ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮೇ 28, 2012

ಸಾರಗ್ರಾಹಿಯ ರಸೋದ್ಗಾರಗಳು - 12


   ಮುಚ್ಚುಮರೆಯಿಲ್ಲದ. ನಿರ್ಭಿಡೆಯ, ನೇರ ನಡೆ-ನುಡಿಯ, ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ  ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.  ಆದರೆ ಅವರು ಪ್ರಸ್ತುತ ಪಡಿಸುವ ವಿಚಾರಗಳನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ ಅನ್ನುವುದು ವಾಸ್ತವ. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಕಳ್ಳತನ (ಸ್ತೇಯ)
     ಐತ್ತಿರೀಯ ಬ್ರಾಹ್ಮಣದಲ್ಲಿ ಒಂದು ವಾಕ್ಯ ಬರುತ್ತೆ - 'ಕಳ್ಳತನಕ್ಕೆ ಸಮನಾದ ಪಾಪ ಯಾವುದೂ ಇಲ್ಲ'. ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಎಲ್ಲದರ ಬುಡವನ್ನೂ ಸ್ತೇಯ (ಕಳ್ಳತನ)  ಕತ್ತರಿಸುತ್ತದೆ. ಈ ಕಳ್ಳತನದ ಭಾವನೆ - 'ಯಾರದ್ದೋ .ಐಶ್ವರ್ಯ, ಮನಸ್ಸಿನಲ್ಲಿ ಕದ್ದುಬಿಟ್ಟೆ, ಯಾರಿಗೆ ಗೊತ್ತಾಗುತ್ತೆ? ದೇವರಿಗೆ ಗೊತ್ತಾಗುತ್ತೆ, ಪರವಾಗಿಲ್ಲ, ಅವನೇನು ಹೇಳ್ತಾನಾ? ಆಗಲಿ, ಆ ಸ್ತೇಯದಿಂದ ನನಗೆ ಲಾಭ ಆಗೋದಿದ್ದರೆ ಆಗಲಿ' - ಈ ತರಹದ ಸ್ತೇಯ ಭಾವನೆ ಇದೆಯಲ್ಲಾ ಇದು ಸರಿಯಲ್ಲ. ಒಂದು ವೇದ ಮಂತ್ರದ ಅರ್ಥ ಹೀಗಿದೆ: 'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ಇವತ್ತೇ ನನಗೆ ಸಾವು ಬರಲಿ, ಕಳ್ಳತನದಿಂದ ಕದ್ದು ಬೇರೆಯವರ ಸಂಪತ್ತನ್ನು ಅನುಭವಿಸುವುದಕ್ಕಿಂತ ಬದಲು ಸಾಯುವುದೇ ಮೇಲು. ಉಪವಾಸ ಮಾಡುವುದೇ ಮೇಲು'. ಈ ಭಾವನೆಯನ್ನೆಲ್ಲಾ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ.
