ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಅಕ್ಟೋಬರ್ 10, 2017

ಅಪರಿಗ್ರಹ ಮತ್ತು ಅಪಾರಗ್ರಹಣ


     ಮನಸ್ಸಿನಲ್ಲಿ ಏನೋ ಒಂದು ಆಸೆ ಇರುತ್ತದೆ. ಅದು ಈಡೇರಿದಾಗ ಸಂತೋಷವಾಗುತ್ತದೆ. ಆದರೆ ಅಲ್ಲಿಗೆ ಮುಗಿಯುವುದಿಲ್ಲ, ಇನ್ನೂ ಮುಂದಿನದನ್ನು ಪಡೆಯುವ ಆಸೆ ಹುಟ್ಟುತ್ತದೆ. ಅತೃಪ್ತಿ ಸಂತೋಷದ ಜಾಗವನ್ನು ಕಬಳಿಸಿಬಿಡುತ್ತದೆ. ಪುನಃ ಹೆಚ್ಚಿನದಕ್ಕಾಗಿ ಕಷ್ಟಪಡುತ್ತೇವೆ. ಇದು ಮುಗಿಯುವುದೆಂದು? ಎಲ್ಲಿಯವರೆಗೆ ನಮಗೆ ಸಾಕು ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ಇದು ಇದ್ದೇ ಇರುತ್ತದೆ. ಸಾಕು ಅನ್ನಿಸಿದಾಗ ತೃಪ್ತಿ ನೆಲೆಸುತ್ತದೆ. ಇಂದಿನ ಪ್ರಪಂಚದಲ್ಲಿ ಸಂತೋಷ, ತೃಪ್ತಿ, ಆಂತರಿಕ ಶಾಂತಿ ಮತ್ತು ಆನಂದಗಳನ್ನು ಅನುಭವಿಸುವುದು ದುಸ್ತರವೆನ್ನಿಸುವ ಸ್ಥಿತಿ ಇದೆ. ಆಂತರಿಕ ಶಾಂತಿ, ಸಂತೋಷಗಳನ್ನು ಹುಡುಕುವುದೇ ಮಾನವರ ನಿರಂತರವಾದ ಕೆಲಸವಾಗಿದ್ದು, ಸುಯೋಗ್ಯ ದಾರಿಯಲ್ಲಿ ಸಾಗಿ ಸಫಲರಾಗುವವರು ಕೆಲವರು ಮಾತ್ರ.
     ಸಾಕು ಅನ್ನಿಸಿದರೆ ತೃಪ್ತಿಯ ಹಂತ ತಲುಪಿದಂತೆ ಅನ್ನುವುದು ಸರಿ. ಈ ಸಾಕು ಅನ್ನುವ ಭಾವನೆ ಬೆಳೆಸಿಕೊಳ್ಳಲು ಅನುಸರಿಸಬೇಕಾದ ಒಂದು ನೈತಿಕ ಗುಣ ಮತ್ತು ಆಂತರಿಕ ಕಟ್ಟುಪಾಡೇ ಅಪರಿಗ್ರಹ. ಅಪರಿಗ್ರಹವೆಂದರೆ ಅಸಂಗ್ರಹ, ತನ್ನದೆಂಬ ಭಾವರಾಹಿತ್ಯ ಮತ್ತು ನಿರ್ಲಿಪ್ತತೆ ಎಂಬ ಆರ್ಥಗಳಿವೆ. ಹಾಗಾದರೆ ನಾವು ಏನನ್ನೂ ಕೂಡಿಡಲೇಬಾರದೆ? ನಿರಾಸಕ್ತರಾಗಿ ಚಿಂದಿ ಬಟ್ಟೆ ತೊಟ್ಟು ಬೀದಿಯಲ್ಲಿ ಅಲೆದಾಡಬೇಕೆ? ಅಪರಿಗ್ರಹವೆಂದರೆ ಹೀಗೂ ಅಲ್ಲ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಜನರನ್ನು ಮತ್ತು ಅವರ ಸ್ವಭಾವಗಳನ್ನು ಗಮನಿಸುತ್ತೇವಲ್ಲವೆ? ತಮೋಗುಣದವರು ಆಲಸಿಕರಾಗಿದ್ದರೆ, ರಜೋಗುಣದವರು ಮುನ್ನುಗ್ಗುವ, ರೋಷಾವೇಶದ ಸ್ವಭಾವದವರಾಗಿರುತ್ತಾರೆ. ಆದರೆ ಸಾತ್ವಿಕ ಗುಣದವರು ಮಾದರಿಯಾಗಿದ್ದು, ಅವರಲ್ಲಿ ತಮಸ್ ಮತ್ತು ರಜಸ್ ಗುಣಗಳ ಹಿತವಾದ ಸಾಂಗತ್ಯವಿರುತ್ತದೆ. ಭೌತಿಕ ಸಂಪತ್ತಿನ ಬಗ್ಗೆ ವೈರಾಗ್ಯ ತಳೆದು ವಾಸದ ಮನೆಯನ್ನೂ ತೊರೆದು, ದೇಹವನ್ನು ಬೆಚ್ಚಗಿಡುವ ಬಟ್ಟೆಗಳನ್ನೂ ವರ್ಜಿಸುವವರು ಅತಿರೇಕದ ಒಂದು ಕೊನೆಯಲ್ಲಿದ್ದರೆ, ಬಂದದ್ದೆಲ್ಲವನ್ನೂ ಕೂಡಿಡುತ್ತಾ, ಹೊರಗೆ ಹೋಗಲು ಬಿಡದ, ಅಗತ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಸಂಗ್ರಹಿಸುತ್ತಲೇ ಹೋಗುವವರು ಅತಿರೇಕದ ಮತ್ತೊಂದು ಕೊನೆಯಲ್ಲಿರುತ್ತಾರೆ. ಸಾತ್ವಿಕ ಗುಣದವರು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಹೊಂದಿ ತೃಪ್ತರಾಗುತ್ತಾರೆ. ಇದು ಅಪರಿಗ್ರಹದ ಆದರ್ಶ ಸ್ಥಿತಿ. 
     ನಮಗೆ ಜೀವಿಸಲು ಎಷ್ಟು ಅಗತ್ಯ ಮತ್ತು ಏನು ಅಗತ್ಯ? ನಮಗೆ ಅನುಕೂಲಕರವಾಗಿರಲು, ರಕ್ಷಣೆಯಿರಲು, ಆರೋಗ್ಯದಿಂದ ಇರಲು, ಉತ್ತಮ ಶಿಕ್ಷಣ ಹೊಂದಲು, ಇತ್ಯಾದಿ ಮೂಲಭೂತ ಅಗತ್ಯವಿರುವ ಸಂಗತಿಗಳು ಇರಬೇಕು. ಈ ಅಗತ್ಯ ಅನ್ನುವುದು ವಿಚಿತ್ರವಾಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಗತ್ಯವಾಗುತ್ತದೆ. ಆಡಳಿತಗಾರರಿಗೆ, ಅಧಿಕಾರಿಗಳಿಗೆ, ಸಾಮಾನ್ಯರಿಗೆ ಅವರ ಅಗತ್ಯಗಳು ಬೇರೆಯದೇ ಆಗಿರುತ್ತವೆ. ನಾನು ಉಪತಹಸೀಲ್ದಾರನಾಗಿದ್ದಾಗ ಒಂದು ಮೊಪೆಡ್ ಹೊಂದಿದ್ದೆ. ನನ್ನ ಅಗತ್ಯಗಳಿಗೆ ಅದು ಸಾಕಿತ್ತು. ನನ್ನ ಡಿಗ್ನಿಟಿಗೆ ತಕ್ಕಂತೆ ಬೈಕು ತೆಗೆದುಕೊಳ್ಳಲು ಹಲವರು ಸೂಚಿಸುತ್ತಿದ್ದರು. ೫-೬ ವರ್ಷಗಳ ನಂತರ ಒಂದು ಸುಜುಕಿ ಸಮುರಾಯ್ ತೆಗೆದುಕೊಂಡು ನನ್ನ ಡಿಗ್ನಿಟಿ ಹೆಚ್ಚಿಸಿಕೊಂಡಿದ್ದೆ! ತಹಸೀಲ್ದಾರನಾದ ಮೇಲೆ ಸರ್ಕಾರಿ ವಾಹನವೇ ಇತ್ತಾದ್ದರಿಂದ ಡಿಗ್ನಿಟಿಗೆ ಧಕ್ಕೆಯಾಗಿರಲಿಲ್ಲ. ನಿಜ, ಒಬ್ಬ ಪ್ರಧಾನ ಮಂತ್ರಿಗೆ, ಒಂದು ದೊಡ್ಡ ಕಂಪೆನಿಯ ಮಾಲಿಕನಿಗೆ, ಗಣ್ಯರು ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಕೆಲವು ಹೆಚ್ಚಿನ ಅಗತ್ಯಗಳು ಅವರ ಸ್ಥಾನಮಾನಗಳಿಗೆ ತಕ್ಕಂತೆ ಇರಬೇಕಾಗುತ್ತದೆ, ಅವರುಗಳು ಇಷ್ಟಪಡಲಿ, ಇಷ್ಟಪಡದಿರಲಿ.
     ಅಪರಿಗ್ರಹದ ವಿಚಾರ ಚರ್ಚಿಸುವಾಗ ಅಪಾರಗ್ರಹಣದ ಅನಾನುಕೂಲಗಳನ್ನೂ ಗಮನಿಸೋಣ. ಹೆಚ್ಚಿನ ಹಣ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಗೆ ಅವುಗಳ ರಕ್ಷಣೆ ಮತ್ತು ಉಳಿಸಿಕೊಳ್ಳುವ ಬಗ್ಗೆ ಗಮನವಿರಬೇಕಾಗುತ್ತದೆ, ಅವು ಎಲ್ಲಿ ಹಾಳಾಗುವುವೋ, ನಷ್ಟ ಹೊಂದುವವೋ ಎಂಬ ಆತಂಕ ಸಹ ಇರುತ್ತದೆ. ಕೆಲವು ವರ್ಷದ ಹಿಂದೆ ನಡೆದಿದ್ದ ಘಟನೆಯಿದು. ತನ್ನ ಮಗು ಕಾರಿನ ಗಾಜಿನ ಮೇಲೆ ಕಲ್ಲಿನಿಂದ ಗೀಚಿತೆಂದು ಕೋಪದ ಭರದಲ್ಲಿ ಅದೇ ಕಲ್ಲಿನಿಂದ ಪುಟ್ಟ ಮಗುವಿನ ಕೈಯನ್ನು ಜಜ್ಜಿದ್ದ ಒಬ್ಬ ತಂದೆ. ನಂತರ ಅರಿವು ಬಂದು ಆಸ್ಪತ್ರೆಗೆ ಕರೆದೊಯ್ದಾಗ ಮಗುವಿನ ಮುಂಗೈಯನ್ನೇ ಕತ್ತರಿಸಬೇಕಾಗಿ ಬಂದಿತ್ತು. ಮಗು ತಾನು ದೊಡ್ಡ ತಪ್ಪು ಮಾಡಿದ್ದ ಭಾವನೆಯಿಂದ ಹೊರಬಂದಿರಲಿಲ್ಲ. ಇದೇ ರೀತಿ ಕಾರನ್ನೂ ರಿಪೇರಿ ಮಾಡಿಸಬಹುದಾ ಅಪ್ಪಾ? ಎಂದು ಅಪ್ಪನನ್ನು ಕೇಳಿತ್ತು! ಹೊಂದಿದ ಸಂಪತ್ತಿನ ರಕ್ಷಣೆಯ ಒತ್ತಡದಿಂದ ಅಥವ ಸಂಪತ್ತಿನ ನಷ್ಟದಿಂದ ಬದುಕು ಸಂತೋಷವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅಪರಿಗ್ರಹ ಇಂತಹ ಸಂಗತಿಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗದಿರಲು ಹೇಳುತ್ತದೆ. ಅಪಾರಗ್ರಹಣದ ಭೀಕರ ಫಲವನ್ನು ನಮ್ಮ ದೇಶ ಎದುರಿಸುತ್ತಿದೆ. ಅಕ್ರಮ ಮಾರ್ಗದಿಂದ ಮೊದಲು ಸಾಮಾನ್ಯರಂತಿದ್ದ ಹಲವಾರು ರಾಜಕಾರಣಿಗಳು ಇಂದು ಲೆಕ್ಕವಿಲ್ಲದಷ್ಟು ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದು ಕೊಬ್ಬಿದ್ದಾರೆ ಮತ್ತು ಅದರ ಬಲದಿಂದಲೇ ಅಧಿಕಾರ ಉಳಿಸಿಕೊಳ್ಳುತ್ತಿದ್ದಾರೆ ಮತ್ತು ಉಳಿಸಿಕೊಳ್ಳಲು ಎಂತಹ ಹೇಯ ಮಾರ್ಗವನ್ನೂ ಅನುಸರಿಸುತ್ತಾರೆ.                  ಇವರುಗಳ ಕಪಿಮುಷ್ಟಿಯಿಂದ ಪಾರಾಗುವುದು ಸಾಮಾನ್ಯ ಜನತೆಗೆ ಸಾಧ್ಯವಿಲ್ಲದೆ ದೇಶ ಅಧೋಗತಿಗೆ ಜಾರುತ್ತಿದೆ.
     ಅಪರಿಗ್ರಹದ ಪ್ರಬಲ ಬೆಂಬಲಿಗ ಗಾಂಧೀಜಿಯವರ ಅನಿಸಿಕೆಯಿದು: ನನ್ನ ಹೆಗಲ ಮೇಲೆ ಬಿದ್ದ ಹೊರೆಯಿಂದಾಗಿ ಆರಾಮವಾಗಿ ನಡೆಯಲಾಗುತ್ತಿಲ್ಲ ಮತ್ತು ಸಹಜನರ ಸೇವೆಯನ್ನು ಸುಸೂತ್ರವಾಗಿ ಮತ್ತು ಸಂತೋಷದಿಂದ ಮಾಡಲಾಗುತ್ತಿಲ್ಲವೆಂದು ನನಗೆ ಭಾಸವಾಗುತ್ತಿತ್ತು. ಯಾವುದನ್ನೇ ಆಗಲಿ ಹೊಂದುವುದು ತ್ರಾಸದಾಯಕ ಮತ್ತು ಹೊರೆ. ಮೂಲವನ್ನು ಹುಡುಕಿದಾಗ ನನಗೆ ಕಂಡದ್ದೇನೆಂದರೆ, ಯಾವುದನ್ನಾದರೂ ನನ್ನ ಸ್ವಂತದ್ದೆಂದು ಇಟ್ಟುಕೊಂಡರೆ, ಅದನ್ನು ಇಡೀ ಪ್ರಪಂಚದ ವಿರುದ್ಧ ರಕ್ಷಿಸಬೇಕಿತ್ತು. ಯಾರಾದರೂ ಅದನ್ನು ಬಯಸಿದರೆ, ಅವರು ಕೆಟ್ಟ ಉದ್ದೇಶದಿಂದ ಮಾಡಿರಲಾರರು; ಅವರಿಗೆ ನನಗಿಂತ ಹೆಚ್ಚಿನ ಅವಶ್ಯಕತೆ ಇದ್ದೀತು. ಹೊಂದುವುದು ನನಗೆ ಅಪರಾಧದಂತೆ ತೋರುತ್ತದೆ. ಇತರರು ಹೊಂದಲು ಸಾಧ್ಯವಿರುವಂತಹ ವಸ್ತುಗಳನ್ನಷ್ಟೇ ನಾನೂ ಹೊಂದಬಹುದು. ಅದು ಅಸಾಧ್ಯವೇ ಅರಿ.  ಆದ್ದರಿಂದ ಎಲ್ಲರೂ ಹೊಂದಬಹುದಾದ ಒಂದೇ ವಸ್ತುವೆಂದರೆ ಏನನ್ನೂ ಹೊಂದದಿರುವುದು ಅಥವ ಇಚ್ಛಾಪೂರ್ವಕ ಸಮರ್ಪಣ. ಸರಳತೆಗೆ ಹೆಸರಾಗಿದ್ದ ದಿ. ಲಾಲಬಹಾದುರ ಶಾಸ್ತ್ರಿಯವರು ತಮ್ಮ ಪತ್ನಿ ಮನೆ ಖರ್ಚು ಕಳೆದು ಹತ್ತು ರೂ. ಉಳಿಸಿದ್ದು ತಿಳಿದಾಗ ತಮ್ಮ ಸಂಬಳದಲ್ಲಿ ಹತ್ತು ರೂ. ಕಡಿಮೆ ಮಾಡಲು ತಮ್ಮ ಕಾರ್ಯದರ್ಶಿಗೆ ತಿಳಿಸಿದ್ದರಂತೆ. ಇನ್ನೊಬ್ಬ ಪ್ರಧಾನಿ ದಿ. ಗುಲ್ಜಾರಿಲಾಲ್ ನಂದಾರವರು ತಮ್ಮ ಅಂತ್ಯಕಾಲವನ್ನು ಒಂದು ಗುಡಿಸಲಿನಲ್ಲಿ ಸರಳವಾಗಿ ಕಳೆದಿದ್ದರು. ಇಂತಹ ವ್ಯಕ್ತಿತ್ವದವರು ಇಂದಿಗೂ ನಮ್ಮ ನಡುವೆ ಕಂಡುಬರುತ್ತಾರೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರೂ ಇಂತಹ ವ್ಯಕ್ತಿತ್ವದವರೇ! ಭೌತಿಕ ಸಂಪತ್ತು, ಸ್ವಂತ ಜೀವನವನ್ನು ಬದಿಗೊತ್ತಿ ದೇಶಕಾರ್ಯದ ಸಲುವಾಗಿ, ಸಮಾಜದ ಉನ್ನತಿಗಾಗಿ, ಸರ್ವರ ಒಳಿತಿಗಾಗಿ ಜೀವನವನ್ನೇ ಮೀಸಲಿರಿಸಿರುವ ಸಾವಿರಾರು ಜೀವಗಳಿವೆ. ನಮಗೆ ನೋಡುವ ಕಣ್ಣುಗಳಿರಬೇಕು ಅಷ್ಟೆ.
     ಅನುಗಾಲವೂ ಚಿಂತೆ ಜೀವಕೆ ಎಂದು ಹಾಡಿದ ಪುರಂದರದಾಸರ ವೈಯಕ್ತಿಕ ಜೀವನವೇ ಅಪರಿಗ್ರಹದ ಔನ್ನತ್ಯಕ್ಕೆ ಮಾದರಿಯಾಗಿದೆ. ಅಂದಿನ ಕಾಲಕ್ಕೆ ಅತ್ಯುನ್ನತ ಶ್ರೀಮಂತರೆನಿಸಿ ನವಕೋಟಿ ನಾರಾಯಣರೆಂಬ ಹೆಸರಿದ್ದ ಅವರು ಕಡುಲೋಭಿಯಾಗಿದ್ದು ತಾವೂ ನೆಮ್ಮದಿಯಾಗಿರದೆ ತಮ್ಮ ಕುಟುಂಬದವರನ್ನೂ ನೆಮ್ಮದಿಯಾಗಿ ಇರಲು ಬಿಡದಿದ್ದವರು. ಇಂತಹವರು ದೈವಪ್ರೇರಣೆಯಿಂದ ಪತ್ನಿಯ ಮೂಲಕವಾಗಿ ಭೌತಿಕ ಸಂಪತ್ತಿನ ಮೂಲಕ ಸುಖವಾಗಿರಲಾರೆನೆಂಬುದನ್ನು ಮನಗಂಡು, ಅಕ್ಷರಶಃ ತಮ್ಮ ಸಂಪತ್ತೆಲ್ಲವನ್ನೂ ತ್ಯಜಿಸಿ ಹೊರಬಂದು ಬರಿಗೈಯಲ್ಲಿ ತಂಬೂರಿ, ತಾಳ ಹಿಡಿದು ಸಂತಸಪಟ್ಟವರು. ಕಳೆದುಕೊಳ್ಳಲು ಏನೂ ಇರದಾಗ ಮುಂದೆ ಎಲ್ಲಾ ಗಳಿಸುವುದೇ ಆಗಿರುತ್ತದೆ ಎಂದು ಸಾರಿದವರು. 
     ಸಾರಾಂಶ: ಅಪರಿಗ್ರಹವು ಕಳೆದುಹೋಗಬಹುದಾದ, ನಷ್ಟವಾಗಬಹುದಾದ ಸಂಗತಿಗಳ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸದೆ, ಕಳೆಯಲಾಗದ ಸಂಗತಿಗಳ ಬಗ್ಗೆ ಕೇಂದ್ರೀಕರಿಸಲು ಸೂಚಿಸುತ್ತದೆ. ಕಳೆದುಹೋಗದ, ನಷ್ಟವಾಗದ ಸಂಗತಿಗಳಾದರೂ ಯಾವುವು? ನಿಷ್ಕಲ್ಮಶ ಪ್ರೀತಿ, ಸುತ್ತಲಿನ ಜೀವಜಗತ್ತು, ಪ್ರಕೃತಿಯ ಕುರಿತು ಕಾಳಜಿ, ಸುಮನಸ್ಸಿನಿಂದ, ಸದುದ್ದೇಶದಿಂದ ಮಾಡುವ ಒಳ್ಳೆಯ ಕೆಲಸಗಳು, ಇತರರಿಗೆ ಹಿತವೆನಿಸುವ ನಡವಳಿಕೆಗಳು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನಗಳು, ಆತ್ಮನನ್ನು ಅರಿಯುವ, ಅಂತರಂಗದ ಕರೆಗೆ ಓಗೊಡುವ ಮನಸ್ಥಿತಿಗಳು ಕಳೆದುಹೋಗುವ ಸಂಗತಿಗಳಲ್ಲ. ಅತ್ಯಂತ ಬಡವನೆನಿಸಿಕೊಂಡವನೂ ಸಹ ಇತರರಿಗೆ ಒಳ್ಳೆಯ ಮಾತನಾಡಬಲ್ಲ, ಸಹಾಯ ಮಾಡಬಲ್ಲ! ಅಂತರಂಗದ ಶುದ್ಧತೆಗೆ ಅಪರಿಗ್ರಹ ಅತ್ಯುತ್ತಮ ಸಾಧನವಾಗಿದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