ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಫೆಬ್ರವರಿ 6, 2012

ನೀನು ಮಗನೋ? ಅತಿಥಿಯೋ?


     ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕ ಶ್ರೀ ಸುರೇಶ ಕುಲಕರ್ಣಿಯವರ ವಿದ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. "ಇಲ್ಲ, ಸಕ್ಕರೆ ಖಾಲಿಯಾಗಿದೆ." ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!! ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ "ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು!" ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
     ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು "ಇಲ್ಲಿ ನೋಡೋ,  ಈ ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!"

    ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?
-ಹರಿಹರಪುರ ಶ್ರೀಧರ್.               

2 ಕಾಮೆಂಟ್‌ಗಳು: