ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಮೇ 31, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೩

     ಈ ಮಂತ್ರವನ್ನು ನೋಡಿರಿ:-
ಸಭಾ ಚ ಮಾ ಸಮಿತಿಶ್ಚಾವತಾಂ ಪ್ರಜಾಪತೇರ್ದುಹಿತರೌ ಸಂವಿದಾನೇ |
ಯೇನಾ ಸಂಗಚ್ಛಾ ಉಪ ಮಾ ಸ ಶಿಕ್ಷಾಚ್ಚಾರು ವದಾನಿ ವಿತರಃ ಸಂಗತೇಷು || (ಅಥರ್ವ.೭.೧೨.೧.)
     [ಸಭಾ] ಸಭೆಯೂ, [ಚ] ಮತ್ತು [ಸಮಿತಿಃ] ಸಮಿತಿಯೂ, [ಮಾ ಅವತಾಮ್] ನನ್ನನ್ನು ರಕ್ಷಿಸಲಿ. ಅವೆರಡೂ [ಪ್ರಜಾಪತೇಃ] ರಾಷ್ಟ್ರಪತಿಯ [ಸಂವಿದಾನೇ ದುವಿತರೌ] ಜ್ಞಾನಸಂಪನ್ನರಾದ ಪುತ್ರಿಯರ ಹಾಗಿವೆ. [ಯೇನ ಸಂಗಚ್ಛೇ] ನಾನು ಯಾವನನ್ನು ಸಂಧಿಸುತ್ತೇನೋ, [ಸ ಮಾ ಉಪ ಶಿಕ್ಷಾತ್] ಅವನು ನನಗೆ ಸರಿಯಾದ ತಿಳುವಳಿಕೆ ಕೊಡಲಿ. [ಪಿತರಃ] ಪ್ರಜಾಪಾಲಕರೇ [ಸಂಗತೇಷು] ಕೂಟಗಳಲ್ಲಿ [ಚಾರು ವದಾನಿ] ನಾನು ಒಳಿತನ್ನೇ ಆಡುವೆನು.
     ಈ ಮಾತುಗಳನ್ನು ಅಥರ್ವವೇದ, ಸಾಧಾರಣ ಪ್ರಜೆಯ ಬಾಯಿಂದ ಹೇಳಿಸುತ್ತಿದೆ. ಸಭೆ ಮತ್ತು ಸಮಿತಿ ತನ್ನನ್ನು ರಕ್ಷಿಸಲಿ -  ಎಂಬ ಅಭಿಲಾಷೆಯನ್ನು ಸಾಧಾರಣ ಪ್ರಜೆ ತೋರಿಸಿಕೊಳ್ಳುತ್ತಿದ್ದಾನೆ. ಪ್ರಶಾಸನದ ಅಧಿಕಾರಿಗಳನ್ನು ಇಲ್ಲಿ 'ಪಿತರ' ಎಂದು ಕರೆದಿದೆ. ಈ ರೀತಿ ವೇದಗಳು, ಪ್ರಜೆಗಳಿಂದ ತಮ್ಮ ಪ್ರತಿನಿಧಿಗಳನ್ನು ಆರಿಸುವಿಕೆ, ಆ ಪ್ರತಿನಿಧಿಗಳು ಪ್ರಧಾನ ಶಾಸಕನನ್ನು ಆರಿಸುವಿಕೆ, ಪ್ರಧಾನ ಶಾಸಕನು ಸಭಾ ಪ್ರತಿನಿಧಿಗಳಿಂದಲೇ ತನ್ನ 'ಮಂತ್ರಿಮಂಡಲ', ಎಂದರೆ 'ಸಮಿತಿ'ಯನ್ನು ರಚಿಕೊಳ್ಳುವಿಕೆ ಮೊದಲಾಧ ಮೂಲಭೂತ ಸಂವಿಧಾನವನ್ನು ವರ್ಣಿಸುತ್ತವೆ. ಪ್ರಜಾಪ್ರತಿನಿಧಿಗಳು, ಮಂತ್ರಿಗಳು, ಪ್ರಧಾನಶಾಸಕ ಇವರು ಹೇಗಿರಬೇಕೆಂಬುದನ್ನು ಕೆಳಗಿನ ಮಂತ್ರ ಸೂಚಿಸುತ್ತಿದೆ:-
ಅಪಾಂ ರಸಮುದ್ವಯಸಂ ಸೂರ್ಯೇ ಸಮತಂ ಸಮಾಹಿತಮ್ |
ಅಪಾಂ ಅಸಸ್ಯ ಯೋ ರಸಸ್ತಂ ವೋ ಗೃಹ್ಣಾಮ್ಯುತ್ತಮಮ್ || (ಯಜು.೯.೩.)
     [ಅಪಾಂ ರಸಮ್] ಪ್ರಜೆಗಳಾದ ನಿಮ್ಮ ರಸದಂತಿರುವ [ಸೂರ್ಯೇ ಸಂತಮ್] ಜಗತ್ಸಂಚಾಲಕನಾದ ಪ್ರಭುವಿನಲ್ಲಿರುವ [ಸಮಾಹಿತಮ್] ಸ್ಥಿರಚಿತ್ತದ ಪುರುಷನನ್ನು, [ಗೃಹ್ಣಾಮಿ] ಪ್ರತಿನಿಧಿಯಾಗಿ ಗ್ರಹಿಸುತ್ತೇನೆ. ಮತ್ತು ಸಭಾಸದರೇ! [ಅಪಾಂ ಅಸಸ್ಯ ಯೋ ರಸಃ] ಪ್ರಜೆಗಳಾದ ನಿಮ್ಮ ರಸವಾದ ಪ್ರತಿನಿಧಿಗಳ ಸಮೂಹದ ರಸದಂತಿರುವ, [ಉತ್ತಮಃ] ಉತ್ತಮನಾದ ಪುರುಷನನ್ನು, [ಗೃಹ್ಣಾಮಿ] ರಾಷ್ಟ್ರಪತಿಯಾಗಿ ಸ್ವೀಕರಿಸುತ್ತೇನೆ. ರಾಷ್ಟ್ರಪತಿಯಂತೆಯೇ 'ಸಮಿತಿ'ಯ ಸದಸ್ಯ ಮಂಡಲವೂ ಕೂಡ, 'ರಸದ ರಸ'ವೇ ಸರಿ.
     ವೈದಿಕ ರಾಜನೀತಿಯ ಉದ್ದೇಶ್ಯ ಆದರ್ಶವಾದ 'ಕಲ್ಯಾಣರಾಜ್ಯ'ದ ನಿರ್ಮಾಣವೇ ಆಗಿರುತ್ತದೆ. ಆ ಕಲ್ಯಾಣ ರಾಜ್ಯದ ಸ್ವರೂಪವೇನು? ಪ್ರಾರ್ಥನಾ ರೂಪದಲ್ಲಿ ಯಜುರ್ವೇದ ಅದನ್ನು ಈ ರೀತಿ ವರ್ಣಿಸುತ್ತದೆ:-
ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜು.೨೨.೨೨.)
     [ಬ್ರಹ್ಮನ್] ಓ ಪರಮಾತ್ಮನ್! [ರಾಷ್ಟ್ರೇ] ನಮ್ಮ ರಾಷ್ಟ್ರದಲ್ಲಿ [ಬ್ರಹ್ಮವರ್ಚಸೀ ಬ್ರಾಹ್ಮಣಃ] ಬ್ರಹ್ಮವರ್ಚಸ್ಸಿನಿಂದ ಕೂಡಿದ ಬ್ರಾಹ್ಮಣನು, [ಆ ಜಾಯತಾಮ್] ಹುಟ್ಟಿ ಬರುತ್ತಿರಲಿ. [ರಾಜನ್ಯಃ] ಕ್ಷತ್ರಿಯನು [ಶೂರಃ] ಶೂರನೂ [ಇಷವ್ಯಃ] ಶಸ್ತ್ರಾಸ್ತ್ರ ಪ್ರಯೋಗ ನಿಪುಣನೂ [ಅತಿವ್ಯಾಧೀ] ರೋಗರುಜಿನಗಳಿಲ್ಲದವನೂ [ಮಹಾರಥಃ] ಮಹಾರಥನೂ [ಅಜಾಯತಾಮ್] ಆಗಿ ಜನ್ಮವೆತ್ತಿ ಬರುತ್ತಿರಲಿ. [ಧೇನುಃ] ಗೋವು, [ದೋಗ್ಧ್ರೀ] ಪುಷ್ಕಳವಾಗಿ ಹಾಲು ಕೊಡುತ್ತಿರಲಿ. [ಅನಡ್ವಾನ್] ಎತ್ತು [ವೋಢಾ] ಹೊರೆ ಹೊರಲು ಸಮರ್ಥವಾಗಿರಲಿ. [ಸಪ್ತಿಃ] ಕುದುರೆ [ಆಶುಃ] ವೇಗಶಾಲಿಯಾಗಿರಲಿ. [ಯೋಷಾ] ನಾರಿಯು [ಪುರಂಧಿಃ] ಉತ್ತರದಾಯಿತ್ವ ಹೊರುವವಳಾಗಿರಲಿ. [ಅಸ್ಯ ಯಜಮಾನಸ್ಯ] ಈ ಶುಭಕರ್ಮಕರ್ತನ [ವೀರಃ] ಪುತ್ರನು [ಜಿಷ್ಣುಃ] ಜಯಶಾಲಿಯೂ, [ರಥೇಶಷ್ಠಾಃ] ಉತ್ತಮ ರಥಿಕನೂ, [ಸಭೇಯಃ] ಸಭೆಯಲ್ಲಿ ಕುಳಿತುಕೊಳ್ಳಲು ಅರ್ಹನೂ, [ಯುವಾ] ಉತ್ಸಾಹಶಾಲಿಯೂ, [ಜಾಯತಾಮ್] ಆಗಿರಲಿ. [ನಃ] ನಮಗಾಗಿ [ಓಷಧಯಃ] ಓಷಧಿಗಳು, [ಫಲವತ್ವಃ] ಫಲಭರಿತವಾಗಿ [ಪಚ್ಯಂತಾಮ್] ಪಕ್ವವಾಗಲಿ. [ನಃ] ನಮಗೆ [ಯೋಗಕ್ಷೇಮಃ] ಯೋಗಕ್ಷೇಮವು [ಕಲ್ಪತಾಮ್] ಸಿದ್ಧಿಸಲಿ.
     ಈ ಪ್ರಾರ್ಥನೆಗೆ ಮೂರ್ತರೂಪ ಸಿಕ್ಕಿದರೆ, ಅತ್ಯಂತ ಭವ್ಯವಾದ ಕಲ್ಯಾಣರಾಜ್ಯ (Welfare State) ಸ್ಥಾಪಿತವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ರಾಜ್ಯದಲ್ಲಿ ಜನಸಾಮಾನ್ಯರು ಸುಖದಿಂದ ಬಾಳಬಲ್ಲರು.
-ಪಂ. ಸುಧಾಕರ ಚತುರ್ವೇದಿ.

ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2013/05/blog-post_21.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