ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಅಕ್ಟೋಬರ್ 31, 2012

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ



     ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. 'ವೇದಜೀವನ'ವು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.

-ಹರಿಹರಪುರಶ್ರೀಧರ್

ಮಂಗಳವಾರ, ಅಕ್ಟೋಬರ್ 16, 2012

ವೇದ ಪಾಠ - 6





ಮನವಿ:  ವೇದಸುಧೆಬಳಗದ ಶ್ರಮ ಸಾರ್ಥಕ ಆಗಬೇಕಾದರೆ ಓದುಗರ  ರೆಸ್ಪಾನ್ಸ್  ಇರಬೇಕು. ಉಪಯೋಗ ವಾಗುತ್ತಿರುವುದು ಖಚಿತವಾದರೆ ಎಷ್ಟಾದರೂ ಶ್ರಮ ಹಾಕುವುದಕ್ಕೆ ವೇದಸುಧೆ ಸಿದ್ಧ.  ಈ ವರಗಿನ ಎಲ್ಲಾ ಪಾಠಗಳನ್ನೂ   ಡಿವ್ ಶೇರ್ ಡಾಟ್ ಕಾಮ್ ಗೆ ಅಪ್ ಲೋಡ್ ಮಾಡಿ ಅದನ್ನು "ವೇದಭಾರತಿ"ಯಲ್ಲಿ ಪ್ರಕಟ್ಸಲಾಗುವುದು. ಅಲ್ಲದೆ ಡೌನ್ ಲೋಡ್ ಲಿಂಕ್ ಕೂಡ ಕೊಡಲಾಗುವುದು. ಪ್ರಯೋಜನ ಪಡೆದವರು ದಯಮಾಡಿ  mail@vedasudhe.com ಗೆ ಸಾಲುತ್ತರ ನೀಡಬೇಕೆಂದು ಕೋರುವೆ.
-ಹರಿಹರಪುರ ಶ್ರೀಧರ್.


ಸೋಮವಾರ, ಅಕ್ಟೋಬರ್ 15, 2012

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ - ನಿಜವಾದ ಪರಿವ್ರಾಜಕರೆಂದರೆ ಹೀಗಿರಬೇಕು

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ:

     ಕನ್ನಡ ನೆಲದಲ್ಲಿ ಭಾರತ ಪರಿಕ್ರಮ ಯಾತ್ರೆ ,ವೃದ್ಧಾಶ್ರಮಗಳ  ಅಗತ್ಯವಿರುವ  ಹಳ್ಳಿಗಳರಕ್ಷಣೆ,  ಕಾಡು  ನಾಶದಿಂದ ಬರಡಾಗುತ್ತಿರುವ ಗ್ರಾಮಗಳ  ಉಳಿವು,  ಅತಿಯಾದ  ರಾಸಾಯನಿಕ ಉಪಯೋಗದಿಂದ ಸತ್ವ ಕಳೆದುಕೊಂಡಿರುವ ಭೂಮಿಯ  ಪೋಷಣೆ,  ಅಧುನಿಕ  ತಂತ್ರಜ್ಞಾನದ ಅತಿಯಾದ ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ ಗ್ರಾಮ ಪರಂಪರೆಗಳ ಸಂರಕ್ಷಣೆ, ಕ್ಷೀಣಿಸುತ್ತಿರುವ ಗೋಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ-    ಪ್ರಮುಖ  ಆಶಯಗಳನ್ನು ಕೇಂದ್ರೀಕರಿಸಿ ಭಾರತ ಪರಿಕ್ರಮ ಪಾದಯಾತ್ರೆಯನ್ನು   ಶ್ರೀ ಸೀತಾರಾಮ ಕೆದಿಲಾಯರು ಕೈಗೊಂಡಿದ್ದಾರೆ. ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಅನುವರ್ತೀಪ ಕ್ರಿಯೆಯಾಗಿ ಗ್ರಾಮ ಜಾಗೃತಿಯ ಈ ಮಹತ್ವದ  ಪಾದಯಾತ್ರೆಯನ್ನು  ಕೆದಿಲಾಯರು ಕೈಗೊಂಡಿದ್ದಾರೆ
ಅಕ್ಟೋಬರ್ ೧೦ : ಕಾಸರಗೋಡು ಜಿಲ್ಲೆಯ ನೀಲೇಶ್ವರ
ಅಕ್ಟೋಬರ್ ೧೧  :  ಕಾಂಞ್ಞಂಗಾಡು ಬಳಿಯ ಮೂಕಾಂಬಿಕ ದೇಗುಲ
ಅಕ್ಟೋಬರ್ ೧೨  : ಪಳ್ಳಿಕ್ಕರ
ಅಕ್ಟೋಬರ್ ೧೩  : ಪರವನಡ್ಕಂ
ಅಕ್ಟೋಬರ್ ೧೪ : ಬೆಳಗ್ಗೆ ೭ ಗಂಟೆಗೆ ಕಾಸರಗೋಡಿಗೆ ಆಗಮನ
ಸಂಜೆ ಮಾಯಿಪ್ಪಾಡಿ ಬಳಿ ವಾಸ್ತವ್ಯ
ಅಕ್ಟೋಬರ್ ೧೫ : ಪುತ್ತಿಗೆ
ಅಕ್ಟೋಬರ್ ೧೬  : ಧರ್ಮತ್ತಡ್ಕ
ಅಕ್ಟೋಬರ್ ೧೭ :  ಪೆರೋಡಿ, ಬಾಯಾರು ಬಳಿಯ ನೀರ್ಮುಡಿಗದ್ದೆ
ಅಕ್ಟೋಬರ್ ೧೮ : ಬೇಡಗುಡ್ಡ
ಅಕ್ಟೋಬರ್ ೧೯ : ಬಾಕ್ರೆಬೈಲು
ಅಕ್ಟೋಬರ್ ೨೦ : ಕೋಣಾಜೆ
ಅಕ್ಟೋಬರ್ ೨೧ : ಕುತ್ತಾರು ಪದವು
ಅಕ್ಟೋಬರ್ ೨೨ : ಕಡೆಕ್ಕಾರು, ನೇತ್ರಾವತಿ ಸೇತುವೆಬಳಿ
ಅಕ್ಟೋಬರ್ ೨೩ : ಕೋಡಿಕಲ್
ಅಕ್ಟೋಬರ್ ೨೪ :  ತಂಡಂಬೈಲು, ಸುರತ್ಕಲ್‌ಬಳಿ
ಅಕ್ಟೋಬರ್ ೨೫ :  ಸಸಿಹಿತ್ಲು
ಅಕ್ಟೋಬರ್ ೨೬ : ಹೆಜಮಾಡಿ, ಉಡುಪಿ ಜಿಲ್ಲೆ
ನಂತರ  ರಾಷ್ಟ್ರೀಯ  ಹೆದ್ದಾರಿ  ಮೂಲಕ  ಉತ್ತರ  ಕನ್ನಡ  ಜಿಲ್ಲೆಯನ್ನು
ಪ್ರವೇಶಿಸಿ ನಂತರ ಗೋವಾಕ್ಕೆ ಯಾತ್ರೆ ಮುಂದುವರಿಯಲಿದೆ
ಭಾರತ ಪರಿಕ್ರಮ ಯಾತ್ರೆ :
- ಗೋಪಾಲ್ ಚೆಟ್ಟಿಯಾರ್, ಕ್ಷೇತ್ರೀಯ ಸೇವಾ ಪ್ರಮುಖ್,
ಆರೆಸ್ಸೆಸ್ (ಕರ್ನಾಟಕ ಮತ್ತು ಆಂಧ್ರ )
ಯಾತ್ರೆ ಸಾಗುವ ಬಗೆ
     ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸೀತಾರಾಮ ಕೆದಿಲಾಯರು, ಆರೆಸ್ಸೆಸ್‌ನ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಈ ಹಿಂದೆ ಜವಾಬ್ದಾರಿಯಲ್ಲಿದ್ದವರು. ಕಳೆದ ಮಾರ್ಚ್‌ನಲ್ಲಿ ನಾಗಪುರದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ಬಳಿಕ ಭಾರತ ಪರಿಕ್ರಮ ಯಾತ್ರೆಯ ಸಂಕಲ್ಪ ಕೈಗೊಂಡರು. ಸುಮಾರು ೫ ವರ್ಷಗಳಲ್ಲಿ ೧೫೦೦೦ ಕಿಲೋ ಮೀಟರ್‌ನಷ್ಟು ದೂರ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಯೋಜನೆ ಅವರದ್ದು. ಅದಕ್ಕಾಗಿ ಸರಳವಾದ ದಿನಚರಿ ಹೊಂದಿದ್ದಾರೆ. ಬೆಳಗ್ಗೆ ೬.೧೫ಕ್ಕೆ ಗೋ ಪೂಜೆಯಿಂದ ಮೊದಲ್ಗೊಂಡು ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ಗ್ರಾಮಸ್ಥರೊಂದಿಗೆ ಬೆರೆಯುತ್ತಾರೆ ಕೆದಿಲಾಯರು.
     ಬೆಳಗ್ಗೆ ೬.೩೦ಕ್ಕೆ ತಾನಿದ್ದ ಹಳ್ಳಿಯಿಂದ ಪಾದಯಾತ್ರೆ ಆರಂಭಿಸುತ್ತಾರೆ. ೩ ತಾಸಿನ ನಡಿಗೆಯ  ಬಳಿಕ ಅಂದರೆ ಸುಮಾರು ೯.೩೦ಕ್ಕೆ ಇನ್ನೊಂದು ಹಳ್ಳಿಯನ್ನು ಪ್ರವೇಶಿಸುತ್ತಾರೆ. ೯.೩೦ಕ್ಕೆ ಆ ಊರಿನ ದೇಗುಲ ಭೇಟಿ. ಅಲ್ಲೇ ಪರಿಸರದಲ್ಲಿ ಸಸಿಯೊಂದನ್ನು ನೆಡುತ್ತಾರೆ. ೧೨.೩೦ಕ್ಕೆ ಆ ಊರಿನ ಮನೆಯೊಂದರಲ್ಲಿ ಭೋಜನ. ವಿಶೇಷವೆಂದರೆ ಕಳೆದ ಹತ್ತಾರು ವರ್ಷಗಳಿಂದ ಕೆದಿಲಾಯರು ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ. ಮಧ್ಯಾಹ್ನದ ಊಟ ಬಿಟ್ಟರೆ ಬೇರೆ ಯಾವ ಆಹಾರವನ್ನೂ ಅವರು ತೆಗೆದುಕೊಳ್ಳುವುದಿಲ್ಲ .ಯಾವುದೇ ಜಾತಿಯ ಮನೆಯಿರಲಿ, ಆ ಮನೆಯಲ್ಲಿ  ಊಟ, ಒಂದಷ್ಟು ಕುಶಲೋಪರಿ, ವಿಶ್ರಾಂತಿ. ಸಂಜೆ ೩.೩೦ರಿಂದ ಗ್ರಾಮ ಸಂಪರ್ಕ. ೫.೩೦ಕ್ಕೆ ಗ್ರಾಮ ಸಂಕೀರ್ತನೆ. ನಂತರ ಭಜನೆ ಸತ್ಸಂಗ. ನೆರೆದ ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ. ೯ ವಿಷಯಗಳ ಬಗ್ಗೆ ಸರಳ ಭಾಷೆಯಲ್ಲಿ ಭಾಷಣ. ಅವೆಂದರೆ ಭೂ ಸಂರಕ್ಷಣೆ , ಗೋ ಸಂರಕ್ಷಣೆ, ವೃಕ್ಷ ಸಂರಕ್ಷಣೆ , ಜೈವಿಕ ಸಂರಕ್ಷಣೆ , ಜನ ಸಂರಕ್ಷಣೆ , ಜಲ ಸಂರಕ್ಷಣೆ , ಗ್ರಾಮ ಸಂಸ್ಕೃತಿ,  ಗ್ರಾಮೋದ್ಯೋಗ ಮತ್ತು ಗ್ರಾಮ ವೈದ್ಯ. ರಾತ್ರಿ ಅದೇ ಹಳ್ಳಿಯಲ್ಲಿ ವಾಸ್ತವ್ಯ. ಬೆಳಗ್ಗೆ ಇನ್ನೊಂದು ಹಳ್ಳಿಗೆ ಪಯಣ. ಯಾತ್ರೆಗೆ ಬೇಕಾದ ವ್ಯವಸ್ಥೆಗಳನ್ನು ಸ್ಥಾನೀಯ ಆರೆಸ್ಸೆಸ್ ಕಾರ್ಯಕರ್ತರು ಪೂರೈಸುತ್ತಾರೆ. 'Know Bharath, Be Bharth Make Bharath Vishwaguru' ಎನ್ನುವುದು ಯಾತ್ರೆಯ ಧ್ಯೇಯ ವಾಕ್ಯ.
     ಕಣ್ಣೂರಿನಲ್ಲಿ ಚರ್ಚ್‌ಗೆ ಭೇಟಿ ನೀಡಿದ ಕೆದಿಲಾಯರು  ನಂತರ  ಊರಿನ  ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ, ರಾಷ್ಟ್ರೀಯ ವಿಚಾರಗಳ ವಿನಿಮಯ  ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ ಯಾತ್ರೆಗೆ ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ. ಪ್ರತೀ ಗ್ರಾಮದಲ್ಲೂ ವೃಕ್ಷಾರೋಪಣ ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆಯಲ್ಲೇ ಭಾರತದಾದ್ಯಂತ ಹಳ್ಳಿಗಳಲ್ಲಿ ಸಂಚರಿಸುವ ಭಾರತ ಪರಿಕ್ರಮ ಯಾತ್ರೆಗೆ ಕಮ್ಯುನಿಷ್ಟರ ನೆಲೆವೀಡು ಎಂದೇ ಒಂದೊಮ್ಮೆ ಖ್ಯಾತವಾಗಿದ್ದ ಕೇರಳದ ಕಣ್ಣೂರಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಹಿರಿಯ ಆರೆಸ್ಸೆಸ್ ಪ್ರಚಾರಕರಾದ ಸೀತಾರಾಮ ಕೆದಿಲಾಯರ ನೇತೃತ್ವದ  ಭಾರತ ಪರಿಕ್ರಮ ಯಾತ್ರೆಯನ್ನು ಆರೆಸ್ಸೆಸ್ ಕಣ್ಣೂರು ವಿಭಾಗ ಸಂಘಚಾಲಕ ಸಿ. ಚಂದ್ರಶೇಖರ್ ಬರಮಾಡಿಕೊಂಡರು. ಅಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆಯು ಇದೀಗ ಸುಮಾರು ೭೫೦ ಕಿ.ಮೀ. ಹಾದಿಯನ್ನು ಕ್ರಮಿಸಿದೆ. ಅಕ್ಟೋಬರ್ ೨ರಂದು ಕಣ್ಣೂರಿನ  ಓಡತ್ತಿಲ್ ಮಸೀದಿಗೆ ಭೇಟಿಯಿತ್ತ ಕೆದಿಲಾಯರು ಅಲ್ಲಿನ ದಾರುಲ್ ಇಸ್ಲಾಂನ ಯತೀಂಖಾನದ  ಅಧ್ಯಕ್ಷ  ಮೌಲಾನ  ಮೊಹಮ್ಮದ್  ಹಾಜಿಯವರ  ಜೊತೆಗೆ  ಮಾತುಕತೆ  ನಡೆಸಿದರು.  ತಲಶ್ಶೇರಿ ಸಮೀಪದಲ್ಲೇ  ಗಾಂಧೀ  ಪುತ್ಥಳಿಯೊಂದಕ್ಕೆ  ಹಾರಾರ್ಪಣೆ  ಮಾಡುವ  ಮೂಲಕ  ಗ್ರಾಮಸ್ಥರೊಂದಿಗೆ  ಗಾಂಧೀ ಜಯಂತಿಯನ್ನು ಆಚರಿಸಿದರು. ಸಂಜೆ ಊರಿನ ವಿವಿಧ ಜಾತಿ ಮುಖಂಡರೊಂದಿಗೆ ಸಾಮಾಜಿಕ ಸಾಮರಸ್ಯದ ಕುರಿತು ಮಾತುಕತೆ ನಡೆಸಿ, ಗ್ರಾಮಾಭಿವೃದ್ಧಿಗೆ  ಸಾಮರಸ್ಯದ ಅಗತ್ಯವನ್ನು ಮನವರಿಕೆ ಮಾಡಿದರು. ಅಕ್ಟೋಬರ್  ೧೪ರಂದು ಬೆಳಗ್ಗೆ  ೭ ಗಂಟೆಗೆ ಭಾರತ ಪರಿಕ್ರಮ  ಯಾತ್ರೆಯು  ಕಾಸರಗೋಡು ನಗರವನ್ನು ತಲುಪಲಿದ್ದು, ಅಕ್ಟೋಬರ್ ೩ನೇ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಯಾತ್ರೆಗೆ ಇದುವರೆಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತ.  ಕೇರಳದ  ನೂರಾರು  ಹಳ್ಳಿಗಳಲ್ಲಿ  ಓಡಾಡಿದ  ಕೆದಿಲಾಯರು  ಪ್ರತಿ  ಹಳ್ಳಿಯಲ್ಲೂ  ಗ್ರಾಮ  ಜಾಗೃತಿಯ  ಕುರಿತು ಮಾತನಾಡಿದಾಗ, ಗ್ರಾಮಸ್ಥರು ವ್ಯಸನಗಳನ್ನು ತ್ಯಜಿಸಿ, ತಮ್ಮ ಗ್ರಾಮವನ್ನು ಸ್ವಾವಲಂಬೀ  ಗ್ರಾಮವನ್ನಾಗಿ ಮಾಡುವ ಮನಸ್ಸು ಮಾಡಿದ್ದಾರೆ


























-ಹರಿಹರಪುರ ಶ್ರೀಧರ್.

ನಡೆಯೋಣ



     ಬನ್ನಿ, ನಡೆಯೋಣ. ಓಡದಿರೋಣ, ಹಾರದಿರೋಣ, ಒಟ್ಟಿಗೇ ನಡೆಯೋಣ. ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನಾವು ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ನಾವು ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು. 'ಜಗವಿದು ಜಾಣ, ಚೆಲುವಿನ ತಾಣ, ಎಲ್ಲೆಲ್ಲೂ ರಸದೌತಣ' ಎಂಬ ಕವಿವಾಣಿಯನ್ನು ಮೆಲುಕುತ್ತಾ ಮೈಮರೆಯಬಹುದು. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ನಾವೂ ಓಡಬೇಕಾಗಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ನಮ್ಮ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ನಾವು ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ನಮ್ಮ ಸಮೀಪದಲ್ಲೇ ಇರುವುದನ್ನು ಕಾಣದೇ ಹೋಗುವಂತೆ ಮಾಡುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ.  ಒಂದು ಉದಾಹರಣೆ ಗಮನಿಸೋಣ. ಒಬ್ಬ ವ್ಯಕ್ತಿ ತೀರಾ ಬಡತನದಲ್ಲಿದ್ದವನು ಕಷ್ಟಪಟ್ಟು ಮುಂದೆ ಬರುತ್ತಾನೆಂದು ಇಟ್ಟುಕೊಳ್ಳೋಣ. ಅವನ ಗುರಿ ಹಣ ಮಾಡುವುದು, ಬೇಗ ಶ್ರೀಮಂತನಾಗುವುದು, ಅದಕ್ಕಾಗಿ ಆತ ಎಲ್ಲಾ ರೀತಿಗಳಲ್ಲಿ ಶ್ರಮವಹಿಸಿ ಯಶಸ್ವಿಯೂ ಆದನೆಂದುಕೊಳ್ಳೋಣ. ಹಣದ ಮದದಿಂದ ಎಲ್ಲಾ  ಬಂಧುಗಳಲ್ಲೂ ವಿರಸ/ದ್ವೇಷ ಕಟ್ಟಿಕೊಂಡನೆಂದುಕೊಳ್ಳೋಣ.ಅವನ ಕೊನೆಗಾಲದಲ್ಲಿ ಆತನ ದೈಹಿಕ ಸಾಮರ್ಥ್ಯವೂ ಕುಗ್ಗಿದ ದಿನಗಳಲ್ಲಿ ಯಾವುದೋ ಕಾರಣದಿಂದ ಆತ ಶ್ರೀಮಂತಿಕೆ ಕಳೆದುಕೊಂಡು ಬರಿಗೈದಾಸನಾದರೆ ಆತನಿಗೆ ಆಗುವ ಆಘಾತ ಊಹಿಸುವುದು ಕಷ್ಟ. ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು; ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಹುದು.
     ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಏಕೆಂದರೆ ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ನಾವು ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ನಾವು ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಅವನ್ನು ಕೊಡುಗೆಗಳು ಎಂದು ಭಾವಿಸಿದರೆ, ಅವು ಗುರಿಯೆಡೆಗಿನ ಸಾಧನಗಳಲ್ಲ, ಅವೇ ಗುರಿ ಮತ್ತು ಸಾಧನಗಳು ಎಂಬುದು ಅರಿವಾಗುತ್ತದೆ. ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಪ್ರೀತಿಸುವ, ಸಮಭಾವದಿಂದ ಸ್ವೀಕರಿಸುವ ಮನೋಭಾವ 'ನಡೆಯುವುದರಿಂದ' ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು 'ನಡೆಯುತ್ತದೆ', ಧಾವಿಸುವುದಿಲ್ಲ. 
     ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು  ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಒಂದು ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, "ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ". ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಗುತ್ತದಲ್ಲವೇ?
     ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತಾ ಹೋಗುತ್ತದೆ. ದೇವನ ಕರುಣೆಯನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ. ಅವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು 'ನಡೆಯುವುದರಿಂದಲೇ'! 'ನಡೆಯುವ' ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. 'ಓಡುವ' ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡ್ಡುವುದು ವಿಶೇಷವಲ್ಲ. ಇರುವುದನ್ನು ಹಂಚಿಕೊಳ್ಳಬಹುದು, ಇಲ್ಲದಿದ್ದರೆ? ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ 'ಬೆಲೆ'ಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ. 
     ಸಾಧು-ಸಂತರು ಹೇಳುತ್ತಾ ಬಂದಿರುವ ಸಂದೇಶವೆಂದರೆ, 'ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, 'ನಾನು'ವಿನಿಂದ 'ನಾವು'ಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ'. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಆ ಸೌಹಾರ್ದತೆ ಹೇಗಿರಬೇಕೆಂದರೆ 'ನಡೆಯುವ' ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ 'ನಡೆಯುವುದರಲ್ಲಿದೆ'. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದು ಇಟ್ಟುಕೊಳ್ಳೋಣ. ಈಗ ಹೇಳಿ, ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಇನ್ನೂ ಅರ್ಥವಾಗಬೇಕೆಂದರೆ ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಅದು ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ, ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? 'ಪಡೆಯುವುದಕ್ಕಾಗಿ ಕೊಟ್ಟದ್ದು' ಎಂದರೆ ಹೆಚ್ಚು ಅರ್ಥಪೂರ್ಣವೆನಿಸೀತು. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ 'ಕೊಟ್ಟು ಪಡೆಯುವ' ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದು ಎಂದರೆ ಮುಂದೆ ಹೋಗುವುದು. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ. 
     ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ಯೋಜನೆಗಳು, ನಡೆಗಳು ರೂಪುಗೊಳ್ಳುತ್ತವೆ. ಅಂದರೆ ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲು ಹೊಂದಿದ್ದ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುವುದನ್ನೂ ಕಂಡಿರುವೆ. ಆದರೆ, ಸರಿದಾರಿಯಲ್ಲಿ  ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಹಲವಾರು ಪ್ರಶ್ನೆಗಳು, ಸಮಸ್ಯೆಗಳು ಎದುರಾಗುತ್ತವೆ. ಆ ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಅನ್ನುವುದನ್ನು ನಿರ್ಧರಿಸುತ್ತವೆ. ಒಂದು ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! 'Slow and steady wins the race!' ಬನ್ನಿ, ನಾವು ಬದಲಾಗೋಣ, ಜಗತ್ತು ತಂತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ, ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!!

ಮಂಗಳವಾರ, ಅಕ್ಟೋಬರ್ 2, 2012

ಶ್ರೀ ಸುಧಾಕರ ಶರ್ಮರು ಮಾಧ್ಯಮದವರೊಡನೆ ನಡೆಸಿದ ಸಂವಾದ

     ಹಾಸನ ಜನತೆಗೆ  ವೇದಾಧ್ಯಾಯೀ  ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು   ಈಗ್ಗೆ ಎರಡು ವರ್ಷಗಳ ಹಿಂದೆ     'ವೇದಸುಧೆ'ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ, "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ. ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ರ ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತ ಮತ್ತು ಸಹಜ ವಾತಾವರಣದಲ್ಲಿ ನಡೆದ  ಸಂವಾದದ ಆಡಿಯೋ ಇಲ್ಲಿದೆ. ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ  ಬೇಕಾದ ಮಾತುಗಳು. ಎಲ್ಲವೂ  2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.http://www.vedasudhe.com/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%82%e0%b2%b5%e0%b2%be%e0%b2%a6/



ಸೋಮವಾರ, ಅಕ್ಟೋಬರ್ 1, 2012

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ - ಹಾಸನದಲ್ಲೊಂದು ವಿಶಿಷ್ಟ, ಯಶಸ್ವೀ ಕಾರ್ಯಕ್ರಮ

     ದಿನಾಂಕ ೩೦-೦೯-೨೦೧೨ರಂದು ಹಾಸನದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮದ ಸಂಕ್ಷಿಪ್ತ ವರದಿಯಿದು. ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆ. ೯-೩೦ರಿಂದ ೧೦-೦೦ರವರೆಗೆ ಪ್ರಸಾರವಾಗುತ್ತಿರುವ 'ಹೊಸಬೆಳಕು' ಧಾರಾವಾಹಿಯ ಮೂಲಕ ವೇದದ ಉದಾತ್ತತೆ, ರೂಢಿಯಲ್ಲಿರುವ ಅನೇಕ ಅವೈದಿಕ ಸಂಪ್ರದಾಯಗಳು, ಆಚರಣೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ವೇದಾಧ್ಯಾ ಯೀ ಶ್ರೀ ಸುಧಾಕರ ಶರ್ಮರನ್ನು ಹಾಸನಕ್ಕೆ ಆಹ್ವಾನಿಸಿ ಒಂದು ಮುಕ್ತ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಭಾರತೀ ಸಂಸ್ಥೆಯ ಸಂಚಾಲಕರುಗಳಾದ ಶ್ರೀಯುತ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಹೆಚ್.ಎಸ್. ಪ್ರಭಾಕರರವರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಮತ್ತು ಸ್ಥಳೀಯ ಅಮೋಘ್ ವಾಹಿನಿಯ ವ್ಯವಸ್ಥಾಪಕರಾದ ಶ್ರೀ ಕೆ,ಪಿ.ಎಸ್. ಪ್ರಮೋದ್ ರವರು ಕೈಜೋಡಿಸಿದರು. ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ತಮ್ಮ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಅನುಕೂಲಗಳನ್ನು ಒದಗಿಸುವುದರೊಂದಿಗೆ, ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದರೆ, ಅಮೋಘ್ ವಾಹಿನಿಯು ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ನಗರದ ಜನತೆ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ನೋಡುವ ಅನುಕೂಲ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾತು. ಯಾರಿಂದಲೂ ಹಣದ ನಿರೀಕ್ಷೆ ಇಟ್ಟುಕೊಳ್ಳದೆ ಸಂಚಾಲಕರುಗಳೇ ಈ ಕಾರ್ಯಕ್ರಮ ನಡೆಸಲು ಮಾನಸಿಕರಾಗಿ ಸಿದ್ಧರಾಗಿದ್ದರೂ, ಕಾರ್ಯಕ್ರಮ ಆಹ್ವಾನ ಪತ್ರಿಕೆಗಳನ್ನು ಕೊಡುವ ಸಂದರ್ಭದಲ್ಲಿ ಕೇಳದಿದ್ದರೂ ಸಹ ಹಲವು ಗಣ್ಯರು ತಾವಾಗಿ ಮುಂದೆ ಬಂದು ಸಹಾಯ ಹಸ್ತ ಚಾಚಿದ್ದು  ಕಾರ್ಯಕ್ರಮ ಸುಗಮವಾಗಿ, ಸೊಗಸಾಗಿ ನಡೆಯಲು ಕಾರಣವಾಗಿದ್ದಲ್ಲದೆ ಆಯೋಜಕರುಗಳಿಗೆ ಹೆಚ್ಚಿನ ಉತ್ಸಾಹದಿಂದ ಮುಂದಡಿಯಿಡಲು ಪ್ರೇರಿಸಿತು.
     ೧೦.೦೦ಕ್ಕೆ ಸರಿಯಾಗಿ ಹಾಸನದ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋವಿಂದರಾಜ ಶ್ರ್ಠೇಷ್ಠಿಯವರು ವೇದ ಘೋಷದೊಂದಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಾಧ್ಯಾಯಿ  ಶ್ರೀ ಸುಧಾಕರಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿ ವೇದ ಸಾರ್ವಕಾಲಿಕವಾಗಿದ್ದು, ಮಾನವರ ಅಭ್ಯುದಯಕ್ಕಾಗಿ ಮಾರ್ಗದರ್ಶಿಯಾಗಿದೆಯೆಂದು ತಿಳಿಸಿದರು. ನಂತರದಲ್ಲಿ 'ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳು ವೇದೋಕ್ತವಾಗಿವೆಯೇ?' ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಭಿಕರಿಂದ ಮುಕ್ತವಾಗಿ ಪ್ರಶ್ನೆಗಳನ್ನು ಆಹ್ವಾನಿಸಿ, ಅವರ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ಶರ್ಮರವರು ನೀಡಿದರು. ವಿಷಯ ಗಂಭೀರವಾಗಿದ್ದು ಆಳವಾಗಿ ವೇದಾಧ್ಯಯನ ಮಾಡಿರುವ ಶರ್ಮರಂತಹವರಿಗೆ ಮಾತ್ರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯ. ಜಾತಿ ಪದ್ಧತಿ, ವರ್ಣಾಶ್ರಮ, ವೇದದ ಕುರಿತು ಬಂದಿರುವ ಆರೋಪಗಳು, ಮೂರ್ತಿಪೂಜೆ, ಜನಿವಾರ, ಸ್ತ್ರೀಯರು ವೇದಮಂತ್ರ ಹೇಳಬಹುದೇ, ಪುನರ್ಜನ್ಮ, ಪರಮಾತ್ಮ, ಜೀವಾತ್ಮ, ಶ್ರಾದ್ಧ, ಸೂತಕ, ಪೂಜಾವಿಧಾನ, ಪುರಾಣಗಳು, ಇತ್ಯಾದಿ, ಇತ್ಯಾದಿ ಹತ್ತು ಹಲವಾರು ಪ್ರಶ್ನೆಗಳು ಒಂದರ ಮೇಲೊಂದರಂತೆ ಸಭಿಕರು ಮುಂದಿಡುತ್ತಿದ್ದರೆ, ಅವೆಲ್ಲವಕ್ಕೂ ಶರ್ಮರವರು ಸಾಧಾರವಾಗಿ ಉತ್ತರಗಳನ್ನು ಹೇಳುತ್ತಿದ್ದರೆ, ಅವರ ಉತ್ತರಗಳನ್ನು ಸರಿಯಲ್ಲವೆಂದು ಯಾರೂ ಹೇಳುವಂತಿರಲಿಲ್ಲ. ಇಡೀ ಸಭಾಂಗಣ ನಿಶ್ಶಬ್ದವಾಗಿ ಈ ಸಂವಾದವನ್ನು ಆಲಿಸುತ್ತಿತ್ತು. ಎಲ್ಲರಲ್ಲೂ ತಮ್ಮ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ಕಾತುರತೆ ಎದ್ದು ಕಾಣುತ್ತಿತ್ತು. ಮ. ೧.೩೦ರವರೆವಿಗೂ ಈ ಸಂವಾದ ನಡೆಯಿತು. 
     ಮಧ್ಯಾಹ್ನದ ಬೋಜನಾನಂತರದಲ್ಲಿ ಮೂರು ಉಪನ್ಯಾಸಗಳು ಇದ್ದು, ಶ್ರೀ ವಿಶ್ವನಾಥ ಶರ್ಮರವರು 'ವೇದ ಎಲ್ಲರಿಗಾಗಿ' ಎಂಬ ವಿಷಯದ ಕುರಿತು, ಬೆಂಗಳೂರಿನ ಡಾ. ಕವಿತಾರವರು 'ದಂತ ಆರೋಗ್ಯ'ದ ಕುರಿತು ಮತ್ತು ಡಾ. ವಿವೇಕ್ ರವರು 'ಜೀವನ ಶೈಲಿ ಮತ್ತು ಆರೋಗ್ಯ' ಎಂಬ ಕುರಿತು ಮನನೀಯವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ವೇದದ ಕುರಿತು ಪ್ರಚಲಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸುವ ಇಂತಹ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರಬೇಕು, ತಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದು ಹೇಳಿದರು. ಪ್ರಾರಂಭದಲ್ಲಿ ಪ್ರಭಾಕರ್ ಪ್ರಾರ್ಥನೆ ಮಾಡಿದರು. ಹರಿಹರಪುರ ಶ್ರೀಧರ್ ಸ್ವಾಗತ, ಪರಿಚಯ, ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಸೊಗಸಾಗಿ ಮಾಡಿದರು. ಕವಿನಾಗರಾಜ್ ವಂದಿಸಿದರು.
     ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಅದ್ಯಕ್ಷ ಭಾಷಣ ಪ್ರಾರಂಭವಾಗುತ್ತಿದ್ದಂತೆ ಬಂದವರು ಜಾಗ ಖಾಲಿ ಮಾಡಲು ಪ್ರಾರಂಭಿಸಿ, ವಂದನಾರ್ಪಣೆ ಕಾಲದಲ್ಲಿ ಸಭೆಯಲ್ಲಿ ಉಳಿಯುವವರು ವೇದಿಕೆಯಲ್ಲಿರುವವರು ಮಾತ್ರ. ಆದರೆ, ಈ ಕಾರ್ಯಕ್ರಮ ಮ. ೪.೩೦ಕ್ಕೆ ಮುಗಿದರೂ ಸಹ ಸಭಾಸದರು ಹೊರಹೋಗಲೊಲ್ಲದೆ ಶ್ರೀ ಶರ್ಮರವರನ್ನು ಸುತ್ತುವರೆದು ಅವರೊಂದಿಗೆ ಸಾ. ೭.೦೦ರವರೆಗೂ ತಮ್ಮ ಸಂದೇಹಗಳನ್ನು ಹೇಳಿಕೊಂಡು ಅವರ ಸಲಹೆ, ಪರಿಹಾರ, ಉತ್ತರಗಳನ್ನು ಕಾತುರದಿಂದ ಕೇಳುತ್ತಿದ್ದುದು ವಿಶೇಷವೇ ಸರಿ. ಇದು ಕಾರ್ಯಕ್ರಮದ ಯಶಸ್ಸನ್ನು ತೋರಿಸಿದ್ದಲ್ಲದೆ, ಕಾರ್ಯಕ್ರಮದ ಆಯೋಜಕರುಗಳಿಗೆ, ಸಹಕರಿಸಿದವರಿಗೆ ಸಂತೃಪ್ತಿಯನ್ನು ಉಂಟು ಮಾಡಿತು ಎಂದರೆ ಉತ್ಪ್ರೇಕ್ಷೆಯಲ್ಲ. 
-ಕ.ವೆಂ.ನಾಗರಾಜ್.
****************
ಕಾರ್ಯಕ್ರಮದ ಕೆಲವು ದೃಷ್ಯಗಳು:

                                   ಪ್ರಭಾಕರರಿಂದ ಪ್ರಾರ್ಥನೆ
                                       ಜ್ಯೋತಿ ಬೆಳಿಗೆ ಉದ್ಘಾಟನೆ
                                                ವೇದಘೋಷ
                                    ಹರಿಹರ ಪುರ ಶ್ರೀಧರರ ನಿರ್ವಹಣೆ
ಉದ್ಘಾಟಕರ ನುಡಿ: ಶ್ರೀ ಗೋವಿಂದರಾಜ ಶ್ರೇಷ್ಠಿ


                                            ಶ್ರೀ ಸುಧಾಕರ ಶರ್ಮ




                                            ಆಸಕ್ತ ಸಭಾಸದರು
                                            ಶ್ರೀ ವಿಶ್ವನಾಥ ಶರ್ಮ
                                                 ಡಾ. ಕವಿತಾ
                                               ಡಾ. ವಿವೇಕ್
                         ಅದ್ಯಕ್ಷರ ಮಾತು:ಶ್ರೀ  ಸಿ.ಎಸ್. ಕೃಷ್ಣಸ್ವಾಮಿ
                                     ವಂದನೆ: ಕವಿನಾಗರಾಜ್