ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 28, 2010

ಸ್ವಾರ್ಥ



         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ

ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗುವು ಬಂದೀತೆಂದು ಹಲ್ಲು ಮುರಿದಿತ್ತು

ಓಡಿ ಹೋದಾರೆಂದು ಕಾಲ ತುಂಡರಿಸಿತ್ತು
ಬೇಡವೆಂದವರ ಕೈಯ ಕಡಿದಿತ್ತು

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು

ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]

ಭಾನುವಾರ, ಜುಲೈ 25, 2010

ಏನಂತೆ? ? . . .! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!

? ? ! !