ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಸೆಪ್ಟೆಂಬರ್ 29, 2011

ಮಕ್ಕಳನ್ನು ಬೆಳೆಸುವುದು ಹೇಗೆ? - ಮಾತಾಜಿ ವಿವೇಕಮಯೀ ಅವರ ಉಪನ್ಯಾಸ

ಹಾಸನದಲ್ಲಿ ದಿನಾಂಕ ೩೦.೧೧.೨೦೦೮ ರಂದು ಬೆಂಗಳೂರಿನ ಭವತಾರಣಿ ಆಶ್ರಮದ ಮಾತಾಜಿ ವಿವೇಕ ಮಯೀ ಅವರು ಮಾಡಿದ ಉಪನ್ಯಾಸ



















[ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀಮತಿ ಉಷಾಲತಾ, ಮಾತಾಜಿ ವಿವೇಕಮಯೀ ಮತ್ತು ಮಾತಾಜಿ ತ್ಯಾಗಮಯೀ- ಉಭಯಕುಶಲೋಪರಿಯಲ್ಲಿ] 
ಇಂದಿನ ಸಮಾಜದಲ್ಲಿ ನಾವು ಚಿಂತಿಸುವ ರೀತಿಯಾದರೂ ಹೇಗಿರುತ್ತೆ?              
     ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು, ಏಕೆಂದರೆ ಮುಂದೆ ಒಳ್ಳೆಯ ಕಾಲೇಜಿಗೆ ಸೇರಿಸ ಬೇಕು, ಒಳ್ಳೆಯ ಕಾಲೇಜಾದರೂ ಏಕೆಂದರೆ ನಮ್ಮ ಮಕ್ಕಳು ಒಳ್ಳೆಯ ಕೆಲಸಕ್ಕೆ ಸೇರಿ ತುಂಬಾ ಸಂಪಾದಿಸಬೇಕು, ಸುಖವಾದ ಜೀವನ ಮಾಡಬೇಕು, ಅಂತೂ ತುಂಬಾ ಹಣ ಸಂಪಾದಿಸಿದರೆ ನಮ್ಮ ಮಕ್ಕಳ ಜೀವನ ಸುಖವಾಗಿರುತ್ತದೆ, ಎಂಬ ಕಲ್ಪನೆ.
ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ:
     ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುತ್ತಾನೆ. ಅವನ ತಾಯಿಗೆ ವಿಷಯ ತಿಳಿಸಲು ಹೋಗುತ್ತಾನೆ. ಅವರ ಅಮ್ಮನಿಗೆ ತುಂಬಾ ಆನಂದವಾಗುತ್ತೆ ಎಂದು ಸಹಜವಾಗಿ ಬಯಸಿದ್ದ ವಿದ್ಯಾರ್ಥಿಗೆ ಅವನ ತಾಯಿ 
ಸಂತೋಷ ಎಂದಷ್ಟೇ ಹೇಳಿ ಮೌನವಾಗಿಬಿಡುತ್ತಾಳೆ. ವಿದ್ಯಾರ್ಥಿಗೆ ಸಹಜವಾಗಿ ಬೇಜಾರಾಗಿಬಿಡುತ್ತೆ. ಅವನು ಅಮ್ಮನನ್ನು ಕೇಳುತ್ತಾನೆ. ಅಮ್ಮ,ನಾನು ಅತ್ಯಂತ ಉನ್ನತ ಶ್ರೇಣಿಯಲ್ಲಿ ನಮ್ಮ ಯೂನಿವರ್ಸಿಟಿಗೆ ಪ್ರಥಮನಾಗಿ ತೇರ್ಗಡೆ ಹೊಂದಿರುವುದು ನಿನಗೆ ಸಂತೋಷದ ವಿಷಯ ವಲ್ಲವೇ? ಅದಕ್ಕೆ ಅವನ ತಾಯಿ ಹೇಳುತ್ತಾಳೆ ನೋಡು ನೀನು ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಮುಂದೆ ಒಳ್ಳೆಯ ಕೆಲಸಕ್ಕೆ ಸೇರುವುದು, ಯಾವುದೂ ನನಗೆ ದೊಡ್ದ ವಿಷಯವಲ್ಲ, ನೀನು ಎಷ್ಟು ಸಂಪತ್ತು ಸಂಪಾದಿಸುತ್ತೀಯ ಎಂಬುದು ಮುಖ್ಯವಲ್ಲ,ಆದರೆ ನಿನ್ನ ಬದುಕನ್ನು ಹೇಗೆ ರೂಪಿಸುತ್ತೀಯ ಎಂಬುದು ಮುಖ್ಯ. ಕೂಲಿ ಕೆಲಸ ಮಾಡಿದರೂ ಚಿಂತೆಯಿಲ್ಲ ನನ್ನ ಮಗ ಪ್ರಾಮಾಣಿಕನಾಗಿ ಜೀವನ ಮಾಡುತ್ತಾನಾ? ಜೀವನದಲ್ಲಿ ಆದರ್ಶವಾಗಿ ಬದುಕಿ ತೋರಿಸುತ್ತಾನಾ? ಅದು ಮುಖ್ಯ! ವಿದ್ಯಾರ್ಥಿ ಜೀವನದಲ್ಲಿ ಅಂತಹ ಒಬ್ಬ ತಾಯಿಯ ಆದರ್ಶದಿಂದ ಇಂದು ಸಮಾಜದಲ್ಲಿ ಸುರೇಶ್ ಕುಲಕರ್ಣಿಯವರಂತಹ ಪ್ರಾಮಾಣಿಕ ಚಿಂತಕರನ್ನು ಕಾಣ ಬಹುದಾಗಿದೆ. ಅಂದು ಆರು- ಏಳು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗೆ ಅವನ ತಾಯಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಚೆನ್ನಾಗಿ ಹಣ ಸಂಪಾದಿಸು  ಎಂದಷ್ಟೇ ಹೇಳಿದ್ದರೆ ಸಮಾಜಕ್ಕೆ ಇಂತಹ ಮಹನೀಯರು ಸಿಗುತ್ತಿರಲಿಲ್ಲ- ಅಲ್ಲವೇ  ಅಂದು ಸುರೇಶ್ ಕುಲಕರ್ಣಿಯವರಿಗೆ ಗೋಚರವಾಯ್ತು, ಪದವಿಯಲ್ಲಿ ಪಡೆದ ಚಿನ್ನದ ಪದಕಕ್ಕಿಂತಲೂ ಹೆಚ್ಚಿನದು ಹಣ ಗಳಿಸುವುದಕ್ಕಿಂತ ಹೆಚ್ಚಿನದು ಜೀವನದಲ್ಲಿ ಬೇರೆ ಯೇನೋ ಇದೆ ಎಂದು. ಹೌದು, ಜೀವನದಲ್ಲಿ ನಾವು ಗಳಿಸುವ ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ, ಆದರೆ ನಾವು ಅದಕ್ಕೆ ಅಂತಹ ಸ್ಥಾನವನ್ನು ಕೊಡಬೇಕಷ್ಟೆ.ನಾವು ಜೀವನದಲ್ಲಿ ಮೌಲ್ಯಗಳಿಗೆ ಸ್ಥಾನ ಕೊಡಬೇಕು. ನಿಧಾನವಾಗಿ ನಮ್ಮ ಸಹಜ ಜೀವನ ಹೇಗೆ ಬದಲಾಗುತ್ತಿದೆ! ನಮ್ಮ ಪರಂಪರಾಗತ ಜೀವನದ ಆದರ್ಶಗಳು ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿ ಜೀವನದ ಸುಖಭೋಗಗಳಿಗೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಡುತ್ತಾ, ನಮ್ಮ ಆದರ್ಶಗಳು ಹೇಗೆ  ಮರೆಯಾಗುತ್ತಿವೆ! ನಮ್ಮ ಜೀವನದ ಅಗತ್ಯಗಳು ಹೆಚ್ಚುತ್ತಾ ಹೆಚ್ಚುತ್ತಾ,  ಸುಖಭೋಗಗಳು ಹೆಚ್ಚಿನ ಪ್ರಾಶಸ್ತ್ಯ ಗಳಿಸುತ್ತಾ ಮನುಷ್ಯಜೀವನದ ಎಲ್ಲಾ ಶಕ್ತಿ  ಸಾಮರ್ಥ್ಯಗಳೂ ಆ ಒಂದೇ ನಿಟ್ಟಿನಲ್ಲಿ ಒಂದು ಚಿಕ್ಕ ಉದ್ದೇಶಕ್ಕಾಗಿ  ವ್ಯಯವಾಗುತ್ತಿದೆಯಲ್ಲಾ! ವಿವೇಕಾನಂದರು ಹೇಳುತ್ತಾರೆ- ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದೆಂದರೆ ಮನುಷ್ಯ ಜನ್ಮ. ಯಾಕೆಂದರೆ ಒಬ್ಬ ಮನುಷ್ಯನೇ  ಬುದ್ಧನಾದದ್ದು, ರಾಮನಾದದ್ದು, ಕೃಷ್ಣನಾದದ್ದು. ಸಾವಿರಾರು ವರ್ಷಗಳು ಕಳೆದರೂ ಜನರು ಅವರನ್ನು ಸ್ಮರಿಸುತ್ತಾರೆಂದರೆ ಅವರು ಆರೀತಿ ಬದುಕಿ ತೋರಿಸಿದರು.  ಅವರ ಫೋಟೊಗಳಿಗೆ ನಾವು ನಮಸ್ಕರಿಸುವುದಾದರೂ ಏಕೆ? ಅದಕ್ಕೆ ಉತ್ತರವನ್ನುವಿವೇಕಾನಂದರು ಕೊಡುತ್ತಾರೆ- ಪ್ರತಿಯೊಬ್ಬ ಮನುಷ್ಯನೂ ಹುಟ್ಟುವಾಗ  ಚೈತನ್ಯವನ್ನು ಇಟ್ಟುಕೊಂಡೇ ಹುಟ್ಟಿದ್ದಾನೆ. ಆದರೆ ಸಾಮಾನ್ಯ ಜನರು ಇದನ್ನು  ತಿಳಿಯದೆ ಅತ್ಯಂತ ಸಣ್ಣ ಉದ್ದೇಶಕ್ಕಾಗಿ ಜೀವನವನ್ನು ಸೆವೆಸಿ ಬಿಡುತ್ತಾರೆ.ಅತ್ಯಂತ ನಿಕೃಷ್ಟ ಬದುಕು ಸವೆಸಿ ಬಿಡುತ್ತಾರೆ. ಆ ಬದುಕು ಸಾರ್ಥಕತೆ ಪಡೆಯುವುದಿಲ್ಲ.  ಬದುಕಿಗೊಂದು ಉದಾತ್ತ ಧ್ಯೇಯ ವಿರಬೇಕು, ಮಕ್ಕಳ ಮುಂದೆ ಇಂತಹ ಉದಾತ್ತ ಗುರಿಗಳ ಬಗ್ಗೆ ಮಾತನಾಡಬೇಕು. ಓದಿನಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂಬುದು ಮುಖ್ಯ ಹೌದು, ಆದರೆ ಅದಕ್ಕಿಂತಲೂ ಮುಖ್ಯ ಜೀವನದಲ್ಲಿ ಉದಾತ್ತವಾಗಿ  ಬಾಳುವುದು. ಉನ್ನತ ಆದರ್ಶಗಳಿಗಾಗಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು.
ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ:
 ಪುರಾಣದಲ್ಲಿ ಒಂದು ಕಥೆ ಇದೆ. ಮದಾಲಸೆ ಎಂಬ ರಾಣಿ ಇದ್ದಳು. ಅವಳು ಎಂತಹಾ ಮಹಾನ್ ಜ್ಞಾನಿಯಾಗಿದ್ದಳೆಂದರೆ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ  ತೂಗುವಾಗ ಜೋಗುಳ ಹಾಡುತ್ತಿದುದಾದರೂ ಏನು- ಮಗು ನೀನು ಆತ್ಮ ಸ್ವರೂಪಿ, ಮಗೂ ನೀನು ದುರ್ಬಲನಲ್ಲ.ಮಗೂ ನಿನ್ನ ಜೀವನ ಸಾರ್ಥಕ ವಾಗಬೇಕು, ನೀನು ಏನಾದರೂ ಸಾಧಿಸಬೇಕು, ನೀನು ದುರ್ಬಲನಾಗಿ ಅಳುತ್ತಾ ಅಳುತ್ತಾ ಜೀವನ   ಕಳೆಯಬೇಡ.ನೀನು ಧೈರ್ಯಶಾಲಿಯಾಗು,ನೀನು ಶಕ್ತಿಶಾಲಿಯಾಗು,ನಿನ್ನ ನಿಜ  ಸ್ವರೂಪವನ್ನು ನೀನು ಕಂಡುಕೋ, ಹೀಗೆ ತೊಟ್ಟಿಲು ತೂಗುತ್ತಾ ತೂಗುತ್ತಾ ಬೆಳಸಿದ ನಾಲ್ಕು ಮಕ್ಕಳು ದೊಡ್ದವರಾದಾಗ ಯೋಗಿಗಳಾಗಿ ಬಿಡುತ್ತಾರೆ. ಇನ್ನು ಹೀಗೆಯೇ ಆಗಿ ಬಿಟ್ಟರೆ ರಾಜನ ವಂಶ ಬೆಳೆಯುವುದಾದರೂ ಹೇಗೆಂದು ಮತ್ತೊಬ್ಬ ಮಗನನ್ನು ರಾಜನು ಇವಳಿಂದ ಬೇರೆಯೇ ಬೆಳೆಸುತ್ತಾನೆ. ಈಕಥೆಯ ನೀತಿಯಾದರೂ ಏನು? ನಮ್ಮ ಮಕ್ಕಳೆಲ್ಲಾ ಯೋಗಿಳಾಗಬೇಕಿಲ್ಲ. ಆದರೆ ಆ ಮಹಾತಾಯಿ ಚಿಕ್ಕಂದಿನಲ್ಲಿ   ಮಕ್ಕಳ ಕಿವಿಯಲ್ಲಿ ಶ್ರೇಷ್ಟ ವಿಚಾರಗಳನ್ನೇ ತಿಳಿಸಿದ್ದರಿಂದ ಮಕ್ಕಳು ಶ್ರೇಷ್ಟವಾದ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಬೆಳೆದರು. ಅಂದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ.ಆದ್ದರಿಂದ ನಾವು ಪ್ರತಿನಿತ್ಯ ನಮ್ಮ ಮಕ್ಕಳಿಗೆ ಯಾವ ವಿಚಾರವನ್ನು ಹೇಳುತ್ತೇವೆ, ನಮ್ಮ ದೇಶದಲ್ಲಿ ಆಗಿಹೋದ ಮಹಾಪುರುಷರ ಜೀವನದ ಸ್ಪೂರ್ತಿದಾಯಕ ಘಟನೆಗಳನ್ನು ತಿಳಿಸುತ್ತೀವಾ? ಮಕ್ಕಳು ಯಾರಂತೆ ಬೆಳೆಯಬೇಕೆಂದು ಅವರಿಗೆ ಮನಮುಟ್ಟುವಂತೆ   ಹೇಳುತ್ತೇವಾ? ರಾಮಕೃಷ್ಣಪರಮಹಂಸರ ತಂದೆಯವರ ಒಂದು ಉದಾಹರಣೆ - ಕಲ್ಕತ್ತಾ ಸಮೀಪ ದೇರಾ ಎಂಬ ಎಂಬ ಒಂದು ಹಳ್ಳಿ ಅಲ್ಲಿ ಕ್ಷುದೀರಾಮ   ಚಟ್ಟೋಪಾಧ್ಯಾಯ ಎಂಬ ಬ್ರಾಹ್ಮಣ ನೆಲಸಿರುತ್ತಾರೆ. ಬಹಳ ಪ್ರಾಮಾಣಿಕವಾದ ಜೀವನ.ಶ್ರೇಷ್ಠವಾದ ಆದರ್ಶಗಳಿಂದ ಊರಿನಲ್ಲಿ ಜನಪ್ರಿಯರು.ಬಡತನವಿದ್ದರೂ   ಸತ್ಯವಾದಿ. ಆದಿನಗಳಲ್ಲಿ ಇವರ ಸನ್ನಡತೆಯಿಂದ ಊರಿನ ಎಲ್ಲರ ಗೌರವಕ್ಕೆ   ಪಾತ್ರರು. ಅದೇ ಊರಿನಲ್ಲಿ ಒಬ್ಬ ಜಮೀನ್ದಾರ. ಮಹಾ ವಂಚಕ. ಊರಿನಲ್ಲಿರುವ  ಎಲ್ಲರ ಆಸ್ತಿಯ ಮೇಲೆ ಇವನ ಕಣ್ಣು. ಆಸ್ತಿಯ ವ್ಯಾಜ್ಯ ಒಂದಕ್ಕೆ ಇವನಿಗೆ ಸುಳ್ಳು   ಸಾಕ್ಷಿ ಹೇಳುವವರು ಬೇಕಾಗುತ್ತಾರೆ. ಚಟ್ಟೋಪಾಧ್ಯರು ಸಾಕ್ಷಿ ಹೇಳಿಬಿಟ್ಟರೆ   ಕೇಸಿನಲ್ಲಿ ಇವನ ಗೆಲವು ಗ್ಯಾರಂಟಿ ಎಂದು ತಿಳಿದು ಜಮೀನ್ದಾರನು ಇವರಲ್ಲಿಗೆ   ಬರುತ್ತಾನೆ. ಚಟ್ಟೋಪಾಧ್ಯಾಯರಿಗೆ ಬೆದರಿಕೆ ಒಡ್ಡುತ್ತಾನೆ. ನೀವು ನನ್ನ ಪರವಾಗಿ ಸಾಕ್ಷಿ ಹೇಳಲೇ ಬೇಕು, ಇಲ್ಲದಿದ್ದರೆ ನೀವು ಈ ಊರಿನಲ್ಲಿರಲಾರಿರಿ, ನನ್ನ ಪರವಾಗಿ ಸಾಕ್ಷಿ ಹೇಳಿದರೆ ನಿಮಗೆ ಬೇಕಾದ್ದು ಕೊಡುತ್ತೇನೆ ಚಟ್ಟೋಪಾಧ್ಯಾಯರು   ಜಮೀನ್ದಾರನ ಆಸೆಗೂ ಬಲಿಯಾಗಲಿಲ್ಲ, ಬೆದರಿಕೆಗೂ ಬಗ್ಗಲಿಲ್ಲ.ಕಡೆಗೆ ರಾಮಕೃಷ್ಣಪರಮಹಂಸರ ತಂದೆಯವರು ಆ ಹಳ್ಳಿಯನ್ನು ತೊರೆಯ ಬೇಕಾಗುತ್ತದೆ. ರಾಮಕೃಷ್ಣ ಪರಮಹಂಸರು ಅಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆಯಲು ತಂದೆಯ ಸತ್ಯನಿಷ್ಟ   ಜೀವನ, ಆದರ್ಶದ ಬದುಕು ಕಾರಣ ವಾಗುತ್ತದೆ. ಆದ್ದರಿಂದ ಮಕ್ಕಳು ಒಂದು   ಉತ್ತಮವಾದ ದಾರಿಯಲ್ಲಿ ಬೆಳೆಯಬೇಕೆಂದರೆ ನಾವು ಉತ್ತಮ ಹಾದಿಯಲ್ಲಿ   ನಡೆಯುತ್ತಿದ್ದೀವಾ? ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಪ್ರತಿಯೊಂದು ನಡೆಯನ್ನೂ ಮಕ್ಕಳು ಗಮನಿಸುತ್ತಿರುತ್ತಾರೆಂಬುದು ನಮಗೆ ತಿಳಿದಿರಬೇಕ.
ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡ:           
     ವಿವೇಕಾನಂದರ ಬಾಲ್ಯದ ಒಂದು ಘಟನೆ. ನರೇಂದ್ರನನ್ನು ಶಾಲೆಯಲ್ಲಿ ಮೇಸ್ಟ್ರು ಯಾವುದೋ ಒಂದು ಪ್ರಶ್ನೆ ಕೇಳುತ್ತಾರೆ. ನರೇಂದ್ರ ಬುದ್ದಿವಂತ. ಸರಿಯಾದ ಉತ್ತರ ಕೊಟ್ಟಿರುತ್ತಾನೆ. ಮೇಸ್ಟ್ರು ಅದನ್ನು ಒಪ್ಪದೆ ತಪ್ಪು ಎಂದು ಹೇಳುತ್ತಾರೆ. ನರೆಂದ್ರನಿಗೆ ಅದು ಸರಿ ಎಂದು ನೂರಕ್ಕೆ ಇನ್ನೂರರಷ್ಟು ಗೊತ್ತು. ಆದರೂ ಮೇಸ್ಟ್ರು ಸರಿಯಿಲ್ಲವೆಂದು ಹೇಳುತ್ತಾರೆ. ಇವನು ಮತ್ತೊಮ್ಮೆ ಹೇಳುತ್ತಾನೆ. ನನ್ನ ಉತ್ತರ ಸರಿಯಿದೆ ಎಂದು. ಮೇಸ್ಟ್ರಿಗೆ ಸಿಟ್ಟು ಬರುತ್ತೆ. ಬಲವಾಗಿ ಹೊಡೆಯುತ್ತಾರೆ. ಅಳುತ್ತಾ ಬಾಲಕ ನರೇಂದ್ರ ಮನೆಗೆ ಬರುತ್ತಾನೆ. ಅಮ್ಮ ಭುವನೇಶ್ವರಿ ಎಲ್ಲಾ ಕೇಳಿ ತಿಳಿದುಕೊಳ್ಳುತ್ತಾಳೆ. ಮಗುವಿಗೆ ಹೇಳುತ್ತಾಳೆ ಮಗು ನೀನು ಸರಿಯಾಗಿಯೇ ಹೇಳಿದ್ದೀಯ ನೀನು ಯಾವಾಗಲೂ ಸುಳ್ಳನ್ನು ಒಪ್ಪಿಕೊಳ್ಳಬೇಡ. ಸುಳ್ಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡ.ಪ್ರಾಣ ಹೋದರೂ ಚಿಂತೆಯಿಲ್ಲ. ಸುಳ್ಳಿಗೆ ಶರಣಾಗ ಬೇಡ. ನರೆಂದ್ರನ ಕೈಯ ಮೇಲಿನ ಬಾಸುಂಡೆ ನೋಡಿದ ತಾಯಿ ಮಗು ನೀನು ಒಂದು ಸತ್ಯದ ಮಾತಿಗಾಗಿ ಏಟು ತಿನ್ನುವ ಬದಲು ಮೇಸ್ಟ್ರು ಹೇಳಿದ್ದನ್ನೇ ಒಪ್ಪಿ ಕೊಂಡು ಏಟು ತಪ್ಪಿಸಿಕೊಳ್ಳಬಹುದಿತ್ತು- ಎಂದು ಹೇಳಬಹುದಿತ್ತು, ಆದರೆ ಆ ಮಹಾತಾಯಿ ಹಾಗೆ ಮಾಡಲಿಲ್ಲ. ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡವೆಂದು ಬಾಲ್ಯದಲ್ಲಿಯೇ ತಾಯಿಯು ಕಲಿಸಿದ್ದರಿಂದ ಒಬ್ಬ ಸತ್ಯವಾದಿ ವಿವೇಕಾನಂದನಾಗಿ ನರೇಂದ್ರನು ಬೆಳೆಯುತ್ತಾನೆ. ಕಷ್ಟವನ್ನು ತಪ್ಪಿಸಿಕೊಳ್ಳುವುದಕ್ಕೆ ದಾರಿಯನ್ನು ಸ್ವಲ್ಪ ಬದಲಿಸಿ ಸುಗುಮಗೊಳಿಸಲು ಆ ತಾಯಿ ಹೇಳಿಕೊಡಲಿಲ್ಲ.ನೇರವಾದ ದಾರಿಯಲ್ಲಿ ಕಲ್ಲುಮುಳ್ಳು ಇರುತ್ತೆ ಎಂದು ಸ್ವಲ್ಪ ಸುಗುಮವಾದ ದಾರಿ ಹಿಡಿಯೋಣವೆಂದು ಆ ತಾಯಿ ಹೇಳಿಕೊಡಲಿಲ್ಲ.ಮುಂದೆ ವಿವೇಕಾನಂದರು ಹೇಳಿಕೊಳ್ಳುತ್ತಾರೆ ಇವತ್ತು ನಾನು ಏನಾಗಿದ್ದರೂ ಅದಕ್ಕೆ ನನ್ನ ತಾಯಿ ಕಾರಣ ವೆಂದು.
ಇತಿಹಾಸ ನಿರ್ಮಾಣ ಮಾಡುವವರು ನಾವೇ ಏಕಾಗಬಾರದು?: 
     ಸ್ವಾತಂತ್ರ್ಯ ಪೂರ್ವದಲ್ಲಿ ಇಪ್ಪತ್ತು ದಾಟಿರದ ಯುವಕರು ನಗುನಗುತ್ತಾ   ನೇಣುಗಂಬವನ್ನು ಏರಿದ್ದು ಇತಿಹಾಸ ವಾದರೆ ಇಂದಿನ ನಮ್ಮ ಮಕ್ಕಳ ಕಥೆ ಏನು? ಪರೀಕ್ಷೆಯಲ್ಲಿ ಮೊದಲ ಖಂಓಏ ಬದಲು ನಾಲ್ಕನೇ ಖಂಓಏ ಬಂದರೆ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತೇವೆ? ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವೇ ಇಲ್ಲ. ಮಕ್ಕಳ ಆತ್ಮ ಶಕ್ತಿಯನ್ನು ಜಾಗೃತ ಗೊಳಿಸಬೇಡವೇ? ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ನಾವು ಎಡವಿದ್ದೆಲ್ಲಿ? ಪ್ರಶ್ನೆ ಹಾಕಿಕೊಳ್ಳ   ಬೇಡವೇ? ನಾವು ಈಗಲಾದರೂ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದಾರಿ  ಕಂಡುಕೊಳ್ಳಬೇಡವೇ? ಎಲ್ಲರೂ ಯಾವುದೋ ದಾರಿಯಲ್ಲಿ ಹೋಗುತ್ತಿದ್ದಾರೆಂದರೆ ನಾವೂ ಅದೇ ದಾರಿಯಲ್ಲಿ ಹೋಗಬೇಕೆ? ನಾವು ಕುರಿಮಂದೆಯಲ್ಲಾ! ಅಲ್ಲವೇ? ನಾವು ಜೀವನವನ್ನು ಹೇಗೆಂದರೆ ಹಾಗೆ ತೆಗೆದುಕೊಳ್ಳ ಬಾರದು.ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲವೂ ಹಳ್ಳಕ್ಕೆ ಬೀಳುತ್ತವೆ. ಕುರಿಗೂ ನಮಗೂ ವ್ಯತ್ಯಾಸ ಬೇಡವೇ? ಯಾವುದೋ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ನಮಗೆ   ವಿದ್ಯಾಭ್ಯಾಸ ಇರಬಹುದು ಆದರೆ ಸ್ವತಂತ್ರವಾದ ಆಲೋಚನೆಯನ್ನು   ಕಳೆದುಕೊಂಡುಬಿಟ್ಟಿದ್ದೇವೆ. ನಮಗೆ ಪ್ರತಿಕ್ರಿಯಿಸುವ ಶಕ್ತಿಯೇ ಇಲ್ಲವಾಗಿದೆ. ಸಮಾಜದಲ್ಲಿರುವ ದೀನ ದರಿದ್ರರ ಸ್ಥಿತಿಗತಿ ನಮಗೆ ಅರ್ಥವಾಗುವುದೇ ಇಲ್ಲ. ನಮ್ಮ ಈ ಸಂಪತ್ತಿಗೆ, ನಮ್ಮ ವಿದ್ಯೆಗೆ ಸಮಾಜದ ಎಷ್ಟು ಜನರ ಕೊಡುಗೆ ಇದೆ ಎಂಬ ಅರಿವು ನಮಗಿದೆಯೇ? ಹಳ್ಳಿಯ ರೈತ ಬೆಳೆಯದಿದ್ದರೆ ನಗರದಲ್ಲಿರುವವರು ಹಣ ಇಟ್ಟುಕೊಂಡು ಏನು ಮಾಡಲು ಸಾಧ್ಯ? ಮನೆಯ ಮುಂದಿನ ಕಸವನ್ನು ಜಾಡಮಾಲಿ ಬಂದು ಗುಡಿಸದಿದ್ದರೆ ನಮ್ಮ ನಗರ ಕೊಳೆತು ನಾರುವುದಿಲ್ಲವೇ? ಹಾಗಾದರೆ ಯಾರಿಗೆ ಮಹತ್ವ ಕೊಡಬೇಕು? ನಾವು ಕೊಡುತ್ತಿದ್ದೇವೆಯೇ?   ಎಲ್ಲರಂತಾಗುವುದರಲ್ಲೇನೂ ಅತಿಶಯವಿಲ್ಲ. ಬೇರೆಯದಾಗಿಯೇ ಚಿಂತನೆ ನಡೆಸಿ.ವಿವೇಕಾನಂದರು ಹೇಳುತ್ತಾರೆ. ಇತಿಹಾಸ ನಿರ್ಮಾಣ ಮಾಡುವವರು ಯಾರೋ ಕೆಲವರೇ ಹೌದು, ಆ ಕೆಲವರು ನಾವೇ ಏಕಾಗಬಾರದು? ಆ ಕೆಲವರು ನಮ್ಮ   ಮಕ್ಕಳೇ ಏಕಾಗಬಾರದು? ಎಂಬ ಪ್ರಶ್ನೆ ಮಾಡಿಕೊಳ್ಳಬೇಕು.
