ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಡಿಸೆಂಬರ್ 7, 2015

ಸಾಧನಾ ಸೋಪಾನ - 13: ಪ್ರಾಣಾಧಾರ ವಾಯು



     ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಪಂಚಭೂತಗಳಲ್ಲೊಂದಾದ ವಾಯುವುನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದಕ್ಕೆ ವಾತ, ಪವನ, ಪ್ರಾಣ ಇತ್ಯಾದಿ ಹೆಸರುಗಳೂ ಇವೆ. ವಾಯುವಿನ ಪ್ರಾಮುಖ್ಯತೆ ಬಗ್ಗೆ ಒಂದು ಕಥೆಯಿದೆ. ಒಮ್ಮೆ ದೇಹದ ಅಂಗಗಳು, ಇಂದ್ರಿಯಗಳನ್ನು ನಿಯಂತ್ರಿಸುವ ದೇವರುಗಳಲ್ಲಿ ಯಾರು ಹೆಚ್ಚು ಎಂಬ ಬಗ್ಗೆ ಸ್ಪರ್ಧೆ ಉಂಟಾಯಿತಂತೆ. ಒಂದರ ನಂತರ ಒಂದರಂತೆ ಅವರುಗಳು ದೇಹವನ್ನು ಬಿಟ್ಟು ಹೋಗಿ ಪರಿಣಾಮ ವೀಕ್ಷಿಸಿದರಂತೆ. ಒಬ್ಬೊಬ್ಬ ದೇವರು ಹೊರಹೋದಾಗಲೂ ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು, ಇತ್ಯಾದಿ ಪರಿಣಾಮಗಳಾಗಿ ಏರುಪೇರುಗಳಾಗುತ್ತಿದ್ದವಂತೆ. ಕೊನೆಯಲ್ಲಿ ವಾಯುದೇವ ಬಿಟ್ಟು ಹೊರಡಲು ಅನುವಾಗುತ್ತಿದ್ದಂತೆ ಇತರ ಎಲ್ಲಾ ದೇವರುಗಳಿಗೂ ಬಲವಂತವಾಗಿ ಹೊರದೂಡಲ್ಪಡುವ ಅನುಭವವಾಯಿತಂತೆ. ವಾಯು ಇದ್ದರೆ ಮಾತ್ರ ತಮ್ಮ ಅಸ್ತಿತ್ವ, ಇಲ್ಲದಿದ್ದರೆ ತಮಗೆ ಅಸ್ತಿತ್ವ ಇಲ್ಲ ಎಂಬುದನ್ನು ಮನಗಂಡ ಅವರುಗಳು ವಾಯುವೇ ಪ್ರಧಾನ ಎಂದು ಒಪ್ಪಿಕೊಂಡರಂತೆ. ಇದು ಕಲ್ಪಿತ ಕಥೆಯಾದರೂ ಇದರಲ್ಲಿ ಸತ್ಯವಿದೆ, ಸತ್ವವಿದೆ.
     ಜೀವಿಯ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 30 ಸಲ ಉಸಿರಾಡುತ್ತಾನೆ ಎಂದಿಟ್ಟುಕೊಂಡರೆ ಮತ್ತು 100 ವರ್ಷ ಬದುಕುತ್ತಾನೆ ಎಂದುಕೊಂಡರೆ ಜೀವಿತಾವಧಿಯಲ್ಲಿ ಒಟ್ಟು 30x60x24x365x100 ಸಲ ಉಸಿರಾಡುತ್ತಾನೆ! ಒಂದೊಂದು ಸಲ ಉಸಿರಾಡಿದಾಗಲೂ ಅಷ್ಟರ ಮಟ್ಟಿಗೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ನಿಲ್ಲುತ್ತದೆ, ಯಾರಿಗೆ ಗೊತ್ತು? ಈ ಉಸಿರಿನ ನಿಯಂತ್ರಣ ಯಾರದ್ದು? ನಮ್ಮದಂತೂ ಇರಲಾರದು. ಏಕೆಂದರೆ ನಿದ್ದೆ ಮಾಡುತ್ತಿರುವಾಗಲೂ, ಎಚ್ಚರವಿಲ್ಲದಿರುವಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ! ನಮ್ಮ ನಿಯಂತ್ರಣವಿದ್ದಿದ್ದರೆ ನಾವು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಏಕೆಂದರೆ, ಸಾಯುವುದಕ್ಕೆ ಯಾರು ಇಷ್ಟ ಪಡುತ್ತಾರೆ?
     ಉಸಿರು ಜೀವನಾಧಾರವಾಗಿರುವಂತೆಯೇ ನಮ್ಮನ್ನು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತೇವೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಆದ್ದರಿಂದ ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾದ ಕ್ರಮವಾಗಿದೆ. ಪ್ರಾಣಾಯಾಮದಲ್ಲಿ ಉಸಿರನ್ನು ಹೊರಬಿಡುವುದಕ್ಕೆ ರೇಚಕ, ಸಾಧ್ಯವಾದಷ್ಟು ಉಸಿರನ್ನು ಹೊರಗೇ ತಡೆಹಿಡಿದಿಡುವುದಕ್ಕೆ ಬಾಹ್ಯ ಕುಂಭಕ, ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕ, ಸಾಧ್ಯವಾದಷ್ಟು ಉಸಿರನ್ನು ಒಳಗೇ ತಡೆಹಿಡಿದಿಡುವುದಕ್ಕೆ ಅಭ್ಯಂತರ ಕುಂಭಕ ಎನ್ನುತ್ತಾರೆ. ಈ ನಾಲ್ಕೂ ಸೇರಿದರೆ ಒಂದು ಪ್ರಾಣಾಯಾಮ ಎನ್ನುತ್ತಾರೆ. ವಿವಿಧ ರೀತಿಯ ಪ್ರಾಣಾಯಾಮಗಳಿದ್ದು ಅದರಿಂದ ದೇಹದ ಕಾಯಿಲೆಗಳ ಉಪಶಮನಕ್ಕೆ ಸಹಕಾರಿಯಾಗುವಂತಹವೂ ಇವೆ. ತಿಳಿದವರಿಂದ ಕಲಿತು ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು. ಸರಿಯಾದ ವಿದ್ಯೆ ಕಲಿಸುವವರು ಸಿಗದಿದ್ದರೆ ಅಥವ ಕಲಿಯಲು ಸಾಧ್ಯವಾಗದಿದ್ದರೆ ದೀರ್ಘ ಶ್ವಾಸೋಚ್ಛ್ವಾಸಗಳೇ ಸಾಕಾಗುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಪ್ರಾಣಾಯಾಮದ ಮಂತ್ರಗಳಿವು:
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ|
     ಸರ್ವರಕ್ಷಕ ದೇವ ಸದ್ರೂಪನು, ಸರ್ವವ್ಯಾಪಿ ದೇವ ಚಿದ್ರೂಪನು, ಸರ್ವಪ್ರದ ದೇವ ಆನಂದಸ್ವರೂಪನು, ಸರ್ವಾಚ್ಛಾದಕ ದೇವ ಮಹತ್ತಮನು, ಸರ್ವ ಪ್ರಾಪ್ಯ ದೇವ ಜಗಜ್ಜನಕನು, ಜ್ಞಾನಸ್ವರೂಪ ದೇವ ತಪಃಸ್ವರೂಪನು, ಸಹನಶೀಲನು, ಅನಾದಿ ಅನಂತ ಸತ್ಯಸ್ವರೂಪನು ಎಂಬುದು ಈ ಮಂತ್ರದ ಅರ್ಥವಾಗಿದೆ. ಯಜ್ಞ ಮಾಡುವಾಗ, ಅಗ್ನಿಹೋತ್ರ, ಹೋಮ-ಹವನಗಳನ್ನು ಮಾಡುವಾಗ ಸಾಮಾನ್ಯವಾಗಿ ಈ ಮಂತ್ರವನ್ನೂ ಉಚ್ಛರಿಸಲಾಗುತ್ತದೆ:
ಓಂ ಭೂರ್ಭುವಃ ಸ್ವರಗ್ನಿ ವಾಯ್ವಾದಿತ್ಯೇಭ್ಯಃ ಸ್ವಾಹಾ| ಇದಮಗ್ನಿ ವಾಯ್ವಾದಿತ್ಯೇಭ್ಯಃ ಇದಂ ನ ಮಮ|| (ತೈತ್ತರೀಯ ಅರಣ್ಯಕ.10.3.)
     ಆ ಸಚ್ಚಿದಾನಂದ ಸ್ವರೂಪನಾದ ಪ್ರಭುವಿನ ನಾಯಕತ್ವ, ಪ್ರಾಣಾಧಾರಕತ್ವ, ಅಖಂಡತ್ವಗಳ ಅನುಭೂತಿಗಾಗಿ ಈ ಆತ್ಮನಿವೇದನೆ. ಇದು ಆ ದೇವನ ನೇತೃತ್ವ, ಪ್ರಾಣಪ್ರದತ್ವ ಮತ್ತು ಅಖಂಡತ್ವದ ಸಾಕ್ಷಾತ್ಕಾರಕ್ಕಾಗಿಯೇ ಹೊರತು ನನ್ನ ಸ್ವಾರ್ಥಕ್ಕಲ್ಲ ಎಂಬುದು ಈ ಮಂತ್ರದ ಅರ್ಥ. ಯಜ್ಞದ ಸಂದರ್ಭದಲ್ಲಿ ಅರ್ಪಿಸಲಾಗುವ ಔಷಧೀಯ ಗುಣಗಳುಳ್ಳ ಹವಿಸ್ಸು, ಸಮಿತ್ತುಗಳನ್ನು ಅಗ್ನಿ ಅರಗಿಸಿದರೆ, ವಾಯುವು ಅದನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡುತ್ತಾನೆ.
     ವೈಜ್ಞಾನಿಕವಾಗಿಯೂ ಸಹ ವಾತಾವರಣವೆಂದು ಕರೆಯಲಾಗುವ ವಾಯುವಿನ ಮಹತ್ವ ವಿವರಿಸಲಾಗಿದೆ. ವಾಯು ಒಂದು ಮಹತ್ವವಾದ ಶಕ್ತಿಯಾಗಿದ್ದು, ಈ ಜೀವನಾಧಾರ ವಾಯುವಿನ ಬಗ್ಗೆ ನಾವು ಕೃತಜ್ಞರಾಗಿರಬೇಕಿದೆ. ಪ್ರತಿ ಮಾನವ ಮಾನವನೆನಿಸಿಕೊಳ್ಳಬೇಕಾದರೆ ಜೀವಿತಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳ ಬಗ್ಗೆ ಚರ್ಚಿಸುವುದು ಇಲ್ಲಿ ಅಪ್ರಸ್ತುತವಾಗುತ್ತದೆ. ಇನ್ನು ದೇವಋಣವನ್ನು ತೀರಿಸುವುದು ಹೇಗೆ? ದೇವರ ಧ್ಯಾನ ಮಾಡುತ್ತಾ ಕೂರುವುದೇ? ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸುವುದೇ? ಇದಾವುದೂ ಅಲ್ಲ. ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದು ಅಂತ್ಯದಲ್ಲಿ ಸೇರುವುದು ಪಂಚಭೂತಗಳಲ್ಲಿಯೇ! ನಮಗೆ ದೇವರ ಅನುಭವವಾಗಬೇಕೆಂದರೆ ಪಂಚಭೂತಗಳ ಸಹಾಯದಿಂದ ಪಂಚಭೂತಗಳ ರೂಪದಲ್ಲಿಯೇ ಆಗಬೇಕು. ಈ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಪ್ರತಿ ನಮಗೆ ಜವಾಬ್ದಾರಿಯಿದೆ. ಅದೆಂದರೆ ಅವುಗಳನ್ನು ಹಾನಿ ಮಾಡದೆ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಳೂ 'ಜೀವಿಸಲು' ಅನುಕೂಲ ಮಾಡಿಕೊಡುವುದು! ಇದೇ ದೇವಋಣ ತೀರಿಸುವ ರೀತಿ!
     ವಾಯುವನ್ನು ಶುದ್ಧವಾಗಿಡುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ಗಮನಿಸೋಣ. ವಾಯುಮಾಲಿನ್ಯದಿಂದ ಜಗತ್ತು ತಲ್ಲಣಿಸುತ್ತಿದೆ. ಇದರಿಂದಾಗಿ ನೂರಾರು ರೀತಿಯ ಕಾಯಿಲೆಗಳು, ಸಾವು ಸಂಭವಿಸುವುದು, ಇತರ ಜೀವ ಜಗತ್ತುಗಳಿಗೂ ಆಪತ್ತು, ತಿನ್ನುವ ಆಹಾರ ಕಲುಷಿತವಾಗುವುದು, ಬೆಳೆಗಳು ರೋಗಗ್ರಸ್ಥವಾಗುವುದು, ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಭೋಪಾಲ್ ವಿಷಾನಿಲ ದುರಂತದಿಂದ ಸಾವಿರಾರು ಜನರು ಮೃತರಾದುದು, ಬದುಕಿರುವವರು ಶೇಷ ಜೀವನ ಪೂರ್ತಿ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿರುವುದು ನಮ್ಮ ಕಣ್ಣ ಮುಂದಿನ ಜ್ವಲಂತ ಉದಾಹರಣೆಯಾಗಿದೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷಾನಿಲಗಳು, ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಮಾನವ ಕಾರಣದಿಂದಾಗಿ ಆಗುವ ಮಾಲಿನ್ಯಗಳಿಗೆ ಉದಾಹರಣೆಯಾಗಿವೆ. ಮನೆಯ ಒಳಗೆ ಸರಿಯಾಗಿ ಗಾಳಿ, ಬೆಳಕು ಚಲಿಸಲು ಅವಕಾಶವಿಲ್ಲದಿದ್ದರೆ ಸಹ ಅಲ್ಲಿ ದೂಷಿತ ವಾತಾವರಣ ಸೃಷ್ಟಿಯಾಗುತ್ತದೆ. ವಾಯುಮಾಲಿನ್ಯದಿಂದ ಹೃದ್ರೋಗಗಳು, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳಲ್ಲದೆ ಮಕ್ಕಳು ಹುಟ್ಟುವಾಗಲೇ ಸಾಯುವ ಸಂಭವನೀಯತೆಯೂ ಇರುತ್ತದೆ.
     ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜನಪರ ಕಾಳಜಿಯುಳ್ಳ ಜನರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ತಂದು ಯೋಜಿತ ರೀತಿಯಲ್ಲಿ ನಗರಗಳ ನಿರ್ಮಾಣ, ವಾಹನಗಳ ನಿಯಂತ್ರಣ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ, ವಾಯುಶುದ್ಧೀಕರಣದ ಕುರಿತು ಕ್ರಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಭಾರತದಲ್ಲಿ ದೆಹಲಿ, ಕೊಲ್ಕತ್ತ, ಕಾನ್ಪುರ, ಲಕ್ನೌಗಳು ಅತ್ಯಂತ ಕಲುಷಿತ ನಗರಗಳೆಂದು ಹೆಸರಿಸಲ್ಪಟ್ಟಿವೆ. ಉದ್ಯಾನನಗರಿಯೆಂದು ಒಮ್ಮೆ ಹೆಸರಾಗಿದ್ದ ಬೆಂಗಳೂರನ್ನು ಇಂದು ಕಾಂಕ್ರೀಟ್ ನಗರಿ ಮಾತ್ರವಲ್ಲ ಕೊಳಚೆನಗರಿ ಎಂತಲೂ ಹೆಸರಿಸಬಹುದೇನೋ! ವೈಯಕ್ತಿಕವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಮಾಲಿನ್ಯ ಉಂಟುಮಾಡುವವರನ್ನು ತಡೆಯುವ ಕೆಲಸವನ್ನೂ ಮಾಡಿದರೆ ಇದು ಖಂಡಿತವಾಗಿ ದೇವಋಣವನ್ನು ತೀರಿಸಿದಂತೆ ಆಗುತ್ತದೆ. ಈ ವೇದಮಂತ್ರ ಹೇಳುತ್ತದೆ:
ಯಸ್ಯ ಸೂರ್ಯಶ್ಚಕ್ಷುಶ್ಚಂದ್ರಮಾಶ್ಚ ಪುನರ್ಣವಃ| ಅಗ್ನಿಂ ಯಶ್ಚಕ್ರ ಅಸ್ಯಂ ತಸ್ಮೈ ಜ್ಯೇಷ್ಠಾಯ ಬ್ರಹ್ಮಣೇ ನಮಃ|| ಯಸ್ಯ ವಾತಃ ಪ್ರಾಣಾಪಾನೌ ಚಕ್ಷುರಂಗಿರಸೋ ಭವನ್| ದಿಶೋ ಯಶ್ಚಕ್ರೇ ಪ್ರಜ್ಞಾನೀಸ್ತಸ್ಯ ಜ್ಯೇಷ್ಠಾಯ ಬ್ರಹ್ಮಣೇ ನಮಃ|| (ಅಥರ್ವ.10.7.32-34)
     ಅರ್ಥ: ಸಕಲ ಜೀವಿಗಳಿಗೆ ಆಶ್ರಯವಾದ ಭೂಮಿ ಯಾರ ಪಾದಗಳಂತಿರುವುದೋ, ವಿಶಾಲ ಅಂತರಿಕ್ಷವು ಯಾರ ಉದರಸಮಾನವಾಗಿರುವುದೋ, ದ್ಯುಲೋಕವು ಯಾರ ಶಿರದಂತೆ ಇರುವುದೋ, ಸೂರ್ಯ-ಚಂದ್ರರು ಯಾರ ಕಣ್ಣುಗಳಂತಿರುವುದೋ, ಉಜ್ವಲವಾದ ಅಗ್ನಿಯು ಯಾರ ಮುಖದಂತಿರುವುದೋ, ಸರ್ವವ್ಯಾಪಿ, ಗತಿಶೀಲ ವಾಯು ಯಾರ ಪ್ರಾಣಾಪಾನಗಳಂತಿರುವುದೋ, ಪ್ರಕಾಶಮಾನ ಕಿರಣಗಳ ಸಮೂಹ ಯಾರ ಕಣ್ಣಿನ ಬೆಳಕಿನಂತಿರುವುದೋ, ಜ್ಞಾನ ಸಾಧಕ ದಿಕ್ಕುಗಳು ಯಾರ ಕರ್ಣಗಳಿಂತಿರುವುದೋ ಆ ಬ್ರಹ್ಮಾಂಡಸ್ವರೂಪಿ ಶರೀರಧಾರಿಯಾದ, ವಸ್ತುತಃ ಅಶರೀರನಾದ ಸರ್ವಶ್ರೇಷ್ಠ ಪರಮಾತ್ಮನಿಗೆ ನಮ್ಮ ಅತ್ಯಂತ ಭಕ್ತ್ಯಾದರಗಳ ನಮನಗಳು. ಪಂಚಭೂತಗಳ ರೂಪದಲ್ಲಿ ಭಗವಂತನನ್ನು ಕಾಣಲು ಈ ಮಂತ್ರ ನಮ್ಮನ್ನು ಪ್ರೇರಿಸುವುದಿಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 12.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