ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಡಿಸೆಂಬರ್ 26, 2014

ನೈಜ ರಸಿಕರಾಗೋಣ!


      ರಸಿಕರಾಗೋಣ!
      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ಅಲ್ಲದೆ ಈಗ ಎಲ್ಲೆಲ್ಲೂ ಅತ್ಯಾಚಾರದ ಸುದ್ದಿಗಳೇ ಕೇಳಿಬರುತ್ತಿರುವಾಗ ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ಕಪಟ ಸಂನ್ಯಾಸಿಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು 'ಕೃಷ್ಣಪರಮಾತ್ಮ' ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು 'ರಸಿಕತೆ' ಎಂಬ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ, ಸುಕೃತಿಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ, ವಿಕೃತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿರುವುದರಿಂದ 'ರಸಿಕತೆ'ಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. ಈ ಕಾರಣದಿಂದ ರಸಿಕತೆಯ ಕೆಲವು ಮಗ್ಗಲುಗಳನ್ನು ವಿವೇಚಿಸುವುದು ಈ ಬರಹದ ಉದ್ದೇಶ.
     ರಸವೆಂದರೆ 'ಸಾರ', ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು 'ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡ'ವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ತನಗೆ ಖುಷಿ ಕೊಡುವ ಚಾಕೋಲೇಟನ್ನು ತೆಗೆತೆಗದು ನೋಡಿ ಕಣ್ತುಂಬಿಕೊಳ್ಳುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ಟಿವಿಯನ್ನು ನೋಡುತ್ತಾ ರುಚಿಯನ್ನು ಅನುಭವಿಸದೆ ತಿಂದು, ಕುಡಿದು ಮಾಡುವವರು ನೈಜಸ್ವಾದವನ್ನು ಅನುಭವಿಸಲಾರರು. ನ್ಶೆಜಸವಿಯನ್ನು ಸವಿಯೋಣ, ನಿಜರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಧಾರ್ಮಿಕ ಸಮಾರಂಭದಲ್ಲಿ, ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ನಡೆಯುವ ಸಂದರ್ಭದಲ್ಲಿ ಕೆಲವರು ತಮ್ಮನ್ನೇ ಮರೆತು ತನ್ಮಯರಾಗಿ ಭಾವಪರವಶತೆಯಿಂದ, ಆನಂದಾನುಭವ ಹೊಂದುವುದನ್ನು  ಗಮನಿಸಿರಬಹುದು, ಆನಂದಾನುಭವ ನೀಡುವ ಆ ತನ್ಮಯತೆಯೇ ರಸಿಕತೆ! ಮನಸ್ಸಿಗೆ ಹಿತವಾಗುವ ಸಂಗೀತ, ಕಾರ್ಯಕ್ರಮಗಳೂ ಸಹ ಇಂತಹ ರಸಾನುಭೂತಿಗೆ ನೆರವಾಗುತ್ತವೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ, ಒಬ್ಬ ಶಿಲ್ಪಿ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಲ್ಲ. ಇಂತಹವರಿಂದಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತು ಮನನೀಯ: "ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ. ನಿಮ್ಮ ಮೆದುಳು, ಸ್ನಾಯು, ನರಮಂಡಲ ಮತ್ತು ದೇಹದ ಎಲ್ಲಾ ಭಾಗಗಳೂ ಆ ವಿಚಾರದಲ್ಲೇ ಮುಳುಗಿರಲಿ. ಇತರ ಎಲ್ಲಾ ವಿಚಾರಗಳನ್ನೂ ಬದಿಗೆ ಸರಿಸಿ. ಅದು ಯಶಸ್ಸಿಗೆ ದಾರಿ. ದೊಡ್ಡ ಸಾಧಕರುಗಳು ಸಿದ್ಧಗೊಳ್ಳುವುದು ಹೀಗೆಯೇ." ಶ್ರದ್ಧಾಪೂರ್ವಕವಾಗಿ ಮನವೊಪ್ಪುವ ಕೆಲಸಗಳಲ್ಲಿ ತೊಡಗಿಕೊಂಡು, ಅದರಿಂದ ಸಿಗುವ ಹಿತಾನಂದವನ್ನು ಅನುಭವಿಸುವ ರಸಿಕರಾಗೋಣ.
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು, ಗುತ್ತಿಗೆಯ ಪ್ರೇಮದಾಟಗಳು, ಕರಾರಿನ ವಿವಾಹಗಳು, ಇತ್ಯಾದಿಗಳನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಅಂಶ ಕಾಣಲಾಗದು. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ಕ್ಯೂಟ್" ಅನ್ನುತ್ತಾಳೆ! ಸುಂದರತೆ ಅನ್ನುವುದು ಹೊರರೂಪದಲ್ಲಿ ಕಾಣುವುದಾಗಿದ್ದರೆ ಅವಳು ನನ್ನನ್ನು ಕ್ಯೂಟ್ ಅನ್ನಲು ಸಾಧ್ಯವಿರಲಿಲ್ಲ. ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಹಾಗೆ ಹೇಳಿರಬಹುದು. ನಿಷ್ಕಳಂಕವಾಗಿ ಪ್ರೀತಿಸುವ ಮತ್ತು ಆ ಮೂಲಕ ಸಿಗುವ ಅದ್ಭುತ ಆನಂದವನ್ನು ಪಡೆಯುವಂತಹ ರಸಿಕರಾಗೋಣ.
ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ನಿಜರಸಿಕನವನೆ ತಿಳಿಯೊ ನೀ ಮೂಢ ||
      ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. ಕಪಟಿ ಸನ್ಯಾಸಿಗಳನ್ನೂ ನೆನಪಿಸಿಕೊಳ್ಳಬೇಡಿ! ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ಆತ್ಮವನ್ನು  ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಧ್ಯಾನದಿಂದ ಇಂತಹ ಸ್ಥಿತಿಯನ್ನು ತಲುಪಬಹುದೆನ್ನುತ್ತಾರೆ. ಹಿತವಾದ ಆನಂದಾನುಭವ ನೀಡುವ ಇದನ್ನೇ ಭಾವಸಮಾಧಿ ಅನ್ನುತ್ತಾರೆ. ಇದು ರಸಿಕತೆಯ ಉತ್ಕಟ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಆನಂದಾನುಭವ ಹೊರತುಪಡಿಸಿ ಬೇರೆ ಏನೂ ಬೇಕೆನ್ನಿಸುವುದಿಲ್ಲ. ಆ ಸಂದರ್ಭದಲ್ಲಿ ಏನೇ ಆದರೂ ಪರವಾಗಿಲ್ಲವೆಂಬ ಸ್ಥಿತಿ ತಲುಪಿರುತ್ತಾರೆ, ದೇಹದ ಪರಿವೆಯೂ ಇರುವುದಿಲ್ಲ. ದೈವಿಕ ಆನಂದದ ಸ್ಥಿತಿಯಲ್ಲಿ ತತ್ತ ಬೇಕಿರುವುದಿಲ್ಲ, ಸಿದ್ಧಾಂತಗಳ ಅಗತ್ಯವಿರುವುದಿಲ್ಲ, ಮುಕ್ತಿ, ಮೋಕ್ಷ ಇತ್ಯಾದಿಗಳೂ ಬೇಕೆನ್ನಿಸುವುದಿಲ್ಲ. ಇದು ರಸಿಕತೆಯ ಮಹತ್ವ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!


-ಕ.ವೆಂ.ನಾಗರಾಜ್.
**************
24.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

2 ಕಾಮೆಂಟ್‌ಗಳು:

  1. ಭಾರತ ದೇಶದ ಸ್ವಾತಂತ್ಯ್ರೋತ್ತರ ಕಾಲದಲ್ಲಿ ಬಹು ಜನರಿಗೆ ಆದಾಯ ತರುವ ವಿದ್ಯೆಯ ಮೇಲಷ್ಟೇ ಗಮನವಿತ್ತು. ಸಹಜ ಕಾಲಮಾನದ ಪ್ರಭಾವದಿಂದ ಬ್ರಿಟಿಷರ ಬಳುವಳಿಯಾದ ಇಂಗ್ಲಿಶ್ ಭಾಷೆಯೊಂದೇ ವ್ಯಕ್ತಿಗೆ ವರಮಾನ ತರುವ ಉದ್ಯೋಗ ದೊರಕಿಸುವ ದಾರಿಯಾಗಿತ್ತು. ಹಾಗಾಗಿ ಮನೆಯ ಹಿರಿಯರೆಲ್ಲರೂ ತಮ್ಮ ಮಗ ಇಂಗ್ಲಿಶ್ ಕಲಿಯಲಿ, ಇಂಗ್ಲಿಶ್ ಕಲಿತು ಸ್ವತಂತ್ರ ವರಮಾನವಿರುವ ಉದ್ಯೋಗವೊಂದನ್ನು ಪಡೆಯಲಿ ಎಂಬ ಸಹಜ ಆಸೆಯಿಂದ ಅಂದಿನ ಶಿಕ್ಷಣ ಪದ್ದತಿಗೆ ಶರಣಾದರು. ಈ ಕಾರಣದಿಂದ ಸಾಮಾನ್ಯವಾಗಿ ನಲವತ್ತರಿಂದ ಐವತ್ತು ವರ್ಷಗಳ ಹಿಂದಿನವರೆಲ್ಲ ಇಂಗ್ಲಿಶ್ ಭಾಷೆಗೆ ಶರಣಾದರು. ಈ ಕಾರಣಗಳಿಂದ ಸನಾತನ ಧರ್ಮದ ಅಭ್ಯಾಸಕ್ಕೆ ಸಮಯ ನೀಡಲಾಗಲಿಲ್ಲ. ಆದರೆ ತಂದೆ ತಾಯಿಯರಿಂದ ಬಳುವಳಿಯಾಗಿ ಬಂದ ಆಚಾರ ವಿಚಾರಗಳು ಬಹುಮಟ್ಟಿಗೆ ಜೀವನದಲ್ಲಿ ನ್ಯಾಯ ನಿಷ್ಟೆಗಳಿಂದಿರಲು ಸಹಾಯಕವಾಯಿತು. ದಿನ ನಿತ್ಯ ಕೈಮುಗಿದು ಭಗವನ್ಸ್ಮರಣೆ ಮಾಡುವಷ್ಟೇ ಮಟ್ಟಕ್ಕೆ ಆಧ್ಯಾತ್ಮಿಕತೆ ನಿಂತಿತು.

    ಇವರ ಮುಂದಿನ ತಲೆಗಳಿ ಅಂದರೆ ಭಾರತ ಸ್ವತಂತ್ರವಾದ ಮೇಲೆ ಜನಿಸಿದ ತಲೆಗಳಿಯ ಮಕ್ಕಳು ಸಂಪೂರ್ಣವಾ ಗಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡದ್ದರಿಂದ ಸನಾತನ ಧರ್ಮವೆಂಬುದು ಬಹುತೇಕ ಡಂಬಾಚಾರಗಳಿಗೆ ಸೀಮಿತಗೊಂಡಿತು. ಸನಾತನ ಧರ್ಮದ ತಿರುಳು, ಆಧ್ಯಾತ್ಮಿಕತೆ, ಧರ್ಮಾಚರಣೆ ಎಲ್ಲ ಕೇವಲ ಔಪಚಾರಿಕತೆ ಪಡೆದುಕೊಂಡಿತು. ಧಾರ್ಮಿಕ ಆಚಾರವೆಂದರೆ ಗುಂಪುಗಾರಿಕೆ, ಆದಾಯ ಕಂಡುಕೊಳ್ಳಲು - ಆದಾಯ ಹೆಚ್ಚಿಸಲು ಇರುವ ಒಂದು ಸಾಧನ ಎಂಬಂತೆ ಸಾಮಾಜಿಕ ಮನ್ನಣೆ ಪಡೆಯಿತು. ಈ ಕಾರಣಗಳಿಂದ ಈ ವ್ಯವಸಾಯದಲ್ಲಿ ತೊಡಗಿಕೊಂಡವರಿಗೆ ಕ್ಷಾತ್ರ ತೇಜಸ್ಸು ಬರತೊಡಗಿತು. ಕ್ಷಾತ್ರ ತೇಜಸ್ಸಿಗೆ ಸಹಜವಾಗಿ ಅಲ್ಲಲ್ಲಿ ಕೂಟಗಳು, ಸಂಘಟನೆಗಳು , ಪರ - ವಿರೋಧ ಚರ್ಚೆ - ಚಟುವಟಿಕೆಗಳು ದಿನ ನಿತ್ಯದ ಆಗು - ಹೋಗುಗಳಿಗೆ ಸ್ಪಂದನೆ ಆರಂಭವಾಗತೊಡಗಿತು. ಪರಿಶುದ್ಧವಾದ ಆಧ್ಯಾತ್ಮಿಕ , ಧಾರ್ಮಿಕ ಜೀವನದ ಅವಶಕತೆ, ಸಾಧ್ಯಾ - ಸಾಧ್ಯತೆಗಳು ಹಿಂದೆ ಸರಿದವು. ಈ ರೀತಿ ಕಲ್ಮಶಗಳು ಸೇರಿದ ಜೀವನ - ಸಮಾಜದಲ್ಲಿ ಅಧಾರ್ಮಿಕ, ಅನೈತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗ ಎಂಬಂತೆ ಬಿಂಬಿತವಾಗತೊಡಗಿತು. ಈ ರೀತಿ ವಿಚಾರ ಸಂಘರ್ಷಗಳು ಏರ್ಪಟ್ಟಾಗ ಧಾರ್ಮಿಕತೆಯ ನೈಜ ಅರಿವಿಲ್ಲದೆ, ಪರಿವರ್ತನೆಗೊಂದ ಧರ್ಮದ ವ್ಯಾಖ್ಯೆಗೆ ಜೋತುಬಿದ್ದವರು, ಕ್ಷಾತ್ರ ತೇಜಸ್ಸಿನ ಗುಣಗಳೊಂದಿಗೆ ಪ್ರಸಕ್ತ ಕಾಲದ ಪರಿವರ್ತನೆಗೊಂಡ ಧರ್ಮದ ರಕ್ಷಣೆಗೆ ಮುಂದಾಗತೊಡಗಿದರು. ಧರ್ಮೋ ರಕ್ಷತಿ ರಕ್ಷಿತಹ ಎಂಬಂತಹ ಘೋಶವಾಕ್ಯಗಳು ಆಧುನಿಕ ಧರ್ಮ ರಕ್ಷಕರ ಕೈಯಲ್ಲಿ ಸಿಕ್ಕು ಧರ್ಮ ರಕ್ಷಣೆಗಾಗಿ ಜನಾಂಗ ಜನಾಂಗಗಳ ಮಧ್ಯೆ ಕಂದಕ ಸೃಷ್ಟಿಸಿದವು. ಸ್ವಾತಂತ್ರ್ಯೋತ್ತರ ಭಾರತದ ಈ ಎಲ್ಲ ಬದಲಾವಣೆಗಳು ಇಂದಿನ ಮಠ ಮಾನ್ಯಗಳಲ್ಲಿ ಕಾಣ ಬರುವ ಅನಪೇಕ್ಷಿತ ಬೆಳವಣಿಗೆಗಳಿಗೆ ಕಾರಣವಾದವು. ಆಸ್ತಿಕರು, ಸಜ್ಜನರು ಮೌನಿ ಗಳಾಗತೊಡಗಿದರು. ಪ್ರಸಕ್ತ ಯುವ ಜನಾಂಗವನ್ನು ತಿಳಿಹೇಳಿ ಸರಿದಾರಿಗೆ ತರಲಾರದ ತಮ್ಮ ಅಸಹಾಯಕ ಸ್ತಿತಿಗಳಿಗೆ ತಾವೇ ಮೂಕ ಸಾಕ್ಷಿಗಳಾದರು. ಆರ್ಥಿಕವಾಗಿ ತಮಗೆ ಹಿರಿಯರ ಅವಲಂಬನೆ ಇಲ್ಲ ಅಥವಾ ಹಿರಿಯರು ಆರ್ಥಿಕ ಅವಶ್ಯಕತೆಗಳಿಗೆ ತಮ್ಮನ್ನೇ ಅವಲಂಬಿಸಿದ್ದಾರೆ ಎಂಬಂತಹ ಅನುಭಾವಗಳು ಅನುಭವೀ ಜೀವಗಳ ಅನುಭವವನ್ನೇ ವರ್ತಮಾನದಲ್ಲಿ ಗೌಣ ವಾಗಿಸಿತು.

    ಇಂದು ನಾವು ಈ ಪರಿವರ್ತನೆಯ ಕಾಲದಲ್ಲಿದ್ದೇವೆ. ಧರ್ಮ, ಮಠ , ಮಂದಿರಗಳು ಆರ್ಥಿಕ ಬಲ ಪಡೆಯುವತ್ತ ದಾಪುಗಾಲಿಕ್ಕುತ್ತಿವೆ. ಅದಕ್ಕನುಸಾರವಾಗಿ directly proportional ಆಗಿ ಧಾರ್ಮಿಕತೆ, ನೈತಿಕತೆ, ಸದಾಚಾರ, ಸದ್ವಿಚಾರಗಳು ವಿಚಾರ ರಹಿತ ಆಚಾರಗಳಾಗಿ ಮಾರ್ಪಡುತ್ತಿವೆ . ಆಧುನಿಕ ಧರ್ಮದ ಆಚರಣೆಗಳು inversly proportional ಆಗಿ ಸನಾತನ ಧರ್ಮದ ಸತ್ವವನ್ನು ಉಳಿಸಿಕೊಳ್ಳುತ್ತಿವೆ.


    ಪ್ರತ್ಯುತ್ತರಅಳಿಸಿ
  2. ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು, ಹರಿಹರ ಭಟ್ಟರೇ.

    ಪ್ರತ್ಯುತ್ತರಅಳಿಸಿ