ಮಕ್ಕಳಿಗೆ ಕಷ್ಟ ದು:ಖಗಳ ಅರಿವು ಮೂಡಿಸಿ :
     ನಮ್ಮ ಮಕ್ಕಳು ಹಾಗೆ ವಿಶೇಷ ವ್ಯಕ್ತಿತ್ವ ಉಳ್ಳ ಪ್ರಜೆಗಳಾಗಿ ಬೆಳೆಯಬೇಕಾದರೆ ಅವರನ್ನು ಹೇಗೆ ಬೆಳೆಸಬೇಕು? ಅದರಲ್ಲಿ ನಮ್ಮ ಹೊಣೆ ಏನು? ನಾವು ಚಿಂತಿಸಬೇಕಾಗುತ್ತದೆ. ನಮ್ಮ ಮಕ್ಕಳು ವಿಶೇಷವಾಗಿ ಬೆಳೆಯ ಬೇಕಾದರೆ ಆ ನಿಟ್ಟಿನಲ್ಲಿ ನಾವು ಅವರನ್ನು ಬೆಳೆಸಬೇಕಾಗುತ್ತದೆ.ಈಗಿನ ಮಕ್ಕಳನ್ನು ಗಮನಿಸಿದಾಗ ಅವರಲ್ಲಿ ಮನೋಸ್ಥೈರ್ಯ ಕಡಿಮೆ ಇರುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮನೋದೌರ್ಬಲ್ಯಕ್ಕೆ ಕಾರಣ ಕಂಡುಕೊಂಡಿದ್ದೀವಾ? ನಿಜವಾಗಿ ಮಕ್ಕಳಿಗೆ ಕಷ್ಟದ ಪರಿಕಲ್ಪನೆಯೇ ಇಲ್ಲ. ಅವರಿಗೆ ಕಷ್ಟವೆಂದರೇನು- ಅದರ ಅರಿವಿಲ್ಲ. ಅವರಿಗೆ ಕಷ್ಟದ ಅರಿವಾಗದಂತೆ ಸುಖದಲ್ಲಿ ಬೆಳೆಸಿದ್ದೇವೆ. ನಮ್ಮ ಚಿಂತನೆ ಹೇಗಿದೆ ಎಂದರೆ ಮಕ್ಕಳು ಬಯಸಿದ್ದನ್ನೆಲ್ಲಾ ನಾವು ಅವರಿಗೆ ಒದಗಿಸಿ ಕೊಟ್ಟರೆ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ, ಅದಕ್ಕಾಗಿ ನಾವು ಶಾಲೆಯನ್ನು ಹುಡುಕುತ್ತೇವೆ, ಯಾವ ಶಾಲೆಯಲ್ಲಿ ಸೌಕರ್ಯಗಳು ಹೆಚ್ಚಿದೆ,ಯಾವ ಶಾಲೆಯಲ್ಲಿ ಕಟ್ಟಡ ಚೆನ್ನಾಗಿದೆ,ಯಾವ ಶಾಲೆಗಳಿಗೆ ಶ್ರೀಮಂತ ಮಕ್ಕಳೇ ಹೋಗುತ್ತಾರೆ,ಯಾವ ಶಾಲೆಯಲ್ಲಿ ಅತಿ ಹೆಚ್ಚು ಫೀಸು ವಸೂಲು ಮಾಡುತ್ತಾರೋ ಅಂತಹ ಶಾಲೆಯನ್ನು ಹುಡುಕಿ ಸೇರಿಸುತ್ತೇವೆ. ನಾವಂತೂ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಿದ್ದಾಯ್ತು, ಯಾವ ಅನುಕೂಲಗಳಿಲ್ಲದೆ ಬೆಳೆದಿದ್ದಾಯ್ತು ನಮ್ಮ ಮಕ್ಕಳಾದರೂ ಸುಖವಾಗಿರಲೆಂದು   ನಮ್ಮ ಮಕ್ಕಳಿಗೆ ಕಷ್ಟದ ಸೋಂಕೂ ಬಾರದಂತೆ ಬೆಳೆಸುತ್ತೇವೆ, ಪರಿಣಾಮ ಏನಾಗುತ್ತದೆಂದರೆ ದೊಡ್ಡವನಾದಾಗ ಅವನಿಗೆ ಒಂದು ಚಿಕ್ಕ ಕಷ್ಟ ಬಂದರೂ ತತ್ತರಿಸಿ ಹೋಗುತ್ತಾನೆ. ಅವನಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಆತ್ಮಸ್ಥೈರ್ಯವಿಲ್ಲ. ಹಾಗಾದರೆ ಮಕ್ಕಳನ್ನು ಹೇಗೆ ಬೆಳೆಸಬೇಕು?
ಪೋಷಕರು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು, 
     ನಿಮ್ಮಲ್ಲಿ ಈಗ ಸಾಕಷ್ಟು ಸಾಮರ್ಥ್ಯವಿರಬಹುದು, ನಿಮ್ಮ ಸಂಪತ್ತಿನಿಂದ ಮಕ್ಕಳಿಗೆ ನೀವು ಏನು ಬೇಕಾದರೂ ಪೂರೈಸಬಹುದು, ಆದರೂ ಮಕ್ಕಳಿಗೆ ನೀವು ಹೆಚ್ಚು ಹೆಚ್ಚು ಸೌಕರ್ಯಗಳನ್ನು ಒದಗಿಸಿದಾಗಲೂ ನೀವು ಅವರನ್ನು ಹೆಚ್ಚು ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿದ್ದೀರೆಂಬುದನ್ನು ನೀವು ಮರೆಯಬಾರದು, ಅವರು ಮಕ್ಕಳಾಗಿದ್ದಾಗ ನೀವೇನೋ ಎಲ್ಲವನ್ನೂ ಪೂರೈಸಿ ಬಿಡುವಿರಿ, ಆದರೆ ಅವನು ದೊಡ್ದವನಾದಾಗ ಯಾವ ಕಷ್ಟಗಳೂ ಎದುರಾಗಬಹುದು,ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ  ಸುಖ- ದು:ಖಗಳೆಂಬುದು ಬಂದು ಹೋಗುವಂತಹ ಸಾಮಾನ್ಯ ಸಂಗತಿಗಳೆಂಬುದು ನಮಗೆ ತಿಳಿದಿರಬೇಕು.ಅದನ್ನು ಮಕ್ಕಳಿಗೆ ಕಲಿಸಿ ಕೊಡಬೇಡವೇ? ಬಾಲ್ಯದಲ್ಲಿ ಕಷ್ಟವನ್ನೇ ಅರಿಯದವನು ಮುಂದೆ ಬೆಳೆದು ದೊಡ್ದವನಾದಾಗ ಒಂದು ಚಿಕ್ಕ ಕಷ್ಟ ಎದುರಾದರೂ ಕುಸಿದು ಹೋಗುತ್ತಾನೆ.ಆದ್ದರಿಂದ ಚಿಕ್ಕಂದಿನಿಂದಲೇ ಮನಸ್ಸನ್ನು ಗಟ್ಟಿಗೊಳಿಸಬೇಕಿದೆ. ನಿಮ್ಮಲ್ಲಿ ಕೊಡುವ ಶಕ್ತಿ ಇದ್ದರೂ ಕೂಡ ಸ್ವಲ್ಪ ಮಟ್ಟಿಗೆ ನಿರಾಕರಿಸಿ, ನಾವು ಬಯಸಿದ್ದೆಲ್ಲಾ ಎಲ್ಲಾ ಕಾಲಕ್ಕೂ ಸಿಗುವುದಿಲ್ಲವೆಂಬ ನಿಜದ ಅರಿವನ್ನು ನಿಮ್ಮ ಮಕ್ಕಳಿಗೆ ಮಾಡಿ. ಸಮಾಜದಲ್ಲಿ ಸ್ಥಿತಿವಂತರು ಮಾತ್ರವೇ ಇಲ್ಲ, ದೀನ-ದರಿದ್ರರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಅವರ ಕಷ್ಟದ ಜೀವನದ ದೃಶ್ಯವನ್ನು ನಿಮ್ಮ ಮಕ್ಕಳಿಗೆ ಪರಿಚಯಿಸಿ.ದುರ್ಬಲರ ಬಗ್ಗೆ ಪ್ರೀತಿ, ಕರುಣೆ, ಸಹಾಯ ಹಸ್ತ ನೀಡುವುದನ್ನು ಕಲಿಸಿ, ಮುಖ್ಯವಾಗಿ ಸರಳ ಬದುಕನ್ನು ಕಲಿಸಿ.
ಮನಸ್ಸನ್ನು ಗಟ್ಟಿಗೊಳಿಸಿ:
    ಬೆಳವಣಿಗೆಯ ಮುಖ್ಯ ಅಂಶವೆಂದರೆ ಮನಸ್ಸನ್ನು ಗಟ್ಟಿಗೊಳಿಸುವುದು. ಸಾಮಾನ್ಯವಾಗಿ ನಾವೆಲ್ಲಾ ಶರೀರಕ್ಕೆ ಗಮನ ಕೊಡುತ್ತೇವೆ. ಶರೀರ ಗಟ್ಟಿಯಾಗಲು ಅಗತ್ಯವಾದ ಒಳ್ಳೆಯ ಆಹಾರ, ವಿಟಮಿನ್ ಗಳನ್ನು ಮಕ್ಕಳಿಗೆ ಕೊಡುತ್ತೇವೆ. ಆದರೆ ಮನಸ್ಸು ಗಟ್ಟಿಯಾಗಲು ಏನು ಕೊಡುತ್ತೇವೆ? ಹಿಂದಿನ ನಮ್ಮ ಪರಂಪರೆಯಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿ ಮಾಡಲು ತುಂಬಾ ಗಮನ ಕೊಡುತ್ತಿದ್ದರು. ರಾಜನೂ ಕೂಡ ತನ್ನ ಮಕ್ಕಳನ್ನು ಕಾಡಿನಲ್ಲಿದ್ದ ಗುರುಕುಲಕ್ಕೆಕಳಿಸುತ್ತಿದ್ದ. ಗುರುಕುಲದಲ್ಲಿ ಅತ್ಯಂತ ದೈಹಿಕ ಶ್ರಮದ ಕೆಲಸವನ್ನು ಮಾಡಬೇಕಿತ್ತು, ಹಸುಗಳ ಮೈ ತೊಳೆಯಬೇಕಿತ್ತು, ಕಾಡಿನಲ್ಲಿ ಅಲೆದು ಸಮಿತ್ತು ತರಬೇಕಿತ್ತು, ಅವನು ಯುವರಾಜನಾದರೂ ಕೂಡ ಗುರುವಿನ ಸೇವೆ ಮಾಡಲೇ ಬೇಕಿತ್ತು,ಇತರ ಮಕ್ಕಳೊಂದಿಗೆ ಸರಿಸಮಾನವಾಗಿ ಬದುಕ ಬೇಕಿತ್ತು,ಮಕ್ಕಳೆಲ್ಲಾ ಕೃಷಿಯ ಕೆಲಸ ಮಾಡಬೇಕಿತ್ತು, ಹೀಗೆ ಎಲ್ಲಾ ಬಗೆಯ ಕೆಲಸಗಳನ್ನು ಎಲ್ಲಾ ಮಕ್ಕಳೂ ಮಾಡುತ್ತಾ ಮಾಡುತ್ತಾ, ಕಷ್ಟ ಸುಖಗಳನ್ನು ಒಟ್ಟಾಗಿ ಎದುರಿಸುತ್ತಾ ಎದುರಿಸುತ್ತಾ ಗಟ್ಟಿಯಾಗುತ್ತಿದ್ದರು. ತನ್ಮೂಲಕ ಅವರು ದೊಡ್ದವರಾಗಿ ಬೆಳೆದಾಗ ಕಷ್ಟ ಬರಲಿ ಸುಖವಿರಲಿ ಒಂದೇ ರೀತಿಯಲ್ಲಿ ಎದುರಿಸಲು ಸಮರ್ಥರಾಗುತ್ತಿದ್ದರು.ಜೀವನದಲ್ಲಿ ಕಷ್ಟ ಬಂದೇ ಬರುತ್ತದೆ, ಆದರೆ ಕಷ್ಟ ಬಂದಾಗ ಧೈರ್ಯ ಗುಂದದೆ ಎದುರಿಸುತ್ತಿದ್ದರು.ಕಷ್ಟ ಬಂದಾಗ,ದು:ಖ ಬಂದಾಗ ಅದಕ್ಕೆ ಹೆದರದೆ ಧೈರ್ಯ ಗುಂದದೆ ಎದುರಿಸಿ ನಿಂತಾಗ ಅದು ತಾನೇ ತಾನಾಗಿ ಪಲಾಯನ ಮಾಡುತ್ತದೆ.
ಹೆದರಿ ಪಲಾಯನ ಮಾಡಬೇಡ, ಎದುರಿಸು:
     ವಿವೇಕಾನಂದರ ಜೀವನದಲ್ಲಿನ ಒಂದು ಘಟನೆ. ಕಾಶಿಯಲ್ಲಿ ರಸ್ತೆಯಲ್ಲಿ ನಡೆದು ಹೋಗುವಾಗ ಒಂದು ಕೋತಿಗಳ ಹಿಂಡು ವಿವೇಕಾನಂದರನ್ನು ಅಟ್ಟಿಸಿಕೊಂಡು ಬರುತ್ತವೆ, ವಿವೇಕಾನಂದರು ರಸ್ತೆಯಲ್ಲಿ ಓಡಿ ಹೋಗುತ್ತಿರುತ್ತಾರೆ, ಕೋತಿಗಳು   ಅಟ್ಟಿಸಿಕೊಂಡು ಬರುತ್ತಲೇ ಇವೆ. ಒಬ್ಬ ಸನ್ಯಾಸಿ ಎದುರಾಗುತ್ತಾನೆ.ಕೇಳುತ್ತಾನೆ ಏಕೆ ಓಡುತ್ತಿರುವೆ? ವಿವೇಕಾನಂದರು ಹೇಳುತ್ತಾರೆ- ನೋಡಿ ಅಲ್ಲಿ, ಕೋತಿಗಳ  ಹಿಂಡು ಅಟ್ಟಿಸಿಕೊಂಡು ಬರುತ್ತಿವೆ. ಸನ್ಯಾಸಿ ಹೇಳುತ್ತಾನೆ- ನಿಲ್ಲು, ಹೆದರಿ   ಪಲಾಯನ ಮಾಡಬೇಡ, ಎದುರಿಸು. ವಿವೇಕಾನಂದರು ಕೋತಿಯ ಹಿಂಡಿನ ಎದುರು ನಿಲ್ಲುತ್ತಾರೆ. ಅವರ ಧೀರ-ಗಂಭೀರ ನಿಲುವನ್ನು ಕಂಡ ಕೋತಿಗಳು ಹಿಂದಿರುಗಿ ಓಡುತ್ತವೆ. ಈ ಘಟನೆಯನ್ನು ವಿವೇಕಾನಂದರು ತಮ್ಮ ಶಿಷ್ಯರಿಗೆ   ಹೇಳುತ್ತಿರುತ್ತಾರೆ. ಜೀವನದಲ್ಲಿ ಕಷ್ಟಗಳು ಬಂದಾಗ, ದು:ಖ ಬಂದಾಗ ಹೆದರಿ ಪಲಾಯನ ಮಾಡದಿರಿ, ಎದುರಿಸಿ ಮೆಟ್ಟಿನಿಲ್ಲಿ, ಕಷ್ಟಗಳು ನಿಮಗರಿವಿಲ್ಲದಂತೆ ಕರಗಿ ಹೋಗುತ್ತವೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮೊಳಗಿದೆ ಎಂಬುದನ್ನು ನಾವು ತಿಳಿಯ ಬೇಕು,ಕಷ್ಟಗಳು ಬರಲೇ ಬಾರದೆನ್ನಬೇಡಿ, ಸರ್ವಶಕ್ತನಾದ ಪರಮೇಶ್ವರನು ನನ್ನೊಳಗೆ ಇರುವಾಗ ಬಂದ ಕಷ್ಟಗಳನ್ನು ನನ್ನ ಆತ್ಮ ಶಕ್ತಿಯಿಂದ ಎದುರಿಸುತ್ತೇನೆಂಬ ವಿಶ್ವಾಸ ತಾಳಿ, ಮಕ್ಕಳಿಗೂ ಅದನ್ನೇ ಕಲಿಸಿ. ಮಕ್ಕಳಿಗೆ ಸೋಲಿನ ಅನುಭವವನ್ನೂ ಕೂಡ ಕಲಿಸಿ.
ಸೋಲಿನ ಅನುಭವ:
     ಒಂದು ಚಿಕ್ಕ ಘಟನೆ- ಒಬ್ಬ ವಿದ್ಯಾರ್ಥಿ ಶಾಲೆಯಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ಮೊದಲ ಸ್ಥಾನ ಪಡೆಯುತ್ತಾ ಬಂದಿರುತ್ತಾನೆ. ಒಮ್ಮೆ ಅವನಿಗೆ ನಾಲ್ಕನೆಯ ಸ್ಥಾನ ಬಂದುಬಿಡುತ್ತೆ.ಅವನ ತಾಯಿ ನನ್ನೊಡನೆ ಹೇಳುತ್ತಾಳೆ ಮಾತಾಜಿ ನನಗೆ ತುಂಬಾ ಸಂತೋಷವಾಯ್ತು. ನನ್ನ ಮಗನಿಗೆ ಎಲ್ಲರೀತಿಯ ಅನುಭವವೂ ಆಗಬೇಕು, ಜೀವನ ಒಂದೇ ರೀತಿ ಇರುವುದಿಲ್ಲವೆಂದು ಅವನಿಗೆ ಅರಿವಾಗಬೇಕು. ಮಕ್ಕಳಿಗೆ ಜೀವನದಲ್ಲಿ ನಂಬಿಕೆ,ಶ್ರದ್ಧೆ, ಸಹನೆಗಳನ್ನು ಕಲಿಸಿಕೊಡಿ. ಮಗುವಿಗೆ ತಿಳಿಸಿ ನೀನು ಸಾಮಾನ್ಯನಲ್ಲ,ನೀನು ಅಸಾಮಾನ್ಯ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾಪುರುಷರ ಜೀವನ ಚರಿತ್ರೆಯನ್ನು ಅವರಿಗೆ ತಿಳಿಸಿಕೊಟ್ಟು ನಿಮ್ಮ ಮಗುವಿಗೆ ಹೇಳಿ ನೀನು ಮಹಾಪುರುಷನಾಗಬೇಕು, ಅದಕ್ಕಾಗಿಯೇ ನಿನ್ನ ಜನ್ಮವಾಗಿದೆ ಜೀವನದಲ್ಲಿನ ಶ್ರೇಷ್ಟ ವಿಚಾರಗಳನ್ನು ಮಕ್ಕಳ ಕಿವಿಯಮೇಲೆ ನಿರಂತರ ಬೀಳುವಂತೆ ಮಾಡಿ.
ನಿಮ್ಮ ಆತ್ಮ ಪರೀಕ್ಷೆ ಮಾಡಿಕೊಳ್ಳಿ : 
     ಮಕ್ಕಳಿಗೆ ಸಂಯಮದ ಪಾಠವನ್ನು ಹೇಳುವ ಮೊದಲು ನೀವು ಸಂಯಮವನ್ನು  ಅಭ್ಯಾಸ ಮಾಡಿಕೊಳ್ಳಿ. ಮಕ್ಕಳು ಟಿವಿ ನೋಡಬಾರದೆಂದಾರೆ ನೀವು ಟಿವಿ ನೋಡುವದನ್ನು ನಿಲ್ಲಿಸಿ. ನೀವು ಟಿವಿ ನೋಡುತ್ತಾ ಮಕ್ಕಳನ್ನು ನೀನು ರೂಮಿನಲ್ಲಿ ಓದು ಎಂದು ಹೇಳಿದರೆ ಅದು ಯಾವ ನ್ಯಾಯ? ಮೊದಲು ನೀವು ಸಂಯಮ ಕಲಿತುಕೊಳ್ಳಿ.ನೀವು ಟಿವಿ ನೋಡುವುದನ್ನು ಬಿಟ್ಟರೆ ಮಕ್ಕಳೂ ಸಂತೋಷದಿಂದಲೇಬಿಡುತ್ತಾರೆ. ಒಳ್ಳೆಯ ಕಾರ್ಯಕ್ರಮ ಒಂದನ್ನು ನೀವು ಟಿವಿಯಲ್ಲಿ ನೋಡಬೇಕೆಂದರೆ ಮಕ್ಕಳನ್ನೂ ಕೂರಿಸಿಕೊಂಡು ಒಟ್ಟಿಗೇ ನೋಡಿ.ಉತ್ತಮ ಕಾರ್ಯಕ್ರಮಗಳನ್ನೇ ನೋಡಿ. ಮಕ್ಕಳಿಗೆ ಆದರ್ಶಗಳನ್ನು ಹೇಳುವ ಮುಂಚೆ ನಾವು ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡಿದ್ದೀವಾ? ಯೋಚಿಸಿ. ಸಹನೆಯ ಮಾತನ್ನು ಮಕ್ಕಳಿಗೆ   ಹೇಳುವಾಗ ನಾವು ತಂದೆತಾಯಿ ಹೇಗಿದ್ದೇವೆಂದು ಆತ್ಮ ಪರೀಕ್ಷೆ ಮಾಡಿಕೊಳ್ಳಿ. ಮೊದಲು ಆಚರಣೆಗೆ ತಂದು ನಂತರ ಮಕ್ಕಳಿಗೆ ಹೇಳಿದಾಗ ನೀವು ಅದ್ಭುತ ಪರಿಣಾಮವನ್ನು ಕಾಣಬಲ್ಲಿರಿ ಅಪ್ಪ- ಅಮ್ಮ ಪರಸ್ಪರ ಹೇಗಿರುತ್ತಾರೆ, ಸಿಟ್ಟು   ಮಾಡುತ್ತಾರಾ? ಕೆಟ್ಟ ಮಾತನ್ನಾಡುತ್ತಾರಾ? ಮಕ್ಕಳು ನಿಮ್ಮನ್ನು ಸದಾಕಾಲ ನೋಡುತ್ತಲೇ ಇರುತ್ತಾರೆ. ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ,ಬದಲಿಗೆ ನೋಡಿದ್ದನ್ನು ಕಲಿಯುತ್ತಾರೆ.ಅಪ್ಪ- ಅಮ್ಮ ಹೇಗೆ ಬದುಕುತ್ತಾರೆ, ಅದರಂತೆ ಮಕ್ಕಳು ಬೆಳೆಯುತ್ತಾರೆ.ನೀವು ಮನೆಯಲ್ಲಿ ಎಷ್ಟು ಪವಿತ್ರವಾತಾವರಣವನ್ನುನಿರ್ಮಿಸುತ್ತೀರಿ, ಎಷ್ಟು ಶಾಂತತೆ ಕಾಪಾಡುತ್ತೀರಿ, ಎಷ್ಟು ಆನಂದದ ವಾತಾವರಣ ನಿರ್ಮಿಸುತ್ತೀರಿ, ಅಷ್ಟು ಸುರಕ್ಷಿತವಾಗಿ ನಿಮ್ಮ ಮಕ್ಕಳು ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ + ಪ್ರಬುದ್ಧ ತಂದೆ = ಶ್ರೇಷ್ಠ ಮಕ್ಕಳು. ಹಳ್ಳಿಗಳಲ್ಲಿ ಅನೇಕ ಮನೆಗಳಲ್ಲಿ ನಾವು  ಗಮನಿಸುತ್ತೇವೆ.ಮನೆ ತುಂಬಾಜನ. ತಾಯಿಯಾದವಳು ಹೆಚ್ಚೇನೂ ಓದಿರುವುದಿಲ್ಲ.ಶಾಂತವಾಗಿ ಎಲ್ಲರಿಗೂ ಅಡಿಗೆ ಮಾಡಿ ಪ್ರೀತಿಯಿಂದ ಉಣ ಬಡಿಸಿ, ಎಲ್ಲರಿಗೂ   ಪ್ರೀತಿಯಿಂದ ಸೇವೆ ಮಾಡುತ್ತಾ ನಂತರ ಕಟ್ಟಕಡೆಗೆ ತಾನು ಉಳಿದಿದ್ದರೆ ಊಟ ಮಾಡುತ್ತಾಳೆ.ಅಂತಹ ಶಾಂತ ವಾತಾವರಣದಲ್ಲಿ ಬೆಳೆದ ಮಕ್ಕಳು ಅದ್ಭುತ ವ್ಯಕ್ತಿತ್ವ ಪಡೆಯುತ್ತಾ ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ, ಪ್ರಬುದ್ಧ ತಂದೆ,ಇಂತಹ ಮನೆಯಲ್ಲಿ ಬೆಳೆಯುವ ಮಕ್ಕಳು ಸಹಜವಾಗಿ ಶ್ರೇಷ್ಟರಾಗಿ ಬೆಳೆಯುತ್ತಾರೆ.ಮಕ್ಕಳು ಗಮನಿಸುತ್ತಿರುತ್ತಾರೆ. ತಂದೆತಾಯಿ ಮನೆಯಲ್ಲಿ ಮಾತನಾಡುವಾಗ ಏನು  ಮಾತಾಡ್ತಾರೆ,ದೇವರ ಕುರಿತು ಮಾತಾಡ್ತಾರಾ,ಸಮಾಜದ ಕುರಿತು ಮಾತಾಡ್ತಾರಾದೇಶದ ಕುರಿತು ಮಾತಾಡ್ತಾರಾ! ಮಕ್ಕಳ ಬೆಳವಣಿಗೆ ಬಹಳ ಸುಲಭ, ಅವರಿಗೆ  ನಾವು ಏನೂ ಹೇಳಬೇಕಾಗಿಲ್ಲ, ಅವರು ಮನೆಯಲ್ಲಿ- ಸುತ್ತಮುತ್ತ ಏನು   ನೋಡುತ್ತಾರೋ, ಏನು ಗಮನಿಸುತ್ತಾರೋ, ಅದನ್ನು ಕಲಿಯುತ್ತಾರೆ.
ಮುದ್ದಿನಜೊತೆಗೆ ಗುದ್ದು: 
     ಒಬ್ಬ ತಾಯಿ ಸ್ವಾಮೀಜಿ ಪುರುಷೋತ್ತಮಾನಂದರ ಬಳಿ ಬಂದು ಸ್ವಾಮೀಜಿಯವರನ್ನು ಕೇಳುತ್ತಾಳೆ ಸ್ವಾಮೀಜಿ ನನ್ನ ಮಗ ನನ್ನ ಮಾತನ್ನು ಕೇಳುವುದೇ ಇಲ್ಲವಲ್ಲಾ, ಏನು ಮಾಡಲಿ? ಸ್ವಾಮೀಜಿ ಹೇಳುತ್ತಾರೆ.- ಚಿಕ್ಕಂದಿನಲ್ಲಿ ನೀನು ಮಗುವನ್ನು   ಮುದ್ದುಮಾಡುವುದರ ಜೊತೆಗೆ ಗುದ್ದನ್ನೂ ಕೊಟ್ಟಿದ್ದರೆ ಇಂದು ನಿನ್ನ ಮಗ ನಿನ್ನ ಮಾತು ಕೇಳ್ತಾ ಇದ್ದ. ಆದರೆ ಒಂದು ಮಾತು ನಾವು ತಿಳಿದು ಕೊಳ್ಳ ಬೇಕು-ಸ್ವಾಮೀಜಿ ಹೇಳಿದ್ದು ಮುದ್ದಿನ ಜೊತೆಗೆ ಗುದ್ದು ಅಂದರೆ ಕೇವಲ ಮುದ್ದು ಮಾಡಿದರೂ ಸಾಲದು, ಕೇವಲ ಗುದ್ದು ಕೊಟ್ಟರೂ ಸಾಲದು. ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಹೃದಯಪೂರ್ವಕವಾಗಿ ತಾಯಿಯ ಪ್ರೀತಿ ಇದ್ದಾಗ ಮಾತ್ರ ಗುದ್ದು ಮಕ್ಕಳಲ್ಲಿ ಪರಿಣಾಮ ಉಂಟು ಮಾಡುತ್ತೆ.
ಮಕ್ಕಳನ್ನು ಬೆಳೆಸುವುದು ಒಂದು ಕಲೆಯೂ ಹೌದು, ಸವಾಲೂ ಹೌದು:
      ನಿಮ್ಮ ಮಕ್ಕಳು ಹೀಗೆ ಬೆಳೆಯ ಬೇಕು ಎಂದು ನೀವು ನಿರೀಕ್ಷಿಸುವ ಮೊದಲು ನೀವುಹಾಗಾಗಿರಬೇಕು.ಮಕ್ಕಳು ಸತ್ಯ ಹೇಳಬೇಕೆಂದರೆ ಮೊದಲು ನೀವು ಸತ್ಯವಂತರಾಗಿ,ಯಾವ ಸದ್ಗುಣಗಳನ್ನು ನೀವು ನಿಮ್ಮ ಮಕ್ಕಳಲ್ಲಿ ಅಪೇಕ್ಷಿಸುತ್ತೀರೋ ಅವುಗಳನ್ನು ಮೊದಲು ನೀವು ರೂಢಿಸಿಕೊಳ್ಳಿ. ಅತಿಯಾಗಿ ಸಿಹಿತಿನ್ನುತ್ತಿದ್ದ ಒಂದು ಮಗುವಿಗೆ ನೀನು ಅತಿಯಾಗಿ ಸಿಹಿ ತಿನ್ನ ಬೇಡ ಎಂದು ಹೇಳಲು ಶ್ರೀ ರಾಮಕೃಷ್ಣ ಪರಮಹಂಸರು ತಾವು ಮೊದಲು ಸಿಹಿ ತಿನ್ನುವುದನ್ನು ನಿಲ್ಲಿಸಿ ತಾವು ಸಿಹಿಯ ಆಸೆ ತ್ಯಜಿಸಿದ  ಮೇಲೆ ಮಗುವಿಗೆ ಮಗು, ನೀನು ಸಿಹಿ ತಿನ್ನ ಬೇಡ ಎಂದು ಹೇಳಿದ ಕಥೆ ನಮಗೆ  ಗೊತ್ತಿರ ಬೇಕು.
ಮಕ್ಕಳಲ್ಲಿ ಹೆದರಿಕೆ ಉಂಟು ಮಾಡಬೇಡಿ: 
      ಮಕ್ಕಳಲ್ಲಿ ಭಯವನ್ನು ಉಂಟು ಮಾಡಲೇ ಬೇಡಿ ಕತ್ತಲಿಗೆ ಹೋಗ ಬೇಡ,ಗುಮ್ಮ  ಹಿಡಿದುಕೊಂಡು ಬಿಡುತ್ತೆ, ಹೀಗೆ ಮಕ್ಕಳಲ್ಲಿ ಸಲ್ಲದ ಭಯವನ್ನು ಉಂಟು ಮಾಡುವ ತಾಯಂದಿರಿದ್ದಾರೆ. ಇದರಿಂದ ಮುಂದೆ ಮಕ್ಕಳು ಕಾಣದ ಜಾಗಕ್ಕೆ ಹೋಗುವಾಗ  ಭಯ ಭೀತರಾಗುತ್ತಾರೆ. ಅಪರಿಚಿತ ಜಾಗಕ್ಕೆ ಹೋಗುವ ಸಾಹಸವನ್ನೇ  ಮಾಡುವುದಿಲ್ಲ. ಬದಲಿಗೆ ಮಕ್ಕಳಿಗೆ ಹೇಳಿ ಕತ್ತಲಲ್ಲಿ ಹೋಗು,ಏನಿದೆ, ಪರೀಕ್ಷೆ ಮಾಡಿನೋಡು? ಏನೂ ಆಗುವುದಿಲ್ಲ ಹೀಗೆ ಧೈರ್ಯ ತುಂಬಿ. ಅದರಿಂದ ಮುಂದೆ ನಿಮ್ಮ ಮಗ ಸಾಹಸಿಯಾಗಿ ಬೆಳೆಯುತ್ತಾನೆ.
ಮಕ್ಕಳನ್ನು ಎಡವಲು ಬಿಡಿ: 
      ಮಕ್ಕಳು ತಪ್ಪು ಮಾಡಿದರೂ ಚಿಂತೆಯಿಲ್ಲ, ಅವರಿಗೆ ಮಾಡಲು ಬಿಡಿ. ನಡೆಯುವ ಕಾಲು ಎಡುವದಿರದು- ಎಂಬ ಮಾತಿನಂತೆ ಎಡವಿದರೂ ಪರವಾಗಿಲ್ಲ ಮುಂದೆ ನಡೆಯುವುದನ್ನು ಅವನು ಕಲಿಯುತ್ತಾನೆ ಆದ್ದರಿಂದ ಎಡವಲು ಬಿಡಿ.ಮಕ್ಕಳನ್ನು   ಸ್ವತಂತ್ರವಾಗಿ ಬೆಳೆಯಲು ಬಿಡಿ.ಮುಂದೆ ಜೀವನದಲ್ಲಿ ಎಷ್ಟು ಎಡರು ತೊಡರುಗಳು ಬರುತ್ತದೋ ಯಾರಿಗೆ ಗೊತ್ತು, ಮುಂದೆ ಅವುಗಳನ್ನೆಲ್ಲಾ ಎದುರಿಸುವಂತಾಗಲು ಈಗ ಎಡವಲು ಬಿಡಿ, ತಿದ್ದಿಕೊಂಡು ನಡೆಯುವುದನ್ನು ಕಲಿಯುತ್ತಾನೆ.
ಮಗುವಿನ ಬೆನ್ನಿನ ಮೇಲೊಂದು ಲಗ್ಗೇಜು: 
      ಸ್ವಾಮೀಜಿಯೊಬ್ಬರು ಯೂರೋಪ್ ಪ್ರವಾಸ ಮಾಡುವಾಗ ವಿಮಾನ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿನೊಡನೆ ಬರುತ್ತಿರುವುದನ್ನು ನೋಡುತ್ತಾರೆ. ತಾಯಿಯ ಹತ್ತಿರ ಒಂದು ಲಗ್ಗೇಜ್ ಇದೆ, ಐದು ವರ್ಷದ ಮಗುವಿನ ಬೆನ್ನಿನ ಮೇಲೂ ಒಂದು  ಪುಟ್ಟ ಬ್ಯಾಗ್ ಇದೆ. ಆ ಬ್ಯಾಗಿನಲ್ಲಿ ಆ ಮಗುವಿನ ಬಟ್ಟೆಗಳು. ತಂದೆ ಬರುತ್ತಾನೆ. ಮಗುವನ್ನು ಮುದ್ದಾಡುತ್ತಾನೆ- ಅಯ್ಯೋ ಮಗುವಿನ ಬೆನ್ನಿನಮೇಲೆ ಹೊರೆಯಿದೆಯಲ್ಲಾ!! ಎಂದು ಸಂಕಟ ಪಟ್ಟು ಬ್ಯಾಗನ್ನು ತಾನು ಪಡೆಯುವುದಿಲ್ಲ ಬದಲಿಗೆ ಅದಕ್ಕೇ ಹೊರಲು ಬಿಡುತ್ತಾನೆ. ತನ್ನ ಜೀವನದ ಜವಾಬ್ದಾರಿ ತಾನೇ ಕಲಿಯಲೆಂಬ ಉದ್ದೇಶ ಅದರ ಹಿಂದೆ ಇರುವುದನ್ನು ಆ ತಂದೆ ತಿಳಿಸುತ್ತಾನೆ. ಮಗುವಿಗೆ ಯಾವಾಗಲೂ  ನಿನಗೆ ಆಗುವುದಿಲ್ಲ, ನೀನಿನ್ನೂ ಚಿಕ್ಕವನು ಮಾಡಬೇಡ, ಹೀಗೆ ನಕಾರಾತ್ಮಕ  ಮಾತುಗಳನ್ನು ಹೇಳಲೇಬೇಡಿ.ಅದು ತಪ್ಪು ಮಾಡಿದರೂ ಚಿಂತೆಯಿಲ್ಲ ಮಾಡಲು  ಬಿಡಿ. ಹತ್ತು ಸಲ ತಪ್ಪು ಮಾಡಿದರೂ ಚಿಂತೆಯಿಲ್ಲ. ಹನ್ನೊಂದನೆಯ  ಬಾರಿಯೂ ಮಾಡಲು ಬಿಡಿ, ಉತ್ತೇಜನ ಕೊಡಿ, ಆಗ ಸರಿ ಮಾಡುತ್ತಾನೆ.
ಅಮ್ಮ ಹೇಳಿದ್ದೆಲ್ಲಾ ಸತ್ಯ: 
      ಮಕ್ಕಳು ಹೇಗೆ ಭಾವಿಸುತ್ತಾರೆಂದರೆ ಒಂದು ಸತ್ಯ ಘಟನೆಯನ್ನು ಗಮನಿಸಬೇಕು.ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ ಎಂದು. ಬಟ್ಟೆ ತಂದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದು ಬಿಡುತ್ತೆ.ಮಗುವಿಗೆ ಅನ್ನಿಸುತ್ತೆ-ತನ್ನ ತಾಯಿ ಹೇಳಿದಂತೆ ಆಗುತ್ತೆ. ಇನ್ನೊಂದು ದಿನ ಅಪ್ಪ ಕಛೇರಿಯಿಂದ ಫೋನ್ ಮಾಡುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾನೆ.ಫೋನ್ ರಿಂಗಣಿಸುತ್ತದೆ,  ತಾಯಿ ಮಗುವಿಗೆ ಹೇಳುತ್ತಾಳೆ ಅಪ್ಪ ಫೋನ್ ಮಾಡಿರಬಹುದು ಫೋನ್  ತೆಗೆದುಕೋ ಮಗು ಫೋನ್ ತೆಗೆದುಕೊಳ್ಳುತ್ತೆ. ಹೌದು ಅಪ್ಪನೇ ಫೋನ್  ಮಾಡಿರುವುದು. ಈಗಲೂ ಮಗುವಿಗೆ ಅನ್ನಿಸುತ್ತೆ ನಮ್ಮ ಅಮ್ಮ ಹೇಳೋದೆಲ್ಲಾ ನಿಜ.ಕಾಲಿಂಗ್ ಬೆಲ್ ಆಗುತ್ತೆ.ಬೆಲ್ ಶಬ್ಧ ತಾಯಿಗೆ ಮಾತ್ರ ಕೇಳಿಸಿರುತ್ತೆ, ತಾಯಿ  ಮಗುವಿಗೆ ಹೇಳುತ್ತಾಳೆ ಹೋಗಿ ಬಾಗಿಲು ತೆಗೆ, ಯಾರೋ ಬಂದಿದ್ದಾರೆ. ಮಗು  ಬಾಗಿಲು ತೆಗೆಯುತ್ತೆ. ಹೌದು ಯಾರೋ ಬಂದಿದ್ದಾರೆ. ಮಗುವಿಗೆ ಒಂದು ಸಂಗತಿ ಗ್ಯಾರಂಟಿಯಾಯ್ತು.ಅಮ್ಮ ಹೇಳೋದೆಲ್ಲಾ ನಿಜವಾಗುತ್ತೆ. ಮಗು ಸ್ವಲ್ಪ  ದೊಡ್ಡದಾಯ್ತು, ಶಾಲೆಗೆ ಹೋಗುವಾಗ ತಂಟೆ ಮಾಡುತ್ತಾನೆ, ಆಗ ತಾಯಿ  ಹೇಳಿದಳು ನೀನು ಮೂರ್ಖ, ಶಾಲೆಗೆ ಹೋಗಬೇಡ, ದನಾ ಕಾಯಲು ಹೋಗು ಅಮ್ಮ ಹೇಳಿದ್ದೆಲ್ಲಾ ನಿಜವಾಗುತ್ತದೆಂಬುದು ಈಗಾಗಲೇ ಮಗುವಿನ ಮನಸ್ಸಿನಲ್ಲಿ ಇದೆ, ಆ ಮಗು ತಾನು ಮೂರ್ಖನೇ ಇರಬೇಕು, ಅಂತಾ ಅಂದು ಕೊಂಡ.ಬರಬರುತ್ತಾ   ದಡ್ದನೇ ಆಗಿಬಿಟ್ಟ.ಮನ:ಶಾಸ್ತ್ರದಲ್ಲಿ ಸಂಶೋಧನೆ ಮಾಡಿರುವ ಘಟನೆ ಇದು.   ಮನೆಯಲ್ಲಿ ನಕಾರಾತ್ಮಕ ಮಾತುಗಳನ್ನು ಆಡಲೇ ಬೇಡಿ.
ಮಕ್ಕಳಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸಿ: 
      ಮಕ್ಕಳು ಮನೆಯಲ್ಲಿ ಏನೋ ತಿಂಡಿ ತಿನ್ನುತ್ತಾ ಇರುತ್ತಾರೆ ಯಾರೋ ಬೇರೆ ಮಕ್ಕಳು ಮನೆಗೆ ಬರುವುದು ಗೊತ್ತಾಗುತ್ತೆ, ಆಗ ನಾವು ಸಾಮಾನ್ಯವಾಗಿ ಏನು ಮಾಡ್ತೇವೆ? ಹೋಗು ಒಳಗೆ ಹೋಗಿ ತಿನ್ನು,ಅಂತಾ ಮಕ್ಕಳಿಗೆ ಹೇಳುತ್ತೇವೆ.ಅದರ ಬದಲು ಆ ಮಗುವಿಗೂ ಸ್ವಲ್ಪ ಕೊಡು, ಆಮಗುವೂ ನಿನ್ನಂತ ಮಗುವೇ ಅಲ್ಲವೇ?  ಎನ್ನುವ ಒಳ್ಳೆಯ ಮಾತನ್ನು ನಾವು ಹೇಳಿಕೊಡುತ್ತೇವೆಯೇ?
ತಾಯಿಯ ಮಾತು ವೇದ ವಾಕ್ಯ:
     ಕೊನೆಯದಾಗಿ ಒಂದು ಘಟನೆ.ಒಂದು ಹಳ್ಳಿಯಲ್ಲಿ ಒಬ್ಬ ವಿಧವೆ.ಅತೀ ಬಡತನದಿಂದ ಮಗನನ್ನು ಪಟ್ಟಣದಲ್ಲಿ ಓದಿಸಿ ದೊಡ್ದವನನ್ನಾಗಿ ಮಾಡುತ್ತಾಳೆ. ಒಂದು ಸರಕಾರಿ  ಕೆಲಸ ಸಿಗುತ್ತದೆ. ಅಲ್ಲಿಯವರಗಿದ್ದ ಬಡತನವೆಲ್ಲಾ ದೂರವಾಗುತ್ತದೆಂದು ಹಳ್ಳಿಯ ಜನರೆಲ್ಲಾ ಮಾತನಾಡಿಕೊಳ್ಳುತ್ತಾರೆ.ಸಂಬಳದ ಜೊತೆಗೆ ಲಂಚವೂ ಸಿಗುವಂತ  ಕೆಲಸವೆಂದು ಜನರಾಡುವ ಮಾತು ಈ ತಾಯಿಯ ಕಿವಿಗೆ ಬೀಳುತ್ತದೆ. ಅಮ್ಮನಿಗೆ ವಿಷಯವನ್ನು ತಿಳಿಸಲು ಮಗ ಹಳ್ಳಿಗೆ ಬಂದು ನಮಸ್ಕರಿಸುತ್ತಾನೆ, ಆಗ ತಾಯಿಯು ನೀನು ನನ್ನ ಎದೆಹಾಲು ಕುಡಿದು ಬೆಳೆದ ಮಗನೇ ಆಗಿದ್ದಲ್ಲಿ ಸಂಬಳದ ಹೊರತಾಗಿ ಒಂದು ಬಿಡಿಗಾಸನ್ನೂ ಲಂಚವಾಗಿ ಪಡೆಯ ಕೂಡದು, ನನ್ನ ಬಡತನ ಹೀಗೆಯೇ  ಇದ್ದರೂ ಚಿಂತೆಯಿಲ್ಲ, ನೀನು ಮಾತ್ರ ಪ್ರಾಮಾಣಿಕನಾಗಿ ಜನರ ಸೇವೆ ಮಾಡಬೇಕುಎಂದು ಹರಸುತ್ತಾಳೆ.ಮಗ ಅಮ್ಮನ ಮಾತನ್ನು ಶಿರಸಾ ಪಾಲಿಸುತ್ತಾನೆ.ದೊಡ್ಡ  ಅಧಿಕಾರಿಯಾಗಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸಿ ಹೆಸರು ಗಳಿಸುತ್ತಾನೆ.ಅಮ್ಮನಿಗೆ ಆನಂದ ವಾಗುತ್ತದೆ. ಸಮಾಜದಲ್ಲಿ ಇಂತಾ ಉದಾಹರಣೆಗಳು ಸಾಕಷ್ಟಿವೆ. ನೀವುಗಳೂ ಕೂಡ ಒಳ್ಳೆಯ ತಂದೆ- ತಾಯಿಯಾಗಿ ಆದರ್ಶ ವಾಗಿ ಬಾಳುತ್ತಾ   ನೀವೂ ಬೆಳೆಯಿರಿ ಮಕ್ಕಳನ್ನೂ ಉತ್ತಮರನ್ನಾಗಿ ಬೆಳೆಸಿ.
*********************
-ಹರಿಹರಪುರ ಶ್ರೀಧರ್.

