ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 27, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -2: ಅರಿತು ಆಚರಿಸುವುದೇ ಜ್ಞಾನದ ತಳಹದಿ


ದೇವರ ಫಜೀತಿ
     ಪರಮಾತ್ಮನೇ ಸೃಷ್ಟಿಸಿದ ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಹೋಗಿ ಅವನಿಗೇ ಅರ್ಪಿಸಿ, "ಭಗವಂತಾ, ನಮಗೆ ಒಳ್ಳೆಯದು ಮಾಡಪ್ಪಾ" ಅಂತಾ ಕೈಮುಗೀತೇವೆ. ನಮಗೆ ಒಳ್ಳೆಯದು ಮಾಡಬೇಕು ಅನ್ನುವುದು ಭಗವಂತನಿಗೆ ಗೊತ್ತಿಲ್ಲವೇ? ಅವನಿಗೆ ನೆನಪಿಸಬೇಕೇ? ಇದನ್ನೆಲ್ಲಾ ಯಾರೂ ಯೋಚನೆ ಮಾಡುವುದಿಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಾಡುತ್ತಾ ಹೋಗುತ್ತೇವೆ. ನಿಮ್ಮ ಪಕ್ಕದ ಮನೆಯವರನ್ನು ಕಂಡರೆ ನಿಮಗೆ ಆಗುವುದಿಲ್ಲವೆಂದು ಇಟ್ಟುಕೊಳ್ಳಿ. ನೀವು ಪ್ರಾರ್ಥನೆ ಸಲ್ಲಿಸುತ್ತೀರಿ-'ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಆ ಪಕ್ಕದ ಮನೆಯವನ ಎರಡೂ ಕಣ್ಣು ಹೋಗಲಿ'. ಆ ಪಕ್ಕದ ಮನೆಯವನೂ ಹಾಗೆಯೇ ಕೇಳುತ್ತಾನೆ. ಪಾಪ, ದೇವರು ಯಾರ ಮಾತು ಕೇಳಬೇಕು? ಫಜೀತಿಗೆ ಸಿಕ್ಕಿಕೊಳ್ಳುತ್ತಾನೆ. ನಿಮ್ಮ ಮಾತು ಕೇಳಿದರೆ ಪಕ್ಕದ ಮನೆಯವನಿಗೆ ಸಿಟ್ಟು ಬರುತ್ತದೆ, ಅವನ ಮಾತು ಕೇಳಿದರೆ ನಿಮಗೆ ಸಿಟ್ಟು ಬರುತ್ತದೆ. 'ಭಗವಂತಾ, ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸಿಬಿಡು', 'ಅಪ್ಪಾ, ನನಗೆ ಒಳ್ಳೆಯ ಹೆಣ್ಣು ಸಿಕ್ಕೋ ಹಾಗೆ ಮಾಡು' ಅಂತೆಲ್ಲಾ ಪ್ರಾರ್ಥನೆ ಮಾಡೋದು! ನಮ್ಮ ಸಾಂಸಾರಿಕ ವ್ಯವಹಾರದಲ್ಲಿ ಅವನನ್ನೂ ಸಿಕ್ಕಿಸಲು ಹೋಗುತ್ತೇವೆ.
ಸರ್ವಾಧಾರ ಪರಮಾತ್ಮ
    "ಸ್ಕಂಭೋದಾಧಾರ ಪೃಥಿವೀಮುತದ್ಯಾ . . . ."  ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ.
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. 'ನಮ್ಮ ಸರ್ವ' ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರುಗಳು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ!) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ 'ಸರ್ವ'ನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ 25 ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. 'ಸತ್ಯಮೇವ ಜಯತೇ ನಾನೃತಮ್. . . . .' ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಗಿಣಿಪಾಠ
      ಅದೇನು ಮಂತ್ರವೋ ಗೊತ್ತಿಲ್ಲದೆ 40-50 ವರ್ಷಗಳಿಂದ ಅಗ್ನಿಹೋತ್ರ ಮಾಡುವವರು, ಪೂಜೆ, ಜಪ,ತಪ ಮಾಡುವವರು ನನಗೆ ಗೊತ್ತಿದ್ದಾರೆ. ಒಂದು ಮಂತ್ರದ ಅರ್ಥವೂ ಗೊತ್ತಿಲ್ಲವೆಂದರೆ ಪ್ರಯೋಜನವೇನು? ಇದರಿಂದ ಲಾಭ ಉಂಟೇ? ಶುಕಪಾಠ -ಗಿಳಿಪಾಠ- ಅಂತ ಹೇಳ್ತಾರೆ. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಆ ಮಂತ್ರಗಳಲ್ಲಿ ಏನು ಅರ್ಥ ಇದೆ ಅದನ್ನು ಜೀವನಕ್ಕೆ ತರಬಹುದು. 'ಅರ್ಥ ಗೊತ್ತಿಲ್ಲದೆ ಮಂತ್ರ ಹೇಳ್ತೀರಲ್ಲಾ, ಅದರಿಂದ ಏನು ಲಾಭ?' ಅಂತ ಅವರನ್ನು ಕೇಳಿದರೆ, ಅವರು ಕೊಟ್ಟ ಉತ್ತರ -"ಭಗವಂತನಿಗೇ ಗೊತ್ತು ಸ್ವಾಮಿ, ನಮಗೆ ಅದೆಲ್ಲಾ ಯಾಕೆ ಬೇಕು? ನಮ್ಮ ತಂದೆ ಮಾಡ್ತಾ ಇದ್ದರು,  ನಾವೂ ಮಾಡ್ತಾ ಇದೀವಿ. ಮಂತ್ರದ ಅರ್ಥ ಅವನಿಗೆ ಗೊತ್ತಿಲ್ವಾ? ತಿಳಿದುಕೊಳ್ಳುತ್ತಾನೆ. ನಮಗೆ ಅರ್ಥ  ಗೊತ್ತಿಲ್ಲದೇ ಹೋದರೆ ಏನಂತೆ? ಭಗವಂತನಿಗೆ ಗೊತ್ತಾಗಲ್ವಾ?" ವೇದ ಉಪದೇಶ ಮಾಡಿರುವುದು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ ವೇದ ಇರುವುದು! ಅದನ್ನೇ ತಿಳಿಯದೇ ಗಿಳಿಪಾಠ ಮಾಡಿದರೆ ಏನು ಲಾಭ? ಸ್ವಲ್ಪ ಲಾಭ ಇದೆ, ಮಂತ್ರ ಪಾಠ ಮಾಡುವ -ಅರ್ಧ ಗಂಟೆಯೋ ಒಂದು ಗಂಟೆಯೋ- ಆ ಸಮಯದಲ್ಲಿ ಯಾರನ್ನೋ ಬಯ್ಯುವುದಕ್ಕೋ, ಕೆಟ್ಟ ಮಾತಾಡುವುದಕ್ಕೋ, ಇನ್ನು ಯಾವುದೋ ಕೆಟ್ಟ ರೀತಿಯಲ್ಲಿ ಬಳಕೆಯಾಗಬಹುದಾದುದು ತಪ್ಪಿದ ಲಾಭ!
ಯಾಂತ್ರಿಕ ಪೂಜೆಯ ಫಲ
     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು. ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.
ಸಂಸ್ಕಾರ
     ನಾನು ಒಂದು ಉಪನಯನ ಸಮಾರಂಭಕ್ಕೆ ಹೋಗಿದ್ದೆ. ನೆಂಟರು, ಇಷ್ಟರನ್ನೆಲ್ಲಾ ಕರೆದಿದ್ದರು. ದೊಡ್ಡ ಗುಂಪೇ ಸೇರಿತ್ತು. ಪುರೋಹಿತರು ಅವರ ಪಾಡಿಗೆ ಅವರು ಮಂತ್ರ ಹೇಳ್ತಾ ಇದ್ದರು. ಬಂದವರೆಲ್ಲಾ ಸಬ್ ಕಮಿಟಿಗಳನ್ನು ಮಾಡಿಕೊಂಡು ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಉಪನಯನ ಮಾಡಿದವರಿಗಾಗಲೀ, ಮಾಡಿಸಿಕೊಂಡವರಿಗಾಗಲೀ, ಮಂತ್ರ ಹೇಳುತ್ತಿದ್ದವರಿಗಾಗಲೀ ಅದರ ಅರ್ಥ ಗೊತ್ತಿತ್ತೋ ಇಲ್ಲವೋ! ಇಂತಹ ಆಚರಣೆಗಳನ್ನಾದರೂ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ! ಅರ್ಥ ತಿಳಿದು, ಎಲ್ಲರೂ ಮನಃಪೂರ್ವಕ ಭಾಗವಹಿಸಿದರೆ ಅದರಲ್ಲಿ ಸಾರ್ಥಕ್ಯವಿದೆ.
Thinking by proxy
     ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ತಿಳಿದವರು, ವಿದ್ವಾಂಸರು ಎನ್ನಿಸಿಕೊಂಡವರೇ ವಿವೇಚನೆ ಮಾಡದೆ 'ಹಿಂದಿನವರು ಮಾಡುತ್ತಿದ್ದರು, ನಾವೂ ಮಾಡೋಣ', ಎಂಬಂತೆ ವರ್ತಿಸಿದರೆ, ಇನ್ನು ಮೂಢರು ಇನ್ನೇನು ಮಾಡ್ತಾರೆ? ಅವರನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೇಳಿದರೆ 'ನಮ್ಮ ಗುರುಗಳು ಯೋಚನೆ ಮಾಡಿದ್ದಾರೆ, ಅವರಿಗೆ ಎಲ್ಲಾ ತಿಳಿದಿದೆ, ಅವರು ಹೇಳಿದ ಮೇಲೆ ಆಯಿತು' ಅನ್ನುತ್ತಾರೆ. 'thinking by proxy'-ಇದು ಸರಿಯೇ? ನಮಗೆ ನಾವು ಯೋಚನೆ ಮಾಡಬೇಕೇ ಹೊರತು ನಮ್ಮ ಪರವಾಗಿ ಬೇರೆಯವರು ಯೋಚನೆ ಮಾಡಬೇಕೆ?
ಅರಿತು ಆಚರಿಸುವುದೇ ಜ್ಞಾನದ ತಳಹದಿ
     ಯಾಸ್ಕರು ಕೇವಲ ವ್ಯಾಕರಣ ಅಲ್ಲ, ಇತಿಹಾಸವನ್ನೂ ತಿಳಿದುಕೊಂಡು ಆಲೋಚನೆ ಮಾಡಿ ಒಂದು ಮಾತು ಹೇಳುತ್ತಾರೆ- "ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅದರಿಂದ ಏನೂ ಪ್ರಯೋಜನವಿಲ್ಲ." ಪ್ರತ್ಯಕ್ಷ ಅರ್ಥ ಆಗಬೇಕು. ತಪಸ್ವಿ ಆಗಬೇಕು, ಬ್ರಹ್ಮಚಾರಿ ಆಗಬೇಕು, ಆಮೇಲೆ ಇಂದ್ರಿಯ ನಿಗ್ರಹ ಮಾಡಬೇಕು, ಆನಂತರವೇ ನಮಗೆ ಅರ್ಥವಾಗುವುದು. ಮಾಡಬಾರದ್ದನ್ನು ಮಾಡಿಕೊಂಡು, ತಿನ್ನಬಾರದ್ದನ್ನು ತಿಂದುಕೊಂಡು, ಆಡಬಾರದ್ದನ್ನು ಆಡಿಕೊಂಡು 'ಓಹೋ, ನಾನು ಅಗ್ನಿಹೋತ್ರ ಮಾಡಿಬಿಟ್ಟೆ' ಅಂದರೆ ಏನೂ ಪ್ರಯೋಜನ ಇಲ್ಲ. ಹಾಗೆಯೇ ವಾಯುಶುದ್ಧಿ ಆಗಬೇಕು ಅಂದುಕೊಂಡು ಈ ಮಂತ್ರ ಎಲ್ಲಾ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲಾ! ಆಗಲೂ ವಾಯುಶುದ್ಧಿ ಆಗುತ್ತಲ್ಲಾ! ಹಾಗಲ್ಲ, ಈ ಮಂತ್ರದಲ್ಲಿ ಆಧ್ಯಾತ್ಮ ತುಂಬಿಕೊಂಡಿದೆ. ಅನೇಕ ಸಾರಿ ನಾನು ಹೇಳಿದ್ದೇನೆ 'ಅಯಂತ ಇದ್ಮ ಆತ್ಮ ಜಾತ ವೇದ' ಅಂತ ಮೊದಲು ಒಂದು ಸಲ ಹೇಳ್ತೀವಿ, ಆಮೇಲೆ 5 ಸಲ ಹೇಳ್ತೀವಿ, ಯಾತಕ್ಕೆ? ಮೊದಲು ಒಂದು ಸಲ ಹೇಳುವಾಗ "ಭಗವಂತ ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ" ಎಂದು ಇದರ ಅರ್ಥ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ನೀವು ಸುಳ್ಳು ಅಂತ ತಿಳಿದುಕೊಳ್ಳಬೇಡಿ, ಈಗಲಾದರೋ ನೀವು ವಿಮಾನ ನೋಡುತ್ತೀರಿ, ಸ್ಪೇಸ್ ಶಿಪ್ಪುಗಳನ್ನು ನೋಡ್ತೀರಿ. ಅವು ಯಾವುವೂ ಗೊತ್ತಿಲ್ಲದೇ ಇರುವಾಗ ಜ್ಯೋತಿಗಳು 100 ವರ್ಷ ಆದಮೇಲೆ ಯಾವ ದೇಶದಲ್ಲಿ ಯಾವಾಗ ಸೂರ್ಯಗ್ರಹಣ ಆಗುತ್ತೆ, ಚಂದ್ರ ಗ್ರಹಣ ಆಗುತ್ತೆ, ಎಷ್ಟು ಕಾಲ ಇರುತ್ತೆ, ಇದನ್ನೆಲ್ಲಾ ಹೇಳಿಬಿಡುತ್ತಿದ್ದರಲ್ಲಾ, ಹೇಗೆ? ಅವರೇನು ಪ್ರಾಪಂಚಿಕ ವಿಷಯದಲ್ಲಿ ಯಾವುದೇ ಬಿ.ಎ., ಎಂ.ಎ. ಪಾಸು ಮಾಡಿದವರಲ್ಲ. ನಮ್ಮ ಋಷಿಗಳೂ ಅಷ್ಟೆ, ವಸಿಷ್ಠ ಋಷಿ, ವಸಿಷ್ಠ, ಬಿ.ಎ., ಎಂ.ಎ. ಅಂತ ಹೆಸರಿನ ಮುಂದೆ ಹಾಕಿಕೊಂಡಿದ್ದರಾ? ಏನೂ ಇಲ್ಲ, ಡಿಗ್ರಿಗಳು ಬೇಕೇ ಇಲ್ಲ. ನನ್ನ ಗುರು ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದರು: "ನಿಮಗೆ ನಾವು ಡಿಗ್ರಿ ಕೊಡುತ್ತೇವೆ, ವಿದ್ಯಾಲಂಕಾರ, ವೇದಾಲಂಕಾರ, ವಿದ್ಯಾವಾಚಸ್ಪತಿ, ಡಿಗ್ರಿ ಕೊಡುತ್ತೇವೆ. ಅದರಿಂದ ನೀವು ಉದ್ಧಾರವಾಗುವುದಿಲ್ಲ. ಅದು ತಳಹದಿ. ಅದರ ಮೇಲೆ ನೀವು ಕಟ್ಟಡ ಕಟ್ಟಬೇಕು. ಹೊಟ್ಟೆಪಾಡಿಗಲ್ಲ, ಹೊಟ್ಟೇಪಾಡೂ ಬೇಕು, ಸಿಕ್ಕುತ್ತೆ." ಸಂಸಾರಿಗಳು ಹೇಳೋರು, "ಸ್ವಾಮೀಜಿ, ನಿಮಗೇನೋ ಪರವಾಗಿಲ್ಲ, ಸಂಸಾರವಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ, ಹ್ಯಾಗೋ ನಡೆದುಹೋಗುತ್ತೆ, ನಾವು ಗೃಹಸ್ಥರು, ಪೂಜೆ ಮಾಡೋದು ಬಿಟ್ಟುಬಿಟ್ರೆ, ನಮಗೆ ನೈವೇದ್ಯ ಕೊಡೋರು ಯಾರು? ದಕ್ಷಿಣೆ ಕೊಡೋರು ಯಾರು?ದಾನ ಕೊಡೋರು ಯಾರು? ನಮ್ಮ ಹೊಟ್ಟೆಪಾಡು?". ದಯಾನಂದರು ಹೇಳೋರು: "ನಿಮ್ಮ ಪ್ರಾರಬ್ಧ ನಿಮ್ಮ ಜೊತೆಯಲ್ಲಿದೆ, ನಿಮಗೆ ಇದೊಂದೇ ಜನ್ಮ ಅಲ್ಲ, ಹಿಂದೆ ಯಾವ ಯಾವುದೋ ಜನ್ಮ ಎತ್ತಿದ್ದೀರಾ. ಅವುಗಳ ಫಲ ನಿಮ್ಮ ಜೊತೆಯಲ್ಲೇ ಇರುತ್ತೆ. ನಿಮಗೆ ಅನ್ನ ಸಿಕ್ಕೇ ಸಿಕ್ಕುತ್ತೆ. ಜನರಿಗೆ ಟೋಪಿ ಹಾಕಿ, ಸುಳ್ಳು ಹೇಳಿ ನೀವು ನಿಮ್ಮ ಅನ್ನ ದುಡಿಯಬೇಕಿಲ್ಲ."
-ಕ.ವೆಂ.ನಾಗರಾಜ್.
***************
ದಿನಾಂಕ 22.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಮೇ 21, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ-1: 'ಮಾನವರಾಗಿ' ವಿಚಾರ ಮಾಡೋಣ!

ಓಂ ದೇವಾನಾಂ ಭದ್ರಾ ಸುಮತಿರ್ಋಜೂಯತಾಂ ದೇವಾನಾಗ್ಂ ರಾತಿರಭಿ ನೋ ನಿವರ್ತತಾಮ್ |
ದೇವಾನಾಗ್ಂ ಸಖ್ಯಮುಪಸೇದಿಮಾ ವಯಂ ದೇವಾ ನ ಆಯುಃ ಪ್ರತಿರಂತು ಜೀವಸೇ || (ಯಜು.೨೫.೧೫.)
     ಅರ್ಥ: ನೇರವಾದ ಸನ್ಮಾರ್ಗದಲ್ಲೇ ನಡೆಯುವ ವಿದ್ವಜ್ಜನರ ಕಲ್ಯಾಣಕಾರಿಣೀ ಸದ್ಬುದ್ಧಿಯು ಮತ್ತು ದಾನಶೀಲರಾದ ಉದಾರಾತ್ಮರ ದಾನಭಾವನೆಯು ನಮಗೆ ಎಲ್ಲೆಡೆಯಿಂದಲೂ ಲಭಿಸಲಿ. ನಾವು ವಿದ್ವಾಂಸರ ಸಖ್ಯವನ್ನು ಹತ್ತಿರದಿಂದ ಪಡೆದುಕೊಳ್ಳೋಣ. ಆ ಜ್ಞಾನೀ ಜನರು ಜೀವನ ಸೌಂದರ್ಯಕ್ಕಾಗಿ ನಮ್ಮ ಆಯಸ್ಸನ್ನು ಉತ್ಕೃಷ್ಟವಾಗಿ ಮಾಡಲಿ, ವರ್ಧಿಸಲಿ.
     ೧೧೯ ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಯವರ ಮಾತುಗಳು ನೇರ, ಪ್ರಖರ. ವೇದದ ಬೆಳಕಿನಲ್ಲಿ ಅವರು ಮಂಡಿಸುವ ವಿಚಾರಗಳು ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ೧೩ನೆಯ ವಯಸ್ಸಿನಲ್ಲೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲದಲ್ಲಿ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರಿಂದ ಪ್ರಭಾವಿತರಾಗಿ, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಜ್ಞಾನಾರ್ಜನೆ ಮಾಡಿದವರು. ನಾಲ್ಕೂ ವೇದಗಳನ್ನು ಅಭ್ಯಸಿಸಿ ನಿಜ ಅರ್ಥದಲ್ಲಿ ಚತುರ್ವೇದಿಯಾಗಿ 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಪಡೆದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡು, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿ ಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು.
     ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ, ಸುಮಾರು ೧೫ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದವರು. ವೈಚಾರಿಕ ಭೇದಗಳಿದ್ದರೂ ಗಾಂಧೀಜಿ ಮತ್ತು ಪಂಡಿತರ ನಡುವಣ ಸ್ನೇಹಕ್ಕೆ ಎಂದೂ ಕುಂದು ಬಂದಿರಲಿಲ್ಲ. ಗಾಂಧೀಜಿಯ ಹತ್ಯೆಯಾಗುವವರೆಗೂ ಆ ಸ್ನೇಹ ಹಾಗೆಯೇ ಮುಂದುವರೆಯಿತು.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. ಇವರು ನಡೆಸುವ ಸತ್ಸಂಗಗಳು ಸತ್ಯಾನ್ವೇಷಿಗಳಿಗೆ ಸಹಕಾರಿಯಾಗಿದೆ. ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ವಿಚಾರಗಳನ್ನು ಸಂಗ್ರಹಿಸಿ ಇಲ್ಲಿ ಪ್ರಸ್ತುತಪಡಿಸಿದೆ. -ಲೇಖಕ.
***
ಪಂಡಿತರೊಡನೆ ಲೇಖಕ 

     ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಒಂದು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಸ್ವಾಭಾವಿಕ ಪ್ರವೃತ್ತಿ. ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪ ಇದೆಯೇನು? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪ ಇಲ್ಲ. ಸ್ವಾಭಾವಿಕ ಪ್ರವೃತ್ತಿ, ಯೋಚನೆ ಮಾಡುವ ಶಕ್ತಿ ಇಲ್ಲ, ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ.  ತೆಂಗಿನ ಮರ ಇದೆ, ಈಚಲ ಮರ ಇದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು ಸೃಷ್ಟಿಸಿರುವುದು ಅವನ್ನು ತಿಂದು ತೇಗಲಿ ಎಂದಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕು, ಹೇಗೆ ಉಪಯೋಗಿಸಬೇಕು ಎಂದು ವಿವೇಚಿಸಿ ಉಪಯೋಗಿಸಬೇಕು. ಆದರೆ ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ.
     ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಈ ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಪಕ್ಕದ ಮನೆಯವನ ಮೇಲೆ ಕೋಪ ಇದೆ ಅಂತ ಅವನ ಮನೆಯನ್ನು ಸುಡಲು ಬಳಸಿದರೆ ಆ ಬೆಂಕಿ ಏನು ಮಾಡುತ್ತೆ? ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ಅದು ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ ಬಡವ ಇರುತ್ತಾನೆ, ಅವನಿಗೆ ಅಗ್ನಿಹೋತ್ರಕ್ಕೆ ಪಾತ್ರೆ ಉಪಯೋಗಿಸುವ ಶಕ್ತಿ ಇಲ್ಲ ಎಂದಿಟ್ಟುಕೊಳ್ಳಿ. ಅವನು ಮಣ್ಣಿನ ಮಡಿಕೆಯನ್ನೇ ಉಪಯೋಗಿಸಬಹುದು, ಏನೂ ಪರವಾಗಿಲ್ಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದ ಇಲ್ಲ. ಬೆಂಕಿಯಿಂದ ಅಡಿಗೆ ಮಾಡುವುದು, ಹವನ ಮಾಡುವುದು, ಇಷ್ಟೇ ಮಾಡ್ತೀವೇನು? ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಆ ಬೆಂಕಿ ಪಾಪ, ಅದೇನು ಮಾಡುತ್ತೆ? ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಬಗ್ಗೆ ಮಾತಾಡುವ ಬದಲು ಅದಕ್ಕೆ ಏನು ಬೇಕೋ ಅದನ್ನು ಮಾಡಬೇಕು. 'ವಾಯುವೇ ಸ್ವಾಹಾ' ಅನ್ನುವುದು, ಬೀಡಿ. ಚುಟ್ಟಾ ಹಚ್ಚುವುದು! ಏನು ಪ್ರಯೋಜನ? ಈ ತರಹ ಆಲೋಚನೆ ಮಾಡಬೇಕು.
     ಮಾನವನ ಮನಸ್ಸು 'ಏಕೆ? ಹೇಗೆ?' ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. 'ಹುಟ್ಟಿದ, ಇದ್ದ ಸತ್ತ' - ಇದು ಮಾನವನ ಜೀವನವನ್ನು ಚಿತ್ರಿಸಲು ಸಾಕು. 'ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ, ಏನೋ ಅಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ, ಶರೀರತ್ಯಾಗ ಮಾಡಿ ಅಮರನಾಗಿ ಹೋದ' -  ಎಂದು ಮಾನವ ಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಿಕ ಜ್ಞಾನ, ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು. 'ಹೇಗೆ? ಏಕೆ?'ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.
ನರಜನ್ಮ ದೊಡ್ಡದು
     ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಅನ್ನುವ ವಿಷಯದಲ್ಲಿ ವೇದದ ಒಂದು ಮಂತ್ರದಲ್ಲಿ ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ || (ಯಜು. ೩೦.೩.) ಭಗವಂತ, ಜಗತ್ ಶ್ರೇಯಕ, ಜಗತ್ ಉತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಇದರ ಅರ್ಥ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮದ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?' ಅದಕ್ಕೆ ಎರಡು ಕಾರಣ ಕೊಡಬಹುದು: ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಎರಡನೆಯದು, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬಂದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು.
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ವೇಗಶಾಲಿಯೂ, ಧೃಢವೂ ಆದ ಪರಮಾತ್ಮ ತತ್ವವು, ಎಲ್ಲರಿಗೂ ಜೀವದಾನ ಮಾಡುತ್ತಿದೆ. ಅಂತಃಸ್ಥಿತವಾಗಿದೆ. ಜೀವಾತ್ಮನನ್ನು ಲೋಕಲೋಕಾಂತರಗಳ ನಡುವೆ ಪ್ರವೇಶಗೊಳಿಸುತ್ತದೆ. ಮೃತನಾದವನ ಜೀವಾತ್ಮವು ಸ್ವತಃ ಅಮರವಾಗಿದ್ದು ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ ಸಂಚರಿಸುತ್ತದೆ ಎಂದು ಇದು ಸಾರುತ್ತದೆ. ಇದು ವೇದೋಕ್ತವಾದ ಸತ್ಯ. ಇದು ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು.
-ಕ.ವೆಂ.ನಾಗರಾಜ್.
***************
ದಿನಾಂಕ 15-04-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 17, 2015

ಶ್ರಾದ್ಧ - ಏಕೆ ಮತ್ತು ಹೇಗೆ?

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ, ವೈದಿಕ, ಪುಣ್ಯಸ್ಮರಣೆ, ಶಾಂತಿ, ಉತ್ತರ ಕ್ರಿಯೆ, ಇತ್ಯಾದಿಗಳಿಗೆ ಬಳಸಲಾಗುತ್ತಿದೆ. ಆದರೆ ಶ್ರಾದ್ಧ ಎಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎಂದಷ್ಟೇ ಅರ್ಥ. ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸವೂ ಶ್ರಾದ್ಧವೇ! ಒಬ್ಬ ಶಿಕ್ಷಕ, ನೌಕರ, ಅಧಿಕಾರಿ, ಕಾರ್ಮಿಕ, ವಿದ್ಯಾರ್ಥಿ, ವ್ಯಾಪಾರಿ, ರಾಜಕಾರಣಿ, ಹೀಗೆ ಯಾರೇ ಆಗಿರಲಿ, ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ನಿಜವಾದ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ವೈದಿಕ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಮಾನವನ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ತಮ್ಮ ಸಂಪ್ರದಾಯಗಳಿಗೆ ಅನುಸಾರವಾಗಿ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎಂದು ಹೇಳುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತಾ ಹೋಗುತ್ತದೆ, ಅಲ್ಲದೆ ಪರಿಸರ ಮಾಲಿನ್ಯವೂ ಆಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯವಾಗುತ್ತದೆ, ಹದ್ದು-ಪಕ್ಷಿಗಳಿಗೆ ಆಹಾರವಾಗಿಸಲು ಮುಕ್ತವಾಗಿರಿಸಿದರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ. 
