ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಸೆಪ್ಟೆಂಬರ್ 16, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -2 : ದೇವರೆಲ್ಲಿದ್ದಾನೆ?




ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎಂದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! (ಇಲ್ಲಿ ಒಂದು ವೇದ ಮಂತ್ರ ಉಲ್ಲೇಖಿಸಿ ಹೇಳುತ್ತಾರೆ:) ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ದೇವರಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ!. (ಬಹಳ ವರ್ಷದ ಹಿಂದೆ) ಒಬ್ಬ ಶೆಟ್ಟಿ ಬೆಳಿಗ್ಗೆ ಬಂದಾಗ ಖುಷಿಯಲ್ಲಿದ್ದವನು ಸಾಯಂಕಾಲ ಮುಖ ಸಪ್ಪಗೆ ಹಾಕಿಕೊಂಡು ಬಂದ. ವಿಚಾರಿಸಿದರೆ 'ಕುದುರೆ ರೇಸಿನಲ್ಲಿ ಎಲ್ಲಾ ಕಳೆದುಕೊಂಡೆ. ಇಪ್ಪತ್ತೈದು ರೂಪಾಯಿ ಕೊಟ್ಟಿರಿ, ಶಿವಮೊಗ್ಗಕ್ಕೆ ಹೋಗಿ ವಾಪಸು ಕಳಿಸುತ್ತೇನೆ' ಅಂತ ಹೇಳಿದ. ಇದು ಭಗವದ್ಭಕ್ತರ ಲಕ್ಷಣವಾ? ಕುದುರೆ ಜೂಜಾಡುವುದು? (ಒಂದು ವೇದ ಮಂತ್ರವನ್ನು ಉಲ್ಲೇಖಿಸಿ) ಜೂಜಾಡಬಾರದು, ಕಷ್ಟಪಟ್ಟು ದುಡಿ, ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸಿಟ್ಟುಕೊಳ್ಳುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ತ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. ಸರ್ವೇಜನಾಃ ಸುಖಿನೋ ಭವಂತು. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
**************
-ಕ.ವೆಂ.ನಾಗರಾಜ್.

7 ಕಾಮೆಂಟ್‌ಗಳು:

  1. my poem "sakshatkara" resemble your comment on GOD.please visit my blog suragange.blogspot.com to see complete poem

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಇವರಿಂದ ಕಮೆಂಟ್ ಅಳಿಸಿ: ವೇದ ಜೀವನ


    ಹರಿಹರಪುರ ಶ್ರೀಧರ್ ಹೇಳುತ್ತಾರೆ...
    ಶ್ರೀ ಸುಧಾಕರ ಚತುರ್ವೇದಿಯವರ ಮಾತುಗಳಲ್ಲಿ ಕೇವಲ ಪ್ರತಿಶತ ಒಂದು ನನಗೆ ಒಪ್ಪಿಗೆ ಇಲ್ಲ. ಅದನ್ನು ಆಮೇಲೆ ಹೇಳುವೆ. ಉಳಿದಂತೆ ಎಲ್ಲವೂ ಒಬ್ಬ ಶ್ರೇಷ್ಠ ಮಾನವನಾಗಲು ಅಗತ್ಯವಾದ ಸಂಗತಿಗಳು.ಪ್ರತಿಶತ ಒಂದು ವಿರೋಧದ ಜೊತೆ ಜೊತೆಯಲ್ಲೇ ನಾನು ಪಂಡಿತ್ ಜಿ ಯವರ ವಿಚಾರವನ್ನು ಒಪ್ಪುವೆ.
    ಇನ್ನು ಒಪ್ಪದಿರುವ ವಿಚಾರ ಯಾವುದೆಂದರೆ ಮೂರ್ತಿ ಪೂಜೆಯನ್ನು ಅತಿ ಲಘುವಾಗಿ ಅಪಹಾಸ್ಯ ಮಾಡುವ ರೀತಿ. ಲೇಖನದಲ್ಲಿ ಅದರ ಅನೇಕ ಉಲ್ಲೇಖಗಳಿವೆ.
    ತಿರುಪತಿ ತಿಮ್ಮಪ್ಪನಿಗೆ ಕೋಟಿ ಬೆಲೆಬಾಳುವ ಕಿರೀಟ ತೊಡಿಸುವ ಭಕ್ತನ ಬಗ್ಗೆ ಪಂಡಿತ್ ಜಿ ನಿಲುವು ಸರಿ, ಆದರೆ ತಾನು ತುತ್ತು ಅನ್ನ ಉಣ್ಣುವ ಮುಂಚೆ ಇದು ಭಗವಂತ ಕೊಟ್ಟಿದ್ದೆಂದು ಅವನ ಮುಂದೆ ಇಟ್ಟು ತಾನು ಪ್ರಸಾದರೂಪದಲ್ಲಿ ಸ್ವೀಕರಿಸುವ ಭಕ್ತನಲ್ಲಿ ಅದೆಂತಹ ಭಾವ ಇರುತ್ತದೆ, ಗೊತ್ತಾ? ನೈವೇದ್ಯ ಮಾಡಿದವನಿಗೆ ದೇವರು ಅದನ್ನು ತಿನ್ನುವುದಿಲ್ಲವೆಂದು ಖಂಡಿತವಾಗಿಯೂ ಅರಿವಿದೆ. ಆದರೆ ಅವನ ಭಾವನೆ ಇದೆಯಲ್ಲಾ! ಅದು ಬೆಲೆ ಕಟ್ಟಲಾಗದು. ಭಾವನಾರಹಿತ ಜೀವನ ಅದು ಒಂದು ಜೀವನವೇ ಅಲ್ಲವೆಂಬುದು ನನ್ನ ಭಾವನೆ. ಯಾರ ಭಾವನೆಗೂ ಪೆಟ್ಟನ್ನು ಯಾರು ಕೊಟ್ಟರೂ ತಪ್ಪೇ.

