ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 30, 2018

ಪಂ.ಸುಧಾಕರ ಚತುರ‍್ವೇದಿಯವರ ವಿಚಾರ - 26.08.2018


     ಕಳೆದ ಶನಿವಾರ ಶತಾಯುಷಿ ಪಂ.ಸುಧಾಕರ ಚತುರ‍್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡಿದ್ದೆ. ಶರೀರ ಕೃಷವಾಗಿದ್ದರೂ ಅವರ ವಿಚಾರ ಎಂದಿನಂತೆ ಹರಿತವಾಗಿಯೇ ಇದೆ, ಸ್ಪಷ್ಟವಾಗಿಯೇ ಇದೆ. ಅವರು ಹೇಳಿದ ವಿಚಾರಗಳ ಕೆಲವು ಅಂಶಗಳನ್ನು ನಿಮ್ಮೊಡನೆ ಹಂಚಿಕೊಂಡಿರುವೆ:
"ಹರಿಯುವ ನೀರು ಶುಭ್ರವಾಗಿ ಇರುತ್ತದೆ. ಅದೇ ರೀತಿ ಮಾನವನೂ ನಿರಂತರವಾಗಿ ಮುನ್ನಡೆಯುತ್ತಿರಬೇಕು. ಚರೈವೇತಿ, ಚರೈವೇತಿ ಎಂಬುದು ಮಂತ್ರವಾಗಬೇಕು. ಮುನ್ನಡೆಯುವುದು ಎಂದರೆ ಯಾವ ಯಾವ ಕಾಲದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾ ಧರ್ಮಿಷ್ಠರಾಗಿ ನಡೆಯಬೇಕು. ನಡೆಯುವಾಗ ಒಂದು ಗುರಿ ಇರಬೇಕು. ಗೊತ್ತು ಗುರಿ ಇಲ್ಲದೆ ನಡೆಯುವುದು ವ್ಯರ್ಥ. ಸತ್ಯಾನುಷ್ಠಾನ, ಸತ್ಯಾನ್ವೇಷಣೆ ನಮ್ಮ ಗುರಿಯಾಗಬೇಕು. ಧೈರ್ಯವಿರಬೇಕು."
"ನನಗೆ ಎಲ್ಲವೂ ಗೊತ್ತಿದೆ ಅನ್ನುವವನು ವಿದ್ವಾಂಸ ಅಲ್ಲ. ವಿದ್ವಾಂಸನಾದವನು ನಮ್ರನಾಗಿರುತ್ತಾನೆ. ಕೆಲವು ಮರಗಳು ಆಕಾಶದೆತ್ತರ ಬೆಳೆದಿರುತ್ತವೆ. ಅವುಗಳು ಅಲಂಕಾರಿಕ ಅಷ್ಟೆ, ಪ್ರಯೋಜನವಿಲ್ಲ. ಇನ್ನು ಕೆಲವು ಮರಗಳು ಹಣ್ಣು, ಹಂಪಲುಗಳನ್ನು ಬಿಟ್ಟಾಗ ಅವುಗಳ ಭಾರದಿಂದ ಬಗ್ಗಿರುತ್ತವೆ, ತಗ್ಗಿರುತ್ತವೆ. ಉಪದೇಶಗಳಿಂದ ಉದ್ಧಾರ ಆಗುವುದಿಲ್ಲ. ಆತ್ಮ ಪ್ರಶಂಸೆ ಸಲ್ಲದು. ಜ್ಞಾನ ಅನಂತವಾದುದು. ತಿಳಿದಷ್ಟೂ ತಿಳಿಯುವುದು ಇದ್ದೇ ಇರುತ್ತದೆ."
"ನಾನು ಆ ಜಾತಿ, ನಾನು ಈ ಜಾತಿ ಅನ್ನುವುದಕ್ಕಿಂತ ನಾನು ಮಾನವ ಜಾತಿ ಎಂದು ಕರೆದುಕೊಳ್ಳುವಂತೆ ಆಗಬೇಕು. ಮನುರ್ಭವ - ಮಾನವರಾಗಿ."
"ಬರುವಾಗಲೂ ಅಳುವುದು, ಹೋಗುವಾಗಲೂ ಅಳುವುದು! ಬರುವುದು, ಹೋಗುವುದು ಇದ್ದೇ ಇರುತ್ತದೆ. ನಗಬಲ್ಲವನು ಮನುಷ್ಯ. ನಗುತ್ತಾ, ನಗಿಸುತ್ತಾ ಬಾಳಬೇಕು."

-ಕ.ವೆಂ.ನಾ.