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||
     ಶ್ರಾದ್ಧ ಮಾಡುವುದು ಏತಕ್ಕಾಗಿ ಮತ್ತು ಯಾರಿಗಾಗಿ? ಯೋಚಿಸೋಣ. ದೇಹದಲ್ಲಿ ಪ್ರಾಣವಿರುವವರೆಗೂ ಅದು ವ್ಯಕ್ತಿಯಾಗಿ ಗುರುತಿಸಲ್ಪಡುತ್ತದೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣವೆನಿಸುತ್ತದೆ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಒಂದು ಜಡವಸ್ತು. ಹೀಗಾಗಿ ಅದನ್ನು ಶೀಘ್ರವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದ ಚಕ್ರವರ್ತಿಯ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳಬಯಸುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಇನ್ನು ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳು ಎಂದೆನ್ನಬಹುದೆ? ವೇದಗಳು ಆತ್ಮ ಅವಿನಾಶಿ, ಅನಾದಿ, ಅನಂತವಾದುದು ಎನ್ನುತ್ತವೆ. ತನ್ನ ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯ್ಟೇಷ್ಟಿ ಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಶಾಶ್ವತವಲ್ಲದ ಜೀವನದ ಅನುಭವವನ್ನು ಈ ಕ್ರಿಯೆ ಉಂಟುಮಾಡುತ್ತದೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದ ಸಂದರ್ಭದ ಕ್ರಿಯೆಗಳಿಂದ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ನಾವು ಚಿರಂಜೀವಿಗಳಂತೆ ವರ್ತಿಸುತ್ತೇವಲ್ಲಾ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡಿಸುತ್ತದೆ. ಮುಂದಾದರೂ ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ವಿಪರ್ಯಾಸವೆಂದರೆ ಈ ಭಾವನೆ ಹೆಚ್ಚು ಕಾಲ ಇರುವುದಿಲ್ಲ. ನಂತರ ನಾಯಿಯ ಬಾಲದ ಡೊಂಕಿನಂತೆ ಹಿಂದಿನ ಮಾಮೂಲು ಜೀವನದಲ್ಲಿ ತೊಡಗಿಕೊಳ್ಳುತ್ತೇವೆ. 
     ಮೃತರ ಆತ್ಮ ಸದ್ಗತಿ ಅರ್ಥಾತ್ ಮೋಕ್ಷ ಪಡೆಯಲೆಂಬ ಉದ್ದೇಶದಿಂದ ಶ್ರಾದ್ಧ ಮಾಡುವುದೇನೋ ಸರಿ. ಆದರೆ ಹಿಂದೆಯೇ ಹೇಳಿದಂತೆ ಆತ್ಮ ಮೋಕ್ಷ ಪಡೆಯಲು ಸ್ವಪ್ರಯತ್ನದಿಂದ ಮಾತ್ರ ಸಾಧ್ಯ, ಇತರರು ಸದ್ಗತಿ ನೀಡಲಾರರು. ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ಜಗಳದ ಸಂದರ್ಭದಲ್ಲಿ ಬಳಸುವ 'ನಿನ್ನ ತಿಥಿ ಮಾಡಿಬಿಡ್ತೀನಿ' ಎಂಬ ಮಾತಿಗೂ ಈ ರೀತಿಯ ಕೃತಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಸತ್ತ ಮೇಲೆ ಭೂತ-ಪ್ರೇತವಾಗಿ ಕಾಡಿಯಾರು ಎಂಬ ಭಯದಿಂದ ಈ ಕ್ರಿಯೆಗಳನ್ನು ಮಾಡುವವರೂ ಇರುತ್ತಾರೆ. ಇಂತಹ ಆಚಾರಗಳಲ್ಲಿ ನಂಬಿಕೆಯಿಲ್ಲದವರೂ ಸಹ ಇತರರು ಏನಾದರೂ ಅಂದುಕೊಂಡಾರು ಎಂಬ ಲೋಕಾಪವಾದದ ಭಯದಿಂದ ಮಾಡುವವರೂ ಇರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನು ಎಂದು ಮಾಡುವವರೂ ಸಿಗುತ್ತಾರೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಧರಿಸುವ ಯಜ್ಞೋಪವೀತದ ಮೂರು ಎಳೆಗಳು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಅವುಗಳನ್ನು ತೀರಿಸುವ ಸಂಕಲ್ಪದ ಸಂಕೇತ. ಇವು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತವೆಂದರೆ ಅದಕ್ಕೆ ಅರ್ಥವಿಲ್ಲ.  ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ರೀತಿಯಾಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ಸತ್ಸಂಗಗಳು, ವೇದಾಧ್ಯಾಯಿ ಸುಧಾಕರ ಶರ್ಮರು, ಪಂ. ಸುಧಾಕರ ಚತುರ್ವೇದಿಯವರು ಮುಂತಾದವರ ಮಾರ್ಗದರ್ಶನ, ಓದಿದ ಪುಸ್ತಕಗಳು, ಇತ್ಯಾದಿ ಪ್ರಭಾವಗಳಿಂದ ಹಾಗೂ ಮನನ, ಮಂಥನಗಳಿಂದ ಒಡಮೂಡಿದ ಮನದ ಭಾವನೆಗಳನ್ನು ಹಂಚಿಕೊಂಡಿರುವೆ. ಶ್ರಾದ್ಧವನ್ನು ಹೇಗೆ ಮಾಡಬೇಕೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.
     ಕೆಲವು ಪ್ರಸ್ತುತವೆನಿಸಿದ ಘಟನೆಗಳನ್ನು ನೋಡೋಣ. ಸಂನ್ಯಾಸಿಯ ರೀತಿಯಲ್ಲಿ ಬಾಳಿ ಅನೇಕರಿಗೆ ಜೀವನ ದರ್ಶನ ಮಾಡಿಸಿದ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾವುದೇ ಶ್ರಾದ್ಧಾದಿ ಕರ್ಮಗಳಲ್ಲಿ ನಂಬಿಕೆಯಿರಿಸಿರಲಿಲ್ಲ. 'ಸತ್ತಾಗ ಬೆಂಕಿಗೆ ಬಿಸಾಕಿ' ಎನ್ನುತ್ತಿದ್ದವರು. ಅವರ ಅಭಿಲಾಷೆಯಂತೆಯೇ ನಡೆಯಿತು. ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೂ ಸಹ ತಾವು ಸತ್ತ ನಂತರದಲ್ಲಿ ಯಾವುದೇ ಸಾಂಪ್ರದಾಯಿಕ ಕ್ರಿಯೆಗಳನ್ನು ಮಾಡದೇ, ತಮ್ಮ ಶರೀರವನ್ನು ಅಗ್ನಿಗೆ ಅರ್ಪಿಸಬೇಕೆಂದು ಬಯಸಿದ್ದರು. ಹಾಗೆಯೇ ಆಯಿತು. ಕೆಲವು ವರ್ಷಗಳ ಹಿಂದೆ ಮೃತ ತಂದೆಯವರ ದೇಹವನ್ನು ಮೃತರ ಇಚ್ಛೆಯಂತೆಯೇ ಅವರ ಮಗ ಡಾ. ಮಹಾಂತೇಶ ರಾಮಣ್ಣವರ್ ಅವರೇ ಬೆಳಗಾವಿಯ ಕಂಕನವಾಡಿ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೃತರ ಎರಡನೆಯ ವರ್ಷದ ಪುಣ್ಯತಿಥಿಯ ದಿನದಂದು ಅಂಗವಿಚ್ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಹಾಸನದ ಜನಹಿತ ಪತ್ರಿಕೆಯ ಸಂಪಾದಕ ಮತ್ತು ಬಂಧು ಹೆಚ್.ಎಸ್. ಪ್ರಭಾಕರರವರು ತಮ್ಮ ಕಿರಿಯ ಸಹೋದರ ರಮೇಶಬಾಬು ನಿಧನರಾದ ಸಂದರ್ಭದಲ್ಲಿ ಅವರ ಇಚ್ಛೆಯಂತೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೂ ವೈಕುಂಠ ಸಮಾರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದರು. ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದಿದ್ದವರು ರಮೇಶಬಾಬು. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದರೊಂದಿಗೆ ಅನುಸರಿಸಬೇಕಾದ ಚಿಕಿತ್ಸಾಕ್ರಮದ ಬಗ್ಗೆ ಡಾ. ಹಾಲಪ್ರಶಾಂತರಿಂದ, ದೇಹದಾನದ ಮಹತ್ವದ ಕುರಿತು ಹಿಮ್ಸ್ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರಿಂದ ಮತ್ತು ವೇದದ ಹಿನ್ನೆಲೆಯಲ್ಲಿ ದೇಹ, ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂದು ವಿವರಿಸಲು ಬೇಲೂರಿನ ವೇದಾಧ್ಯಾಯಿ ವಿಶ್ವನಾಥ ಶರ್ಮರಿಂದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಿ ಪ್ರಭಾಕರ್ ವಿಶಿಷ್ಟತೆ ಮೆರೆದರು. ವೈಯಕ್ತಿಕವಾಗಿ ನಾನಂತೂ ಸತ್ತ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳಿಗೆ ಸಮಯ, ಹಣ, ಶ್ರಮ ವಿನಿಯೋಗಿಸದೆ ಜನೋಪಯೋಗಿ ಕಾರ್ಯಗಳಿಗೆ ಮನ ಹರಿಸುವಂತೆ ನನ್ನ ಬಂಧುಗಳಿಗೆ ತಿಳಿಸಿರುವೆ. ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.
**************
[ಚಿತ್ರಕೃಪೆ: http://technoayurveda.wordpress.com/2010/11/11/dissect/]
ದಿನಾಂಕ 08.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:




ಮಂಗಳವಾರ, ಮೇ 12, 2015

ಲೋಭಕ್ಕೆ ಮದ್ದುಂಟೆ?

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತಕೋಕಯಾತುಮ್ | 
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)
     ರಕ್ಷಸ್ ಎಂದರೆ ದುರ್ಭಾವನೆ. ಯಾರು ದುರ್ಭಾವನೆಗಳನ್ನು ಹೊಂದಿರುತ್ತಾರೋ ಅವರೇ ರಾಕ್ಷಸರು. ರಾಕ್ಷಸರು ಎಂದರೆ ಅವರು ಬೇರೆ ಯಾವುದೋ ಜೀವಿಗಳಲ್ಲ, ಮಾನವರೂಪಿಗಳಾಗೇ ಇದ್ದು ದುರ್ಭಾವನೆಗಳನ್ನು ಹೊಂದಿದವರು. ಈ ವೇದಮಂತ್ರದಲ್ಲಿ ಮಾನವನಲ್ಲಿ ಕಂಡು ಬರುವ ದುರ್ಭಾವನೆಗಳಾದ ಮೋಹವನ್ನು ಗೂಬೆಯ ನಡೆಗೂ, ಕ್ರೋಧವನ್ನು ತೋಳದ ಸ್ವಭಾವಕ್ಕೂ, ಮತ್ಸರವನ್ನು ನಾಯಿಯ ಗುಣಕ್ಕೂ, ಕೋಕ ಪಕ್ಷಿಯನ್ನು (ಚಕ್ರವಾಕ/ಜಕ್ಕವಕ್ಕಿ) ಕಾಮದ ಸಂಕೇತವಾಗಿಯೂ, ತಾನೇ ಮೇಲೆಂಬ ಗರ್ವ(ಮದ)ಕ್ಕೆ ಗರುಡ ಪಕ್ಷಿಯನ್ನೂ, ಹದ್ದನ್ನು ಲೋಭಕ್ಕೆ ಸಂಕೇತಿಸಿದ್ದು, ಈ ಗುಣಗಳನ್ನು ತೀಡಿ ಹಾಕು, ನಿರ್ಮೂಲ ಮಾಡು ಎಂದು ಜೀವಾತ್ಮರಿಗೆ ಕರೆ ಕೊಡಲಾಗಿದೆ. ಮಾನವನ ಶತ್ರುಗಳಾದ ಈ ಆರು ಗುಣಗಳು ಅವನನ್ನು ರಾಕ್ಷಸನನ್ನಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕಾಮ, ಕ್ರೋಧ, ಮದ, ಮತ್ಸರ, ಮೋಹಗಳ ಕುರಿತು ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದು, ಲೋಭದ ಕುರಿತು ಇಲ್ಲಿ ವಿಚಾರವನ್ನು ಹಂಚಿಕೊಳ್ಳೋಣ.
     ಲೋಭ ಎಂಬ ಪದಕ್ಕೆ ಸಂಪತ್ತು, ಲಾಭ, ಆಹಾರ, ಪಾನೀಯ, ಹೆಸರು/ಕೀರ್ತಿ, ಇತ್ಯಾದಿಗಳ ಬಗ್ಗೆ ದುರಾಸೆ, ಅತಿಯಾದ ಆಸೆ ಹೊಂದಿರುವುದು, ಕೃಪಣತೆ, ಜಿಪುಣತನ, ಇತ್ಯಾದಿ ಅರ್ಥಗಳು ಹೊರಹೊಮ್ಮುತ್ತವೆ. ಮೇಲಿನ ಮಂತ್ರ 'ಉತ ಗೃಧ್ರಯಾತುಂ ಜಹಿ' ಅಂದರೆ, 'ಮತ್ತು ಹದ್ದಿನ ನಡೆಯನ್ನು ಹೊಡೆದು ಹಾಕು' ಎನ್ನುತ್ತದೆ. ಹದ್ದಿನ ನೋಟ ವಕ್ರವಾಗಿರುತ್ತದೆ. ಅದರ ಧ್ವನಿಯೂ ವಕ್ರವಾಗಿದ್ದು ಎಲ್ಲವೂ ತನಗೇ ಇರಲಿ ಎಂಬ ಆಸೆ ಅದರ ಗುಣಸ್ವಭಾವವಾಗಿದೆ. ಲೋಭಿಯಾದವನ ಗುಣವೂ ಅಷ್ಟೆ, ವಕ್ರವಾಗಿರುತ್ತದೆ. ಎಲ್ಲವೂ ತನಗೇ ಬೇಕೆಂಬ ಹಪಾಹಪಿತನದ ವ್ಯಕ್ತಿ ತಾನೂ ಹಾಳಾಗುತ್ತಾನೆ, ಸಮಾಜಕ್ಕೂ ಹಾನಿ ತರುತ್ತಾನೆ. ಪರಮ ಸ್ವಾರ್ಥವನ್ನು ಇಲ್ಲಿ ಕಾಣಬಹುದಾಗಿದೆ. 
ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ |
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ || 
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿಗಳಲ್ಲಿ ಸಂಪತ್ತು ಕ್ರೋಢೀಕೃತವಾದರೆ, ಉಳಿದವರು ಸಹಜವಾಗಿ ಸಿಡಿಯುತ್ತಾರೆ ಮತ್ತು ಅವರಲ್ಲಿನ ದುರ್ಭಾವನೆಗಳೂ ಜಾಗೃತವಾಗುತ್ತವೆ. ಹೀಗಾಗಿ ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್ ವ್ಯವಹಾರ, ಅಕ್ರಮ ಶೇಖರಣೆ, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ ಎಂಬುದು ನಿಧಾನವಾಗಿ ಆಲೋಚಿಸಿದರೆ ಅರ್ಥವಾಗುತ್ತದೆ. 
ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ |
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||
     ಲೋಭಕ್ಕೆ ಮಿತಿಯೆಂಬುದೇ ಇಲ್ಲ. ಎಷ್ಟಿದ್ದರೂ ಬೇಕು, ಏನಿದ್ದರೂ ಬೇಕು. ಮಹಾಭಾರತದ ಆದಿ ಪರ್ವದ ಒಂದು ಶ್ಲೋಕದಲ್ಲಿ, 'ಪ್ರಪಂಚದಲ್ಲಿ ಎಷ್ಟು ಆಹಾರ ಪದಾರ್ಥಗಳಿವೆಯೋ, ಎಷ್ಟು ಚಿನ್ನವಿದೆಯೋ, ಎಷ್ಟು ಪಶು ಸಂಪತ್ತಿದೆಯೋ, ಎಷ್ಟು ಸ್ತ್ರೀಯರಿದ್ದಾರೋ, ಎಲ್ಲವೂ ಒಬ್ಬನಿಗೇ ಸಿಕ್ಕಿದರೂ ಸಾಲದೆನ್ನಿಸುತ್ತದೆ. ಆದ್ದರಿಂದ ಲೋಭವನ್ನು ಬಿಟ್ಟುಬಿಡಬೇಕು' ಎಂದು ವ್ಯಾಸ ಮಹರ್ಷಿ ಬರೆಯುತ್ತಾರೆ. ಲೋಭಿಗಳಿಗೆ ಇಂತಹ ವಿಚಾರಗಳು ಪಥ್ಯವಾಗುವುದೇ ಇಲ್ಲ. ನೂರಾರು ಜನರಿಗೆ ನೋವು ಕೊಟ್ಟು ಅಕ್ರಮವಾಗಿ ಗಳಿಸಿದ ಸಂಪತ್ತು ಹಿತ ತರುವುದಿಲ್ಲ. ಅವರುಗಳನ್ನು ಉಪವಾಸ ಮಾಡಲು ಬಿಟ್ಟು ಮೃಷ್ಟಾನ್ನ ಭೋಜನ ಉಂಡು ಸುಖವಾಗಿರುತ್ತೇವೆ ಎಂಬುದು ಭ್ರಮೆಯಷ್ಟೆ. ಸಮಾಜದ ಶಾಪ ಲೋಭಿಗಳಿಗೆ ತಟ್ಟದೇ ಇರದು. 'ಇಷ್ಟೆಲ್ಲಾ ಮಾಡಿದ್ದು ಮಕ್ಕಳ ಹಿತಕ್ಕಾಗಿ, ಸುಖಕ್ಕಾಗಿ' ಎಂಬ ಮಾತು ಕೇಳಿ ಬರುತ್ತದೆ. ಮಕ್ಕಳಿಗೆ ಕೊಡಬೇಕಾದದ್ದು ಆಸ್ತಿಯಲ್ಲ, ಸಂಪತ್ತಲ್ಲ, ಯೋಗ್ಯವಾದ ವಿದ್ಯೆ, ಸತ್ಪ್ರಜೆಗಳನ್ನಾಗಿಸುವ ಶಿಕ್ಷಣ. ಅಪ್ಪ ಮಾಡಿಟ್ಟ, ಕೂಡಿಟ್ಟ ಆಸ್ತಿಯಿಂದ ಮಕ್ಕಳು ವಿಲಾಸಿಗಳಾಗಿ, ಸೋಮಾರಿಗಳಾಗಿ ಸಮಾಜಕಂಟಕರಾಗಿ ಬಾಳುವುದನ್ನು ಕಾಣುತ್ತಿರುತ್ತೇವೆ. ಹಣ ಮನುಷ್ಯರನ್ನು ಬದಲಾಯಿಸುವುದಿಲ್ಲ, ಅವರಲ್ಲಿನ ಮುಖವಾಡಗಳನ್ನು ಕಳಚುತ್ತದೆ. ಐಷಾರಾಮಿ ಕಾರುಗಳಲ್ಲಿ ಸ್ನೇಹಿತರೊಡಗೂಡಿ ಪಾನಮತ್ತರಾಗಿ ಹೋಟೆಲುಗಳಲ್ಲಿ, ಬಾರುಗಳಲ್ಲಿ ದಾಂಧಲೆ ಮಾಡುವ, ಬೆಂಕಿ ಹಚ್ಚುವ ಯುವಕರುಗಳನ್ನು ಕಂಡು ಮನಸ್ಸು ಮರುಗುತ್ತದೆ. ಕಾನೂನು, ಸುವ್ಯವಸ್ಥೆ ಪಾಲನೆ ಹೊಣೆ ಹೊತ್ತ ಪೋಲಿಸರ ಮೇಲೆ ಕೈಮಾಡಿಯೂ ಪಾರಾಗಬಲ್ಲೆವೆಂಬ ಪರಿಸ್ಥಿತಿ ಸಮಾಜ ಅಧೋಗತಿಗೆ ಜಾರುತ್ತಿರುವುದನ್ನು ತೋರಿಸುತ್ತಿದೆ. ಅಕ್ರಮ ಸಂಪತ್ತು ಅಧರ್ಮವನ್ನೇ ಪೋಷಿಸುತ್ತದೆ, ಜನರಲ್ಲಿ ಅಶಾಂತಿಯನ್ನೇ ಉಂಟು ಮಾಡುತ್ತದೆ. ಯಾರು ಶಾಸಕಾಂಗದ ಪ್ರಮುಖರೆನಿಸಿರುವರೋ ಅವರುಗಳೇ ಕೋಟಿ ಕೋಟಿ ಹಣ ಪಡೆದು ತಮ್ಮನ್ನು ತಾವು ಮಾರಿಕೊಳ್ಳುತ್ತಿರುವುದು ಇಂದು ಅಸಹಜ ಸಂಗತಿಯಾಗಿ ಉಳಿದಿಲ್ಲವೆಂಬುದು ಮತ್ತು ಅದನ್ನು ಅವರುಗಳು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿರುವುದು ಲೋಭಿತನದ ಪರಾಕಾಷ್ಠೆಯಾಗಿದೆ. 
     ನಿಜವಾದ ಬಡವನೆಂದರೆ ಲೋಭಿಯೇ! ಏಕೆಂದರೆ ಬಡವನಾದರೋ ಉಣ್ಣಲು, ಉಡಲು ಸಿಕ್ಕರೆ ಸಂತುಷ್ಟನಾಗುತ್ತಾನೆ. ಲೋಭಿಗೆ ಆ ತೃಪ್ತಿ ಇರುವುದೇ ಇಲ್ಲ. ಕಡುಬಡವರಂತೆ ಜೀವಿಸಿ ಸತ್ತಾಗ ಅಪಾರ ಹಣ, ಸಂಪತ್ತು ಬಿಟ್ಟು ಹೋದ ಮಹನೀಯರುಗಳು ಇದ್ದಾರೆ. ಅವರಲ್ಲಿದ್ದ ಸಂಪತ್ತು ಸಮಾಜಕ್ಕಿರಲಿ, ಸ್ವತಃ ಅವರಿಗೇ ಉಪಯೋಗಕ್ಕೆ ಬಂದಿರಲಿಲ್ಲ. ಜಗತ್ತಿಗೇ ಶ್ರೇಷ್ಠ ಎನಿಸಿದ್ದ ಚಕ್ರವರ್ತಿಗಳು, ರಾಜ ಮಹಾರಾಜರುಗಳು ಸಾಯುವಾಗ ಒಂದು ಕವಡೆ ಕಾಸನ್ನೂ ತಮ್ಮೊಡನೆ ಒಯ್ಯಲಾಗಲಿಲ್ಲ. ಸಮುದ್ರಕ್ಕೇ ಸೇತುವೆ ಕಟ್ಟಿದ್ದ ಶ್ರೀರಾಮಚಂದ್ರ, ಮಹಾಭಾರತ ಯುದ್ಧದಲ್ಲಿ ಜಯಗಳಿಸಿದ ಧರ್ಮರಾಯ, ಇಂತಹ ಅನೇಕ ಶೂರ, ಮಹಾಶೂರರು ಆಳಿದ ಈ ಭೂಮಿ ಈಗಲೂ ಇಲ್ಲೇ ಇದೆ, ಅವರೊಡನೆ ಹೋಗಲಿಲ್ಲ. ಕೋಟಿ, ಕೋಟಿ ಅಕ್ರಮ ಸಂಪತ್ತು ಕೂಡಿಸಿ, ವಿಧವಿಧವಾದ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ನಮ್ಮ ನಾಯಕರುಗಳ ಜೊತೆಗೆ ಸಹ ಆ ಸಂಪತ್ತು ಹೋಗುವುದೇ ಇಲ್ಲ. ಆದರೂ ಈ ಲೋಭ ಹೋಗುವುದೇ ಇಲ್ಲವೆಂದಾದರೆ, ಈ ರಕ್ಷಸ್ಸು, ದುರ್ಭಾವನೆ, ರಾಕ್ಷಸತ್ವ ಎಷ್ಟು ಪ್ರಬಲವಾಗಿದೆ ಎಂಬುದು ವೇದ್ಯವಾಗುತ್ತದೆ. ನಮ್ಮನ್ನು ದುರಾಸೆಯ ಜನರು ಆಳುತ್ತಿದ್ದಾರೆಂಬುದು ಅರಿವಾದಾಗ ನಮಗೆ ಅತೀವ ನೋವಾಗುತ್ತದೆ. ಈ ಭೀಕರ ಕ್ಯಾನ್ಸರಿನಿಂದ ವಿಮುಕ್ತಿ ಸಿಗಬೇಕೆಂದರೆ ಜನರು ಜಾಗೃತರಾಗಬೇಕಾಗುತ್ತದೆ. ಅದೊಂದೇ ಮಾರ್ಗ. ಸುವಿಚಾರಿಗಳು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.
     ನೂರಾರು ಜನರನ್ನು ನೋಯಿಸಿ ಗಳಿಸಿದ ಸಂಪತ್ತು ಒಂದು ಸಂಪತ್ತೇ? ಭರ್ತೃಹರಿಯ ನೀತಿಶತಕದ ಈ ಶ್ಲೋಕ ನೋಡಿ:
"ಸ ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ |"
ಯಾರ ಆಸೆಗೆ ಮಿತಿಯಿಲ್ಲವೋ, ಇನ್ನೂ ಬೇಕು, ಬೇಕು ಎಂದು ಹಪಹಪಿಸುತ್ತಾನೋ ಅವನು ಕೋಟ್ಯಾಧೀಶನಾದರೂ ದರಿದ್ರನಿಗಿಂತ ಕಡೆಯಾಗಿರುತ್ತಾನೆ. ಸಾಕೆನ್ನುವವನೇ ಶ್ರೀಮಂತ, ಬೇಕೆನ್ನುವವನೇ ಬಡವ! ಯಾರು ತೃಪ್ತರೋ ಅವರೇ ಶ್ರೀಮಂತರು; ಅತೃಪ್ತರೇ ದರಿದ್ರರು. ವೇದದ ಕರೆಯಂತೆ ಹದ್ದಿನ ವಕ್ರ ನಡೆಯನ್ನು, ಅರ್ಥಾತ್ ಲೋಭವನ್ನು ನಿರ್ದಾಕ್ಷಿಣ್ಯವಾಗಿ ಹೊಡೆದಟ್ಟದೆ ರಾಕ್ಷಸತ್ವ ಕಳೆಯಲಾರದು, ಮಾನವತ್ವ ಸಿಗಲಾರದು. ಲೋಭಕ್ಕೆ ಮದ್ದುಂಟೆ? ಅದನ್ನು ಹೊಡೆದೋಡಿಸುವ ಆಯುಧವಿದೆಯೇ? ಇದೆ, ಆತ್ಮಾವಲೋಕನವೇ ಮದ್ದು ಮತ್ತು  ಆಯುಧವೂ ಅದೇ! ಮಾನವತೆಯನ್ನು ಬೋಧಿಸುವ ವೈದಿಕ ಭಜನೆಯ ಈ ಸಾಲುಗಳು ನಮ್ಮನ್ನು ಪ್ರೇರಿಸಲಿ:
ದೀನರ್ಗೆ ನೋವನಿತ್ತು ಸಂಪತ್ತ ಗಳಿಸದಂತೆ |
ನೀ ನೀಡು ಶುದ್ಧ ಮತಿಯ ಪರಹಿಂಸೆಗೆಳಸದಂತೆ ||
-ಕ.ವೆಂ. ನಾಗರಾಜ್.
*****************
1.4.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 3, 2015

ಮೋಹದ ಬಲೆ


"ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?"

     ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು ಯಾರದಾದರೋ ಹೆಸರು ಹೇಳಿಯಾರು. ಮುಂದೆ ಈ ಪ್ರಶ್ನೆ ಕೇಳಿ:
"ನೀನು ಅಥವ ನಿನಗೆ ಇಷ್ಟವಾದವರು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕು. ಯಾರನ್ನು ಆರಿಸಿಕೊಳ್ಳುವೆ?"
     ಇದಕ್ಕೆ ತಕ್ಷಣ ಉತ್ತರಿಸದಿದ್ದರೂ, ಆಲೋಚಿಸಿ ತಡೆದು ಬರುವ ಉತ್ತರ ಸಹಜವಾಗಿ 'ನನ್ನನ್ನೇ' ಎಂಬುದೇ.
"ದೇವರು ದೊಡ್ಡವನೋ? ನೀನು ದೊಡ್ಡವನೋ?"
"ದೇವರೇ ದೊಡ್ಡವನು."
"ದೇವರು ಅಥವ ನೀನು - ಹೇಳು, ಇಬ್ಬರಲ್ಲಿ ನಿನಗೆ ಯಾರು ಬೇಕು?"
     ಗೊಂದಲಕ್ಕೆ ಒಳಗಾದರೂ ಅಂತಿಮವಾಗಿ ಬರುವ ಉತ್ತರ 'ನಾನೇ' ಎಂಬುದೇ ಆಗಿರುತ್ತದೆ. 'ನಾನು' ಇದ್ದರೆ ತಾನೇ, ನನಗೆ ಇಷ್ಟವಾದವರು, ದೇವರು, ಗೀವರುಗಳೆಲ್ಲಾ ಇರುವುದು! ನಾನೇ ಇಲ್ಲದಿದ್ದರೆ ಅವು ಯಾವುದಕ್ಕೂ ಅರ್ಥವೇ ಇರುವುದಿಲ್ಲ. 'ನಾನು' ಮಹತ್ವದವನಾಗಿರದಿರಲಿ, ಶ್ರೇಷ್ಠನಾಗಿರದಿರಲಿ, ಹೇಗೇ ಇರಲಿ, ಪ್ರಪಂಚದಲ್ಲಿ 'ನಾನು' ಎಲ್ಲರಿಗಿಂತ ಹೆಚ್ಚಾಗಿ ಇಷ್ಟಪಡುವುದು 'ನನ್ನನ್ನೇ'. 'ನನ್ನ' ನಂತರದಲ್ಲಿ ಬೇರೆಯವರು ಬರುತ್ತಾರೆ! ಅರಿಷಡ್ವರ್ಗದಲ್ಲಿ ಒಂದೆನಿಸಿದ ಮೋಹದ ಬೀಜರೂಪ ಇಲ್ಲಿದೆ. ಎಲ್ಲರಿಗಿಂತ ಇಷ್ಟಪಡುವ ವ್ಯಕ್ತಿ 'ನಾನೇ' ಎಂಬುದರಲ್ಲಿ ಒಳ್ಳೆಯ ಆಯ್ಕೆಯಿದೆ. ಏಕೆಂದರೆ ಇಷ್ಟಪಡುವ ಇತರರು ಮುಂದೊಮ್ಮೆ ಯಾವುದೋ ಕಾರಣಗಳಿಗಾಗಿ ಇಷ್ಟವಾಗದೇ ಹೋಗಬಹುದು. ಅಥವ ಅವರುಗಳಿಗೇ ನಾವು ಇಷ್ಟವಾಗದೇ ಹೋಗಬಹುದು. ಪ್ರೀತಿಸಿದ ಹುಡುಗ/ಹುಡುಗಿ ಕೈಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಲ್ಲಾ, ಅದು ತಮಗಿಂತ ಬೇರೆಯವರನ್ನು ಹೆಚ್ಚು ಪ್ರೀತಿಸುವುದನ್ನು ತೋರಿಸುವುದಲ್ಲವೇ ಎಂದು ಕೇಳಬಹುದು. ಇದಕ್ಕೆ ಉತ್ತರ 'ಖಂಡಿತಾ ಅಲ್ಲ' ಎನ್ನಬೇಕಾಗುತ್ತದೆ. ಪ್ರೀತಿಸಿದ ಹುಡುಗ/ಹುಡುಗಿ ಸಿಗದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವವರು ತಮ್ಮನ್ನು ತಾವು ಹೆಚ್ಚು ಇಷ್ಟಪಡುವುದನ್ನು ತೋರಿಸುತ್ತದೆ. ನಿಧಾನವಾಗಿ ಯೋಚಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. 
ನನದು ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಕೆ ಮೂಲ|
ಹೆಣ್ಣು ಜೇಡಕೆ ತುತ್ತು ಗಂಡು ಸಂಗಮದಿ 
ಜೀವಿಯ ಮೋಹಕೆ ಜೀವವೆ ಬಲಿ ಮೂಢ|| 
     ಮನುಷ್ಯನ ಆರು ಶತ್ರುಗಳಲ್ಲಿ ಒಂದಾದ ಈ ಮೋಹ ಅನ್ನುವುದು ಕೆಟ್ಟದ್ದೇ? ಈ ಪ್ರಶ್ನೆ ಹರಿತವಾದ ಚಾಕು ಒಳ್ಳೆಯದೋ, ಕೆಟ್ಟದೋ ಎಂದು ಕೇಳುವುದಕ್ಕೆ ಸಮನಾಗಿದೆ. ಚಾಕುವನ್ನು ಹಣ್ಣು, ತರಕಾರಿ ಹೆಚ್ಚಲೂ ಬಳಸಬಹುದು, ಯಾರನ್ನೋ ಕೊಲೆ ಮಾಡಲೂ ಬಳಸಬಹುದು. ಇದು ಚಾಕುವಿನ ತಪ್ಪೇ? ಖಂಡಿತಾ ಅಲ್ಲ. ಬಳಸುವವರ ಬಳಸುವ ರೀತಿಯಲ್ಲಿನ ತಪ್ಪಲ್ಲವೇ? ಅದೇ ರೀತಿ ಮೋಹವಶನಾದ ವ್ಯಕ್ತಿ ಮೋಹವನ್ನು ಯಾವ ರೀತಿಯಲ್ಲಿ ತೋರ್ಪಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದೋ ಆಗುತ್ತದೆ. ಈ ಮೋಹವನ್ನು ಆತ್ಮೋದ್ಧಾರಕ್ಕೂ ಬಳಸಬಹುದು, ಕೇವಲ ತನ್ನೊಬ್ಬನ ಉದ್ಧಾರಕ್ಕಾಗಿ ಇತರರನ್ನು ಹಾಳು ಮಾಡಲೂ ಬಳಸಬಹುದು. 'ತಾನು' ಮತ್ತು 'ತನ್ನೊಬ್ಬನಲ್ಲಿ' ಮೋಹವಿರುವವನು ಪರಮಸ್ವಾರ್ಥಿಯಾಗಿರುತ್ತಾನೆ. ಇಂತಹವನು ತನ್ನೊಬ್ಬನ ಹಿತಕ್ಕಾಗಿ ಯಾರಿಗಾದರೂ ಕೇಡು ಬಗೆಯಲು ಹಿಂದೆಗೆಯಲಾರ. ಈ ಭಾವ ಉನ್ಮಾದ ಸ್ಥಿತಿ ತಲುಪಿದಾಗ ಆಸ್ತಿಗಾಗಿ, ಹಣಕ್ಕಾಗಿ ಸ್ವಂತ ತಂದೆ/ತಾಯಿ/ಬಂಧು/ಬಳಗ ಯಾರನ್ನಾದರೂ ಕರುಣೆಯಿಲ್ಲದೆ ಹತ್ಯೆಗೈಯುವುವರನ್ನು ಕಾಣುತ್ತೇವೆ. ಪತ್ನಿಯನ್ನೇ ವೇಶ್ಯಾವಾಟಿಕೆಗೆ ಮಾರುವ ಕಟುಕರೂ ಕಾಣಸಿಗುತ್ತಾರೆ. ಇತಿಹಾಸದ ಪುಟಗಳಲ್ಲಿ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಅಧಿಕಾರಕ್ಕಾಗಿ ಸ್ವಂತ ತಂದೆ ಷಹಜಹಾನನನ್ನೇ ಸೆರೆಯಲ್ಲಿರಿಸಿದ, ಸೋದರರ ವಿರುದ್ಧವೇ ಯುದ್ಧ ನಡೆಸಿದ, ಸ್ವಂತ ಸೋದರರಾದ ದಾರಾ ಶಿಕೋ ಮತ್ತು ಮುರಾದ ಬಕ್ಷರನ್ನೇ ಇಸ್ಲಾಮ್ ವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ಸಾಯಿಸಿದ ಔರಂಗಜೇಬನ ಉದಾಹರಣೆಯನ್ನೂ ಕೊಡಬಹುದು.
ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ|
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಮೂಲವೋ ಮೂಢ|| 
     ಮೋಹವೆಂಬ ಮಾಯಾಮೋಹಿನಿಯ ಸೆಳೆತಕ್ಕೆ ಒಳಗಾಗದವರು ಯಾರು? ಮೋಹ ಹೆಚ್ಚಾದಷ್ಟೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ತನ್ನೊಬ್ಬನ ಮೇಲಿನ ಮೋಹದ ನಂತರದ ಬೆಳವಣಿಗೆ ತನ್ನ ಕುಟುಂಬದವರ, ಪರಿವಾರದ ಜನರ ಮೇಲಿನ ಮೋಹ. ಇದು ತನ್ನೊಬ್ಬನ ಮೇಲಿನ ಮೋಹಕ್ಕಿಂತ ಸ್ವಲ್ಪ ಉತ್ತಮ. ಏಕೆಂದರೆ ಇದರಲ್ಲಿ ಕುಟುಂಬದ ಜನರೂ 'ತನ್ನೊಡನೆ' ಸೇರಿರುತ್ತಾರೆ. ಈ ಕುಟುಂಬದ ಮೋಹ ಸಹ ಹಾನಿಕರವೇ. ಧೃತರಾಷ್ಟ್ರನ ಮಕ್ಕಳ ಮೇಲಿನ ಮೋಹ 'ಮಹಾಭಾರತ'ಕ್ಕೆ ಕಾರಣವಾಯಿತು. ಮೋಹಾಂಧನಾದ ಧೃತರಾಷ್ಟ್ರನ ಪುತ್ರ ವ್ಯಾಮೋಹ ನ್ಯಾಯ, ನೀತಿ, ಧರ್ಮವನ್ನೇ ತಿಂದದ್ದಲ್ಲದೆ ಕೊನೆಗೆ ಅವನ ಮಕ್ಕಳನ್ನೇ ನುಂಗಿ ನೀರು ಕುಡಿಯಿತು. ನಮ್ಮ ಜನನಾಯಕರುಗಳ ಕುಟುಂಬದ ಮೋಹ ದೇಶ, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಬೇಕಾಗಿದ್ದ ಹಣದ ದೊಡ್ಡ ಭಾಗವನ್ನು ಕಮಿಷನ್, ಪರ್ಸೆಂಟೇಜು, ಕಾಣಿಕೆಗಳ ರೂಪದಲ್ಲಿ ನುಂಗಿ ಹಾಕುತ್ತಿದೆ. ಮೊದಲು ಏನೇನೂ ಅಲ್ಲದಿದ್ದವರು ಇಂದು ಎಷ್ಟು ಕೋಟಿಗಳ ಒಡೆಯರೋ ಯಾರಿಗೂ ಲೆಕ್ಕ ಗೊತ್ತಿಲ್ಲ. ಜನಸೇವೆ, ದೀನ-ದಲಿತೋದ್ಧಾರ, ಜಾತ್ಯಾತೀತತೆ, ಮುಂತಾದ ಮರುಳು ಮಾಡುವ ಮುಖವಾಡಗಳೊಂದಿಗೆ ಜನರ ತಲೆಯ ಮೇಲೆ ಟೋಪಿಯಿಟ್ಟು ತಾವು ಕಿರೀಟ ಧರಿಸುತ್ತಾರೆ.
     ಸ್ವಂತದ್ದಾಯಿತು, ಕುಟುಂಬದ್ದಾಯಿತು, ಇನ್ನು ಜಾತಿ, ಮತ, ಧರ್ಮ, ಸಮುದಾಯ ಇತ್ಯಾದಿಗಳ ಮೇಲಿನ ಮೋಹ ಸಹ ಅಪಾಯಕಾರಿಯೇ. ಸ್ವಂತದ ಜಾತಿ, ಮತಗಳನ್ನು ಪ್ರೀತಿಸಲಿ ಪರವಾಗಿಲ್ಲ. ಆದರೆ, ಇದು ಇತರರ ಮೇಲಿನ ದ್ವೇಷವಾಗಿ ರೂಪುಗೊಂಡರೆ ಸಮಾಜದಲ್ಲಿ ಶಾಂತಿಗೆ ಎಡೆಯೆಲ್ಲಿ? ಅಧಿಕಾರಸ್ಥ ರಾಜಕಾರಣಿಗಳು ಮಾಡುತ್ತಿರುವ ಮೊದಲ ಕೆಲಸವೆಂದರೆ ತಮ್ಮ ಸಿಬ್ಬಂದಿಗಳು, ಸಹಕಾರಿಗಳು, ಹಿತೈಷಿಗಳು, ಸಲಹೆ ಕೊಡುವವರು ಮುಂತಾದವರು ತಮ್ಮ ಜಾತಿಯವರೇ ಆಗಿರುವಂತೆ ನೋಡಿಕೊಳ್ಳುವುದು. ಇವರೇ 'ಜಾತ್ಯಾತೀತತೆ'ಯ ತುತ್ತೂರಿ ಊದುವವರು. ಈಗಂತೂ ಮತ/ಧರ್ಮದ ಹೆಸರಿನಲ್ಲಿ ಘೋರ ರಕ್ತಪಾತಗಳೇ ಆಗುತ್ತಿವೆ. ಇದು ಸಮುದಾಯ ಮೋಹದ ಪರಾಕಾಷ್ಠೆ. ಭಯೋತ್ಪಾದಕರ, ಉಗ್ರಗಾಮಿಗಳ ಉಪಟಳ ಇಂದು ಕೇವಲ ಒಂದು ದೇಶದ್ದಲ್ಲ, ಇಡೀ ಪ್ರಪಂಚದ ಸಮಸ್ಯೆಯಾಗಿಬಿಟ್ಟಿದೆ. ಇದನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಲೇ ಬೇಕಾದ ಸನ್ನಿವೇಶ ದೂರವೇನಿಲ್ಲ. ಹೀಗೆ ಮಾಯಾವಿ ಮೋಹಿನಿ ರಮಣೀಯ ಮೋಹದ ಬಲೆ ಬೀಸಿ ಜಗತ್ತನ್ನೇ ಕುಣಿಸುತ್ತಿದ್ದಾಳೆ. ಈ ಮಾಯೆಗೆ ಮರುಳಾಗಿ ಗೊತ್ತಿದ್ದೂ ತಪ್ಪು ಮಾಡುವವರ ಅಂತರಂಗಗಳು ಈ ಮೋಹಕ್ಕೆ ಸೆರೆಯಾಳಾಗಿವೆ.
     ಈ ಜಗತ್ತು ಅದ್ಭುತ ವೈಚಿತ್ರ್ಯಗಳಿಂದ ಕೂಡಿದೆ. ಇಡೀ ಜೀವರಾಶಿಯನ್ನು ಪ್ರೀತಿಸುವ, ಸಕಲರ ಸುಖವನ್ನೂ ಬಯಸುವ ಸಾಧು-ಸಂತರುಗಳು, ದಾರ್ಶನಿಕರನ್ನೂ ಈ ಜಗತ್ತು ಹೊಂದಿದೆ. ಇವರ ಈ ಸುಮೋಹ ಜನರನ್ನು ಸರಿದಾರಿಯೆಡೆಗೆ ನಡೆಯಲು ಸಹಕಾರಿಯಾಗಿದೆ. ಇಂತಹವರನ್ನು ಗುರುತಿಸಿ, ಆದರಿಸಿ ಇವರುಗಳು ತೋರುವ ದಾರಿಯಲ್ಲಿ ಮುನ್ನಡೆದರೆ ಅದು ಶತ್ರುವಾದ ಮೋಹವನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡಂತೆ. 'ವಸುಧೈವ ಕುಟುಂಬಕಮ್' - ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಅನ್ನುವುದು ಸನಾತನ ಧರ್ಮದ ತಿರುಳು. ಒಂದು ಕುಟುಂಬದಲ್ಲಿ ಹಲವಾರು ವಿಭಿನ್ನ ಗುಣಗಳುಳ್ಳ ಅಣ್ಣ-ತಮ್ಮಂದಿರು ಇರುವಂತೆ ಪ್ರಪಂಚದಲ್ಲೂ ವಿಭಿನ್ನ ಆಚರಣೆಗಳು, ಸಂಪ್ರದಾಯಗಳನ್ನು ಅನುಸರಿಸುವ ಜನರಿದ್ದಾರೆ. ಇಡೀ ಪ್ರಪಂಚವೇ ಒಂದು ರಾಷ್ಟ್ರವಾಗಬೇಕು, ನಮ್ಮ ದೇವರನ್ನೇ ನಾವು ಹೇಳಿದ ರೀತಿಯಲ್ಲೇ ಪೂಜಿಸಬೇಕು, ಹೀಗೆ ಮಾಡದಿದ್ದವರನ್ನು ಬಲವಂತದಿಂದ ಮತಾಂತರಿಸಬೇಕು, ಒಪ್ಪದಿದ್ದವರನ್ನು ಸಂಹರಿಸಬೇಕು ಎಂಬ ಮನೋಭಾವದಿಂದ ಜಗತ್ತನ್ನು ಒಟ್ಟುಗೂಡಿಸಲು ಆ ದೇವರಿಂದಲೂ ಅಸಾಧ್ಯ. ಆದರೂ ಈ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳು, ಅತ್ಯಾಚಾರಗಳು, ಯುದ್ಧಗಳು ನಡೆಯುತ್ತಿರುವುದು ದುರ್ದೈವ. ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಆಗಲು, ಒಂದು ರಾಷ್ಟ್ರವೆನಿಸಲು ಸಾಧ್ಯವಿದೆ. ಈ ಜಗತ್ತು ಹೀಗಿರಲಿ ಎಂದು ಬದಲಾಯಿಸಲು ಹೋಗದೆ, ಹೇಗಿದೆಯೋ ಹಾಗೆಯೇ ಇರಲಿ ಎಂದು ಸುಮ್ಮನಿದ್ದರೆ, ಕಿತ್ತುಕೊಳ್ಳುವುದಕ್ಕಿಂತ ಕೊಡಲು ಮನಸ್ಸು ಮಾಡಿದರೆ, ಯಾರನ್ನೂ ಪ್ರತ್ಯೇಕಿಸದೆ ಸಮನಾಗಿ ಕಂಡು, ಎಲ್ಲರನ್ನೂ ಸೇರಿಸಿಕೊಂಡರೆ, ಎಲ್ಲಾ ಧರ್ಮಗ್ರಂಥಗಳೂ, ವೇದಗಳು, ಕುರಾನ್, ಬೈಬಲ್ ಇತ್ಯಾದಿ, ನಮ್ಮವೇ ಅಂದುಕೊಂಡು ಅದರಲ್ಲಿನ ನಮಗೆ ಹಿತವಾಗುವ ಎಲ್ಲಾ ಸಂಗತಿಗಳನ್ನು ಅಳವಡಿಸಿಕೊಂಡರೆ ಮಾತ್ರ ಜಗತ್ತು ಒಂದು ಕುಟುಂಬವೆನಿಸೀತು. ಇತರರು ಅನುಸರಿಸಲಿ, ನಮ್ಮದು ಒಣ ಉಪದೇಶ ಮಾತ್ರ ಅನ್ನುವಂತಹ ಮುಖವಾಡ ಧರಿಸಿದ ಜನನಾಯಕರ, ವಿಚಾರವಾದಿಗಳ ನಿಜಬಣ್ಣ ಬಯಲಾಗಬೇಕು. ಈಗ ಅಗತ್ಯವಿರುವುದು ಮಾನವರು ಸಹಮಾನವರನ್ನು ಪ್ರೀತಿಸುವ, ಗೌರವಿಸುವ ಅರ್ಥಪೂರ್ಣ ಧರ್ಮವೇ ಹೊರತು ಮತ್ತೊಂದಲ್ಲ. ಇಲ್ಲದಿದ್ದರೆ ದಾಯಾದಿಕಲಹಗಳಿಂದ ವಿನಾಶವೇ ಕಟ್ಟಿಟ್ಟ ಬುತ್ತಿ. ವಿಶ್ವಮಾನವತೆಯನ್ನು ಎತ್ತಿ ಹಿಡಿಯಲು ಎಲ್ಲ ಜನರನ್ನೂ ಅವರುಗಳು ಹೇಗಿರುವರೋ ಹಾಗೆ ಒಪ್ಪಿಕೊಳ್ಳುವ, ಪರಸ್ಪರರ ಭಾವನೆಗಳನ್ನು ಗೌರವಿಸುವ ವಿಶ್ವವ್ಯಾಮೋಹ ಬಂದರೆ ವಿಶ್ವ ಬದುಕುಳಿದೀತು. 
ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್ |
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್ ||
     ಇದರ ಅರ್ಥ: "ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಸಿಗಲಿ, ಶಾಂತರು ಬಂಧನಗಳಿಂದ ವಿಮೋಚಿತರಾಗಲಿ, ಆ ವಿಮುಕ್ತರು ಇತರರನ್ನೂ ಸಹ ಬಂಧನದಿಂದ ಬಿಡಿಸಲಿ."
-ಕ.ವೆಂ.ನಾಗರಾಜ್.
**************
25.3.2015ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: