ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 27, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1


ಸನ್ಮಿತ್ರರೇ,
     ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.

ಭಗವತ್ ಸ್ವರೂಪ -1
     ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

     ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

ಶುಕ್ರವಾರ, ಆಗಸ್ಟ್ 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ
**************
-ಕವಿನಾಗರಾಜ್.

ಮಂಗಳವಾರ, ಆಗಸ್ಟ್ 17, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -16


ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ |
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ || (ಅಥರ್ವ. 8.2.25)

     [ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. 
     ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.
    ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.
-ಪಂ. ಸುಧಾಕರ ಚತುರ್ವೇದಿ.

ಭಾನುವಾರ, ಆಗಸ್ಟ್ 15, 2010

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ|
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು|
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು|
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ|

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು|
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ||


-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 13, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -15

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ|
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ|| (ಋಕ್.10.62.4)

     [ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

     ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇದಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.
-ಪಂ.ಸುಧಾಕರ ಚತುರ್ವೇದಿ.

ಗುರುವಾರ, ಆಗಸ್ಟ್ 12, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಬುಧವಾರ, ಆಗಸ್ಟ್ 11, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -14

     ಪರಮ ವೈಜ್ಞಾನಿಕವಾದ ವೇದಗಳು, ಶ್ರದ್ಧೆಯನ್ನು ನಿಜವಾದ ಶ್ರದ್ಧೆಯಾಗಿ ಉಳಿಸಿಕೊಳ್ಳುವ ದಿವ್ಯಪಥವನ್ನು ತೋರಿ, ಯಾವ ಬಗೆಯ ಭೇಧ ಭಾವಗಳಿಗೂ ಎಡೆಯಿಲ್ಲದಂತೆ ಮಾಡಿ, ಪೃಥ್ವಿಯ ಸರ್ವಮಾನವರಿಗೂ ಮಾನವತ್ವದ ವಿಕಾಸ ಮಾಡಿಕೊಲ್ಳುವ ಬಗೆಯನ್ನು ಬಣ್ಣಿಸಿ ಹೇಳುತ್ತವೆ. ವೇದಗಳಲ್ಲಿ ಮತಮತಾಂತರಗಳ ಗೊಂದಲವಿಲ್ಲ, ಮಾನವ ಜಾತಿಯನ್ನು ಹರಿದು ಹಂಚಿಹಾಕುವ ಹೊಂಚಿಲ್ಲ. ವೇದಗಳನ್ನು ಹಿಂದೂಗಳ ಶಾಸ್ತ್ರವೆಂದು ಕರೆಯುವುದು ವೇದಗಳ ಔನ್ನತ್ಯಕ್ಕೆ ಅಪಮಾನ ಮಾಡಿದಂತೆಯೇ ಸರಿ. ಈಸ್ವರೀಯ ವೇದಗಳು ಸರ್ವಮಾನವರ ಸಂಪತ್ತು. ವೇದಗಳು ಜೀವಮಾತ್ರರನ್ನು -ಇನ್ನು ಮಾನವಮಾತ್ರರೆಂದು ಬೇರೆ ಹೇಳಬೇಕೇನು?- ಅಮರನಾದ ಪ್ರಭುವಿನ ಮಕ್ಕಳೆಂದು ಕರೆಯುತ್ತವೆ:-

ಯುಜೇ ವಾಂ ಬ್ರಹ್ಮ ಪೂರ್ವ್ಯಂ ನಮೋಭಿರ್ವಿ ಶ್ಲೋಕ ಏತು ಪಥ್ಯೇವಸೂರೇಃ|
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ|| (ಯಜು.11.5)

     ನರನಾರಿಯರೇ! [ವಾಮ್] ನಿಮ್ಮಿಬ್ಬರನ್ನೂ [ಪೂರ್ವ್ಯಂ ಬ್ರಹ್ಮಯುಜೇ] ಅನಾದಿ ಭಗವದ್ವಾಣಿಯೊಂದಿಗೆ ನಿಯೋಜಿಸುತ್ತೇನೆ. [ಸೂರೇ ಪಥ್ಯಾ ಇವಾ] ಜ್ಞಾನಿಯ ಮಾರ್ಗದಲ್ಲಿ ನಡೆದಂತೆ [ನಮೋಭಿಃ] ವಿನಯದಿಂದ [ಶ್ಲೋಕಃ ವಿ ಏತು] ನಿಮ್ಮ ಕೀರ್ತಿ ಹರಡಲಿ. [ಯೇ] ಯಾರು [ದಿವ್ಯಾನಿ ಧಾಮಾನಿ ಆತಸ್ಥುತುಃ] ದೇವನಿರ್ಮಿತ ನೆಲೆಗಳಲ್ಲಿ ನೆಲೆಸಿರುವರೋ [ಅಮೃತಸ್ಯ ವಿಶ್ವೇ ಪುತ್ರಾಃ] ಆ ಅಮರ ಪ್ರಭುವಿನ ಮಕ್ಕಳೆಲ್ಲರೂ [ಶೃಣ್ವಂತು] ಆಲಿಸಲಿ. ವೇದಗಳ ದೃಷ್ಟಿಯಲ್ಲಿ ಮಾನವರೆಲ್ಲಾ ಭಗವದ್ಪುತ್ರರೇ. ಅಷ್ಟೇ ಅಲ್ಲ ಮಾನವ ಗೌರವವನ್ನು ವೇದಗಳು ಸಾರುತ್ತಿರುವ ರೀತಿಯೂ ಅದ್ಭುತವೇ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಆಗಸ್ಟ್ 10, 2010

