ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಏಪ್ರಿಲ್ 12, 2012

ಪುಣ್ಯವೆನ್ನಿರಿ


ಕಾಣಿರೋ ಕಾಣಿರೋ ನೀವು ಕಾಣಿರೋ
ನರಜನ್ಮ ಸಿಕ್ಕಿಹುದು ಪುಣ್ಯವೆನ್ನಿರೋ |
ಪಶು ಪಕ್ಷಿ ಕ್ರಿಮಿ ಕೀಟ ಅಲ್ಲ ಕಾಣಿರೋ
ಯೋಚಿಸುವ ಶಕ್ತಿಯಿದೆ ಧನ್ಯರೆನ್ನಿರೋ ||


ನೂರಾರು ಜನ್ಮಗಳ ಫಲವು ತಿಳಿಯಿರೋ
ಏರುವುದು ಕಷ್ಟವಿದೆ ಜಾರಬೇಡಿರೋ |
ಜ್ಞಾನದ ಬೆಳಕಿನಲ್ಲಿ ಸತ್ಯ ಅರಿಯಿರೋ
ಅಟ್ಟಡುಗೆಯುಣಬೇಕು ವಿಧಿಯಿಲ್ಲವೋ ||


ಜ್ಞಾನಿಗಳ ಅರಿತವರ ನುಡಿಯ ಕೇಳಿರೋ
ಅನುಭವವೇ ದೊಡ್ಡ ಗುರು ನಿಜವ ಕಾಣಿರೋ |
ಸಂಪ್ರದಾಯದುರುಳಲ್ಲಿ ಸಿಕ್ಕಬೇಡಿರೋ
ಅರ್ಥವರಿತು ಪಾಲಿಸುವ ಮನಸ ಮಾಡಿರೋ ||


ದೇವನಿರದ ಜಾಗವಿಲ್ಲ ಅವಗೆ ನಮಿಸಿರೋ
ಹೃದಯವೇ ಅವನಿರುವ ಮೂಲಸ್ಥಾನವೋ |
ಮಠ ಮಂದಿರ ಚರ್ಚುಗಳ ಹಂಗಿಲ್ಲವೋ
ಜ್ಞಾನಜ್ಯೋತಿ ಬೆಳಗುವುದೆ ಪೂಜೆ ಕಾಣಿರೋ ||


ಹೊಗಳಿಕೆಗೆ ಉಬ್ಬನು ತೆಗಳಿಕೆಗೆ ಕುಗ್ಗನೋ
ಸ್ತುತಿ ನಿಂದೆ ಎಲ್ಲಾ ಒಂದೆ ನಿರ್ವಿಕಾರನವನೋ |
ಜಾತಿ ಭೇದ ಅವಗಿಲ್ಲ ನಿಮಗದು ಮತ್ತೇತಕೋ
ವಿಶ್ವಪ್ರಿಯನ ಮಕ್ಕಳಾಗಿ ಪ್ರಿಯರಾಗಿ ಬಾಳಿರೋ ||


ಹೀನ ದೀನ ಆರ್ತರ ಕಣ್ಣೀರು ಒರೆಸಿರೋ
ಇದಕಿಂತ ಪರಮ ಪೂಜೆ ಬೇರಿಲ್ಲ ತಿಳಿಯಿರೋ |
ಬರಿಗೈಲಿ ಬಂದವರು ಏನ ಹೊತ್ತೊಯ್ಯುವಿರೋ
ಇರುವುದೇ ಮೂರು ದಿನ ನಗುನಗುತಾ ಬಾಳಿರೋ ||
***********
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: