ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಸೆಪ್ಟೆಂಬರ್ 19, 2014

ಜೀವಿಯ ಮೂಲ ಅಥವ ಸೃಷ್ಟಿ ರಹಸ್ಯ


     ದಿನಾಂಕ ೨೪.೮.೨೦೧೪ರ 'ವಿಕ್ರಮ'ದಲ್ಲಿ ಪ್ರಕಟವಾಗಿರುವ 'ಜೀವಿಯ ಮೂಲ ಪತ್ತೆ!' ಎಂಬ ಸುದ್ದಿಯ ಪ್ರಕಾರ ಲಂಡನ್ನಿನ ವಿವಿಯೊಂದರ ಗಣಿತ ವಿದ್ಯಾರ್ಥಿಗಳು ಜಗತ್ತಿನಜೀವಿಯ ಮೂಲ ಯಾವುದು ಎಂಬುದನ್ನು ಕಂಡುಹಿಡಿದಿದ್ದಾರಂತೆ. ಅವರ ಸಂಶೋಧನೆಯ ಪ್ರಕಾರ ಎಲ್ಲ ಜೀವಿಗಳಿಗೂ ಮೂಲವಾಗಿ ಜಗತ್ತಿನಲ್ಲಿ ಒಂದು ಜೀವಿಯಿತ್ತು, ಅದು ಸೋರುವ ಪೊರೆಯಂಥ ದೇಹವನ್ನು ಹೊಂದಿತ್ತು. ಅದರಿಂದಲೇ ಜೀವಿಯ ಉಗಮ ಆರಂಭವಾಗಿದ್ದು ಎಂಬುದು ಇದರ ಸಾರ. ಈ ವಿಚಾರದಲ್ಲಿ ವೇದಗಳು ಹೇಳಿರುವ ವಿಚಾರದ ಬಗ್ಗೆ ತಿಳಿಯೋಣ. 
     ವೇದಗಳು ಸೃಷ್ಟಿ ರಹಸ್ಯದ ಬಗ್ಗೆ ಈಗಾಗಲೇ ಬೆಳಕು ಚೆಲ್ಲಿವೆ. ಸೃಷ್ಟಿ, ಸ್ಥಿತಿ, ಲಯಗಳು ನಿರಂತರವಾಗಿ ನಡೆಯುವ ಕ್ರಿಯೆಗಳಾಗಿದ್ದು ಈ ವಿಶ್ವ ಎಷ್ಟು ಸಲ ಉಗಮವಾಗಿದೆಯೋ, ಎಷ್ಟು ಸಲ ನಾಶವಾಗಿದೆಯೋ ದೇವರಿಗೇ ಗೊತ್ತು. ಆತ್ಮ, ಪರಮಾತ್ಮ ಮತ್ತು ಪ್ರಕೃತಿಗಳು ಅನಾದಿ, ಅನಂತ ಮತ್ತು ಅವಿನಾಶಿಯಾಗಿವೆ ಎಂಬುದು ವೇದಗಳ ಸಿದ್ಧಾಂತ. ಶೂನ್ಯದಿಂದ ಸೃಷ್ಟಿ ಸಾಧ್ಯವಿಲ್ಲವೆಂಬುದು ತಿಳಿದ ವಿಷಯವೇ. ಹಾಗಾದರೆ ಸೃಷ್ಟಿಗೆ ಸಾಧ್ಯವಾದ ವಸ್ತು ಏನಾದರೂ ಇರಲೇಬೇಕು. ಅದು ಏನು? ಋಗ್ವೇದದ ಈ ಮಂತ್ರ ನೋಡಿ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
      ಸೃಷ್ಟಿಗೆ ಮುನ್ನ ಏನೋ ಇತ್ತು, ಅಲ್ಲಿ ಅಭಾವವಾಗಲೀ, ಶೂನ್ಯವಾಗಲೀ ಇರಲಿಲ್ಲ. ಈ ವಿಶ್ವದ ಸತ್ತೆ ಅಥವಾ ಭಾವವಾಗಲೀ, ಲೋಕವಾಗಲೀ, ಆಕಾಶವಾಗಲೀ ಇರಲಿಲ್ಲ. ಆದರೆ ಆವರಿಸುವ ಏನೋ ಒಂದು ತತ್ವವಿತ್ತು. ಎಲ್ಲಿತ್ತು? ಆನಂದಮಯನಾದ ಪರಮಾತ್ಮನ ಆಶ್ರ್ರಯದಲ್ಲಿತ್ತು. ಗಹನವೂ, ಗಂಭೀರವೂ ಆದ ಏನೋ ಒಂದು ತರಳ ಪದಾರ್ಥವು ಇದ್ದಿತು. ಇದು ಈ ಮಂತ್ರದ ಅರ್ಥ. ಅಂದರೆ, ಮೊದಲಿಗೆ ಏನೋ ಒಂದು ಸೂಕ್ಷ್ಮವಾದ ತರಳ ಅಂದರೆ ಹರಿದಾಡುವ ದ್ರವರೂಪವಾದ ವಸ್ತುವಿತ್ತು. ಬೇರೆ ಯಾವ ಆಧಾರ, ಅಥವ ಆಶ್ರಯ ಸ್ಥಾನವಿಲ್ಲದುದರಿಂದ, ಅದು ಪರಮಾತ್ಮನ ಆಶ್ರಯದಲ್ಲಿಯೇ ಇತ್ತು. ಏನೂ ಇರಲಿಲ್ಲ, ಕೇವಲ ಶೂನ್ಯವಿತ್ತೆಂಬುದು ಸರಿಯಲ್ಲ. ಇನ್ನೊಂದು ವಿಶೇಷವಾದ ಮಂತ್ರ ಗಮನಿಸಿ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
     ಈ ಸ್ಥಿತಿಯಲ್ಲಿ ಸಾವು ಇರಲಿಲ್ಲವಾದ್ದರಿಂದ ಅಮರತ್ವವೂ ಇರಲಿಲ್ಲ. ರಾತ್ರಿ ಮತ್ತು ಹಗಲುಗಳಿರಲಿಲ್ಲ. ಆ ಮೂಲ ಶಕ್ತಿ ತನ್ನ ಇರುವಿಕೆಯಿಂದಾಗಿ ವಾಯುರಹಿತವಾಗಿ ಬೇರೆಯವರಿಗೆ ಪ್ರಾಣ ನೀಡಬಲ್ಲದಾಗಿತ್ತು. ಇದನ್ನು ಹೊರತುಪಡಿಸಿ ಬೇರೆ ಯಾವು ವಸ್ತುವೂ ಇರಲಿಲ್ಲ ಎಂಬುದು ಇದರ ಅರ್ಥವಾಗಿದೆ. ಸೃಷ್ಟಿಗೂ ಮುನ್ನ ಏನೋ ಇತ್ತು. ಸೂರ್ಯ, ಭೂಮಿ, ಚಂದ್ರ, ಇತ್ಯಾದಿಗಳು ಇಲ್ಲದ್ದರಿಂದ ರಾತ್ರಿ, ಹಗಲುಗಳ ಪ್ರಶ್ನೆ ಇರಲಿಲ್ಲ. ಪ್ರಕೃತಿಯ ಉಗಮದ ಬಗ್ಗೆ ಹೇಳುವ ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಯಾವುದೇ ಲಕ್ಷಣವಿಲ್ಲದೆ, ಕತ್ತಲೆಯಲ್ಲಿ ದ್ರವರೂಪವಾಗಿ ರಹಸ್ಯಮಯವಾಗಿ ಸೃಷ್ಟಿ ಪೂರ್ವದಲ್ಲಿ ಯಾವುದು ಇದ್ದಿತೋ ಅದು ತನ್ನ ತುಚ್ಛತ್ವದಿಂದ ನಾಲ್ಕೆಡೆಯಿಂದಲೂ ಮುಚ್ಚಲಟ್ಟಿದ್ದಿತು. ಅದು ಪರಮಾತ್ಮನ ಮಹಿಮೆಯಿಂದ 'ಒಂದು' ಎಂದಾಯಿತು ಎಂದು ಈ ಮಂತ್ರ ಹೇಳುತ್ತದೆ. ಆದಿಮಾನವನ ಕಾಲಕ್ಕಿಂತಲೂ ಹಿಂದಿನ ಕಾಲದ ವೇದಮಂತ್ರಗಳಲ್ಲಿನ ಇಂತಹ ಅಪೂರ್ವ ವೈಜ್ಞಾನಿಕ ವಿವರಗಳು ಬೆರಗು ಮೂಡಿಸುತ್ತವೆ. 
     ಅಥರ್ವವೇದದಲ್ಲಿ ಬರುವ ಪ್ರಕೃತಿಯ ವರ್ಣನೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಈ ಅನಾದಿಯಾದ ಪ್ರಕೃತಿ ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. ಪರಮಾತ್ಮನ ಸಂಕಲ್ಪದಂತೆ ಮತ್ತು ಅವನ ಇಚ್ಛೆಯಂತೆ, ಹಲವು ರೂಪಗಳಲ್ಲಿ ಪ್ರಕಟವಾಗುವ ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, ತಾನಾಗಿ ಪ್ರತಿ ಜೀವಿಯ ಮೂಲಕವೂ, ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ವ್ಯಕ್ತವಾಗುತ್ತಿದೆ. ಪ್ರಕೃತಿ ತಾನೇ ತಾನಾಗಿ ಏನನ್ನೂ ಮಾಡಲಾರದಾದರೂ ಪರಮಾತ್ಮನ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಮೂಲಕ ಮೌನವಾಗಿಯೇ ತನ್ನ ಇರುವನ್ನು ಪ್ರಕಟಪಡಿಸುತ್ತದೆ. 
     ಮತ್ತೆ ಮತ್ತೆ ಪ್ರಪಂಚದ ಸೃಷ್ಟಿಯ ಕುರಿತು ಈ ಮಂತ್ರ ಬೆಳಕು ಚೆಲ್ಲುತ್ತದೆ:
ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ | 
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)
     ಸರ್ವಕರ್ತ ಮತ್ತು ಸರ್ವಾಧಾರ ಪರಮಾತ್ಮನು ಮೊದಲಿದ್ದಂತೆಯೇ ಸೂರ್ಯ-ಚಂದ್ರರನ್ನೂ, ದ್ಯುಲೋಕವನ್ನೂ, ಭೂಮಿಯನ್ನೂ, ಆಕಾಶವನ್ನೂ ಮತ್ತು ಹಾಗೆಯೇ ಆನಂದಮಯ ಸ್ಥಿತಿಯನ್ನು ರಚಿಸಿದನು ಎಂದು ಹೇಳುವ ಮಂತ್ರ ಸೃಷ್ಟಿ, ಸ್ಥಿತಿ, ಲಯಗಳನ್ನು ವಿವರಿಸಿದೆ.
     ವೇದಗಳು ಜ್ಞಾನದ, ವಿಜ್ಞಾನದ ಗಣಿಯಾಗಿವೆ. ಆಸಕ್ತಿಯಿಂದ ಅಧ್ಯಯನ ಮಾಡಿದರೆ ಅನೇಕ ಗಹನ ವಿಚಾರಗಳಿಗೆ, ಸಮಸ್ಯೆಗಳಿಗೆ ಪರಿಹಾರ ತೋರಿಸಬಲ್ಲವಾಗಿವೆ.
-ಕ.ವೆಂ.ನಾಗರಾಜ್.
**************
ದಿನಾಂಕ21.9.2014ರ ವಿಕ್ರಮ ಪತ್ರಿಕೆಯಲ್ಲಿ ಪ್ರಕಟಿತ.


