ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಅಕ್ಟೋಬರ್ 28, 2015

ಸಾಧನಾ ಸೋಪಾನ - 9: ಅನ್ನದೇವರ ಮುಂದೆ ಅನ್ಯ ದೇವರುಂಟೆ?





     ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ ಎಂಬುದೇ ಆಗಿದೆ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ.
     ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿರದೆ ಹಲವಾರು ಸಂಗತಿಗಳ ಸಮ್ಮಿಲಿತಫಲವಾಗಿರುತ್ತದೆ. ಉದಾಹರಣೆಗೆ, ಗಾಳಿಯಲ್ಲದೆ ಉಸಿರಾಡಲಾರೆವು, ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ಉಸಿರಾಡಲಾಗುವುದಿಲ್ಲ. ಸಾಮಾಜಿಕ ಜೀವನಕ್ಕೂ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಉಪನಿಷತ್ತು ಹೇಳುವ ವಿಶಾಲ ಅರ್ಥದಲ್ಲಿ ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆನಿಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. ಹೀಗೆ ಶಕ್ತಿಯ ಉತ್ಪಾದನೆಗೆ ಕಾರಣವಾಗುವುದೆಲ್ಲವೂ 'ಅನ್ನ'ವಾಗಿದೆ.
     ಈ ವೇದಮಂತ್ರ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಇದರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಹಾಗಿರುವಾಗ ಆಹಾರಕ್ಕಾಗಿ ಹಪಹಪಿಸುವ ಲಕ್ಷಾಂತರ ಜೀವಿಗಳಿರುವ ಈ ಜಗತ್ತಿನಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಸಾಮಾಜಿಕ ಪ್ರಜ್ನೆ ಎಲ್ಲರಲ್ಲೂ ಮೂಡಬೇಕು.
     ಒಬ್ಬ ವ್ಯಕ್ತಿ ಹತ್ತು ದಿನಗಳಿಂದ ಆಹಾರ ಸೇವಿಸಿಲ್ಲವೆಂದಿಟ್ಟುಕೊಳ್ಳೋಣ. ಏನಾಗುತ್ತದೆ? ಅವನು ಬದುಕಿರಬಹುದು, ಜೀವಿಯೆಂದು ಅನ್ನಿಸಿಕೊಳ್ಳಬಹುದು, ಆದರೆ ಆತ ಕಾಣುವ, ಕೇಳುವ, ಯೋಚಿಸುವ ಅಥವ ಅರ್ಥ ಮಾಡಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿರುತ್ತಾನೆ. ಅಲ್ಲಿ ಪ್ರಾಣವಿದೆ, ಸತ್ವವಿಲ್ಲ, ಏಕೆಂದರೆ 'ಅನ್ನ' ಇಲ್ಲ. ಆಹಾರ ಕಂಡ ಕೂಡಲೇ ಅವನಿಗೆ ಚೈತನ್ಯ ಬಂದಂತಾಗುತ್ತದೆ. 'ಅನ್ನ'ವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕ. ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ.
     'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುತ್ತೇವೆ ಅಲ್ಲವೇ? ಇದರ ಅರ್ಥ ಸಹ ಸ್ಪಷ್ಟ. ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವ ಹೆಚ್ಚಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಲ್ಲದೆ, ಪ್ರಶಾಂತವಾದ ಮತ್ತು ಹಿತಕರವೆನಿಸುವ ವಾತಾವರಣದಲ್ಲಿ ಇರುವುದು ಸಹಾಯಕಾರಿಯಾಗುತ್ತವೆ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದ್ದರೂ, ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗಿರದೆ ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿಯೂ ಬರಬಹುದು. ಬಹುತೇಕ ರಾಜಕಾರಣಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಮತೀಯ ಹುಚ್ಚಾಟಗಳಿಗೂ ಇದು ಮೂಲಕಾರಣವಾಗಿದೆ. ಅವರುಗಳು ತಾವು ನಂಬಿರುವುದೇ ಸರಿಯೆನ್ನುತ್ತಾರೆ ಮತ್ತು ಇತರರು ತಮ್ಮ ಮಾತನ್ನು ಕೇಳಬೇಕೆನ್ನುವ ಸಲುವಾಗಿ ಏನು ಮಾಡಲೂ ತಯಾರಿರುತ್ತಾರೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಆದರೆ ಹಿಡಿತದಲ್ಲಿರುವ ರಾಜಸಿಕತೆ ಅತ್ಯಗತ್ಯವಾಗಿದ್ದು, ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಇದು ಸಹಕಾರಿಯಾಗಿರುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತು, ಅತಿಯಾದ ಕೆಲಸ, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲಿದ್ದು, ಹಿತ-ಮಿತವಾಗಿ ಬಳಸಿದರೆ ಒಳಿತು. ಸಾತ್ವಿಕರ ಮತ್ತು ನಿಯಂತ್ರಿತ ರಾಜಸಿಕರ ಹಿತಕರ ಒಟ್ಟುಗೂಡುವಿಕೆ ಸಮಾಜಕ್ಕೆ ಉಪಕಾರಿಯಾಗಿರುತ್ತದೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು. ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ.
     'ಅನ್ನ'ವೆಂದರೆ ಕೇವಲ ನಾವು ಸೇವಿಸುವ ಆಹಾರ ಮಾತ್ರವಲ್ಲ ಮತ್ತು ನಾವು ನೋಡುವ, ಕೇಳುವ ಮತ್ತು ತಿನ್ನುವ 'ಅನ್ನ'ವನ್ನು ಅವಲಂಬಿಸಿ ನಮ್ಮ ಗುಣ, ಸ್ವಭಾವಗಳು ರೂಪಿತವಾಗುತ್ತವೆ ಎಂಬುದನ್ನು ತಿಳಿದೆವು. ಒಂದು ಕೆಟ್ಟ ಸುದ್ದಿಯೆಂದರೆ, ಮನುಷ್ಯನ ಸ್ವಭಾವಕ್ಕೂ ಆತನ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಒಂದು ಒಳ್ಳೆಯ ಸುದ್ದಿಯೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿದ್ದು, ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ಇಂತಹ ಕರುಣಾಮಯಿ ಅನ್ನದೇವರ ಮುಂದೆ ಅನ್ಯ ದೇವರುಂಟೇ?
-ಕ.ವೆಂ.ನಾಗರಾಜ್.
***************
ದಿನಾಂಕ 14.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಅಕ್ಟೋಬರ್ 23, 2015

ಸಾಧನಾ ಸೋಪಾನ - 8: ಬಲಶಾಲಿಯ ಮಾತನ್ನು ಜಗತ್ತು ಕೇಳುತ್ತದೆ!



ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? |
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ ||
     ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ ಅಂತಃಸತ್ವವನ್ನು ಅರಿತವರಾಗಬೇಕು. ವಾಸ್ತವತೆಗೆ ಆ ಅರಿವು ಸರಿಹೊಂದಬೇಕು. ಯಾವುದೇ ವಿಷಯದ ಸ್ಪಷ್ಟ ಅರಿವಿಲ್ಲದಿದ್ದಲ್ಲಿ ಆ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಿಲ್ಲವೆಂಬುದನ್ನೂ ಕಂಡುಕೊಂಡೆವು. ಈಗ ಮುಂದಿನ ಸಂಗತಿಯ ಬಗ್ಗೆ ಗಮನ ಹರಿಸೋಣ. ದೇಹ ಮತ್ತು ಮನಸ್ಸುಗಳ ಸಂಬಂಧ ಪರಸ್ಪರ ಪೂರಕವಾಗಿರುತ್ತದೆ. ಮನಸ್ಸಿನ ಇಚ್ಛೆಗೆ ತಕ್ಕಂತೆ ದೇಹ ಸಹಕರಿಸದಿದ್ದರೆ ಪ್ರಯೋಜನವಿಲ್ಲ. ಈ ಕಾರಣದಿಂದಾಗಿ ದೈಹಿಕ ಬಲಕ್ಕೆ ಅರಿವಿಗಿಂತ ಹೆಚ್ಚಿನ ಪ್ರಾಧಾನ್ಯತೆ ಬರುತ್ತದೆ. ದೈಹಿಕ ಬಲದ ಮಹತ್ವದ ಬಗ್ಗೆ ನೋಡೋಣ.
     ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದ್ದು, ಇದು ಜ್ಞಾನ, ವಾಕ್ಕು, ಮನಸ್ಸು, ಸಂಕಲ್ಪ, ನೆನಪು, ಧ್ಯಾನ, ಅರಿವು, ಇತ್ಯಾದಿಗಳಿಗಿಂತ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಬಲವಿಲ್ಲದ ನೂರು ಪಂಡಿತರನ್ನು ಬಲವಿರುವ (ಪಾಂಡಿತ್ಯ ಮತ್ತು ಶಕ್ತಿ) ಒಬ್ಬ ಸೋಲಿಸಬಲ್ಲ ಎಂಬುದು ಆಡುನುಡಿಯಾಗಿದೆ.
     ಹಿಂದೆ ಗುರುಕುಲದಲ್ಲಿ ಶಿಷ್ಯ ಗುರುವಿನೊಂದಿಗೇ ಕುಟೀರದಲ್ಲಿ ವಾಸವಿದ್ದು ವಿದ್ಯೆ ಕಲಿಯಬೇಕಿತ್ತು. ಶಿಷ್ಯರಾದವರು ಗುರುವಿನ ಸೇವೆ ಮಾಡಬೇಕಿತ್ತು. ಒಬ್ಬ ಸೊರಗಿಹೋಗಿರುವ, ರೋಗಿಷ್ಠ, ಶಕ್ತಿಹೀನ ಶಿಷ್ಯನಿಗೆ, ಆತ ಎಷ್ಟೇ ಕಲಿಯುವ ಶಕ್ತಿ ಮತ್ತು ಸಾಮರ್ಥ್ಯ ಇದ್ದರೂ, ಗುರುವಿನ ಸೇವೆ ಮಾಡಲು ಆಗುವುದೇ ಇಲ್ಲ. ಶಕ್ತಿ ಇದ್ದಿದ್ದರೆ, ಆತ ಗುರುವಿನ ಬಳಿ ಹೋಗಿ ನಿಲ್ಲಬಲ್ಲ, ಸೇವೆ ಮಾಡಬಲ್ಲ, ಗುರುವಿನ ಸಮೀಪ ಕುಳಿತು ಯೋಗ್ಯ ವಿದ್ಯೆಯನ್ನು ಕಲಿಯಬಲ್ಲ, ಗುರು ಹೇಳಿದ್ದನ್ನು ತಿಳಿಯಬಲ್ಲ, ದೇಹ ಸಾಮರ್ಥ್ಯದಿಂದ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ, ಆಗ ಮಾತ್ರ ಆತನ ಕಲಿಕೆ ಪೂರ್ಣವಾಗುತ್ತಿತ್ತು.
     ನೂಕು ನುಗ್ಗಲು ಇರುವ ಸ್ಥಳದಲ್ಲಿ ಒಬ್ಬ ಠೊಣಪ ಸಣಕಲನೊಬ್ಬನ ಕಾಲನ್ನು ಅಕಸ್ಮಾತ್ತಾಗಿ ತುಳಿದುಬಿಟ್ಟಾಗ ಸಣಕಲ ಠೊಣಪನಿಗೆ, 'ಏಯ್, ಕಣ್ಣು ಕಾಣಿಸಲ್ವಾ? ನೋಡಿಕೊಂಡು ಹೋಗಕ್ಕೆ ಆಗಲ್ವಾ?' ಅನ್ನುತ್ತಾನೆ ಎಂದುಕೊಳ್ಳೋಣ. ಠೊಣಪ, 'ಕಾಣಲಿಲ್ಲ, ಸಾರಿ' ಎಂದರೆ ಸಣಕಲ ಸುಮ್ಮನಿರದೆ, 'ಮಾಡೋದು ಮಾಡಿಬಿಟ್ಟು ಸಾರಿ ಅಂತೆ ಸಾರಿ. ಕೊಬ್ಬು ಜಾಸ್ತಿ' ಎಂದುಬಿಟ್ಟರೆ? ಸಣಕಲ ದೊಡ್ಡ ವಿದ್ಯಾವಂತ, ಪ್ರಭಾವಶಾಲಿ ಇರಬಹುದು. ಆದರೆ ಠೊಣಪ ಮುಷ್ಠಿ ಕಟ್ಟಿ ಒಂದು ಬಿಗಿದುಬಿಟ್ಟರೆ ಸಣಕಲನ ಶರೀರದ ಆಕಾರವೇ ಬದಲಾಗುವುದಿಲ್ಲವೇ? ನಮ್ಮ ರಾಜಕೀಯ ನಾಯಕರುಗಳಾದರೂ ಬಹತೇಕರು ಜನಬಲ, ಜಾತಿಬಲ, ಅಧಿಕಾರಬಲ, ತೋಳ್ಬಲದಲ್ಲಿ ಮುಂದಿರುವವರೇ. ಅವರ ಮಾತುಗಳು, ನಡೆ-ನುಡಿಗಳು ಇಷ್ಟವಾಗದಿದ್ದರೂ ಅವರ ವಿರುದ್ಧ ಯಾರಾದರೂ ಎದುರು ಮಾತನಾಡುತ್ತಾರೆಯೇ? ಬಲದ ಬಲವಿದು! ಒಂದು ಸುಭಾಷಿತ ಹೇಳುತ್ತದೆ: "ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ; ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ"- ('ಕುದುರೆಯಲ್ಲ, ಆನೆಯಲ್ಲ, ಹುಲಿಯಂತೂ ಅಲ್ಲವೇ ಅಲ್ಲ, ಮೇಕೆಯನ್ನು ಬಲಿ ಕೊಡುತ್ತಾರೆ, ದೇವರೂ ಸಹ ದುರ್ಬಲರನ್ನೇ ಘಾತಿಸುತ್ತಾನೆ'). ಅರ್ಥ ಸ್ಪಷ್ಟ, ಬಲವಿರುವವರ ತಂಟೆಗೆ ಯಾರೂ ಹೋಗುವುದಿಲ್ಲ!
     ಭೂಮಿ ಧ್ಯಾನಿಸುತ್ತಿದೆ ಎಂದರೆ ವಿಚಿತ್ರವಾಗಿದೆಯೆಂದು ಭಾವಿಸಿಯಾರು! ಧ್ಯಾನವೆಂದರೆ ಕಣ್ಣು ಮುಚ್ಚಿ ಕುಳಿತು ಯಾವುದೋ ಮಂತ್ರ ಪಠಿಸುತ್ತಾ ಕೂರುವುದಲ್ಲ. ಧ್ಯಾನವೆಂದರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ತದೇಕಚಿತ್ತರಾಗಿ ಚಿಂತಿಸುತ್ತಾ ವಿಚಲಿತರಾಗದೆ ಧ್ಯಾನದ ಗಮ್ಯವನ್ನು ತಲುಪಲು ಉಪಕ್ರಮಿಸುವುದು. ಭೂಮಿ ತನ್ನ ಅಕ್ಷದ ಸುತ್ತಲೂ ನಿರ್ದಿಷ್ಟ ಸಮಯ ಅನುಸರಿಸಿ ಸುತ್ತುತ್ತಿರುತ್ತದೆ, ಸೂರ್ಯನ ಸುತ್ತಲೂ ಸುತ್ತಿಬರುವಾಗಲೂ ನಿರ್ದಿಷ್ಟ ನಿಯಮ ಅನುಸರಿಸಿ ನಡೆಯುತ್ತದೆ. ಭೂಮಿ ಚಂಚಲವಾಗಿದ್ದರೆ, ಅರ್ಥಾತ್ ಧ್ಯಾನಿಸದಿದ್ದಿದ್ದರೆ, ಹೇಗೆ ಹೇಗೋ ಸುತ್ತುತ್ತಿತ್ತು ಮತ್ತು ಅದರ ಪರಿಣಾಮ ಸಹ ವಿಪರೀತವಾಗಿರುತ್ತಿತ್ತು ಅಲ್ಲವೇ? ಭೂಮಿಗೆ ಹೀಗೆ ಧ್ಯಾನಿಸುವ ಶಕ್ತಿ ಬಂದಿದ್ದು ಅದು ಹೊಂದಿರುವ ಪ್ರಚಂಡ ಬಲದಿಂದ! ಆದ್ದರಿಂದ ಬಲ ಅಥವ ಶಕ್ತಿ ಅನ್ನುವುದು ಭೌತಿಕ ಬಲ ಮತ್ತು ಜ್ಞಾನ ಮತ್ತು ತಿಳುವಳಿಕೆಯ ಸಂಯುಕ್ತ ಪರಿಣಾಮ ಎನ್ನಬಹುದು. ಎಲ್ಲಾ ಜೀವಿಗಳ ಯಶೋಗಾಥೆಗೆ ಬಲವೇ ಕಾರಣವಾಗಿದೆ. ಇಡೀ ಪ್ರಪಂಚವೇ ಒಂದಲ್ಲಾ ಒಂದು ಶಕ್ತಿಯ ಕಾರಣದಿಂದ ಅಸ್ತಿತ್ವದಲ್ಲಿದೆ. 'ನೀನು ಏನು ಚಿಂತಿಸುತ್ತೀಯೋ, ಅದೇ ನೀನಾಗುತ್ತೀಯೆ' ಎಂಬುದು ಒಂದು ನಾಣ್ಣುಡಿ. ಒಬ್ಬ ವ್ಯಕ್ತಿ ತನ್ನನ್ನು ತಾನು ಒಬ್ಬ ದುರ್ಬಲ, ಏನೂ ಪ್ರಯೋಜನವಿಲ್ಲದವನು, ಜನರಿಗೆ ಬೇಡವಾದವನು, ಬಡವ, ಇತ್ಯಾದಿ ಅಂದುಕೊಂಡರೆ ಅವನು ಸಹಜವಾಗಿ, ತನ್ನನ್ನೇ ಸಮ್ಮೋಹಕ್ಕೆ ಒಳಪಡಿಸಿಕೊಂಡಂತೆ,  ಅದೇ ರೀತಿ ಆದರೆ ಆಶ್ಚರ್ಯಪಡಬೇಕಿಲ್ಲ. ತನ್ನನ್ನು ತಾನು ನಂಬುವ, ತನ್ನ ಶಕ್ತಿಯಲ್ಲಿ ಭರವಸೆ ಇಟ್ಟುಕೊಂಡ ವ್ಯಕ್ತಿ, ತನ್ನ ಮಾನಸಿಕ ಮತ್ತು ಭೌತಿಕ ಬಲಗಳ ಸೂಕ್ತ ಸಂಯೋಜನೆಯಿಂದಾಗಿ ಖಂಡಿತ ಮುಂದಕ್ಕೆ ಬರುತ್ತಾನೆ. ಆದ್ದರಿಂದ ಬಲ ಗಳಿಸಿಕೊಳ್ಳುವಲ್ಲಿ ಸಾಧಕ ಮುಂದುವರೆಯುತ್ತಾನೆ.
     ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವಿರುವುದೇ ಆರೋಗ್ಯ. ಶರೀರದ ಆಲಸ್ಯ ಮತ್ತು ಮನಸ್ಸಿನ ಚಂಚಲತೆ ಇವುಗಳನ್ನು ತೊರೆಯುವುದು ಇದಕ್ಕೆ ಅತ್ಯಗತ್ಯ. ಇದನ್ನು ಗಳಿಸಲು ಯೋಗಾಭ್ಯಾಸ ಉತ್ತಮ ಮಾರ್ಗವಾಗಿದೆ. ಮಹಾಕವಿ ಕಾಳಿದಾಸ ಹೇಳಿರುವಂತೆ 'ಶರೀರಮಾದ್ಯಂ ಖಲು ಧರ್ಮಸಾಧನಂ' (ಎಲ್ಲ ಧರ್ಮಸಾಧನೆಗೂ ಶರೀರವೇ ಮೊದಲು). ಶರೀರದ ಸ್ವಾಸ್ಥ್ಯ ಕಾಪಾಡುವುದು ಬಹಿರಂಗ ಸಾಧನೆಯಾದರೆ, ಮನಸ್ಸಿನ ಸ್ವಾಸ್ಥ್ಯ ಕಾಪಾಡುವುದು ಅಂತರಂಗ ಸಾಧನೆಯಾಗುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳನ್ನು ಸಾಧಿಸುವವನೇ ಸಾಧಕ.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ.  ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ.
     ಈ ಭರತಭೂಮಿ ಶತಮಾನಗಳ ಕಾಲ ದಾಸ್ಯಕ್ಕೊಳಗಾಗಲು ಕಾರಣ ಮಾನಸಿಕ ದುರ್ಬಲತೆಯಲ್ಲದೇ ಮತ್ತೇನಲ್ಲ. ವೀರ-ಶೂರರ ನಾಡು ತುಳಿತಕ್ಕೊಳಗಾಯಿತೆಂದರೆ ಅದು ನಮ್ಮತನದ ಅರಿವಿನ ಕೊರತೆಯಲ್ಲದೆ ಬೇರೆಯಲ್ಲ. ಇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದವರು ನಾವೇನೇ! ಮಾನಸಿಕ ಮತ್ತು ದೈಹಿಕ ಬಲ ನಮ್ಮ ಮಂತ್ರವಾದರೆ ಯಾವ ಕುಯುಕ್ತಿಯೂ ಅಲುಗಾಡಿಸಲಾಗದು. ಸುಯೋಗ್ಯ ಶಿಕ್ಷಣ ಪದ್ಧತಿ ರೂಪಿತವಾಗಿ, ಮನೆಮನೆಗಳು ಉತ್ತಮ ಸಂಸ್ಕಾರ ರೂಪಿಸುವ ಶಕ್ತಿ ಕೇಂದ್ರಗಳಾಗುವತ್ತ ಪ್ರಾಜ್ಞರು, ಗುರು-ಹಿರಿಯರು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಬಲ -ದೈಹಿಕ ಮತ್ತು ಮಾನಸಿಕ- ನಮ್ಮ ಧ್ಯೇಯವಾಗಲಿ. ಎಳೆಯ ಮಗು ಹಾಲು ಕುಡಿಯುತ್ತಾ ಶಕ್ತಿಯನ್ನು ಗಳಿಸಿಕೊಳ್ಳಲಿ, ಬೆಳೆಯುತ್ತಾ ಅಂಬೆಗಾಲಿಡುತ್ತಾ ಶಕ್ತಿ ವೃದ್ಧಿಸಿಕೊಳ್ಳಲಿ, ತರುಣರಾಗಿ ಶಕ್ತಿಯ ಚೈತನ್ಯದಿಂದ ನಳನಳಿಸಲಿ, ಆ ಮೂಲಕ ಮತ್ತೊಮ್ಮೆ ನಮ್ಮ ನಾಡು ವಿಶ್ವಕ್ಕೆ ಗುರುವಾಗಲಿ. ಬಲಶಾಲಿ ನಾಡಿನ ಮಾತನ್ನು ಜಗತ್ತು ಕೇಳುತ್ತದೆ, ಒಪ್ಪಿಕೊಳ್ಳುತ್ತದೆ.
-ಕ.ವೆಂ. ನಾಗರಾಜ್.
****************
ದಿನಾಂಕ  7.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಅಕ್ಟೋಬರ್ 16, 2015

ಸಾಧನಾ ಸೋಪಾನ - 6,7: ಧ್ಯಾನ ಮತ್ತು ಧ್ಯಾನದ ಅರಿವು


     ಹಿಂದಿನ ಲೇಖನದಲ್ಲಿ ನೆನಪಿನ ಶಕ್ತಿ ಅನ್ನುವುದು ಇಚ್ಛಾಶಕ್ತಿ ಅಥವ ಸಂಕಲ್ಪಕ್ಕಿಂತ ಮಿಗಿಲೆಂಬುದನ್ನು ಕಂಡುಕೊಂಡೆವು. ಈ ನೆನಪಿನ ಶಕ್ತಿಗಿಂತ ಮೇಲಿನ ಸಂಗತಿಯೊಂದಿದೆ. ಸಾಮಾನ್ಯ ನೆನಪಿಗಿಂತ ಮೇಲಿನದು ಮನೋಕೇಂದ್ರೀಕರಣ ಅಥವ ಧ್ಯಾನ. ಅದೊಂದು ಉತ್ತಮವಾದ ಗುಣ. ನಾವು ನಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೇವೆಯೋ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೇವೆ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ನಾವು ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆಯನ್ನು ಕಾಣುತ್ತೇವೆಯೋ, ಅಲ್ಲಿ ಕೇಂದ್ರೀಕರಣ ಇರುವುದನ್ನು ಕಾಣುತ್ತೇವೆ. ಭೂಮಿ ತನ್ನ ಗುಣದಲ್ಲಿನ ಸ್ಥಿರತೆ, ಧೃಡತೆಯ ಕಾರಣದಿಂದ ಕೇಂದ್ರೀಕರಿಸಿದ ಸ್ಥಿತಿಯಲ್ಲಿದೆ. ಇದರಿಂದಾಗಿ ಪ್ರಕೃತಿಯಲ್ಲಿ ಯಾವುದೇ ಗೊಂದಲವನ್ನು ನಾವು ಕಾಣುವುದಿಲ್ಲ. ಪ್ರಕೃತಿಯ ವಿವಿಧ ಸಂಗತಿಗಳಲ್ಲಿ ಸ್ಥಿರತೆ ಇದೆ. ಈ ಸ್ಥಿರತೆಯ ಕಾರಣದಿಂದಲೇ ಭೂಮಿ, ಜಲ, ಸೂರ್ಯ, ಚಂದ್ರ, ನಕ್ಷತ್ರಗಳು, ಇವೆಲ್ಲವೂ ಇರುವೆಡೆಯಲ್ಲಿ ತಮ್ಮ ಸ್ವಭಾವಕ್ಕನುಗುಣವಾಗಿ ಸ್ಥಿರವಾಗಿವೆ, ಅರ್ಥಾತ್ ಧ್ಯಾನಿಸುತ್ತಿವೆ. ಅವುಗಳಿಗ್ಲೆ ತಮ್ಮ ತಮ್ಮಲ್ಲಿ ಗೊಂದಲವಿಲ್ಲ, ಸಂದೇಹವಿಲ್ಲ. ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ!
     ಮನಸ್ಸಿನ ಇಂತಹ ಕ್ರಿಯೆಯಿಂದಾಗಿಯೇ ಪ್ರಪಂಚದಲ್ಲಿ ಜನರು ಮಹಿಮರಾಗುತ್ತಾರೆಯೇ ಹೊರತು, ಚಂಚಲಿತ ಚಿಂತನೆಗಳಿಂದಲ್ಲ. ನಾವು ನೂರು ಸಂಗತಿಗಳ ಕುರಿತು ಮನಸ್ಸನ್ನು ತೊಡಗಿಸಿಕೊಂಡರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಂದು ಸಲಕ್ಕೆ, ಒಂದು ಸಮಯಕ್ಕೆ ಒಂದು ವಿಷಯದ ಬಗ್ಗೆ ಆತ್ಮಪೂರ್ವಕವಾಗಿ, ಹೃದಯಪೂರ್ವಕವಾಗಿ ತೊಡಗಿಸಿಕೊಂಡರೆ ನಾವು ಯಶಸ್ವಿಯಾಗುತ್ತೇವೆ. ಇದೇ ಕೇಂದ್ರೀಕರಿಸುವ ಶಕ್ತಿಯ ಮಹತ್ವವಾಗಿದೆ. ಇಲ್ಲಿ ಮತ್ತೆ ಉತ್ತರಪ್ರದೇಶದ ಅರುಣಿಮಾ ಸಿನ್ಹ ನೆನಪಾಗುತ್ತಾಳೆ. 11.4.2011ರಂದು ಚಲಿಸುತ್ತಿದ್ದ ರೈಲಿನಲ್ಲಿ ದರೋಡೆಗೊಳಗಾಗಿ ಹೊರಗೆ ಎಸೆಯಲ್ಪಟ್ಟು ಪಕ್ಕದ ಹಳಿಯ ಮೇಲೆ ಬಿದ್ದಾಗ ಎದುರಿನಿಂದ ಬಂದಿದ್ದ ರೈಲಿನ ಅಡಿಯಲ್ಲಿ ಸಿಕ್ಕು ಎರಡು ಕಾಲುಗಳನ್ನೂ ಕಳೆದುಕೊಂಡ 23 ವರ್ಷಗಳ ನತದೃಷ್ಟ ತರುಣಿ ಅವಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆಕೆಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಲವಾರು ತಿಂಗಳುಗಳು ನರಳಿದ ಅವಳಿಗೆ ಕೃತಕ ಮರದ ಕಾಲುಗಳನ್ನು ಅಳವಡಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಕೆ ಹಿಮಾಲಯ ಪರ್ವತ ಏರುವ ಕನಸು ಕಂಡಳು. ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಆಕೆ ಆ ದಿಸೆಯಲ್ಲಿ ಕಾರ್ಯಪ್ರವೃತ್ತಳಾದಳು. ಅಗತ್ಯ ತರಬೇತಿ, ಮಾರ್ಗದರ್ಶನ ಪಡೆದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಇದು ಅವಳ ಧೃಢ ಮನೋನಿರ್ಧಾರದಿಂದ ಲಭಿಸಿದ ವಿಜಯವಾಗಿತ್ತು! ಕೈ ಕಾಲುಗಳು ಗಟ್ಟಿಯಾಗಿರುವವರಿಗೇ ದುಸ್ಸಾಧ್ಯವೆನಿಸುವ ಸಾಹಸವನ್ನು ಈ ತರುಣಿಗೆ ಮಾಡಲು ಸಾಧ್ಯವಾಯಿತೆಂದರೆ ಆಕೆಯ ಮನೋಕೇಂದ್ರೀಕರಣದ ಶಕ್ತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.
     ಕೇಂದ್ರೀಕರಿಸುವ ಶಕ್ತಿಯ ಕೊರತೆಯಿರುವವರು ಪ್ರಪಂಚದಲ್ಲಿ ಜಗಳಗಂಟರು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಾಗಿರುತ್ತಾರೆ. ಅವರು ತಮ್ಮ ವಿಫಲತೆಗಳಿಗೆ ಕಥೆ ಕಟ್ಟುವವರಾಗಿರುತ್ತಾರೆ. ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸಬಲ್ಲವರು ತಮ್ಮ ಉದ್ದೇಶಗಳಿಗಾಗಿ ತಮ್ಮನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆಂದರೆ, ಅವರಿಗೆ ಉಪಯೋಗವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಅಂತಹವರೇ ದೊಡ್ಡವರು. ಆದ್ದರಿಂದ ಕೇಂದ್ರೀಕರಿಸಲು, ಧ್ಯಾನಿಸಲು ಮನಸ್ಸು ಮಾಡಬೇಕು.
     ಮನಸ್ಸನ್ನು ಕೇಂದ್ರೀಕರಿಸುವ ಅಭ್ಯಾಸದಿಂದ ಆಗುವ, ಸಿಗುವ ಫಲಿತಗಳ ಕುರಿತು ವಿವರಿಸುವುದು ಕಷ್ಟ, ಆದರೆ ಅದರಿಂದ ಬಹಳ ಅನುಕೂಲಗಳಿವೆ ಎಂಬುದು ನಿರ್ವಿವಾದ. ಯೋಗಾಭ್ಯಾಸ ಸಹ ಕೇಂದ್ರೀಕರಿಸುವ ಶಕ್ತಿಯ ಗಳಿಕೆಯ ಮಾರ್ಗವೇ ಆಗಿದೆ.  ಈ ಯೋಗಾಭ್ಯಾಸ ದೇಹ ಮತ್ತು ಮನಸ್ಸುಗಳ ಚೈತನ್ಯವೃದ್ಧಿಗೆ ಸಹಕಾರಿ. ಇದು ದೈಹಿಕ ಮತ್ತು ಮಾನಸಿಕ ಅಂಗಗಳನ್ನು ಸಹಜಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕೃತಕ ಮಾರ್ಗಗಳಿಂದ, ಔಷಧಿಗಳಿಂದ ಗಳಿಸುವ ಆರೋಗ್ಯ ಸ್ಥಿರವಲ್ಲ. ಇದರಿಂದ ಅಡ್ಡಪರಿಣಾಮಗಳೂ ಆಗುತ್ತವೆ. ಆದರೆ ಯೋಗಾಭ್ಯಾಸದಿಂದ ದೀರ್ಘ ಮತ್ತು ಸ್ಥಿರವಾದ, ಅಡ್ಡಪರಿಣಾಮಗಳಿಲ್ಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಧ್ಯವಿದೆ. ಧೃಡವಾದ ಮಾನಸಿಕ ಆರೋಗ್ಯವಂತ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲ. ಮನೋನಿಗ್ರಹ, ಮನೋಕೇಂದ್ರೀಕರಣವಿಲ್ಲದಿದ್ದರೆ ಜೀವನದ ಯಾವುದೇ ಸಂಗತಿ ಅರ್ಥ ಕಳೆದುಕೊಳ್ಳುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದೋ ಅಷ್ಟರಮಟ್ಟಿಗೆ ಬಂಧಮುಕ್ತನಾಗಬಹುದು, ಸ್ವತಂತ್ರನಾಗಬಹುದು ಮತ್ತು ಜೀವನದಲ್ಲಿ ಯಶಸ್ವಿಯಾಗಬಹುದು.
     ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಮನಸ್ಸು ಹಗುರಾಗುವುದು, ಆಂತರಿಕ ಶಾಂತಿ ಲಭಿಸುವುದು. ಈ ಸ್ಥಿತಿಯಲ್ಲಿ ಸ್ಥಿತಪ್ರಜ್ಞತೆ ನಮ್ಮದಾಗುವುದು. ನೆನಪಿನ ಶಕ್ತಿ ಜಾಗೃತಗೊಳ್ಳುವುದು. ಮನಸ್ಸು ಸರಿಯಾದ ದಿಕ್ಕಿನಲ್ಲಿ ಚಲಿಸುವುದು. ಋಣಾತ್ಮಕ ಚಿಂತನೆಗಳು ಸರಿಯುವುವು. ಗುರಿ ಸಾಧನೆಗೆ ಇದು ಹೇಳಿ ಮಾಡಿಸಿದ ಸ್ಥಿತಿ. ಖಿನ್ನತೆ, ಉದ್ವೇಗ, ಆಸ್ತಮಾ, ರಕ್ತದ ಒತ್ತಡ, ನಿದ್ರಾಹೀನತೆ, ಕ್ಯಾನ್ಸರ್ ಮುಂತಾದ ಹಲವಾರು ಕಾಯಿಲೆಗಳಿಗೂ ಧ್ಯಾನ ಪರಿಣಾಮಕಾರಿಯಾದ ಪರಿಹಾರ ನೀಡುವುದೆಂದು ಸಂಶೋಧನೆಗಳು ಹೇಳುತ್ತವೆ.
     ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
     ಎಲ್ಲಾ ಸಂಗತಿಗಳು, ಪಂಚಭೂತಗಳು (ವಾಯು, ಆಕಾಶ, ಜಲ, ನೆಲ, ಅಗ್ನಿ), ಪಡೆಯುವ ಯಾವುದೇ ವಿದ್ಯೆ, ದೇವರು ಮತ್ತು ಮಾನವ ಜೀವಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು, ಗುಣಗಳು ಮತ್ತು ದೋಷಗಳು, ಒಳ್ಳೆಯದು ಮತ್ತು ಕೆಟ್ಟದ್ದು, ಸತ್ಯ ಮತ್ತು ಅಸತ್ಯ, ಸಂತೋಷಕರವಾದದ್ದು ಮತ್ತು ದುಃಖಕರವಾದದ್ದು, ಮತ್ತು ಇಂತಹ ಜೀವನದ ಏನೆಲ್ಲಾ ಸಂಗತಿಗಳಿಗೆ ಅರ್ಥ ಬರುವುದು ಅವುಗಳ ಕುರಿತು ಅರಿವು ಇದ್ದರೆ ಮಾತ್ರ. ಯಾವುದಾದರೂ ವಿಷಯದ ಕುರಿತು ನಮಗೆ ಗೊತ್ತಿದೆಯೆಂದರೆ ಅದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಅರ್ಥ. ಅರ್ಥ ತಿಳಿದಿಲ್ಲವೆಂದರೆ ಏನೂ ಗೊತ್ತಿಲ್ಲವೆಂದೇ ತಿಳಿಯಬೇಕು. ಜೀವನದ ಬಗ್ಗೆ ನಾವು ಎಷ್ಟು ತಿಳಿದುಕೊಳ್ಳುತ್ತೇವೆಯೋ ಅಷ್ಟರ ಮಟ್ಟಿಗೆ ನಾವು ಜೀವನವನ್ನು ಆಸ್ವಾದಿಸಬಲ್ಲೆವು. ವ್ಯಕ್ತಿಗತವಾಗಿ, ಸಾಮಾಜಿಕವಾಗಿ ಅಥವ ಬೇರೆ ಯಾವುದೇ ಮಾರ್ಗದಲ್ಲಿ ನಾವು ಗಳಿಸುವ ಶಕ್ತಿ ನಮ್ಮ ಜ್ಞಾನವನ್ನು ಅವಲಂಬಿಸಿದೆ. ಜ್ಞಾನಿ ಅಂದರೆ ಅರಿವಿರುವವನು ಶಕ್ತಿವಂತನಾಗಿರುತ್ತಾನೆ. ಅವನ ಶಕ್ತಿಯ ಪ್ರಮಾಣ ಅವನು ಹೊಂದಿರುವ ಜ್ಞಾನವನ್ನವಲಂಬಿಸಿದೆ.
     ಜ್ಞಾನ ಮಿಗಿಲು; ಜ್ಞಾನಮೂಲವಾದ ವಾಕ್ಕು ಅದಕ್ಕಿಂತ ಮಿಗಿಲು; ಇವೆರಡಕ್ಕಿಂತ ಇವುಗಳನ್ನು ಸಾಧಿಸಲು ಅವಶ್ಯಕವಾದ ಮನಸ್ಸು ಮಿಗಿಲು; ಮನಸ್ಸಿನ ಇಚ್ಛಾಶಕ್ತಿ ಇದಕ್ಕೂ ಮಿಗಿಲು; ನೆನಪಿನ ಶಕ್ತಿಯಿಲ್ಲದಿದ್ದರೆ ಮೇಲಿನದೆಲ್ಲವೂ ವ್ಯರ್ಥವಾದ್ದರಿಂದ ಇದು ಮತ್ತೂ ಹೆಚ್ಚು; ಮೇಲಿನದೆಲ್ಲವೂ ಇದ್ದು ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇಲ್ಲದಿದ್ದರೆ, ಧ್ಯಾನ ಮಾಡಲಾಗದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲವಾದ್ದರಿಂದ ಇದರ ಕೈಮೇಲು; ಯಾವುದರ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಅಥವ ಧ್ಯಾನಿಸುವುದು ಎಂಬುದರ ಸ್ಪಷ್ಟ ಅರಿವೂ ಇರಬೇಕಾದುದರಿಂದ ಇದು ಮತ್ತೂ ಹೆಚ್ಚಿನದು. ಆದ್ದರಿಂದ ಸಾಧನೆಯ ಆರನೆಯ ಹಂತವಾದ ಮನಸ್ಸನ್ನು ಕೇಂದ್ರೀಕರಿಸುವ, ಉದ್ದೇಶಿತ ಗುರಿಯ ಸಾಧನೆಗೆ ತನು-ಮನಗಳನ್ನು ತೊಡಗಿಸುವ ಶಕ್ತಿ ಮತ್ತು ಏಳನೆಯ ಹಂತವಾದ ಧ್ಯಾನದ ವಿಷಯ ಕುರಿತ ಸ್ಪಷ್ಟ ತಿಳುವಳಿಕೆಯನ್ನು ಗಳಿಸಿಕೊಂಡರೆ ನಾವು ಯಶಸ್ವಿ ವ್ಯಕ್ತಿಗಳಾಗಿಯೇ ಆಗುವೆವು!
-ಕ.ವೆಂ.ನಾಗರಾಜ್.
****************
ದಿನಾಂಕ 30.09.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಅಕ್ಟೋಬರ್ 5, 2015

ಸಾಧನಾ ಸೋಪಾನ - 5: ಸ್ಮರಣ ಶಕ್ತಿ


"ನಿನ್ನೆ ಅನ್ನುವುದು ಇಂದಿನ ನೆನಪಾದರೆ ನಾಳೆ ಅನ್ನುವುದು ಇಂದಿನ ಕನಸು."
     ಮನಸ್ಸಿಗಿಂತಲೂ ಮಿಗಿಲಾದ ಇಚ್ಛಾಶಕ್ತಿ ನಮ್ಮ ಮನೋವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನಸ್ಸಿನ ವಿಚಾರಗಳನ್ನು ಒಂದೆಡೆ ಕೇಂದ್ರೀಕರಿಸಿದ ಶಕ್ತಿಯೇ ಹೊರತು ಮತ್ತೇನಲ್ಲ. ಮನಸ್ಸನ್ನು ಒಂದು ನಿರ್ದಿಷ್ಟ ರೀತಿಯಲ್ಲಿ, ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದೇಶಿಸುವುದನ್ನೇ ನಾವು ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತೇವೆ. ಇನ್ನೊಂದು ಸಂಗತಿ ಇಲ್ಲದಿದ್ದರೆ ಈ ಇಚ್ಛಾಶಕ್ತಿ ಸಹ ಅರ್ಥ ಕಳೆದುಕೊಳ್ಳುತ್ತದೆ ಮತ್ತು ಅದು ಕೆಲಸ ಮಾಡಲು ಸಾಧ್ಯವಾಗದು. ಅದೇ ಸ್ಮರಣಶಕ್ತಿ! ಇದನ್ನು ಚಿತ್ತ ಎಂದೂ ಕರೆಯುತ್ತಾರೆ. ನೆನಪಿನ ಶಕ್ತಿ ಇಲ್ಲದ ವ್ಯಕ್ತಿ, ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲಾರ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಇವೆಲ್ಲವೂ ಒಂದು ಸರಪಳಿಯಿದ್ದಂತೆ!
     ಒಬ್ಬ ದೊಡ್ಡ ಪಂಡಿತನಿದ್ದಾನೆ ಎಂದುಕೊಳ್ಳೋಣ. ಅವನಿಗೆ ಎಷ್ಟೇ ದೊಡ್ಡ ಪಾಂಡಿತ್ಯವಿರಬಹುದು, ಅವನು ಎಷ್ಟೋ ವಿದ್ಯೆಗಳನ್ನು ಕಲಿತು ಅರಗಿಸಿಕೊಂಡಿರಬಹುದು, ಆದರೆ ಸ್ಮರಣ ಶಕ್ತಿ ಇಲ್ಲದಿದ್ದರೆ ಅವನ ಪಾಂಡಿತ್ಯವೆಲ್ಲವೂ ವ್ಯರ್ಥ. ಸ್ಮರಣಶಕ್ತಿ ಇರುವ ಜ್ಞಾನಿಗಳ ಮಾತಿಗೆ ಜನ ಬೆಲೆ, ಗೌರವ ಕೊಡುತ್ತಾರೆ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ಪಾಂಡಿತ್ಯದೊಡನೆ ಅವನ ನೆನಪಿನ ಶಕ್ತಿಯನ್ನೂ ಆಧರಿಸಿರುತ್ತದೆ. ಓದಿದ ಎಷ್ಟೋ ವರ್ಷಗಳ ನಂತರದಲ್ಲೂ ಇಂತಹ ವಿಷಯ ಇಂತಹ ಗ್ರಂಥದ ಇಷ್ಟನೇ ಪುಟದಲ್ಲಿದೆ ಎಂದು ಹೇಳಬಲ್ಲ ಅದ್ಭುತ ವ್ಯಕ್ತಿಗಳೂ ಕಾಣಸಿಗುತ್ತಾರೆ.
     ನೆನಪು ಯಾವಾಗಲೂ ಹೃದಯದ ಮಾತನ್ನು ಕೇಳುತ್ತದೆ! ಹೃದಯದ ಮಾತು ಎಂದರೆ ನಮಗೆ ಇಷ್ಟವೆನಿಸುವ, ನಮಗೆ ಮಹತ್ವದ್ದೆನಿಸುವ ಸಂಗತಿಗಳು! ಅವು ನೆನಪಿನಲ್ಲಿ ಉಳಿಯುತ್ತವೆ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಟ್ಟಿದ್ದು 1967ರಲ್ಲಿ. ಸುಮಾರು 48 ವರ್ಷಗಳ ಹಿಂದೆ ಕಟ್ಟಿದ್ದ ಆ ಪರೀಕ್ಷೆಯ ರಿಜಿಸ್ಟರ್ ನಂ. 47983 ಅನ್ನುವುದು ಈಗಲೂ ನೆನಪಿದೆ. ಪಿಯುಸಿಯ ನಂ. 17253 ಆಗಿತ್ತು. ಆದರೆ ಪದವಿ ಪರೀಕ್ಷೆಯ ನಂ. ನನಗೆ ನೆನಪಿಲ್ಲ. ಇದರ ಅರ್ಥ ಇಷ್ಟೇ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿಗೆ ಕೊಟ್ಟಿದ್ದಷ್ಟು ಮಹತ್ವವನ್ನು ನಾನು ಪದವಿ ಪರೀಕ್ಷೆಗೆ ಕೊಡಲಾಗಿರಲಿಲ್ಲ ಅಥವ ಕೊಟ್ಟಿರಲಿಲ್ಲ. ನಿಮಗೆ ನಿಮ್ಮ ಸ್ನೇಹಿತನೋ, ನಿಮ್ಮ ಮನೆಯ ಯಾರಾದರೂ ಸದಸ್ಯರೋ ಏನನ್ನಾದರೂ ಹೇಳಿರುತ್ತಾರೆಂದು ಇಟ್ಟುಕೊಳ್ಳಿ. ನೀವು ಅದಕ್ಕೆ ಮಹತ್ವ ಕೊಟ್ಟಿದ್ದರೆ ಮಾತ್ರ ನಿಮಗೆ ಅದು ನೆನಪಿರುತ್ತದೆ. ಇಲ್ಲದಿದ್ದರೆ ಅವರು ಎದುರಿಗೆ ಬಂದಾಗ ಮಾತ್ರ ನೆನಪಾಗಿ, 'ಅಯ್ಯೋ ಮರೆತೇಬಿಟ್ಟೆ' ಅನ್ನುತ್ತೀರಿ.
     ಒಳ್ಳೆಯ ಅನುಭವಗಳಿಗಿಂತ ಕೆಟ್ಟ ಅನುಭವಗಳು ನೆನಪಿನಲ್ಲಿ ಉಳಿಯುತ್ತವೆ! ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಸ್ವಾಭಿಮಾನವನ್ನು ಕೆಣಕುವ ಮಾತುಗಳನ್ನು ನಾವು ಮರೆಯುವುದಿಲ್ಲ. 'ನಾನು ಸತ್ತರೂ ಇದನ್ನು ಮಾತ್ರ ಮರೆಯುವುದಿಲ್ಲ' ಎಂಬಂತಹ ಮಾತುಗಳನ್ನು ಕೇಳಿರುತ್ತೇವಲ್ಲವೇ? ಸ್ವಾಭಿಮಾನವನ್ನು ಕೆಣಕುವ ಮಾತುಗಳು, ಅವಮಾನಗಳು, ಸೋಲುಗಳು ದೀರ್ಘಕಾಲ ನೆನಪಿನಲ್ಲಿರುತ್ತವೆ. ಇವು ಅಸಾಧಾರಣವಾದುದನ್ನು ಸಾಧಿಸಲೂ ಉತ್ತೇಜಿಸುತ್ತವೆ. ಹುಟ್ಟುಕುರುಡನಾಗಿ ಜನಿಸಿದ್ದ ಬಾಲಕ ಚಿಕ್ಕಂದಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅಣ್ಣ-ಅತ್ತಿಗೆಯರಿಂದ ದಂಡಪಿಂಡ, ಶನಿ, ಕೂಳಿಗೆ ಭಾರ, ಇತ್ಯಾದಿ ದೂಷಣೆಗಳನ್ನು ಪ್ರತಿನಿತ್ಯ ಕೇಳಿ ಸಹಿಸಿಕೊಳ್ಳಲಾಗದೆ ಮನೆಬಿಟ್ಟು ಹೊರಟಾಗ ಅವನಿಗೆ ಕೇವಲ ಎಂಟು ವರ್ಷಗಳು. ಮುಂದೆ ಆ ಬಾಲಕ  ವಿರಜಾನಂದ ಸರಸ್ವತಿಯಾಗಿ ರೂಪುಗೊಂಡಿದ್ದ. ತಮ್ಮ ಶಿಷ್ಯ ಮಹರ್ಷಿ ದಯಾನಂದ ಸರಸ್ವತಿಯಂತಹ ಮಹಿಮಾನ್ವಿತರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು ಈ ವಿರಜಾನಂದರೇ! ವಿರಜಾನಂದರ ಸಾಧನೆಗೆ ಪ್ರೇರಣೆಯಾಗಿದ್ದು ಅವರು ದಂಡಪಿಂಡ ಎಂದು ಬೈಯಿಸಿಕೊಂಡ ನೆನಪು ಅಚ್ಚಳಿಯದೇ ಉಳಿದಿದ್ದು!
     ಈ ನೆನಪಿನ ಶಕ್ತಿ ಉಳಿಯಲು ಕೆಲವು ಆಂತರಿಕ ಮತ್ತು ಬಾಹ್ಯ ಸಂಗತಿಗಳು ಸಹಾಯಕವಾಗುತ್ತವೆ. ಈ ಸಂಗತಿಗಳೆಂದರೆ ಮನಸ್ಸನ್ನು ನಿಯಂತ್ರಿಸುವುದು, ಜ್ಞಾನ ಸಂಪಾದನೆ, ಸಜ್ಜನ ಸಹವಾಸ (ಸತ್ಸಂಗ), ಸುಯೋಗ್ಯ ಗುರುಗಳ ಮಾರ್ಗದರ್ಶನ, ನಿಯಮಿತವಾದ ವ್ಯಾಯಾಮ, ಧ್ಯಾನ, ಇತ್ಯಾದಿಗಳು. ಹಿಂದೆ ಹಿರಿಯರು ಮರೆಗುಳಿಗಳಿಗೆ ಏನಾದರೂ ಸಂಗತಿಯ ನೆನಪು ಮರೆಯದಿರಲು ಜೇಬಿನಲ್ಲಿ ಒಂದು ಕಲ್ಲು ಇಟ್ಟುಕೋ, ಸೆರಗಿನಲ್ಲಿ ಒಂದು ಕಲ್ಲು ಕಟ್ಟಿಕೋ, ಇತ್ಯಾದಿ ಸಲಹೆ ಕೊಡುತ್ತಿದ್ದರು. ಆ ಕಲ್ಲನ್ನು ಕಂಡಾಗ, 'ಓಹ್, ಈ ಕೆಲಸ ಮಾಡಬೇಕಾಗಿತ್ತು' ಎಂಬುದು ಅವರುಗಳಿಗೆ ನೆನಪಾಗುತ್ತಿತ್ತು. ಈಗ ಉಪನಯನವನ್ನು ಯಾವ ಯಾವ ಸಮಯದಲ್ಲೋ ಮಾಡುತ್ತಾರೆ. ಇಂದಿನ ಸಾಮಾಜಿಕ ವ್ಯವಸ್ಥೆ ಸಹ ಈ ಏರುಪೇರಿಗೆ ಕಾರಣವಾಗಿದೆ. ಮೊದಲಾದರೋ ಇದನ್ನು ಯಾವುದೇ ಜಾತಿ, ಮತ, ಪಂಥ, ಲಿಂಗಬೇಧವಿಲ್ಲದೆ ಮಕ್ಕಳನ್ನು ಶಿಕ್ಷಣದ ಸಲುವಾಗಿ ಗುರುಕುಲಗಳಿಗೆ ಕಳುಹಿಸುವ ಮುನ್ನ ಮಾಡಿ ಕಳುಹಿಸಲಾಗುತ್ತಿತ್ತು. ಸುಯೋಗ್ಯ ಶಿಕ್ಷಣ ಪಡೆಯುವ ಸಂಕಲ್ಪದ ಜೊತೆಗೆ ಉಪವೀತದ ಮೂರು ಎಳೆಗಳು ಒಬ್ಬ ಮಾನವ ಜೀವಿತಕಾಲದಲ್ಲಿ ತೀರಿಸಬೇಕಾದ ಮೂರು ಋಣಗಳ-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಕುರಿತು ಸದಾಕಾಲ ನೆನಪಿರಲಿ ಎಂಬ ಉದ್ದೇಶವನ್ನು ಧರಿಸಿದವರಿಗೆ ನೆನಪಿಸುತ್ತಿದ್ದವು. ಇಂದು ಇದು ಕೇವಲ ಜಾತಿಸೂಚಕವಾಗಿ ಬಳಸಲಾಗುತ್ತಿರುವುದು ವಿಷಾದದ ಸಂಗತಿ. ಶುಭಕಾರ್ಯಗಳ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಕಂಕಣವೂ ಸಹ ಸ್ಮರಣಶಕ್ತಿಯ ಜಾಗೃತಿಗಾಗಿಯೇ ಆಗಿದೆ.
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||
     ನೆನಪಿನ ಶಕ್ತಿ ಹಾಳಾಗಲು ಚಿತ್ತ ಚಪಲತೆ ಪ್ರಧಾನ ಕಾರಣವಾಗಿದೆ. ಒಂದು ತರಬೇತಿ ಕೇಂದ್ರದಲ್ಲಿ ಚಿತ್ರಕಲೆ, ಕರಕುಶಲಕಲೆ, ಶಿಲ್ಪಕಲೆ, ನಟನೆಗಳನ್ನು ಕಲಿಸಲಾಗುತ್ತಿತ್ತು. ಪ್ರತಿಯೊಂದೂ ಆರು ತಿಂಗಳ ಕಾಲಾವಧಿಯ ತರಬೇತಿಯಾಗಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ರಾಮಣ್ಣ ಮತ್ತು ಶಾಮಣ್ಣ ತರಬೇತಿಗೆ ಸೇರಿದರು. ರಾಮಣ್ಣ ಮೊದಲಿಗೆ ಚಿತ್ರಕಲೆ ಆರಿಸಿಕೊಂಡರೆ ಶಾಮಣ್ಣ ಕರಕುಶಲಕಲೆ ಆರಿಸಿಕೊಂಡ. ಒಂದು ತಿಂಗಳ ನಂತರ ಶಾಮಣ್ಣನಿಗೆ ಕರಕುಶಲಕಲೆ ಕಷ್ಟ, ನಂತರ ಕಲಿತರಾಯಿತು ಎಂದು ಶಿಲ್ಪಕಲೆ ಕಲಿಯಲು ಆರಂಭಿಸಿದ. ಅಲ್ಲೂ ಒಂದೆರಡು ತಿಂಗಳ ನಂತರ ಅದನ್ನು ಬಿಟ್ಟು ನಟನೆಗೆ ಸೇರಿದ. ಅಲ್ಲೂ ಬೇಸರವಾಗಿ ಚಿತ್ರಕಲೆ ಕಲಿಯಲು ಆರಂಭಿಸಿದ. ಇಷ್ಟರಲ್ಲಿ ರಾಮಣ್ಣ ಚಿತ್ರಕಲೆ, ಕರಕುಶಲಕಲೆ ತರಬೇತಿಗಳನ್ನು ಪೂರ್ಣವಾಗಿ ಮುಗಿಸಿ ಶಿಲ್ಪಕಲೆಯಲ್ಲಿ ತರಬೇತಿ ಪಡೆಯತೊಡಗಿದ್ದ. ತರಬೇತಿ ಅವಧಿ ಪೂರ್ಣಗೊಂಡಾಗ ರಾಮಣ್ಣ ಎಲ್ಲದರಲ್ಲೂ ಪರಿಣಿತನಾಗಿದ್ದರೆ, ಶಾಮಣ್ಣ ಯಾವುದರಲ್ಲೂ ಪ್ರಯೋಜನವಿಲ್ಲದವನಾಗಿದ್ದ. ಅವನ ಚಿತ್ತ ಚಂಚಲತೆ ಅವನನ್ನು ಹಾಳು ಮಾಡಿತ್ತು. ರಾಮಣ್ಣನನ್ನು ಕಂಡು ಅಸೂಯೆಪಟ್ಟು ಮನಃಶಾಂತಿ ಹಾಳು ಮಾಡಿಕೊಂಡದ್ದೇ ಅವನಿಗೆ ಬಂದ ಲಾಭ! ಸಾತತ್ಯವಿಲ್ಲದಿದ್ದರೆ ಯಾವುದೂ ಸಿದ್ಧಿಸದು.
     ದೈಹಿಕ ತೊಂದರೆಗಳು, ಮಾನಸಿಕ ಕಾಯಿಲೆಗಳು, ಭಯ, ದುರಭ್ಯಾಸಗಳು ಮುಂತಾದವು ಸಹ ನೆನಪಿನ ಶಕ್ತಿ ಹಾಳಾಗಲು ಕಾರಣವಾಗುತ್ತವೆ. ವೃದ್ಧಾಪ್ಯದಲ್ಲಿ ಮೆದುಳಿನ ನರಗಳು ಶಕ್ತಿ ಕಳೆದುಕೊಳ್ಳುತ್ತವೆ. ಆಗಲೂ ನೆನಪು ಕೈಕೊಡುತ್ತದೆ. ಆದ್ದರಿಂದ ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿದ್ದರೆ ನೆನಪಿನ ಶಕ್ತಿಗೆ ಬಲ ಇರುತ್ತದೆ. ನಮ್ಮ ಜೀವನಶೈಲಿ ಒಳ್ಳೆಯದಾಗಿದ್ದರೆ ನಾವು ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿರಲು ಸಾಧ್ಯವಿದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ನಮ್ಮ ನೆನಪಿನ ಶಕ್ತಿ ಅಬಾಧಿತವಾಗಿರುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ಇತರರ ನೆನಪಿನಲ್ಲೂ ಉಳಿಯುತ್ತೇವೆ!
     ಕೆಲವು ಸಂಗತಿಗಳನ್ನು ಮರೆಯುವುದೂ ಅಗತ್ಯವಿರುತ್ತದೆ. ಹಲವು ಕಹಿ ನೆನಪುಗಳು, ಘಟನೆಗಳು ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತವೆ. ಅಂತಹವುಗಳನ್ನು ಮರೆಯಲು ಅಥವ ನೆನಪಿನ ಬುತ್ತಿಯಿಂದ ಅಳಿಸಲು ನಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಮೆದುಳು ಅಂತಹ ಕೆಲಸವನ್ನೂ ಆಗಾಗ ಸಹಜವೆಂಬಂತೆ ಮಾಡುತ್ತಿರುತ್ತದೆ. ನಮ್ಮ ಸನಾತನ ಧರ್ಮ ಪುನರ್ಜನ್ಮವನ್ನು ಪ್ರತಿಪಾದಿಸುತ್ತದೆ. ಒಂದು ವೇಳೆ ಹಿಂದಿನ ಜನ್ಮದ ನೆನಪುಗಳು ಮುಂದಿನ ಜನ್ಮದಲ್ಲೂ ನೆನಪಿನಲ್ಲಿ ಉಳಿಯುತ್ತಿದ್ದರೆ ವ್ಯವಸ್ಥೆಯಲ್ಲಿ ಏರುಪೇರು ಆಗುವ ಸಂಭವವಿರುತ್ತದೆ. ಹಾಗಾಗಿ ಅಂತಹ ನೆನಪು ಉಳಿಯದಿದ್ದರೇ ಒಳಿತು.
     ಜಗತ್ತಿನ ಇತಿಹಾಸ ಅನ್ನುವುದು ನೆನಪಿನ ದಾಖಲೆಯೇ ಹೊರತು ಮತ್ತೇನಲ್ಲ! ಆಯಾ ಕಾಲದ ಇತಿಹಾಸಕಾರರು, ಕವಿಗಳು, ಲೇಖಕರು ತಮ್ಮ ಕಾಲದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ದಾಖಲು ಮಾಡಿರುವುದನ್ನು ಆಧರಿಸಿ ಇತಿಹಾಸವನ್ನು ಅರಿಯಬಹುದಾಗಿದೆ. ಇತಿಹಾಸ ಅನ್ನುವುದು ಹಿಂದೆ ಹೀಗಿತ್ತು ಎಂದು ತೋರಿಸಿ ಹೇಗಿದ್ದರೆ ಚೆನ್ನಾಗಿರುತ್ತಿತ್ತು ಎಂಬುದರ ಅರಿವು ಮೂಡಿಸುವ ದಾಖಲೆ. ಇತಿಹಾಸ ಕಲಿಸುವ ಪಾಠಗಳನ್ನು 'ಮರೆತು' ಮತ್ತೆ ಅದೇ ತಪ್ಪುಗಳನ್ನು ಮಾಡಿ ಇತಿಹಾಸ ಪುನರಾವರ್ತಿಸುವಂತೆ ಮಾಡುತ್ತಿರುವುದು 'ಜನರ ನೆನಪು ಕ್ಷಣಿಕ' ಎಂಬುದರ ದ್ಯೋತಕ. ಕೆಲವರು ರಾಜಕಾರಣಿಗಳು ನೂರೆಂಟು ಅಕ್ರಮಗಳು, ಅನ್ಯಾಯಗಳನ್ನು ಮಾಡಿದವರು, ಮಾಡುವವರು ಎಂದು ತಿಳಿದಿದ್ದೂ ಅವರುಗಳನ್ನು ಚುನಾವಣೆಗಳಲ್ಲಿ ಮತ್ತೆ ಮತ್ತೆ ಗೆಲ್ಲಿಸುವುದಕ್ಕೆ ಕಾರಣ ಅವರ ತಪ್ಪುಗಳನ್ನು ನಾನಾ ಕಾರಣಗಳಿಗಾಗಿ 'ಮರೆಯುವುದೂ' ಕಾರಣವಾಗಿದೆ. ಇರಲಿ ಬಿಡಿ, ನೆನಪು ಮತ್ತು ಮರೆವು ಒಂದೇ ನಾಣ್ಯದ ಎರಡು ಮುಖಗಳು! ಜ್ಞಾನವಿರಲಿ, ಜ್ಞಾನಕ್ಕೆ ಮುಕುಟವಾದ ಸುವಾಕ್ಕುವಿರಲಿ, ಸುವಾಕ್ಕುವಾಡುವ ಮನಸ್ಸಿರಲಿ, ಮನಸ್ಸು ನಿಯಂತ್ರಿಸುವ ಸುಸಂಕಲ್ಪವಿರಲಿ ಮತ್ತು ಈ ಸುಸಂಕಲ್ಪವನ್ನು ಮರೆಯದಿರುವ ನೆನಪು ನಮ್ಮದಿರಲಿ. ಹೀಗಾದರೆ ಸಾಧನೆಯ ಐದು ಮೆಟ್ಟಲುಗಳನ್ನು ಏರಿದವರು ನಾವಾಗುತ್ತೇವೆ.
-ಕ.ವೆಂ.ನಾಗರಾಜ್.
**************
ದಿನಾಂಕ  23-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: