ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಏಪ್ರಿಲ್ 22, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - ೩

     ಪ್ರಕೃತಿಯ ವರ್ಣನೆಯನ್ನು ಅಥರ್ವವೇದ ಹೀಗೆ ಮಾಡುತ್ತದೆ:-
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ ||
(ಅಥರ್ವ. ೧೦.೮.೩೦)
     [ಏಷಾ] ಈ ಪ್ರಕೃತಿಯು, [ಸನತ್ನೀ] ಸನಾತನವಾದುದು. [ಸನಮೇವ] ಅನಾದಿ ಕಾಲದಿಂದಲೇ, [ಜಾತಾ] ಪ್ರಸಿದ್ಧವಾದುದು. [ಏಷಾ ಪುರಾಣೀ] ಈ ಅನಾದಿ ಪ್ರಕೃತಿಯು, [ಸರ್ವಂ ಪರಿ ಬಭೂವ] ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. [ಉಷಸಃ] ಸಂಕಲ್ಪಮಯನಾದ ಪ್ರಭುವಿನ ಇಚ್ಛೆಯಂತೆ, [ವಿಭಾತೀ ಮಹೀ ದೇವೀ] ವಿವಿಧ ರೂಪದಲ್ಲಿ ಪ್ರಕಾಶಕ್ಕೆ ಬರುವ, ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, [ಸಾ] ತಾನಾಗಿ, [ಏಕೇನ ಏಕೇನ ಮಿಷತಾ] ಕಣ್ಣು ರೆಪ್ಪೆ ಹೊಡೆಯುವ ಪ್ರತಿಯೊಂದು ಪ್ರಾಣಿಯ ಮೂಲಕವೂ, [ವಿಚಷ್ಟೇ] ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ಮಾತನಾಡುತ್ತಿದೆ.
     ಈ ಮಂತ್ರ ಪ್ರಕೃತಿಯ ಅನಾದಿತ್ವವನ್ನು ಎತ್ತಿ ಹಿಡಿಯುತ್ತಿದೆ. ಸ್ವತಃ ಜಡವಾದ ಕಾರಣ, ತಾನೇ ಏನನ್ನೂ ಮಾಡಲಾರದ, ಪ್ರಭುಸಂಕಲ್ಪದಿಮದ ಜಗದ್ರೂಪ ತಾಳಿ, ಬೆಳಕಿಗೆ ಬರುವಂತಹುದು. ಅದು ತತ್ತ್ವವನ್ನು ನೋಡಬಲ್ಲ ವೈಜ್ಞಾನಿಕರೊಂದಿಗೆ - ಮೂಕಭಾಷೆಯಲ್ಲೇ ಇರಲೊಲ್ಲದೇಕೆ - ಮಾತನಾಡುತ್ತದೆ, ಇಣಿಕಿ ನೋಡುತ್ತದೆ.
     ವೇದಗಳಲ್ಲಿ ವಾದಗಳನ್ನು - ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೂನ್ಯವಾದ, ಸಂದೇಹವಾದ, ಅಜ್ಞೇಯವಾದ ಮೊದಲಾದುವುಗಳನ್ನು - ಕಾಣಲು ಯತ್ನಿಸುವುದು ಕೇವಲ ಬೌದ್ಧಿಕ ವ್ಯಾಯಾಮ ಮಾತ್ರ. ವೇದಗಳಲ್ಲಿರುವುದು ಸತ್ಯದ ಪ್ರಕಾಶನ ಮಾತ್ರ. ಯಾವ ವಾದವೂ ಇಲ್ಲ. ಪರಮಾತ್ಮ, ಜೀವಾತ್ಮ, ಪ್ರಕೃತಿ - ಈ ಮೂರೂ ಅನಾದಿ, ಅನಂತ. ಅದೇ ಕಾರಣದಿಂದ ನಿತ್ಯ, ಶಾಶ್ವತ. ಪರಮಾತ್ಮ ಸದಾ ಏಕರೂಪ, ಜೀವಾತ್ಮ ಸದೇಹ-ವಿದೇಹ ಸ್ಥಿತಿಗಳನ್ನುಳ್ಳವನು. ಪ್ರಕೃತಿ, ಕಾರಣ-ಕಾರ್ಯರೂಪಗಳಲ್ಲಿ ಪರಿಣಾಮ ಹೊಂದುವ ಜಡತತ್ತ್ವ. ಪರಮಾತ್ಮ ಸಚ್ಚಿದಾನಂದಸ್ವರೂಪ, ಜೀವಾತ್ಮ ಸಚ್ಚಿತ್ಸ್ವರೂಪ, ಪ್ರಕೃತಿ ಸತ್ಸ್ವರೂಪಿಣಿ. ಇದೊಂದೇ ಸಾರಿಯಲ್ಲ ಸೃಷ್ಟಿಯಾಗಿರುವುದು. ಅನಾದಿ ಕಾಲದಿಂದಲೂ ಸೃಷ್ಟಿ-ಸ್ಥಿತಿ-ಪ್ರಳಯಗಳು ಆಗುತ್ತಾ ಬಂದಿವೆ.
ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ |
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)
     [ಅಸೌ ಧಾತಾ] ಈ ಸರ್ವಾಧಾರನಾದ ಪರಮಾತ್ಮನು, [ಯಥಾ ಪೂರ್ವಂ] ಮೊದಲಿನಂತೆಯೇ, [ಸೂರ್ಯಾ ಚಂದ್ರಮಸೌ] ಸೂರ್ಯ-ಚಂದ್ರರನ್ನೂ, [ದಿವಂ ಚ] ದ್ಯುಲೋಕವನ್ನೂ, [ಪೃಥಿವೀಂ] ಪೃಥಿವಿಯನ್ನೂ, [ಅಂತರಿಕ್ಷಂ] ಅಂತರಿಕ್ಷವನ್ನೂ, [ಅಥ ಉ] ಹಾಗೆಯೇ [ಸ್ವಃ] ಆನಂದಮಯ ಸ್ಥಿತಿಯನ್ನು, [ಅಕಲ್ಪಯತ್] ರಚಿಸಿದನು.
     ಹಿಂದೆ ಸೃಷ್ಟಿಗಳಾಗಿವೆ. ಮುಂದೆ ಆಗುತ್ತಾ ಹೋಗುತ್ತದೆ. ಸೃಷ್ಟಿಯೂ ಕೂಡ ಪ್ರವಾಹ ರೂಪದಿಂದ ಅನಾದಿ-ಅನಂತ.
     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ ಪರಿಚಯ ಪಡೆದುದಾಯಿತು. ಇನ್ನು ಮುಂದುವರೆಯೋಣ. ಧರ್ಮದ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋಣ.
**************************
-ಪಂ. ಸುಧಾಕರ ಚತುರ್ವೇದಿ.

4 ಕಾಮೆಂಟ್‌ಗಳು:

  1. ಇದನ್ನು ಒಪ್ಪುವುದಕ್ಕೂ ಒಂದು ಸಾಕ್ಷಾತ್ಕಾರವಾಗಬೇಕೆನೋ ಸಾರ್ ? ಹಂಚಿಕೊಂಡದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ ಸ್ವರ್ಣಾರವರೇ, ಆ ಸಾಕ್ಷಾತ್ಕಾರ ಬರುವುದು ಅನುಭವದಿಂದಲೇ!! ಪ್ರತಿಕ್ರಿಯೆಗೆ ವಂದನೆಗಳು.

      ಅಳಿಸಿ
  2. ಅನಂತ ಕಲ್ಯಾಣಗುಣಾತಿಶಯಪೂರ್ಣನಾದ ಆ ಪರಮಾತ್ಮನ ಲೀಲೆಯೂ ಅನಾದಿ ಮತ್ತು ಅನಂತ ಎನ್ನುವ ವಿಚಾರ ತುಂಬಾ ಸುಂದರವಾಗಿದೆ. ನೀವು ಹೇಳಿದಂತೆ ಅದು ಕೇವಲ ಅನುಭವ ವೇಧ್ಯ. ಎಂದಿನಂತೆ ನಿಮ್ಮ ವಿಚಾರ ಶ್ಲಾಘನೀಯ ಧನ್ಯವಾದಗಳು ಶ್ರೀ ನಾಗರಾಜ್ ಅವರೆ.

    ಪ್ರತ್ಯುತ್ತರಅಳಿಸಿ