ಗುರುವಾರ, ಸೆಪ್ಟೆಂಬರ್ 18, 2014

ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ

 ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕ...

ಮಂಗಳವಾರ, ಸೆಪ್ಟೆಂಬರ್ 16, 2014

ನೈಜ ಸಂನ್ಯಾಸಿಗಳು ಯಾರು?


     ಸನಾತನ ಧರ್ಮದಲ್ಲಿ ಜೀವನದ ನಾಲ್ಕು ಘಟ್ಟಗಳನ್ನು ವಿವರಿಸಲಾಗಿದೆ. ಅವೆಂದರೆ, ಬಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಮನುಷ್ಯನ ಆಯುವನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ, ಪ್ರಥಮ ೨೫ ವರ್ಷಗಳನ್ನು ಬ್ರಹ್ಮಚರ್ಯದಲ್ಲೂ, ನಂತರದ ೨೫ ವರ್ಷಗಳನ್ನು ಗೃಹಸ್ಥಾಶ್ರಮದಲ್ಲೂ, ಮುಂದಿನ ೨೫ ವರ್ಷಗಳಲ್ಲಿ ವಾನಪ್ರಸ್ಥಾಶ್ರಮವನ್ನೂ, ಕೊನೆಯ ೨೫ ವರ್ಷಗಳನ್ನು ಸಂನ್ಯಾಸಾಶ್ರಮದಲ್ಲಿ ವಿನಿಯೋಗಿಸಬಹುದು. ಬ್ರಹ್ಮಚರ್ಯವೆಂದರೆ ಮದುವೆಯಾಗದಿರುವುದು ಎಂದು ಭಾವಿಸುವುದು ತರವಲ್ಲ. ಪ್ರಥಮ ೨೫ ವರ್ಷಗಳು ಜೀವನಕಾಲದ ಪ್ರಮುಖ ಅವಧಿಯಾಗಿದ್ದು ಬೌದ್ಧಿಕ, ಮಾನಸಿಕ, ಶಾರೀರಕ ಶಕ್ತಿಗಳನ್ನು ಸಂಚಯಿಸುವ ಕಾಲ. ಈ ಅವಧಿ ಜೀವನದ ತಳಹದಿಯಾಗಿದೆ. ಈ ಅವಧಿಯನ್ನು ಯಾರು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೋ ಅವರು ಉತ್ತಮ ನಾಗರಿಕರಾಗುವುದಲ್ಲದೆ, ಯಶಸ್ವೀ ವ್ಯಕ್ತಿಗಳಾಗುತ್ತಾರೆ. ಉಪಯೋಗಿಸದವರು ಮತ್ತು ಉಪಯೋಗಿಸಿಕೊಳ್ಳಲಾಗದವರು ಸಹಜವಾಗಿ ಹಿಂದುಳಿಯುತ್ತಾರೆ. ಉತ್ತಮವಾದ ವಿದ್ಯೆ, ಜ್ಞಾನ, ಚಾತುರ್ಯ, ದಿವ್ಯ ಶಕ್ತಿ ಮತ್ತು ಗುಣಗಳನ್ನು ಪಡೆಯಲು ಉಪಯೋಗಿಸಿಕೊಳ್ಳಬೇಕಾದ ಈ ಅಮೂಲ್ಯ ಅವಧಿಯಲ್ಲಿ ಇಂದ್ರಿಯ ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡವರು ಅಗ್ರಗಣ್ಯರಾಗುವರು. ಸ್ತ್ರೀಯರ ಶರೀರ ಪ್ರಕೃತಿಯ ಕರೆಯಂತೆ ಬೇಗ ಯೌವನ ಗಳಿಸುವುದರಿಂದ ಅವರ ಬ್ರಹ್ಮಚರ್ಯಾವಧಿ ಕನಿಷ್ಠ ೧೬ ವರ್ಷಗಳೆಂದು ಹೇಳುತ್ತಾರೆ. ಆದರೆ ಕನ್ಯೆಯರೇ ಆಗಲೀ, ಪುರುಷರೇ ಆಗಲಿ ಬ್ರಹ್ಮಚರ್ಯದ ಅವಧಿ ಮುಗಿದ ಕೂಡಲೇ ವಿವಾಹಿತರಾಗಬೇಕೆಂದೇನೂ ಇಲ್ಲ. ಅವರ ಮನೋನಿಗ್ರಹಶಕ್ತಿ ಅನುಸರಿಸಿ, ಇಟ್ಟುಕೊಂಡ ಯಾವುದೋ ಗುರಿ ಸಾಧನೆಗಾಗಿ ಸೂಕ್ತ ಕಾಲದವರೆಗೆ ಅಥವ ಜೀವನಪೂರ್ತಿ ಬ್ರಹ್ಮಚಾರಿಗಳಾಗಿಯೇ ಇರಬಹುದು. ಇದು ಎಲ್ಲರಿಗೂ ಸಾಧ್ಯವಿಲ್ಲ.
     ಯಶಸ್ವಿಯಾಗಿ ವಿದ್ಯೆ, ಜ್ಞಾನ, ಚತುರತೆ, ನೈಪುಣ್ಯತೆಯನ್ನು ಬ್ರಹ್ಮಚರ್ಯಾಶ್ರಮದಲ್ಲಿ ಗಳಿಸಿದ ನಂತರ ಗೃಹಸ್ಥಾಶ್ರಮದ ಬಾಗಿಲು ತೆರೆದಿರುತ್ತದೆ. ಈ ಗೃಹಸ್ಥಾಶ್ರಮ ಇತರ ಮೂರು ಆಶ್ರಮಗಳವರಿಗೆ ಆಧಾರ ಮತ್ತು ಆಶ್ರಯಸ್ಥಾನವಾಗಿದೆ. ಸಮಾಜ ಅವಲಂಬಿತವಾಗಿರುವುದು ಈ ಗೃಹಸ್ಥರಿಂದಲೇ! ಉತ್ತಮ, ಚಾರಿತ್ರ್ಯವಂತರಾದ ಗೃಹಸ್ಥರು ಕೇವಲ ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸದೆ ಸಮಾಜದ ಏಳಿಗೆಗೂ ಉತ್ತಮ ಕೊಡುಗೆ ಕೊಡಬಲ್ಲವರಾಗಿರುತ್ತಾರೆ. ಗೃಹಸ್ಥಾಶ್ರಮದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ನಂತರದಲ್ಲಿ ಆತ್ಮೋನ್ನತಿಯ ಗಳಿಕೆಗಾಗಿ ವಾನಪ್ರಸ್ಥಕ್ಕೆ ತೆರಳುವ ಕಾಲ ಬರುತ್ತದೆ. ಇಂದಿನ ಕಾಲಮಾನ ಪರಿಸ್ಥಿತಿಗೆ ಅನುಸಾರವಾಗಿ ವಾನಪ್ರಸ್ಥದ ಪರಿಕಲ್ಪನೆಯನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ವಾನಪ್ರಸ್ಥದ ಕುರಿತು ಪ್ರತ್ಯೇಕ ಲೇಖನದಲ್ಲಿ ವಿವರಿಸಿದೆ. ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾಗಿ ಸರಳ ಜೀವನಪದ್ಧತಿ ಅಳವಡಿಸಿಕೊಂಡು, ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ, ಸದ್ವಿಚಾರ, ಸತ್ಸಂಗತಿಗಳ ಪ್ರಚಾರ, ಪ್ರಸಾರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ತಮ್ಮ ವೃತ್ತಿಯ ನೈಪುಣ್ಯ, ಪ್ರವೃತ್ತಿ, ಹವ್ಯಾಸಗಳನ್ನು ಇತರರ ಉಪಕಾರಕ್ಕಾಗಿ ಹಣದ ಆಸೆಯಿಲ್ಲದೆ ಬಳಸಬಹುದಾಗಿದೆ. ಈರೀತಿ ನಿವೃತ್ತ ಜೀವನ ನಡೆಸುವುದರಿಂದ ಯುವಕ-ಯುವತಿಯರಿಗೆ ಸಹಜವಾಗಿ ಜವಾಬ್ದಾರಿ ಲಭಿಸುತ್ತದೆ. ನಂತರದ ಅವಧಿಯೇ ಸಂನ್ಯಾಸಾಶ್ರಮವಾಗಿದ್ದು ಈ ಕುರಿತು ವಿಚಾರ ಮಾಡೋಣ.
      ಚತುರಾಶ್ರಮಗಳ ಶಿಖರಪ್ರಾಯವಾದ ಸಂನ್ಯಾಸಾಶ್ರಮದ ಅವಧಿಯೇ ಇಂದು ವಿಚಾರ ಮಾಡತಕ್ಕದ್ದಾಗಿದೆ. ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳು, ಪ್ರಾರಂಭಿಕ ಹಂತದ ಜೀವನವನ್ನು ಯೋಗ್ಯ ರೀತಿಯಲ್ಲಿ ನಡೆಸದಿರುವುದರಿಂದ ೭೫ ವರ್ಷಗಳ ನಂತರದಲ್ಲಿ ಬದುಕಿರುವುದೇ ದುಸ್ಸಾಹಸವೆನಿಸಿದೆ. ಬದುಕಿದ್ದರೂ ನೂರೆಂಟು ರೀತಿಯ ಕಾಯಿಲೆ, ಕಸಾಲೆಗಳಿಂದ ಜರ್ಜರಿತಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವ ಪರಿಸ್ಥಿತಿಯಿದೆ. ಗುಣಕ್ಕೆ ಪ್ರಾಧಾನ್ಯ ಕೊಡದೆ, ಹಣಕ್ಕೆ ಮಾತ್ರ ಬೆಲೆ ಕೊಡುವ ಶಿಕ್ಷಣ ಪದ್ಧತಿಯ ಕೊಡುಗೆ ಇದರಲ್ಲಿ ಅಪಾರವಾಗಿದೆ. ಸಂನ್ಯಾಸಿಗಳಾಗಿ ತಮ್ಮ ಕಾರ್ಯಗಳ ಛಾಪು ಒತ್ತಿದವರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿ ಸಾಧಿಸದವರು ಅನೇಕರು ಬ್ರಹ್ಮಚಾರಿಗಳಾಗಿಯೇ ಮುಂದುವರೆದವರು. ಚಿಕ್ಕ ವಯಸ್ಸಿನಲ್ಲೇ ಪ್ರಾಪಂಚಿಕ ವಿಷಯಗಳ ಬಗ್ಗೆ ನಿರಾಸಕ್ತರಾಗಿ ಪರಿವ್ರಾಜಕರಾಗಿ ದೇಶ ಸುತ್ತಿ ಇಂದಿಗೂ ಜನಮಾನ್ಯರಾಗಿರುವ ವಿವೇಕಾನಂದ, ಶಂಕರಾಚಾರ್ಯ, ರಮಣಮಹರ್ಷಿ ಮುಂತಾದವರ ಸಾಲೇ ಕಣ್ಣೆದುರಿಗೆ ಇದೆ. 
     ಸಂನ್ಯಾಸಿ ಹೇಗಿರಬೇಕು? ಈ ವೇದಮಂತ್ರ ಹೇಳುತ್ತದೆ:
     ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್ | ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ || (ಋಕ್.೯.೧೧೩.೪.)
     ವೇದಗಳನ್ನೇ, ಧರ್ಮವನ್ನೇ ಶಕ್ತಿಯಾಗಿ ಉಳ್ಳವನೇ, ಸತ್ಯಾನುಕೂಲ ಕರ್ಮಗಳನ್ನೇ ಆಚರಿಸುವವನೇ, ಭಗವದಾನಂದದಿಂದ ಪ್ರಕಾಶಿಸುವವನೇ, ಪ್ರಶಾಂತನೇ, ಜನಜೀವನವನ್ನು ಸರಸಗೊಳಿಸುವವನೇ, ಜಗದಾಧಾರನಿಂದ ಶುದ್ಧೀಕೃತನಾಗಿ, ವೇದಗಳನ್ನೂ, ಧರ್ಮವನ್ನೂ ಬೋಧಿಸುತ್ತಾ, ಸತ್ಯವನ್ನು ಉಪದೇಶಿಸುತ್ತಾ, ಶ್ರದ್ಧೆಯನ್ನು ಪಸರಿಸುತ್ತಾ, ಜೀವಾತ್ಮನ ಹಿತಕ್ಕಾಗಿ, ಪರಮೈಶ್ವರ್ಯವಾನ್ ಪ್ರಭುವಿನ ಪ್ರಾಪ್ತಿಗಾಗಿ ಪರ್ಯಟನ ಮಾಡು, ಕರುಣೆಯನ್ನು ಸುರಿಸು ಎನ್ನುವ ಈ ಮಂತ್ರ ಸಂನ್ಯಾಸಿಯ ಕರ್ತವ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ. ಸಂನ್ಯಾಸಿಯಾದವನು ಯಾವುದೇ ಜಾತಿಗಾಗಲೀ, ಭಾಷೆಗಾಗಲೀ, ದೇಶಕ್ಕಾಗಲೀ ಸೀಮಿತನಾಗಿರದೆ ಸಕಲ ಜೀವಿಗಳಿಗೆ ಸೇರಿದವನಾಗಿರುತ್ತಾನೆ. ನಿರ್ಮೋಹಿಯಾಗಿ, ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತನಾಗಿ ಆತ್ಮಸಾಧನೆ ಮುಂದುವರೆಸುತ್ತಾ ಹಳ್ಳಿಯಿಂದ ಹಳ್ಳಿಗೆ, ನಗರಗಳಿಗೆ, ದೇಶಗಳಿಗೆ ಸಂಚರಿಸುತ್ತಾ ಮನುಕುಲಕ್ಕೆ ಅಗತ್ಯವಾದ ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳ ಬಗ್ಗೆ ತಿಳುವಳಿಕೆ ಕೊಡುತ್ತಾ ಸಂಚರಿಸಬೇಕು. ಕೇವಲ ಮಾತಿನಿಂದಲ್ಲ, ಕೃತಿಯಿಂದಲೂ ಇದನ್ನು ಸಾಧಿಸುತ್ತಾ ಸಂಚರಿಸುವ, ಪರಿವ್ರಜನ ಮಾಡುವ ಪರಿವ್ರಾಜಕರೇ ನೈಜ ಸಂನ್ಯಾಸಿಗಳು. ಚಲಿಸುವ ದೇವರಂತೆ ಸಾವು ಬರುವವರೆಗೂ ಜಗತ್ತಿನ ಒಳಿತಿಗೆ, ಹಿತಕ್ಕೆ ಪೂರಕವಾದ ಜ್ಞಾನಪ್ರಸಾರ ಮಾಡುತ್ತಾ ಸುತ್ತಾಡುವವರು ಅವರು! ಸದಾ ಪರ್ಯಟನೆ ಮಾಡುತ್ತಿರಬೇಕಾದುದರಿಂದ ಇತರ ಆಶ್ರಮಗಳಲ್ಲಿಯಂತೆ (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ) ನಿತ್ಯ ಕರ್ಮಾನಿಷ್ಠಾನಗಳೂ ಸಹ ಅವರಿಗೆ ಕಡ್ಡಾಯವಲ್ಲ. ಶಾಸ್ತ್ರಜ್ಞಾನವಿಲ್ಲದವರು, ಬ್ರಹ್ಮಜ್ಞಾನದ ಅರಿವಿಲ್ಲದವರು, ನಿರ್ಲಿಪ್ತರಲ್ಲದವರು, ವಿಷಯವಾಸನೆಯಿಂದ ಮುಕ್ತರಾಗದವರು, ಆರೋಗ್ಯವಿಲ್ಲದವರು, ಧೃಢಕಾಯರಲ್ಲದವರು ಸಂನ್ಯಾಸಿಗಳಾಗಲಾರರು.
ವಿರಾಗದಲಿ ಮನೆಯ ತೊರೆಯಬೇಕಿಲ್ಲ
ತಪವನಾಚರಿಸೆ ವನವನರಸಬೇಕಿಲ್ಲ |
ನಿಷ್ಕಾಮಕರ್ಮದ ನಿಜಮರ್ಮವನರಿಯೆ
ಅದುವೆ ವಿರಾಗ ಅದುವೆ ತಪ ಮೂಢ ||
      ಭಗವದ್ಗೀತೆಯ ೧೮ನೆಯ ಅಧ್ಯಾಯವು ಮೋಕ್ಷಸಂನ್ಯಾಸಯೋಗಕ್ಕೆ ಸಂಬಂಧಿಸಿದ್ದಾಗಿದ್ದು ಅದರಲ್ಲಿ ಯಜ್ಞ, ದಾನ ಮತ್ತು ತಪರೂಪವಾದ ಕರ್ಮಗಳು ತ್ಯಜಿಸತಕ್ಕದ್ದಲ್ಲ, ಆದರೆ ಇವುಗಳ ಫಲತ್ಯಾಗ ಮಹತ್ವದ್ದೆಂದು ಹೇಳಿದೆ. ಕರ್ಮ ಮಾಡುವುದಷ್ಟೇ ನಮ್ಮ ಕೆಲಸ, ಫಲಾಫಲಗಳ ಕುರಿತು ಚಿಂತಿಸಬೇಕಿಲ್ಲವೆಂದು ಉಪದೇಶಿಸಿದೆ. ಶ್ರೀ ಶಂಕರರ ಯತಿಪಂಚಕದಲ್ಲಿ ಒಬ್ಬ ಯತಿಯ ಲಕ್ಷಣಗಳನ್ನು ವಿವರಿಸಲಾಗಿದೆ. 'ಕೌಪೀನವಂತಃ ಖಲುಭಾಗ್ಯವಂತಃ' ಎಂದು ಪ್ರತಿ ಶ್ಲೋಕದಲ್ಲಿ ಅಂತ್ಯವಾಗುವ ಈ ಪಂಚಕದಲ್ಲಿ ಒಬ್ಬ ಯತಿ ಹೇಗಿರುತ್ತಾನೆಂದು ಹೇಳುತ್ತದೆ. ಅವನು ವೇದದ ವಾಕ್ಯಗಳಲ್ಲಿ ವಿಹರಿಸುತ್ತಾ, ಭಿಕ್ಷಾನ್ನದಿಂದ ತೃಪ್ತನಾಗಿರುತ್ತಾ, ಶೋಕಮುಕ್ತನಾಗಿ ಇತರರ ಬಗ್ಗೆ ಕರುಣಾಳುವಾಗಿರುತ್ತಾನೆ. ಮರಗಳ ಬುಡವೇ ಆಶ್ರಯತಾಣವಾಗಿ, ಕೈಗಳೇ ಆಹಾರದ ಪಾತ್ರೆಯಾಗಿರುವ ಅವನಿಗೆ ಸಂಪತ್ತು ಹಳೆಯ ವಸ್ತ್ರದಂತೆ ಇರುತ್ತದೆ. ದೇಹಾಭಿಮಾನದಿಂದ ದೂರನಾಗಿ, ಆತ್ಮನನ್ನು ಆತ್ಮನಾಗೇ ನೋಡುತ್ತಾ ಆನಂದಮಯನಾಗಿರುವ, ಅಂತರಂಗ, ಮಧ್ಯಮ ಮತ್ತು ಬಹಿರಂಗಗಳ ಸ್ಮರಣೆಯಿಡದವನಾಗಿರುತ್ತಾನೆ. ಆತ್ಮಾನುಭೂತಿಯ ಆನಂದವನ್ನು ಅನುಭವಿಸುತ್ತಾ, ಸರ್ವೇಂದ್ರಿಯಗಳನ್ನು ಶಾಂತಗೊಳಿಸಿಕೊಂಡು ಅಹರ್ನಿಶಿ ಬ್ರಹ್ಮನೊಂದಿಗೆ ತಾದಾತ್ಮ್ಯಭಾವ ಹೊಂದಿರುತ್ತಾನೆ. ಸರ್ವಶಕ್ತ ಭಗವಂತನನ್ನು ಸ್ಮರಿಸುತ್ತಾ, ಹೃದಯದಲ್ಲೇ ಅವನನ್ನು ಕಾಣುತ್ತಾ, ಎಲ್ಲಾ ದಿಕ್ಕುಗಳಲ್ಲೂ ಭಿಕ್ಷಾನ್ನದಿಂದ ಸಂತುಷ್ಟನಾಗಿ ಸಂಚರಿಸುತ್ತಿರುತ್ತಾನೆ. ಮೇಲೆ ಹೇಳಿದ ವೇದಮಂತ್ರದಲ್ಲಿ ತಿಳಿಸಿದ ಪರಿವ್ರಾಜಕನ ಗುಣಗಳನ್ನೇ ಇಲ್ಲಿ ವಿಷದೀಕರಿಸಿದೆಯೆನ್ನಬಹುದು. 
     ಪರಿವ್ರಾಜಕನ ಕೆಲಸ ಮಾಡುತ್ತಿರುವ ಒಬ್ಬ ಸಾಧಕರ ಪರಿಚಯ ಮಾಡಬೇಕೆನಿಸಿದೆ. ಇದಕ್ಕೆ ಕಾರಣವೂ ಇದೆ. ಸೇವಾಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನನ್ನನ್ನು ಪ್ರೇರಿಸಿದವರು ಅವರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದ ಸೀತಾರಾಮ ಕೆದಿಲಾಯರೇ ಅವರು. ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬ್ರಹ್ಮಚಾರಿಯಾಗಿ ಉಳಿದು ಸಂಘದ ಪ್ರಚಾರಕರಾಗಿ ಗ್ರಾಮೋತ್ಥಾನ, ಗ್ರಾಮವಿಕಾಸ, ಗೋತಳಿ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿದವರು. ಅಖಿಲಭಾರತ ಸೇವಾಪ್ರಮುಖರಾಗಿ ಕಾರ್ಯ ನಿರ್ವಹಿಸಿದವರು. ೨೦೦೯ರಲ್ಲಿ ಭಾರತದಾದ್ಯಂತ ನಡೆದ ವಿಶ್ವಮಂಗಳ ಗೋಯಾತ್ರೆಯ ಶಿಲ್ಪಿ ಅವರು. ಐದು ಅಡಿಯ ವಾಮನಮೂರ್ತಿ, ಕೃಷದೇಹಿ ಕೆದಿಲಾಯರಿಗೆ ಈಗ ೬೭ ವರ್ಷಗಳು. ಇವರು ೨೦೧೨ರ ಆಗಸ್ಟ್ ೯ರಂದು ಭಾರತದ ಅಖಂಡತೆ ಮತ್ತು ಗ್ರಾಮಜೀವನದ ಪುನರುತ್ಥಾನದ ಸಲುವಾಗಿ ಇಡೀ ಭಾರತದ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಲುನಡಿಗೆಯಲ್ಲೇ ಪ್ರಾರಂಭಿಸಿದ್ದು, ಈ ಯಾತ್ರೆ ಮೂರನೆಯ ವರ್ಷದಲ್ಲೂ ಮುಂದುವರೆದಿದೆ. ಇದುವರೆಗೆ ದೇಶದ ೧೨ ರಾಜ್ಯಗಳ ಪ್ರವಾಸ ಮುಗಿಸಿದ್ದಾರೆ. ಅವರ ಪಾದಯಾತ್ರೆ ವಿಶಿಷ್ಟ ರೀತಿಯಲ್ಲಿ ಇರುತ್ತದೆ. ಬೆಳಗಿನ ಜಾವ ಮೂರು ಗಂಟೆಗೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ, ಗೋಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತಾರೆ. ಸುಮಾರು ೧೦-೧೫ ಕಿ.ಮೀ. ನಡೆದು ೧೨.೩೦ಕ್ಕೆ ಭಿಕ್ಷಾನ್ನ ಸ್ವೀಕಾರ, ವಿಶ್ರಾಂತಿ. ಸಂಜೆ ಊರಿನ ಶಾಲೆಗೆ ಹೋಗಿ ಮಕ್ಕಳಿಂದ ವೃಕ್ಷಾರೋಪಣ, ಗ್ರಾಮದ ವಿವಿಧ ಮುಖಂಡರ ಭೇಟಿ, ದೇಗುಲ, ಚರ್ಚು, ಮಸೀದಿ, ಮಂದಿರಗಳಿಗೆ ಭೇಟಿ, ಜಾತಿ-ಮತಭೇದವಿಲ್ಲದೆ ಎಲ್ಲರೊಡನೆ ಮಾತುಕತೆ, ಮುಕ್ತ ಸಂವಾದ ನಡೆಸುತ್ತಾರೆ. ಒಂದು ರಾಜ್ಯದ ಪ್ರವಾಸ ಮುಗಿದ ನಂತರ ಆಯಾ ರಾಜ್ಯದ ಅಭಿವೃದ್ಧಿ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ಗಮನ ಸೆಳೆಯುತ್ತಾರೆ. ಹೋದೆಡೆಯಲ್ಲೆಲ್ಲಾ ಅವರಿಗೆ ಅಪೂರ್ವ ಸ್ವಾಗತ ಸಿಗುತ್ತಿದೆ. ಮುಂದಿನ ಗ್ರಾಮಕ್ಕೆ ಹೋಗುವಾಗ ಗ್ರಾಮಸ್ಥರೂ ಕೆಲವು ಕಿ.ಮೀ.ಗಳವರೆಗೆ ಅವರೊಡನೆ ಹೆಜ್ಜೆ ಹಾಕುತ್ತಾರೆ. ಅವರ ಈ ಪರ್ಯಟನೆಯ ಉದ್ದೇಶಗಳು ಎರಡು. ಒಂದು: ವಿದೇಶೀಯರು ಭಾರತ ಬಿಟ್ಟರೂ ಅವರ ಸಂಸ್ಕೃತಿ, ದಿರಿಸು, ಭಾಷೆ, ಇತ್ಯಾದಿ ನಮ್ಮನ್ನು ಬಿಟ್ಟಿಲ್ಲ. ಇದು ತಪ್ಪಿ ನಮ್ಮ ಭಾರತೀಯತೆಯ ಛಾಪು ಮೂಡಬೇಕು. ಇನ್ನೊಂದು: ಹೆಚ್ಚುತ್ತಿರುವ ನಗರೀಕರಣದ ವಾತಾವರಣದ ಬದಲಾಗಿ ಹಳ್ಳಿಜೀವನ ಪುನರುಜ್ಜೀವನಗೊಳ್ಳಬೇಕು. ಈ ಕೆಲಸ ಮಾಡುವುದರಿಂದ ಈ ವ್ಯಕ್ತಿಗೆ ಏನು ಲಾಭ? ಲಾಭದ ಅಪೇಕ್ಷೆಯಿಲ್ಲದೆ ಮಾಡುತ್ತಿರುವ ಈ ಕೆಲಸ ಒಬ್ಬ ಶ್ರೇಷ್ಠ ಪರಿವ್ರಾಜಕನದೇ ಅಲ್ಲವೇ? ಇದಲ್ಲವೇ ನೈಜ ಸಂನ್ಯಾಸ?
     ಕಾವಿ ಧರಿಸಿದವರೆಲ್ಲರೂ ಸಂನ್ಯಾಸಿಗಳೆನಿಸಲಾರರು. ಮಠಗಳು, ಆಶ್ರಮಗಳನ್ನು ಸ್ಥಾಪಿಸಿಕೊಂಡು ವೈಭವೋಪೇತವಾಗಿ ಜೀವಿಸುವ ಸಂತರುಗಳೂ ಇರುತ್ತಾರೆ. ಅವರನ್ನು ಮಠಾಧೀಶರು, ಪೀಠಾಧೀಶರು, ಮುಖ್ಯಸ್ಥರು, ಇತ್ಯಾದಿ ಅನ್ನಬಹುದೇ ಹೊರತು ಸಂನ್ಯಾಸಿಗಳು ಎಂದು ಹೇಳಲಾಗದು. ಜಾತಿಗೊಬ್ಬೊಬ್ಬರು ಗುರುಗಳು ಅನ್ನುವುದು ಸಂನ್ಯಾಸತ್ವದ ಮೂಲತತ್ತ್ವಕ್ಕೇ ವಿರುದ್ಧವಾದುದು. ಜಗತ್ತಿನ ವೈಭವಗಳು, ಅನುಕೂಲಗಳನ್ನು ತ್ಯಜಿಸಿದ್ದೇವೆಂದು ಹೇಳುತ್ತಾ ಅದಕ್ಕೇ ಅಂಟಿಕೊಂಡವರು ಸಂನ್ಯಾಸಿಯ ಲಕ್ಷಣಗಳಿಗೆ ಹೊರತಾಗಿರುತ್ತಾರೆ. ಅವರುಗಳೂ ಉತ್ತಮ ಕೆಲಸಗಳನ್ನು ಮಾಡುತ್ತಿರಬಹುದು, ಸಮಾಜಮುಖಿಯಾಗಿ ಜ್ಞಾನಪ್ರಸಾರಕಾರ್ಯದಲ್ಲಿ, ಆಧ್ಯಾತ್ಮಿಕ ವಿಚಾರಗಳ ಪ್ರಸಾರದಲ್ಲಿ ತೊಡಗಿರಬಹುದು. ಕಪಟ ಸಂನ್ಯಾಸಿಗಳಿಗೂ, ಕಾವಿಧಾರಿಗಳಿಗೂ ಏನೂ ಕೊರತೆಯಿಲ್ಲ. ತಮ್ಮ ಜ್ಞಾನವನ್ನು ಹಣ ಸಂಪಾದನೆಗಾಗಿ ಬಳಸುವಂತಹವರೂ ಇದ್ದಾರೆ.  ಆದರೆ, ನೈಜ ಸಂನ್ಯಾಸಿ ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ, ಯಾವುದೇ ಜನಾಂಗ, ಧರ್ಮ, ಜಾತಿ, ಪಂಥಗಳಲ್ಲಿ ಗುರುತಿಸಿಕೊಳ್ಳದೆ, ಯಾವುದೇ ದೇಶಕ್ಕೆ ಕಟ್ಟು ಬೀಳದೆ ಪರ್ಯಟನೆ ಮಾಡುತ್ತಾ ವಿಶ್ವಮಾನವ ಸಂದೇಶ ಸಾರುವವನಾಗಿರುತ್ತಾನೆ. ಇಂತಹ ಸಂನ್ಯಾಸಿಗಳ ಅಗತ್ಯತೆ ಇಂದು ದೇಶಕ್ಕಿದೆ. ಪುಣ್ಯಭೂಮಿ ಭಾರತದಲ್ಲಿ ಇಂತಹವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂತಹವರ ಮಾರ್ಗದರ್ಶನದಲ್ಲಿ ದೇಶ ಸುದಿಕ್ಕಿನಲ್ಲಿ ಸಾಗಲಿ ಎಂದು ಆಶಿಸೋಣ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಂನ್ಯಾಸಿ ಮೂಢ ||
-ಕ.ವೆಂ.ನಾಗರಾಜ್.
**************
15.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಸೆಪ್ಟೆಂಬರ್ 7, 2014

ಸಾವಿರಾರು ಜನರಿಂದ ಸಾಮೂಹಿಕ ಅಗ್ನಿಹೋತ್ರ

Photo: ಹಾಸನದ ವೇದಭಾರತಿಯು ನಡೆಸುವ ದೈನಂದಿನ  ಅಗ್ನಿಹೋತ್ರವನ್ನು ವೀಕ್ಷಿಸಿದ    ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ  ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ   ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು  ವೇದಭಾರತಿಯ ಸಂಚಾಲಕತ್ವದಲ್ಲಿ  ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು  ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ  ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ  ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ  ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು  ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ  ಸಂಪರ್ಕಿಸಬಹುದು.

ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ

http://www.divshare.com/download/26086812-18b



      ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು.

ಗುರುವಾರ, ಸೆಪ್ಟೆಂಬರ್ 4, 2014

ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!


     ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದರು: "ಜರ್ಮನಿ ಒಂದು ಅತ್ಯಂತ ಪ್ರತಿಷ್ಠಿತ ಕೈಗಾರಿಕಾ ದೇಶ. ಅಲ್ಲಿ ಪ್ರಪಂಚದ ಅತ್ಯುತ್ತಮ ವಾಹನಗಳೆನಿಸಿದ ಬೆಂಜ್, ಸೀಮನ್ಸ್, ಬಿಎಂಡಬ್ಲ್ಯು, ಇತ್ಯಾದಿ ತಯಾರಾಗುತ್ತವೆ. ಆ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಅಣು ರಿಯಾಕ್ಟರ್ ಪಂಪು ಸಿದ್ಧವಾಗುತ್ತದೆ. ಅಂತಹ ಒಂದು ದೇಶದ ಜನರು ವೈಭವೋಪೇತವಾಗಿ ಜೀವಿಸುತ್ತಾರೆಂದು ಹೆಚ್ಚಿನವರು ಭಾವಿಸುತ್ತಾರೆ. ಪ್ರವಾಸದ ಮುನ್ನ ನಾನೂ ಹಾಗೆಯೇ ಭಾವಿಸಿದ್ದೆ. ನಾನು ಹ್ಯಾಂಬರ್ಗಿಗೆ ಬಂದಿಳಿದಾಗ ನನ್ನ ಅಲ್ಲಿನ ಸಹೋದ್ಯೋಗಿಗಳು ಒಂದು ರೆಸ್ಟೋರೆಂಟಿನಲ್ಲಿ ನಮಗೆ ಸ್ವಾಗತಕ್ಕೆ ಏರ್ಪಡಿಸಿದ್ದರು. ಹೋಟೆಲ್ಲಿನ ಬಹಳಷ್ಟು ಟೇಬಲ್ಲುಗಳು ಖಾಲಿಯಿದ್ದವು. ಒಂದು ಟೇಬಲ್ಲಿನಲ್ಲಿ ಯುವಜೋಡಿ ಊಟ ಮಾಡುತ್ತಿದ್ದರು. ಆ ಟೇಬಲ್ಲಿನ ಮೇಲೆ ಕೇವಲ ಎರಡು ಆಹಾರ ಖಾದ್ಯಗಳು ಮತ್ತು ಎರಡು ಕ್ಯಾನುಗಳು ಬೀರು ಮಾತ್ರ ಇತ್ತು. ನನಗೆ ಆ ಸರಳ ಆಹಾರ ರೋಚಕವಾಗಿರುತ್ತದೆಯೇ ಮತ್ತು ಆ ಹುಡುಗಿ ಆ ಜಿಪುಣನನ್ನು ಬಿಟ್ಟು ಹೋಗದಿರುತ್ತಾಳೆಯೇ ಎಂಬ ಅನುಮಾನವಾಯಿತು. ಇನ್ನೊಂದು ಟೇಬಲ್ಲಿನಲ್ಲಿ ಕೆಲವು ಮುದುಕಿಯರು ಊಟ ಮಾಡುತ್ತಿದ್ದರು. ಮಾಣಿ ಆಹಾರ ಪದಾರ್ಥ ತಂದು ಅವರಿಗೆ ಹಂಚಿಹಾಕಿದರೆ ಅವರು ಅವರ ತಟ್ಟೆಗಳಲ್ಲಿನ ಒಂದು ಅಗುಳನ್ನೂ ಬಿಡದಂತೆ ಮುಗಿಸುತ್ತಿದ್ದರು. ನಮಗೆ ಹಸಿವಾಗಿದ್ದರಿಂದ ನಮಗಾಗಿ ಹೆಚ್ಚಿನ ಆಹಾರಕ್ಕೆ ಬೇಡಿಕೆ ಇಡಲಾಗಿತ್ತು. ಬಹುಬೇಗನೇ ನಮಗೆ ಊಟ ಸರಬರಾಜಾಯಿತು. ನಮಗೆ ಬೇರೆ ಚಟುವಟಿಕೆಗಳಿದ್ದುದರಿಂದ ಊಟದಲ್ಲಿ ಹೆಚ್ಚು ಸಮಯ ಕಳೆಯದೆ ಮುಗಿಸಿ ಎದ್ದಾಗ ನಮ್ಮ ಟೇಬಲ್ಲಿನಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಆಹಾರ ಉಳಿದಿತ್ತು. ನಾವು ಹೋಟೆಲಿನಿಂದ ಹೊರಡುತ್ತಿದ್ದಾಗ ಯಾರೋ ನಮ್ಮನ್ನು ಕರೆದಂತಾಯಿತು. ಮುದುಕಿಯರು ನಮ್ಮ ಬಗ್ಗೆ ರೆಸ್ಟೋರೆಂಟಿನ ಮಾಲಿಕನಿಗೆ ದೂರುತ್ತಿದ್ದರು. ಅವರಿಗೆ ನಾವು ಆಹಾರವನ್ನು ಪೋಲು ಮಾಡಿದ್ದಕ್ಕೆ ಅಸಮಾಧಾನವಿತ್ತು. 'ನಮ್ಮ ಊಟಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ. ನಾವು ಎಷ್ಟು ಉಳಿಸಿದೆವು ಅನ್ನುವ ವಿಷಯ ನಿಮಗೆ ಸಂಬಂಧಿಸಿದ್ದಲ್ಲ' ಎಂಬ ನನ್ನ ಸಹೋದ್ಯೋಗಿಯ ಮಾತಿನಿಂದ ಅವರಿಗೆ ಬಹಳ ಸಿಟ್ಟು ಬಂತು. ಒಬ್ಬಾಕೆ ಕೂಡಲೇ ತನ್ನ ಫೋನಿನಿಂದ ಯಾರಿಗೋ ಕರೆ ಮಾಡಿದಳು. ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಭದ್ರತಾ ಸಂಸ್ಥೆಯ ಯೂನಿಫಾರಂ ಧರಿಸಿದ್ದ ಒಬ್ಬ ಅಧಿಕಾರಿ ಹಾಜರಾಗಿ ವಿಷಯ ತಿಳಿದುಕೊಂಡು ನಮಗೆ ೫೦ ಮಾರ್ಕುಗಳ ದಂಡ ವಿಧಿಸಿದ. ನಾವು ಸುಮ್ಮನಿದ್ದೆವು. ಸ್ಥಳೀಯ ಸಹೋದ್ಯೋಗಿ ದಂಡ ಕಟ್ಟಿ, ಪದೇ ಪದೇ ಕ್ಷಮಾಪಣೆ ಕೋರಿದ. ಆ ಅಧಿಕಾರಿ ನಮಗೆ ಗಂಭೀರ ಧ್ವನಿಯಲ್ಲಿ ಹೇಳಿದ: 'ನೀವು ಎಷ್ಟು ತಿನ್ನುತ್ತೀರೋ ಅಷ್ಟು ಮಾತ್ರ ತರಿಸಿಕೊಳ್ಳಿ. ಹಣ ನಿಮ್ಮದು, ಆದರೆ ಸಂಪನ್ಮೂಲಗಳು ಸಮಾಜದ್ದು. ಪ್ರಪಂಚದಲ್ಲಿ ಆಹಾರ ಸಿಗದ ಎಷ್ಟೋ ಜನರಿದ್ದಾರೆ. ಅದನ್ನು ವ್ಯರ್ಥಗೊಳಿಸಲು ನಿಮಗೆ ಕಾರಣಗಳಿಲ್ಲ.'  ನಮ್ಮ ಮುಖಗಳು ಕೆಂಪಾದವು. ಈ ಶ್ರೀಮಂತ ದೇಶದ ಜನರ ಮನೋಭಾವ ನಮ್ಮನ್ನು ನಾಚಿಕೆಗೀಡುಮಾಡಿತು. ನಾವು ಅಷ್ಟೇನೂ ಶ್ರೀಮಂತವಲ್ಲದ ದೇಶದಿಂದ ಬಂದವರಾದರೂ ನಾವು ಇತರರನ್ನು ತೃಪ್ತಿಪಡಿಸಲು ಬಹಳಷ್ಟು ಆಹಾರವನ್ನು ಬಡಿಸಿ ವ್ಯರ್ಥ ಮಾಡುತ್ತಿದ್ದುದು ನೆನಪಾಯಿತು. ಈ ಘಟನೆ ನಮ್ಮ ಕೆಟ್ಟ ಅಭ್ಯಾಸಗಳನ್ನು ತಿದ್ದಿಕೊಳ್ಳಲು ಒಂದು ಪಾಠವಾಯಿತು."
     ಅಧ್ಯಯನ ಪ್ರವಾಸಕ್ಕೆ ಹೋಗಿದ್ದವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಇದು ಪಾಠವಾಗಬೇಕು. ಯಾವುದಾದರೂ ಮದುವೆಯೋ, ಸಮಾರಂಭವೋ ನಡೆದರೆ ಅಲ್ಲಿ ಊಟ ಮಾಡಿದ ನಂತರ ಉಂಡವರು ಎಲೆಯಲ್ಲಿ ಉಳಿಸಿಹೋದ ಆಹಾರದ ಪ್ರಮಾಣ ನೂರಾರು ಜನರ ಹಸಿವನ್ನು ಇಂಗಿಸುವಷ್ಟು ಇರುತ್ತದೆ. ಮೇಲ್ಪಂಕ್ತಿ ಹಾಕಬೇಕಾದ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲೇ, ಗಣ್ಯಾತಿಗಣ್ಯರುಗಳು ಭಾಗವಹಿಸುವ ಮೇಜುವಾನಿಗಳಲ್ಲೂ ಸಹ ಈ ರೀತಿ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ಹಸಿವಿನಿಂದ ಸುಮಾರು ೫ ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ಪ್ರತಿವರ್ಷ ಹಸಿವಿನಿಂದ ಸಾಯುತ್ತಾರೆಂದು ಒಂದು ಅಂದಾಜಿದೆ. ಆಫ್ರಿಕಾ, ಭಾರತ, ಪಾಕಿಸ್ತಾನದಂತಹ ದೇಶಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಪೂರ್ಣ ತಿನ್ನದೆ ಎಂಜಲು ಮಾಡಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಪದಾರ್ಥಗಳು ಉಪಯೋಗಿಸಲು ಯೋಗ್ಯವಾದ ಪದಾರ್ಥಗಳೇ ಆಗಿರುತ್ತದೆ ಎಂಬುದು ಕಠಿಣ ಸತ್ಯವಾಗಿದೆ. ಹೋಟೆಲ್ಲಿನಲ್ಲಿ ತರಿಸಿಕೊಳ್ಳುವ ತಿಂಡಿಯನ್ನು ಪೂರ್ಣ ತಿನ್ನುವವರನ್ನು ಜುಗ್ಗ, ಕಂಜೂಸ್ ಎಂಬಂತೆ ನೋಡುವುದಲ್ಲದೆ, ಶಾಸ್ತ್ರಕ್ಕೆ ತಿಂದಂತೆ ಮಾಡಿ ಉಳಿಸುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪ್ರಾಣಿಗಳು ಹಸಿವಾದಾಗ ಮಾತ್ರ ತಿನ್ನುತ್ತವೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತವೆ. ಮನುಷ್ಯರೆನಿಸಿಕೊಂಡವರು ಪ್ರಾಣಿಗಳಿಗಿಂತ ಕಡೆಯಾಗಬಾರದಲ್ಲವೇ? ಉಳಿಸಿ ಚೆಲ್ಲುವುದಕ್ಕಿಂತ ಎಷ್ಟು ಬೇಕೋ ಅಷ್ಟು ಪಡೆದು ತಿನ್ನುವುದು ಒಳ್ಳೆಯದು. ಹಣ ಗಳಿಸಬಹುದು, ಆದರೆ ಪೋಲಾದ ಆಹಾರವನ್ನು ಮತ್ತೆ ತಯಾರಿಸಲು ಸಾಧ್ಯವೇ? ಒಂದು ಅನ್ನದ ಅಗುಳಿನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ, ಅದು ಅಕ್ಕಿಯಾಗಲು, ಅನ್ನವಾಗಲು ಎಷ್ಟು ಸಮಯ ಬೇಕು ಎಂಬುದನ್ನು ನಾವು ಯಾರಾದರೂ ಚಿಂತಿಸುತ್ತೇವೆಯೇ? ಆದರೆ ಅದನ್ನು ವ್ಯರ್ಥ ಮಾಡಲು ಸಮಯವೇ ಬೇಕಿಲ್ಲ. ಇದು ತುತ್ತು ಅನ್ನಕ್ಕೂ ಪರದಾಡುವ ಲಕ್ಷಾಂತರ ಜನರಿಗೆ ಬಗೆಯುವ ದ್ರೋಹವಲ್ಲದೆ ಮತ್ತೇನು? ಈ ರೀತಿ ವ್ಯರ್ಥವಾಗುವ ಆಹಾರದಿಂದ ಪ್ರತಿವರ್ಷ ಸುಮಾರು ೫೦೦ ಮಿಲಿಯನ್ ಜನರ ಹಸಿವನ್ನು ಇಂಗಿಸಲು ಶಕ್ಯವಿದೆ!
     ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೫೮೦೦೦ ಕೋಟಿ ರೂಗಳಷ್ಟು ಆಹಾರ ಪದಾರ್ಥಗಳು ಮತ್ತು ಸುಮಾರು ೪೪೦೦೦ ಕೋಟಿ ರೂ.ಗಳಷ್ಟು ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೆಳೆಯುವ ಪ್ರಮಾಣದಷ್ಟು ಗೋಧಿ ಭಾರತದಲ್ಲಿ ಹಾಳಾಗುತ್ತಿದೆಯಂತೆ! ಅವೈಜ್ಞಾನಿಕ ವ್ಯವಸಾಯ ಕ್ರಮ, ಹವಾಮಾನ ವೈಪರೀತ್ಯ, ಸಾಗಾಣಿಕೆ, ದಾಸ್ತಾನು ಮಾಡುವ ರೀತಿಗಳಿಂದ ದವಸಗಳು ಹಾಳಾಗುತ್ತಿವೆ. ಅದರ ಜೊತೆಗೆ ಮೇಲೆ ತಿಳಿಸಿದ ಅಪೂರ್ಣ ಬಳಕೆಯ ಕಾರಣದಿಂದಲೂ ಅಪಾರ ಹಾನಿಯಾಗುತ್ತಿದೆ. ಖಾಸಗಿ ಗೋಡೌನುಗಳಿರಲಿ, ಸರ್ಕಾರದ ಗೋಡೌನುಗಳಲ್ಲಿಯೇ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯಗಳು ಕೊಳೆತುಹೋಗುತ್ತವೆ. ಲಾಭ ಪಡೆಯುವ ಸಲುವಾಗಿ ದವಸ ಧಾನ್ಯಗಳನ್ನು ಅಕ್ರಮವಾಗಿ ಕಳ್ಳ ದಾಸ್ತಾನು ಶೇಖರಿಸಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಅನುಸರಿಸಬೇಕಿದೆ. ಇನ್ನೇನು ಹಾಳಾಗುತ್ತದೆ ಎಂಬ ಹಂತದಲ್ಲಿ ಮಾತ್ರ ಅವು ಹೊರಗೆ ಬರುತ್ತವೆ. ಆಹಾರ ಪದಾರ್ಥಗಳ ನಷ್ಟದ ಕಾರಣದಿಂದಲೇ ದೇಶ ಮತ್ತು ಸಮಾಜ ದೊಡ್ಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆಹಾರ ಪದಾರ್ಥಗಳ ನಷ್ಟ ತಡೆಯುವಲ್ಲಿ ಜಪಾನ್ ಉತ್ತಮ ಆಡಳಿತಾತ್ಮಕ ಕ್ರಮ ಕೈಗೊಂಡಿದೆಯೆನ್ನಬಹುದು. ಕಂಟೈನರುಗಳು, ಪ್ಯಾಕೇಜುಗಳ ಬಗ್ಗೆ, ಆಹಾರದ ತ್ಯಾಜ್ಯದ ಮರುಬಳಕೆ ಬಗ್ಗೆ, ಆಹಾರದ ನಷ್ಟ ತಡೆಯವ ದಿಸೆಯಲ್ಲಿನ ಹಲವಾರು ಸಂಗತಿಗಳ ಬಗ್ಗೆ ಅಲ್ಲಿ ಕಾಯದೆ, ಕಾನೂನುಗಳು ಇವೆ. ಜೊತೆಗೆ ಅಲ್ಲಿನ ನಾಗರಿಕರೂ ತಮ್ಮ ನಾಗರಿಕ ಪ್ರಜ್ಞೆಯಿಂದ ಈ ದಿಸೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಷ್ಟ ತಡೆಯುವುದರೊಂದಿಗೆ ಮರುಬಳಕೆಗೆ ಮತ್ತು ಪರಿಸರ ಸ್ನೇಹಿ ಬಳಕೆಗೆ ತ್ಯಾಜ್ಯಗಳನ್ನು ಬಳಸುವ ಬಗ್ಗೆ ಕಾನೂನು-ಕಟ್ಟಳೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು, ತರಕಾರಿಗಳು ಕೆಡದಂತೆ ದಾಸ್ತಾನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಹಾರದ ಸದ್ಬಳಕೆ ಮತ್ತು ಪೋಲು ಮಾಡದಿರುವ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ವಿಷಯ ಅಳವಡಿಸಬೇಕು.
     ಆಹಾರವನ್ನು ವ್ಯರ್ಥ ಮಾಡುವುದು ತರವಲ್ಲ. ವ್ಯರ್ಥ ಮಾಡುವುದು ಒತ್ತಟ್ಟಿಗಿರಲಿ, ಆಹಾರವನ್ನು ಪಡೆಯಲೂ ಅರ್ಹತೆ ಇರಬೇಕು. ಈ ವೇದಮಂತ್ರ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಅಂತಹುದರಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ.
      ಮದುವೆ ಮೊದಲಾದ ಸಂದರ್ಭಗಳಲ್ಲಿ ಆಹ್ವಾನಿಸಿದಷ್ಟು ಸಂಖ್ಯೆಯಲ್ಲಿ ಜನರು ಬರದಿದ್ದಾಗ ತಯಾರಾದ ಆಹಾರ ಪದಾರ್ಥಗಳು ಉಳಿದುಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ವ್ಯರ್ಥವಾಗದಂತೆ ನೋಡಿಕೊಂಡಲ್ಲಿ ಅದು ಸಾಧನೆಯೇ ಸರಿ. ಅದನ್ನು ತ್ವರಿತವಾಗಿ ಅಂದೇ ವಿಲೇವಾರಿ ಮಾಡದಿದ್ದಲ್ಲಿ ತಿಪ್ಪೆಗೆ ಸೇರಿ ಸಾಮಾಜಿಕ ನಷ್ಟವಾಗುತ್ತದೆ. ನಗರಗಳಲ್ಲಿ ಸ್ವಯಂಸೇವಾಸಂಸ್ಥೆಗಳು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲುಗಳಲ್ಲಿ ಉಳಿಯುವ ಇಂತಹ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡಬಹುದು, ಅರ್ಥಾತ್ ಬಡವರು ಮತ್ತು ಅಗತ್ಯವಿರುವವರಿಗಾಗಿ ಒಂದು ಆಹಾರ ಬ್ಯಾಂಕ್ ಸ್ಥಾಪಿಸುವ ಯೋಜನೆ ಮಾಡಬಹುದು. ಕನಿಷ್ಠ ಪಕ್ಷ ಒಂದು ಸಂಚಾರಿ ಕ್ಯಾಂಟೀನ್ ಇಟ್ಟು ರಿಯಾಯಿತಿ ದರಗಳಲ್ಲಿ ಮಾರಿದರೂ ತಪ್ಪಾಗುವುದಿಲ್ಲ. ಸೌದಿಯಲ್ಲಿ ಒಬ್ಬ ಸಹೃದಯಿ ತನ್ನ ಮನೆ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ರೆಫ್ರಿಜರೇಟರ್ ಇಟ್ಟು ಅದರಲ್ಲಿ ಉಪಯೋಗಿಸಿ ಉಳಿದ ಆಹಾರ ಪದಾರ್ಥಗಳನ್ನು ಆತ ಮತ್ತು ಆತನ ಸ್ನೇಹಿತರು ಇಡುತ್ತಾರಂತೆ. ಅಗತ್ಯವಿರುವವರು ಯಾರು ಬೇಕಾದರೂ ನೇರವಾಗಿ ಇದನ್ನು ತೆಗೆದುಕೊಳ್ಳಬಹುದಂತೆ. ಭಿಕ್ಷೆ ಬೇಡುವ ಹೀನಾಯ ಸ್ಥಿತಿಯಿಂದ ತಪ್ಪಿಸುವ ಈ ಕೆಲಸ ಅಭಿನಂದನೀಯವಾಗಿದೆ ಮತ್ತು ಅನುಕರಣೀಯವಾಗಿದೆ. ಸಮಾರಂಭಗಳಲ್ಲಿ ಊಟಕ್ಕೆ ಹಾಕಿಸಿಕೊಂಡು ಉಳಿಸುವ ಆಹಾರ ಪದಾರ್ಥಗಳನ್ನು ತಿಪ್ಪೆಗೆ ಸುರಿದಾಗ ಭಿಕ್ಷುಕರು, ನಾಯಿಗಳು ಅದಕ್ಕಾಗಿ ಕಿತ್ತಾಡುವ ದೃಷ್ಯ ನೋಡಿಯಾದರೂ ನಾವು ಬದಲಾಗಬೇಕು. ತಿನ್ನೋಣ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಂಡು ತಿನ್ನೋಣ. ಉಳಿದರೆ ಅದು ಇನ್ನೊಬ್ಬರ ಹಸಿವು ಹಿಂಗಿಸಲು ಸಹಕಾರಿ ಆಗುತ್ತದೆ ಎಂಬುದನ್ನು ಮರೆಯದಿರೋಣ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬಿರಿಯುವ ನಾವು ಅದೇ ಆಹಾರ ಪದಾರ್ಥಗಳನ್ನು ಹೀಗೆ ಬೇಕಾಬಿಟ್ಟಿ ವ್ಯರ್ಥ ಮಾಡದಿದ್ದರೆ ಸಹಜವಾಗಿ ಅದು ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಬೆಲೆ ಏರಿಕೆ ಮತ್ತಷ್ಟು ಜನರನ್ನು ಬಡತನಕ್ಕೆ ದೂಡುತ್ತದೆ ಎಂಬುದನ್ನು ಮರೆಯದಿರೋಣ. ನೆರೆಯ ಚೀನಾದಲ್ಲಿ ಅಂತರ್ಜಾಲಿಗರು ಒಂದು ಆಂದೋಳನ ಪ್ರಾರಂಭಿಸಿದ್ದಾರೆ, ಅದೆಂದರೆ ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ತಿನ್ನದೆ ಉಳಿಸುವ ಆಹಾರವನ್ನು ಮನೆಗೆ ಕೊಂಡೊಯ್ದು ಉಪಯೋಗಿಸಲು ಪ್ರೇರಿಸುವುದು. ಇಲ್ಲೂ ಸಹ ಇಂತಹ ಆಂದೋಳನದ ಅಗತ್ಯವಿದೆ.
     ೧೯೭೩ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕರ್ನಾಟಕದ ಹಲವೆಡೆ ಜನರು ಆಹಾರಕ್ಕಾಗಿ ಹಪಹಪಿಸಿ ಅಂಗಡಿ, ಸೊಸೈಟಿಗಳನ್ನು ಲೂಟಿ ಮಾಡಿ ದವಸ ಧಾನ್ಯಗಳನ್ನು ಹೊತ್ತೊಯ್ದಿದ್ದರು. ದೇಶದ ಜನಸಂಖ್ಯೆ ಏರುತ್ತಲೇ ಇದೆ. ಆಹಾರದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಆದರೆ ಆಹಾರ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಜಮೀನುಗಳಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಈ ಅಸಮತೋಲನದಿಂದ ಮುಂದೊಮ್ಮೆ ವಿಪ್ಲವ ಜರುಗಿದರೂ ಆಶ್ಚರ್ಯವಿಲ್ಲ. ಇದರ ಮುನ್ನರಿವಿನಿಂದ ಸರ್ಕಾರ ಮತ್ತು ಜನಗಳು ಎಚ್ಚೆತ್ತುಕೊಂಡು ಸಮತೋಲನ ಕಾಯ್ದುಕೊಳ್ಳಲಾದರೂ ಆಹಾರದ ದುರ್ಬಳಕೆ, ದುರ್ವಿನಿಯೋಗ ಮತ್ತು ಹಾಳಾಗುವುದನ್ನು ತಡೆಯಲು ಮನಸ್ಸು ಮಾಡಬೇಕಿದೆ. ಅದೃಷ್ಟವಶಾತ್ ಭಾರತದಲ್ಲಿ ಕೆಲವು ಯೂರೋಪಿಯನ್ ಮತ್ತು ಅಮೆರಿಕಾ ದೇಶಗಳಲ್ಲಿಯಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿಲ್ಲ. ಆ ದೇಶಗಳಲ್ಲಿ ತರಕಾರಿ ಅಥವ ಹಣ್ಣು ಸರಿಯಾದ ಆಕಾರ ಅಥವ ಬಣ್ಣ ಇಲ್ಲವೆಂದು ಕಂಡರೆ ಎಸೆದುಬಿಡುತ್ತಾರಂತೆ. ಅಲ್ಲಿ ಹಾಳಾದ ಆಹಾರಪದಾರ್ಥಗಳ ಬೆಟ್ಟವೇ ಕಾಣಸಿಗುತ್ತದೆ.
     ಭೂಮಿಯನ್ನು ಜೀವಿಸಲು ಉತ್ತಮ ಸ್ಥಳವೆಂದು ಅನ್ನಿಸಲು ಆಹಾರದ ಸದ್ಬಳಕೆ ಅನಿವಾರ್ಯವಾಗಿದೆ. ಹೆಚ್ಚು ವಿಸ್ತರಿಸದೆ ಮುಗಿಸಿಬಿಡೋಣ. ಏಕೆಂದರೆ ಅಹಾರ ವ್ಯರ್ಥ ಮಾಡುವುದರಿಂದ ಆಗುವ ಕೆಡುಕುಗಳ ಬಗ್ಗೆ ಹೇಳಿಯಾಗಿದೆ. ಬೇರೆಯವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ವೈಯುಕ್ತಿಕವಾಗಿ ನಾವು ಮೊದಲು ಈ ದಿಸೆಯಲ್ಲಿ ಮುಂದುವರೆಯಬೇಕಿದೆ. 'ಕೊಳ್ಳೋಣ, ತಿನ್ನೋಣ ಮತ್ತು ವ್ಯರ್ಥ ಮಾಡೋಣ' ಎಂಬ ನಮ್ಮ ರೂಢಿಗತ ಪ್ರವೃತ್ತಿಯನ್ನು  'ಅಗತ್ಯವಿರುವಷ್ಟು ಮಾತ್ರ ಕೊಳ್ಳೋಣ ಮತ್ತು ಅಗತ್ಯವಿರುವಷ್ಟೇ ತಿನ್ನೋಣ' ಎಂಬುದಕ್ಕೆ ಬದಲಾಯಿಸಿಕೊಳ್ಳಬೇಕಿದೆ.
-ಕ.ವೆಂ.ನಾಗರಾಜ್.
***************
ಪೂರಕ ವಿಶೇಷ ಮಾಹಿತಿ:
'ಅನ್ನಭಾಗ್ಯ' ಯೋಜನೆಗಾಗಿ ಕರ್ನಾಟಕ ಸರ್ಕಾರ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗಿನ 4 ತಿಂಗಳ ಅವಧಿಯಲ್ಲಿ ಮಿಲ್ಲುಗಳ ಮಾಲಿಕರಿಂದ ಒತ್ತಾಯವಾಗಿ 1.61 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿತು. ಇದರಲ್ಲಿ ಬಹುತೇಕ ಅಕ್ಕಿ ಹಾಳಾದ ಸ್ಥಿತಿಯಲ್ಲಿತ್ತು. ಅದರಲ್ಲೇ 93000 ಟನ್ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 63000 ಟನ್ ಅಕ್ಕಿಯನ್ನು ವಿತರಿಸಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ, ಅಂದರೆ ಸಾರ್ವಜನಿಕರಿಗೆ ಸೇರಿದ, ಸುಮಾರು 200 ಕೋಟಿ ರೂ. ಹಣ ನಷ್ಟವಾಯಿತು. ವಿಪರ್ಯಾಸವೆಂದರೆ ಸರ್ಕಾರ ಮಿಲ್ ಮಾಲಿಕರಿಗೆ ಪೂರ್ಣ ಹಣ ಪಾವತಿಸಿತು. ಈ ನಷ್ಟದ ವಿರುದ್ಧ ಸರ್ಕಾರವಾಗಲೀ, ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಂತೂ ಮೈತ್ರೇಯಿಗೌಡ, ಕಾರ್ತಿಕ್ ಗೌಡ, ನಯನಕೃಷ್ಣ, ಬಿಗ್ ಬಾಸುಗಳ ವಿಷಯಗಳೇ ಮಹತ್ವದ ವಿಷಯಗಳೆಂಬಂತೆ ದಿನಗಟ್ಟಲೆ, ವಾರಗಟ್ಟಲೆ ಸುದ್ದಿ, ಚರ್ಚೆಗಳನ್ನು ಬಿತ್ತರಿಸುತ್ತಲೇ ಇವೆ. ಇದು ಅವುಗಳಿಗೆ ಮಹತ್ವದ ಸಂಗತಿಯೇ ಆಗಲಿಲ್ಲ.
-ಕ.ವೆಂ.ನಾ.
*********

ದಿ.18.8.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಸೆಪ್ಟೆಂಬರ್ 1, 2014

ಸಮಾಜದ ಸಾಮರಸ್ಯ - ವೇದಭಾರತಿಯ ಉದ್ದಿಶ್ಯ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 
     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.
***************
     ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.
ಹೊಸದಿಗಂತ:

ಜನಹಿತ:

ಜನಮಿತ್ರ