     ಒಬ್ಬರು ದೊಡ್ಡ ಪಂಡಿತರು, . . . . . . . . ಅಂತ, ಅವರು ನನ್ನ ಹಾಗೇನೇ, ಎಲ್ಲಾ ವೇದಗಳನ್ನೂ ಬಾಯಿಪಾಠ ಮಾಡಿಕೊಂಡಿದ್ದರು. ಅವರಿಗೆ ಈ ಮಂತ್ರ ಕೊಟ್ಟು, "ಸ್ವಾಮಿ, ಸ್ವಲ್ಪ ಅರ್ಥ ಹೇಳ್ತೀರಾ?" ಅಂದೆ. "ಅರ್ಥ ಅದರೊಳಗೇ ಇದೆಯಲ್ಲಾ ಸ್ವಾಮಿ" ಅಂದರು. "ಅರ್ಥ ಇದೆ, ಅದರೊಳಗೇ ಇದೆ. ನಿಮ್ಮಂತಹವರಿಗೆ ಗೊತ್ತಾಗುತ್ತೆ, ನನ್ನಂತಹ ಪೆದ್ದರಿಗೆ ಗೊತ್ತಾಗಲ್ಲ, ಸ್ವಲ್ಪ ಬಿಡಿಸಿ ಹೇಳಿ" ಅಂದರೆ ಅವರು, "ಅಯ್ಯೋ ಪಂಡಿತಜಿ, ಮುಚ್ಚುಮರೆ ಏನು, ನಾನು ಗಿಣಿಪಾಠ ಮಾಡಿದೋನು". ಗಿಣಿ ಏನು ಹೇಳಿಕೊಡ್ತಾರೋ ಅದನ್ನು ಹೇಳುತ್ತೆ, ರಾಮ ಅಂದರೆ ರಾಮ ಅನ್ನುತ್ತೆ, ಕೃಷ್ಣ ಅಂದರೆ ಕೃಷ್ಣ ಅನ್ನುತ್ತೆ. ಅದಕ್ಕೆ ರಾಮನೂ ಗೊತ್ತಿಲ್ಲ, ಕೃಷ್ಣನೂ ಗೊತ್ತಿಲ್ಲ. ಅದರ ತಲೆಯೊಳಗೆ ಏನೂ ಇಲ್ಲ. ಅಂತಹ ಗಿಣಿಪಾಠದಿಂದ ಪ್ರಯೋಜನ ಇಲ್ಲ. ಅವರು ಒಪ್ಪಿಕೊಂಡುಬಿಟ್ಟರು. 'ನಾನು ಮಾಡಿರೋದು ಗಿಣಿಪಾಠ ಅಷ್ಟೆ' ಅಂತ. ಅವರೂ ನಾಲ್ಕು ಹುಡುಗರಿಗೆ ಪಾಠ ಹೇಳಿಕೊಟ್ಟಿದ್ದಾರೆ. ಪಾಠ ಮಾಡಿದ ಗುರುಗಳಿಗೆ ಶಿಷ್ಯರು ಅರ್ಥ ಕೇಳಿದರೆ ಅದರಲ್ಲೆ ಇದೆಯಲ್ಲಾ ಅಂತ ಹೇಳುವುದು ಬಹಳ ಸುಲಭ ಅಲ್ವಾ, ಹಾಗೆ ಹೇಳೋದು.
ಜ್ಞಾನವನ್ನು ಮುಚ್ಚಿಡುವುದೂ ಸ್ತೇಯ
     ಜ್ಞಾನವನ್ನು ಮುಚ್ಚಿಡುವುದೂ ಸಹ ಸ್ತೇಯವೇ. ನಮ್ಮ ಆಯುರ್ವೇದ ಶಾಸ್ತ್ರವನ್ನು ನೋಡಿದರೆ, ಆ ಶ್ಲೋಕಗಳನ್ನು ಓದಿದರೆ ವಾಗ್ಭಟ, ಗರ್ಗ, ಭಾನುಪ್ರಕಾಶ, ಚರಕ, ಸುಶ್ರುತ, . .ದೊಡ್ಡ ದೊಡ್ಡ ಜ್ಞಾನಿಗಳೇ ಇದ್ದರು. ಆದರೂ ಯಾಕೆ ಆಯುರ್ವೇದ ಹಾಳಾಗಿ ಹೋಯ್ತು? ಇದೇ ಬಂದದ್ದು ರೋಗ -  'ಸರಿಯಾದ ಶಿಷ್ಯ ಸಿಗಲಿಲ್ಲ. ಸರಿಯಾದ ಶಿಷ್ಯ ಸಿಕ್ಕರೆ ಅವನಿಗೆ ಮಾತ್ರಾ ಹೇಳ್ತೀನಿ'- ಸರಿಯಾದ ಶಿಷ್ಯ ಸಿಗಲಿಲ್ಲ, ಅವರು ಹೇಳಿಕೊಡಲಿಲ್ಲ, ಎಷ್ಟೋ ವಿದ್ಯೆ ನಾಶವಾಗಿ ಹೋಯಿತು. ಒಂದು ವಿದ್ಯೆ ಇತ್ತು, ಅಲ್ಯುಮಿನಿಯಮ್ ಅನ್ನು ಚಿನ್ನ ಮಾಡೋದು, (ರಸವಿದ್ಯೆ). ಆಶ್ಚರ್ಯವಾಗುತ್ತೆ, ಇದು ಸಾಧ್ಯವೇ? ಚಿನ್ನ ಎಲ್ಲಿ, ಅಲ್ಯುಮಿನಿಯಮ್ ಎಲ್ಲಿ? ಅದೂ ಭೂಮಿಯ ತಳದಿಂದಲೇ ಬರುವುದು, ಇದೂ ಭೂಮಿ ತಳದಿಂದಲೇ ಬರುವುದು. ಈ ವಿದ್ಯೆ ಈಗೆಲ್ಲಿ?
     ಇದೆಲ್ಲಾ ಯಾತಕ್ಕೆ ಹೇಳ್ತಾ ಇದೀನಿ ಅಂದರೆ, ಸುಳ್ಳು ಹೇಳಬಾರದು, . . . . . . .- ಈ ಮಂತ್ರದ ಅರ್ಥ 'ಪ್ರತಿ ನಿಂದಕನನ್ನು ಉದ್ಧಾರ ಮಾಡು', ನಾಶ ಮಾಡು ಅಂತ ಅಲ್ಲ, ಅವನು ನನ್ನನ್ನು ಬೈದ, ಆದ್ದರಿಂದ ಅವನನ್ನು ನಾಶ ಮಾಡು, ಉಹುಂ, ಅಲ್ಲ,  ಯಾಕೆ ಅಂತ ಹೇಳಿದರೆ, ಭಗವಂತನ ಮಹಿಮೆ ನಮಗೆ ಗೊತ್ತಾಗಬೇಕಾದರೆ, ಅವನು ಪಾಪಿಗಳನ್ನು ಕೂಡಾ ಉದ್ಧಾರ ಮಾಡ್ತಾನೆ, ಅನ್ನೋದು ನಮಗೆ ಗೊತ್ತಾಗಬೇಕು, ಪರಮಾತ್ಮ ಪ್ರತಿಯೊಬ್ಬ ನಿಂದಕನನ್ನೂ ನೀನು ಉದ್ಧಾರ ಮಾಡು ಎಂದು ಕೇಳುವ ಈ ಉದಾರ ಭಾವನೆ ನಮಗೆ ಬರಬೇಕು. ಬರಬೇಕಾದರೆ, ಆ ಸ್ತೇಯ ಭಾವನೆ ಹೋಗಬೇಕು. ಕದೀಬೇಕು ಅನ್ನುವ ಭಾವನೆ ಇದೆಯಲ್ಲಾ, ಅದು ಹೋಗಬೇಕು, ನಾನು  ಆಗಲೇ ಹೇಳಿದೀನಿ, ಬರೀ ಕಳ್ಳತನ ಮಾಡೋದು, ದುಡ್ಡು ಕಾಸು ಕದಿಯೋದು, ಅದೇ ಕಳ್ಳತನವಲ್ಲ, ಮಾನಸಿಕ ಕಳ್ಳತನವೂ ಕಳ್ಳತನವೇ. ಅಲ್ಲೇ ಎಲ್ಲಾ ಹುಟ್ಟೋದು, ಪುಣ್ಯ ಹುಟ್ಟೋದೂ ಅಲ್ಲೇ, ಪಾಪ ಹುಟ್ಟೋದೂ ಅಲ್ಲೇ. ಪಾಪ, ನನಗೊಬ್ಬರು ಈ ವಿಷಯ ಹೇಳಿದರು. ಒಬ್ಬ ಗುರುಗಳ ಹತ್ತಿರ ಹೋಗಿ, "ಸ್ವಾಮಿ, ನಾನು ಸುಳ್ಳು ಹೇಳೋ ಅಭ್ಯಾಸ ಇಟ್ಟುಕೊಂಡಿದೀನಿ, ಅದು ಬಂದುಬಿಟ್ಟಿದೆ, ನಾನು ಕಳ್ಳನ ಮಗ, ನಾನು ಅವನಿಗೆ ತಕ್ಕ ಮಗ, ಬಂದು ಬಿಟ್ಟಿದೆ. ನನ್ನ ಉದ್ಧಾರ ಆಗಬೇಕು" ಅಂತ ಕೇಳಿದ. ಅವರು ಹೇಳಿದರು, "ನಿನ್ನ ಉದ್ಧಾರ ನಿನ್ನ ಕೈಲೇ ಇದೆಯಪ್ಪಾ, ನಿನ್ನ ತಲೇನಾ ಸರಿಯಾಗಿ ಇಟ್ಟುಕೋ, ನೀನೇ ಉದ್ಧಾರವಾಗುತ್ತೀಯಾ. ನಿನ್ನ ತಲೆಯಲ್ಲಿ ಕೆಟ್ಟ ಯೋಚನೆ ಬರುವುದು ಬಿಟ್ಟರೆ, ಕೆಟ್ಟ ಯೋಚನೆಗೆ ಕ್ರಿಯಾ ರೂಪ ಕೊಡ್ತೀಯಾ, ಪಾಪಿಯಾಗುತ್ತೀಯ".
     ಇಂಥಾ ಪಾಪ ಮಾಡುವುದಕ್ಕಿಂತ ಸಾವು ಬರಲಿ, ಅಂತ ಹೇಳೋದೇ ಶ್ರೇಷ್ಠ, ಕಳ್ಳ ಅಲ್ಲದವನನ್ನು ಕಳ್ಳ ಅಂತ ಕರೆಯೋದೂ ಪಾಪ, ಸ್ವತಃ ಕಳ್ಳನಾಗುವುದೂ ಪಾಪ, ಆ ಕಳ್ಳತನ ಅನ್ನುವ ದೊಡ್ಡ ಪಾಪ ಇದೆಯಲ್ಲಾ, ಅದನ್ನು ವಶದಲ್ಲಿ ಇಟ್ಟುಕೊಳ್ಳಬೇಕು, ಅಹಿಂಸಕ ನಾನು, ಬ್ರಹ್ಮಚಾರಿ ನಾನು, ಅಪರಿಗ್ರಹಿ ನಾನು, ಹೇಳಿಕೊಂಡರೆ ಆಗುವುದಿಲ್ಲ, ಎಲ್ಲದರ ಬುಡದಲ್ಲಿ ಇದಿದೆ, ಮಾನಸಿಕವಾಗಿ ಕದ್ದರಾಯ್ತು. ಪಂಚಮಹಾವ್ರತಗಳು-ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ - ಈ ಐದರಲ್ಲಿ ಒಂದು ಕೆಟ್ಟರೂ ಕೂಡಾ ಹೋಯಿತು, ಐದೂ ಶುದ್ಧವಾಗಿರಬೇಕು ಅಂತಲೇ ಅಲ್ಲ, ಒಂದು ಪಾತ್ರೆಯಲ್ಲಿ ಒಂದು ಕಡೆ ತೂತ ಆಗಿದ್ದರೂ ಅದರಲ್ಲಿ ಇರುವ ಎಲ್ಲಾ ನೀರೂ ಸೋರಿಹೋಗುತ್ತೆ. ಹಾಗೇನೇ ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಆಸ್ತೇಯ, ಸತ್ಯ ಎಲ್ಲಾ ಕೊಚ್ಚಿಹೋಗುತ್ತೆ. ಯಾವುದನ್ನೂ ಕೂಡಾ ಸ್ತೇಯ ಅನ್ನೋ ಜಿಜ್ಞಾಸೆ ಇಟ್ಟುಕೊಂಡು (ಜಾಗೃತವಾಗಿರಬೇಕು). ಕಳ್ಳತನ ಯಾವುದು? ನನ್ನದಲ್ಲದ ವಸ್ತುವನ್ನು ನನ್ನದು ಅಂತ ಭಾವಿಸೋದು ಕಳ್ಳತನ. ಅರ್ಥವಾಯಿತಲ್ಲಾ? ನನ್ನದಲ್ಲ ಅದು, ಅದು ನನ್ನದು ಅಂದುಕೊಳ್ಳೋದು ಮಾನಸಿಕ ಆಯಿತು, ಕದ್ದೇಬಿಟ್ಟರೆ ಕ್ರಿಯಾತ್ಮಕ ಆಗಿಹೋಯಿತು.
ಗುರುವೇ ಸರಿಯಿರದಿದ್ದರೆ . . . .! 
     ಕಳ್ಳತನ, ಮಾಡುವುದಕ್ಕಿಂತ ಸಾಯುವುದೇ ವಾಸಿ. ನನಗೆ ಯಾರೂ ಮೋಸ ಮಾಡಬಾರದು ಅಂತಿದ್ದರೆ ನಾನು ಬೇರೆ ಯಾರಿಗೂ ಮೋಸ ಮಾಡಬಾರದು, ಆ ಭಾವನೆ ಬರುವುದೇ ಇಲ್ಲ, ನಾನು ಬೇಕಾದ್ದು ಮಾಡಿಕೊಳ್ತೇನೆ, ನನ್ನ ಶಿಷ್ಯರು, ಭಕ್ತರು ಸತ್ಯವಂತರಾಗಿರಬೇಕು ಅನ್ನೋದು. ಅವರಿಗೆಲ್ಲಿ ಬರುತ್ತೆ ಆ ಬುದ್ದಿ? ಗುರು ಅನ್ನಿಸಿಕೊಂಡೋನೆ ಬುರುಡೆ ಹೊಡಿಯುತ್ತಿದ್ದರೆ ಆ ಶಿಷ್ಯರ ತಲೆಯಲ್ಲಿ ಸತ್ಯ ಅನ್ನುವುದು ಬರುತ್ತಾ? ಯಾವತ್ತೂ ಸಾಧ್ಯವಿಲ್ಲ. ಯಾವನು ಸತ್ಯವಾದಿಯೋ ಅವನೇ ಸತ್ಯ ಪ್ರಚಾರಕನಾಗಬೇಕು. ಸುಳ್ಳು ಹೇಳೋದಾಗಿದ್ದರೆ, ಹರಿಕಥಾದಾಸರು, ಕೀರ್ತನೆಕಾರರಿಗೆ  ಬುರುಡೆ ಹೊಡಿಯುವುದಾಗಿದ್ದರೆ ಏನೂ ಅಧಿಕಾರವವೇ ಇಲ್ಲ. ಧಾರವಾಡದ ಕಡೆಯವರು  . . . . . ಅನ್ನುವವರು, ಮಹಾರಾಷ್ಟ್ರದ ಟೋಪಿ, ಕೆಂಪು ಟೋಪಿ ಹಾಕಿಕೊಂಡು ಕನ್ನಡದಲ್ಲಿ ಹರಿಕಥೆ ಮಾಡೋರು. ಅವರು ಹರಿಕಥೆ ಮಾಡ್ತಾ ಇದ್ದರು, ಸತ್ಯದ ಮೇಲೆ ಚೆನ್ನಾಗಿ ಲೆಕ್ಚರ್ ಕೊಡುತ್ತಿದ್ದರು. ನಾನು ಕೇಳಿದೆ ; "ನೀವು ಸತ್ಯದ ಮೇಲೆ ಇಷ್ಟೊಂದು ಚೆನ್ನಾಗಿ ಮಾತಾಡ್ತೀರಲ್ಲಾ, ನೀವು ಸತ್ಯ ಹೇಳ್ತೀರಾ? " "ನಾನು ಹರಿಕಥೆ ಮಾಡೋದೇ ಬುರುಡೆ, ಸತ್ಯ ನನಗೆ ಗೊತ್ತಿಲ್ಲದಂತೆ ಬಂದು ಬಿಟ್ಟಿದ್ದರೆ ನಾನು ಜವಾಬ್ದಾರನಲ್ಲ. ನಾನು ಹರಿಕಥೆ ಮಾಡೋನು, ಕಾಲಕ್ಷೇಪ ಮಾಡೋನು, ಅಷ್ಟೆ ನನ್ನ ಕೆಲಸ." ಇಂಥವರ ಉಪದೇಶದಿಂದ ಯಾರಿಗೆ ಲಾಭ? ಬೇರೆಯವರಿಗೆ ಕೂಡಾ ಕಷ್ಟ ಕೊಡಬಾರದು. ನನಗೆ ಯಾರೂ ಕಷ್ಟ ಕೊಡದೇ ಇರಲಿ ಎಂದು ಬಯಸುವುದಾದರೆ ಬೇರೆಯವರಿಗೆ ಕಷ್ಟ ಕೊಡಲು ನನಗೇನು ಹಕ್ಕಿದೆ? ಇದನ್ನು ಯಾರೂ ಯೋಚನೆ ಮಾಡುವುದಿಲ್ಲ. ಬೇರೆಯವರಿಗೆ ಬೇಕಾದಷ್ಟು ಕಷ್ಟ ಕೊಡಲಿ, ತನಗೆ ಮಾತ್ರ ಯಾರೂ ಕಷ್ಟ ಕೊಡಬಾರದು. ಈ ಭಾವನೇನೇ ಸರಿಯಿಲ್ಲ. ಇದೂ ಸ್ತೇಯವೇ.
ಪ್ರಾಣ ಬಿಟ್ಟಾರು, ಸುಳ್ಳು ಹೇಳರು
     'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ನನಗೆ ಇವತ್ತೇ ಸಾವು ಬರಲಿ' - ದೊಡ್ಡ ಮಾತು. ಸಾಯುವುದಕ್ಕೆ ತಯಾರು, ಸುಳ್ಳು ಹೇಳಲು ತಯಾರಿಲ್ಲ, ಕಳ್ಳತನ ಮಾಡುವುದಕ್ಕೆ ತಯಾರಿಲ್ಲ, ಇಂತಹವರು ಎಷ್ಟು ಜನ ಸಿಕ್ತಾರೆ? ಸುಳ್ಳು ಅನ್ನೋ ಮಾತನ್ನು ನಾವು ಕೇಳ್ತೀವಿ, ಅದರ ಸ್ವರೂಪ ಅನ್ನುವುದು ನಮಗೆ ಗೊತ್ತಿಲ್ಲ, ಕಾರಣ ಏನು? ಒಂದೊಂದು ಸಮಯದಲ್ಲಿ ಸುಳ್ಳು ಹೇಳಬೇಕಾಗಿ ಬರುತ್ತೆ, ಉದಾಹರಣೆಗೆ,  ಒಬ್ಬರು ನೋಡಿರುತ್ತಾರೆ, ಒಂದು ಜಿಂಕೆ ಅಲ್ಲಿ ಹೋಗಿದೆ, ಅದನ್ನು ಕೊಲ್ಲುವುದಕ್ಕೆ ಹಿಂಬಾಲಿಸಿ ಒಬ್ಬ ಶಿಕಾರಿ ಬರುತ್ತಾನೆ. ಬಂದವನು ಅಲ್ಲಿ ಕೂತಿರ್ತಾರಲ್ಲ ಅವರನ್ನು ಕೇಳ್ತಾನೆ, 'ಜಿಂಕೆ ಯಾವ ಕಡೆಗೆ ಹೋಯಿತು?' ಅವನು ಹೇಳಿದರೆ ಹಿಂಬಾಲಿಸಿ ಹೋಗಿ ಜಿಂಕೆಯನ್ನು ಕೊಲ್ತಾನೆ. ಇವನು ಉತ್ತರ ಕೊಡದೆ ಮೌನವಾಗಿ ಕೂತಿದ್ದ. ಶಿಕಾರಿ ಅವನಿಗೇ ಗುಂಡು ಹಾಕಿದ. 'ಕಳ್ಳ, ಗೊತ್ತಿದ್ದರೂ ಹೇಳ್ತಾ ಇಲ್ಲ' ಅಂತ. ಪ್ರಾಣ ಬಿಡೋದಕ್ಕೆ ತಯಾರು, ಆತ ಸುಳ್ಳು ಹೇಳೋದಕ್ಕೆ ತಯಾರಿರಲಿಲ್ಲ.
ಯಾರು ಕಳ್ಳರು?
     ನಾವು ಯಾವನು ಕಳ್ಳತನ ಮಾಡ್ತಾನೋ ಬೀಗ ಒಡೆದು, ಬಾಗಿಲು ಮುರಿದು, ಪೆಟ್ಟಿಗೆ ಕೊಚ್ಚಿಹಾಕಿ, ಕಳ್ಳತನ ಮಾಡ್ತಾನೋ ಅವನನ್ನು ಮಾತ್ರ ಕಳ್ಳ ಅಂತ ತಿಳ್ಕೊಳ್ತೀವಿ. ನಾವು ಮನಸ್ಸಿನಲ್ಲಿ ಅಂದುಕೊಳ್ತಾ ಇರ‍್ತೀವಿ, ಅಯ್ಯೋ, ಅವನ ಹತ್ತಿರ ಅಷ್ಟೊಂದು ದುಡ್ಡಿದೆ, ಅದರಲ್ಲಿ ಸ್ವಲ್ಪ ಭಾಗವಾದರೂ ನನ್ನದಾಗಬಾರದಾ? ಕದ್ದಿರಲ್ಲ, ಸ್ವತಃ ಕದಿಯುವುದಕ್ಕೆ ಬರುವುದಿಲ್ಲ, ಮನಸ್ಸಿನಿಂದ ಕದ್ದಿವಿ, ಎಲ್ಲಕ್ಕಿಂತಲೂ ದೊಡ್ಡ ಪಾಪ, ನೀವು ಮನಸ್ಸಿನಲ್ಲಿ ಪಾಪ ಮಾಡುವುದಿದೆಯಲ್ಲಾ, ಅದು ದೊಡ್ಡ ಪಾಪ. ನೀವು ವ್ಯಭಿಚಾರವನ್ನೇ ಮಾಡಬೇಕೆಂದಿಲ್ಲ, ಮನಸ್ಸಿನಲ್ಲಿ ಅಂದುಕೊಂಡರೂ ಸಾಕು, ಸುಳ್ಳೇ ಹೇಳಬೇಕೆಂದಿಲ್ಲ, ಹೇಳಿದರೆ ಚೆನ್ನಾಗಿತ್ತಲ್ಲಾ ಅಂತ ನಿಮ್ಮ ಮನಸ್ಸಿನಲ್ಲಿ ಬಂದರೂ ಕೂಡ ಸಾಕು. ಸುಳ್ಳು ಹೇಳಿದ ಹಾಗೇನೆ ಆಯಿತು. ಇದು ಬಹಳ ಸೂಕ್ಷ್ಮವಾದ ವಿಷಯ.
************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/11.html

6 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್ರವರೆ,
    ಉತ್ತಮ ನಿರೂಪಣೆ, ಉತ್ತಮವಾದ ವಿಚಾರವನ್ನು ಪಂಡಿತರ ಬಾಯಿಂದಲೇ ಕೆಳುತ್ತಿದ್ದಿವೇನೋ ಅನ್ನುವಷ್ಟು ಚನ್ನಾಗಿದೆ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  2. ವಂದನೆ, ಪ್ರಕಾಶರೇ. 9-6-2012ರ ಶನಿವಾರ ಸಾಧ್ಯವಾದರೆ ಪಂಡಿತರ ಸತ್ಸಂಗಕ್ಕೆ ಹಾಜರಾಗುವ ವಿಚಾರವಿದೆ.

    ಪ್ರತ್ಯುತ್ತರಅಳಿಸಿ
  3. ಎಷ್ಟು ಸೊಗಸಾದ ನಿರೂಪಣೆ! ತಪಸ್ಸೆಂದರೆ ಇದೇ ಅಲ್ಲವೇ? ನಿಜವಾಗಿ ಪಂಡಿತ್ ಜಿ ಯವರ ಈ ವಯಸ್ಸಿನಲ್ಲಿ ನೀವು ಅವರ ಮಾತುಗಳನ್ನು ಅರ್ಥ ಮಾಡಿಕೊಂಡು ಬರೆಯುತ್ತಿದ್ದೀರಲ್ಲಾ! ಹೃದಯ ತುಂಬಿ ಬಂದಿದೆ. ಇನ್ನೂ ಎಷ್ಟು ಸಂಗ್ರಹ ಇದೆ? ನೀವು ಒಪ್ಪಿದರೆ ಪುಸ್ತಕ ಪ್ರಕಟಿಸುವ ಹೊಣೆ ನನ್ನದು.ಉಚಿತವಾಗಿ ಹಂಚಿದರೂ ಪರವಾಗಿಲ್ಲ. ಪಂಡಿತರ ವಿಚಾರ ಜನರಿಗೆ ತಿಳಿಯಬೇಕು. ನಿಮ್ಮ ಪ್ರಯತ್ನ ಸಾರ್ಥಕವಾಗಿದೆ.
    ಜಿಂಕೆಯನ್ನು ಶಿಕಾರಿಮಾಡಲು ಬಿಡಬಾರದೆಂದರೆ ಅವನು ಸುಳ್ಳು ಹೇಳಿದ್ದರೂ ತಪ್ಪಾಗುತ್ತಿರಲಿಲ್ಲ.ನಮ್ಮ ಹಿಂದಿನವರು ಹೀಗೆಯೇ ಹಲವು ತಪ್ಪುಗಳನ್ನು ಮಾಡಿ ಪ್ರಾಣ ಕಳೆದುಕೊಂಡಿರಬಹುದು.ಒಂದು ಒಳ್ಳೆಯ ಕೆಲಸಕ್ಕಾಗಿ[ಅವನ ಅಂತರಾತ್ಮ ಒಪ್ಪುವಂತೆ] ಅನಿವಾರ್ಯವಾದಾಗ ಸುಳ್ಳು ಹೇಳಿದರೂ ತಪ್ಪಾಗುವುದಿಲ್ಲ. ಶಿಕಾರಿಯವ ಈ ಸತ್ಯವಂತನನ್ನೂ ಕೊಂದ. ನಂತರ ಜಿಂಕೆಯನ್ನೂ ಕೊಂದ!! ಆಗಿದ್ದು ಇಷ್ಟೆ.

    ಇನ್ನು ಹಿಂದಿನವರು ಜ್ಞಾನವನ್ನು ಮುಚ್ಚಿಟ್ಟು ಭಾರೀ ತಪ್ಪೆಸಗಿದರು. ಅದರ ಪರಿಣಾಮ ದೇಶದ ಅಮೂಲ್ಯ ಜ್ಞಾನಸಂಪತ್ತು ನಾಶವಾಗಿ ಹೋಯ್ತು.

    ಪ್ರತ್ಯುತ್ತರಅಳಿಸಿ
  4. ನಿಮ್ಮ ಸಹೃದಯತೆಗೆ ಹೃದಯ ತುಂಬಿತು, ಶ್ರೀಧರ್. ಇನ್ನು ಎರಡು ಕಂತುಗಳನ್ನು ಪ್ರಕಟಿಸಿದರೆ ಸದ್ಯದ ಸಂಗ್ರಹ ಮುಗಿಯುವುದು. ನಿಮ್ಮ ಸಲಹೆಗೆ ನನ್ನ ಒಪ್ಪಿಗೆಯಿದೆ. ನಾನೂ ಕೈಜೋಡಿಸುವೆ.

    ಪ್ರತ್ಯುತ್ತರಅಳಿಸಿ
  5. ಶ್ರೀ ನಾಗರಾಜ್,
    ಪಂಡಿತ್ ಜಿ ವಿಚಾರಗಳನ್ನು ನೀವು ಸಂಗ್ರಹಿಸಿರುವ ಒಂದು ಪುಸ್ತಕ ಮತ್ತು ಶ್ರೀ ವಟಿಯವರು ವಿವಾಹದ ಮಹತ್ವದ ಬಗ್ಗೆ ಮಾಡಿದ ಉಪನ್ಯಾಸವನ್ನು ಬರಹ ರೂಪದಲ್ಲಿ ನೀಡಲು ಕೋರಿರುವೆ. ಅದರೊಟ್ಟಿಗೆ, ವಿವಾಹದ ಬಗ್ಗೆ ಶರ್ಮರ ಅಥವಾ ಪಂಡಿತ್ ಜಿ ಅಭಿಪ್ರಾಯಗಳನ್ನು ಸೇರಿಸಿ ಒಂದು ಪುಸ್ತಕ, ಈ ಎರಡು ಪುಸ್ತಕಗಳನ್ನು ಪ್ರಕಟಿಸುವ ಹೊಣೆ ನನ್ನದು. ಇನ್ನೂ ಆರೇಳು ತಿಂಗಳಾದರೂ ಪರವಾಗಿಲ್ಲ. ಈಶಾವಾಸ್ಯಮ್ ನಲ್ಲಿಯೇ ಬಿಡುಗಡೆ ಮಾಡುವ ಆಸೆ. ನೂರು ಜನರು ಬರಲಿ ಸಾಕು. ನಾವು ಹೋದೆಡೆ ಹೆಗಲಿನಲ್ಲಿ ಪುಸ್ತಕಗಳನ್ನು ಕೊಂಡೊಯ್ದು ಜನರಿಗೆ ವಿತರಿಸೋಣ.ಅಂತೂ ನೂರಾರು ಜನರಿಗೆ ವಿಚಾರ ತಲುಪಬೇಕು. ಮಾಡುವುದಾದರೆ ನಾವು ಈಗಾಗಲೇ ಅಂತರ್ ಜಾಲದಲ್ಲಿ ಪ್ರಕಟಿಸಿರುವ ಉತ್ತಮಲೇಖನಗಳ ಸಂಗ್ರಹವನ್ನೂ ಪ್ರಕಟಿಸಬಹುದು. ಮುಂದೆ ನೋಡೋಣ. ಇದನ್ನು ಆರಂಭ ಶೂರತ್ವವೆಂದು ಭಾವಿಸಬೇಡಿ. ಇದು ನನ್ನಾಸೆ. ಭಗವಂತನು ಇದುವರವಿಗೆ ನಾನು ಅಂದುಕೊಂಡಂತೆ ನೆರವೇರಿಸಿದ್ದಾನೆ. ಇದನ್ನೂ ನೆರವೇರಿಸುವುದರಲ್ಲಿ ನನಗೆ ವಿಶ್ವಾಸವಿದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