ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 26, 2013

ಚತುರ್ವಿಧ ಪುರುಷಾರ್ಥಗಳು - ೨: ಕಾಮ, ಮೋಕ್ಷ

     ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ.
ಕಾಮ:
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಕಾಮ - ಇದು ಎರಡು ಅಲಗಿನ ಚೂಪಾದ ಖಡ್ಗ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಈ ಕಾಮಕ್ಕೇ! ಕಾಮ ಎಂದಾಕ್ಷಣ ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದು ಎಂಬ ಭಾವನೆ ಮೂಡುವುದು ಸಹಜ. ಆದರೆ ಕಾಮ ಎಂದರೆ ಇಷ್ಟೇ ಅಲ್ಲ, ಇದೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಗಳುಂಟಾಗುತ್ತವೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರೇ, ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸುಳಿಗೆ ಸಿಕ್ಕಿ ಹಾಳಾದವರಿದ್ದಾರೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ. 
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ|| 
     ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     "ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಗೆ ಈ ತೃತೀಯ ಪುರುಷಾರ್ಥದಲ್ಲಿ ಸ್ಥಾನವಿಲ್ಲ.   
ಮೋಕ್ಷ:
     ಚತುರ್ಥ ಪುರುಷಾರ್ಥವಾದ ಮೋಕ್ಷ ಮಾನವಜೀವಿಗಳ ಅಂತಿಮ ಸಾಧನೆಯ ಹಂತ. ಈ ಮೋಕ್ಷ ಎಂದರೆ ಏನು? ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರನ್ನು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ವೇದಗಳು ಮೇಲಿನ ಎಲ್ಲಾ ಕಲ್ಪನೆಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತವೆ. ಸರ್ವವ್ಯಾಪಿಯಾದ ಪರಮಾತ್ಮ ತನಗಾಗಿಯೇ ಒಂದು ಪ್ರತ್ಯೇಕ ವಾಸಸ್ಥಾನವನ್ನು ಹೊಂದಿದ್ದಾನೆಂದರೆ ಅವನ ಸರ್ವವ್ಯಾಪಕತ್ವವನ್ನು ಅಣಕಿಸಿದಂತೆಯೇ ಸರಿ. ಋಗ್ವೇದದ ಈ ಮಂತ್ರ ನೋಡಿ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     "ವಿಶ್ವದ ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಎಲ್ಲೆಡೆಯೂ ಮುಖವುಳ್ಳ, ಎಲ್ಲೆಡೆಯೂ ಬಾಹುಗಳನ್ನುಳ್ಳ, ಎಲ್ಲೆಡೆಯೂ ಪಾದಗಳನ್ನುಳ್ಳ ಸರ್ವಕರ್ತೃ ಒಬ್ಬ ದೇವ ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ, ಸೃಷ್ಟಿ, ಸ್ಥಿತಿ, ಲಯಕಾರಕನಾಗಿ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ" ಎನ್ನುವ ಈ ಮಂತ್ರದಲ್ಲಿ ಬರುವ ಒಬ್ಬ ದೇವರಿಗೆ ಅನೇಕ ಕಣ್ಣುಗಳು, ಕೈಕಾಲುಗಳು ಅಂದರೆ ಆತ ಸರ್ವವ್ಯಾಪಿ, ಸರ್ವಕರ್ತೃ ಎಂದು. ಬ್ರಹ್ಮಾಂಡದ ಅಣು ಅಣುವಿನಲ್ಲಿಯೂ ಇರುವ ಇಂತಹ ದೇವನಿಗೆ ಪ್ರತ್ಯೇಕ ವಾಸಸ್ಥಾನವೇ? ಜೀವಾತ್ಮರೂ ಸಹ ಅನಾದಿ ಮತ್ತು ಅನಂತರು ಎನ್ನುತ್ತದೆ ವೇದ. ಕರ್ಮಫಲಕ್ಕನುಸಾರವಾಗಿ ವಿವಿಧ ಜನ್ಮಗಳನ್ನು ತಾಳುತ್ತಾರೆ ಎಂಬುದನ್ನು ಪೂಜ್ಯ ಶಂಕರರು ಮನನೀಯವಾಗಿ ಹೇಳಿರುವುದು ಹೀಗೆ: "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ. . ." ಮೋಕ್ಷ ಪಡೆಯುವವರೆಗೂ ಈ ಹಾದಿಯನ್ನು ಜೀವರುಗಳು ಸವೆಸುತ್ತಿರುತ್ತಾರೆ. ಹಾಗಾದರೆ ಮೋಕ್ಷವೆಂದರೆ ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದೇ?
     ಈ ಮೋಕ್ಷ ಅನ್ನುವುದು ಸ್ವರ್ಗದಲ್ಲಿದೆ ಅಥವ ಯಾವುದೋ ಲೋಕದಲ್ಲಿದೆ ಎಂಬ ಕಲ್ಪನೆ, ದೇವರ ಆವಾಸಸ್ಥಾನವೇ ಪ್ರತ್ಯೇಕವಾಗಿ ಇದೆ ಎಂಬುದಕ್ಕೆ ಸಮನಾದ ಭ್ರಮೆಯಾಗಿದೆ. ಮೋಕ್ಷ ಅನ್ನುವುದು ಜೀವಾತ್ಮನ ಒಂದು ಸ್ಥಿತಿ ಅಷ್ಟೇ ಆಗಿದೆ. ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದು ಮೋಕ್ಷವೆಂದಾದರೆ, ಮೋಕ್ಷದ ಸ್ಥಿತಿಯಲ್ಲಿ ಜೀವಾತ್ಮಕ್ಕೆ ದೇಹದ ಬಂಧನವಾಗಲೀ, ಇಂದ್ರಿಯ, ಮನಸ್ಸು, ಬುದ್ಧಿಗಳ ಬಂಧನವಾಗಲೀ ಇರದೆ  ಮುಕ್ತ ಸ್ಥಿತಿಯಲ್ಲಿ ಅಶರೀರವಾಗಿರುತ್ತದೆ. ಭೌತಿಕ ಜಗತ್ತಿನ ಸಂಪರ್ಕವಿಲ್ಲದೆ, ಆ ಜಗತ್ತಿನ ತಾಪಗಳಿಂದ ಬಿಡುಗಡೆ ಹೊಂದಿ ಕೇವಲ ಬ್ರಹ್ಮಾನಂದ ಅನುಭವಿಸುತ್ತಿರುತ್ತದೆ ಮತ್ತು ಆ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಚಲಿಸಬಹುದಾಗಿರುತ್ತದೆ. ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹೊಂದಿದ್ದ ಕಾರಣದಿಂದ ಮೊದಲು ಅನುಭವಿಸುತ್ತಿದ್ದ ಸುಖ-ದುಃಖ, ನೋವು-ನಲಿವುಗಳಿಂದ ದೂರವಾಗಿರುತ್ತದೆ. ಈ ಸ್ಥಿತಿ ತಲುಪಬೇಕಾದರೆ ಜೀವಿಯು ಜ್ಞಾನ, ಕರ್ಮ, ಉಪಾಸನೆಗಳಿಂದ ಕೂಡಿದ ಧಾರ್ಮಿಕ ಜೀವನವನ್ನು ಪೂರ್ಣ ರೀತಿಯಲ್ಲಿ ಅನುಸರಿಸಿರಬೇಕಾಗುತ್ತದೆ. ಸಾಧನಾಪಥದಲ್ಲಿ ಸಾಗಿ, ಪರಮಾತ್ಮನ ಸ್ವರೂಪದ ಜ್ಞಾನಾನುಭೂತಿ ಪಡೆಯದೆ ಮೋಕ್ಷದ ಈ ಸ್ಥಿತಿ ತಲುಪಲಾಗದು. ನಮ್ಮ ಎಲ್ಲಾ ಸತ್ಕರ್ಮಗಳು, ಸಾಧನೆಗಳು ಪರಮಾತ್ಮನನ್ನು ಅರಿಯುವಲ್ಲಿ ಪರ್ಯವಸಾನವಾಗುವವರೆಗೆ ಮೋಕ್ಷ ಸಿಗಲಾರದು. ಯಜುರ್ವೇದದ ಈ ಮಂತ್ರ ಹೇಳುತ್ತದೆ:
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | 
ತಮೇವ ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     ಇದರ ಅರ್ಥ ಹೀಗಿದೆ: "ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಈ ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ತಿಳಿದುಕೊಂಡು ಮಾನವನು, ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗವು ಇರುವುದೇ ಇಲ್ಲ." ನಮಗೆ ಮುಕ್ತಿ ಸಿಗಲು ನಾವೇ ಪ್ರಯತ್ನಿಸಬೇಕೇ ಹೊರತು, ಇತರರು ನಮ್ಮನ್ನು ಮಧ್ಯಸ್ತಿಕೆದಾರರಾಗಿ ಆ ಸ್ಥಿತಿಗೆ ತಲುಪಿಸಲಾರರು. ಕಾಯಾ, ವಾಚಾ, ಮನಸಾ ಪರಿಶುದ್ಧರಾಗಿ, ಜ್ಞಾನ, ಕರ್ಮ, ಉಪಾಸನೆಗಳಿಂದ ಧರ್ಮಮಾರ್ಗದಲ್ಲಿ ನಿರ್ಮಲಾಂತಃಕರಣದಿಂದ ನಿಜಮಾನವರಾಗಿ ಬಾಳಿದರೆ ಪರಮಾತ್ಮನ ಸ್ವರೂಪದ ಅರಿವಾಗುವುದರೊಂದಿಗೆ, ಜೀವಿ ತಾಪತ್ರಯಗಳಿಂದ ಹೊರತಾಗಿ ಬ್ರಹ್ಮಾನಂದದ ಸ್ಥಿತಿಯಾದ ಮೋಕ್ಷ ಪಡೆಯಲು ಅರ್ಹನಾದಾನು. ಮೋಕ್ಷದ ಸ್ಥಿತಿ ಅಂದರೇನು ಎಂದು ತಿಳಿಸುವ ಈ ಋಗ್ವೇದವಾಣಿ ಆಲಿಸಿ:
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ | 
