ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮಾರ್ಚ್ 7, 2012

ಮಾನಸಿಕಬಲ ನೀಡು ಪ್ರಭುವೆ

     ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡು ಅಲ್ಲಿ ನಡೆದ ಅಗ್ನಿಹೋತ್ರ, ಭಜನೆಗಳು, ಪಂಡಿತಜಿಯವರ ವಿಚಾರಧಾರೆಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡ ಸೌಭಾಗ್ಯ ನನ್ನದಾಯಿತು. ಆ ಸಂದರ್ಭದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರಣ ಮಾಡಿಕೊಂಡಿದ್ದೇನೆ. ಅಗ್ನಿಹೋತ್ರ ನಡೆದ ನಂತರದಲ್ಲಿ ಹೇಳಿದ ಭಜನೆಯ ವಿಡಿಯೋ ಚಿತ್ರಣವನ್ನು ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಅಗ್ನಿಹೋತ್ರ, ಯಜ್ಞಗಳ ಹಿರಿಮೆ ಸಾರುವ ಈ ಭಜನೆ ಮನನೀಯವಾಗಿದೆ, ಅರ್ಥಪೂರ್ಣವಾಗಿದೆ.

https://www.youtube.com/watch?v=7CcoJXZXxRo

     ಪದಶಃ ಅಲ್ಲದಿದ್ದರೂ ಮೂಲ ಭಾವಾರ್ಥ ಮೂಡಿಸುವ ಭಜನೆಯ ಕನ್ನಡ ಅನುವಾದ ಮಾಡಿದ್ದೇನೆ. ಆಸಕ್ತರು ಇದನ್ನು ಹಾಡಿ ಧ್ವನಿಮುದ್ರಿಸಿ ಪ್ರಕಟಿಸಲು ವಿನಂತಿಸುವೆ.
-.ಕವೆಂ.ನಾಗರಾಜ್.

ಮಾನಸಿಕಬಲ ನೀಡು ಪ್ರಭುವೆ

ಪೂಜನೀಯ ಪ್ರಭುವೆ ನಮ್ಮಯ ಭಾವ ಉಜ್ವಲ ಮಾಡಿರಿ |
ದೂರಗೊಳಿಸಿ ಛಲ ಕಪಟಗಳ ಮಾನಸಿಕ ಬಲ ನೀಡಿರಿ || ೧ ||

ವೇದ ತೋರಿದ ಮಾರ್ಗ ತಿಳಿಸಿ ಸತ್ಯ ಧಾರಣೆ ಮಾಡಿಸಿ |
ಹರ್ಷದಿಂದಲಿ ಸಕಲಜನರು ಶೋಕಸಾಗರ ದಾಟಲಿ || ೨ ||

ವಾಸನಾತೀತರಾಗುವ ಯಜ್ಞಕಾರ್ಯವ ಮಾಡುವಾ |
ಧರ್ಮಪಥದಲಿ ಸಾಗಿ ನಾವು ಲೋಕ ಹಿತವನೆ ಸಾರುವಾ || ೩ ||

ನಿತ್ಯ ಶ್ರದ್ಧಾ ಭಕ್ತಿಯಲಿ ಯಜ್ಞಾದಿಗಳ ನಾವ್ ಮಾಡುವಾ |
ರೋಗ ಪೀಡಿತ ಲೋಕದಿರುವ ಸಕಲ ಸಂಕಟ ಕಳೆಯವಾ || ೪ ||

ಪಾಪ ಅತ್ಯಾಚಾರ ಭಾವ ಮನದ ಮೂಲದೆ ಅಳಿಯಲಿ |
ಯಜ್ಞದಿಂದಲಿ ನರರು ಸಕಲರ ಆಸೆಗಳು ಈಡೇರಲಿ || ೫ ||

ಸಕಲಜೀವಿಗೆ ಶುಭವ ತರಲಿ ಹವನ ಸುಖಕರವೆನಿಸಲಿ |
ವಾಯುಜಲ ಶುಭಗಂಧ ಕೂಡಿ ಲೋಕದೆಲ್ಲೆಡೆ ಹರಡಲಿ || ೬ ||

ಸ್ವಾರ್ಥಭಾವವು ಅಳಿದು ಹೋಗಿ ಪ್ರೇಮಪಥದಲಿ ಸಾಗುವಾ |
ನನಗಲ್ಲವಿದೆಂದೆಂಬ ಭಾವದಿ ಸಾರ್ಥಕತೆ ನಾವ್ ಕಾಣುವಾ || ೭ ||

ಪ್ರೇಮರಸದಲಿ ತೃಪ್ತರಾಗಿ ನಾವು ವಂದನೆ ಸಲಿಪೆವು |
ಕರುಣಾನಿಧಿಯೇ ನಿಮ್ಮ ಕರುಣೆ ಸಿಗಲು ಎಲ್ಲರು ಧನ್ಯರು || ೮ ||

3 ಕಾಮೆಂಟ್‌ಗಳು: