ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ನವೆಂಬರ್ 28, 2013

ವೇದೋಕ್ತ ಜೀವನ ಪಥ-ಶಿಬಿರ

ಈಗಾಗಲೇ ಹಾಸನದಲ್ಲಿ ಒಂದು ವೇದೋಕ್ತಜೀವನ ಶಿಬಿರ ನಡೆದಿರುವುದು ಹಲವರ ಗಮನಕ್ಕೆ ಬಂದಿದೆ. ಹಲವರು ಅದರಲ್ಲಿ ಭಾಗವಹಿಸಿದ್ದಿರಿ. ಈಗ ಎರಡನೆಯ ಶಿಬಿರವನ್ನು ಚನ್ನರಾಯಪಟ್ಟಣದ ವೇದ ಭಾರತೀ ಸಂಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ. ಅದರ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.ಆಸಕ್ತರಿಂದ ಅರ್ಜಿಯನ್ನು ಪಡೆಯಲು ವ್ಯವಸ್ಥಾಪಕರು ಉದ್ಧೇಶಿಸಿದ್ದಾರೆ. ಶಿಬಿರದಲ್ಲಿ ಪಾಲ್ಗೊಳ್ಲಲು ಇಚ್ಚೆ ಇರುವ ವೇದಾಭಿಮಾನಿಗಳು ಅರ್ಜಿಯನ್ನು ನೇರವಾಗಿ ವ್ಯವಸ್ಥಾಪಕರ ವಿಳಾಸಕ್ಕೆ ಕಳಿಸಬಹುದು.


ವೇದಗಳಷ್ಟು ಪ್ರಾಚೀನವೂ, ಸರ್ವಜನಾದರಣೀಯವೂ, ಶ್ರೇಷ್ಠ ಸಂಸ್ಕೃತಿಯೂ, ಶ್ರೀಮಂತ ಕಲೆಯೂ, ಅನುಪಮ ಸಾಹಿತ್ಯ ಜ್ಞಾನಭಂಡಾರಗಳು ಮತ್ತೊಂದಿಲ್ಲ. ಅಂತೆಯೇ ಹೃದಯ ವೈಶಾಲ್ಯತೆಯನ್ನು ಹೊಂದಿರುವ ಈ ಸನಾತನ ಧರ್ಮದ ವೈಭವ ಮನುಕುಲಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯ ಅರಿವು ಮೂಡಿಸಲು ವೇದಪ್ರಚಾರಕರಾಗಿ, ಪರಿಚಾರಕರಾಗಿ ದೇಶದ ಉದ್ದಗಲಗಳಲ್ಲಿಯೂ ಸಂಚರಿಸಿ ದುಡಿಯುತ್ತಿರುವ ಬೆರಳೆಣಿಕೆಯ ಮಹನೀಯರಲ್ಲಿ ವೇದಾಧ್ಯಾಯೀ ಶ್ರೀಯುತ ಸುಧಾಕರಶರ್ಮಾ ಒಬ್ಬರು.  ವೇದ ಭಾಷ್ಯಕಾರರೂ, ವಿದ್ವಾಂಸರೂ,  ಸಂಶೋಧಕರೂ, ಲೇಖಕರೂ, ಸಾಹಿತಿಗಳೂ ಬಹುಭಾಷಾ ಪ್ರವಚನಕಾರರೂ ಮತ್ತು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾದ ಜಗತ್ತಿನ ಪ್ರಪ್ರಥಮ ವೇದ- ವೈದಿಕ ಧಾರಾವಾಹಿ ಹೊಸಬೆಳಕು ಎಂಬ ಖ್ಯಾತಿಯ ರುವಾರಿಗಳೂ ಆದ ಶ್ರೀಯುತ ಶರ್ಮರು ವೇದಗಳಲ್ಲಿ ಹೇಳಿರುವ ಹಾಗೂ ಮಹರ್ಷಿಗಳ ಉದಾತ್ತ ಚಿಂತನೆಯ ವಿಚಾರಗಳು ಮತ್ತು ಆಧ್ಯಾತ್ಮ ವಿದ್ಯೆಯ ವಾಸ್ತವಿಕ ಸ್ವರೂಪವನ್ನು ಅತಿ ಸುಲಭ ಮತ್ತು ಸರಳ ರೀತಿಯನ್ನು ಅನುಸರಿಸಿ ಸುಲಲಿತವಾಗಿ ಜನರಿಗೆ ತಿಳಿಸಿಕೊಡುವುದರೊಂದಿಗೆ ಅವರು ವೇದಪ್ರಣೀತ ಜೀವನವನ್ನು ನಡೆಸುವಂತಾಗಬೇಕು ಎಂಬ ಇಚ್ಛೆಯಿಂದ ಚನ್ನರಾಯಪಟ್ಟಣದಲ್ಲಿ ವೇದೋಕ್ತ ಜೀವನ ಪಥ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಕಲ ವಿಚಾರಗಳಲ್ಲಿಯೂ ಜೀವನ ಪೋಷಕ ಆದರ್ಶಗಳನ್ನು ಆಕರ್ಷಣೀಯ ಮಾತುಗಳಲ್ಲಿ ಮನಮುಟ್ಟುವಂತೆ ತಿಳಿಸಿಕೊಡಲಿದ್ದಾರೆ. ಶಾಂತಿ ಮತ್ತು ಸೌಭಾಗ್ಯದ ಆನಂದಕ್ಕಾಗಿ ರೂಪಿಸಲಾದ ಈ ಪವಿತ್ರ ಸಂಕಲ್ಪವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ. ವೇದಾನುಭವ ಸಂಪನ್ನರಿಂದ ನಡೆಯುತ್ತಿರುವ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿ, ಮುಕ್ತ ಮನಸ್ಸಿನಿಂದ ವಿಮರ್ಶಿಸಿ ತಿಳಿಯುವವರಿಗೆ ರಸದೌತಣ. ಈ ಮಾರ್ಗದರ್ಶನ ನಾಳಿನ ಬಾಳಿಗೆ ನಂದಾದೀವಿಗೆಯಾಗಬಲ್ಲದು.

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
 
9980813162/9448033817/9448868531
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ
-------------------------------------------------------------------------------------------

ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ-೫೭೩೧೧೬

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-

ಗೋರಕ್ಷೆಗಾಗಿ ಭಕ್ತಿ ಸಂಗೀತ


ಬನ್ನಿ, ಭಾಗವಹಿಸಿ, ಸತ್ಕಾರ್ಯಕ್ಕೆ ಸಹಕರಿಸಿ



ಗುರುವಾರ, ನವೆಂಬರ್ 14, 2013

ಹಾಸನದ ವೇದಭಾರತಿಯ ಸ್ತುತ್ಯಾರ್ಹ ಕಾರ್ಯ

     ಬೇಸಿಗೆಯ ರಜಾ ಆಗಲಿ, ದಸರಾ ರಜಾ ಆಗಲಿ ಬಂತೆಂದರೆ ಸಾಕು, ನನ್ನ ಮಗಳು ಹಾಸನದ ಅಜ್ಜಿ-ತಾತನ ಮನೆಗೆ ಹಾರಿಬಿಡುತ್ತಾಳೆ. ೨ನೆಯ ತರಗತಿಯಲ್ಲಿ ಓದುತ್ತಿರುವ ಮಗಳು ಅಕ್ಷಯ ಈ ಸಲವೂ ಬೇಸಿಗೆಯ ರಜೆಯಲ್ಲಿ ಹಾಸನಕ್ಕೆ ಹೋಗಿ ವಾಪಸು ಬಂದಾಗ ನಮಗೆ ಆಶ್ಚರ್ಯ ಕಾದಿತ್ತು. ಅವಳು ಸುಮಾರು ಒಂದು-ಒಂದೂವರೆ ಗಂಟೆಗಳ ಕಾಲ  ವೇದ ಮಂತ್ರಗಳನ್ನು ಪುಸ್ತಕ ನೋಡಿಕೊಳ್ಳದೆ ಸ್ವರಸಹಿತವಾಗಿ ಹೇಳಬಲ್ಲವಳಾಗಿದ್ದುದು ನಮಗೆ ಬಹಳ ಸಂತೋಷ ನೀಡಿತ್ತು. ೭-೪-೨೦೧೩ರಿಂದ ೧೭-೪-೨೦೧೩ರವರೆಗೆ ವೇದಭಾರತಿಯ ಆಶ್ರಯದಲ್ಲಿ ನಡೆದ 'ಬಾಲ ಸಂಸ್ಕಾರ ಶಿಬಿರ'ದಲ್ಲಿ ನನ್ನ ಮಗಳೂ ಸೇರಿದಂತೆ ಸುಮಾರು ೮೦ ಮಕ್ಕಳು ಭಾಗವಹಿಸಿದ್ದರು. ಮಕ್ಕಳಲ್ಲಿ ವೇದಮಂತ್ರಗಳ ಕಲಿಕೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದ್ದ ಆ ಶಿಬಿರದಲ್ಲಿ ವೇದಮಂತ್ರಗಳ ಅಭ್ಯಾಸದ ಜೊತೆಗೆ ದೇಶಭಕ್ತಿಗೀತೆಗಳನ್ನೂ ಹೇಳಿಕೊಡಲಾಗುತ್ತಿತ್ತು. ದೇಶಭಕ್ತರ ಕಥೆಗಳನ್ನು ಹೇಳುತ್ತಿದ್ದರು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲೂ ಅವಕಾಶ ಮಾಡಿಕೊಟ್ಟಿದ್ದರು. ವಿವಿಧ ಆಟೋಟಗಳೂ ಮಕ್ಕಳಿಗೆ ಮುದ ನೀಡಿದ್ದವು. ಶಿಬಿರದ ಭಾಗವಾಗಿ ಜೋಡಿಸಿಕೊಂಡಿದ್ದ ಒಂದು ಕಾರ್ಯಕ್ರಮಕ್ಕೆ ಮಕ್ಕಳ ತಾಯಿ-ತಂದೆಯರನ್ನೂ ಆಹ್ವಾನಿಸಿದ್ದು, 'ಮಾತೃವಂದನಾ ಮತ್ತು ಭಾರತ ಮಾತಾಪೂಜನ' ಎಂಬ ಆ ಕಾರ್ಯಕ್ರಮವಂತೂ ಎಲ್ಲರ ಮನಮುಟ್ಟುವಂತಿತ್ತು. ಮಕ್ಕಳು ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರದಲ್ಲಿ ಮಕ್ಕಳ ಪೋಷಕರನ್ನು ಸಾಲಾಗಿ ಕುಳ್ಳಿರಿಸಿ ಅವರ ಮಕ್ಕಳು ವೇದಮಂತ್ರಗಳನ್ನು ಉಚ್ಛರಿಸುತ್ತಾ ನಿರೂಪಕರ ಸೂಚನೆಗಳನ್ನು ಅನುಸರಿಸಿ ತಾಯಿ-ತಂದೆಯರ ಪಾದಪೂಜೆ ಮಾಡಿದರು. ಆ ದೃಷ್ಯ ಪೋಷಕರ ಮತ್ತು ಅದನ್ನು ಕಂಡವರ ಕಣ್ಣುಗಳಲ್ಲಿ ಆನಂದಭಾಷ್ಪ ಉದುರುವಂತೆ ಮಾಡಿದ್ದು ಕಾರ್ಯಕ್ರಮದ ಸಾರ್ಥಕತೆ ತೋರಿಸಿತ್ತು. ಶಿಬಿರ ಮುಗಿದ ನಂತರವೂ ನನ್ನ ಮಗಳು 'ಈಶಾವಾಸ್ಯಮ್'ನಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ವೇದಾಭ್ಯಾಸದ ಕಲಿಕಾ ಕೇಂದ್ರಕ್ಕೆ ಹೋಗಿ ಕಲಿಕೆ ಮುಂದುವರೆಸಿದಳು. ಹಾಸನದ ಆಕಾಶವಾಣಿಯಲ್ಲಿ ಪ್ರಸಾರವಾಗುವ ಬಾಲನಂದನ ಕಾರ್ಯಕ್ರಮದಲ್ಲಿ ನನ್ನ ಮಗಳ ಸಂದರ್ಶನ ನಡೆದು ಅಲ್ಲಿ ಅವಳು ವೇದಮಂತ್ರಗಳನ್ನು ನಿರರ್ಗಳವಾಗಿ ಹೇಳಿದ್ದು ನಮಗಂತೂ ನಂಬಲಾರದಂತಾಗಿತ್ತು.

     ಹಾಸನದಲ್ಲಿ ವೇದಭಾರತಿ ಅನೇಕ ಸ್ತುತ್ಯಾರ್ಹ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಬಂಧು ಹರಿಹರಪುರ ಶ್ರೀಧರ ಸಂಘಟಕ ಹಾಗೂ ಸಂಯೋಜಕರಾಗಿರುವ ಮತ್ತು ನನ್ನ ತಂದೆ ಅಧ್ಯಕ್ಷರಾಗಿರುವ 'ವೇದಭಾರತಿ' ಸಂಸ್ಥೆ ಹರಿಹರಪುರ ಶ್ರೀಧರರ ಮನೆಯ ಮೇಲ್ಮಹಡಿಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀಧರ ಅವರು ಈ ಮಹಡಿಯನ್ನು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟಿರುವುದು ಅವರ ಸಾಮಾಜಿಕ ಕಳಕಳಿಗೆ ಸೂಚಕವಾಗಿದೆ. "ಎಲ್ಲರಿಗಾಗಿ ವೇದ" ಎಂಬ ಘೋಷವಾಕ್ಯದೊಂದಿಗೆ ೧೯-೮-೨೦೧೨ರಂದು ವೇದಭಾರತಿಯ ವೇದಾಭ್ಯಾಸ ಕಲಿಕಾ ಕೇಂದ್ರ ಪ್ರಾರಂಭವಾಗಿ, ಅಂದಿನಿಂದ ಜಾತಿ, ಮತ, ಪಂಥ, ಲಿಂಗ ಮತ್ತು ವಯೋಭೇದವಿಲ್ಲದೆ ಆಸಕ್ತ ಎಲ್ಲರಿಗೂ ಇಲ್ಲಿ ವೇದಾಭ್ಯಾಸಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ವೇದ ಒಂದು ಜಾತಿಯ ಅಥವ ಒಂದು ವರ್ಗದ ಸ್ವತ್ತಲ್ಲ, ಜ್ಞಾನಾರ್ಜನೆಗೆ ಜಾತಿ, ಮತ, ಲಿಂಗಗಳ ಕಟ್ಟಿಲ್ಲ ಎಂಬುದನ್ನು ಪ್ರತ್ಯಕ್ಷ ಆಚರಣೆಗೆ ತಂದಿದ್ದು ಶ್ಲಾಘನೀಯ.
     ವೇದಭಾರತಿ ತನ್ನದೇ ಆದ ವೇದಾಭ್ಯಾಸಿಗಳ ಕಾರ್ಯಕರ್ತರ ತಂಡ ಹೊಂದಿದ್ದು ಪ್ರತಿಯೊಬ್ಬರೂ ಸಂಸ್ಥೆಯ ಚಟುವಟಿಕೆಗಳಿಗೆ ಹೃತ್ಪೂರ್ವಕ ಸಹಕಾರ ನೀಡುತ್ತಿರುವುದನ್ನು ಬಾಲಶಿಬಿರದ ಸಂದರ್ಭದಲ್ಲಿ ಕಂಡಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್, ಡಾ. ಗುರುರಾಜ ಹೆಬ್ಬಾರ್ ಮುಂತಾದ ಹಲವಾರು ಗಣ್ಯರುಗಳು ಸಂಸ್ಥೆಯ ಚಟುವಟಿಕೆಗಳಿಗೆ ಪೋಷಕರಾಗಿದ್ದಾರೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನವಿದೆ. ಶ್ರೀ ವಿಶ್ವನಾಥ ಶರ್ಮ, ಶ್ರೀ ಅನಂತನಾರಾಯಣರವರುಗಳು ವೇದಮಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ.
     ಆಗಾಗ್ಗೆ ಸಾಧು-ಸಂತರು, ಚಿಂತಕರುಗಳನ್ನು ಆಹ್ವಾನಿಸಿ ಸತ್ಸಂಗಗಳನ್ನು ಏರ್ಪಡಿಸುತ್ತಾರೆ. ಬಾಲಶಿಬಿರವಲ್ಲದೆ, 'ರೂಢಿಗತ ಸಂಪ್ರದಾಯಗಳು, ಆಚರಣೆಗಳು ಎಷ್ಟರಮಟ್ಟಿಗೆ ವೇದೋಕ್ತವಾಗಿವೆ' ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರನ್ನು ಕರೆಸಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ, ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ ಒಂದು ವಾರ ಕಾಲದ 'ಗೀತಾ ಜ್ಞಾನಯಜ್ಞ' ಕಾರ್ಯಕ್ರಮಗಳು ವೇದಭಾರತಿ ಏರ್ಪಡಿಸಿದ ಉಲ್ಲೇಖಾರ್ಹ ಚಟುವಟಿಕೆಗಳಾಗಿವೆ. ಇತ್ತೀಚೆಗೆ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ'ವನ್ನು ನಡೆಸಿದ್ದು ಪುಣೆಯ ಒಬ್ಬರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದ ೬೦ ಜನರು ವೇದೋಕ್ತ ರೀತಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರವರಿಂದ ಮಾರ್ಗದರ್ಶನ ಪಡೆದರು. ಪ್ರತಿ ದಿನ ಸಂಜೆ ಸಾರ್ವಜನಿಕ ಉಪನ್ಯಾಸವನ್ನೂ ಆ ಸಂದರ್ಭದಲ್ಲಿ ಏರ್ಪಡಿಸಿದ್ದರು. ಶಿಬಿರದ ಕೊನೆಯ ದಿನದಂದು ನಾಲ್ವರು ವಿವಾಹಿತ ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದಿದ್ದು ವಿಶೇಷ. ಒಟ್ಟಾರೆಯಾಗಿ ವೇದಭಾರತಿ ಸಂಸ್ಥೆ ವೇದ ಪ್ರಚಾರ ಮತ್ತು ಪ್ರಸಾರದಲ್ಲಿ ಸದ್ದಿಲ್ಲದೆ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. 
-ಬಿಂದು ರಾಘವೇಂದ್ರ, ಬೆಂಗಳೂರು.

ಸೋಮವಾರ, ನವೆಂಬರ್ 11, 2013

ಭಕ್ತಿಯೆಂಬ ಭಾವ

ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     'ಸಂಕಟ ಬಂದಾಗ ವೆಂಕಟರಮಣ!' ಮನುಷ್ಯನಿಗೆ ಕಷ್ಟಗಳು, ದುಃಖಗಳು ಬಾರದಿದ್ದರೆ ಅವನು ದೇವರನ್ನು ಸ್ಮರಿಸುತ್ತಿದ್ದನೋ ಇಲ್ಲವೋ ಎಂಬುದು ಯೋಚಿಸಬೇಕಾದ ವಿಷಯವೇ. ಇರಲಿ ಬಿಡಿ, ಸದ್ಯಕ್ಕೆ ಇದನ್ನು ಒಂದು ಪಕ್ಕಕ್ಕೆ ಇಟ್ಟುಬಿಡೋಣ. ಭಕ್ತಿಯ ಕುರಿತು ಚರ್ಚಿಸುವ ಪೂರ್ವದಲ್ಲಿ ಪೂರಕವಾದ ಮೂಲ ಸಂಗತಿಗಳ ಬಗ್ಗೆ ಗಮನಹರಿಸಲೇಬೇಕು. ಜ್ಞಾನ, ಕರ್ಮ ಮತ್ತು ಉಪಾಸನೆಗಳು ನಾಗರಿಕ ಮಾನವಧರ್ಮದ ಮೂರು ಅಭಿನ್ನ ಅಂಗಗಳೆಂದು ಹೇಳುತ್ತಾರೆ. ಈ ಮೂರೂ ಒಂದಕ್ಕೊಂದು ಪೂರಕವಾಗಿವೆ. ಮಾನವನಿಗೂ ಇನ್ನಿತರ ಪಶು, ಪಕ್ಷಿ, ಕ್ರಿಮಿ, ಕೀಟಗಳಿಗೂ ಇರುವ ಎದ್ದು ಕಾಣುವ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ತನಗನ್ನಿಸಿದ್ದನ್ನು ಮಾಡಬಲ್ಲ, ಮಾಡದಿರಲೂ ಬಲ್ಲ, ಇನ್ನೇನನ್ನೋ ಮಾಡಬಲ್ಲ. ಏನು, ಏಕೆ, ಹೇಗೆ ಇತ್ಯಾದಿಗಳನ್ನು ಕೇಳುವ, ತಿಳಿದುಕೊಳ್ಳುವ ಶಕ್ತಿ ಅವನಿಗೆ ಇದ್ದು, ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಜ್ಞಾನಸಂಪತ್ತು ಹೆಚ್ಚಿಸಿಕೊಳ್ಳುವ ಸೌಭಾಗ್ಯ ಅವನಿಗೆ ಇದೆ. ಇಂತಹ ಆಸಕ್ತಿ ಇಲ್ಲದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುವರೂ ಇರುತ್ತಾರೆ. ಅಜ್ಞಾನದ ಅಂಧಕಾರವನ್ನು ಕಳೆದುಕೊಳ್ಳಲು, ದುರಾಚಾರದಿಂದ ಸದಾಚಾರಕ್ಕೆ ಬದಲಾಗಲು, ಇರುವ ಸ್ಥಿತಿಗಿಂತ ಮೇಲಕ್ಕೇರಲು ಜ್ಷಾನ ನೆರವಾಗುತ್ತದೆ.
     ತಿಳಿವಳಿಕೆಯಿದೆ, ಆದರೆ ಅದು ಆಚರಣೆಗೆ ಬರುವುದಿಲ್ಲವೆಂದರೆ ಅದಕ್ಕೆ ಅರ್ಥವಿಲ್ಲ. ಹೀಗಾಗಿ ಕರ್ಮ ಮಾನವಧರ್ಮದ ಮತ್ತೊಂದು ಅಮೂಲ್ಯ ಭಾಗ. ಜ್ಞಾನ ಅನ್ನುವುದು ಮಾನವಧರ್ಮದ ತಲೆಯಿದ್ದಂತೆ ಅನ್ನುವುದಾದರೆ, ಕರ್ಮವನ್ನು ಅದರ ಕೈಕಾಲುಗಳು ಅನ್ನಬಹುದು. ಜ್ಞಾನ ಆಚರಣೆಗೆ ಬರದಿದ್ದರೆ ಅದೊಂದು ಸಿದ್ಧಾಂತ ಅಥವ ತತ್ವವಾಗಿಯೇ ಉಳಿಯುತ್ತದೆ. ಕರ್ಮವಿಲ್ಲದ ಧರ್ಮ ಕೈಕಾಲುಗಳಿಲ್ಲದ ಅಂಗವಿಕಲನಂತೆ ಅರ್ಥ ಕಳೆದುಕೊಳ್ಳುತ್ತದೆ. ಶರೀರ ಮತ್ತು ಆತ್ಮ ಒಟ್ಟಿಗೆ ಇರುವವರೆಗೆ ಆಹಾರ, ಬಟ್ಟೆ, ಆಶ್ರಯ ಇತ್ಯಾದಿಗಳಿಗಾಗಿ ಕೆಲಸ ಮಾಡಲೇಬೇಕು. ಇವನ್ನೆಲ್ಲಾ ಪಡೆಯಲು ಸುತ್ತಲಿನ ಸಮಾಜದ ಅವಲಂಬಿಗಳಾಗುತ್ತೇವಾದ್ದರಿಂದ, ಇವುಗಳನ್ನು ಕೊಡುವ ಸಮಾಜಕ್ಕೆ ಪ್ರತಿಯಾಗಿ ಏನೂ ಮಾಡದಿದ್ದರೆ ಪಾಪವಲ್ಲದೇ ಮತ್ತೇನು? ಕರ್ಮ ಮಾಡದವನು ಸಮಾಜದ ಋಣ ಉಳಿಸಿಕೊಂಡು ಸಮಾಜದ್ರೋಹಿಯಾಗುವುದಲ್ಲದೆ, ಆಧ್ಯಾತ್ಮಿಕ ಉನ್ನತಿ ಹೊಂದಲೂ ಅನರ್ಹನಾಗುತ್ತಾನೆಂದರೆ ತಪ್ಪಿಲ್ಲ. ಹೀಗಾಗಿ ಕರ್ಮ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ.
     ಈಗ ವಿಷಯಕ್ಕೆ ಬರೋಣ. ಮಾನವಧರ್ಮದ ಮೂರನೆಯ ಮಹತ್ತಾದ ಭಾಗ ಉಪಾಸನೆ. ಉಪಾಸನಾ ಪದದ ಅರ್ಥ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು ಎಂದು. ಭಗವಂತನಿಗೆ ಹತ್ತಿರವಾಗಿರುವುದು ಎಂದರೆ ಭಗವಂತ ನಮ್ಮಿಂದ ದೂರದಲ್ಲಿದ್ದಾನೆಂದು ಅರ್ಥವಲ್ಲ. ಎಲ್ಲೆಲ್ಲೂ ಇರುವ ದೇವರು ನಮ್ಮಿಂದ ದೂರವಿರಲು ಹೇಗೆ ಸಾಧ್ಯ. ಆದರೆ ಹುಲುಮನುಜರಾದ ನಾವು ಮಾನಸಿಕವಾಗಿ ಅವನಿಂದ ದೂರವಿದ್ದೇವಷ್ಟೆ. ಈ ಜ್ಞಾನಸಂಬಂಧಿತ ದೂರವನ್ನು ಕಡಿಮೆ ಮಾಡಿಕೊಳ್ಳುವುದೇ ಉಪಾಸನೆಯ ಮೂಲ ಉದ್ದೇಶ. ದಿನದ ಕೆಲ ಸಮಯವಾದರೂ ಮನಸ್ಸನ್ನು ಧ್ಯಾನ, ಅರ್ಚನೆ, ಇತ್ಯಾದಿಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಇದರ ಗುರಿ. ಉಪಾಸನೆಯ ಅಗತ್ಯ ಕಾಣುವುದು ಇಲ್ಲಿಯೇ. ಈ ಉಪಾಸನೆಯನ್ನೇ ಭಕ್ತಿ, ಪೂಜೆ, ಅರ್ಚನೆ ಮುಂತಾದ ರೀತಿಯಲ್ಲೂ ಹೆಸರಿಸುತ್ತಾರೆ.  
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳು ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ ||
    ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ (ಶ್ರವಣ, ಮನನ, ಮಥನ, ಮಂಥನ, ಇತ್ಯಾದಿ) ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಭಕ್ತಿ ಹಲವಾರು ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು ಅವಲಂಬಿಸಿರುತ್ತದೆ. 'ಅವರವವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಭಗವಂತ' ಎಂಬ ಕವಿವಾಣಿ ಅದಷ್ಟು ಸಮಂಜಸವಾಗಿ ತೋರುತ್ತದೆ! ದೇವಸ್ಥಾನಗಳಲ್ಲಿ ಪ್ರದರ್ಶಿಸುವ ದಾನಿಗಳ ಪಟ್ಟಿ, ಭಕ್ತರು ಮಾಡಿಸಿಕೊಡುವ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಮುಂತಾದವನ್ನು ಭಕ್ತಿಯ ಯಾವ ಪ್ರಾಕಾರಕ್ಕೆ ಸೇರಿಸಬೇಕು ಅನ್ನುವುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ. ದೇವರಂತೂ ಏನನ್ನೂ ಬಯಸಲಾರ, ಬಯಸಿದರೆ ಅವನು ದೇವರಾಗಲಾರ. ಆದರೂ ಭಕ್ತರು ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಳ್ಳುವ ರೀತಿಗಳಲ್ಲಿ ಇವೂ ಒಂದಾಗಿವೆ. 
     ಮೇಲೆ ಹೇಳಿದಂತೆ ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ. ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷಭಕ್ತಿಗೆ ಉದಾಹರಿಸಬಹುದಾದರೆ ಹನುಮಂತನನ್ನು ದಾಸಭಕ್ತಿಗೆ ಹೆಸರಿಸಬಹುದು. ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ). ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ. 
     ಪ್ರಾಸಂಗಿಕವಾಗಿ ನೀವು ಕೇಳಿರಬಹುದಾದ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ!"
     ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ: ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
     ನಿಷ್ಕಾಮ ಪ್ರೀತಿಯೆಂದರೆ ಯಾವುದೇ ಪ್ರತಿಫಲ ಬಯಸದೆ ದೇವರನ್ನು ಪೂಜಿಸುವುದು. ವಿವೇಕಾನಂದರು ಹೀಗೆ ಹೇಳುತ್ತಿದ್ದರು: "ನನ್ನ ಸ್ವಭಾವ 'ಅವನನ್ನು' ಪ್ರೀತಿಸುವುದು. ಆದ್ದರಿಂದ 'ಅವನನ್ನು' ಪ್ರೀತಿಸುತ್ತೇನೆ. ನಾನು ಯಾವುದಕ್ಕಾಗಿಯೂ ಪ್ರಾರ್ಥಿಸುವುದಿಲ್ಲ. ನಾನು ಯಾವುದನ್ನೂ ಬೇಡುವುದಿಲ್ಲ. 'ಅವನು' ನನ್ನನ್ನು ಎಲ್ಲಿಡಬಯಸುವನೋ ಅಲ್ಲಿ ಇಡಲಿ. ನಾನು ;ಅವನನ್ನು' ಪ್ರೀತಿಯ ಸಲುವಾಗಿ ಪ್ರೀತಿಸುತ್ತೇನೆ. ನಾನು ಪ್ರೀತಿಯಲ್ಲಿ ವ್ಯವಹರಿಸಬಯಸುವುದಿಲ್ಲ". ದೇವರು ಮತ್ತು ಭಕ್ತರ ನಡುವಣ ನೈಜ, ನಿಷ್ಕಾಮ ಪ್ರೀತಿಯ ಬಂಧ ವಾಸ್ತವವಾಗಿ ಮನುಷ್ಯನನ್ನು ಪ್ರಾಪಂಚಿಕ ಬಂಧನಗಳಿಂದ ಬಿಡಿಸುತ್ತದೆ. 
ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ ||
     ಭಕ್ತಿ ದೇವರನ್ನು ಕಾಣುವ ಪ್ರಯತ್ನದಲ್ಲಿ ಅತ್ಯಂತ ಸಹಜವಾದ, ಸುಲಭವಾದ ಮತ್ತು ಪ್ರಯತ್ನದಲ್ಲೇ ಆನಂದವನ್ನು ಕಾಣಬಲ್ಲ ಸರಳವಾದ ಮಾರ್ಗ; ಆದರೆ ಭಕ್ತಿಯ ಕೆಳಹಂತದಲ್ಲಿರುವವರು ತಾವು ನಂಬಿದ ತತ್ವ, ಆದರ್ಶಗಳಿಗೆ ಕಟ್ಟುಬಿದ್ದು ಇತರರ ನಂಬಿಕೆಗಳನ್ನು ವಿರೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಅಪಾಯವಿದೆ. ಪ್ರೀತಿಯ ವಸ್ತುವಿಗೆ ತೋರುವ ಅವರ ಏಕನಿಷ್ಠೆ ಹೆಚ್ಚಿನ ಸಂದರ್ಭಗಳಲ್ಲಿ ಇತರರನ್ನು ದ್ವೇಷಿಸುವಲ್ಲಿ, ಅನೇಕ ಹುಚ್ಚಾಟಗಳಿಗೆ ಇಳಿಯುವಲ್ಲಿ ಕೊನೆಗೊಳ್ಳುತ್ತದೆ. ಇಂತಹ ಹುಚ್ಚಾಟದ ಮತ್ತ್ಠು ಅಮಾಯಕರ ರಕ್ತ ಹರಿಸುವ ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗುವ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನರು, ಇತರ ಮತೀಯರುಗಳು ಇಂತಹ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ದುರ್ಬಲ ಮತ್ತು ಅವಿಕಸಿತ ಮನಸ್ಸುಗಳವರು ತಮ್ಮ ನಂಬಿಕೆಯನ್ನು ಪ್ರೀತಿಸುವ ರೀತಿಯೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟಗಳ, ಭಯೋತ್ಪಾದನೆಗಳ ಮೂಲಕಾರಣ ಇದೇ ಆಗಿದೆ.
     ನಿಜವಾಗಿ ಹೇಳಬೇಕೆಂದರೆ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಕಾರಿ ಸಾಧನಗಳೇ ಹೊರತು ಅವೇ ಅಂತ್ಯವಲ್ಲ. ನಿಜವಾದ ಅರಿವು ಮೂಡಿದಾಗ, ನಿಜವಾದ ದೈವಿಕ ಆನಂದವನ್ನು ಸವಿಯುತ್ತಿರುವಾಗ ಅವುಗಳ ಯಾವುದರ ಆಸರೆಯೂ ಬೇಕೆನಿಸುವುದಿಲ್ಲ, ಯಾವ ಧರ್ಮಗ್ರಂಥಗಳೂ ಬೇಕಿರುವುದಿಲ್ಲ ಮತ್ತು ಯಾವ ಉಪದೇಶಗಳ ಅಗತ್ಯವೂ ಇರುವುದಿಲ್ಲ. ಆಗ ದೇವರು ಹೃದಯದಲ್ಲೇ ಇರುತ್ತಾನೆ. ಮತ್ತೆ ಬೇರೆ ಎಲ್ಲಿ ಅವನನ್ನು ಹುಡುಕಬೇಕು?
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
                                                                        -ಕ.ವೆಂ.ನಾಗರಾಜ್.