ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 5, 2012

ಬಲಿವೈಶ್ವದೇವಯಜ್ಞ


      ಯಜ್ಞದಲ್ಲಿ ಪ್ರಾಣಿಬಲಿಯನ್ನು ಸಮರ್ಥಿಸಿಕೊಳ್ಳಲು ಬಲಿವೈಶ್ವದೇವಯಜ್ಞವನ್ನು ಕೆಲವರು ಉಲ್ಲೇಖಿಸುತ್ತಿದ್ದು,, ಈ ಬಲಿವೈಶ್ವದೇವಯಜ್ಞವೆಂದರೆ ಏನು ಎಂಬುದನ್ನು ತಿಳಿಯಪಡಿಸುವುದೇ ಈ ಬರಹದ ಉದ್ದೇಶ. ವೈಶ್ವದೇವಯಜ್ಞಕ್ಕೂ ಪ್ರಾಣಿಬಲಿಗೂ ಸಂಬಂಧವೇ ಇಲ್ಲದಿರುವುದನ್ನು ವಾಚಕರು ಗಮನಿಸಬಹುದು.
-ಕ.ವೆಂ.ನಾಗರಾಜ್.

     ಬಲಿವೈಶ್ವದೇವಯಜ್ಞದಲ್ಲಿ ಈ ಕೆಳಗಿನ ೧೦ ಮಂತ್ರಗಳನ್ನು ಉಚ್ಛರಿಸಲಾಗುತ್ತದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಭಾಗವನ್ನು ಅಗ್ನಿಗೆ ಆಹುತಿ ನೀಡುತ್ತಾರೆ. ಮನೆಯ ಯಜಮಾನ ಅಥವ ಆತನ ಅನುಪಸ್ಥಿತಿಯಲ್ಲಿ ಆತನ ಪತ್ನಿ ಅಥವ ಸ್ತ್ರೀಯರೇ ಈ ಆಹುತಿಯನ್ನು ಅರ್ಪಿಸಬಹುದಾಗಿದೆ.
ಓಂ ಅಗ್ನಯೇ ಸ್ವಾಹಾ || ೧ ||
ಓಂ ಸೋಮಾಯ ಸ್ವಾಹಾ || ೨ ||
ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ೩ ||
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ೪ ||
ಓಂ ಧನ್ವಂತರಯೇ ಸ್ವಾಹಾ || ೫ ||
ಓಂ ಕುಹ್ವೈ ಸ್ವಾಹಾ || ೬ ||
ಓಂ ಅನುಮತ್ಯೈ ಸ್ವಾಹಾ || ೭ ||
ಓಂ ಪ್ರಜಾಪತಯೇ ಸ್ವಾಹಾ || ೮ ||
ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ೯ ||
ಓಂ ಸ್ವಿಷ್ಟಕೃತೇ ಸ್ವಾಹಾ || ೧೦ ||
     ಈ ಮಂತ್ರಗಳ ಅರ್ಥ ಅನುಕ್ರಮವಾಗಿ:
೧. ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ,
೨. ಪರಮಾತ್ಮನ ಹಾಗೂ ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ ಈ ಆಹುತಿ,
೩. ಪ್ರಕಾಶಸ್ವರೂಪ, ಶಾಂತಿಯ ಆಗರ ಪರಮಾತ್ಮನ ಸಾಕ್ಷಾತ್ಕಾರ ಹಾಗೂ ಪ್ರಾಣಾಪಾನ ಪುಷ್ಟಿಗಾಗಿ ಈ ಆಹುತಿ,
೪. ಪರಮಾತ್ಮನ ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ ಈ ಆಹುತಿ,
೫. ಭವರೋಗಹರ ಪರಮೇಶ್ವರನ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿಯ ಪ್ರಾಪ್ತಿಗಾಗಿ ಈ ಆಹುತಿ,
೬. ದೇವನ ವಿಸ್ಮಯಕರ ಸೃಷ್ಟಿಯ ಅರಿವಿಗೆ ಹಾಗೂ ಶರೀರಧಾರ್ಢ್ಯ, ಪ್ರಸನ್ನತೆಗಳಿಗಾಗಿ ಈ ಆಹುತಿ,
೭. ಜೀವಕರ್ಮಾನುಕೂಲ ಜ್ಞಾನ, ಅಧ್ಯಯನಾನುಕೂಲ ಬುದ್ಧಿಯುಳ್ಳ ಪರಮಾತ್ಮನ ಹಾಗೂ ವಿದ್ವಾಂಸರ ಪ್ರಸನ್ನತೆಗಾಗಿ ಈ ಆಹುತಿ,
೮. ಸಮಸ್ತ ಪ್ರಜೆಗಳ ಸ್ವಾಮಿ ಪರಮಾತ್ಮ ಹಾಗೂ ಸತ್ಸಂತಾನ ನಿರ್ಮಾತೃ ಪಿತೃಗಳಿಗಾಗಿ ಈ ಆಹುತಿ,
೯. ಪ್ರಕಾಶವನ್ನೂ, ಬ್ರಹ್ಮಾಂಡವನ್ನೂ ವಿಸ್ತಿರಿಸಿರುವ ಜಗದೀಶ್ವರನ ಹಾಗೂ ತೇಜಸ್ವಿ, ಜ್ಞಾನವಾನ್ ವಿದ್ವಾಂಸರ ಸಲುವಾಗಿ ಈ ಅಹುತಿ, ಮತ್ತು
೧೦. ಇಷ್ಟಾರ್ಥ ನೀಡುವ ಪರಮಾತ್ಮ ಹಾಗೂ ಸಹಾಯಕಾರೀ ಮಿತ್ರರ ಸಲುವಾಗಿ ಈ ಅಹುತಿ. 
     ಇದಾದ ನಂತರ ಒಂದು ಎಲೆಯಲ್ಲಿ ಉಪ್ಪು ಹಾಕಲ್ಪಟ್ಟ ಸಾರು, ಅನ್ನ, ಇತರ ಖಾದ್ಯ ಪದಾರ್ಥಗಳನ್ನು ಏಳು ಭಾಗಗಳಾಗಿ ಮಾಡಿ ಇಡಬೇಕು. ಇವನ್ನು"ಶ್ವಭ್ಯೋ ನಮಃ|, ಪತಿತೇಭ್ಯೋ ನಮಃ| ಶ್ವಪಗ್ಭೋ ನಮಃ|, ಪಾಪ ರೋಗಿಭ್ಯೋ ನಮಃ| ವಾಯುಸೇಭ್ಯೋ ನಮಃ\, ಕೃಮಿಭ್ಯೋ ನಮಃ|" ಎಂದು ಹೇಳಿ ದೀನ, ದುಃಖಿತ, ಹಸಿದ ಮಾನವರಿಗೂ, ನಾಯಿ, ಗೋವು, ಕಾಗೆ, ಇತ್ಯಾದಿಗಳಿಗೂ, ಕ್ರಿಮಿಕೀಟಗಳಿಗೂ ಹಂಚಬೇಕು. ಮೂಲ ಉದ್ದೇಶವೆಂದರೆ ಇರುವುದನ್ನು ತಾವು ತಿನ್ನುವ ಮುನ್ನ ಅಗತ್ಯವಿರುವವರಿಗೆ ಉಣಬಡಿಸಿ ತಿನ್ನಬೇಕು ಎನ್ನವುದೇ ಆಗಿದೆ. ಇಂತಹ ಸ್ವಾರ್ಥತ್ಯಾಗ, ಪರಹಿತ ಚಿಂತನೆಗೆ ಪ್ರೇರಿಸುವ ಕ್ರಿಯೆಯನ್ನು ಪ್ರಾಣಿಬಲಿಗೆ ಸಮರ್ಥಿಸಲು ಕೆಲವರು ಉಪಯೋಗಿಸಿಕೊಂಡಿರುವುದು ಮನಸ್ಸಿಗೆ ನೋವು ಕೊಡುವಂತಹುದು ಎನ್ನದೇ ವಿಧಿಯಿಲ್ಲ. 
[ಆಧಾರ: ಪಂ.ಸುಧಾಕರ ಚತುರ್ವೇದಿಯವರ ಲೇಖನ].

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