ಶನಿವಾರ, ಸೆಪ್ಟೆಂಬರ್ 17, 2011

ನಾವು ಎನ್ನುವ ಭಾವ


ಸಮಾನೀ ಪ್ರಪಾ ಸಹವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ|
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ||
(ಅಥರ್ವ.೩.೩೦.೬.)
     ಜಲಾಶಯಗಳು ನಿಮ್ಮೆಲ್ಲರಿಗೂ ಸಮಾನವಾಗಿ ಸೇರಿದವುಗಳಾಗಿವೆ. ನಿಮ್ಮೆಲ್ಲರ ಜಲಾಶಯಗಳು ಸಮಾನವಾಗಿರಲಿ. ನಿಮ್ಮ ಭೋಜನಗಳು ಒಂದಿಗಿರಲಿ. ಸಮಾನವಾದ ನೊಗದಲ್ಲಿ ನಿಮ್ಮನ್ನು ಒಂದಿಗೆಯೇ ಹೂಡಿದ್ದೇನೆ. ಗುಂಭವನ್ನು ಅರೆಕಾಲುಗಳು ಸುತ್ತಲಿಂದಲೂ ಆವರಿಸಿಕೊಂಡಿರುವಂತೆ ಒಂದುಗೂಡಿ ಜಗನ್ನಾಯಕನನ್ನು ಆರಾಧಿಸಿರಿ.
     ಇದು ‘ನನ್ನ’ ಹೊಲ-ಗದ್ದೆ. ಅಲ್ಲಿ ನನ್ನ ಭಾವಿಗೆ ನಾನು ಪಂಪ್ ಸೆಟ್ ಹಾಕಿದರೆ ಕೇಳಲು ನೀನು ಯಾರು? - ಎಂದು ಮುಂದುವರೆದಾಗ ಪಕ್ಕದ ಹೊಲದ ಭಾವಿ ಒಣಗಿದ ಮೇಲೆ ಪಕ್ಕದ ಭೂಮಿಯವನು ಏನು ಮಾಡಬೇಕು? ಕೊಳವೇಭಾವಿಯೇ ಗತಿ. ಈಗ ಮೊದಲಿನವನ ಭಾವಿಯ ಕಥೆ ಮುಗಿದಂತೆ! ಅವನು ಇನ್ನೂ ಆಳವಾದ ಕೊಳವೆಭಾವಿ ಹಾಕಿಸಿದಾಗ ಪಕ್ಕದವನ ಕೊಳವೇಭಾವಿಯೂ ಒಣಗುತ್ತದೆ. ಈ ಧೋರಣೆಯಿಂದ ಪ್ರಾರಂಭವಾದ ಅಂತರ್ಜಲದ ಶೋಷಣೆ ಇಂದು ಯಾವ ಮಟ್ಟಕ್ಕೆ ಬಂದಿದೆಯೆಂದರೆ, ೮೦೦ರಿಂದ ೧೦೦೦ ಅಡಿ ಭೂಮಿಯನ್ನು ಕೊರೆದರೂ ನೀರು ಸಿಕ್ಕುವ ಸಾಧ್ಯತೆಯಿಲ್ಲವೆಂದಾಗಿದೆ. ನಮ್ಮೆಲ್ಲರಿಗೂ ಆಶ್ರಯ ನೀಡುತ್ತಿರುವುದು ಒಂದೇ ಭೂಮಿ. ಭೂಮಿಯಳಗಿನ ಜಲಾಶಯಗಳು ಭೂಮಿಯ ಮೇಲಿನಂತೆ ಚಕ್ಕುಬಂದಿಗಳಿಗೆ ಒಳಪಟ್ಟಿಲ್ಲ. ಅವನ್ನು ರಕ್ಷಿಸುವ ಭಾರ ಎಲ್ಲರಿಗೂ ಸೇರಿದ್ದಾಗಿದೆ. ಅದರ ಶೋಷಣೆಯ ವಿರುದ್ಧ ದನಿಯೆತ್ತಲು ಎಲ್ಲರಿಗೂ ಹಕ್ಕಿದೆ. ಈ ಸರಳ ಸತ್ಯವನ್ನೇ ಈ ಮಂತ್ರ ನೆನಪಿಸುತ್ತಿದೆ. ಗೊಡ್ಡು ಆಚಾರ-ವಿಚಾರಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡವರು ಸ್ಪೃಶ್ಯ-ಅಸ್ಪೃಶ್ಯ ಎಂಬ ಮಾನವದ್ರೋಹೀ ಭಾವನೆಗಳಿಗೆ ಕಾವನ್ನು ಕೊಡುತ್ತಾ, ನೀರಿನ ವಿಚಾರಕ್ಕೂ ಅದನ್ನೇ ವಿಸ್ತರಿಸಿ ಮಾಡಿರುವ ಅನ್ಯಾಯಕ್ಕೆ ಲೆಕ್ಕವಿಲ್ಲ. ಇಂದಿಗೂ ಕೆಲವೆಡೆ ಈ ದುಷ್ಟ ಪದ್ಧತಿ ಜೀವಂತವಾಗಿದೆಯೆಂದರೆ ಆ ಗೊಡ್ಡು ಪದ್ಧತಿಗಳ ಆಳವನ್ನು ಊಹಿಸಬಹುದು. ವೇದವಿದನ್ನು ಸ್ಪಷ್ಟನುಡಿಗಳಲ್ಲಿ ನಿಷೇಧಿಸಿರುವಾಗ, ಸ್ಪೃಶ್ಯಾಸ್ಪೃಶ್ಯ ಪಿಡುಗಿನ ಮೂಲವನ್ನು ವೇದಗಳಲ್ಲಿ ಗುರುತಿಸುವುದು ತಮ್ಮನ್ನು ತಾವು ಬುದ್ಧಿಜೀವಿ(?)ಗಳೆಂದು ಕರೆದುಕೊಳ್ಳುವವರಿಗೆ ಮಾತ್ರ ಸಾಧ್ಯವೇನೋ?!!
   ಮಾಂಸಾಹಾರಿಗಳು ಯಾರೊಡನೆಯೂ ಕುಳಿತು ಊಟ ಮಾಡಿಬಿಡುತ್ತಾರೆ. ಆದರೆ, ಸಸ್ಯಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಭೋಜನ ಒಂದಿಗಿರಲಿ‌ ಎಂದಾಗ ಎಲ್ಲರೂ  ಸಸ್ಯಾಹಾರಿಗಳೇ ಆಗಬೇಕಾಗುತ್ತದೆ.
-ವೇದಾಧ್ಯಾಯೀ ಸುಧಾಕರಶರ್ಮ

ಶುಕ್ರವಾರ, ಸೆಪ್ಟೆಂಬರ್ 16, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -2 : ದೇವರೆಲ್ಲಿದ್ದಾನೆ?




ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎಂದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! (ಇಲ್ಲಿ ಒಂದು ವೇದ ಮಂತ್ರ ಉಲ್ಲೇಖಿಸಿ ಹೇಳುತ್ತಾರೆ:) ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ದೇವರಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ!. (ಬಹಳ ವರ್ಷದ ಹಿಂದೆ) ಒಬ್ಬ ಶೆಟ್ಟಿ ಬೆಳಿಗ್ಗೆ ಬಂದಾಗ ಖುಷಿಯಲ್ಲಿದ್ದವನು ಸಾಯಂಕಾಲ ಮುಖ ಸಪ್ಪಗೆ ಹಾಕಿಕೊಂಡು ಬಂದ. ವಿಚಾರಿಸಿದರೆ 'ಕುದುರೆ ರೇಸಿನಲ್ಲಿ ಎಲ್ಲಾ ಕಳೆದುಕೊಂಡೆ. ಇಪ್ಪತ್ತೈದು ರೂಪಾಯಿ ಕೊಟ್ಟಿರಿ, ಶಿವಮೊಗ್ಗಕ್ಕೆ ಹೋಗಿ ವಾಪಸು ಕಳಿಸುತ್ತೇನೆ' ಅಂತ ಹೇಳಿದ. ಇದು ಭಗವದ್ಭಕ್ತರ ಲಕ್ಷಣವಾ? ಕುದುರೆ ಜೂಜಾಡುವುದು? (ಒಂದು ವೇದ ಮಂತ್ರವನ್ನು ಉಲ್ಲೇಖಿಸಿ) ಜೂಜಾಡಬಾರದು, ಕಷ್ಟಪಟ್ಟು ದುಡಿ, ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸಿಟ್ಟುಕೊಳ್ಳುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ತ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. ಸರ್ವೇಜನಾಃ ಸುಖಿನೋ ಭವಂತು. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
**************
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 14, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -೧ : ಕರ್ತವ್ಯ ಮತ್ತು ಮಾನಾಪಮಾನ


      ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು, ಅವರ ಶಿಷ್ಯ ಶ್ರೀ ಸುಧಾಕರ ಶರ್ಮರವರ ವಿಚಾರಗಳು, ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದಂತೆ ನನ್ನ ಅಂತರಂಗದ ಅನಿಸಿಕೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಅನುಭವ ನನ್ನದು. ನಾನು ಹೊಂದಿದ್ದ ಭಾವನೆಗಳಿಗೆ ಆಧಾರ ಸಿಕ್ಕಿದ ಮತ್ತು ಅದು ಸರಿಯಾಗಿದೆ ಅನ್ನುವ ಸಂತಸ ಒಡಮೂಡುತ್ತಿದೆ. ಸತ್ಯದ ಸಂಗತಿಗಳು ಯಾರಿಂದಲೇ ಬರಲಿ - ಅವರು ಶತ್ರುಗಳೇ ಆಗಿರಲಿ - ಅದು ಸ್ವೀಕಾರಾರ್ಹ ಎಂಬ ದೃಷ್ಟಿ ಮತ್ತು ಪೂರ್ವಾಗ್ರಹವಿಲ್ಲದ ವಿಚಾರ ವಿಮರ್ಶೆಯಿಂದ ಹೊರಬರುವ ಸತ್ಯ ಸಿಹಿಯಾಗಿರುತ್ತದೆಯೆಂದು ಅಂದುಕೊಂಡಿದ್ದೇನೆ.ಸತ್ಸಂಗದಲ್ಲಿ ಅವರು ತಿಳಿಸಿದ ವಿಚಾರಗಳನ್ನು ಬರಹರೂಪದಲ್ಲಿಳಿಸಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .' ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ. 
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ.) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. ಸತ್ಯಮೇವ ಜಯತೇ ನಾನೃತಮ್. . . . . ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ದೊಡ್ಡ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿದರು. "ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು" ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ. ಆ ದೇವರು ಎಲ್ಲರನ್ನೂ ಸಮಾನರಾಗಿ ನೋಡುತ್ತಾನೆ. ಒಳ್ಳೆಯವರನ್ನೂ ರಕ್ಷಿಸುತ್ತಾನೆ, ಕೆಟ್ಟವರನ್ನೂ ರಕ್ಷಿಸುತ್ತಾನೆ. ಭಾರತದಲ್ಲಿರುವವರು ಆಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ರಷ್ಯದಲ್ಲಿರುವವರು ದೇವರೇ ಇಲ್ಲ ಅನ್ನುವ ನಾಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ನೀನು ಅಂಥವನು, ಇಂಥವನು ಎಂದು ಹೊಗಳುವವರನ್ನು ಕಂಡು ಅವನೇನು ಉಬ್ಬಿ ನಾನು ದೊಡ್ಡ ದೇವರು ಅಂದುಕೊಂಡು ಹೊಗಳಿದವರಿಗೆ ದೊಡ್ಡ ಉಪಕಾರವನೇನೂ ಮಾಡುವುದಿಲ್ಲ. ಅವನನ್ನು ತೆಗಳಿದವರಿಗೆ, ಬೈದವರಿಗೆ ಸಿಟ್ಟು ಮಾಡಿಕೊಂಡು ಕೆಟ್ಟದನ್ನೂ ಮಾಡುವುದಿಲ್ಲ. ನಿಂದಾಸ್ತುತಿಗಳು ಮನುಷ್ಯರಿಗೇ ಹೊರತು ಪರಮಾತ್ಮನಿಗಿಲ್ಲ. ಹಾಗೆ ಮಾಡಿದರೆ ನಮಗೂ ಅವನಿಗೂ ಏನು ವ್ಯತ್ಯಾಸ? ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ.
. . . ಮುಂದುವರೆದಿದೆ.
**************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 6, 2011

ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!

        ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯು ಹೇಳುತ್ತಿದ್ದರು " ನೋಡುಮಗು, ಸುಳ್ಳು ಹೇಳಬಾರದು,” ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!" ಇವತ್ತು ಆ ಮಾತು ನೆನಪು ಮಾಡಿಕೊಂಡರೆ ನಗು ಬರುತ್ತೆ. ಆದರೆ ಆ ವಯಸ್ಸಿನಲ್ಲಿ ಹೆದರಿಸಿದ್ದರಿಂದ ಒಂದಿಷ್ಟು ಒಳ್ಳೆಯ ನಡತೆಯನ್ನು ರೂಢಿಸಿಕೊಳ್ಳಲು ಸಹಾಯವಾಗಿದ್ದಿರಬಹುದು. ಈಗ ಆ ಮಾತು ಯಾಕೆ ನೆನಪಾಯ್ತೆಂದರೆ ಚಿಕ್ಕ ಮಕ್ಕಳಿಗೆ ಹೀಗೆ ಭಯ ಉಂಟು ಮಾಡಿ ಒಂದಿಷ್ಟು ಸದ್ಗುಣಗಳನ್ನು ಕಲಿಸುವುದನ್ನು ಒಪ್ಪ ಬಹುದೇನೋ ಆದರೆ ಪ್ರೌಢಾವಸ್ತೆ ತಲುಪಿದಮೇಲೂ ಈ ರೀತಿ ಯಾರಾದರೂ ಭೀತಿಯುಂಟು ಮಾಡಿದರೆ ಅವರಿಗೆ ಏನೆನ್ನಬೇಕು? ಹಲವಾರು ವರ್ಷಗಳಿಂದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನನ್ನ ಮನದಲ್ಲಾಗುವ ಜಂಜಾಟವನ್ನು ನಿಮ್ಮ ಗಮನಕ್ಕೂ ತರಲು ಈ ಪ್ರಯತ್ನ. ಪೂಜಾ ಭಾಗ ಮುಗಿಯುವ ವರೆಗೂ ಭಕ್ತಿಯಿಂದಲೇ ಕುಳಿತಿರುವ ನನಗೆ ಸತ್ಯನಾರಾಯಣ ಕಥೆಯನ್ನು ಕೇಳುವಾಗ ಗೊಂದಲ ಶುರುವಾಗುತ್ತದೆ. ಸತ್ಯನಾರಾಯಣ ಪ್ರಸಾದವನ್ನು ತಿನ್ನಲಿಲ್ಲವೆಂಬ ಕಾರಣಕ್ಕೆ ವ್ಯಾಪಾರಿಯೊಬ್ಬನ ಹಡಗುಗಳು ಸಮುದ್ರದಲ್ಲಿ ಮುಳುಗಿಹೋಗಿ ಭಾರಿ ನಷ್ಟವಾಯ್ತೆಂದೂ ನಂತರ ಪಶ್ಚಾತ್ಥಾಪ ಪಟ್ಟು ವ್ರತವನ್ನಾಚರಿಸಿ ಪ್ರಸಾದವನ್ನು ತಿಂದ ಮೇಲೆ ಅವನ ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಾಯ್ತೆಂದೂ ಕಥೆಯನ್ನು ಕೇಳುವಾಗ , ನಮ್ಮಜ್ಜಿ ನೆನಪಾಗುತ್ತಾಳೆ
     ಸತ್ಯನಾರಾಯಣ ಕಥೆಯನ್ನು ಯಾರೂ ಪ್ರಶ್ನೆ ಮಾಡಲು ಯತ್ನಿಸುವುದಿಲ್ಲ. ಕಾರಣ ಅದರ ಹಿಂದೆ ಶ್ರದ್ಧೆ- ಭಕ್ತಿಯ ಜೊತೆಗೆ ಭೀತಿಯೂ ಸೇರಿದೆ. ಸತ್ಯನಾರಾಯಣವ್ರತವನ್ನು ಕೇವಲ ಯಾರೋ ಅವಿದ್ಯಾವಂತರು ಆಚರಿಸುತ್ತಾರೆಂದೇನೂ ಅಲ್ಲ. ಬಹುಪಾಲು ಜನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಅದರಬಗ್ಗೆ ಯಾವ ತಕರಾರೂ ಇಲ್ಲ. ಆದರೆ ಎಲ್ಲರನ್ನೂ ರಕ್ಷಿಸುವ ಭಗವಂತನು ಐಶ್ವರ್ಯವನ್ನು ನಾಶಮಾಡಿದ, ಜೀವಹಾನಿ ಮಾಡಿದ, ಮುಂತಾಗಿ ಕಥೆ ಇದ್ದರೆ ಅದನ್ನು ಇನ್ನೂ ಹೇಳಿಕೊಂಡೇ ಇರಬೇಕೇ?
     ಯಾವುದೋ ಒಂದು ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಬಂದಾಗ ಧರ್ಮಕಾರ್ಯ ನಡೆಯಲು ಅಂದಿನ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಜನರಲ್ಲಿ ಭಯವನ್ನುಂಟು ಮಾಡಿದರೆ ಅವನು ಧರ್ಮಮಾರ್ಗದಲ್ಲಿ ಹೋಗುತ್ತಾನೆಂಬ ಕಾರಣದಿಂದ ಒಂದಿಷ್ಟು ಕಥೆ ಹೆಣೆದಿರಬಹುದು. ಇದನ್ನು ಇಂದಿನ ದಿನಗಳಲ್ಲಿ ಪುರೋಹಿತರು ಅವರ ಹೊಟ್ಟೆ ತುಂಬಿಸಿಕೊಳ್ಳಲು ಮಾಡಿದ ಪ್ಲಾನ್ ಅಂತಾ ಹೇಳುವ ಜನರಿದ್ದಾರೆ. ದೇವರನ್ನು ನಂಬದ ನಾಸ್ತಿಕನ ವಿಚಾರ ಬೇರೆ. ವಿಚಾರವಾದದ ಹೆಸರಲ್ಲಿ ಹಿಂದು ಪರಂಪರೆ, ಹಿಂದು ಧಾರ್ಮಿಕ ಆಚರಣೆಗಳನ್ನು ಖಂಡಿಸುವವರ ವಿಚಾರ ಬೇರೆ. ಆದರೆ ಭವಂತನನ್ನು ನಂಬುವ ಹಿಂದು ಆಚಾರ- ವಿಚಾರಗಳನ್ನು ಪ್ರೀತಿಸುವ ಪ್ರಗತಿಪರ ಆಸ್ತಿಕನ ವಿಚಾರ ಬಂದಾಗ ಇಂತಾ ಕಥೆಗಳನ್ನು ಹೇಳದೆ ಮನಸ್ಸಿನ ನೆಮ್ಮದಿಗಾಗಿ ಯಾವುದೇ ದೇವರ ಪೂಜೆಯನ್ನು ಅವನ ಇಚ್ಛೆಯಂತೆ ಮಾಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಭಾವನೆ. ಅಷ್ಟೇ ಅಲ್ಲ ಕುರುಡು ನಂಬಿಕೆಗಳು, ಅಂಧಾಚರಣೆಗಳನ್ನು ಬಿಡುವ ಧೈರ್ಯ ನಮಗೆ ಬರಬೇಕು. ನೀವು ಏನಂತೀರಾ?
-ಹರಿಹರಪುರ ಶ್ರೀಧರ್.

ಯಜ್ಞ:: [ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸದ ಆಯ್ದ ಭಾಗ]

     ಕೇವಲ ಸಮಿತ್ತನ್ನು ಹೋಮಕುಂಡಕ್ಕೆ ಹಾಕಿ 'ಸ್ವಾಹಾ, ಇದಂ ನಮಮ' ಎನ್ನುವುದಕ್ಕೇ ಯಜ್ಞದ ಅರ್ಥ ಮುಗಿದುಬಿಡುವುದಿಲ್ಲ. ಇದಕ್ಕೆ ಇನ್ನೂ ವಿಸ್ತಾರವಾದ ಅರ್ಥವಿದೆ.ಯಜ್ಞವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದು ಯಾವ ಧಾತುವಿನಂದ ಬಂತು, ಅಲ್ಲಿಂದಲೇ ತಿಳಿಯಬೇಕು.ಆಗ ನಮಗೆ ಸರಿಯದ ಅರ್ಥ ಸಿಗುತ್ತದೆ.ನಾವು ವೇದಾಂಗಕ್ಕೆ ಹೋಗಿ ಆರ್ಶೇಯ ಕ್ರಮದಲ್ಲಿ ಅರ್ಥ ನೋಡುವುದು ಸರಿಯಾದ ಕ್ರಮ. ಯಜ್ಞ ಎನ್ನುವುದಕ್ಕೆ ಅರ್ಥ ಹುಡುಕಿದಾಗ -ಯಜ್ ದೇವಪೂಜಾ ಸಂಗತಿಕರಣ ದಾನೇಶು, ಇದು ಮೂಲದಲ್ಲಿರುವ ಧಾತು. ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಪದಗಳು ಇದರಿಂದ ಮೂಡುತ್ತವೆ. ಶತಪತಬ್ರಾಹ್ಮಣದಲ್ಲಿ ಹೇಳುತ್ತದೆ "ಯಜ್ಞೋವೈಶ್ರೇಷ್ಠತಮಂ ಕರ್ಮ" ಶ್ರೇಷ್ಠತಮ ಕರ್ಮ ಎಂದಾಗ [ಶ್ರೇಷ್ಠ-ಶ್ರೇಷ್ಠತರ-ಶ್ರೇಷ್ಠತಮ]ಅಂದರೆ ಅತ್ಯಂತಶ್ರೇಷ್ಠವಾದ ಕರ್ಮಗಳಿಗೆ ಯಜ್ಞ ಎಂದು ಅರ್ಥೈಸಲಾಗಿದೆ. ನಾವು ಮಾಡುವ ಆಲೋಚನೆಗಳು, ನಾವು ಆಡುವ ಮಾತುಗಳು, ನಾವು ಮಾಡುವ ಕೆಲಸ ಎಲ್ಲದರಿಂದಲೂ ನಾವು ಯಜ್ಞವನ್ನು ಮಾಡಲು ಸಾಧ್ಯವಿದೆ. ಕೇವಲ ಹೋಮಕುಂಡದ ಅಗ್ನಿಯಿಂದ ಮಾಡುವ ಯಜ್ಞವನ್ನಷ್ಟೇ ನಾವು ಯಜ್ಞ ಎಂದು ಭಾವಿಸಬೇಕಿಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಶ್ರೇಷ್ಠತಮವಾಗಿ ಮಾಡಿದರೆ ಅದು ಯಜ್ಞ ಎನಿಸಿಕೊಳ್ಳುತ್ತದೆ. ನಾವು ಪುರೋಹಿತರಿಂದ ಯಜ್ಞಕುಂಡದ ಎದುರು ಮಾಡುವ ಹೋಮವನ್ನು ಮಾತ್ರವೇ ಯಜ್ಞವೆಂದುಭಾವಿಸುತ್ತೇವೆ, ಆದರೆ ಇದೂ ಕೂಡ ಒಂದು ಯಜ್ಞವೇ ಹೊರತೂ ಯಜ್ಞವೆಂದರೆ ಇಷ್ಟೇ ಅಲ್ಲ. ನಾವು ಶ್ರೇಷ್ಠತಮವಾಗಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗಿದೆ. ಈ ಒಂದು ವಿಶಾಲವಾದ ಅರ್ಥವು ದೊರೆತಾಗ ನಮ್ಮ ಇಡೀ ಜೀವನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಇಡೀ ದಿನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು. ನಾವು ಮಾಡುವ ಆಲೋಚನೆಗಳು ಇದಕ್ಕಿಂತ ಇನ್ನೂ ಶ್ರೇಷ್ಠತಮವಾಗಿ ಮಾಡಬಹುದೇ ಎಂದು ಯೋಚಿಸಿ ಮಾಡಿದಾಗ ಅದು ಯಜ್ಞವಾಗುತ್ತದೆ. ನಾವು ಆಡುವ ಮಾತು ಇನ್ನೂ ಶ್ರೇಷ್ಠತಮವಾಗಿ ಆಡಬಹುದೇ ಎಂದು ಆಲೋಚಿಸಿ ಆಡಿದಾಗ ಅದೂ ಯಜ್ಞವೇ ಆಗುತ್ತದೆ. ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದೆ. ನಾವು ಅಡಿಗೆ ಮಾಡುವ ಕೆಲಸವೇ ಆಗಲೀ, ಕಸ ಗುಡಿಸುವ ಕೆಲಸವೇ ಆಗಲೀ, ಸೌದೆ ಒಡೆಯುವ ಕೆಲಸವೇ ಆಗಲೀ, ಇದಕ್ಕಿಂತ ಶ್ರೇಷ್ಠತಮವಾಗಿ ಮಾಡಿದೆನೆಂದರೆ ಅದು ಯಜ್ಞವೆನಿಸುತ್ತದೆ. ಅಂದರೆ ಇದಕ್ಕಿಂತ ಇನ್ನು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಅದು ಯಜ್ಞವೆನಿಸುತ್ತದೆ. ಶಾಲೆಯಲ್ಲಿ ಪಾಠಮಾಡುವಾಗ ಚೆನ್ನಾಗಿ ಪಾಠಮಾಡಿದೆನೆಂದರೆ ಅದು ಶ್ರೇಷ್ಠ. ಸಂಬಳ ಪಡೆಯುತ್ತೇನಾದ್ದರಿಂದ ಮಕ್ಕಳಿಗೆ ದ್ರೋಹವಾಗದಂತೆ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತರ. ಸಂಬಳ ಬಾರದಿದ್ದರೂ ಚಿಂತೆಯಿಲ್ಲ ಮಕ್ಕಳ ಅಭ್ಯುದಯಕ್ಕಾಗಿ ನಾನು ಅತ್ಯಂತಶ್ರದ್ಧೆಯಿಂದ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತಮ. ಇದು ಎಲ್ಲಾ ಕೆಲಸಕ್ಕೂ ಅನ್ವಯ. ಶ್ರೇಷ್ಠತಮ ಕೆಲಸವು ಯಜ್ಞ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ಮಾತಿನಲ್ಲೂ ಶ್ರೇಷ್ಠ, ಶ್ರೇಷ್ಠತರ, ಶ್ರೇಷ್ಠತಮ ಎಂದು ಪರಿಗಣಿಸಲು ಸಾಧ್ಯವಿದೆ. ಮಾತಿನಲ್ಲಿ, ಆಲೋಚನೆಯಲ್ಲಿ, ಕೆಲಸದಲ್ಲಿ ಶ್ರೇಷ್ಠತಮವಾದಾಗ ಅವುಗಳೆಲ್ಲವೂ ಯಜ್ಞ ಎನಿಸಿಕೊಳ್ಳುತ್ತವೆ. ನಮ್ಮ ಇಡೀ ಜೀವನವು ಯಜ್ಞಮಯವಾದಾಗ ನಮಗೆ ಸಿಗುವ ಲಾಭವೂ ಅಷ್ಟೇ ವಿಶೇಷವಾಗಿರುತ್ತದೆ. ನಮಗೆ ಉತ್ತಮ ಆರೋಗ್ಯ, ಸುಖ, ಸಂತೋಷ, ನೆಮ್ಮದಿ ಎಲ್ಲಾ ಬೇಕಾದರೆ ನಮ್ಮ ಜೀವನ ಯಜ್ಞಮಯವಾಗಿರಬೇಕು. ಆಗ ಎಲ್ಲವೂ ತಾನೇ ತಾನಾಗಿ ಲಭ್ಯವಾಗುತದೆ. ವೇದವು ನಮಗೆ ಹೇಳುವ ಮಾರ್ಗ ಇದೇ ಆಗಿದೆ- "ನಾನ್ಯಃ ಪಂಥಾ ಅಯನಾಯ ವಿದ್ಯತೇ" ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಯಾರುಈ ಮಾರ್ಗವನ್ನು ಅರ್ಥಮಾಡಿಕೊಂಡು ಜೀವನ ಮಾಡುತ್ತಾರೋ ಅವರು ಇಲ್ಲೇ ಅಮೃತತ್ವವನ್ನು ಹೊಂದುತ್ತಾರೆ ಎಂದು ಹೇಳಿದೆ. ಅಮೃತತ್ವ ಎಂದರೇನು? ಮೃತ ಎಂದರೆ ಸಾವು , ಅಮೃತ ಎಂದರೆ ಸಾವಿಲ್ಲದಿರುವುದು.[ಇಲ್ಲಿ ಸುಧಾಕರ ಶರ್ಮರು ಮೃತ್ಯುವೆಂಬ ಪದವನ್ನು ಬಹುವಾಗಿ ವಿಶ್ಲೇಷಿಸಿದ್ದಾರೆ, ಅದನ್ನು ಇಲ್ಲಿ ಬಿಟ್ಟಿದ್ದೇನೆ] ಅಂದರೆ ಯಾರಿಗೂ ಸಾವು ತಪ್ಪಿದ್ದಲ್ಲವಾದರೂ ನಿಜವಾಗಿ ಮನುಷ್ಯನಿಗೆ ನಿಜವಾಗಿ ತೊಂದರೆ ಕೊಡುತ್ತಿರುವುದು ಸಾವಲ್ಲ, ಸಾವಿನಭಯ. ಯಾವಾಗ ಸಾವಿನಭಯ ಹೋಗುತ್ತದೆ, ಇನ್ಯಾವುದಕ್ಕೂ ಭಯ ಪಡುವ ಕಾರಣವೇ ಇಲ್ಲ. ಎಲ್ಲಾಭಯಗಳಿಗೂ ಮೂಲವೇ ಪ್ರಾಣಭಯ. ಆದ್ದರಿಂದ ಯಜ್ಞದ ಜ್ಞಾನದಿಂದ ಪ್ರಾಣಭಯದಿಂದ ದೂರವಾಗುತ್ತಾರೆ. ಯಾವಾಗ ಸಾವಿನಭಯವೇ ಇಲ್ಲ ಆಗ ಅಸತ್ಯ, ಅನ್ತ್ಯಾಯ, ಅಧರ್ಮಗಳಿಗೆ ಅಂಜದೆ ಸತ್ಯಮಾರ್ಗದಲ್ಲಿ ಅವರ ದಾರಿ ಸಾಗುತ್ತದೆ.
-ಹರಿಹರಪುರಶ್ರೀಧರ್

ಸೋಮವಾರ, ಸೆಪ್ಟೆಂಬರ್ 5, 2011

ಅಶ್ವಮೇಧ ಯಾಗವೆಂದರೆ. . . . .


     ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದು ಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು" ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.

     ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.

     ಗೋಮೇಧ: ಗೋಮೇಧ ಎಂದಾಕ್ಷಣ ಗೋವಿನ ಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಗೋ ಎಂದರೆ ಹಸು ಎಂದಷ್ಟೇ ಅಲ್ಲ. ಯಾಸ್ಕರ ಪ್ರಕಾರ ಗೋ ಎಂದರೆ " ಇಂದ್ರಿಯ " ಎಂದೂ ಅರ್ಥವಿದೆ." ವಾಕ್" ವಾಣಿ ಎಂದೂ ಅರ್ಥವಿದೆ.ಇಲ್ಲಿ ಗೋಮೇಧ ಎಂದರೆ "ವಾಕ್ ಸಂಯಮ" ಎಂದು ಅರ್ಥ. ಮಾತನ್ನು ನಿಯಂತ್ರಣದಲ್ಲಿಡು ಎಂದು ಅರ್ಥ. ಅಂದರೆ ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಎಂದು ಹೆಸರು.ಗೋಮೇಧಾ ಎಂದರೆ ಹಸುವನ್ನು ಬಲಿಕೊಡುವ ಯಜ್ಞವಲ್ಲ.ವೇದಗಳ ಮೂಲ ಸಿದ್ಧಾಂತವೇ ಅಹಿಂಸೆಯಾದ್ದರಿಂದ ಈ ಅರ್ಥಗಳು ನಾವು ಹುಡುಕಿದರೆ ಸಿಗುತ್ತವೆ.ಮಾತನ್ನು ಹೇಗೆ ಆಡಬೇಕೆಂದೂ ವೇದದಲ್ಲಿಯೇ ಹೇಳಿದೆ. "ಹಿಟ್ಟನ್ನು ಜರಡಿ ಆಡಿದಂತೆ ಜರಡಿಯಾಡಿ ಮಾತನಾಡು" ಎಂದು ಹೇಳಿದೆ. ಹಿಟ್ಟನ್ನು ಜರಡಿಯಾಡಿ ಕಸ ಕಡ್ಡಿ ತೆಗೆದು ನಂತರವಷ್ಟೇ ರೊಟ್ಟಿ ಮಾಡುವುದಿಲ್ಲವೇ ಹಾಗೆ ಮಾತನ್ನು ಆಡುವ ಮುಂಚೆ ಜರಡಿಯಾಡಿ ಮಾತನಾಡು. ಅಂದರೆ ಮಾತನಾಡುವ ಮುನ್ನ ನಾವಾಡುವ ಮಾತು ಸತ್ಯವೇ, ಎಂದು ತಿಳಿದಿರಬೇಕು.ಇದು ಮೊದಲನೆಯ ಹಂತ. ಎರಡನೆಯದು "ಪ್ರಿಯವೇ" . ನಾನಾಡುವ ಮಾತು ಬೇರೆಯವರಲ್ಲಿ ದ್ವೇಶ ಉಂಟುಮಾಡುತ್ತದೋ, ಉದ್ವೇಗ ಉಂಟುಮಾಡುತ್ತದೋ, ಅಥವಾ ಪ್ರಿಯವಾಗುತ್ತದೋ , ಹಿತವಾಗುತ್ತದೋ ಎಂಬುದನ್ನು ಆಲೋಚಿಸಿ ನಂತರ ನಮ್ಮ ಬಾಯಿಂದ ಮಾತು ಹೊರಬರಬೇಕು. ಈಬಗ್ಗೆ ನಾವು ಯೋಚಿಸಿದ್ದೇವೆಯೇ?
     ಈ ಒಂದು ಮಾತಿನ ನಿಯಂತ್ರಣವಿದ್ದರೆ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಅಶಾಂತಿ ಮೂಡುವುದೇ ಇಲ್ಲ. ಮಾತನಾಡುವ ಮುಂಚೆ ಅದು ಸತ್ಯವೇ,ಪ್ರಿಯವೇ, ಹಿತವೇ ಎಂದು ಆಲೋಚಿಸಿ ಮಾತನಾಡಿದರೆ ಸಮಾಜದಲ್ಲಿ ಸಾಮರಸ್ಯಕ್ಕೆ ಬಂಗ ಬರುವುದಿಲ್ಲ.ಸತ್ಯವೂ, ಪ್ರಿಯವೂ, ಹಿತವೂಆದ ಮಾತನ್ನಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ? ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿವಾಚಿ"ಮಂಗಳಕರವಾದ ಸಂಪತ್ತು ,ಶ್ರೇಯಸ್ಕರವಾದ ಹಿತ ಅಂತಹಾ ಮಾತಿನಲ್ಲಿ ನೆಲೆಗೊಂಡಿದೆ. ಬ್ಯಾಂಕಿನಲ್ಲಿರುವ ಡಿಪಾಸಿಟ್ ನಮ್ಮನ್ನು ಕಾಪಾಡುವುದಿಲ್ಲ. ನಿಜವಾದ ಸಂಪತ್ತು ನಮ್ಮ ಮಾತಿನಲ್ಲಿದೆ. ಮಾತು ಸರಿಯಾಗಿದ್ದಲ್ಲಿ ಸಂಪತ್ತನ್ನು ಗಳಿಸುವುದು ಕಷ್ಟವಿಲ್ಲ.ಆದರೆ ಮಾತು ಸರಿಯಿಲ್ಲದಿದ್ದಾಗ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುತ್ತದೆ.ಹೀಗೆ ಜರಡಿಯಿಂದಆಡಿಸಿ ಮಾತನಾಡಬೇಕು, ಇದನ್ನು ವಾಕ್ ಸಂಯಮ ಎನ್ನುವರು. ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಯಜ್ಞ ಎಂದುಕರೆದರು.ಆದರೆ ಅದನ್ನು ಹಸುವನ್ನು ಬಲಿಕೊಡುವ ಒಂದು ಯಜ್ಞಎಂದು ತಪ್ಪಾಗಿ ಅರ್ಥೈಸಿ ಹಸುವನ್ನು ಬಲಿಕೊಟ್ಟು ಅದರ ವಪೆಯನ್ನು ಯಜ್ಞಕ್ಕೆ ಹಾಕಿ, ಇನ್ನು ಯಜ್ಞಕ್ಕೆ ಗೋಬಲಿ ಕೊಟ್ಟಮೇಲೆ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನು, ಎಂದೆಣಿಸಿ ಮಾಂಸವನ್ನೂ ಭಕ್ಷಿಸಿದರು.ಇದಕ್ಕಿಂತ ಮೂರ್ಖತನ ಬೇರೊಂದಿದೆಯೇ? ಇಂತಾ ಅನರ್ಥ ಎಲ್ಲಿಯವರೆಗೆ ಬೆಳೆದಿದೆ ಎಂದರೆ "ಗೋಘ್ನ" ಎಂಬ ಮಾತಿದೆ. ಇದಕ್ಕೆ ಏನು ಅರ್ಥೈಸಿದ್ದಾರೆಂದರೆ ಮನೆಗೆ ಬಂದ ಅಥಿತಿಗಳಿಗೆ ಊಟದಲ್ಲಿ ಗೋಮಾಂಸ ಬಡಿಸು. ಗೋಘ್ನ ಎನ್ನುವುದಕ್ಕೆ ಇನ್ನೊಂದು ಅರ್ಥ ಗೋವಿನ ಉತ್ಪತ್ತಿ , ಎಂದರೆ ಹಾಲು ಮೊಸರು, ತುಪ್ಪ ಬಡಿಸಿ ಸತ್ಜರಿಸು ಎಂದು ಅರ್ಥೈಸುವ ಬದಲು ಗೋಮಾಂಸ ಬಡಿಸು ಎಂದು ಅರ್ಥೈಸಿದರು!
     ಅತಿಥಿಯನ್ನು ಗೋವಿನಿಂದ ಉಪಚರಿಸಬೇಕೆಂದರೆ ಗೋ ಎಂದರೆ ವಾಕ್ ಎಂತಲೂ ಅರ್ಥವಿರುವುದರಿಂದ ಅಥಿತಿಯನ್ನು ಒಳ್ಳೆಯ ಹಿತವಾದ ಮಾತುಗಳಿಂದ ಉಪಚರಿಸು ಎಂದರ್ಥವಾಗುತ್ತದೆ. ದೊಡ್ದ ದೊಡ್ಡ ವಿಸ್ವಾಂಸರುಗಳೂ ಸಹ ಇದನ್ನು ತಪ್ಪು ತಪ್ಪಾಗಿ ಅರ್ಥೈಸಿದ್ದರ ಪರಿಣಾಮ ಬಹಳ ಅನರ್ಥಗಳು ಸಂಭವಿಸಿವೆ, ವೇದದ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವಾಗಿದೆ. ಅಂದರೆ ಒಂದೊಂದುಶಬ್ಧವನ್ನೂ ಅರ್ಥಮಾಡಿಕೊಳ್ಳುವಾಗ ಮೂಲ ಸಿದ್ಧಾಂತವನ್ನು ಮರೆತಿದ್ದರಿಂದ ಇಂತಹಾ ಅನರ್ಥಗಳಾಗಿವೆ. ಅಂದರೆ ಮೂಲ ಸಿದ್ಧಾಂತವೇನು? ಯಜ್ಞವೆಂದರೆ ಅಹಿಂಸೆ. ಅದನ್ನೇ ಮರೆತು ಅರ್ಥಹುಡುಕಿದ್ದರಿಂದ ಬಹಳ ಅನರ್ಥಗಳು ಘಟಿಸಿರುವುದು ಸುಳ್ಳಲ್ಲ.
-ಹರಿಹರಪುರ ಶ್ರೀಧರ್ 

ಭಾನುವಾರ, ಸೆಪ್ಟೆಂಬರ್ 4, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೯:

     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ. ಋಗ್ವೇದ ಹೇಳುತ್ತದೆ:-
ತ್ವಂ ಹ್ಯಗ್ನೇ ಅಗ್ನಿನಾ ವಿಪ್ರೋ ವಿಪ್ರೇಣ ಸನ್ ತ್ಸತಾ| ಸಖಾ ಸಖ್ಯಾ ಸಮಿಧುಸೇ || (ಋಕ್. ೮.೪೩.೧೪.)
     [ಅಗ್ನೇ] ಜ್ಞಾನಜ್ಯೋತಿರ್ಮಯನೇ! [ವಿಪ್ರಃ] ವಿಶೇಷ ಪ್ರಜ್ಞನೂ [ಸನ್] ಸತ್ಯಸ್ವರೂಪನೂ [ಸಖಾ] ಸರ್ವಮಿತ್ರನೂ ಆದ, [ತ್ವಮ್] ನೀನು, [ಹಿ] ನಿಜವಾಗಿ [ಅಗ್ನಿನಾ] ಜ್ಞಾನಜ್ಯೋತಿರ್ಮಯನೂ [ವಿಪ್ರೇಣ] ವಿಶೇಷ ಪ್ರಜ್ಞನೂ [ಸತಾ] ಸತ್ಯಮಯನೂ [ಸಖ್ಯಾ] ಮೈತ್ರೀಭಾವ ಪ್ರಧಾನನೂ ಆದ ಮಾನವನಿಂದ [ಸಂ ಇಧ್ಯಸೇ] ಚೆನ್ನಾಗಿ ಪ್ರಕಾಶಿಸಲ್ಪಡುತ್ತೀಯೆ.
     ಭಗವದ್ಗುಣಸದೃಶ ಗುಣಧಾರಣವೇ ವೈದಿಕೋಪಾಸನೆಯ ಆದರ್ಶ. ಈ ಉಪಾಸನೆ ಧರ್ಮದ ಹೃದಯವಿದ್ದಂತೆ. ಹೀಗೆ ಪೂರ್ಣಧರ್ಮ ಜೀವನದಲ್ಲಿ ಪ್ರಸ್ಫುಟಿತವಾಗಬೇಕಾದರೆ, ಜ್ಞಾನ-ಕರ್ಮ-ಉಪಾಸನಾ ಮೂರನ್ನೂ ರೂಢಿಸಿಕೊಳ್ಳಬೇಕು. 
-ಪಂ. ಸುಧಾಕರ ಚತುರ್ವೇದಿ.