ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಫೆಬ್ರವರಿ 26, 2014

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು|
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ||
     ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೆಂದರೆ ಸೂಕ್ತವಾದೀತು. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ತಿಳಿಯೋಣ, ಕೇವಲ ನಿದ್ರೆ ಮಾಡದಿರುವುದಲ್ಲ. ಶಿವ, ಶಂಭು, ಶಂಕರ, ಹರ, ಮಹಾದೇವ, ಇತ್ಯಾದಿಗಳು ಒಬ್ಬನೇ ದೇವನ ಗುಣವಿಶೇಷಗಳೇ ಹೊರತು ಮತ್ತೇನಲ್ಲ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"- ಸತ್ಯ ಒಂದೇ, ಪ್ರಜ್ಞಾವಂತರು ಅದನ್ನು ಬಹು ರೀತಿಯಲ್ಲಿ ಹೇಳುತ್ತಾರೆ. 'ದೇವನೊಬ್ಬ, ನಾಮ ಹಲವು' ಎಂಬುದು ಸನಾತನ ಧರ್ಮದ ನಿಲುವಾಗಿದೆ. ಹಾಗೆಯೇ 'ಗುರಿಯೊಂದೇ, ದಾರಿಗಳು ಹಲವು' ಎಂಬುದನ್ನೂ ನಾವು ಅರಿತು ಅರಗಿಸಿಕೊಳ್ಳಬೇಕಿದೆ. ದೇವರು ಒಬ್ಬನೇ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಆದರೆ ಆ ದೇವರು ನಾವು ನಂಬುವ ದೇವರು ಮಾತ್ರ - ಏಸು, ಅಲ್ಲಾಹು, ವಿಷ್ಣು, ಶಿವ, ಇತ್ಯಾದಿ- ಎನ್ನುತ್ತೇವೆ. ಗೊಂದಲ ಶುರುವಾಗುವುದು ಇಲ್ಲಿಯೇ. ಪ್ರತಿ ಧರ್ಮದ ಸಂದೇಶ 'ಮುಕ್ತಿ'ಗೆ ದಾರಿ ತೋರಿಸುವುದೇ ಆಗಿದೆ. ಜಿಜ್ಞಾಸುವಿಗೆ ಅರ್ಥವಾಗುತ್ತದೆ. ಈ ದೇವಸ್ಥಾನ, ಮಂದಿರ, ಮಸೀದಿ, ಮುಂತಾದವು, ಭಜನೆ, ಉಪಾಸನೆ, ಧ್ಯಾನ, ಪೂಜೆ, ಇತ್ಯಾದಿಗಳು ಮುಕ್ತಿಗೆ ದಾರಿ ತೋರಿಸುವ ಕೈಮರಗಳು (ದಿಕ್ಸೂಚಿಗಳು), ಸಾಧನಗಳು, ಮುಕ್ತಿ ಪಥಕ್ಕೆ ಒಯ್ಯುವ ಮೆಟ್ಟಲುಗಳು ಮಾತ್ರ ಆಗಿವೆ. ದುರದೃಷ್ಟವೆಂದರೆ ನಾವು ದಿಕ್ಸೂಚಿ ಫಲಕ, ಮೆಟ್ಟಲುಗಳೇ ಅಂತಿಮವೆಂದುಕೊಂಡು ಅಲ್ಲೇ ಜೋತು ಬಿದ್ದು ಉಳಿದುಬಿಡುತ್ತೇವೆ. ಮುಂದುವರೆದಾಗ ಮಾತ್ರ ಗುರಿ ತಲುಪಿಯೇವು. ನಾವು ಮಾಡುವ ವಿವಿಧ ಆಚರಣೆಗಳ ಉದ್ದೇಶವೂ ಇದೇ ಆಗಿದೆ. ಆದರೆ ಕೇವಲ ಆಚರಣೆಗಳಲ್ಲೇ ಮುಳುಗಿಬಿಟ್ಟರೆ ಆಚರಣೆಯ ನೈಜ ಉದ್ದೇಶ ಅರ್ಥ ಕಳೆದುಕೊಳ್ಳುತ್ತದೆ.
ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ|
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ||
     ಪ್ರತಿ ಧರ್ಮವೂ ತನ್ನದೇ ಆದ ರೀತಿಯಲ್ಲಿ ಜಗತ್ತು, ಜೀವ, ದೇವರನ್ನು ವಿವರಿಸುತ್ತದೆ. ಯಾವ ಧರ್ಮ ಏನೇ ಹೇಳಲಿ, ಅವುಗಳನ್ನು ನಾವು ಹೇಗೆಯೇ ಅರ್ಥ ಮಾಡಿಕೊಳ್ಳಲಿ ಅದರಿಂದ ಜಗತ್ತು, ಜೀವ, ದೇವರು ಬದಲಾಗುವುದಿಲ್ಲ. ಆದರೆ, ಈ ಸಮಾಜದಲ್ಲಿ ಬಾಳುತ್ತಿರುವ ನಾವು, ಪಂಚಭೂತಗಳಿಂದ-ಜಲ, ವಾಯು, ಆಕಾಶ, ಅಗ್ನಿ, ನೆಲ- ಒಡಗೂಡಿ ನಮ್ಮೊಳಗೆ ಚೈತನ್ಯರೂಪಿ ಆತ್ಮವನ್ನು ಹೊಂದಿರುವ ನಾವು, ಪಂಚಭೂತಗಳಿಂದಲೇ ನಮ್ಮ ಅಭಿವೃದ್ಧಿ ಹೊಂದಿರುವುದನ್ನು, ಹೊಂದುತ್ತಿರುವುದನ್ನು ಅರಿತು ಆ ಕುರಿತು ಕೃತಜ್ಞತಾಭಾವ ಹೊಂದಿರುವುದು, ಇವೆಲ್ಲದಕ್ಕೂ ಕಾರಣಕರ್ತವಾದ ಆ ಮಹಾನ್ ಶಕ್ತಿಗೆ ನಮಿಸುವುದು ನಾವು ಮಾಡಬೇಕಾದ ಕರ್ತವ್ಯವಾಗಿದೆ. ಈ ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಕಾಶಗಳನ್ನು ಹಾಳು ಮಾಡದೆ, ಕಲುಷಿತಗೊಳಿಸದೆ ನಮ್ಮ ಮುಂದಿನವರಿಗೂ ಉಳಿಸಿ, ಸಂರಕ್ಷಿಸುವುದು ಆ ಪರಮಾತ್ಮನ ನಿಜವಾದ ಪೂಜೆಯಾಗುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವನನ್ನು ಕಾಣೋಣ, ಪೂಜಿಸೋಣ. ಇಂತಹ ಪೂಜೆಯಿಂದ ಆನಂದ, ತೃಪ್ತಿ ಸಿಗದೇ ಇರುವುದಿಲ್ಲ. ಆ ಮಂಗಳಮಯ ಶಿವನನ್ನು ನಮ್ಮಲ್ಲಿ ಆತ್ಮದ ಅರಿವನ್ನುಂಟು ಮಾಡು ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸೋಣ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ
ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
     ಈ ಮಂತ್ರದ ಅರ್ಥ ಹೀಗಿದೆ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ.ನಾಗರಾಜ್.

ಜೀವನ ಸಂಧ್ಯಾಕಾಲ -1

ಅರ್ಧ ಜೀವನವ ನಿದ್ದೆಯಲಿ ಕಳೆವೆ
ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ|
ಕಷ್ಟ ಕೋಟಲೆ ಕಾಲೆ ಉದರಭರಣೆಗೆ
ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ||
   ವಿಚಿತ್ರವೆನಿಸಿದರೂ ಸರಿಸುಮಾರು ಸರಿಯಾದ ಲೆಕ್ಕವಿದು. ಈ ಲೆಕ್ಕಾಚಾರದಲ್ಲಿ ನಾವು ನಿಜವಾಗಿ ಬದುಕುವುದೆಷ್ಟು ಎಂಬುದು ವಿಚಾರ ಮಾಡಬೇಕಾದ ಸಂಗತಿಯೇ ಆಗಿದೆ. ಹುಡುಗಾಟದ ಬಾಲ್ಯ ಕಳೆದು, ಜವಾಬ್ದಾರಿಯ ಜೀವನ ಪ್ರಾರಂಭಿಸಿ ಮಾಡುವ ಹೋರಾಟ, ಹಾರಾಟಗಳಲ್ಲಿ ಹೈರಾಣಾಗಿ ಒಂದು ಸ್ಥಿತಿಗೆ ಬಂದೆವು ಅನ್ನುವಷ್ಟರಲ್ಲಿ ಮುಪ್ಪು ಬಂದುಬಿಡುತ್ತದೆ. ಇಳಿವಯಸ್ಸು ತನ್ನ ವಧುವನ್ನು ಹುಡುಕಿಕೊಂಡು ಬಂದಾಗ ಅಡಗಿಕೊಳ್ಳಲು, ಅದರಿಂದ ತಪ್ಪಿಸಿಕೊಳ್ಳಲು ಈ ಪ್ರಪಂಚದಲ್ಲಿ ಸ್ಥಳವೇ ಇಲ್ಲ. ಹೇಗೆ ಬದುಕಬೇಕು, ಹೇಗೆ ಸಾಯಬೇಕು ಎಂಬುದಕ್ಕೆ ತರಬೇತಿ ಕೊಡುವವರಿದ್ದಾರೆ. ಅದರಂತೆ, ಹೇಗೆ ಇಳಿವಯಸ್ಸನ್ನು ಎದುರಿಸಬೇಕೆಂಬುದಕ್ಕೆ ತರಬೇತಿ ಕೊಡುವ ಶಾಲೆಗಳೂ ಬರಬೇಕಿದೆ. ಮಾನಸಿಕ ಮುಪ್ಪು ಮತ್ತು ದೈಹಿಕ ಮುಪ್ಪು, ಈ ಎರಡು ರೀತಿಯ ಮುಪ್ಪುಗಳ ಪರಿಣಾಮ ವೈಯಕ್ತಿಕ ಜೀವನದ ಮೇಲೆ ಬೀರದೇ ಇರುವುದಿಲ್ಲ. ಒಂದು ರೀತಿಯಲ್ಲಿ ನೋಡಿದರೆ ತಮ್ಮ ಅದುವರೆಗಿನ ಕಾರ್ಯಗಳ, ಕರ್ಮಗಳ ಫಲ ಅನುಭವಿಸುವ ಕಾಲವದು. ಜೊತೆಜೊತೆಗೆ, ಇನ್ನು ಹೆಚ್ಚು ಸಮಯವಿಲ್ಲ, ಮಾಡಬೇಕೆಂದಿರುವ, ಮಾಡದೇ ಉಳಿದಿರುವ ಕೆಲಸಗಳನ್ನು ಬೇಗ ಮುಗಿಸಿಬಿಡಬೇಕು ಎಂಬ ಭಾವ ಜಾಗೃತವಾಗುವ ಸಮಯ. ಬೇಡವೆಂದರೆ ಮುಪ್ಪು ಬರದಿದ್ದೀತೆ? ಈ ಅನಿವಾರ್ಯತೆಯನ್ನು ಆನಂದದಿಂದ ಅನುಭವಿಸುವ, ಇದ್ದುದನ್ನು ಇದ್ದಂತೆ, ಬರುವುದನ್ನು ಬಂದಂತೆ ಸ್ವೀಕರಿಸುವ ಮನೋಭಾವ ತಾಪವನ್ನು ಕಡಿಮೆ ಮಾಡುವ ರಾಮಬಾಣ. ಮುಪ್ಪನ್ನು ಯಶಸ್ವಿಯಾಗಿ ಎದುರಿಸುವ ಇನ್ನೊಂದು ವಿಧಾನವೆಂದರೆ ಏಕಾಂತದೊಂದಿಗೆ ಒಂದು ಗೌರವಾನ್ವಿತ ಒಪ್ಪಂದವನ್ನು ಮಾಡಿಕೊಳ್ಳುವುದು. ಮುಪ್ಪು - ಇದು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಎರಡು ಮಗ್ಗಲುಗಳ ಕಡೆಗೂ ದೃಷ್ಟಿ ಹಾಯಿಸೋಣ. 
     ಮುಪ್ಪು ಬಂದಾಗ ಸಾಮಾನ್ಯವಾಗಿ ಸಾವಿನ ಪ್ರಜ್ಞೆ ಜಾಗೃತವಾಗುತ್ತದೆ. ತಲೆ ನರೆಯುತ್ತದೆ ಅಥವ ಬೋಳಾಗತೊಡಗುತ್ತದೆ, ಹಲ್ಲುಗಳು ಉದುರಲು ಆರಂಭವಾಗುತ್ತವೆ, ಕಿವಿ ಮಂದವಾಗುತ್ತದೆ, ಶರೀರ ಕುಗ್ಗಲು ತೊಡಗುತ್ತದೆ, ದೃಷ್ಟಿ ಮಸುಕಾಗತೊಡಗುತ್ತದೆ, ರೋಗಗಳು, ಕೀಲುಗಳ ನೋವು ಬಾಧಿಸತೊಡಗುತ್ತದೆ. ಅದುವರೆವಿಗೆ ರಾಜನಂತೆ ಮೆರೆದವರಿಗೆ ಇನ್ನೊಬ್ಬರ ಆಶ್ರಯ ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವರ ಪ್ರಾಮುಖ್ಯವೂ ಕಡಿಮೆಯಾಗುತ್ತಾ ಹೋಗುತ್ತದೆ. ಕೇವಲ ಕರ್ತವ್ಯ ಅಥವ ಪ್ರೀತಿಯ ಕಾರಣದಿಂದ ಅವರನ್ನು ನೋಡಿಕೊಂಡರೂ ಅವರಿಗೆ ಪ್ರಾಶಸ್ತ್ಯ ಕೊಡುವುದಿಲ್ಲ. ಈ ಸ್ಥಿತಿಗೆ ಮಾನಸಿಕವಾಗಿ ಸಿದ್ಧರಿರದವರ ಪಾಡು ಶೋಚನೀಯವಾಗುತ್ತದೆ. ಯುವಕರು ಕಷ್ಟಗಳನ್ನು ಎದುರಿಸುತ್ತಾರೆ, ಆದರೆ ವೃದ್ಧಾಪ್ಯದಲ್ಲಿ ಕಷ್ಟಗಳೇ ಅವರನ್ನು ಎದುರಿಸುತ್ತವೆ. ಕೈಕಾಲುಗಳು ಗಟ್ಟಿಯಾಗಿದ್ದಾಗ ಬದುಕಿನ ಅರ್ಥ ತಿಳಿಯದಿದ್ದವರಿಗೆ ಯೌವನ ಮುಕ್ಕಾಗಿ, ಗೆಳೆಯರು, ಬಂಧುಗಳು ದೂರವಾಗಿ, ನಿಂದೆ, ಮೂದಲಿಕೆಗಳನ್ನು ಎದುರಿಸಬೇಕಾಗಿ ಬಂದಾಗ ಅರ್ಥ ಗೊತ್ತಾದರೂ ಪ್ರಯೋಜನವಿರುವುದಿಲ್ಲ. ಮುಪ್ಪಿನ ದಾರುಣ ಸ್ಥಿತಿಯೆಂದರೆ, ವೃದ್ಧರು ಸ್ವತಃ ತಮ್ಮನ್ನು ತಾವು ಉಪಯೋಗವಿಲ್ಲದವರು, ಯಾರಿಗೂ ಪ್ರಯೋಜನಕ್ಕೆ ಬಾರದವರು, ತಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂದುಕೊಳ್ಳುವುದೇ ಆಗಿದೆ. ಆದರೆ ಸಂತೋಷವಾಗಿರುವ ಗುಟ್ಟೆಂದರೆ ಸದಾ ಚಟುವಟಿಕೆಯಿಂದಿರುವುದು, ಜೀವನದಲ್ಲಿ ಆಸಕ್ತಿ ಹೊಂದಿರುವುದು, ಸಾಧ್ಯವಿರುವಷ್ಟು ಇನ್ನೊಬ್ಬರಿಗೆ ಪ್ರಯೋಜನಕಾರಿಯಾಗಿರುವುದು. ವಯಸ್ಸು ಅನ್ನುವುದು ಸಂಗತಿಯ ಬಗ್ಗೆ ಮನಸ್ಸಿನ ಸ್ಥಿತಿಯಾಗಿದೆ. ಅದನ್ನು ಲೆಕ್ಕಿಸದಿದ್ದರೆ ಅದು ಸಂಗತಿಯೇ ಅಲ್ಲ. ಯಾರೇ ಆಗಲಿ, ಆಸಕ್ತಿಯನ್ನು ಕಳೆದುಕೊಂಡರೆ, ಅವರು ಇಪ್ಪತ್ತು ವರ್ಷದವರಾಗಲೀ, ಎಂಭತ್ತು ವರ್ಷದವರಾಗಲೀ, ಮುದುಕರೇ. ಆಸಕ್ತಿ ಇರುವವರು ಎಷ್ಟೇ ವಯಸ್ಸಿನವರಾಗಿರಲಿ, ಅವರು ಯುವಕರೇ! ಬದುಕಿನ ಅರ್ಥ ತಿಳಿದವರು ವೃದ್ಧಾಪ್ಯದಲ್ಲಿ ಹೊಗಳಿಕೆಗೆ ಉಬ್ಬದೆ, ತೆಗಳಿಕೆ, ಮೂದಲಿಕೆಗಳಿಗೆ ಕುಗ್ಗದೆ ಇರುವ ಮನೋಸ್ಥಿತಿಗೆ ತಲುಪಿರುತ್ತಾರೆ. 
     ಇನ್ನೊಂದು ರೀತಿಯ ಜನರೂ ಇರುತ್ತಾರೆ. ದೇಹಕ್ಕೆ ಮುಪ್ಪಡರಿದರೂ ಅವರ ತೀರದ ಆಸೆಗೆ ಮುಪ್ಪು ಬರುವುದೇ ಇಲ್ಲ. ತಮಾಷೆಯ ಈ ಪ್ರಸಂಗ ನೋಡಿ. ಒಮ್ಮೆ ಗೋಂದಾವಲೀ ಮಹಾರಾಜರು ಭಕ್ತರೊಬ್ಬರ ಮನೆಗೆ ಹೋಗಿದ್ದಾಗ, ಆ ಮನೆಯಲ್ಲಿದ್ದ ಸುಮಾರು ೯೦ ವರ್ಷದ ವೃದ್ಧೆ ಅವರನ್ನು ಉದ್ದೇಶಿಸಿ, "ಗುರುಗಳೇ, ನನಗೆ ನಿಮ್ಮ ಪಾದದ ಅಡಿಯಲ್ಲಿ ತಲೆಯಿಟ್ಟು ಸಾಯಬೇಕು ಎಂಬುದೊಂದೇ ಆಸೆ" ಅಂದಳಂತೆ. ಗುರುಗಳು ತಕ್ಷಣ ಪದಾಸನ ಹಾಕಿ ಕುಳಿತು, "ಅದಕ್ಕೇನಂತೆ, ಹಾಗೇ ಮಾಡಿ" ಅಂದರು. ಆ ವೃದ್ಧೆ ಗಾಬರಿಯಾಗಿ, "ಈಗಲೇ ಅಲ್ಲ ಗುರುಗಳೇ, ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವಿನ ನಾಮಕರಣ ನೋಡಿಕೊಂಡು ಸಾಯುತ್ತೇನೆ" ಎಂದಳಂತೆ. ಇಂತಹುದೇ ಇನ್ನೊಂದು ತಮಾಷೆಯ ಪ್ರಸಂಗ. ಒಮ್ಮೆ ಹಿರಿಯರೊಬ್ಬರು ಇನ್ನೇನು ಸಾವಿನ ಸಮೀಪವಿದ್ದಾರೆ ಎನ್ನುವ ಸ್ಥಿತಿಯಲ್ಲಿದ್ದಾಗ ಅವರ ಮಕ್ಕಳೆಲ್ಲಾ ಅವರ ಬಳಿಗೆ ಧಾವಿಸಿಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧ ಏನನ್ನೋ ಹೇಳಲು ಚಡಪಡಿಸಿದರೂ ಮಾತು ಹೊರಡುತ್ತಿರಲಿಲ್ಲ. ಅವರು ಯಾವುದೋ ಸಂಪತ್ತು, ಆಸ್ತಿಯ ಬಗ್ಗೆ ಏನೋ ಹೇಳಹೊರಟಿದ್ದಾರೆ ಎಂಬ ಅನುಮಾನ ಮಕ್ಕಳಿಗೆ. ಎಲ್ಲರಿಗೂ ಅದೇನೆಂದು ತಿಳಿಯುವ ಕುತೂಹಲ. ವೈದ್ಯರ ಹರಪ್ರಯತ್ನದಿಂದ ಕೊನೆಗೂ ಹಿರಿಯ ಮಗನಿಗೆ ಆ ವೃದ್ಧರು ಹೇಳಿದ್ದಿಷ್ಟು, "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿಕೊಂಡು ಬಂದೆ?" ಇದನ್ನು ಹೇಳಿದವರೇ ಶಾಶ್ವತವಾಗಿ ಕಣ್ಣು ಮುಚ್ಚಿದ್ದರು.
ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || 
     ಮುಪ್ಪು ಯಾವಾಗ ಪ್ರಾರಂಭವಾಗುತ್ತದೆ? ಯಾವಾಗ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಡಲು ಪ್ರಾರಂಭಿಸುತ್ತಾರೋ ಆಗ ಮುಪ್ಪು ಕಾಲಿಡಲು ಪ್ರಾರಂಭಿಸಿದೆ ಎನ್ನಬಹುದು. ಮುಂದೆ ಹೇಳುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಗಂಡಸರಿಗೆ ಸಾಮಾನ್ಯವಾಗಿ ೩೦ ಮತ್ತು ಹೆಂಗಸರಿಗೆ ಇನ್ನೂ ಮುಂಚೆಯೇ ಮುಪ್ಪು ಪ್ರಾರಂಭವಾಗುತ್ತದೆ, ಏಕೆಂದರೆ ಆಗ ಅವರು ತಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸು ಹೇಳಿಕೊಳ್ಳಲು, ತಾವಿನ್ನೂ ಚಿಕ್ಕವರು ಎಂದು ತೋರಿಸಿಕೊಳ್ಳಲು ಇಷ್ಟಪಡುವ ಅವಧಿಯದು. ಇದನ್ನು ಮುಕ್ತಾಯದ ಆರಂಭವೆನ್ನೋಣವೇ? ಬುದ್ಧಿವಂತ ಗಂಡ ಹೆಂಡತಿಯ ವಯಸ್ಸನ್ನು ಮರೆತು ಅವಳ ಜನ್ಮದಿನಾಂಕವನ್ನು ಮಾತ್ರ ನೆನಪಿಟ್ಟುಕೊಂಡಿರುತ್ತಾನಂತೆ. ಕಾಲ ಸರಿದಂತೆ ವಯಸ್ಸು ಹೆಚ್ಚುತ್ತಾ ಹೋಗುವುದು ಮತ್ತು ಹುಟ್ಟಿದವರೆಲ್ಲರೂ ಸಾಯುವರು ಎಂಬ ಸಾಮಾನ್ಯ ಅರಿವನ್ನೂ ಮರೆಸುವಂತೆ ಮಾಡುವ ಆ ಮಾಯೆಯ ಮಹಿಮೆ ಅಪಾರವೇ ಸರಿ. ವಯಸ್ಸಾದವರು ತಮಗೆ ಇನ್ನೂ ಸಾವು ಏಕೆ ಬರಲಿಲ್ಲವೆಂದು ಅಲವತ್ತುಕೊಳ್ಳುವುದನ್ನು ಕಾಣುತ್ತೇವೆ, ಇದು ವೃದ್ಧಾಪ್ಯದ ಕಾರಣದಿಂದ ಕಷ್ಟಪಡುವಾಗ ಆಡುವ ಮಾತಷ್ಟೇ ಆಗಿದೆ. ಸಾವು ನಿಜಕ್ಕೂ ಸನಿಹಕ್ಕೆ ಬಂದಾಗ ಅವರು ಸಾಯಲು ಬಯಸುವುದೇ ಇಲ್ಲ ಮತ್ತು ಮುಪ್ಪು ಅವರಿಗೆ ಹೊರೆ ಅನ್ನಿಸುವುದಿಲ್ಲ.
ವೃದ್ಧಾಶ್ರಮದಲ್ಲಿರುವ ಇವರ ಮನದಾಳವನ್ನು ಅರಿತವರಾರು?
     ಮುಪ್ಪಿನ ಕಾಲದ ಕಟು ವಾಸ್ತವತೆ, ಮುಪ್ಪು ಕುರಿತು ಹಿರಿಯರು ಮತ್ತು ಕಿರಿಯರ ದೃಷ್ಟಿಕೋನ ಹೇಗಿರಬೇಕು ಎಂಬ ಬಗ್ಗೆ ದೃಷ್ಟಿ ಹರಿಸಿದರೆ ಕಂಡು ಬರುವುದು ನಿರಾಶಾದಾಯಕ ಚಿತ್ರಣವೇ. ಈ ಉದಾಹರಣೆ ನೋಡಿ: ಅವರೊಬ್ಬರು ಆಗರ್ಭ ಶ್ರೀಮಂತರು. ಮಕ್ಕಳಿಬ್ಬರೂ ತಮ್ಮ ಸಂಸಾರದೊಂದಿಗೆ ಅಮೆರಿಕೆಯಲ್ಲಿದ್ದಾರೆ. ಪತಿ ತೀರಿದ ನಂತರ ಒಂಟಿಯಾದ ವೃದ್ಧೆ ವೃದ್ಧಾಶ್ರಮ ಸೇರಿದ್ದಾರೆ. ವೃದ್ಧಾಶ್ರಮದ ಕಟ್ಟಡಕ್ಕೆ ಆಕೆಯೇ ಉದಾರ ನೆರವು ನೀಡಿದ್ದಾರೆ. ಅವರ ಮಕ್ಕಳೂ ನಿಯತವಾಗಿ ಸಾಕಷ್ಟು ಹಣ ಕಳಿಸುತ್ತಾರೆ. ದೂರವಾಣಿಯಲ್ಲಿ ಮಾತನಾಡುತ್ತಾರೆ. ಆದರೆ, ಅವರು ನೆಮ್ಮದಿಯಿಂದ ಇದ್ದಾರೆಯೇ? ವೃದ್ಧಾಶ್ರಮದಲ್ಲಿ ಕಂಡು ಬರುವ ವೃದ್ಧ, ವೃದ್ಧೆಯರದು ಒಬ್ಬೊಬ್ಬರದು ಒಂದೊಂದು ರೀತಿಯ ಕಥೆ. ಮಕ್ಕಳು, ಸೊಸೆಯಂದಿರನ್ನು ದೂಷಿಸುವವರು, ಇದ್ದುದೆಲ್ಲವನ್ನೂ ಕಿತ್ತುಕೊಂಡು ಹೊರದೂಡಲ್ಪಟ್ಟವರು, ನೋಡಿಕೊಳ್ಳುವವರು ಯಾರೂ ಇಲ್ಲದವರು, ಅವಮಾನ ಸಹಿಸದೆ ಹೊರಬಂದವರು, ಹೀಗೆ ಹತ್ತು ಹಲವು ಕಾರಣಗಳು ಸಿಗುತ್ತವೆ. ನೋವು, ನಲಿವುಗಳನ್ನು ಹೇಳಿಕೊಳ್ಳದೆ ಮೌನವಾಗಿ ಸಹಿಸಿಕೊಂಡಿರುವವರು, ಕಾಯಿಲೆಗಳಿಂದ ಜರ್ಜರಿತರಾಗಿ ನರಳುವವರು, ನಿರ್ಲಿಪ್ತತೆ ಬೆಳೆಸಿಕೊಂಡವರು, ಕಣ್ಣುಗಳಲ್ಲಿ ಶೂನ್ಯ ನೋಟ ತುಂಬಿಕೊಂಡಿರುವವರು, ಕಳೆದ ತಿಂಗಳು ಇಷ್ಟು ಜನರು ಜೀವನಯಾತ್ರೆ ಅಂತ್ಯಗೊಳಿಸಿದರು, ನಮ್ಮ ಸರದಿ ಸದ್ಯದಲ್ಲೇ ಬರಲಿದೆ ಎಂಬ ಅರಿವಿರುವವರು, ಕಿರಿಕಿರಿಯ ಮನೋಭಾವದಿಂದ ಕುಟುಂಬದವರ ಕೆಂಗಣ್ಣಿಗೆ ಗುರಿಯಾದವರು, ಮುಂತಾದವರು ವೃದ್ಧಾಶ್ರಮಗಳಲ್ಲಿ ಕಾಣಸಿಗುತ್ತಾರೆ. ಹೆಚ್ಚಿನವರಿಗೆ ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ, ವಿಧವಾ ವೇತನಗಳು ಬರುತ್ತಿರುತ್ತವೆ. [ಮಕ್ಕಳೇ ತಮ್ಮ ತಂದೆ, ತಾಯಿಯರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಸವಲತ್ತುಗಳನ್ನು ಮಾಡಿಸಿಕೊಡಲು ಓಡಾಡುವುದನ್ನು ನನ್ನ ಸೇವಾವಧಿಯಲ್ಲಿ ಕಂಡಿದ್ದೇನೆ. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಟ್ಟರೆ ಅವರಿಗೆ ವೇತನ ಮಂಜೂರು ಮಾಡದಿರಲು ಸಾಧ್ಯವೇ? ಸಂಧ್ಯಾಸುರಕ್ಷಾ ವೇತನ ಪಡೆಯುವವರು ಕಾರಿನಲ್ಲಿ ಓಡಾಡುವುದನ್ನೂ ಕಂಡಿದ್ದೇನೆ]. ಸ್ಟೇಡಿಯಮ್ಮಿನ ಕಟ್ಟೆಯಲ್ಲಿ, ಪಾರ್ಕುಗಳ ಬೆಂಚುಗಳಲ್ಲಿ ನಿವೃತ್ತರು, ವಯಸ್ಸಾದವರು ಕುಳಿತು ತಮ್ಮ ಗೋಳನ್ನು, ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ, ಇತರರನ್ನು ಶಪಿಸುತ್ತಾ, 'ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ' ಎನ್ನುವವರ ಗುಂಪು ಸಾಮಾನ್ಯವಾಗಿ ಕಂಡುಬರುತ್ತದೆ.
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಸುಕಾಗಿರಲು|
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ||
     ವಯಸ್ಸಾದ ದೇಹ ಒಂದು ಹಳೆಯ ಹಾಳಾದ ವಾದ್ಯದಂತೆ. ಅದರ ಒಳಗಿನ ಆತ್ಮ ಅದರಿಂದ ಯೌವನದ ಸುಂದರ ಸ್ವರಗಳನ್ನು ಹೊರಡಿಸಲು ಪ್ರಯತ್ನಿಸುತ್ತದೆ. ಆದರೆ ಎಂತಹ ಉತ್ತಮ ಸಂಗೀತಗಾರನೂ ಅಂತಹ ವಾದ್ಯದಿಂದ ಮಧುರ ನಾದ ಹೊರಡಿಸಲಾರ. ಆ ಕಿತ್ತ ತಂತಿಗಳ ವಾದ್ಯ ನುರಿತ ಸಂಗೀತಕಾರನ ಆದೇಶವನ್ನೂ ಪಾಲಿಸುವುದಿಲ್ಲ. 'ಶೀರ್ಯತೇ ಇತಿ ಶರೀರಮ್'-ಜೀರ್ಣವಾಗುವ ಗುಣವಿರುವುದರಿಂದಲೇ ಇದಕ್ಕೆ ಶರೀರವೆನ್ನುತ್ತಾರೆ. ಹಿರಿಯರೊಬ್ಬರು ಕೊಟ್ಟ ವಿವರದಂತೆ, ರಾಜ ಭರ್ತೃಹರಿಯ ಕವಿವಾಕ್ಯದಲ್ಲಿ ವೃದ್ಧಾಪ್ಯದ ವರ್ಣನೆ ಈ ರೀತಿ ಇದೆ: 'ಗಾತ್ರಂ ಸಂಕುಚಿತಂ (ಶರೀರ ಕುಗ್ಗುವುದು), ಗತಿರ್ವಿಗಲಿತಾ (ನಡಿಗೆ ಕುಂಠಿತವಾಗುವುದು), ಭ್ರಷ್ಠಾಚ ದಂತಾವರೀ (ಹಲ್ಲಿನ ಸಾಲು ಕಳಚುವುದು), ದೃಷ್ಟಿರ್ನಶ್ಯತಿ (ನೋಟ ನಾಶವಾಗುವುದು), ವರ್ಧತೇ ಬಧಿರತಾ (ಕಿವುಡುತನ ಹೆಚ್ಚುವುದು), ವಕ್ತಚ ಲಾಲಾಯತೆ (ಬಾಯಲ್ಲಿ ಜೊಲ್ಲು ಸುರಿಯುವುದು), ವಾಕ್ಯಂ ನಾದ್ರೀಯತೇ ಚ ಬಾಂಧವಂ (ಬಂಧುಗಳು ಮಾತನ್ನು ಆದರಿಸರು), ಭಾರ್ಯಾ ನ ಶುಶ್ರೂಷತೇ (ಪತ್ನಿ ಶುಶ್ರೂಷೆ ಮಾಡುವುದಿಲ್ಲ), ಹಾ ಕಷ್ಟಂ ಪುರುಷಸ್ಯ ಜೀರ್ಣವಯಸಃ ಪುತ್ರೋಪ್ಯವಜ್ಞಾಯತೇ (ಅಯ್ಯೋ ಕಷ್ಟ, ಇಳಿ ವಯಸ್ಸಿನಲ್ಲಿ ಪುತ್ರನೂ ಕಡೆಗಣಿಸುತ್ತಾನೆ). ಹಿರಿಯರನ್ನು ಆದರಿಸದಿರುವ ರೀತಿ ಇಂದಿನ ಕಾಲದ ಸಮಸ್ಯೆಯಲ್ಲ, ಹಿಂದಿನಿಂದಲೂ ಇದೆ. ಇದಕ್ಕೆ ಕಾಲವನ್ನು ದೂಷಿಸುವಂತಿಲ್ಲ, ದೂಷಿಸಬೇಕಾಗಿರುವುದು, ಸರಿಪಡಿಸಬೇಕಾಗಿರುವುದು ಇದಕ್ಕೆ ಕಾರಣವಾದ ಸಂಗತಿಗಳನ್ನು ಎಂದು ಅರಿತರೆ ಒಳಿತು.
     ಜೀವನದ ಸಂಧ್ಯಾಕಾಲದಲ್ಲಿರುವವರ ದುಸ್ಥಿತಿಗೆ ಭೋಗವಾದ, ಭೌತಿಕವಾದ, ಉತ್ತಮ ಸಂಸ್ಕಾರಯುತ ಶಿಕ್ಷಣದ ಕೊರತೆ, ಇಂದಿನ ಮೌಲ್ಯ ರಹಿತ ಆಡಳಿತ ವ್ಯವಸ್ಥೆ ತಮ್ಮ ಕಾಣಿಕೆ ನೀಡಿವೆ. ಹಿಂದಿನ ಸಂಸ್ಕಾರಯುತ ಜೀವನ ಮತ್ತು ಶಿಕ್ಷಣ ಪದ್ಧತಿಯನ್ನು ಬದಲಿಸಿ ಗುಮಾಸ್ತರ ಸೈನ್ಯವನ್ನು ಸೃಷ್ಟಿಸುವ ಶಿಕ್ಷಣ ಪದ್ಧತಿ ಜಾರಿಗೆ ತಂದರೆ, ಇಂಗ್ಲಿಷ್ ಕಲಿತರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಮನೋಭಾವ ಬೆಳೆಸಿದರೆ ಕರಿಚರ್ಮದ ಬ್ರಿಟಿಷರು ತಯಾರಾಗುತ್ತಾರೆ ಎಂಬ ಲಾರ್ಡ್ ಮೆಕಾಲೆಯ ಮಾತು ಸಾಕಾರವಾಗಿಬಿಟ್ಟಿದೆ. ಸುಮಾರು ನಾಲ್ಕು ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಜನಾಂಗ ಇನ್ನೂ ಅವರು ಬೇರೂರಿಸಿರುವ ಮಾನಸಿಕ ದಾಸ್ಯದಲ್ಲೇ ತೊಳಲಾಡುತ್ತಿರುವುದು ದುರ್ದೈವದ ಸಂಗತಿ. ಭೋಗವಾದದ ದಾಸರಾಗಿ ಸಂಸ್ಕೃತಿ ಮರೆತ ಪಶುಗಳಂತೆ ವರ್ತಿಸುವುದು ಈಗ ಸಾಮಾನ್ಯವಾಗಿದೆ. ಸಾಫ್ಟ್ ವೇರ್ ಇಂಜನಿಯರ್ ಒಬ್ಬ ತನ್ನ ತಾಯಿಗೆ ಹಣ ಕಳುಹಿಸಿದ್ದನ್ನು ಆಕ್ಷೇಪಿಸಿ ಜಗಳವಾಡಿದ ಪತ್ನಿಯ (ಆಕೆಯೂ ಸಾಫ್ಟ್ ವೇರ್ ಇಂಜನಿಯರ್) ನಡವಳಿಕೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈಚೆಗೆ ಓದಿದ್ದೆ. ನಿವೃತ್ತಿ ಅಂಚಿನಲ್ಲಿದ್ದ ಸರ್ಕಾರಿ ನೌಕರರನ್ನು ಹೆಂಡತಿ, ಮಕ್ಕಳೇ ಸೇರಿಕೊಂಡು ಕೊಂದು ಅನುಕಂಪದ ಆಧಾರದಲ್ಲಿ ನೌಕರಿಯನ್ನು ಗಿಟ್ಟಿಸಿಕೊಂಡಿರುವ, ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಪಡೆದಿರುವ ಉದಾಹರಣೆಗಳಿಗೆ ಕೊರತೆಯಿಲ್ಲ. ತಂದೆಯನ್ನೇ ತನ್ನ ಸ್ನೇಹಿತನ ಸಹಾಯದಿಂದ ಕೊಂದು ಅನುಕಂಪದ ಆಧಾರದಲ್ಲಿ ಗ್ರಾಮಲೆಕ್ಕಿಗನ ನೌಕರಿ ಪಡೆದಿದ್ದವನೊಬ್ಬನನ್ನು, ಕೊಲೆಗೆ ಸಹಕರಿಸಿದ ಅವನ ಸ್ನೇಹಿತನೇ ನಂತರದಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡತೊಡಗಿದಾಗ ಬೇಸತ್ತು ಸ್ನೇಹಿತನನ್ನೂ ಕೊಂದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿ ನನ್ನ ಅಧೀನ ನೌಕರನೊಬ್ಬನಾಗಿದ್ದ. ಆಸ್ತಿಯ ಆಸೆಗಾಗಿ ತಂದೆ, ತಾಯಿಯರನ್ನೇ ಕೊಂದವರನ್ನೂ ಕಂಡಿದ್ದೇವೆ. ಇಂತಹವರ ಮಕ್ಕಳೂ ಮುಂದೆ ತಮ್ಮ ಹಿರಿಯರನ್ನೇ ಅನುಕರಿಸುವುದಿಲ್ಲವೆಂಬುದಕ್ಕೆ ಖಾತ್ರಿಯಿದೆಯೇ? ವಿದ್ಯೆ ವಿನಯವನ್ನು ಕೊಡುತ್ತದೆ ಎಂಬುದು ಸನಾತನ ಸಂಸ್ಕಾರಯುತ ಶಿಕ್ಷಣ ಸಾರುತ್ತಿತ್ತು. ಇಂದು? ವಿನಯವನ್ನು ದೂರವಿಡುವ ಇಂದಿನ ಶಿಕ್ಷಣ ಪದ್ಧತಿ ಮಾನವೀಯತೆಯನ್ನು ಮರೆಸಿಬಿಟ್ಟಿದೆ.
'ನಮ್ಮ ಹಿರಿಯರನ್ನು ನಾವು ಗೌರವಿಸೋಣ; ನಮ್ಮ ಮಕ್ಕಳೂ ಮುಂದೆ ನಮ್ಮನ್ನು ಆದರಿಸಬಹುದು!'
-ಕ.ವೆಂ.ನಾಗರಾಜ್.
***************
3.3.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಫೆಬ್ರವರಿ 14, 2014

ಸಾಧನಾ ಪಥ

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ || 
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ. 
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ || 
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು 
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ. 
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ || 
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ. 
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಸಾಧಿಸುವುದೇ ನಮಗೆ ಸಿಗುವ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು]
[24-02-2014ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']

ಸೋಮವಾರ, ಫೆಬ್ರವರಿ 10, 2014

ಸಹನೆಯ ಕಟ್ಟೆ ಒಡೆಯದಿರಲಿ

     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
   
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.

ಸೋಮವಾರ, ಫೆಬ್ರವರಿ 3, 2014

ಶ್ರಾದ್ಧ - ಏಕೆ ಮತ್ತು ಹೇಗೆ?

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ, ವೈದಿಕ, ಪುಣ್ಯಸ್ಮರಣೆ, ಶಾಂತಿ, ಉತ್ತರ ಕ್ರಿಯೆ, ಇತ್ಯಾದಿಗಳಿಗೆ ಬಳಸಲಾಗುತ್ತಿದೆ. ಆದರೆ ಶ್ರಾದ್ಧ ಎಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎಂದಷ್ಟೇ ಅರ್ಥ. ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸವೂ ಶ್ರಾದ್ಧವೇ! ಒಬ್ಬ ಶಿಕ್ಷಕ, ನೌಕರ, ಅಧಿಕಾರಿ, ಕಾರ್ಮಿಕ, ವಿದ್ಯಾರ್ಥಿ, ವ್ಯಾಪಾರಿ, ರಾಜಕಾರಣಿ, ಹೀಗೆ ಯಾರೇ ಆಗಿರಲಿ, ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ನಿಜವಾದ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ವೈದಿಕ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಮಾನವನ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ತಮ್ಮ ಸಂಪ್ರದಾಯಗಳಿಗೆ ಅನುಸಾರವಾಗಿ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎಂದು ಹೇಳುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತಾ ಹೋಗುತ್ತದೆ, ಅಲ್ಲದೆ ಪರಿಸರ ಮಾಲಿನ್ಯವೂ ಆಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯವಾಗುತ್ತದೆ, ಹದ್ದು-ಪಕ್ಷಿಗಳಿಗೆ ಆಹಾರವಾಗಿಸಲು ಮುಕ್ತವಾಗಿರಿಸಿದರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ. 
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||
     ಶ್ರಾದ್ಧ ಮಾಡುವುದು ಏತಕ್ಕಾಗಿ ಮತ್ತು ಯಾರಿಗಾಗಿ? ಯೋಚಿಸೋಣ. ದೇಹದಲ್ಲಿ ಪ್ರಾಣವಿರುವವರೆಗೂ ಅದು ವ್ಯಕ್ತಿಯಾಗಿ ಗುರುತಿಸಲ್ಪಡುತ್ತದೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣವೆನಿಸುತ್ತದೆ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಒಂದು ಜಡವಸ್ತು. ಹೀಗಾಗಿ ಅದನ್ನು ಶೀಘ್ರವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದ ಚಕ್ರವರ್ತಿಯ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳಬಯಸುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಇನ್ನು ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳು ಎಂದೆನ್ನಬಹುದೆ? ವೇದಗಳು ಆತ್ಮ ಅವಿನಾಶಿ, ಅನಾದಿ, ಅನಂತವಾದುದು ಎನ್ನುತ್ತವೆ. ತನ್ನ ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯ್ಟೇಷ್ಟಿ ಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಶಾಶ್ವತವಲ್ಲದ ಜೀವನದ ಅನುಭವವನ್ನು ಈ ಕ್ರಿಯೆ ಉಂಟುಮಾಡುತ್ತದೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದ ಸಂದರ್ಭದ ಕ್ರಿಯೆಗಳಿಂದ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ನಾವು ಚಿರಂಜೀವಿಗಳಂತೆ ವರ್ತಿಸುತ್ತೇವಲ್ಲಾ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡಿಸುತ್ತದೆ. ಮುಂದಾದರೂ ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ವಿಪರ್ಯಾಸವೆಂದರೆ ಈ ಭಾವನೆ ಹೆಚ್ಚು ಕಾಲ ಇರುವುದಿಲ್ಲ. ನಂತರ ನಾಯಿಯ ಬಾಲದ ಡೊಂಕಿನಂತೆ ಹಿಂದಿನ ಮಾಮೂಲು ಜೀವನದಲ್ಲಿ ತೊಡಗಿಕೊಳ್ಳುತ್ತೇವೆ. 
     ಮೃತರ ಆತ್ಮ ಸದ್ಗತಿ ಅರ್ಥಾತ್ ಮೋಕ್ಷ ಪಡೆಯಲೆಂಬ ಉದ್ದೇಶದಿಂದ ಶ್ರಾದ್ಧ ಮಾಡುವುದೇನೋ ಸರಿ. ಆದರೆ ಹಿಂದೆಯೇ ಹೇಳಿದಂತೆ ಆತ್ಮ ಮೋಕ್ಷ ಪಡೆಯಲು ಸ್ವಪ್ರಯತ್ನದಿಂದ ಮಾತ್ರ ಸಾಧ್ಯ, ಇತರರು ಸದ್ಗತಿ ನೀಡಲಾರರು. ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ಜಗಳದ ಸಂದರ್ಭದಲ್ಲಿ ಬಳಸುವ 'ನಿನ್ನ ತಿಥಿ ಮಾಡಿಬಿಡ್ತೀನಿ' ಎಂಬ ಮಾತಿಗೂ ಈ ರೀತಿಯ ಕೃತಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಸತ್ತ ಮೇಲೆ ಭೂತ-ಪ್ರೇತವಾಗಿ ಕಾಡಿಯಾರು ಎಂಬ ಭಯದಿಂದ ಈ ಕ್ರಿಯೆಗಳನ್ನು ಮಾಡುವವರೂ ಇರುತ್ತಾರೆ. ಇಂತಹ ಆಚಾರಗಳಲ್ಲಿ ನಂಬಿಕೆಯಿಲ್ಲದವರೂ ಸಹ ಇತರರು ಏನಾದರೂ ಅಂದುಕೊಂಡಾರು ಎಂಬ ಲೋಕಾಪವಾದದ ಭಯದಿಂದ ಮಾಡುವವರೂ ಇರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನು ಎಂದು ಮಾಡುವವರೂ ಸಿಗುತ್ತಾರೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಧರಿಸುವ ಯಜ್ಞೋಪವೀತದ ಮೂರು ಎಳೆಗಳು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಅವುಗಳನ್ನು ತೀರಿಸುವ ಸಂಕಲ್ಪದ ಸಂಕೇತ. ಇವು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತವೆಂದರೆ ಅದಕ್ಕೆ ಅರ್ಥವಿಲ್ಲ.  ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ರೀತಿಯಾಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ಸತ್ಸಂಗಗಳು, ವೇದಾಧ್ಯಾಯಿ ಸುಧಾಕರ ಶರ್ಮರು, ಪಂ. ಸುಧಾಕರ ಚತುರ್ವೇದಿಯವರು ಮುಂತಾದವರ ಮಾರ್ಗದರ್ಶನ, ಓದಿದ ಪುಸ್ತಕಗಳು, ಇತ್ಯಾದಿ ಪ್ರಭಾವಗಳಿಂದ ಹಾಗೂ ಮನನ, ಮಂಥನಗಳಿಂದ ಒಡಮೂಡಿದ ಮನದ ಭಾವನೆಗಳನ್ನು ಹಂಚಿಕೊಂಡಿರುವೆ. ಶ್ರಾದ್ಧವನ್ನು ಹೇಗೆ ಮಾಡಬೇಕೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.
     ಕೆಲವು ಪ್ರಸ್ತುತವೆನಿಸಿದ ಘಟನೆಗಳನ್ನು ನೋಡೋಣ. ಸಂನ್ಯಾಸಿಯ ರೀತಿಯಲ್ಲಿ ಬಾಳಿ ಅನೇಕರಿಗೆ ಜೀವನ ದರ್ಶನ ಮಾಡಿಸಿದ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾವುದೇ ಶ್ರಾದ್ಧಾದಿ ಕರ್ಮಗಳಲ್ಲಿ ನಂಬಿಕೆಯಿರಿಸಿರಲಿಲ್ಲ. 'ಸತ್ತಾಗ ಬೆಂಕಿಗೆ ಬಿಸಾಕಿ' ಎನ್ನುತ್ತಿದ್ದವರು. ಅವರ ಅಭಿಲಾಷೆಯಂತೆಯೇ ನಡೆಯಿತು. ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೂ ಸಹ ತಾವು ಸತ್ತ ನಂತರದಲ್ಲಿ ಯಾವುದೇ ಸಾಂಪ್ರದಾಯಿಕ ಕ್ರಿಯೆಗಳನ್ನು ಮಾಡದೇ, ತಮ್ಮ ಶರೀರವನ್ನು ಅಗ್ನಿಗೆ ಅರ್ಪಿಸಬೇಕೆಂದು ಬಯಸಿದ್ದರು. ಹಾಗೆಯೇ ಆಯಿತು. ಕೆಲವು ವರ್ಷಗಳ ಹಿಂದೆ ಮೃತ ತಂದೆಯವರ ದೇಹವನ್ನು ಮೃತರ ಇಚ್ಛೆಯಂತೆಯೇ ಅವರ ಮಗ ಡಾ. ಮಹಾಂತೇಶ ರಾಮಣ್ಣವರ್ ಅವರೇ ಬೆಳಗಾವಿಯ ಕಂಕನವಾಡಿ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೃತರ ಎರಡನೆಯ ವರ್ಷದ ಪುಣ್ಯತಿಥಿಯ ದಿನದಂದು ಅಂಗವಿಚ್ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಹಾಸನದ ಪತ್ರಕರ್ತ ಮಿತ್ರ ಮತ್ತು ಬಂಧು ಹೆಚ್.ಎಸ್. ಪ್ರಭಾಕರರವರು ತಮ್ಮ ಕಿರಿಯ ಸಹೋದರ ರಮೇಶಬಾಬು ನಿಧನರಾದ ಸಂದರ್ಭದಲ್ಲಿ ಅವರ ಇಚ್ಛೆಯಂತೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೂ ವೈಕುಂಠ ಸಮಾರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದರು. ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದಿದ್ದವರು ರಮೇಶಬಾಬು. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದರೊಂದಿಗೆ ಅನುಸರಿಸಬೇಕಾದ ಚಿಕಿತ್ಸಾಕ್ರಮದ ಬಗ್ಗೆ ಡಾ. ಹಾಲಪ್ರಶಾಂತರಿಂದ, ದೇಹದಾನದ ಮಹತ್ವದ ಕುರಿತು ಹಿಮ್ಸ್ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರಿಂದ ಮತ್ತು ವೇದದ ಹಿನ್ನೆಲೆಯಲ್ಲಿ ದೇಹ, ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂದು ವಿವರಿಸಲು ಬೇಲೂರಿನ ವೇದಾಧ್ಯಾಯಿ ವಿಶ್ವನಾಥ ಶರ್ಮರಿಂದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಿ ಪ್ರಭಾಕರ್ ವಿಶಿಷ್ಟತೆ ಮೆರೆದರು. ವೈಯಕ್ತಿಕವಾಗಿ ನಾನಂತೂ ಸತ್ತ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳಿಗೆ ಸಮಯ, ಹಣ, ಶ್ರಮ ವಿನಿಯೋಗಿಸದೆ ಜನೋಪಯೋಗಿ ಕಾರ್ಯಗಳಿಗೆ ಮನ ಹರಿಸುವಂತೆ ನನ್ನ ಬಂಧುಗಳಿಗೆ ತಿಳಿಸಿರುವೆ. ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.
[ಚಿತ್ರಕೃಪೆ: http://technoayurveda.wordpress.com/2010/11/11/dissect/]