ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜುಲೈ 17, 2012

ನಿಜವಾದ ಶ್ರಾದ್ಧ ಯಾವುದು?

ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ.  ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.







ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು "  ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ    ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ  ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ   ಪ್ರಾಣಪಕ್ಷಿ ಹಾರಿಹೋಯ್ತು.
-ಹರಿಹರಪುರ ಶ್ರೀಧರ



5 ಕಾಮೆಂಟ್‌ಗಳು:

  1. 'ವೇದಸುಧೆ' ತಾಣದಲ್ಲಿ ಇದೇ ವಿಷಯಕ್ಕೆ ಬಂದ ಪ್ರತಿಕ್ರಿಯೆಗಳೂ ಬೋಧಪ್ರದವಾಗಿದ್ದು ಅದನ್ನೂ ಇಲ್ಲಿ ಪ್ರಕಟಿಸಿದೆ:
    ಕವಿ ನಾಗರಾಜ್
    July 16, 2012 7:30 PM
    ಇಂತಹ ವಿಚಾರಗಳನ್ನು ಕೇಳಿ ತಲೆದೂಗುತ್ತಾರೆ, ಆದರೆ ಪಾಲಿಸಲು ಹೋದರೆ ಅಡ್ಡಿಪಡಿಸುತ್ತಾರೆ! ಪಾಲಿಸಲು ಸಾಧ್ಯವಾದವರೇ ಪುಣ್ಯವಂತರು! ಒಳ್ಳೆಯ ವಿಚಾರ ಪ್ರಸರಿಸಿದ್ದೀರಿ, ಅಭಿನಂದನೆ, ಶ್ರೀಧರ್.

    ಹರಿಹರಪುರ ಶ್ರೀಧರ್
    July 16, 2012 9:17 PM
    ನಿಜ ನಾಗರಾಜ್, ಎಷ್ಟು ಸಾಧ್ಯವೋ ಅಷ್ಟು ಅನುಸರಿಸ ಬಹುದು. ಮನೆಯಲ್ಲಿ ಉಳಿದವರಿಗೆ ಅರ್ಥಮಾಡಿಸುವುದು ಕಷ್ಟವೇ ಸರಿ.

    ವಿ.ಆರ್.ಭಟ್
    July 16, 2012 10:46 PM
    ಮನುಷ್ಯನಿಗೆ ಏನೇ ಮಾಡಿದರೂ ಆತ್ಮತೃಪ್ತಿ ಬಹಳ ಮುಖ್ಯ ಎಂಬುದು ನನ್ನ ಅನಿಸಿಕೆ. ಸಾಲಮಾಡಿ ಶ್ರಾದ್ಧ ಮಾಡಬೇಡ ಎಂದು ಅವರ ತಂದೆ ಅವರಿಗೆ ಹೇಳಿದ್ದರು ಮತ್ತು ಅದರಂತೇ ಶಾಸ್ತ್ರಿಗಳು ನಡೆದುಕೊಂಡರು ಎಲ್ಲಾ ಸರಿ, ಆದರೆ ತಮ್ಮ ಅಳಿಯನಿಗೆ ಉತ್ತಮ ಬರಹಗಳನ್ನು ಬರೆಯುವ ಸಂಸ್ಕೃತಿಯನ್ನು ಕೊಡುವಲ್ಲಿ ಅವರು ವಿಫಲರಾದರು! ಶಾಸ್ತ್ರಿಗಳು ಶಾಲೆಯನ್ನೇ ತೆರೆದಿದ್ದಾರೆ ಅನೇಕ ಬಡಮಕ್ಕಳಿಗೆ ಓದಿಸುತ್ತಾರೆ ಅದೆಲ್ಲಾ ಸರಿ, ಒಬ್ಬ ಅಳಿಯ ಇಡೀ ಕರ್ನಾಟಕದಲ್ಲಿ ಅದೆಷ್ಟೋ ಮಕ್ಕಳಿಗೆ ಅಮ್ಮಂದಿರೇ ಇಲ್ಲದಂತೇ ಮಾಡಿದ, ಹಲವು ಮನೆಗಳಿಗೆ/ ಸಂಸಾರಕ್ಕೆ ವಿನಾಕಾರಣ ಕೊಳ್ಳಿ ಇಟ್ಟ, ಅನೇಕರ ಚಾರಿತ್ರ್ಯ ಹನನ ಮಾಡಿದ-ಅದರಲ್ಲೇ ಕಾಸುಮಾಡಿದ, ಕಮ್ಮಿಯಲ್ಲ ೨೫೦ ಕೋಟಿ !
    ಶ್ರಾದ್ಧವನ್ನು ಹಲವಾರು ರೀತಿಯಲ್ಲಿ ಆಚರಿಸಬಹುದು, ಅದು ಮಾತಾ-ಪಿತೃಗಳ ಮೇಲಿನ ಗೌರವ ಅಷ್ಟೇ. ಇದ್ದಾಗ ಬರ್ತ್ ಡೇ ಹಾಳುಮೂಳು ಎಂತ ಅನೇಕ ಜನ ಹಣ ವ್ಯಯಮಾಡುತ್ತಾರಲ್ಲಾ ಶ್ರಾದ್ಧವನ್ನು ಮಾಡುವುದರಲ್ಲಿ ತಪ್ಪೇನು? ಅನಾಥಾಲಯಗಳಲ್ಲಿ ಮಕ್ಕಳಿಗೆ ಶ್ರಾದ್ಧದ ದಿನ ಊಟಹಾಕಿಸಿ ಬಟ್ಟೆ ನೀಡಿದರೂ ಅದು ಶ್ರಾದ್ಧದ ಇನ್ನೊಂದು ರೂಪವೇ ಆಗುತ್ತದೆ.
    ಶಾಸ್ತ್ರಿಗಳ ಮಿಕ್ಕೆಲ್ಲಾ ಕಾರ್ಯಗಳನ್ನು ನಾನು ಶ್ಲಾಘಿಸುತ್ತೇನೆ, ಆದರೆ ಅಳಿಯನನ್ನು ಹದ್ದುಬಸ್ತಿನಲ್ಲಿಡದೇ ಸಮಾಜಕ್ಕೊಬ್ಬ ಕೆಟ್ಟ ಪತ್ರಕರ್ತನನ್ನು ಕೊಟ್ಟು ಅನೇಕ ಜನರ ನೋವಿಗೆ ಕಾರಣರಾದರು ಎಂಬುದು ನನ್ನ ಅನಿಸಿಕೆ. [ಯಾಕೆಂದರೆ ರವಿ ಬೆಳೆದದ್ದು ಇದೇ ಮಾವನ ಆಶ್ರಯದಲ್ಲಿ]