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     "ಯಾವ ಸ್ಥಿತಿಯಲ್ಲಿ, ಕಾಮನೆಗಳೆಲ್ಲಾ ತೀರಿಹೋದ ಕಾಮನೆಗಳಾಗಿವೆಯೋ ಮತ್ತು ಯಾವ ಸ್ಥಿತಿಯಲ್ಲಿ ಜಗದ್ಬಂಧುವಾದ ನಿನ್ನ ತಾಪರಹಿತವಾದ ಇರುವಿಕೆದೆಯೋ ಮತ್ತು ಯಾವ ಸ್ಥಿತಿಯಲ್ಲಿ ಆತ್ಮನನ್ನು ಎತ್ತಿಹಿಡಿಯುವ ಆನಂದ ಮತ್ತು ತೃಪ್ತಿ ಇರುವುವೋ, ಆ ಸ್ಥಿತಿಯಲ್ಲಿ ಅಮರನಾದ ನನ್ನನ್ನು ಇಡು. ಬಾಳನ್ನು ಸರಸಗೊಳಿಸುವ ಸ್ವಾಮಿ, ಇಂದ್ರಿಯವಂತನಾದ ಜೀವನಿಗಾಗಿ ಹರಿದು ಬಾ, ಸುರಿದು ಬಾ." ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ - ಇದೇ ಮೋಕ್ಷಾವಸ್ಥೆ. 
     ಜೀವಾತ್ಮ ಅನಾದಿ ಮತ್ತು ಅನಂತವೆನ್ನುತ್ತಾರಲ್ಲಾ? ಜೀವಾತ್ಮರು ಹೊಸದಾಗಿ ಹುಟ್ಟುವುದಿಲ್ಲವೆಂದಾದರೆ ಹುಟ್ಟು-ಸಾವಿನ ಚಕ್ರದಿಂದ ಹೊರಬರುವ ಮೋಕ್ಷ ಅಂತ್ಯವಲ್ಲವೇ ಎನ್ನುವ ಸಂಶಯ ಬರುತ್ತದೆ. ಹೊಸದಾಗಿ ಹುಟ್ಟುವುದಿಲ್ಲವೆಂಬುದು ನಿಜವಾದರೆ, ಒಂದಿಲ್ಲೊಂದು ಕಾಲದಲ್ಲಿ ಎಲ್ಲರೂ ಮೋಕ್ಷಾವಸ್ಥೆಯನ್ನು ತಲುಪುತ್ತಾರೆಂದಾದರೆ ಈ ಜಗತ್ತಿಗೆ ಅರ್ಥವೆಲ್ಲಿ ಉಳಿಯುತ್ತದೆ? ವಾಸ್ತವದಲ್ಲಿ ಮೋಕ್ಷ ಎನ್ನುವುದು ಅಂತ್ಯವಲ್ಲ. ಅದು ದೀರ್ಘಾವಧಿಯವರೆಗೆ ಅಂದರೆ ಒಂದು ಪರಾಂತ ಕಾಲದವರೆಗೆ ಇರುವ ಸ್ಥಿತಿಯಾಗಿದ್ದು ನಂತರದಲ್ಲಿ ಪುನಃ ಹುಟ್ಟು-ಸಾವುಗಳ ಚಕ್ರ ಆರಂಭವಾಗುತ್ತದೆ. ಈ ಪರಾಂತಕಾಲ ಅನ್ನುವುದು ನಮ್ಮ ಕಲ್ಪನೆಗೆ ಎಟುಕದ ಬಹಳ ದೀರ್ಘವಾದ ಕಾಲವಾಗಿದೆ ಮತ್ತು ಇದು ಇಷ್ಟೊಂದು ದೀರ್ಘವಾದ ಕಾಲವಾದುದರಿಂದಲೇ ಮೋಕ್ಷವೆಂದರೆ ಹುಟ್ಟು-ಸಾವುಗಳಾಚೆಗಿನ ಸ್ಥಿತಿಯೆನ್ನುತ್ತಾರೆ. ವೈದಿಕ ಸಿದ್ಧಾಂತದ ಪ್ರಕಾರ ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷಗಳು). ಇದು ಒಂದು ಪರಾಂತಕಾಲ. ಇಷ್ಟು ದೀರ್ಘವಾದ ಕಾಲ ಮುಕ್ತಸ್ಥಿತಿಯಲ್ಲಿ ಇರುವುದೆಂದರೆ ಸಾಮಾನ್ಯವಾದ ಸಂಗತಿಯಲ್ಲ. ಜಿಜ್ಞಾಸುಗಳು, ಸಾಧಕರುಗಳಿಗೆ ಚತುರ್ಥ ಪುರುಷಾರ್ಥಗಳನ್ನು ಸಾಧಿಸಲು ವೇದಗಳು ಅದ್ಭುತ ಮತ್ತು ವಿಚಾರಸಮ್ಮತ ಮಾರ್ಗದರ್ಶನ ನೀಡುತ್ತಿವೆ. 
(ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನಪಥ')
-ಕ.ವೆಂ.ನಾಗರಾಜ್.


ವೇದಸುಧೆ » Vedasudhe

ವೇದಸುಧೆ » Vedasudhe

ಸೋಮವಾರ, ಆಗಸ್ಟ್ 12, 2013

ವೇದೋಕ್ತ ಜೀವನ ಶಿಬಿರ



ವೇದಭಾರತೀ, ಹಾಸನ

ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.

14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ

ಬುಧವಾರ, ಆಗಸ್ಟ್ 7, 2013

ವೇದೋಕ್ತ ಜೀವನ ಶಿಬಿರ


ವೇದಭಾರತೀ, ಹಾಸನ


ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು


ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ

ಶಿಬಿರದ ಬಗ್ಗೆ ಕೆಲವು ಮಾಹಿತಿಗಳು:
1.ಬೆಳಿಗ್ಗೆ ಮತ್ತು ಸಂಜೆ  ಸಂಧ್ಯೋಪಾಸನೆ  ಮತ್ತು ಅಗ್ನಿಹೋತ್ರ ಅಭ್ಯಾಸ
2.ವೇದಮಂತ್ರಾಭ್ಯಾಸ
3.ವೇದೋಕ್ತ ಜೀವನದ ಬಗ್ಗೆ ಶರ್ಮರ ಮಾರ್ಗದರ್ಶನ[ ದಿನದಲ್ಲಿ ನಾಲ್ಕು   ಅವಧಿಗಳು]
4.ಪ್ರತಿದಿನ  ಸಂಜೆ ಶ್ರೀಸುಧಾಕರಶರ್ಮರ ಸಾರ್ವಜನಿಕ ಉಪನ್ಯಾಸ
5.ಮುಕ್ತ ಚರ್ಚೆಗೆ ಅವಕಾಶ
6.ಸರಳವಾದ ಊಟೋಪಚಾರ
7.ತಂಗಲು ವ್ಯವಸ್ಥೆ
8.ಶಿಬಿರಶುಲ್ಕ ರೂ: 500.00

 ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಶಿಬಿರಾರ್ಥಿಗಳು
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
8. ಗುರುಪ್ರಸಾದ್, ಭದ್ರಾವತಿ
9.ಮಹೇಶ್, ಭದ್ರಾವತಿ
10. ಕೆ.ಜಿ.ಕಾರ್ನಾಡ್,ತುಮಕೂರು
11.ಮೋಹನ್ ಕುಮಾರ್, ನಂಜನಗೂಡು
12. ಕವಿ ನಾಗರಾಜ್,ಹಾಸನ
13. ಶ್ರೀನಿವಾಸ್, AIR,ಹಾಸನ
14. ಹರಿಹರಪುರಶ್ರೀಧರ್,ಹಾಸನ
15. ಪ್ರೇಮಾ ಭಗಿನಿ,ಹಾಸನ
16. ಚಿನ್ನಪ್ಪ,ಹಾಸನ
17. ಅಶೋಕ್,ಹಾಸನ
18.ಶ್ರೀಮತೀ ಶೈಲ,ಹಾಸನ
19.ಪಾಂಡುರಂಗ ,ಹಾಸನ      
20.ಸತೀಶ್,ಹಾಸನ
21.ಲೋಕೇಶ್,ಹಾಸನ
22.ಆದಿಶೇಷ್,ಹಾಸನ
23.ಕೇಶವಮೂರ್ತಿ,ಹಾಸನ
24.ಬೈರಪ್ಪಾಜಿ ,ಹಾಸನ
25.ನಿತೀಶ್ ಭಾರಧ್ವಾಜ್,ಹಾಸನ
26. ವಿನಯ್ ಕಾಶ್ಯಪ್,ಬೆಂಗಳೂರು.
27.ಶಿವಶಂಕರ್,ಬೆಂಗಳೂರು
ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
[ಇವರುಗಳು ತಮ್ಮ ಭಾಗವಹಿಸುವಿಕೆಯನ್ನು vedasudhe@gmail.com ಗೆ ಮೇಲ್ ಮಾಡುವುದರ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು  ದೃಢಪಡಿಸಲು ಕೋರಿದೆ]
1. ಶಿವಕುಮಾರ್, ಬೆಂಗಳೂರು
2. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
3. ವಿನಯ್ ಕಾಶ್ಯಪ್, ಬೆಂಗಳೂರು
4 .ಶರಣಪ್ಪ, ಗದಗ್
5. ವಿಜಯ್ ಹೆರಗು, ಬೆಗಳೂರು
6. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
7. ಶ್ರೀ ಹರ್ಷ,ಹಾಸನ
8. ನಟರಾಜ್ ಪಂಡಿತ್,ಹಾಸನ
9. ಶ್ರೀ ನಾಥ್,ಹಾಸನ
10. ಕೆ.ವಿ.ರಾಮಸ್ವಾಮಿ, ಹಾಸನ 

ಶಿಬಿರಶುಲ್ಕವನ್ನು ಈಗಾಗಲೇ ಪಾವತಿಸಿದ್ದು  ಶಿಬಿರಾರ್ಥಿಗಳ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಶಿಬಿರಕ್ಕೆ ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಇಚ್ಛೆಯುಳ್ಳವರು vedasudhe@gmail.com ಗೆ ಮೇಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.

-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