ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮಾರ್ಚ್ 25, 2018

ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ

     

     ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ. ರಾಮನವಮಿಯಂದೇ ಜನಿಸಿದ ಈ ಪ್ರಖರ ಸತ್ಯವಾದಿಯ ಮಾರ್ಗದರ್ಶನ ನಮಗೆ ಸದಾ ಮುಂದುವರೆಯತ್ತಿರಲಿ. ಅವರ ಕುರಿತ ಕೆಲವು ಮಾಹಿತಿಗಳ ಸ್ಮರಣೆ ಮಾಡೋಣ.
13ನೆಯ ವಯಸ್ಸಿನಲ್ಲಿಯೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು.
ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾದವರು, ಸ್ವಾಮಿ  ಶ್ರದ್ಧಾನಂದರ ಶಿಷ್ಯರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡು 15 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಕಂಡಿದ್ದವರು. ಮಹಾತ್ಮ ಗಾಂಧಿಯವರ ಒಡನಾಡಿ. 
ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದವರು. ಹತ್ಯೆಗೊಳಗಾದವರ ಸಾಮೂಹಿಕ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಗಾಂಧೀಜಿಯವರ ಸೂಚನೆಯಂತೆ ಕೈಜೋಡಿಸಿದವರು.
ನಾಲ್ಕೂ ವೇದಗಳಲ್ಲಿ ಪಾರಂಗತರಾಗಿ ಚತುರ್ವೇದಿ ಎಂಬ ಹೆಸರು ಪಡೆದವರು.
* ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದ್ದವರು.
* ಸಾವಿರಾರು ಮತಾಂತರಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದವರು.
* ನಾಲ್ಕೂ ವೇದಗಳಿಗೆ ಮಹರ್ಷಿ ದಯಾನಂದ ಸರಸ್ವತಿಯವರು ಬರೆದ ಭಾಷ್ಯವನ್ನು ಕನ್ನಡದಲ್ಲಿ 20 ಸಂಪುಟದಲ್ಲಿ ಹೊರತಂದ ಕಾರ್ಯದ ಪ್ರಧಾನ ಸಂಪಾದಕರು. ಇದು ಜ್ಞಾನ ಸಂಪತ್ತಿಗೆ ಅಮೂಲ್ಯ ಕಾಣಿಕೆಯಾಗಿದೆ.
* ಅನೇಕ ಪುಸ್ತಕಗಳ ಮೂಲಕ ವೇದದ ಮಹತ್ವವನ್ನು ಸಾರುವ ಕೆಲಸವನ್ನು ಅವಿರತವಾಗಿ ಮಾಡಿದವರು. ವೈಚಾರಿಕತೆಗೆ ಪ್ರಾಧಾನ್ಯ ನೀಡಲು ಉತ್ತೇಜಿಸಿದವರು.
* ಇಂದಿಗೂ ಸಂದೇಹಗಳಿಗೆ ಪರಿಹಾರ ಅರಸಿ ಬರುವವರಿಗೆ ಮಾರ್ಗದರ್ಶನ ನೀಡುತ್ತಿರುವವರು. ಸಾಪ್ತಾಹಿಕ ಸತ್ಸಂಗದಲ್ಲಿ ಅಮೂಲ್ಯ ಉಪದೇಶ ನೀಡುತ್ತಿರುವವರು.
     ವಯಸ್ಸಿನ ಕುರಿತು ಅಧಿಕೃತ ದಾಖಲೆ ಇಲ್ಲವೆಂಬ ಕಾರಣಕ್ಕೆ ಈ ದೀರ್ಘಾಯಸ್ಸಿನ ಶತಾಯುಷಿ ದಾಖಲೆಗಳ ಕಡತಕ್ಕೆ ಸೇರಿಲ್ಲದಿರುವುದು ವಿಷಾದದ ಸಂಗತಿ. ಇವರಿಗೆ ಈ ಕುರಿತು ಆಸಕ್ತಿಯೂ ಇಲ್ಲ. ನನ್ನ ಪಾಲಿಗೆ ಇವರು ನನ್ನ ಮಾನಸಿಕ ಗುರುಗಳು. ಗುರುಗಳಿಗೆ ನಮಿಸುತ್ತಾ ಅವರು ನಮ್ಮೆಲ್ಲರಿಗೂ ಇದೇ ರೀತಿ ಮಾರ್ಗದರ್ಶನ ಮಾಡುತ್ತಾ ಚಿರಕಾಲ ಬಾಳಲಿ ಎಂದು ಪ್ರಾರ್ಥಿಸುವೆ.
-ಕ.ವೆಂ.ನಾಗರಾಜ್. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