    ಕವಿ ನಾಗರಾಜ್
    July 17, 2012 10:05 AM
    ಭಟ್ಟರೇ, ಕ್ಷಮಿಸಿ. ಪ್ರತಿಕ್ರಿಯಿಸದಿರಲಾಗಲಿಲ್ಲ.ಮೂಲ ವಿಚಾರವನ್ನು ಮೆಚ್ಚೋಣ.ವಿಷಯಾಂತರ ಬೇಡ. ಹುಳುಕು ಹುಡುಕದಿರೋಣ. ಲೋಕದ ಡೊಂಕು ಕುರಿತು ಬಸವಣ್ಣನವರ ವಚನ ನೆನಪಿಸಿಕೊಳ್ಳೋಣ.

    ಹರಿಹರಪುರ ಶ್ರೀಧರ್
    July 16, 2012 10:59 PM
    ಭಟ್ಟರೇ,
    ಮುಕುಂದೂರು ಸ್ವಾಮಿಗಳನ್ನು ಹತ್ತಿರದಲ್ಲಿ ಕಂಡವರಲ್ಲಿ ಉಳಿದಿರುವ ಕೆಲವೇ ವ್ಯಕ್ತಿಗಳಲ್ಲಿ ಶಾಸ್ತ್ರಿಗಳು ಅತ್ಯಂತ ಹಿರಿಯರು ಮತ್ತು ಸ್ವಾಮಿಗಳ ಒಡನಾಡಿಗಳು.ಅವರ ಬಗ್ಗೆ ಅಷ್ಟೇ ನಮ್ಮ ಗೌರವ.

    SUDHAKARA SHARMA
    July 17, 2012 2:26 PM
    ಯಾವುದೇ ಕಾರ್ಯವನ್ನು ಅರ್ಥಪೂರ್ಣವಾಗಿ ಮಾಡಿದಾಗ ಲಾಭ ಜಾಸ್ತಿ. ನಮಗೆ ಖುಷಿಯಾಗುತ್ತೆ, ಹಣವೂ ಇದೆ ಮಾಡಿದರೆ ತಪ್ಪೇನು ಎಂಬ ಧೋರಣೆಯೇ ಮೂಢಸಂಪ್ರದಾಯಗಳ ಉಗಮ ಹೆಚ್ಚಳಗಳಿಗೆ ಮುಖ್ಯ ಕಾರಣ.
    ಶ್ರಾದ್ಧ ಮಾಡುವವರ ಮೂಲ ಉದ್ದೇಶ ತಮ್ಮ ಕಾರ್ಯದಿಂದ ಗತಿಸಿದ ಜೀವಕ್ಕೆ ಸದ್ಗತಿ ಸಿಗಲೆಂಬುದೇ ಆಗಿದೆ. ಅವರವರ ಕರ್ಮಗಳಿಗೆ ಅವರೇ ಬಾಧ್ಯರಾಗಿರುವಾಗ, ಬೇರೊಬ್ಬರ ಕರ್ಮದಿಂದ ಸದ್ಗತಿಯಾಗುತ್ತದೆ ಎಂಬುದು ಸತ್ಯದೂರ. ಗತಿಸಿದ ನಂತರ ಮಾಡುವ ಶ್ರಾದ್ಧ ಮಾಡುವುದರಿಂದ ಸದ್ಗತಿ ಲಭಿಸುವುದಾದರೆ, ಜೀವನವನ್ನು ಹೀಗೇ ನಡೆಸಿ, ಸತ್ಕಾರ್ಯಗಳನ್ನು ಮಾಡಿ ಎಂಬ ನೀತಿ-ನಿಯಮಗಳಿಗೆ ಅರ್ಥವೇ ಇಲ್ಲವಾದೀತು!! ಹೇಗೂ ಇರು, ಸತ್ತಮೇಲೆ ಭರ್ಜರಿಯಾಗಿ ಶ್ರಾದ್ಧ ಮಾಡಿ ಸದ್ಗತಿಯನ್ನು ಕೊಡಿಸೋಣ ಎಂಬ ಧೋರಣೆ ಬರಬೇಕಿತ್ತು. ಯಾವ ಸಜ್ಜನನೂ, ಮಾನವತಾವಾದಿಯೂ ಈ ಮಾತನ್ನು ಆಡಿಲ್ಲ.
    ವೇದಗಳಂತು ಮೃತಕಶ್ರಾದ್ಧದ ಬಗ್ಗೆ ವಿರೋಧವನ್ನೇ ವ್ಯಕ್ತಪಡಿಸುತ್ತದೆ. `ವೈದಿಕ'ವೆಂದು ಮಾಡುವ ಎಲ್ಲ ಕಾರ್ಯವೂ ನಿಜವಾಗಿ ನೋಡಿದರೆ `ಅವೈದಿಕ'!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವೇದಗಳ ಪ್ರಕಾರ ಶ್ರಾದ್ಧ ಹೇಗೆ ಆಚರಿಸ ಬೇಕು? ಸುಧಾಕರ ಶರ್ಮ ಅವರು ಇದರ ಬಗ್ಗೆ ಏನು ಹೇಳುತ್ತಾರೆ? ಇದರ ಬಗ್ಗೆ ನಿಮಗೆ ವಿಷಯ ಗೊತ್ತಿದ್ದರೆ ಪ್ರಕಟಿಸಿ. ಜಗದೀಶ್ July 22, 2012

      ಅಳಿಸಿ
    2. ಶ್ರೀ ಸುಧಾಕರ ಶರ್ಮರು ಹೇಳುವ ಪ್ರಕಾರ ಜೀವಂತ ಅಪ್ಪ ಅಮ್ಮನಿಗೆ ಅವರ ಮುಪ್ಪಿನ ಕಾಲದಲ್ಲಿ ಶ್ರದ್ಧೆಯಿಂದ ಮಾಡುವ ಸೇವೆಯೇ ನಿಜವಾದ ಶ್ರಾದ್ಧ. ಅಲ್ಲದೆ ಅವರವರ ಮುಕ್ತಿಗೆ ಅವರವರೇ ಸರಿಯಾದ ದಿಕ್ಕಿನಲ್ಲಿ ಜೀವನ ನಡೆಸಬೇಕು.ಸತ್ತಮೇಲೆ ಮೃತ ದೇಹವನ್ನು ಪಂಚಭೂತಗಳಲ್ಲಿ ಲೀನ ವಾಗಿಸಬೇಕೇ ಹೊರತೂ ಸತ್ತವರ ಹೆಸರಲ್ಲಿ ಮಾಡುವ ಶ್ರಾದ್ಧ, ಕೊಡುವ ದಾನಕ್ಕೂ ಸತ್ತ ವ್ಯಕ್ತಿಯ ಆತ್ಮಕ್ಕೂ ಯಾವ ಸಂಬಂಧವೂ ಇಲ್ಲ. ಶರೀರ ಮೃತವಾದ ಕೂಡಲೇ ಆತ್ಮ ಬೇರೆಯಾಗಿಬಿಡುತ್ತದೆ. ಮಕ್ಕಳು ಮಾಡುವ ಶ್ರಾದ್ಧ ಕರ್ಮಗಳಿಗೆ ಮೃತ ವ್ಯಕ್ತಿಯ ಆತ್ಮ ಕಾದು ಕೂರುವುದಿಲ್ಲ. ಇಲ್ಲಿ ಶರ್ಮರ ಆಡಿಯೋ ಕ್ಲಿಪ್ ಕೂಡ ಪ್ರಕಟಿಸುವೆ.

      ಅಳಿಸಿ
    3. ಈ ಕೊಂಡಿಯಲ್ಲಿ ಶರ್ಮರ ಮಾತುಗಳಿವೆ.

      http://vedajeevana.blogspot.in/2012/07/blog-post_25.html

      ಅಳಿಸಿ
  2. ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? - ಕುವೆಂಪು

    ಪ್ರತ್ಯುತ್ತರಅಳಿಸಿ