತಿ ಭಗವಂತನು ನಿತ್ಯಮುಕ್ತನು, ಅವನೆಂದಿಗೂ ಯಾವ ಬಂಧನಕ್ಕೂ ಸಿಕ್ಕನು. ನಾವು ಅಥರ್ವವೇದದಲ್ಲಿ:
ಪ್ರಾಚೀದಿಗಗ್ನಿರಧಿಪತಿರಸಿತಃ|| (ಅಥರ್ವ. ೩.೨೭.೧) -
ಎಂದರೆ [ಪ್ರಾಚೀ ದಿಕ್] ಮುಂದುಗಡೆ [ಅಸಿತಃ] ಬಂಧನರಹಿತನಾದ, ನಿತ್ಯಮುಕ್ತನಾದ [ಅಗ್ನಿಃ ಅಧಿಪತಿಃ] ಜ್ಯೋತಿರ್ಮಯ ಪ್ರಭುವು ಅಧೀಶ್ವರನು - ಎಂಬ ಕಥನವಿದೆ.
     ಈರೀತಿ ವೇದೋಕ್ತ ಸಿದ್ಧಾಂತದಂತೆ ಪರಮಾತ್ಮನ ಗುಣಗಳು - ಸಚ್ಚಿದಾನಂದ; ಕರ್ಮಗಳು - ಸೃಷ್ಟಿ, ಸ್ಥಿತಿ, ಲಯ; ಸ್ವಭಾವ - ಶುದ್ಧತ್ವ, ಬುದ್ಧತ್ವ, ಮುಕ್ತತ್ವ. ಪರಮಾತ್ಮ ಸಾಕಾರ ವ್ಯಕ್ತಿಯಲ್ಲ, ನಿರಾಕಾರ ಚೇತನಶಕ್ತಿ. ಲಿಂಗ ಶರೀರದ ಲಕ್ಷಣ. ಪರಮಾತ್ಮನು ಅಶರೀರನಾದುದರಿಂದ, ಸ್ತ್ರೀ, ಪುರುಷ ಅಥವಾ ನಪುಂಸಕ ಲಿಂಗಗಳನ್ನು ಹಚ್ಚಲು ಸಾಧ್ಯವಿಲ್ಲ. ವೇದಗಳು ಈಶ್ವರೀಯವಾದರೂ, ನಮಗೆ ಮಾನವೀಯ ವಾಣಿಯಲ್ಲಿಯೇ ಬೋಧಿಸಬೇಕಾಗಿದೆ. ಅದೇ ಕಾರಣದಿಂದ ವೇದಗಳು ಪರಮಾತ್ಮನನ್ನು ಮೂರು ಲಿಂಗಗಳಲ್ಲಿಯೂ ನಿರ್ದೇಶಿಸುತ್ತವೆ.
ಸ ನೋ ಬಂಧುರ್ಜನಿತಾ ಸ ವಿಧಾತಾ|| (ಯಜು. ೩೨.೧೦)
-[ಸಃ] ಅವನೇ ನಿಯಾಮಕನು - ಎಂದು ಪುಲ್ಲಿಂಗದಲ್ಲಿ ಭಗವಂತನನ್ನು ನಿರ್ದೇಶಿಸಿದೆ.
ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶ್ವಧಾಯಾಃ|| (ಯಜು. ೧.೪)
-[ಸಾ] ಅವಳು [ವಿಶ್ವಾಯುಃ] ವಿಶ್ವದ ಪ್ರಾಣಸ್ವರೂಪಳು [ಸಾ ವಿಶ್ವಧಾಯಾಃ] ಅವಳು ವಿಶ್ವಾಧಾರಳು. ಇಲ್ಲಿ ಪರಮಾತ್ಮನನ್ನು ಸ್ತ್ರೀಲಿಂಗದಲ್ಲಿ ನಿರ್ದೇಶಿಸಲಾಗಿದೆ.
ತದೇವ ಶುಕ್ರಂ ತದ್ ಬ್ರಹ್ಮ|| (ಯಜು. ೩೨.೧)
[ತತ್ ಏವ] ಅದೇ [ಶುಕ್ರಂ] ತೇಜಸ್ವಿಯು [ತತ್] ಅದು [ಬ್ರಹ್ಮ] ಮಹತ್ತಾದುದು. ಇಲ್ಲಿ ನಿರ್ದೇಶ ನಪುಂಸಕ ಲಿಂಗದಲ್ಲಿರುವುದನ್ನು ಕಾಣುತ್ತೇವೆ. ಇದು ಕೇವಲ ಸೌಕರ್ಯದ ಪ್ರಯೋಗ. ವಸ್ತುತಃ ಪರಮಾತ್ಮನು ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ. ಮಾನವೀಯ ವಾಣಿಯಲ್ಲಿ ಹೇಳಬೇಕಾದರೆ ಯಾವುದಾದರೂ ಒಂದು ಲಿಂಗದಲ್ಲಿ ಹೇಳಲೇಬೇಕಾಗುವುದಲ್ಲವೇ?
     ಪರಮ ವೈಜ್ಞಾನಿಕವಾಗಿ ಹೇತುಗರ್ಭಿತವಾಗಿ ವೇದಗಳು ವಿಶ್ವಚೇತನವನ್ನು ವರ್ಣಿಸಿರುವುದು ಹೀಗೆ. ಇದಕ್ಕಿಂತ ಸ್ಫುಟವಾಗಿ ಭಗವಂತನನ್ನು ಯಾವ ಶಾಸ್ತ್ರವೂ ವರ್ಣಿಸುವುದಿಲ್ಲ. ಈ ಶಕ್ತಿಸ್ವರೂಪ ಪ್ರಭುವನ್ನು ಯಾವ ನಾಸ್ತಿಕನೂ ತಿರಸ್ಕರಿಸಲಾರನು. ಯಾವ ವೈಜ್ಞಾನಿಕನೂ ಅಲ್ಲ ಎನ್ನಲಾರನು. ಇಹದಲ್ಲಿ ಸುಖ-ಶಾಂತಿಗಳೂ, ಪರದಲ್ಲಿ ಆನಂದವೂ ಬೇಕಾದಲ್ಲಿ ಜೀವಾತ್ಮನು ಈ ಪರಮಾತ್ಮನ ಉಪಾಸನೆಯನ್ನೇ ಮಾಡಬೇಕು. ಯಾವ ಬಾಹ್ಯಪೂಜೆಯೂ ಪ್ರಭೂಪಾಸನೆಯಾಗಲಾರದು. ಮುಂದೆ ಉಪಾಸನಾ ವಿಷಯವನ್ನು ಚರ್ಚಿಸೋಣ.
-ಪಂ. ಸುಧಾಜರ ಚತುರ್ವೇದಿ.

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -8

    ವೇದಗಳ ಪ್ರಕಾರ ಅವನು (ಪರಮಾತ್ಮನು) ಸಚ್ಚಿದಾನಂದಸ್ವರೂಪನಾಗಿದ್ದಾನೆ. ಸತ್ ಎಂದರೆ ಸತ್ಯಸ್ವರೂಪನು. ಋಗ್ವೇದ :-
ಸೈನಂ ಸಶ್ಚದ್ ದೇವೋ ದೇವಂ ಸತ್ಯಮಿಂದ್ರಂ ಸತ್ಯ ಇಂದುಃ|| (ಋಕ್. ೨.೨೨.೧)
-ಎಂದರೆ, [ಸ ದೇವಃ ಸತ್ಯ ಇಂದುಃ] ಆ ಉದಾರನಾದ ಸತ್ಯನಾದ ಜೀವಾತ್ಮನು [ಏನಂ ದೇವಂ ಸತ್ಯಂ ಇಂದ್ರಂ] ಈ ದೇವನಾದ ಸತ್ಯನಾದ ಸರ್ವಶಕ್ತಿಮಾನ್ ಪ್ರಭುವನ್ನು [ಸಶ್ಚತ್] ಸೇರುತ್ತಾನೆ - ಎಂದು ವರ್ಣಿಸಿದೆ. ಆ ಪರಮಾತ್ಮನು ಚಿತ್ ಎಂದರೆ ಚೇತನನಾಗಿದ್ದಾನೆ. ಋಗ್ವೇದ,
ಹೋತಾಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ|| (ಋಕ್. ೨.೫.೧.) -
ಎಂದರೆ [ಚೇತನಾ ಹೋತಾ ಪಿತಾ] ಚೇತನನೂ, ಸರ್ವಧಾತೃವೂ, ಎಲ್ಲರ ತಂದೆಯೂ ಆದ ಭಗವಂತನು [ಪಿತೃಭ್ಯ ಊತಯೇ] ಪಾಲಕರಾದ ಲೌಕಿಕ ಪಿತೃಗಳ ರಕ್ಷಣೆಗೆ [ಅಜನಿಷ್ಟ] ಪ್ರಸಿದ್ಧನಾಗಿದ್ದಾನೆ - ಎಂದು ಸಾರಿದೆ. ಅದೇ ರೀತಿ ಪರಮಾತ್ಮ, ಆನಂದಸ್ವರೂಪನೂ ಆಗಿದ್ದಾನೆ. ನಾವು ಅಥರ್ವವೇದದಲ್ಲಿ -
ಸ್ವರ್ಯಸ್ಯ ಚ ಕೇವಲಂ ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ|| (ಅಥರ್ವ. ೧೦.೮.೧)
ಎಂದರೆ [ಯಸ್ಯ ಸ್ವಃ ಕೇವಲಂ] ಯಾವನ ಆನಂದವು ಪರಿಶುದ್ಧವಾಗಿದೆಯೋ, [ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ] ಆ ಜ್ಯೇಷ್ಟ ಪ್ರಭುವಿಗೆ ನಮಸ್ಕಾರ - ಎಂದು ಓದುತ್ತೇವೆ.

ಸೋಮವಾರ, ನವೆಂಬರ್ 8, 2010

ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?

     ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ ಮೊದಲನೆಯ ಪ್ರಶ್ನೆಗೆ ಉತ್ತರಿಸಿದ್ದೇನೆ. ಎರಡನೆಯ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ.
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶವಾದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಹಿಂದುತ್ವ ಸಸ್ಯಹಾರಿಯಾಗಿರಬೇಕೆಂದು ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲಿಕ್ಕಾಗಿ ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)
     ಜೀವನ ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.
      ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.
     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
     ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
     ಮೂರ್ಖ ಮಾತ್ರ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬುದ್ಧಿವಂತ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ.
ಜಾಣ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆತನಿಗೆ ಜೀವನವೆಂದರೆ ಅತ್ಯುತ್ತಮವಾಗಿ ಆಡಬೇಕಾದ ಆಟ! ಗೆಲ್ಲಲಿ ಅಥವ ಸೋಲಲಿ, ಆಡುವುದರಲ್ಲಿ ಖುಷಿಯಿದೆ.
*********
ಮೂಲ ಇಂಗ್ಲಿಷ್ ಲೇಖನ: ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ :        ಕವಿ ನಾಗರಾಜ್.

ಏನಂತೆ? ? . . . . ! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ !
ಗೆಲುವಿನ ದಾರಿಯದು ಕಂಡಿತಂತೆ !!

ಏನಂತೆ? ಬಿದ್ದರೇನಂತೆ ?
ನೋವೆಂಬುದೇನೆಂದು ತಿಳಿಯಿತಂತೆ !
ನೋಡಿ ನಡೆಯಲು ಕಲಿತೆನಂತೆ !!

ಏನಂತೆ? ಹಸಿವಾದರೇನಂತೆ ?
ದುಡಿದು ಉಣ್ಣಲು ಮಾರ್ಗವಂತೆ !
ಹಳಸಿದ ಅನ್ನವೂ ರುಚಿಯಂತೆ !!

ಏನಂತೆ? ದುಃಖವಾದರೇನಂತೆ ?
ಸಂತೋಷದ ದಾರಿ ಸಿಕ್ಕಿತಂತೆ !
ಸುಖವೆಂಬುದೊಳಗೇ ಇದೆಯಂತೆ !!

ಏನಂತೆ? ತಪ್ಪಾದರೇನಂತೆ ?
ನಡೆ ತಿದ್ದಿ ಸಾಗುವ ಮನಸಂತೆ !
ತಲೆ ಎತ್ತಿ ನಡೆಯುವ ಕನಸಂತೆ !!

ಏನಂತೆ? ನಿಂದಿಸಿದರೇನಂತೆ ?
ನಿಂದಕರ ಬಾಯಿ ಹೊಲಸಂತೆ !
ನಾನಾರೆಂದು ನನಗೆ ತಿಳಿಯಿತಂತೆ !!

ಏನಂತೆ? ಸೂರಿಲ್ಲದಿರೇನಂತೆ ?
ಲೋಕವೆ ನನ್ನ ಮನೆಯಂತೆ !
ಬಹು ದೊಡ್ಡ ಮನೆಯೇ ನನ್ನದಂತೆ !!

ಏನಂತೆ? ದಿಕ್ಕಿಲ್ಲದಿರೇನಂತೆ ?
ಜನರೆಲ್ಲ ನನ್ನ ಬಂಧುಗಳಂತೆ !
ಬಲು ದೊಡ್ಡ ಸಂಸಾರ ನನ್ನದಂತೆ !!

-ಕ.ವೆಂ.ನಾಗರಾಜ್.

ಭಾನುವಾರ, ನವೆಂಬರ್ 7, 2010

ಮೂಢ ಉವಾಚ -21

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ?||


ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ|
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ||


ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ|
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ||


ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -7

ಋಗ್ವೇದವು:
ವಿಶ್ವಕರ್ಮಾ ವಿಮನಾ ಅದ್ವಿಹಾಯಾ|| (ಋಕ್. 10.82.2)
     ಮನೋಬಂದನವಿಲ್ಲದ, ಸರ್ವವ್ಯಾಪಕ ಪ್ರಭುವೇ ಸೃಷ್ಟಕರ್ತನು ಎನ್ನುತ್ತಲಿದೆ. ಅವನೇ ಸ್ಥಿತಿಗೂ, ಪಾಲನೆಗೂ ಕಾರಣನು. ಯಜುರ್ವೇದವು:
ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ|
ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು. 32.6)
ಎನ್ನುತ್ತಲಿದೆ.
     [ಯೇನ] ಯಾವನಿಂದ [ಉಗ್ರಾ ದ್ಯೌಃ ಪೃಥವೀ ಚ ಧೃಢಾ] ಉಗ್ರವಾದ ದ್ಯುಲೋಕವೂ, ಪೃಥಿವಿಯೂ ಧೃಢವಾಗಿದೆಯೋ [ಯೇನ ಸ್ವ ಸ್ತಭಿತಂ] ಯಾವನಿಂದ ಆನಂದಮಯ ಮೋಕ್ಷವು ಧೃಢೀಕೃತವಾಗಿದೆಯೋ [ಯೇನ ನಾಕಃ] ಯಾವನಿಂದ ಸುಖಮಯ ಇರುವಿಕೆ ಧೃಢವಾಗಿದೆಯೋ [ಯಃ ಅಂತರಿಕ್ಷೇ ರಜಸಃ] ಯಾವನು ಅಂತರಿಕ್ಷದಲ್ಲಿಯೂ ಲೋಕ ರಚಿಸಿ [ವಿಮಾನಃ] ವಿಶೇಷ ಮಾನಾರ್ಹನಾಗಿದ್ದಾನೋ [ಕಸ್ಮೈ ದೇವಾಃ] ಆ ಆನಂದಮಯ ದೇವನಿಗೆ [ಹವಿಷಾ ವಿಧೇಮ] ಸಚ್ಚಾರಿತ್ರದಿಂದ ವಿನೀತರಾಗೋಣ- ಎಂದು ಹೇಳುತ್ತಲಿದೆ. ಅವನೇ ಪ್ರಳಯ ಕರ್ತೃವೂ ಆಗಿದ್ದಾನೆ. ಋಗ್ವೇದವು :
ಯ ಏಕ ಇಚ್ಚ್ಯಾವಯತಿ ಪ್ರ ಭೂಮಾ ರಾಜಾ ಕೃಷ್ಟೀನಾಂ ಪುರುಹೂತ ಇಂದ್ರಃ|| (ಋಕ್. 4.17.5)
     [ಯಃ ಏಕ ಇತ್] ಯಾವನೊಬ್ಬನೇ [ಪ್ರ ಭೂಮಾ] ಈ ವಿಸ್ತೃತ ಬ್ರಹ್ಮಾಂಡವನ್ನು [ಚ್ಯಾವಯತಿ] ಲಯಗೊಳಿಸುತ್ತಾನೋ, ಅವನು [ಕೃಷ್ಟೀನಾಂ ರಾಜಾ] ಪ್ರಜೆಗಳೆಲ್ಲರಿಗೂ ರಾಜನಾದ [ಪುರುಹೂತಃ ಇಂದ್ರಃ] ಬಹುಸ್ತುತ್ಯನಾದ ಸರ್ವಶಕ್ತಿಮಾನ್ ಪ್ರಭುವಾಗಿದ್ದಾನೆ - ಎಂದು ಹೇಳುತ್ತಲಿದೆ.

ಗುರುವಾರ, ಅಕ್ಟೋಬರ್ 28, 2010

ಮೊರೆ






ಸರಿಸಿಬಿಡು ಮೂಢಮನ ಆವರಿತ ಪೊರೆಯಾ|
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು|
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|
ಸರ್ವದೂಷಿತನಾಗಿ ನೆಲೆಗಾಣದಿದೆ ಮನವು||
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||


ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||
ಹುಲುಮನುಜ ನಾನಾಗಿ ಭಾವಬಂಧಿಯು ನಾನು|
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.

ಬುಧವಾರ, ಅಕ್ಟೋಬರ್ 27, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6

ಋಗ್ವೇದದಲ್ಲಿ:-

ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)

     [ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ; - ಎಂದು ಓದುತ್ತೇವೆ. ಅಥರ್ವವೇದದಲ್ಲಿ:-

ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)

ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ- 
ಎಂದು ಹೇಳಿದೆ. ಯಜುರ್ವೇದದಲ್ಲಿ:-

ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ| ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20) ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್| ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)

     [ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ - ಎನ್ನುತ್ತಾರೆ.

     ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-

ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)

     [ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.

ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ - ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-

ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)

[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.

ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

ಬುಧವಾರ, ಅಕ್ಟೋಬರ್ 20, 2010

ಮೂಢ ಉವಾಚ -20

ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ*
ಕಂಡವರನು ಸುಡುವನೆ ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು
ನರರ ಕುಬ್ಜರಾಗಿಸುವುದು ಮೂಢ||
[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 18, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 5

ಋಗ್ವೇದ ಒಂದು ಕಡೆ ಹೇಳುತ್ತಲಿದೆ:

ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ| ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)

     [ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.

     ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, "ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ" ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ "ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. 'ದೇವರೊಬ್ಬನೇ' ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ" ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು 'ದೇವತೆ' ಅಥವಾ 'ದೇವ' ಎಂದು ನಿರ್ದೇಶಿಸುತ್ತವೆ.
                                                                                                                   -ಪಂ ಸುಧಾಕರ ಚತುರ್ವೇದಿ.

ಭಾನುವಾರ, ಅಕ್ಟೋಬರ್ 3, 2010

ಮೂಢ ಉವಾಚ -19

ಮದಭರಿತ ಮನುಜನ ಪರಿಯೆಂತು ನೋಡು
ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು|
ಮೇಲರಿಮೆಯಾ ಭೂತ ಅಡರಿಕೊಂಡಿಹುದು
ಭೂತಕಾಟವೇ ಬೇಡ ದೂರವಿರು ಮೂಢ||


ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು|
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ||


ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ|
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ||


ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ|
ವಿಕಟನರ್ತನಗೈವ ಮದವದವನತಿ ತರದೆ?|
ನರಾರಿ ಮದದೀಪರಿಯ ನೀನರಿ ಮೂಢ||
**************
-ಕವಿನಾಗರಾಜ್.

ಶನಿವಾರ, ಅಕ್ಟೋಬರ್ 2, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 4

ಋಗ್ವೇದ ಸಾರುತ್ತಲಿದೆ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.10.81.3.)

     [ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.
     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು "ಏಕಮ್" ಎಂಬ ಶಬ್ದವನ್ನು ಕಾಣುತ್ತೇವೆ.
-ಪಂ. ಸುಧಾಕರ ಚತುರ್ವೇದಿ.

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||


ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|


ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|


ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|


ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|


ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|


ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.

ಬುಧವಾರ, ಸೆಪ್ಟೆಂಬರ್ 29, 2010

ಮೂಢ ಉವಾಚ -8

                 ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ ||

               ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ |
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ ||

              ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ |
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ ||

             ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು |
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ ||
************
-ಕ.ವೆಂ.ನಾಗರಾಜ್

ಬುಧವಾರ, ಸೆಪ್ಟೆಂಬರ್ 22, 2010

ಮೂಢ ಉವಾಚ -7

ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ


ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ


ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ

ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ
***********
-ಕ.ವೆಂ.ನಾಗರಾಜ್

ಭಾನುವಾರ, ಸೆಪ್ಟೆಂಬರ್ 19, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -3

ಇನ್ನೊಂದು ಮಂತ್ರವನ್ನು ನೋಡೋಣ ಬನ್ನಿ:-

ಸ  ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಹಾಪವಿದ್ಧಮ್|
ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತಥ್ಯತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ|| (ಯಜು.40.8)

     [ಸಃ] ಆ ಚೇತನ ತತ್ವ, [ಪರಿ ಅಗಾತ್] ಎಲ್ಲಕ್ಕಿಂತ ಮೇಲಿದೆ, ಸರ್ವೋತ್ಕೃಷ್ಟವಾಗಿದೆ. [ಶುಕ್ರ] ಜ್ಯೋತಿರ್ಮಯವಾಗಿದೆ. [ಅಕಾಯಮ್] ವ್ರಣರಹಿತವಾಗಿದೆ. [ಅಸ್ನಾವಿರಮ್] ನರನಾಡಿಗಳ ಬಂಧನವಿಲ್ಲದುದಾಗಿದೆ. [ಶುದ್ಧಮ್] ಪವಿತ್ರವಾಗಿದೆ. [ಅಪಾಪವಿದ್ಧಮ್] ಪಾಪದಿಂದ ಛೇದಿಸಲ್ಪಡದುದಾಗಿದೆ. [ಕವಿಃ] ಸರ್ವಜ್ಞ, ಸರ್ವದ್ರಷ್ಟುವಾಗಿದೆ. [ಮನೀಷೀ] ವಿಚಾರಶೀಲವೂ, ಮನಃಪ್ರೇರಕವೂ ಆಗಿದೆ. [ಪರಿಭೂಃ} ಸರ್ವಶ್ರೇಷ್ಠ, ಸರ್ವಜ್ಯೇಷ್ಠವಾಗಿದೆ. [ಸ್ವಯಂಭೂಃ] ಸ್ವತಃ ಇರತಕ್ಕ, ಅನುತ್ಪನ್ನವಾದ ಅನಾದಿ ತತ್ವವಾಗಿದೆ ಅದು. [ಶಾಶ್ವತೀಭ್ಯಃ ಸಮಾಭ್ಯಃ] ತನ್ನ ಶಾಶ್ವತ ಪ್ರಜೆಗಳಾದ ಜೀವಾತ್ಮರಿಗೆ, [ಯಾಥಾ ತಥ್ಯತಃ] ಹೇಗೆ ಕೊಡಬೇಕೋ ಹಾಗೆ, [ಅರ್ಥಾನ್] ಜೀವಿಕಾ ಸಾಧನಗಳನ್ನೂ, ವಿಷಯಗಳ ಜ್ಞಾನವನ್ನೂ, [ವಿ ಅದಧಾತ್] ವಿಶಿಷ್ಟ ರೀತಿಯಲ್ಲಿ, ವಿವಿಧ ಪ್ರಕಾರದಿಂದ ದಯಪಾಲಿಸುತ್ತಿದೆ.
     ಭಗವಂತನ ಅತ್ಯಂತ ವೈಜ್ಞಾನಿಕವಾದ ಈ ಭವ್ಯಸ್ವರೂಪದ ಚಿತ್ರಣವನ್ನು ನೋಡಿ, ನಾಸ್ತಿಕರೂ ಕೂಡ "ಈ ದೇವರನ್ನಲ್ಲ ನಾವು ಖಂಡಿಸುವುದು" ಎಂದುಕೊಳ್ಳಬೇಕು. ವೈಜ್ಞಾನಿಕರು "ಈ ದೇವರನ್ನಲ್ಲ ನಾವು ಕೊಂದುದು" ಎಂದುಕೊಳ್ಳಬೇಕು! ಈ ಮಹಾನ್ ವಿಶ್ವಚೇತನ ಕೇವಲ ಸರ್ವವ್ಯಾಪಕವಲ್ಲ; ಅದು ಸರ್ವಜ್ಞವೂ ಅಹುದು; ಸರ್ವದ್ರಷ್ಟುವೂ ಅಹುದು, ಅತ್ಯಂತ ಪವಿತ್ರವಾದ ಆ ಪತಿತಪಾವನ ತತ್ವ ಸ್ವತಃ ಸತ್ಯ ಸಂಕಲ್ಪಗಳಿಂದ ಕೂಡಿ ನಿರ್ಮಲಾಂತಃಕರಣ ಚಿತ್ರಗಳಲ್ಲಿ ಪ್ರೇರಣೆ ತುಂಬಿಸುವ ಸದ್ವಸ್ತುವಾಗಿದೆ. ಸರ್ವಶ್ರೇಷ್ಠ. ಸರ್ವಜ್ಯೇಷ್ಠವಾದ ಆ ದಿವ್ಯಚೇತನ ಬೇರೆಯವರಿಂದ ತನ್ನ ಅಸ್ತಿತ್ವವನ್ನು ಎರವು ತೆಗೆದುಕೊಳ್ಳುವುದಿಲ್ಲ. ಯಾರು ಒಪ್ಪಲಿ, ಬಿಡಲಿ, ಅದಂತೂ ಇದ್ದೇ ಇರುತ್ತದೆ.
-ಪಂ. ಸುಧಾಕರ ಚತುರ್ವೇದಿ.

ಭಾನುವಾರ, ಸೆಪ್ಟೆಂಬರ್ 12, 2010

ಮೂಢ ಉವಾಚ -6

ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ

ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು
ಮಾಡಿದೆನೆನಬೇಡ ನಿನ್ನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀನು ಮೂಢ

ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
*************
-ಕವಿನಾಗರಾಜ್.

ಬುಧವಾರ, ಸೆಪ್ಟೆಂಬರ್ 1, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -2

      ಈ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಇದೊಂದು ಸ್ಥೂಲವಾದ ತತ್ವ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಪಾಮರಕೋಟಿಯನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಪರಮಾಣುಗಳಲ್ಲಿ, ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಆಕಸ್ಮಿಕ ಘಟನೆಗಳಲ್ಲಿ ಜ್ಞಾನವನ್ನು ಸಾಂಕೇತಿಸುವ ನಿಯಮಗಳು ಎಂತಾದರೂ ಇದ್ದಾವು? ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಈ ಜ್ಞಾನಮಯೀ ವಿರಾಟ್ ಶಕ್ತಿಯ ವಿಷಯದಲ್ಲಿ ವೇದ ಏನು ಹೇಳುತ್ತದೋ ನೋಡೋಣ:-

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.40.5.)

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ.  [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. 
    ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂಇತಿರುವ, ಸರ್ವತ್ರ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತಲಿದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ವಸ್ತುತಃ ಅದಿರುವುದು ಹಾಗೆಯೇ. ಅದರ ಭವ್ಯ ಸ್ವರೂಪವನ್ನು ನೋಡಿರಿ:-
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಶತ್|
ತದ್ಧಾವತೋ ನ್ಯಾನತ್ಯೇತಿ ತಿಷ್ಠತ್ಯಸ್ಮಿನ್ನಪೋ ಮಾತರಿಶ್ವಾ ದಧಾತಿ|| (ಯಜು.40.4.)
      [ಏಕಮ್] ಆ ಜ್ಞಾನಮಯೀ ಶಕ್ತಿ ಒಂದೇ ಇದೆ. [ಅನೇಜತ್] ಅದು ಚಲಿಸುವುದಿಲ್ಲ. [ಮನಸಃ ಜವೀಯಃ] ಮನಸ್ಸಿಗಿಂತಲೂ ವೇಗಶಾಲಿಯಾಗಿದೆ. [ದೇವಾಃ] ಶರೀರಗತವಾದ ಇಂದ್ರಿಯಗಳು, ಅಥವಾ ವಿದ್ವಜ್ಜನರೂ ಕೂಡಿ [ಏನತ್ ನ ಆಪ್ನುವತ್] ಇದನ್ನು ಹಿಡಿಯಲಾರದು. [ಪೂರ್ವಂ ಅರ್ಶತ್] ಏಕೆಂದರೆ, ಅದು ಅವರ ಹಿಡಿತಕ್ಕಿಂತ ಬಹು ಮೇಲೆ ವಿರಾಜಿಸುತ್ತಿದೆ. [ತತ್] ಅದು, [ಧಾವತಃ ಅನ್ಯಾನ್] ಓಡುತ್ತಿರುವ ಇತರರನ್ನು [ಅತಿ ಏತಿ] ಮೀರಿಸುತ್ತದೆ. [ತಿಷ್ಯತ್] ತಾನು ಮಾತ್ರ ಸ್ಥಿರವಾಗಿ ನಿಂತಿದೆ. [ತಸ್ಮಿನ್] ಅದರಲ್ಲಿದ್ದುಕೊಂಡೇ [ಮಾತರಿಶ್ವಾ] ಆಗಸದಲ್ಲಿ ಅಥವಾ ಭೂಮಾತೆಯ ಗರ್ಭದಲ್ಲಿರುವ ಜೀವಾತ್ಮನು [ಆಪಹ ದಧಾತಿ] ಕರ್ಮನಿರತನಾಗಿದ್ದಾನೆ.
     ಎಲ್ಲವೂ ಅದರಲ್ಲಿದೆ, ಅದು ಎಲ್ಲದರಲ್ಲಿಯೂ ಇದೆ. ಆ ವ್ಯಾಪಕತ್ವ ಸರ್ವಥಾ ಅತೀಂದ್ರಿಯ, ವಿದ್ವಜ್ಜನರ ಬುದ್ಧಿಯ ಹಿಡಿತದಿಂದಲೂ ಮೇಲಕ್ಕಿದೆ, ದೂರಕ್ಕಿದೆ. ಅದು ತಾನು ಕೂಟಸ್ಥವಾಗಿದ್ದರೂ, ಅಚಲವಾಗಿದ್ದರೂ, ಗತಿಯುಕ್ತವಾದ ಗ್ರಹೋಪಗ್ರಹಗಳಿಗಿಂತಲೂ, ಅವುಗಳ ಹಿಡಿತಕ್ಕಿಂತಲೂ ದೂರದಲ್ಲಿದೆ! ಜೀವರಾದ ನಾವೆಲ್ಲರೂ ಅದರಲ್ಲಿದ್ದುಕೊಂಡೇ ವಿವಿಧ ಕರ್ಮಗಳಲ್ಲಿ ತೊಡಗಿದ್ದೇವೆ. ಈ ಎರಡು ಮಂತ್ರಗಳು ಆ ಚೇತನಶಕ್ತಿಯ ಅನಂತ ವ್ಯಾಪಕತ್ವವನ್ನು ಸೊಗಸಾಗಿ ಚಿತ್ರಿಸಿವೆ.
-ಪಂ.ಸುಧಾಕರ ಚತುರ್ವೇದಿ.

ಶುಕ್ರವಾರ, ಆಗಸ್ಟ್ 27, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1


ಸನ್ಮಿತ್ರರೇ,
     ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.

ಭಗವತ್ ಸ್ವರೂಪ -1
     ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

     ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

ಶುಕ್ರವಾರ, ಆಗಸ್ಟ್ 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ
**************
-ಕವಿನಾಗರಾಜ್.

ಮಂಗಳವಾರ, ಆಗಸ್ಟ್ 17, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -16


ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ |
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ || (ಅಥರ್ವ. 8.2.25)

     [ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. 
     ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.
    ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.
-ಪಂ. ಸುಧಾಕರ ಚತುರ್ವೇದಿ.

ಭಾನುವಾರ, ಆಗಸ್ಟ್ 15, 2010

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ|
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು|
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು|
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ|

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು|
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ||


-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 13, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -15

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ|
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ|| (ಋಕ್.10.62.4)

     [ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

     ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇದಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.
-ಪಂ.ಸುಧಾಕರ ಚತುರ್ವೇದಿ.

ಗುರುವಾರ, ಆಗಸ್ಟ್ 12, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಬುಧವಾರ, ಆಗಸ್ಟ್ 11, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -14

     ಪರಮ ವೈಜ್ಞಾನಿಕವಾದ ವೇದಗಳು, ಶ್ರದ್ಧೆಯನ್ನು ನಿಜವಾದ ಶ್ರದ್ಧೆಯಾಗಿ ಉಳಿಸಿಕೊಳ್ಳುವ ದಿವ್ಯಪಥವನ್ನು ತೋರಿ, ಯಾವ ಬಗೆಯ ಭೇಧ ಭಾವಗಳಿಗೂ ಎಡೆಯಿಲ್ಲದಂತೆ ಮಾಡಿ, ಪೃಥ್ವಿಯ ಸರ್ವಮಾನವರಿಗೂ ಮಾನವತ್ವದ ವಿಕಾಸ ಮಾಡಿಕೊಲ್ಳುವ ಬಗೆಯನ್ನು ಬಣ್ಣಿಸಿ ಹೇಳುತ್ತವೆ. ವೇದಗಳಲ್ಲಿ ಮತಮತಾಂತರಗಳ ಗೊಂದಲವಿಲ್ಲ, ಮಾನವ ಜಾತಿಯನ್ನು ಹರಿದು ಹಂಚಿಹಾಕುವ ಹೊಂಚಿಲ್ಲ. ವೇದಗಳನ್ನು ಹಿಂದೂಗಳ ಶಾಸ್ತ್ರವೆಂದು ಕರೆಯುವುದು ವೇದಗಳ ಔನ್ನತ್ಯಕ್ಕೆ ಅಪಮಾನ ಮಾಡಿದಂತೆಯೇ ಸರಿ. ಈಸ್ವರೀಯ ವೇದಗಳು ಸರ್ವಮಾನವರ ಸಂಪತ್ತು. ವೇದಗಳು ಜೀವಮಾತ್ರರನ್ನು -ಇನ್ನು ಮಾನವಮಾತ್ರರೆಂದು ಬೇರೆ ಹೇಳಬೇಕೇನು?- ಅಮರನಾದ ಪ್ರಭುವಿನ ಮಕ್ಕಳೆಂದು ಕರೆಯುತ್ತವೆ:-

ಯುಜೇ ವಾಂ ಬ್ರಹ್ಮ ಪೂರ್ವ್ಯಂ ನಮೋಭಿರ್ವಿ ಶ್ಲೋಕ ಏತು ಪಥ್ಯೇವಸೂರೇಃ|
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ|| (ಯಜು.11.5)

     ನರನಾರಿಯರೇ! [ವಾಮ್] ನಿಮ್ಮಿಬ್ಬರನ್ನೂ [ಪೂರ್ವ್ಯಂ ಬ್ರಹ್ಮಯುಜೇ] ಅನಾದಿ ಭಗವದ್ವಾಣಿಯೊಂದಿಗೆ ನಿಯೋಜಿಸುತ್ತೇನೆ. [ಸೂರೇ ಪಥ್ಯಾ ಇವಾ] ಜ್ಞಾನಿಯ ಮಾರ್ಗದಲ್ಲಿ ನಡೆದಂತೆ [ನಮೋಭಿಃ] ವಿನಯದಿಂದ [ಶ್ಲೋಕಃ ವಿ ಏತು] ನಿಮ್ಮ ಕೀರ್ತಿ ಹರಡಲಿ. [ಯೇ] ಯಾರು [ದಿವ್ಯಾನಿ ಧಾಮಾನಿ ಆತಸ್ಥುತುಃ] ದೇವನಿರ್ಮಿತ ನೆಲೆಗಳಲ್ಲಿ ನೆಲೆಸಿರುವರೋ [ಅಮೃತಸ್ಯ ವಿಶ್ವೇ ಪುತ್ರಾಃ] ಆ ಅಮರ ಪ್ರಭುವಿನ ಮಕ್ಕಳೆಲ್ಲರೂ [ಶೃಣ್ವಂತು] ಆಲಿಸಲಿ. ವೇದಗಳ ದೃಷ್ಟಿಯಲ್ಲಿ ಮಾನವರೆಲ್ಲಾ ಭಗವದ್ಪುತ್ರರೇ. ಅಷ್ಟೇ ಅಲ್ಲ ಮಾನವ ಗೌರವವನ್ನು ವೇದಗಳು ಸಾರುತ್ತಿರುವ ರೀತಿಯೂ ಅದ್ಭುತವೇ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಆಗಸ್ಟ್ 10, 2010

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು 
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು 
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು 
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು 
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ 
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ |
ಬಯಕೆ ಜೀವನವು ಬಯಸುವುದು ತಪ್ಪಲ್ಲ 
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 9, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -13

     ಈ ಶ್ರದ್ಧಾ-ಮೇಧಾ ಸಮನ್ವಯ ವೇದಗಳ ವೈಶಿಷ್ಟ್ಯ. ವೇದಾನುಯಾಯಿಗಳ ಗುರುಮಂತ್ರವಾದ ಗಾಯತ್ರೀ ಜೀವನದ ಉತ್ಕರ್ಷದ ದಿಕ್ಕನ್ನು ತೋರಿಸುತ್ತದೆ.


ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್|| (ಯಜು.36.3)


     [ಸವಿತುಃ ದೇವಸ್ಯ] ಸೃಜನ ಕರ್ತೃವೂ ಪ್ರೇರಕನೂ ಆದ, ಪ್ರಕಾಶಮಯ ಪ್ರಭುವಿನ [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಣೀಯವಾದ, ಪಾಪಭಸ್ಮಕಾರಿಯಾದ ತೇಜಸ್ಸನ್ನು, [ಧೀಮಹಿ] ಧ್ಯಾನಿಸುತ್ತೇವೆ, ದರಿಸುತ್ತೇವೆ. [ಯಃ] ಆ ಸ್ವಾಮಿಯು [ನಃ ಧಿಯಃ] ನಮ್ಮ ಬುದ್ಧಿಗಳನ್ನು ಹಾಗೂ ಕರ್ಮಗಳನ್ನು [ಪ್ರಚೋದಯಾತ್] ಪ್ರೇರಿಸಲಿ.

ಶನಿವಾರ, ಆಗಸ್ಟ್ 7, 2010

ಮೂಢ ಉವಾಚ -1

ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ 
ಏಕಮುಖ ಬಹುಮುಖ ಸುಮುಖ ಕುಮುಖ !
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||

ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ 
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ |
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ 
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||

ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು 
ಸೇವೆಯನು ಗೈಯುವರು ನಂಬಿಕೆಯ ನಟಿಸುವರು |
ನೀನೆ ಗತಿ ನೀನೆ ಮತಿ ಪರದೈವವೆನ್ನುವರು 
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||

ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು |
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು 
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.

ವೇದೋಕ್ತ ಜೀವನ ಪಥ - ಜೀವನ ಬುನಾದಿ -12

     ಸತ್ಯದಲ್ಲಿ ಶ್ರದ್ಧೆಯಿಡಬೇಕು. ಆದರೆ ಜ್ಞಾನವಿಲ್ಲದೆ ಸತ್ಯಾಸತ್ಯನಿರ್ಣಯ ಮಾಡುವುದಾದರೂ ಹೇಗೆ? ಅದೇ ಕಾರಣದಿಂದ ಪರಮಾತ್ಮನು ಪ್ರತಿಯೊಬ್ಬ ಜೀವನಿಗೂ ಭರವಸೆ ನೀಡಿದ್ದಾನೆ:

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಮಿ ಹರೀ ಸಖಾಯಾ ಸಧಮಾದ ಆಶೂ|
ಸ್ಥಿರಂ ಕಥಂ ಸುಖಮಿಂದ್ರಾಧಿತಿಷ್ಠನ್ ಪ್ರಜಾನನ್  ವಿದ್ವಾನ್ ಉಪ ಯಾಹಿ ಸೋಮಮ್|| (ಋಕ್.3.35.4)

     [ಇಂದ್ರ] ಓ ಇಂದ್ರಿಯವಾನ್ ಜೀವ! [ತೇ] ನಿನ್ನನ್ನು [ಬ್ರಹ್ಮಯುಜಾ ಬ್ರಹ್ಮಣಾ] ಪರಬ್ರಹ್ಮಯುಕ್ತವಾದ ನಿರ್ಮಲಜ್ಞಾನದೊಂದಿಗೆ [ಯುನಜ್ಮಿ] ಸಂಬದ್ಧನಾಗಿ ಮಾಡುತ್ತೇನೆ. [ಸಖಾಯಾ] ನಿನಗೆ ಮೈತ್ರಿ ತೋರುವ [ಆಶೂ] ವೇಗಯುಕ್ತವಾದ [ಹರೀ] ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು [ಸಧಮಾದೇ ಯುನಜ್ಮಿ] ಅಕ್ಕಪಕ್ಕದಲ್ಲಿ ನಿಯೋಜಿಸುತ್ತೇನೆ. [ಸ್ಥಿರಂ ಸುಖಂ ರಥಮ್] ಧೃಢವೂ, ಸುಖಕರವೂ ಆದ ದೇಹರಥವನ್ನು [ಅಧಿತಿಷ್ಟನ್] ಏರಿ [ವಿದ್ವಾನ್] ವಿದ್ವಾಂಸನಾಗಿ [ಪ್ರಜಾನನ್] ಪ್ರಜ್ಞಾನವನ್ನು ಗಳಿಸಿ [ಸೋಮಂ ಉಪಯಾಹಿ] ಶಾಂತಿಸಾಗರನಾದ ಪ್ರಭುವಿನ ಬಳಿ ಸಾರು.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು


ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 29, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -11

ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿಃ|
ಅಶ್ರದ್ಧಾಮನೃತೇsದಧಾಚ್ಛ,ದ್ಧಾಂ ಸತ್ಯೇ ಪ್ರಜಾಪತಿಃ|| (ಯಜು.19.77)
     [ಪ್ರಜಾಪತಿಃ] ಜೀವರೆಲ್ಲರ ಪಾಲಕನಾದ ಭಗವಂತನು [ರೂಪೇ ದೃಷ್ಟ್ವಾ] ಸತ್ಯಾಸತ್ಯಗಳ ರೂಪಗಳನ್ನು ನೋಡಿ [ಸತ್ಯಾನೃತೇ ವ್ಯಾಕರೋತ್] ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು. [ಅನೃತೇ] ಅಸತ್ಯದಲ್ಲಿ [ಅಶ್ರದ್ಧಾಂ ಅದಧಾತ್] ಅಶ್ರದ್ಧೆಯನ್ನು ನೆಲೆಗೊಳಿಸಿದನು. [ಪ್ರಜಾಪತಿಃ] ಜೀವಮಾತ್ರರ ಸ್ವಾಮಿಯಾಧ ಭಗವಂತನು [ಸತ್ಯೇ] ಸತ್ಯದಲ್ಲಿ [ಶ್ರದ್ಧಾಂ ಅದಧಾತ್]ಶ್ರದ್ಧೆಯನ್ನು ನಿರೂಪಿಸಿದನು. ಸತ್ಯದಲ್ಲಿ ಶ್ರದ್ಧೆಯಿಡಬೇಕು.

ಬುಧವಾರ, ಜುಲೈ 28, 2010

ಸ್ವಾರ್ಥ



         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ

ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗುವು ಬಂದೀತೆಂದು ಹಲ್ಲು ಮುರಿದಿತ್ತು

ಓಡಿ ಹೋದಾರೆಂದು ಕಾಲ ತುಂಡರಿಸಿತ್ತು
ಬೇಡವೆಂದವರ ಕೈಯ ಕಡಿದಿತ್ತು

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು

ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]

ವೇದೋಕ್ತ ಜೀವನ ಪಥ - ಜೀವನ ಬುನಾದಿ -10

ಅಥರ್ವ ವೇದ ಭಕ್ತನ ಬಾಯಿಯಿಂದ ಪ್ರಭುವಿನ ಮುಂದೆ ಈ ಬೇಡಿಕೆಯನ್ನು ಮೂಡಿಸುತ್ತದೆ:

ಮೇಧಾಂ ಸಾಯಂ ಮೇಧಾಂ ಪ್ರಾತ್ರರ್ಮೇಧಾಂ ಮಧ್ಯಂದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭರ್ವಚಸಾ ವೇಶಯಾಮಹೇ|| ಅಥರ್ವ.6.108.5)

     [ಸಾಯಂ] ಸಂಜೆ, [ಮೇಧಾಂ] ಬುದ್ಧಿಯನ್ನು [ಆವೇಶಯಾಮಹೇ] ಜೀವನಗಳಿಗೆ ಇಳಿಸಿಕೊಳ್ಳುತ್ತೇವೆ. [ಪ್ರಾತಃ] ಬೆಳಿಗ್ಗೆ [ಮೇಧಾಂ] ಬುದ್ಧಿಯನ್ನು ಜೀವನಗತಮಾಡಿಕೊಳ್ಳುತ್ತೇವೆ. [ಮಧ್ಯಂದಿನಂ ಪರಿ] ಮಧ್ಯಾಹ್ನದಲ್ಲಿಯೂ [ಮೇಧಾಂ] ಬುದ್ಧಿಶಕ್ತಿಯನ್ನೇ ತುಂಬಿಕೊಳ್ಳುತ್ತೇವೆ. [ಸೂರ್ಯಸ್ಯ ರಶ್ಮಿ ಭಿಃ] ಸೂರ್ಯನ ಕಿರಣಗಳೊಂದಿಗೆ [ವಚಸಾ] ವಿದ್ವಜ್ಜನರ ಉಪದೇಶ ವಚನಗಳಿಂದ [ಮೇಧಾಂ ಆವೇಶಯಾಮಹೇ] ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇವೆ. ಬೇರೆ ಮತ-ಮತಾಂತರಗಳ ಶಾಸ್ತ್ರಗಳಿಗೂ, ಭಗವದ್ದತ್ತವಾದ ವೈಜ್ಞಾನಿಕ ಶಾಸ್ತ್ರಗಳಾದ ವೇದಗಳಿಗೂ ಇರುವ ವ್ಯತ್ಯಾಸವಿದೇ. ಭಕ್ತನು ಭಗವಂತನಲ್ಲಿ ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ| ಪ್ರ ಯಚ್ಛತು|| (ಅಥರ್ವ.19.64.1) [ಸ ಜಾತವೇದಾ] ಆ ಸರ್ವವ್ಯಾಪಕ ಸರ್ವಜ್ಞನಾದ ಭಗವಂತನು [ಮೇ] ನನಗೆ [ಶ್ರದ್ಧಾಂ ಚ ಮೇಧಾಂ ಚ ಪ್ರಯಚ್ಛತು] ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ - ಎಂದೇ ಬಿನ್ನಹ ಮಾಡಿಸುತ್ತದೆ. ಬುದ್ಧಿಸಂಗತವಾದ ವೇದಗಳು ಎಷ್ಟು ಸೊಗಸಾಗಿ ಶ್ರದ್ಧೆಗೆ ಸಲ್ಲಬೇಕಾದ ಸ್ಥಳವನ್ನು ನಿರೂಪಿಸುತ್ತದೆ ನೋಡಿರಿ.

ಭಾನುವಾರ, ಜುಲೈ 25, 2010

ಏನಂತೆ? ? . . .! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!

? ? ! !