ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಸೆಪ್ಟೆಂಬರ್ 26, 2013

ನೂರು ವರ್ಷಗಳಿಗೂ ಮೀರಿ ಬದುಕೋಣ !


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಸಾವಿಲ್ಲದ ಜೀವಿಗಳು ಯಾವುದಾದರೂ ಇವೆಯೇ? ಜೀವಿಗಳಿಗೆಲ್ಲಾ ಸಾವು ಖಚಿತವೆಂಬ ಸರಳ ಸತ್ಯವನ್ನು ತಿಳಿಯದವರು, ಒಪ್ಪದವರು ಯಾರಾದರೂ ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ಆಳವಾಗಿ ತರ್ಕಿಸುತ್ತಾ ಹೋದರೆ 'ಬೇಕು' ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಈಗ ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ 'ಬೇಕು' ಅನ್ನುವುದು ಯಾವ ಹಂತದಲ್ಲೇ ಆಗಲಿ, 'ಸಾಕು' ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ 'ಬೇಕು' ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ 'ಬೇಕು'ವಿನ ಪ್ರಮಾಣ ಜಾಸ್ತಿ. ಈ 'ಬೇಕು'ವಿನಿಂದಲೇ ಜೀವಚಕ್ರ ತಿರುಗುತ್ತಿರುವುದು ಎನ್ನಬಹುದು. 'ಬೇಕು'ಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ 'ಬೇಕು' ಇರುತ್ತದೆ. ಈ 'ಬೇಕು'ವಿಗಾಗಿಯೇ ಅವರು ಇತರ ಪ್ರಾಪಂಚಿಕ 'ಬೇಕು'ಗಳನ್ನು ದೂರಮಾಡಿರುತ್ತಾರೆ! 
     ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಒಂದು ಸತ್ಸಂಗದಲ್ಲಿ ಹೇಳಿದ ಪ್ರಸಂಗವಿದು: ಅವರು ಒಮ್ಮೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳನ್ನು ಸಂತಯಿಸುವ ಸಲುವಾಗಿ ಹೋಗಿದ್ದಾಗ ರೋಗದಿಂದ ನರಳುತ್ತಿದ್ದ ಮುದುಕಿಯೊಬ್ಬಳು, "ಯಪ್ಪಾ, ನನಗೆ ನರಳಿ ನರಳಿ ಸಾಕಾಗಿ ಹೋಗಿದೆ. ಜೀವನ ಸಾಕು ಅನ್ನಿಸಿಬಿಟ್ಟಿದೆ. ದಯವಿಟ್ಟು ನನ್ನ ತಲೆಯ ಮೇಲೆ ಕೈಯಿಟ್ಟು ನನ್ನನ್ನು ಬೇಗ ಕರೆಸಿಕೊಳ್ಳಲು ದೇವರಲ್ಲಿ ಹೇಳಪ್ಪಾ" ಅಂದಳಂತೆ. ಆಕೆಯನ್ನು ಸಂತೈಸಿ ಮುಂದೆ ಹೋಗುತ್ತಿದ್ದಾಗ ಆಕೆ ಹಿಂದೆಯೇ ಧಾವಿಸಿ ಬಂದು, "ಯಪ್ಪಾ, ನಿಮಗೆ ದೊಡ್ಡ ಡಾಕ್ಟರು ತುಂಬಾ ಪರಿಚಯ ಅಂತೆ. ಅವರಿಗೆ ಹೇಳಿ ಒಳ್ಳೆಯ ಔಷಧಿ ಕೊಡಲು ಹೇಳಪ್ಪಾ" ಅಂದಳಂತೆ! ಇಲ್ಲಿ ಕಾಣುವುದೇನೆಂದರೆ ಸಾವನ್ನು ಮೀರಿ ಬದುಕಬೇಕೆಂಬ ಆಸೆ. ಇದು ಸಹಜ. ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಏನು ಹೇಳಬಹುದೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲವೆಂಬ ಭಾವದಿಂದ, ಅದು ಇಲ್ಲದೇ ಜೀವನ ವ್ಯರ್ಥವೆಂಬ ಕಾರಣದಿಂದ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲವೆಂಬ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ 'ಬೇಕು'ಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ 'ಬೇಕಾಗಿದೆ'. ಇದು ಏನು ಸೂಚಿಸುತ್ತದೆ? ತಮಗೆ ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ. 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ೧೯೦ ವರ್ಷಗಳವರೆಗೂ ಜೀವಿಸಿದ್ದವರು ಇದ್ದರು. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಸ್ವಾಮಿ ಶ್ರದ್ಧಾನಂದರ ಶಿಷ್ಯರಾದ, ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ್‍ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ನಿಜಬದುಕು ಸಾಗಿಸುತ್ತಿರುವ ಬೆಂಗಳೂರಿನ ೧೧೭ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ್‍ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮಾಡಿಸಿರುವ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 

ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು |
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವ ಸಾಮಾನ್ಯರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ ಅಲ್ಲವೇ? ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು ಎಂಬುದನ್ನು ಮರೆಯಬಾರದು. ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಯಜುರ್ವೇದದ ಈ ಮಂತ್ರ ಮಾನವರು ಬದುಕಬೇಕಾದ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ:
 "ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||"
     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 11, 2013

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 120 ವರ್ಷ

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 120 ವರ್ಷ-ಹಾಸನ ಕಾರ್ಯಕ್ರಮದ ಕೊಂಡಿ ಇಲ್ಲಿದೆ.
 
http://vivekananda150hassan.blogspot.in/2013/09/120.htmlhttp://vivekananda150hassan.blogspot.in/2013/09/120.html

ಮಂಗಳವಾರ, ಸೆಪ್ಟೆಂಬರ್ 10, 2013

ಅವನಿಲ್ಲದೆ ನಾನಿಲ್ಲ, ನಾನಿಲ್ಲದೆ ಅವನಿಲ್ಲ!

ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ |
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ? ||

ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||
    ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು ಕೇಳಿಬಂದಾಗ ಉಬ್ಬಿಹೋಗಿದ್ದೆ. 'ನನ್ನಿಂದಲೇ ಈ ಕೆಲಸ ಆಗಿದ್ದು, ಇಲ್ಲದಿದ್ದರೆ ಆಗುತ್ತಿರಲಿಲ್ಲ'ವೆಂಬ ಭಾವನೆ ನನಗೂ ಬಂದು ಹೆಮ್ಮೆಪಡುತ್ತಿದ್ದಾಗಲೇ ಬಂದಿದ್ದ ಅವನು ನನ್ನನ್ನು ನೋಡಿ ಮುಗುಳ್ನಗುತ್ತಾ ಕರೆದಿದ್ದ: "ಬಾ ಇಲ್ಲಿ."
ನಾನು: (ನಗುತ್ತಲೇ) ಏನು ಸಮಾಚಾರ?
ಅವನು: ಈ ಕೆಲಸ ನೀನೇ ಮಾಡಿದ್ದಾ? ಬಹಳ ಚೆನ್ನಾಗಿದೆ.
ನಾನು: ನಿನಗೂ ಗೊತ್ತಿದೆ, ನಾನೇ ಮಾಡಿದ್ದು ಅಂತ. ತಮಾಷೆ ಮಾಡಬೇಡ. ಎಲ್ಲರೂ ಹೇಳ್ತಾ ಇರೋದನ್ನೂ ಕೇಳ್ತಲೇ ಇದೀಯ.
ಅವನು: ಎಲ್ಲರೂ ಏನಾದರೂ ಹೇಳಲಿ. ನಿನಗೆ ಏನು ಅನ್ನಿಸುತ್ತೆ ಅದನ್ನು ಹೇಳು.
ನಾನು: (ಗಂಭೀರವಾಗಿ) ಅನುಮಾನ ಏಕೆ? ನಾನೇ ಇದನ್ನು ಮಾಡಿದ್ದು.
ಅವನು: ಹಾಗಲ್ಲಪ್ಪಾ. ನಾನು ಕೇಳಿದ್ದು ನೀನು ಅಂದರೆ ಯಾರು ಅಂತ!
ನಾನು: (ಅನುಮಾನದಿಂದ ನೋಡುತ್ತಾ) ನಾನು ಯಾರು ಅಂದರೆ ಏನರ್ಥ? ನಿನ್ನ ಎದುರಿಗೆ ನಿಂತಿರುವ ನನ್ನ ಆರಡಿ ಎತ್ತರದ ಶರೀರವೂ ಕಾಣ್ತಾ ಇಲ್ವಾ?
ಅವನು: ಓ! ಈ ಶರೀರ ನಿನ್ನದಾ?
ನಾನು: ಮತ್ತೇನು ನಿನ್ನದಾ?
ಅವನು: ಹೋಗಲಿ ಬಿಡು. ನಿನ್ನ ಶರೀರ ಅಂದೆಯಲ್ಲಾ, ಅದು ನೀನು ಹೇಳಿದಂತೆ ಕೇಳುತ್ತಾ?
ನಾನು: (ಇವನಿಗೆ ತಲೆ ಕೆಟ್ಟಿರಬೇಕೆಂದುಕೊಂಡು) ನನಗೆ ಸಮಯವಿಲ್ಲ. ಇನ್ನೊಮ್ಮೆ ಮಾತನಾಡೋಣ.
ಅವನು: ನಿನಗೆ ಸಮಯವಿಲ್ಲ. ಆಯಿತು. ನಾನು ಹೇಳುವುದನ್ನು ಬೇಗ ಹೇಳಿಬಿಡುತ್ತೇನೆ. ಈ ಶರೀರ ನಿನ್ನದು. ನೀನು ಹೇಳಿದಂತೆ ಅದು ಕೇಳಿ ಈ ಕೆಲಸ ಮಾಡಿಬಿಟ್ಟಿತು. ಭೇಷ್! ಈಗ ನೀನು ಉಸಿರಾಡ್ತಾ ಇರೋದರಿಂದ ನಿನ್ನ ಶರೀರ ಬದುಕಿದೆ. ಆ ಉಸಿರಾಡೋ ಕೆಲಸದ ಕಂಟ್ರೋಲು ನಿನ್ನ ಕೈಲಿದೆಯಾ? ಹುಟ್ಟಿದ ಕ್ಷಣದಿಂದಲೇ ನಿನಗೆ ಏನೂ ಗೊತ್ತಿಲ್ಲದಿದ್ದಾಗಿನಿಂದಲೇ ಈ ಉಸಿರಾಟ ನಡೀತಿದೆ. ಎಚ್ಚರವಿಲ್ಲದೆ ನೀನು ನಿದ್ದೆ ಮಾಡುತ್ತಿದ್ದಾಗಲೂ ಉಸಿರಾಟ ನಡೀತಾನೇ ಇರುತ್ತೆ. ಈಗ ಹೇಳು, ಈ ಉಸಿರಾಟ ನಿನ್ನಿಂದ ಆಗುತ್ತಿದೆಯಾ ಅಥವ ಬೇರೆ ಯಾರಾದರೂ ಮಾಡಿಸುತ್ತಿದ್ದಾರಾ? ನಿನ್ನಿಂದಲೇ ಉಸಿರಾಟ ಆಗುತ್ತಿದೆ ಅನ್ನವುದಾದರೆ ಈ ಉಸಿರಾಡುವ ಆಟ ನೀನು ನಿಲ್ಲಿಸುವುದೇ ಇಲ್ಲ. ಏಕೆಂದರೆ ನೀನು ಸಾಯಲು ಇಷ್ಟಪಡುವುದೇ ಇಲ್ಲ, ಅಲ್ಲವೇ?
ನಾನು: (ಗೊಂದಲದಿಂದ) ಆಂ?. . . .
ಅವನು: ನಿನ್ನ ಶರೀರದಲ್ಲಿ ರಕ್ತ ಸುತ್ತುತ್ತಲೇ ಇರುತ್ತೆ. ಕೆಟ್ಟ ರಕ್ತ ಹೃದಯಕ್ಕೆ ಹೋಗುತ್ತೆ. ಶುದ್ಧವಾಗಿ ಹೊರಬರುತ್ತೆ. ಕೆಟ್ಟ ರಕ್ತ ಹರಿಯುವ ರಕ್ತನಾಳವೇ ಬೇರೆ, ಒಳ್ಳೆಯ ರಕ್ತ ಹರಿಯುವ ನಾಳಗಳೇ ಬೇರೆ ಇವೆ. ಈ ರಕ್ತ ಹೀಗೇ ಹರಿಯುವಂತೆ ನೀನು ಮಾಡ್ತಾ ಇದೀಯಾ? ಅದನ್ನು ನೀನೇ ಕಂಟ್ರೋಲ್ ಮಾಡ್ತಾಇದೀಯಾ?
ನಾನು: (ತಲೆ ಪರಚಿಕೊಳ್ಳುತ್ತಾ) ಅಯ್ಯೋ!!
ಅವನು: ಸಿಟ್ಟು ಮಾಡಿಕೋಬೇಡ. ನಿನ್ನ ಹೃದಯ ಇದೀಯಲ್ಲಾ, ಅದು ನೀನು ಹುಟ್ಟಿದಾಗಿನಿಂದಲೂ ಲಬ್ ಡಬ್ ಅಂತ ಪುರುಸೊತ್ತಿಲ್ಲದೆ ಹೊಡಕೊಳ್ತಾನೇ ಇದೆ. ಅದಕ್ಕೆ ಯಾವಾಗಲಾದರೂ ಪುರುಸೊತ್ತು ಕೊಡ್ತೀಯಾ? ಕೊಡಕ್ಕೆ ನಿನಗೆ ಆಗುತ್ತಾ? ನಿನ್ನ ಕೈಲಿ ಆಗೋದಿದ್ದರೆ ಅದಕ್ಕೆ ನೀನು ಯಾವತ್ತೂ ವಿಶ್ರಾಂತಿ ಕೊಡೋದೇ ಇಲ್ಲ, ಅಲ್ವಾ? ಏಕೆಂದರೆ ಅದಕ್ಕೆ ವಿಶ್ರಾಂತಿ ಕೊಟ್ಟರೆ ನೀನು ಎಲ್ಲಿ ಇರ್ತೀಯಾ?
ನಾನು: (ಮೆತ್ತಗಾಗಿದ್ದೆ) ನೀನು ಏನು ಹೇಳಬೇಕೆಂದಿದ್ದೀಯಾ? ನೇರವಾಗಿ ಹೇಳು, ಪ್ಲೀಸ್.
ಅವನು: ಪುರುಸೊತ್ತಿಲ್ಲ ಅಂದಿದ್ದೆ? ಹೋಗಲಿ ಬಿಡು. ನಿನ್ನ ತಲೆ ತಿನ್ನುವುದರಿಂದ ನನಗೇನೂ ಲಾಭವಿಲ್ಲ. ನೋಡು, ನೀನು ಉಸಿರಾಡ್ತಾ ಇದೀಯಾ, ನಿನ್ನ ಹೃದಯ ಕೆಲಸ ಮಾಡ್ತಾ ಇದೆ. ಇವೆಲ್ಲದರ ಮೇಲೆ ನಿನ್ನ ಕಂಟ್ರೋಲು ಇಲ್ಲವೇ ಇಲ್ಲ. ಅದನ್ನು ಕಂಟ್ರೋಲು ಮಾಡುತ್ತಿರುವವನೇ ಬೇರೆ ಅಂತ ನಿನಗೆ ಗೊತ್ತಾಯ್ತಲ್ಲಾ, ಅಷ್ಟು ಸಾಕು. ನಿನ್ನ ಕಂಟ್ರೋಲೇ ಇಲ್ಲದೆ, ಬೇರೆಯವರ ಕಂಟ್ರೋಲಿನಿಂದ ಓಡ್ತಾ ಇರೋ ಈ ದೇಹದ ಸಹಾಯದಿಂದ ಮಾಡಿದ ಕೆಲಸ ಮಾತ್ರ ನೀನು ಮಾಡಿದ್ದು ಅಂತ ಹೇಗಾಗುತ್ತೆ?
     ಅವನು ಈ ರೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾಗ ಅರಿವಿಲ್ಲದೆ ನಾನು ಕಣ್ಣು ಮುಚ್ಚಿ ಯೋಚಿಸುತ್ತಿದ್ದವನು, ಅವನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದಾಗ ಫಕ್ಕನೆ ಕಣ್ಣು ಬಿಟ್ಟು ನೋಡಿದೆ. ನೋಡಿದರೆ ಅವನು ಅಲ್ಲಿ ಇರಲೇ ಇಲ್ಲ. "ಏಯ್, ಎಲ್ಲಿದೀಯಾ?" ಎಂದು ಕೂಗಿದೆ. "ಹೇಳು, ನೀನು ಹೇಳಿದ್ದು ನನಗೆ ಕೇಳುತ್ತೆ. ನಾನು ಇಲ್ಲೇ ಇದ್ದೇನೆ" ಎಂಬ ಮಾತು ಕೇಳಿಸಿತು. ಆ ಮಾತುಗಳು ನನ್ನ ಒಳಗಿನಿಂದಲೇ ಬಂದಂತೆ ಅನ್ನಿಸಿತು. 
ನಾನು: ಹಾಂ? ನೀನು ನನ್ನೊಳಗೆ ಇದ್ದೀಯಾ? ಅಲ್ಲಿಗೆ ಹೇಗೆ ಹೋದೆ?
ಅವನು: ನಾನು ಇರುವುದೇ ಇಲ್ಲಿ. ಇಲ್ಲಿ ಬಿಟ್ಟು ಇನ್ನು ಎಲ್ಲಿಗೆ ಹೋಗಲಿ? ನೀನು ಇರುವ ಹೊತ್ತಿಗೇ ನಾನೂ ಇರೋದು. ನೀನಿಲ್ಲದಿದ್ದರೆ ನಾನೆಲ್ಲಿ ಇರ್ತಾ ಇದ್ದೆ? ನನ್ನನ್ನು ಕಂಟ್ರೋಲು ಮಾಡೋನೇ ನೀನು! ನೀನಿಲ್ಲದೆ ನಾನಿಲ್ಲ.
     ನನಗೆ ತಲೆ ಕೆಟ್ಟುಹೋದಂತಾಯಿತು. 'ನಾನಿಲ್ಲದೆ ಅವನಿಲ್ಲವಂತೆ! ನನ್ನ ಮೇಲೆ ನನಗೇ ಕಂಟ್ರೋಲಿಲ್ಲ. ನನ್ನನ್ನು ಕಂಟ್ರೋಲು ಮಾಡೋನೇ ಬೇರೆ ಇರುವಾಗ, ನಾನು ಅವನನ್ನು ಕಂಟ್ರೋಲು ಮಾಡ್ತೀನಂತೆ!' ಎಂದು ನಗುವೂ ಬಂತು. ಹೀಗೇ ಯೋಚಿಸುತ್ತಿದ್ದವನಿಗೆ ಏನೋ ಹೊಳೆಯಿತು. ಹೌದು, ನನ್ನನ್ನು ಕಂಟ್ರೋಲು ಮಾಡುತ್ತಿರುವವನು 'ಅವನೇ' ಇರಬೇಕು! ಕರೆಕ್ಟ್!! ಅವನೇ!! ಈಗ ಸರಿಯಾಯಿತು. ನನ್ನನ್ನು ಅವನು, ಅವನನ್ನು ನಾನು ಕಂಟ್ರೋಲ್ ಮಾಡ್ತಾ ಇದೀವಿ. ನನ್ನನ್ನು ಅವನು ಕಂಟ್ರೋಲ್ ಮಾಡುತ್ತಿರುವುದರಿಂದ ಅವನೇ ಗ್ರೇಟ್! ನಾನು ಇರುವುದರಿಂದಲೇ ಅವನು ಇರೋದು ಗೊತ್ತಾಗೋದು! ಅದಕ್ಕೇ ನಾನೂ ಗ್ರೇಟ್!!
     ನಾನಿಲ್ಲದೆ ಅವನಿಲ್ಲ, ಅವನಿಲ್ಲದೆ ನಾನಿಲ್ಲ! ಹೀಗೆ ನನ್ನಷ್ಟಕ್ಕೇ ನಾನೇ ಜಂಬಪಟ್ಟುಕೊಳ್ಳುತ್ತಿದ್ದಾಗ ಮೂಢನ ಗೊಣಗು ಕೇಳಿಸಿತು:
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷ ರಸ ಹರಿವ ಕೊಂಬೆ ನೀನು ಮೂಢ||

-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 2, 2013

ಯಜ್ಞೋಪವೀತ - ಒಂದು ಜಿಜ್ಞಾಸೆ

     ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ ಮಗನೂ ಬ್ರಾಹ್ಮಣನೆನಿಸುತ್ತಾನೆ ಮತ್ತು  ಜನಿವಾರವೆನ್ನುವುದು ಬ್ರಾಹ್ಮಣನಾಗಿರುವ ಸೂಚಕವಾಗಿರುತ್ತದೆ. ಆಚರಣೆಯಲ್ಲಿರುವ ಈ  ನಂಬಿಕೆಗೂ ವಾಸ್ತವ ಸತ್ಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಪೂರ್ವಾಗ್ರಹರಹಿತರಾಗಿ ವಿಚಾರ ವಿಮರ್ಶೆ ಮಾಡುವ ಮನಸ್ಸುಗಳಿಗೆ ಅರ್ಥವಾಗಬಹುದು. ನಾಲ್ಕೂ ವೇದಗಳಲ್ಲಿ ಈಗ ಲಭ್ಯವಿರುವುದೆಂದು ಹೇಳಲಾಗಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮಂತ್ರಗಳ ಪೈಕಿ ಯಾವುದೇ ಒಂದು ಮಂತ್ರದಲ್ಲೂ ಹುಟ್ಟಿನಿಂದ ಬರುವ ಜಾತಿಪದ್ಧತಿಯನ್ನು ಸಮರ್ಥಿಸುವ ಒಂದು ಮಂತ್ರವೂ ಇಲ್ಲವೆಂದು ಹೇಳುತ್ತಾರೆ. ವೇದಗಳಲ್ಲಿ ಬರುವ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯರ ಕುರಿತು ಉಲ್ಲೇಖಗಳು ವರ್ಣಗಳಾಗಿವೆ. ವರ್ಣ ಪದದ ಅರ್ಥ 'ಆರಿಸಿಕೊಳ್ಳುವುದು' ಎಂಬುದಾಗಿದೆ. ಯಾರೇ ಆಗಲಿ, ತಮ್ಮ ತಮ್ಮ ಗುಣ, ಸಾಮರ್ಥ್ಯ, ಕರ್ಮ, ಸ್ವಭಾವ, ಇತ್ಯಾದಿಗಳಿಗೆ ಹೊಂದುವ ವರ್ಣವನ್ನು ಆರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ಮೇಲು-ಕೀಳುಗಳ ಪ್ರಶ್ನೆಯಿಲ್ಲ. ಹುಟ್ಟಿನಿಂದ ಯಾರೂ ಈ ವರ್ಣಗಳಿಗೆ ಸೇರಿದವರೆಂದು ಪರಿಗಣಿಸಲಾಗದು. ಯಾವುದೋ ಗೊತ್ತಿಲ್ಲದ ಬಹಳ ಹಿಂದಿನ ಕಾಲಘಟ್ಟದಲ್ಲಿ ಮೇಲು-ಕೀಳುಗಳ ಭಾವನೆಯನ್ನು ಸಮಾಜದ್ರೋಹಿಗಳು  ಸೃಷ್ಟಿಸಿರಬಹುದಾಗಿದ್ದು, ವೇದಗಳಲ್ಲಿ ಮೇಲು-ಕೀಳುಗಳ ಭಾವನೆ ಎಲ್ಲೂ ಇರುವುದಿಲ್ಲ. ಈ ವಿಚಾರವೇ ದೀರ್ಘವಾಗಿ ಚರ್ಚಿಸಬಹುದಾದ ಸಂಗತಿಯಾಗಿದೆ.
     ಭಗವಂತನ ಸ್ಟೃಷ್ಟಿಯಲ್ಲಿ ಅನೇಕ ಜೀವವೈವಿಧ್ಯಗಳಿವೆ. ವಿವಿಧ ಜೀವಿಗಳ ವರ್ಗಗಳನ್ನೇ ಜಾತಿಗಳೆನ್ನಬಹುದು. ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು. ಕತ್ತೆಯ ಹೊಟ್ಟೆಯಲ್ಲಿ ಹುಟ್ಟುವುದು ಕತ್ತೆಯೇ ಹೊರತು ಬೆಕ್ಕಲ್ಲ. ಹಾಗೆಯೇ ಮನುಷ್ಯರಿಂದ ಮನುಷ್ಯರು ಹುಟ್ಟುತ್ತಾರೆಯೇ ಹೊರತು ಬೇರೆ ಅಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರ ಜಾತಿ ಅನ್ನಬಹುದೇ ಹೊರತು ಬೇರೆ ಹೇಳಲಾಗದು. ಭಗವಂತನ ಸೃಷ್ಟಿಯಲ್ಲಿನ ವೈವಿಧ್ಯ ಒಂದಕ್ಕೊಂದು ಪೂರಕವಾಗಿದ್ದರೆ, ಮಾನವನಿರ್ಮಿತ ವೈವಿಧ್ಯ ಹೆಚ್ಚಿನ ಸಂಗತಿಗಳಲ್ಲಿ ವಿನಾಶಕವಾಗಿವೆ. ಹುಟ್ಟಿನ ಜಾತಿ ಅನ್ನುವುದು ಮಾನವರ ಸೃಷ್ಟಿಯೇ ಹೊರತು ಮತ್ತೇನಲ್ಲ. ಅದು ದೇವರ ಸೃಷ್ಟಿ ಆಗಿದ್ದರೆ ನೋಡಿದ ತಕ್ಷಣ ಇಂತಹ ಜಾತಿ ಎಂದು ಹೇಳಲು ಅವಕಾಶವಿರುತ್ತಿತ್ತು.  ತಂದೆ-ತಾಯಿಯರು ಗೊತ್ತಿಲ್ಲದ ಅನಾಥರದ್ದು ಯಾವ ಜಾತಿ? ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ ಗುರುತಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ. ಆದರೆ ದೇವರ ಸೃಷ್ಟಿಯಾದ ಒಂದು ಕುದುರೆ ನಾಯಿಯಾಗಬಹುದೇ? ಬೆಕ್ಕು ಇಲಿಯಾಗಲು ಸಾಧ್ಯವೇ? ಹುಟ್ಟಿನಿಂದ ಜಾತಿ ಬರುವುದಿಲ್ಲ ಎಂಬುದಕ್ಕೆ ಇಷ್ಟು ಸಾಕೆನಿಸುತ್ತದೆ. ಮನುಷ್ಯರಲ್ಲಿ ಇರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ ಅಷ್ಟೆ. 
     ೧೬ ಸಂಸ್ಕಾರಗಳಲ್ಲಿ ಒಂದಾದ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಯಜ್ಞೋಪವೀತ (ಜನಿವಾರವನ್ನು) ಹಾಕಿಸಲಾಗುತ್ತದೆ. 'ಉಪ' ಎಂದರೆ ಸಮೀಪಕ್ಕೆ, 'ನಯನ'ವೆಂದರೆ ಕರೆದೊಯ್ಯುವುದು ಎಂಬುದು ಪದಶಃ ಅರ್ಥ. ಹಿಂದೆ ಮಕ್ಕಳಿಗೆ ವೇದಾಭ್ಯಾಸ, ಶಿಕ್ಷಣ ಕೊಡಿಸುವ ಸಲುವಾಗಿ ಸುಯೋಗ್ಯ ಗುರುಕುಲಕ್ಕೆ ಕಳುಹಿಸಿಕೊಡುವಾಗ ಈ ಉಪನಯನ ವಿಧಿಯನ್ನು ಆಚರಿಸಲಾಗುತ್ತಿತ್ತು. ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಗುರುಕುಲಕ್ಕೆ ಹೋಗುವ ಮಕ್ಕಳೆಲ್ಲರೂ ಈ ವಿಧಿಯನ್ನು ಪಾಲಿಸಿ ಯಜ್ಞೋಪವೀತಧಾರಿಗಳಾಗುತ್ತಿದ್ದರು. ಯಜ್ಞೋಪವೀತ ಧರಿಸುವಾಗ 'ನಾನು ಸತ್ಯದ ದಾರಿಯಲ್ಲಿ ನಡೆಯುತ್ತೇನೆ; ವ್ರತಗಳನ್ನು ಪಾಲಿಸುತ್ತೇನೆ; ಶಿಸುಬದ್ದ ಜೀವನ ನಡೆಸುತ್ತೇನೆ' ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿಸುವುದಿದೆ. ಆಗಲೇ ಹೇಳಿರುವಂತೆ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಕ್ರಮೇಣ ಅದು ಒಂದು ವರ್ಗಕ್ಕೆ ಮತ್ತು ಪುರುಷರಿಗೆ ಮಾತ್ರ ಸೀಮಿತವಾದ ಕ್ರಿಯೆಯಾಗಿ ಪರಿವರ್ತಿತವಾಗಿಬಿಟ್ಟಿದೆ. ವೇದದ ಬೆಳಕಿನಲ್ಲಿ ಸತ್ಯವನ್ನು ಅರಸುವ ಯಾರಿಗೇ ಆಗಲಿ, ಇದು ಒಂದು ವರ್ಗದವರಿಗೆ ಅಥವ ಪುರುಷರಿಗೆ ಮಾತ್ರ ಸೀಮಿತವಾದ ಸಂಸ್ಕಾರವಲ್ಲವೆಂಬುದು ಗೋಚರವಾಗದಿರದು.
     ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಆ ಮೂರು ಋಣಗಳನ್ನು ತೀರಿಸುವ ಸಂಕಲ್ಪ ಮಾಡುವ ಸಂಕೇತವಾಗಿದೆ. ಈ ಮೂರು ಋಣಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತ ಎಂದರೆ ಹಾಸ್ಯಾಸ್ಪದವೆನಿಸುತ್ತದೆ. ಋಗ್ವೇದದ ಈ ಎರಡು ಮಂತ್ರಗಳು ಯಜ್ಞೋಪವೀತಧಾರಿಯ ಕರ್ತವ್ಯಗಳನ್ನು ಹೇಳುತ್ತವೆ:
ತ್ರಿವಂಧುರೇಣ ತ್ರಿವ್ರತಾ ರಥೇನ ತ್ರಿಚಕ್ರೇಣ ಸುವೃತಾ ಯಾತಮರ್ವಾತ್ |
ಪಿನ್ವತಂ ಗಾ ಜಿನ್ವತಮರ್ವತೋ ನೋ ವರ್ಧಯತಮಶ್ವಿನಾ ವೀರಮಸ್ಯೇ || (ಋಕ್.೧.೧೧೮.೨.)
     ಮೂರು ಉನ್ನತಶೀಲ, ಪ್ರಗತಿಪಥಕ್ಕೊಯ್ಯುವ, ಸತ್ವ ಮತ್ತು ಒಳ್ಳೆಯತನಗಳಿಂದ ಸುತ್ತುವರೆದ, ಮೂರು ಬಂಧನಗಳನ್ನು ಚಕ್ರವಾಗಿ ಹೊಂದಿರುವ ಜೀವನರಥದಲ್ಲಿ ಮುಂದೆ ಸಾಗಿರಿ. ನಿಮ್ಮ ಇಂದ್ರಿಯಗಳು, ವಾಣಿಯನ್ನು ಶಕ್ತಿಯುತವನ್ನಾಗಿಸಿಕೊಳ್ಳಿ, ಜೀವಾತ್ಮ ಚೇತನವನ್ನು ವಿಕಾಸಗೊಳಿಸಿಕೊಳ್ಳಿ ಮತ್ತು ಆತ್ಮನಿಗಾಗಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದು ಇದರ ಅರ್ಥ.
ತ್ರಿವಂಧುರೇಣ ತ್ರಿವ್ರತಾ ಸುವೇಶಸಾ ರಥೇನ ಯಾತಮಶ್ವಿನಾ |
ಕಣ್ವಾಸೋ ವಾಂ ಬ್ರಹ್ಮ ಕೃಣ್ವಂತ್ಯಧ್ವರೇ ತೇಷಾಂ ಸು ಶೃಣುತಂ ಹವಮ್ || (ಋಕ್.೧.೪೭.೨.)
     ಮೂರು ಬಂಧನಗಳ, ಮೂರು ತತ್ವಗಳಿಂದ ಕೂಡಿದ ಸುಶೋಭಿತ ಜೀವನರಥಯಾನ ಮಾಡಿರಿ. ಧ್ಯಾನಶೀಲ ಜ್ಞಾನಿಗಳು ಅಹಿಂಸಾವೃತ್ತಿಯಲ್ಲಿ ತಿಳಿಸಿಕೊಡುವ ವೇದಜ್ಞಾನವನ್ನು ಪಡೆದುಕೊಳ್ಳಿರಿ ಎನ್ನುವ ಮಂತ್ರದ ಅರ್ಥ ಸುಸ್ಪಷ್ಟವಾಗಿದೆ. ಪ್ರತಿ ಜೀವಿಗೆ ಇರುವ ಮೂರು ಋಣಗಳ -ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಬಗ್ಗೆ ಅವನ ಬದ್ಧತೆಯನ್ನು ಜ್ಞಾಪಿಸುವುದೇ ಈ ಮಂತ್ರಗಳ ಉದ್ದೇಶವಾಗಿದೆ.
     ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿಹಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ಭೌತಿಕ ಶರೀರ ಬರಲು ಕಾರಣರಾದ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. ಮಾನವಧರ್ಮದ ಮೂರು ಬೇರ್ಪಡಿಸಲಾಗದ ಅಂಗಗಳಾದ ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನೂ ಸಹ ಯಜ್ಞೋಪವೀತದ ಮೂರು ಎಳೆಗಳು ಸಂಕೇತಿಸುತ್ತವೆ. ಜೀವನದ ಉದ್ದೇಶವಾದ ಸತ್ಯದ ಅನ್ವೇಷಣೆಗೆ ಜ್ಞಾನ ಅಗತ್ಯ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ, ಅದನ್ನು ಅನುಷ್ಠಾನಗೊಳಿಸುವ ಕರ್ಮದಿಂದ ಜ್ಞಾನಕ್ಕೆ ಅರ್ಥ ಬರುತ್ತದೆ. ಜ್ಞಾನ, ಕರ್ಮಗಳನ್ನು ಭಗವಂತನ ಕೃಪೆಯೆಂದು ತಿಳಿದು ಮಾಡುವುದೇ ಉಪಾಸನೆ.
     ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕೆನ್ನಿಸುತ್ತಿದೆ. ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ ಬಾಹ್ಮಣಿಕೆಯ (ಜಾತಿಯಲ್ಲ), ಸಜ್ಜನಿಕೆಯ, ಸಚ್ಚಾರಿತ್ರ್ಯದ ನಡವಳಿಕೆಯನ್ನು ಹೊಂದುವ ಸಂಕಲ್ಪದ ಸಂಕೇತವೇ ಹೊರತು ಮತ್ತೇನೂ ಅಲ್ಲ. ಸಜ್ಜನಿಕೆಯ, ಸಚ್ಚಾರಿತ್ರ್ಯವನ್ನು ಹೊಂದುವುದು ನಿಜವಾದ ಮಾನವಧರ್ಮವಾಗಿದೆ. ಯಜ್ಞೋಪವೀತ ಧರಿಸಿದವರು ಸಚ್ಚಾರಿತ್ರ್ಯವಂತನಾದರೆ ಯಜ್ಞೋಪವೀತಕ್ಕೆ ಬೆಲೆಯಿರುತ್ತದೆ. ನೇರವಾಗಿ ಹೇಳಬೇಕೆಂದರೆ ಯಜ್ಞೋಪವೀತ ಧರಿಸಿದಾಕ್ಷಣ ಒಬ್ಬ ಸಚ್ಚಾರಿತ್ರ್ಯವಂತನಾಗುವುದಿಲ್ಲ ಅಥವ ಈಗಿನ ಬಳಕೆಯಲ್ಲಿ ತಿಳಿದಿರುವಂತೆ ಬ್ರಾಹ್ಮಣ್ಯ ಬರುವುದಿಲ್ಲ. ಯಜ್ಞೋಪವೀತವು ಅದನ್ನು ಧರಿಸಿದವರು ಬ್ರಾಹ್ಮಣ್ಯವನ್ನು(ಜಾತಿಯಲ್ಲ), ಸಚ್ಚಾರಿತ್ರ್ಯವನ್ನು ಗಳಿಸಬೇಕೆಂದು, ಉಳಿಸಿಕೊಳ್ಳಬೇಕೆಂದು ನೆನಪಿಸುವ ಕೇವಲ ಸಾಧನ ಮಾತ್ರವಾಗಿದೆ.

     ಕೇವಲ ಉತ್ತಮ ವಿಚಾರ ಹೊಂದಿದ್ದರೆ ಸಾಲದು, ಅದು ಆಚರಣೆಗೂ ಬರಬೇಕು. ಹಾಗಾದಾಗ ಮಾತ್ರ ವಿಚಾರಕ್ಕೆ ಬೆಲೆ, ಮನ್ನಣೆ ಸಿಗುತ್ತದೆ. ವಿಚಾರ ಮತ್ತು ಆಚಾರದ ಸಮನ್ವಯತೆ ಕಂಡ ಈ ಪ್ರಸಂಗ ಉಲ್ಲೇಖಾರ್ಹವಾಗಿದೆ. ಹಾಸನದ ವೇದಭಾರತೀ ಸಂಸ್ಥೆಯು ಕಳೆದ ಒಂದು ವರ್ಷದಿಂದಲೂ ಜಾತಿ, ಮತ, ಪಂಥ, ಲಿಂಗ ಮತ್ತು ವಯೋತಾರತಮ್ಯವಿಲ್ಲದೆ ಎಲ್ಲರಿಗೂ ವೇದಾಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಹಲವಾರು ಚಿಂತಕರುಗಳಿಂದ ಉಪನ್ಯಾಸಗಳು, ಸಂವಾದಗಳನ್ನು ಏರ್ಪಡಿಸಿದೆ. ಮಕ್ಕಳಲ್ಲೂ ವೇದದ ಕಲಿಕೆ ಪ್ರೋತ್ಸಾಹಿಸಲು ಬಾಲಸಂಸ್ಕಾರ ಶಿಬಿರ ನಡೆಸಿದೆ. ಇತ್ತೀಚೆಗೆ ಮೂರು ದಿನಗಳ ವೇದೋಕ್ತ ಜೀವನ ಶಿಬಿರವನ್ನೂ ಹಾಸನದಲ್ಲಿ ನಡೆಸಿದ್ದು, ಮಹಾರಾಷ್ಟ್ರದ ಪುಣೆ, ಕರ್ನಾಟಕದ ಬೆಂಗಳೂರು, ದೊಡ್ಡಬಳ್ಳಾಪುರ, ತುಮಕೂರು, ಭದ್ರಾವತಿ, ಕನಕಪುರ, ಬೆಳ್ತಂಗಡಿ, ಚನ್ನರಾಯಪಟ್ಟಣ, ಬೇಲೂರು ಮತ್ತು ಹಾಸನಗಳಿಂದ ಬಂದಿದ್ದ ಸುಮಾರು ೬೦ ಆಸಕ್ತರು ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನದಂದು ಏಳು ಶಿಬಿರಾರ್ಥಿಗಳು -ನಾಲ್ವರು ಮಹಿಳೆಯರೂ ಸೇರಿದಂತೆ- 'ಉಪನಯನ' ಸಂಸ್ಕಾರ ಪಡೆದರು. ಶ್ರೀ ಸುಧಾಕರ ಶರ್ಮರವರು ಉಪನಯನದ ನೈಜ ಅರ್ಥವನ್ನು ಮತ್ತು ಉಪನಯನ ವಿಧಿಯ ಪ್ರತಿ ಮಂತ್ರಾರ್ಥವನ್ನು ವಿವರಿಸುತ್ತಿದ್ದರೆ, ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಕೇಳಿ ವಿಚಾರಗಳನ್ನು ಸರಿಯೆಂದು ಮನಗಂಡಿದ್ದು ವಿಶೇಷವಾಗಿತ್ತು. ಪತ್ರಿಕಾ ಮತ್ತು ದೃಷ್ಯಮಾಧ್ಯಮಗಳವರೂ ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದು, ಸುದ್ದಿ ಎಲ್ಲೆಡೆಯೂ ಪ್ರಚುರವಾಯಿತು. ಈಗಿನವರ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರೆನಿಸದವರೂ ಸಂಸ್ಕಾರ ಪಡೆದ ಈ ಏಳು ಜನರಲ್ಲಿದ್ದರು. ಶ್ರದ್ಧೆಯಿಂದ ವೇದಾಭ್ಯಾಸ ಮಾಡುತ್ತಿರುವ ಅವರು ಈ ಸಂಸ್ಕಾರ ಪಡೆದುದು ಸ್ತುತ್ಯಾರ್ಹವೇ ಆಗಿದೆ. ಅವರು ಯಜ್ಞೋಪವೀತ ಧರಿಸಿ ಈಗಿನ ರೂಢಿಯ ಬ್ರಾಹ್ಮಣರೆನಿಸುವ ಸಲುವಾಗಿ ಜಾತಿ ಬದಲಾಯಿಸಿಕೊಳ್ಳಬೇಕೆಂದುಕೊಂಡವರಲ್ಲ, ಬದಲಾಯಿಸಿಕೊಂಡವರಲ್ಲ, ಆ ಉದ್ದೇಶವೂ ಅವರದಲ್ಲ ಮತ್ತು ಅದರ ಅಗತ್ಯವೂ ಅವರಿಗಿಲ್ಲ. ಮೊದಲೇ ಹೇಳಿದಂತೆ ಹುಟ್ಟಿನ ಜಾತಿಗೆ ಮತ್ತು ಲಿಂಗಭೇದಕ್ಕೆ ವೇದಗಳಲ್ಲಿ ಯಾವುದೇ ಸ್ಥಾನವಿಲ್ಲ. ವೇದಗಳು ಹೇಳುವ ನೈಜ ವಿಚಾರಗಳಿಗೆ ಮನಸೋತು ಸ್ವ ಇಚ್ಛೆಯಿಂದ ಯಜ್ಞೋಪವೀತ ಧರಿಸಿದ ಅವರು ಅಭಿನಂದನಾರ್ಹರು. ಮಹಿಳೆಯರು ವೇದಾಭ್ಯಾಸ ಮಾಡಬಾರದು, ವೇದಗಳು ಒಂದು ವರ್ಗದ ಸ್ವತ್ತು ಎಂಬ ರೂಢಿಗತ ಅಂಧ ನಂಬಿಕೆಗಳನ್ನು ಅಲುಗಾಡಿಸಿ ವೇದ ತೋರಿದ ಸತ್ಯ ಪಥದಲ್ಲಿ ನಡೆದ, ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿದ, 'ಆಡದೆ ಮಾಡಿದ ರೂಢಿಯೊಳಗುತ್ತಮರ' ಸಾಲಿಗೆ ಸೇರಿದ ಅವರೇ ಧೈರ್ಯವಂತರು. ಏನಾದರೂ ಬದಲಾವಣೆ ಬರುವುದಿದ್ದರೆ ಇಂತಹವರಿಂದಲೇ ಸರಿ!   
-ಕ.ವೆಂ.ನಾಗರಾಜ್.