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು 
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು 
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು 
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು 
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ 
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ |
ಬಯಕೆ ಜೀವನವು ಬಯಸುವುದು ತಪ್ಪಲ್ಲ 
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 9, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -13

     ಈ ಶ್ರದ್ಧಾ-ಮೇಧಾ ಸಮನ್ವಯ ವೇದಗಳ ವೈಶಿಷ್ಟ್ಯ. ವೇದಾನುಯಾಯಿಗಳ ಗುರುಮಂತ್ರವಾದ ಗಾಯತ್ರೀ ಜೀವನದ ಉತ್ಕರ್ಷದ ದಿಕ್ಕನ್ನು ತೋರಿಸುತ್ತದೆ.


ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್|| (ಯಜು.36.3)


     [ಸವಿತುಃ ದೇವಸ್ಯ] ಸೃಜನ ಕರ್ತೃವೂ ಪ್ರೇರಕನೂ ಆದ, ಪ್ರಕಾಶಮಯ ಪ್ರಭುವಿನ [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಣೀಯವಾದ, ಪಾಪಭಸ್ಮಕಾರಿಯಾದ ತೇಜಸ್ಸನ್ನು, [ಧೀಮಹಿ] ಧ್ಯಾನಿಸುತ್ತೇವೆ, ದರಿಸುತ್ತೇವೆ. [ಯಃ] ಆ ಸ್ವಾಮಿಯು [ನಃ ಧಿಯಃ] ನಮ್ಮ ಬುದ್ಧಿಗಳನ್ನು ಹಾಗೂ ಕರ್ಮಗಳನ್ನು [ಪ್ರಚೋದಯಾತ್] ಪ್ರೇರಿಸಲಿ.

ಶನಿವಾರ, ಆಗಸ್ಟ್ 7, 2010

ಮೂಢ ಉವಾಚ -1

ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ 
ಏಕಮುಖ ಬಹುಮುಖ ಸುಮುಖ ಕುಮುಖ !
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||

ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ 
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ |
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ 
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||

ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು 
ಸೇವೆಯನು ಗೈಯುವರು ನಂಬಿಕೆಯ ನಟಿಸುವರು |
ನೀನೆ ಗತಿ ನೀನೆ ಮತಿ ಪರದೈವವೆನ್ನುವರು 
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||

ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು |
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು 
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.

ವೇದೋಕ್ತ ಜೀವನ ಪಥ - ಜೀವನ ಬುನಾದಿ -12

     ಸತ್ಯದಲ್ಲಿ ಶ್ರದ್ಧೆಯಿಡಬೇಕು. ಆದರೆ ಜ್ಞಾನವಿಲ್ಲದೆ ಸತ್ಯಾಸತ್ಯನಿರ್ಣಯ ಮಾಡುವುದಾದರೂ ಹೇಗೆ? ಅದೇ ಕಾರಣದಿಂದ ಪರಮಾತ್ಮನು ಪ್ರತಿಯೊಬ್ಬ ಜೀವನಿಗೂ ಭರವಸೆ ನೀಡಿದ್ದಾನೆ:

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಮಿ ಹರೀ ಸಖಾಯಾ ಸಧಮಾದ ಆಶೂ|
ಸ್ಥಿರಂ ಕಥಂ ಸುಖಮಿಂದ್ರಾಧಿತಿಷ್ಠನ್ ಪ್ರಜಾನನ್  ವಿದ್ವಾನ್ ಉಪ ಯಾಹಿ ಸೋಮಮ್|| (ಋಕ್.3.35.4)

     [ಇಂದ್ರ] ಓ ಇಂದ್ರಿಯವಾನ್ ಜೀವ! [ತೇ] ನಿನ್ನನ್ನು [ಬ್ರಹ್ಮಯುಜಾ ಬ್ರಹ್ಮಣಾ] ಪರಬ್ರಹ್ಮಯುಕ್ತವಾದ ನಿರ್ಮಲಜ್ಞಾನದೊಂದಿಗೆ [ಯುನಜ್ಮಿ] ಸಂಬದ್ಧನಾಗಿ ಮಾಡುತ್ತೇನೆ. [ಸಖಾಯಾ] ನಿನಗೆ ಮೈತ್ರಿ ತೋರುವ [ಆಶೂ] ವೇಗಯುಕ್ತವಾದ [ಹರೀ] ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು [ಸಧಮಾದೇ ಯುನಜ್ಮಿ] ಅಕ್ಕಪಕ್ಕದಲ್ಲಿ ನಿಯೋಜಿಸುತ್ತೇನೆ. [ಸ್ಥಿರಂ ಸುಖಂ ರಥಮ್] ಧೃಢವೂ, ಸುಖಕರವೂ ಆದ ದೇಹರಥವನ್ನು [ಅಧಿತಿಷ್ಟನ್] ಏರಿ [ವಿದ್ವಾನ್] ವಿದ್ವಾಂಸನಾಗಿ [ಪ್ರಜಾನನ್] ಪ್ರಜ್ಞಾನವನ್ನು ಗಳಿಸಿ [ಸೋಮಂ ಉಪಯಾಹಿ] ಶಾಂತಿಸಾಗರನಾದ ಪ್ರಭುವಿನ ಬಳಿ ಸಾರು.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು


ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ
-ಕ.ವೆಂ.ನಾಗರಾಜ್.