    ಪ್ರತ್ಯುತ್ತರಅಳಿಸಿ
  4. "ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ."

    ನೀವು ಈ ರೀತಿ ತರ್ಕ ಮಾಡಿದರೆ, ನನ್ನ ತರ್ಕ ಹೀಗಿದೆ ನೋಡಿ,.

    " ಭಗವಂತನು ನಿಜವಾಗಿಯೂ ಸರ್ವರಕ್ಷಕ ನಾಗಿದ್ದಾನೆಯೇ.? ಒಂದು ವೇಳೆ ಅವನು ಸರ್ವರಕ್ಷಕನಾಗಿದ್ದರೆ ಜನರಿಗೆ ಹಸಿವು,ಬಡತನದಂತಹ ಕಷ್ಟ ಬರುತ್ತಲೇ ಇರುತ್ತಿರಲಿಲ್ಲ. ಆದರೆ ಹಾಗೆ ಕಷ್ಟ ಪಡುವ ಜನರಿದ್ದಾರೆ.ಆದ್ದರಿಂದ ಭಗವಂತನು ಸರ್ವವ್ಯಾಪ್ತನೂ ಅಲ್ಲ, ಸರ್ವರಕ್ಷಕನೂ ಅಲ್ಲ."

    ಹೀಗೆ ತರ್ಕ ಮಾಡಿದಲ್ಲಿ ಏನು ಉತ್ತರ ಕೊಡಲು ಸಾಧ್ಯ.?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು, ಭೀಮಸೇನರೇ. ನಮ್ಮ ರಕ್ಷಕರು ನಾವೇನೇ! ಬೇರೆಯವರಲ್ಲ.
      ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ.
      ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
      ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
      [ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಯಿಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.
      ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ತಾನು ಮುಕ್ತನಾಗುತ್ತೇನೆಂದು ಭಾವಿಸುವುದು ತರವಲ್ಲ. ಈ ಬಗ್ಗೆ ಅಜ್ಞಾನದಿಂದ ದೂರ ಸರಿಯಬೇಕು. . ಭಗವಂತನ ರಾಜ್ಯ ಬೇರೆಲ್ಲೋ ತೇಲಾಡುತ್ತಿಲ್ಲ. ಸರ್ವವ್ಯಾಪಕನಾದ ದೇವರ ರಾಜ್ಯ ಇಲ್ಲಿಯೇ ಇದೆ.

      ಅಳಿಸಿ
  5. Bolde GnanadevYesterday 21:361
    ಲೇಖನ ಅರ್ಥಪೂರ್ಣ . ಪರಿಪೂರ್ಣ ಅಸ್ತಿತ್ವದ ಪರಮಾತ್ಮನ ಸಂಕೇತ ವಾಗಿ ಮನುಷ್ಯ ವಿಗ್ರಹ ಮಂದಿರಗಳನ್ನು ಸೃಷ್ಟಿಸಿದ . ಅದೊಂದು ಪ್ರತಿಮೆ ಅಷ್ಟೇ , ಒಂದು ರಾಷ್ಟ್ರದ ಪ್ರತೀಕ ಪ್ರತಿಷ್ಥೆ ಅದರ ಧ್ವಜ ಬಾವುಟ ದಲ್ಲಿ ಕಾಣುವ ಹಾಗೆ. ಇದೊಂದು ಮಾನವನ ಸುಂದರ ಕಲ್ಪನೆ. ಪಂಡಿತ ಚತುರ್ವೆದಿ ಯವರು ಈ ನಿಟ್ಟಿನಲ್ಲಿಯೂ ಚಿಂತಿಸಬೇಕು ., 
    Kavi Nagaraj10:07
    ಧನ್ಯವಾದಗಳು, ಜ್ಞಾನದೇವರೇ. ನಿಮ್ಮ ಅನಿಸಿಕೆ ಸರಿ. ಆದರೆ, ಕೇವಲ ಪ್ರತೀಕದೊಳಗೆ ಮುಳುಗಿ, ಮೂಲತತ್ವವನ್ನು ಮರೆಯಬಾರದು ಎಂಬುದು ಸಾರ.
    Gajanana Naik, Sumana Jois, Rudresh Rajashekharaiah and 6 others like this.

    Jayanth Ramachar ಆ ಗೊಂಬೆಗೆ ಏನು ಗೊತ್ತಾಗುತ್ತೆ? ಕವಿಗಳೇ, ಅದು ಗೊಂಬೆ ಅಲ್ಲ.... ಕಲಿಯುಗದ ಪ್ರತ್ಯಕ್ಷ ದೇವರು.
    22 hours ago ·
    Kavi Nagaraj
    :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Bolde GnanadevYesterday 21:521
      ಹೌದು , ನಾವು ಪ್ರತೀಕಗಳನ್ನು ಮೀರಿ ಬೆಳೆಯಬೆಕು. ಪ್ರತೀಕದ ಮಿತಿ ಮತ್ತು ವ್ಯಾಪ್ತಿಯನ್ನೂ ಅರಿತು ಅದರ ಸೀಮೋಲ್ಲಂಘನೆ ಯೇ ಮನುಷ್ಯನ ವಿವೇಕವಾಗಬೇಕು

      ಅಳಿಸಿ