ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಅಕ್ಟೋಬರ್ 30, 2013

ವಿಷವಿಕ್ಕಿದವಗೆ ದಯೆ ತೋರಿಸಿದ ದಯಾನಂದರು!

ಇಂದು ಮಹರ್ಷಿ ದಯಾನಂದರ ಸ್ಮರಣದಿನ!
     ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು. ಮಾರಿಷಸ್ ಸರ್ಕಾರ ಅವರ ನೆನಪಿನಲ್ಲಿ ಹೊರಡಿಸಿದ್ದ ಅಂಚೆ ಚೀಟಿಗಳ ಚಿತ್ರವಿದು.

1 ಕಾಮೆಂಟ್‌:

  1. Rajesh Rao ಫೇಸ್ ಬುಕ್ಕಿನಲ್ಲಿ:
    ಈ ಲೇಖನವನ್ನು ಪ್ರಕಟಿಸದೇ ಇರಲಾಗಲಿಲ್ಲ...ಮಾತೆತ್ತಿದರೆ ದಯೆಗೆ ಯೇಸು, ತೆರೇಸಾರೇ ಭೂಷಣ ಅನ್ನುವವರು ಸ್ವಲ್ಪ ಈ ಕಡೆ ನೋಡಬೇಕು...ನಾವಂತೂ ಮರೆತು ಬಿಟ್ಟಿದ್ದೇವೆ. ಆ ಮಾರಿಷಸ್ ಸರಕಾರಕ್ಕೆ ನನ್ನದೊಂದು ನಮಸ್ತೆ.
    ಹಾಗೆಯೇ ಎಲ್ಲ ಸಹೃದಯರು ಶ್ರೀಯುತ Kavi Nagaraj ಅವರ ಬ್ಲಾಗ್ ಅನ್ನು ಒಮ್ಮೆ ನೋಡಿ...ಅದು ಮಾಹಿತಿಗಳ ಕಣಜ
    http://vedajeevana.blogspot.in/
    ( ಶ್ರೀಯುತ Kavi Nagaraj ಅವರ ಕ್ಷಮೆ ಕೋರಿ)
    Guruprasad Acharya, Ratna Jayanth and 14 others like this.
    4 shares
    Venki Hegade
    ಭಾರತದ ಆಧ್ಯತ್ಮಿಕ ಪುರುಷರ ಅರಿವು...ನಮಗಿಲ್ಲದೇ (ನಮ್ಮ ಘನವೆತ್ತ ಸರ್ಕಾರಕ್ಕ್ಕೆ) ಇದ್ದರೂ .............ಅವರಿಗಿರುವ ನೆನಪು ಆದರ. ಗೌರವ... ನಮಗಿಲ್ಲದೇ ಇರುವದರಿಂದಲೇ.... ಹೊರದೇಶದಲ್ಲಿಯೇ ನಮ್ಮ ಶಂಖನಾದ ಮೊಳಗುತ್ತಿರುವುದು......
    Kiran KS
    Never knew about this stamp!

    ಪ್ರತ್ಯುತ್ತರಅಳಿಸಿ