ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಆಗಸ್ಟ್ 13, 2017

ಪ್ರಜ್ಞಾಚಕ್ಷು ವಿರಜಾನಂದರು


      ಮಹರ್ಷಿ ದಯಾನಂದ ಸರಸ್ವತಿಯವರನ್ನು ಜಗತ್ತಿಗೆ ಪರಿಚಯಿಸಿದ ವಿರಜಾನಂದರು ಹುಟ್ಟು ಕುರುಡರು. ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು ಕಳೆದುಕೊಂಡಿದ್ದರು. ಅವರ ಅತ್ತಿಗೆ, ಅಣ್ಣ ಈ ಕುರುಡನನ್ನು ಏಕೆ ಈ ಶನಿ ನಮಗೆ ಗಂಟು ಬಿದ್ದಿತೋ, ಎಲ್ಲಾದರೂ ತೊಲಗಿಹೋಗಬಾರದೇ ಎಂದು ಪ್ರತಿನಿತ್ಯ ಹಂಗಿಸುತ್ತಿದ್ದರು. ಇಂತಹ ಬಯ್ಗಳವನ್ನು ಸಹಿಸುವುದು ಕಷ್ಟವೆಂಬ ಸ್ಥಿತಿಗೆ ತಲುಪಿದ ಆ ಬಾಲಕ ಒಂದು ದಿನ ಮನೆಯಿಂದ ಹೊರಟೇಬಿಟ್ಟಾಗ ಅವನಿಗೆ ಕೇವಲ ಎಂಟು ವರ್ಷ. ಒಂದು ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದೇ ನಡೆದ. ಈಗಿನಂತೆ ರಸ್ತೆಗಳಿಲ್ಲದ, ಕಾಡು-ಮೇಡುಗಳಿಂದ ಕೂಡಿದ ಪ್ರದೇಶಗಳಲ್ಲಿ ತಡವರಿಸಿ ನಡೆಯುತ್ತಾ ಸುಮಾರು 2000 ಮೈಲುಗಳಷ್ಟು ದೂರ ಕ್ರಮಿಸಿ ಆತ ತಲುಪಿದ್ದು ಹರಿದ್ವಾರ ಎಂದರೆ ಊಹಿಸುವುದೂ ಕಷ್ಟವಾಗುತ್ತದೆ.   ಕಣ್ಣಿರುವವರು, ಧೃಢಕಾಯರೂ ಆ ರೀತಿ ಕ್ರಮಿಸಲು ಹಿಂಜರಿಯುವ ಕಾಲವದು. ಅಂಧ ಬಾಲಕ ಅದನ್ನು ಮಾಡಿದ್ದೇ ಒಂದು ದೊಡ್ಡ ಕೆಲಸ. ಆತನ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆತನ ಬುದ್ಧಿ ಎಷ್ಟು ತೀಕ್ಷ್ಣವೆಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಅದ್ಭುತ ಗ್ರಹಣ ಶಕ್ತಿಯಿಂದಾಗಿ ಒಂದು ಸಲ ಕೇಳಿದರೆ ಸಾಕು, ಅದು ಅವರಿಗೆ ಮನದಟ್ಟಾಗಿಬಿಡುತ್ತಿತ್ತು. ನಂತರದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದ ಸ್ವಾಮಿ ಪೂರ್ಣಾನಂದರ ಶಿಷ್ಯರಾಗಿ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತರು ಎಂದು ಹೇಳುತ್ತಾರೆ. ಹಿಂದೂ ತತ್ತ್ವದರ್ಶನಗಳ ಮೂಲವಿಚಾರಗಳನ್ನು ಮನನ ಮಾಡಿಕೊಂಡರು. ಗಾಯತ್ರಿ ಮಂತ್ರವನ್ನು ವರ್ಷಗಳ ಕಾಲ ಪಠಿಸುತ್ತಿದ್ದರಿಂದ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ಅವರಿಗೆ ಆಧ್ಯಾತ್ಮಿಕ ಉನ್ನತಿ ಮತ್ತು ಮಂತ್ರಗಳಲ್ಲಿ ಸ್ವಾಮಿತ್ವ ದೊರಕಿತು ಎನ್ನಲಾಗಿದೆ. ಅದೇನೇ ಇರಲಿ, ಕುರುಡರಾಗಿದ್ದರೂ ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಹೊಂದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು.  ಕಣ್ಣಿರುವವರಿಗೂ ಕಷ್ಟವಾದ ಈ ಜ್ಞಾನ ವಿರಜಾನಂದರಿಗೆ ಲಭ್ಯವಾಗಿತ್ತು.
     ಮೋಕ್ಷ ಸಾಧನೆಗೆ ಮೂರ್ತಿಪೂಜೆಯ ಅಗತ್ಯವಿಲ್ಲವೆಂದು ಶಿಷ್ಯರಿಗೆ ಹೇಳುತ್ತಿದ್ದ ಅವರು ದೇವರನ್ನು ತಮ್ಮ ಸುತ್ತಮುತ್ತಲಿನಲ್ಲೇ ಎಲ್ಲಾ ಜೀವಿಗಳಲ್ಲಿ, ವಸ್ತುಗಳಲ್ಲಿ, ತಮ್ಮ ಹೃದಯಗಳಲ್ಲೇ ಕಾಣಬೇಕೆಂದು, ಕೇವಲ ದೇಗುಲಗಳಲ್ಲಿನ ವಿಗ್ರಹಗಳಲ್ಲಿ ಮಾತ್ರ ಕಾಣಲು ಪ್ರಯತ್ನಿಸಬಾರದೆಂದು ಒತ್ತಿ ಹೇಳುತ್ತಿದ್ದರು. ವಿನೋದ ಪ್ರವೃತ್ತಿಯವರಾದ ಅವರು ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರ ಮೂರ್ತಿಯನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗುತ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, "ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?" ವಿರಜಾನಂದರು ನಗುತ್ತಲೇ ಹೇಳಿದ್ದರು, "ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಪಕ್ಕಕ್ಕೆ ಸರಿಯೋಕೆ ಆಗ್ತಾ ಇರಲಿಲ್ವಾ?"
     ಸಂನ್ಯಾಸಿ ದಯಾನಂದ ಸರಸ್ವತಿ ಗುರುವನ್ನು ಅರಸುತ್ತಾ ಸ್ವಾಮಿ ವಿರಜಾನಂದರ ಬಳಿಗೆ ಬಂದಾಗ ದಯಾನಂದರಿಗೆ 36 ವರ್ಷ ವಯಸ್ಸು. ಮಥುರಾದ ವಿರಜಾನಂದರ ಶಾಲೆಗೆ ಬಂದ ದಯಾನಂದರು ಬಾಗಿಲು ಬಡಿದಿದ್ದರು. ಒಳಗಿನಿಂದ ಗಂಭೀರ ಧ್ವನಿ ಕೇಳಿಬಂದಿತು, ಯಾರದು?
ದಯಾನಂದ: ಗುರುದೇವಾ, ನಾನು ನಿಮ್ಮ ಸೇವಕ. ನನ್ನನ್ನು ದಯಾನಂದ ಸರಸ್ವತಿ ಎನ್ನುತ್ತಾರೆ.
ವಿರಜಾನಂದ: ಏನು ಬೇಕು?
ದಯಾನಂದ: ಜ್ಞಾನದ ಬೆಳಕಿಗಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿರುವೆ.
ವಿರಜಾನಂದ: ನಿನಗೆ ವ್ಯಾಕರಣ ಗೊತ್ತಿದೆಯೇ?
ದಯಾನಂದ: ನಾನು ಕೌಮುದಿ ಮತ್ತು ಸಾರಸ್ವತಗಳನ್ನು ಓದಿಕೊಂಡಿದ್ದೇನೆ.
ವಿರಜಾನಂದ: ಏನು? ಕೌಮುದಿ, ಸಾರಸ್ವತ? ಇಲ್ಲಿಂದ ಹೊರಟು ಹೋಗು. ಆ ಉಪಯೋಗವಿಲ್ಲದ ಪುಸ್ತಕಗಳನ್ನು ಯಮುನಾ ನದಿಯಲ್ಲಿ ಬಿಸಾಕು, ಆಮೇಲೆ ಬಾ.
     ಗುರುವಿನ ಆದೇಶದಂತೆ ದಯಾನಂದರು ನೇರವಾಗಿ ಯಮುನಾ ನದಿಯ ಬಳಿಗೆ ಹೋದರು. ನೂರಾರು ಮೈಲುಗಳು ದೂರ ಪ್ರಯಾಣ ಮಾಡುತ್ತಾ ಈ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಂದಿದ್ದ ಅವರು ಅವುಗಳ ಕುರಿತು ವ್ಯಾಮೋಹ ಇಟ್ಟುಕೊಳ್ಳದೆ ನದಿಗೆ ಎಸೆದುಬಿಟ್ಟರು ಮತ್ತು ಹಿಂತಿರುಗಿ ಬಂದು ಹೇಳಿದರು, "ಗುರುದೇವಾ, ನಿಮ್ಮ ಆದೇಶವನ್ನು ಪಾಲಿಸಿದ್ದೇನೆ". ಶಿಷ್ಯನಿಗಾಗಿ ಗುರುಗಳ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು.
     ವಿರಜಾನಂದರು ಕೃಷ್ಣಾಜಿನದ ಮೇಲೆ ಕುಳಿತಿದ್ದರು. ಕೇವಲ ಚರ್ಮ ಮತ್ತು ಮೂಳೆಗಳು ಕಾಣುತ್ತಿದ್ದ ಕೃಷಕಾಯದ ವಿರಜಾನಂದರ ಮುಖ ತೇಜಸ್ಸಿನಿಂದ ಕೂಡಿತ್ತು. ಅವರಿಗೆ ನಮಿಸಿದ ದಯಾನಂದರ ತಲೆಯ ಮೇಲೆ ಪ್ರೀತಿಪೂರ್ವಕವಾಗಿ ಕೈಯಾಡಿಸಿದರು. ದಯಾನಂದರು ಅಂಧರಾಗಿದ್ದ ಗುರುಗಳ ಕಡೆಗೆ ಆಶ್ಚರ್ಯದಿಂದ ನೋಡಿದರು. ಕುರುಡರಾಗಿದ್ದ ಗುರುಗಳು ಒಂದು ಅಕ್ಷರವನ್ನೂ ಓದಲು ಸಾಧ್ಯವಿರಲಿಲ್ಲ. ಆದರೆ ಅವರು ಜ್ಞಾನಸಮೃದ್ಧತೆಯ ಜೀವಂತ ಪ್ರತಿರೂಪವಾಗಿದ್ದರು ಮತ್ತು ಶಿಷ್ಯರ ಎಲ್ಲಾ ಸಂದೇಹಗಳನ್ನು ವೇದಗಳ, ಎಲ್ಲಾ ಗ್ರಂಥಗಳ ಮಂತ್ರಗಳು, ಉದಾಹರಣೆಗಳೊಂದಿಗೆ ಸಾಧಾರವಾಗಿ ಪರಿಹರಿಸುತ್ತಿದ್ದರು. ಯೋಗ್ಯ ಗುರುಗಳಿಗಾಗಿ 15 ವರ್ಷಗಳಿಂದ ನಡೆಸಿದ್ದ ದಯಾನಂದರ ಹುಡುಕಾಟ ಕೊನೆಗೊಂಡಿತ್ತು. ದಯಾನಂದರ ಅರ್ಪಣಾ ಮನೋಭಾವ, ಕಲಿಯುವ ಆಸಕ್ತಿಗಳು ಅವರನ್ನು ಗುರುವಿನ ಮೆಚ್ಚಿನ ಶಿಷ್ಯರನ್ನಾಗಿಸಿದವು. ದಯಾನಂದರು ಪ್ರತಿದಿನ ಬೆಳಿಗ್ಗೆ ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ ಯಮುನಾ ನದಿಯಿಂದ ಗುರುಗಳ ಸ್ನಾನಕ್ಕೆ ಮತ್ತು ಇತರ ಉಪಯೋಗಗಳಿಗಾಗಿ ನೀರು ಹೊತ್ತು ತರುತ್ತಿದ್ದರು. ನೆಲವನ್ನು ಗುಡಿಸಿ, ಸಾರಿಸುವ ಕೆಲಸವೂ ಅವರದೇ ಆಗಿತ್ತು. ಯಾವುದೇ ಕೆಲಸವನ್ನೂ ಅಳುಕಿಲ್ಲದೆ, ಹಿಂಜರಿಯದೆ ಮಾಡುತ್ತಿದ್ದ ಅವರನ್ನು ಕಂಡರೆ ಗುರುವಿಗೆ ವಿಶೇಷ ಅಕ್ಕರೆಯಿತ್ತು.
     ಒಮ್ಮೆ ವಿರಜಾನಂದರಿಗೆ ಯಾವುದೋ ಕಾರಣಕ್ಕೆ ದಯಾನಂದರ ಮೇಲೆ ಸಿಟ್ಟು ಬಂದು ಅವರ ಬೆನ್ನಿನ ಮೇಲೆ ಬಲವಾಗಿ ಹೊಡೆದಿದ್ದರು. ಹಾಗೆ ಹೊಡೆದಿದ್ದರಿಂದ ಕೃಷದೇಹಿ ಗುರುವಿನ ಕೈಗೇ ನೋವಾಯಿತು. ದಯಾನಂದರು ವಿನೀತರಾಗಿ ಹೇಳಿದ್ದರು, "ಗುರುದೇವಾ, ನನ್ನ ದೇಹ ಕಲ್ಲಿನಂತಿದೆ. ನೀವು ಹೊಡೆದರೆ ಅದಕ್ಕೆ ನೋವಾಗುವುದಿಲ್ಲ. ನಿಮ್ಮ ಕೈಗಳಿಗೇ ನೋವಾಗುತ್ತದೆ. ಇನ್ನು ಮುಂದೆ ನನ್ನನ್ನು ಶಿಕ್ಷಿಸಬೇಕಾದಾಗ ಕೈಗಳ ಬದಲಾಗಿ ಕೋಲಿನಿಂದ ಹೊಡೆಯಿರಿ" ಎಂದು ಹೇಳಿ ಒಂದು ಕೋಲನ್ನು ತಂದುಕೊಟ್ಟಿದ್ದರು. ಅಂದಿನ ಗುರು-ಶಿಷ್ಯರ ಸಂಬಂಧವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದಯಾನಂದರ ಕೋರಿಕೆ ವ್ಯರ್ಥವಾಗಲಿಲ್ಲ. ಮುಂದೊಮ್ಮೆ ವಿರಜಾನಂದರು ಸಿಟ್ಟಿನಲ್ಲಿ ದಯಾನಂದರ ಭುಜದ ಮೇಲೆ ಬಲವಾಗಿ ಬಾರಿಸಿದ್ದರು. ಇದನ್ನು ಕಂಡ ಸಹವಿದ್ಯಾರ್ಥಿ ನಯನಸುಖ ಗುರುವಿಗೆ ಹೇಳಿದ್ದ, "ಗುರುದೇವಾ, ಇಂತಹ ದೊಡ್ಡ ಸಂನ್ಯಾಸಿಯನ್ನು ಈ ರೀತಿ ದಂಡಿಸುವುದು ತರವಲ್ಲ. ಅವರನ್ನು ಗೌರವದಿಂದ ಕಾಣಬೇಕು". ಪಾಠ ಮುಗಿದ ಮೇಲೆ ದಯಾನಂದರು ಮಿತ್ರನಿಗೆ ಆಕ್ಷೇಪಿಸಿದ್ದರು, "ಗುರುದೇವರು ದ್ವೇಷದಿಂದ ಹೊಡೆದರೆಂದು ಭಾವಿಸಿರುವೆಯಾ? ಕುಂಬಾರ ಮಣ್ಣನ್ನು ತುಳಿದು ಹದ ಮಾಡಿ ಸುಂದರ ಮಡಿಕೆಯನ್ನಾಗಿಸುವಂತೆ, ಗುರು ಶಿಷ್ಯರನ್ನು ಹೊಡೆದು, ತಿದ್ದಿ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರುಗಳಿಗೆ ನೀನು ಆ ರೀತಿ ಮಾತನಾಡಬಾರದಿತ್ತು". ಮುಂದೆ ದಯಾನಂದರು ಮಹರ್ಷಿಯೆನಿಸಿ ಜನರಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗುರುಗಳು ಹೊಡೆದಿದ್ದರಿಂದ ಆಗಿದ್ದ ಗುರುತನ್ನು ತೋರಿಸಿ ಹೇಳುತ್ತಿದ್ದರು, 'ಇದು ಗುರುವಿಗೆ ಯಾವಾಗಲೂ ಕೃತಜ್ಞನಾಗಿರಬೇಕೆಂದು ನೆನಪಿಸುತ್ತವೆ'.
     ಆರ್ಯಸಮಾಜ ಸ್ಥಾಪಕರಾಗಿ ವೇದದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಅಗ್ರಪಾತ್ರ ವಹಿಸಿದ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಸತತ ಪ್ರಯತ್ನ ಮಾಡುತ್ತಾ, ಸತ್ಯಾರ್ಥ ಪ್ರಕಾಶದಂತಹ ವೈಚಾರಿಕ ಕ್ರಾಂತಿ ಮೂಡಿಸುವ ಗ್ರಂಥ ರಚಿಸಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರ ವೈಚಾರಿಕ ಪ್ರಖರತೆಯ ಮೂಲ ವಿರಜಾನಂದ ಸರಸ್ವತಿಯವರೇ ಆಗಿದ್ದರು. 1868ರಲ್ಲಿ 90 ವರ್ಷದವರಿದ್ದಾಗ ವಿರಜಾನಂದರ ದೇಹಾಂತ್ಯವಾಯಿತು. ಕಣ್ಣುಗಳಿದ್ದೂ ಕುರುಡರಾಗಿರವವರೇ ಹೆಚ್ಚಾಗಿರುವಾಗ, ಹುಟ್ಟು ಕುರುಡರಾಗಿದ್ದರೂ ಅಂತರಂಗದ ದೃಷ್ಟಿಯಿಂದ ಸಕಲವನ್ನೂ ಅರಿತಿದ್ದ ವಿರಜಾನಂದ ಸರಸ್ವತಿಯವರು ಸಾಧಕರಿಗೆ ಅನುಪಮ ಮಾರ್ಗದರ್ಶಿಯಾಗಿದ್ದಾರೆ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