ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜನವರಿ 23, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೧.ಬ್ರಹ್ಮಯಜ್ಞ


     ಮೊದಲನೆಯದು ಬ್ರಹ್ಮಯಜ್ಞ. ಇದನ್ನು ಜ್ಞಾನಯಜ್ಞ ಎಂದೂ ಕರೆಯಬಹುದು. ವೇದಗಳ ಅಧ್ಯಯನ ಮತ್ತು ಸಂಧ್ಯಾವಂದನೆ, ಪ್ರತಿದಿನ ಪ್ರಾತಃಕಾಲ ಮತ್ತು ಸಾಯಂಕಾಲ ಮಾಡಬೇಕಾದ ಮೊದಲನೆಯ ಯಜ್ಞ. ಸಂಧ್ಯಾ - ಎಂದರೆ ಸಮ್ಯಗ್ಧ್ಯಾನ. ಈ ಸಂಧ್ಯಾಕ್ರಿಯೆಯಲ್ಲಿ ಶರೀರದ ಅಂಗೋಪಾಂಗಗಳನ್ನು ಬಲಿಷ್ಠವಾಗಿಯೂ, ಪವಿತ್ರವಾಗಿಯೂ ಮಾಡಿಕೊಳ್ಳಬೇಕೆಂಬ ಸಂಕಲ್ಪವಿದೆ. ಮೂರು ಅನಾದಿ ತತ್ವಗಳ ಸತ್ಯಜ್ಞಾನ ಮಾಡಿಕೊಳ್ಳಬೇಕೆಂಬ ಆದರ್ಶವಿದೆ. ಮನಸ್ಸನ್ನು ವಿಶಾಲಗೊಳಿಸಿ ಎಲ್ಲೆಡೆಯೂ ಪರಮಾತ್ಮನ ಅಸ್ತಿತ್ವದ ಅನುಭೂತಿಯನ್ನು ಪಡೆದುಕೊಳ್ಳಬೇಕೆಂಬ ಕಾಮನೆಯಿದೆ. ಕೊನೆಯದಾಗಿ ಜೀವನವನ್ನು ವೇದಾದೇಶಕ್ಕನುಸಾರವಾಗಿ ನಡೆಸಬೇಕೆಂಬ ಹಂಬಲವಿದೆ. ಕೇಳಿರಿ:-
ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್ | ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಮ್ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ || (ಯಜು.೩೬.೨೪)
     [ಶುಕ್ರಮ್] ಜ್ಯೋತಿಸ್ವರೂಪನೂ, ಶಕ್ತಿಶಾಲಿಯೂ, [ತತ್ ದೇವಹಿತಂ ಚಕ್ಷುಃ] ವಿದ್ವಜ್ಜನರಿಗೆ, ಮಹಾತ್ಮರಿಗೆ ಪ್ರಿಯನೂ ಆದ ಆ ವಿಶ್ವದ್ರಷ್ಟಾ ಪ್ರಭುವು, [ಪುರಸ್ತಾತ್ ಉಚ್ಚರತ್] ಮನಸ್ಸಿನ ಮುಂದೆ ವಿರಾಜಿಸುತ್ತಿದ್ದಾನೆ. [ಶರದಃ ಶತಮ್] ನೂರು ವರ್ಷಗಳವರೆಗೆ [ಪಶ್ಶೇಮ] ನೋಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳವರೆಗೆ, [ಜೀವೇಮ] ಜೀವಿಸೋಣ. [ಶರದಃ ಶತಮ್] ನೂರು ವರ್ಷಗಳವರೆಗೆ [ಶೃಣುಯಾಮ] ಆಲಿಸುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಪ್ರಬ್ರವಾಮ] ಉತ್ತಮ ರೀತಿಯಲ್ಲಿ ಮಾತನಾಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಅದೀನಾಃ ಸ್ಯಾಮ] ಅದೀನರಾಗಿ, ಧೀರ-ವೀರರಾಗಿ ಜೀವಿಸಿರೋಣ. [ಶರದಃ ಶತಾತ್] ನೂರು ವರ್ಷಕ್ಕಿಂತ, [ಚ ಭೂಯಃ] ಹೆಚ್ಚು ಕಾಲ ಕೂಡ ಜೀವಿಸೋಣ.
     ಇಂತಹ ಆದರ್ಶಜೀವನ, ಆಸ್ತಿಕಜೀವನ ನಮ್ಮದಾದರೆ, ಸುಖ-ಶಾಂತಿಗಳು ಬಾಳಿಗಿಳಿದು ಬರುವುದರಲ್ಲಿ ಸಂದೇಹವಿಲ್ಲ. ಪರಮಾತ್ಮನನ್ನು ಮರೆಯದೆ, ಜೀವಾತ್ಮನನ್ನು ತೊರೆಯದೆ, ಭೌತಿಕ ಜೀವನವನ್ನು ಪರಿಶುದ್ಧಿಯ ಉನ್ನತಸ್ತರಕ್ಕೇರಿಸಿ, ಶಾಂತಿಯನ್ನನುಭವಿಸುವ ಚೈತನ್ಯವನ್ನು ತುಂಬಿಕೊಡುವ ಕ್ರಿಯೆ ಈ ಸಂಧ್ಯಾ. ಇದರೊಂದಿಗೆ ಶಕ್ತ್ಯಾನುಸಾರ ವೇದಾಧ್ಯಯನ, ವೇದಾಧ್ಯಾಪನ ಮಾಡುತ್ತಾ ಹೋಗುವುದರಿಂದ ಬೌದ್ಧಿಕ-ಮಾನಸಿಕ-ಆತ್ಮಿಕಶಕ್ತಿಗಳು ಅರಳುತ್ತಾ ಹೋಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಬ್ರಹ್ಮಯಜ್ಞ, ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸೀ ನಾಲ್ವರಿಗೂ ಅನಿವಾರ್ಯ.
-ಪಂ.ಸುಧಾಕರ ಚತುರ್ವೇದಿ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2013/01/blog-post.html

ಶನಿವಾರ, ಜನವರಿ 19, 2013

ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ



     ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು:
"ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ:
"ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, 
"ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದರು.
     ಆ ಮಾಧವನೇ ಮುಂದೆ ವಿದ್ಯಾರಣ್ಯರೆಂಬ ಹೆಸರಿನಿಂದ ಪ್ರಸಿದ್ಧನಾಗಿ ವಿಜಯನಗರ ಸಂಸ್ಥಾನದ ಸ್ಥಾಪಕನೆನಿಸಿದ್ದು ಈಗ ಇತಿಹಾಸ. ಮಾಧವನ ಈ ನಿರ್ಧಾರಕ್ಕೆ ದೇಶದ ಅಂದಿನ ಸ್ಥಿತಿ ಗತಿಗಳೇ ಪ್ರಮುಖ ಕಾರಣವಾಗಿದ್ದಿರಬಹುದು. ಪಂಪಾಕ್ಷೇತ್ರದಲ್ಲಿ (ಈಗಿನ ಹಂಪೆ) ಮಾಯನಾಚಾರ್ಯ ಮತ್ತು ಶ್ರೀಮತೀದೇವಿಯವರ ಪುತ್ರನಾಗಿ ಕ್ರಿ.ಶ. ೧೨೬೮ರ ಸುಮಾರಿಗೆ ಜನಿಸಿದ ಮಾಧವನಿಗೆ, ಸಾಯಣ, ಭೋಗನಾಥ ಎಂಬ ತಮ್ಮಂದಿರು ಮತ್ತು ಸಿಂಗಲಾ ಎಂಬ ತಂಗಿಯೂ ಇದ್ದರು. ತುಂಗಭದ್ರಾ ತೀರದಲ್ಲಿದ್ದ ಶಂಕರಾನಂದ ಎಂಬ ಗುರುಗಳಲ್ಲಿ ಹಲವು ವರ್ಷಗಳ ಕಾಲ ಮಾಧವ, ಸಾಯಣ ಮತ್ತು ಭೋಗನಾಥರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರು. ಶಂಕರಾನಂದರು ನಂತರ ಅವರನ್ನು ಉದ್ದೇಶಿಸಿ, "ಮಕ್ಕಳೇ, ನಾನು ಕಲಿಸಿದ್ದ ಎಲ್ಲವನ್ನೂ ನೀವು ಶ್ರದ್ಧೆಯಿಂದ ಕಲಿತಿರುವಿರಿ. ಇನ್ನು ನೀವು ಕಾಂಚಿಯಲ್ಲಿರುವ ನನ್ನ ಗುರುಗಳಾದ ಶ್ರೀ ವಿದ್ಯಾತೀರ್ಥರಲ್ಲಿ ವಿದ್ಯಾಭ್ಯಾಸ ಮುಂದುವರೆಸಿರಿ" ಎಂದು ಹೇಳಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಕೋರಿ ಗುರುಗಳಿಗೆ ಪತ್ರ ಬರೆದು ಕೊಟ್ಟರು. 
     ಆ ಸಮಯದಲ್ಲಿ ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯು ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳನ್ನು ಕಲಿಸುವ ಪ್ರಸಿದ್ಧ ಕ್ಷೇತ್ರವಾಗಿತ್ತು. ವಿದ್ಯಾತೀರ್ಥರ ವಿಶ್ವಾಸ ಗಳಿಸುವಲ್ಲಿ ಮತ್ತು ಅವರನ್ನು ಗುರುವಾಗಿ ಹೊಂದುವಲ್ಲಿ ಮಾಧವ ಅದೃಷ್ಟಶಾಲಿಯಾಗಿದ್ದ. ಶಂಕರಾನಂದ, ಭಾರತೀಕೃಷ್ಣ, ಶ್ರೀಕಂಠನಾಥ, ಮೊದಲಾದ ಗುರುಗಳಿಂದಲೂ ಪಡೆದ ಮಾರ್ಗದರ್ಶನ ಅವನ ಮುಂದಿನ ನಿರ್ಧಾರ ರೂಪಿಸುವಲ್ಲಿ ಪಾತ್ರವಹಿಸಿತ್ತು. ದೇಶಪ್ರೇಮ, ಧೃಢತೆ, ಸೇವಾಮನೋಭಾವ, ಪರಧರ್ಮ ಸಹಿಷ್ಣುತೆ, ಸಮಯೋಚಿತ ನಿರ್ಧಾರ ಕೈಗೊಳ್ಳುವ ಶಕ್ತಿ, ತಾಳ್ಮೆ, ಪ್ರಚಲಿತ ವಿದ್ಯಮಾನಗಳ ಅರಿವು, ಜಗತ್ತಿನ ಒಳಿತಿಗೆ ಕೆಲಸ ಮಾಡುವ ಮನಸ್ಸುಗಳು ಆ ವೇಳೆಗಾಗಲೇ ಮಾಧವನಲ್ಲಿ ರಕ್ತಗತವಾಗಿದ್ದವು. ಇತರರಂತೆ ಕೇವಲ ವಿದ್ಯಾಭ್ಯಾಸ, ಮದುವೆ, ಸಾಮಾನ್ಯ ಜೀವನ ಸಾಗಿಸುವುದಕ್ಕೆ ಮಾತ್ರ ತಾನು ಹುಟ್ಟಿಲ್ಲವೆಂದು, ತಾನು ಸಾಧಿಸಬೇಕಾದುದು ಇನ್ನೂ ಹೆಚ್ಚಿನದೆಂದು ಅವನ ಒಳ ಮನಸ್ಸು ಹೇಳುತ್ತಿತ್ತು. ವೇದ, ಉಪನಿಷತ್ತುಗಳು, ತತ್ವಕಲೆ, ಸಾಹಿತ್ಯಗಳಲ್ಲಿ ಪ್ರಾವೀಣ್ಯತೆ ಪಡೆದ ಮಾಧವನೊಡನೆ ಗುರು ವಿದ್ಯಾತೀರ್ಥರು ಕೇಳಿದ್ದ ಪ್ರಶ್ನೆಯೇ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವ, "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಎಂಬುದು! 'ಕನ್ನಡ ನೆಲದಲ್ಲಿ ತಾಯಿ ಭುವನೇಶ್ವರಿಯ ಕೃಪೆಯಿಂದ ಒಂದು ರಾಜ್ಯಸ್ಥಾಪನೆ ಮಾಡಿ ದಾಳಿಕೋರರನ್ನು ಓಡಿಸಬೇಕು, ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಇರುವ ಅಪಾಯಗಳನ್ನು ನಿಗ್ರಹಿಸಬೇಕು. ಅದಕ್ಕಾಗಿ ಭುವನೇಶ್ವರಿಯನ್ನು ಕುರಿತು ತಪಸ್ಸು ಮಾಡಬೇಕು' ಎಂದು ಮನದೊಳಗೆ ಹುದುಗಿದ್ದ ಭಾವನೆಯನ್ನು ಗುರುಗಳ ಮುಂದೆ ವ್ಯಕ್ತಪಡಿಸಿದಾಗ ಗುರುಗಳು, "ನೀನು ಸಾಮಾನ್ಯನಲ್ಲಪ್ಪ. ನೀನು ಹುಟ್ಟಿರುವುದೇ ಸಾಧನೆ ಮಾಡುವ ಸಲುವಾಗಿ. ನೀನು ಈ ದೇಶ ಮತ್ತು ಧರ್ಮವನ್ನು ರಕ್ಷಿಸುತ್ತೀಯೆ" ಎಂದು ಮನತುಂಬಿ ಹೇಳಿದರು. 
     ಕಾಂಚಿಗೆ ಹೊರಟಿದ್ದ ಸಮಯದಲ್ಲೇ ಮಾಧವನ ತಂದೆ ಮಾಯನಾಚಾರ್ಯ ಸ್ವರ್ಗವಾಸಿಯಾಗಿದ್ದರು, ವಿದ್ಯಾಭ್ಯಾಸದ ನಂತರ ಪಂಪಾಕ್ಷೇತ್ರಕ್ಕೆ ವಾಪಸು ಬಂದ ಮಾಧವ ತನ್ನ ತಾಯಿ ಮತ್ತು ತಂಗಿಯನ್ನು ಸಲಹುವ ಜವಾಬ್ದಾರಿ ವಹಿಸಿಕೊಂಡು, ಅದಕ್ಕಾಗಿ ಪೌರೋಹಿತ್ಯವನ್ನು ಆಶ್ರಯಿಸಿದ. ತಂಗಿಯ ಮದುವೆ ನೆರವೇರಿಸಿದ. ವೀತಿಹೋತ್ರಿಯ ಮಗಳು ವೈತಿಹೋತ್ರಿಯೊಡನೆ ಅವನ ವಿವಾಹವಾತು. ಈ ರೀತಿಯ ಜೀವನದಲ್ಲಿ ಅವನಿಗೆ ಸಮಾಧಾನವಿರಲಿಲ್ಲ. ಗುರುಗಳೊಡನೆ ತಾನು ಹೇಳಿದ್ದ ಮಾತುಗಳು ಅವನನ್ನು ಸದಾ ಎಚ್ಚರಿಸುತ್ತಿದ್ದವು. ಆ ಸಮಯದಲ್ಲಿ ಶ್ರೀರಂಗಮ್ ಮೇಲೆ ದಾಳಿ ಮಾಡಿದ ಡೆಲ್ಲಿ ಸುಲ್ತಾನನ ದಳಪತಿ ಮಲ್ಲಿಕ್ ಕಾಫರ್ ಅಲ್ಲಿ ನಡೆಸಿದ ಭೀಭತ್ಸ ಅತ್ಯಾಚಾರ, ಕೊಲೆಗಳು, ಲೂಟಿ, ದೇವರ ವಿಗ್ರಹಗಳ ಧ್ವಂಸ ಕಾರ್ಯ ಮಾಧವನ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅಲ್ಲಿನ ಜನರು ಕೇವಲ ಕೆಲವು ದಿನ ಶಪಿಸಿ ಸುಮ್ಮನಾಗಿದ್ದಲ್ಲದೆ, ನಂತರದಲ್ಲಿ ಏನೂ ಆಗಿಲ್ಲವೆಂಬಂತೆ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಭಟಿಸಬೇಕೆಂಬ ಮನೋಭಾವವೇ ಅವರಲ್ಲಿ ಇರುತ್ತಿರಲಿಲ್ಲ. ಆಳುವವರೂ ಸಹ ಸ್ವಾರ್ಥಪ್ರೇರಿತರಾಗಿ, ಸ್ವಾಭಿಮಾನರಹಿತರಾಗಿದ್ದರು. ಜನರನ್ನು ಜಾಗೃತಿಗೊಳಿಸುವ ಕೆಲಸ ಅತ್ಯಂತ ಮಹತ್ವದ್ದೆಂದು ಮಾಧವನಿಗೆ ಅರಿವಾಯಿತು.  ಬಹುಷಃ ಅದೇ ಮನೋಭಾವ ಇಂದಿಗೂ ನಮ್ಮ ಜನರಲ್ಲಿ ಕಂಡು ಬರುತ್ತಿದೆ. ಉಗ್ರಗಾಮಿಗಳಿಂದ ಭಯೋತ್ಪಾದಕ ಚಟುವಟಿಕೆಗಳು ನಡೆದಾಗ ಕೆಲವು ಪ್ರತಿಭಟನಾತ್ಮಕ ಹೇಳಿಕೆಗಳನ್ನು ನೀಡಿ, ನಂತರದಲ್ಲಿ ಮರೆತೇ ಬಿಡುವ ಸ್ವಭಾವ ಕಂಡುಬರುತ್ತಿಲ್ಲವೇ?
     ದಕ್ಷಿಣ ಭಾರತದಲ್ಲಿ ಆಗ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಜನರು ನರಸತ್ತವರಂತಿದ್ದರು. ದಾಳಿಕೋರರು ಎಗ್ಗಿಲ್ಲದೆ ಲೂಟಿ, ಆಕ್ರಮಣ, ಕೊಲೆ, ಅತ್ಯಾಚಾರ, ವಿಗ್ರಹಭಂಜನಗಳಲ್ಲಿ ತೊಡಗಿದ್ದರು. ಪ್ರತಿಭಟನೆ ಅತ್ಯಂತ ಕ್ಷೀಣ ಸ್ತರದಲ್ಲಿತ್ತು. ಬೆಂದ ಮನೆಯಲ್ಲಿ ಗಳ ಹಿರಿಯುವ ಮನೋಭಾವದವರಿಂದಾಗಿ ರಾಜಸತ್ತೆಗಳು ದುರ್ಬಲವಾಗಿದ್ದವು. ಇದ್ದಿದ್ದರಲ್ಲಿ ಕರ್ನಾಟಕದವರು ಪ್ರತಿರೋಧ ಒಡ್ಡಿದ್ದರು. ಒಂದು ಕಾಲದಲ್ಲಿ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕದಂಬರು, ಹೊಯ್ಸಳರು ತಮ್ಮ ರಾಜ್ಯವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದರು. ಹೊಸ ರಾಜ್ಯ ಸ್ಥಾಪಿಸುವ ಮಾಧವನ ಕನಸಿಗೆ ಬೆಂಬಲಿಸುವ ಜನರ ಕೊರತೆ, ಸಂಪತ್ತಿನ ಕೊರತೆ ಇತ್ತು. ಸ್ಫೂರ್ತಿ ನೀಡುವ ಕೆಲಸಕ್ಕೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಂಡು, ಅದು ತಮ್ಮ ಕೆಲಸವಲ್ಲವೆಂಬಂತೆ ಸುಮ್ಮನಾಗುತ್ತಿದ್ದರಷ್ಟೆ. ಆದರೆ ಮಾಧವ ನಿರಾಶನಾಗಲಿಲ್ಲ. ಗುರಿ ಸಾಧನೆಗಾಗಿ ಬಲ ಕ್ರೋಢೀಕರಿಸಲು ತಪಸ್ಸು ಮಾಡಬೇಕೆಂದುಕೊಂಡು, ಸೂಕ್ತ ಸ್ಥಳದ ಆಯ್ಕೆಗಾಗಿ ದೇಶದ ಹಲವೆಡೆ ಸುತ್ತಿ ಕೊನೆಗೆ ಪಂಪಾಕ್ಷೇತ್ರಕ್ಕೇ ವಾಪಸು ಬಂದ. ಈ ವೇಳೆಗೆ ಪತ್ನಿ ವೈತಿಹೋತ್ರಿ ಸಹ ನಿಧನಳಾದದ್ದು, ವಿಧಿಯೇ ಅವನನ್ನು ಪ್ರಾಪಂಚಿಕ ಸಂಗತಿಗಳಿಂದ ದೂರ ಮಾಡಿದಂತಾಗಿತ್ತು. ಪಂಪಾಕ್ಷೇತ್ರದ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ, ಹೇಮಕೂಟದಲ್ಲಿ ತಪಸ್ಸಿಗೆ ತೊಡಗಿದ. ಆಹಾರದ ಪರಿವೆಯಿಲ್ಲದಂತೆ ನಡೆಸಿದ ತಪಸ್ಸಿನ ಫಲವಾಗಿ ತಾಯಿ ಭುವನೇಶ್ವರಿಯ ಅಭಯ ಸಿಕ್ಕಿತು. ಅಂತರಂಗಕ್ಕೆ ದೊರೆತ ಆದೇಶದಂತೆ ಸಂನ್ಯಾಸಿಯಾಗಲು ನಿರ್ಧರಿಸಿದ ಮಾಧವ ಶೃಂಗೇರಿಯ ೧೧ನೆಯ ಗುರುಗಳಾದ ಶ್ರೀ ಭಾರತೀಕೃಷ್ಣ ತೀರ್ಥರಿಂದ ದೀಕ್ಷೆ ಪಡೆದು ವಿದ್ಯಾರಣ್ಯರೆಂಬ ಹೆಸರು ಪಡೆದು ಕಾಷಾಯ ವಸ್ತ್ರಧಾರಿಯಾದರು. ನಂತರದಲ್ಲಿ ಪಂಪಾಕ್ಷೇತ್ರದಲ್ಲಿ ಪ್ರತಿನಿತ್ಯ ವಿರೂಪಾಕ್ಷನನ್ನು ಆರಾಧಿಸುತ್ತಾ ತಮ್ಮ ಕನಸು ನನಸು ಮಾಡಬಲ್ಲ ವ್ಯಕ್ತಿಗಳಿಗೆ ನಿರೀಕ್ಷಿಸುತ್ತಾ ದಿನ ಕಳೆಯುತ್ತಿದ್ದರು. ಒಂದೊಂದು ದಿನ ಕಳೆದಾಗಲೂ, 'ಇಂದಿನ ದಿನ ವ್ಯರ್ಥವಾಯಿತಲ್ಲಾ' ಎಂದು ಕೊರಗುತ್ತಿದ್ದರು. 
   ಕೊನೆಗೊಮ್ಮೆ ನಿರೀಕ್ಷಿತ ಘಳಿಗೆ ಬಂದೇಬಿಟ್ಟಿತು. ಹರಿಹರ ಮತ್ತು ಬುಕ್ಕರೆಂಬ ಇಬ್ಬರು ಸೋದರರು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿಬಂದರು. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕರು. ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಮತ್ತು ಬರ್ಬರವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕನ ಹುಚ್ಚು ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಹರಿಹರ, ಬುಕ್ಕರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲಾಗಿತ್ತಂದೂ, ವಿದ್ಯಾರಣ್ಯರು ಅವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿದರೆಂದೂ ಐತಿಹ್ಯವಿದೆ. ತುಘಲಕ್ ಆನೆಗೊಂದಿಯ ರಾಜ ಜಂಬುಕೇಶ್ವರರಾಯನನ್ನು ಸೋಲಿಸಿ, ಅವನನ್ನು ಅವನ ಅರಮನೆಯಲ್ಲೇ ಬಂದಿಯಾಗಿರಿಸಿ, ತನ್ನ ಪ್ರತಿನಿಧಿಯಾಗಿ ಮಲಿಕ್ ನಾಯಬ್ ಎನ್ನುವವನನ್ನು ನೇಮಿಸಿ ಅವನ ಮುಖಾಂತರ ಆನೆಗೊಂದಿಯ ರಾಜ್ಯಭಾರ ಮಾಡುತ್ತಿದ್ದನು. ವಿದ್ಯಾರಣ್ಯರ ಸೂಚನೆ ಅನುಸರಿಸಿ, ಹರಿಹರ, ಬುಕ್ಕರು ಕೆಲವು ದೇಶಪ್ರೇಮಿ ಯುವಕರನ್ನು ಜೊತೆ ಮಾಡಿಕೊಂಡು ಜಾಣತನದಿಂದ ಆನೆಗೊಂದಿಯ ಅರಮನೆ ಪ್ರವೇಶಿಸಿ ಮಲಿಕ್ ನಾಯಬ್ ಪಾನಮತ್ತನಾಗಿದ್ದ ಸಂದರ್ಭ ಉಪಯೋಗಿಸಿಕೊಂಡು, ಅವನನ್ನೇ ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದರು. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು. 
ಚಿತ್ರಕೃಪೆ: ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನ
     ಈ ವಿಜಯದಿಂದ ಉತ್ತೇಜಿತರಾದ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಒಂದು ಸೂಕ್ತ ಸ್ಥಳವನ್ನು ಆರಿಸಿ ಕ್ರಿ.ಶ. ೧೩೩೬ರಲ್ಲಿ ಹೊಸ ನಗರದ ಸ್ಥಾಪನೆಗೆ ಭೂಮಿಪೂಜೆ ಮಾಡಿದರು. ೧೭ನೆಯ ಶತಮಾನದ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ಈ ಸ್ಥಳದ ಮಹಿಮೆ ಕುರಿತು ಹೀಗೆ ಹೇಳಲಾಗಿದೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . '  ಆ ಸಂದರ್ಭದಲ್ಲಿ ಭೂಗತ ನಿಧಿಯೂ ದೊರಕಿ ಕೆಲಸ ಸುಸೂತ್ರವಾಗಿ ಮುಂದುವರೆಯಲು ಅನುಕೂಲವಾಯಿತು. ಹರಿಹರ, ಬುಕ್ಕರು ಆ ನಗರಕ್ಕೆ ವಿದ್ಯಾನಗರ ಎಂದು ಹೆಸರಿಡಬಯಸಿದರೂ, ವಿದ್ಯಾರಣ್ಯರು ಅದಕ್ಕೆ ವಿಜಯನಗರವೆಂಬ ಹೆಸರು ಕೊಟ್ಟರು. ವಿಜಯನಗರ ಸಂಸ್ಥಾನ ಚಿಗುರೊಡೆಯಿತು. ಶ್ರೀ ವಿರೂಪಾಕ್ಷ ಎಂಬ ಅಂಕಿತವಿರುವ ಕ್ರಿ.ಶ. ೧೩೩೬ರ ತಾಮ್ರದ ದತ್ತಿಶಾಸನದಲ್ಲಿ ವಿದ್ಯಾರಣ್ಯರ ಸೂಚನೆಯಂತೆ ಹರಿಹರನನ್ನು ಸಿಂಹಾಸನದ ಮೇಲೆ ಕೂರಿಸಿದ ಉಲ್ಲೇಖವಿದೆ. ಹರಿಹರನಿಗೆ ಆತ್ಮವಿದ್ಯೆ ಬೋಧಿಸಿದ ವಿದ್ಯಾರಣ್ಯರು ಅವನಿಗೆ ಶ್ರೀಮದ್ ರಾಜಾಧಿರಾಜ ಪರಮೇಶ್ವರ, ಅಪರಿಮಿತ ಪ್ರತಾಪವೀರ ಮತ್ತು ನರಪತಿ ಎಂಬ ಬಿರುದುಗಳನ್ನಿತ್ತರೆನ್ನಲಾಗಿದೆ. ಆಗಿನಿಂದ ಶೃಂಗೇರಿಯ ಗುರುಗಳನ್ನು 'ಕರ್ಣಾಟಕ ಸಿಂಹಾಸನ ಪ್ರತಿಷ್ಟಾಪನಾಚಾರ್ಯ' ಎಂದೂ ಸಂಬೋಧಿಸಲಾಗುತ್ತಿದೆ. ಈ ವಿಜಯನಗರ ಮುಂದೆ ೬೪ ಚದರ ಮೈಲುಗಳವರೆಗೆ ಬೆಳೆದಿದ್ದೇ ಅಲ್ಲದೆ ಮುಂದೆ ೨೫೦ ವರ್ಷಗಳವರೆಗೆ ಕರ್ನಾಟಕದ ಹೆಮ್ಮೆಯ ರಾಜಧಾನಿಯಾಗಿ ಮೆರೆಯಿತು.
     ವಿದ್ಯಾರಣ್ಯರು ಪಂಚಾದಶಿ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶಿಕಾ, ಪರಾಶರ ಮಾಧವೀಯ, ಸಂಗೀತಸಾರ, ಮುಂತಾದ ಕೃತಿಗಳನ್ನು ರಚಿಸಿದರು. ಪಂಚಾದಶಿ ಮತ್ತು ಜೀವನ್ಮುಕ್ತಿ ವಿವೇಕ ಕೃತಿಗಳು ಸಾಧಕರಿಗೆ ಉಪಯುಕ್ತ ಮತ್ತು ಮಾರ್ಗದರ್ಶಿಯಾಗಿವೆ. ಶೃಂಗೇರಿ ಶಾರದಾಪೀಠದ ಗುರುಗಳಾದ ಶ್ರೀ ಭಾರತೀ ಕೃಷ್ಣತೀರ್ಥರ ನಿಧನಾನಂತರದಲ್ಲಿ ಕ್ರಿ.ಶ. ೧೩೮೦ರಲ್ಲಿ ೧೨ನೆಯ ಗುರುಗಳಾಗಿ ೧೩೮೬ರವರೆಗೆ ಶಾರದಾ ಪೀಠದ ಮತ್ತು ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನದ ಮುಖ್ಯಸ್ಥರಾಗಿದ್ದರು. ೧೧೮ನೆಯ ವಯಸ್ಸಿನಲ್ಲಿ ಇಹಯಾತ್ರೆ ಮುಗಿಸಿದ ಅವರು ಜೀವನವನ್ನು ಸಾರ್ಥಕರೀತಿಯಲ್ಲಿ ನಡೆಸಿದ, ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ, ಅಂದುಕೊಂಡದ್ದನ್ನು ಸಾಧಿಸಿದ ಧೀರ ಸಂನ್ಯಾಸಿ. 
ಅವಿದ್ಯಾರಣ್ಯಕಾಂತಾರೇ ಭ್ರಮತಾಮ್ ಪ್ರಾಣಿನಾಂ ಸದಾ |
ವಿದ್ಯಾಮಾರ್ಗೋಪದೇಶ್ಟಂ ವಿದ್ಯಾರಣ್ಯಗುರುಮ್ ಶ್ರಯೇ ||
     ಮೌಢ್ಯದ ದಟ್ಟಕಾಡಿನಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವ ಜೀವಾತ್ಮರಿಗೆ ಜ್ಞಾನದ ದಾರಿ ತೋರಿಸುವ ಗುರು ವಿದ್ಯಾರಣ್ಯರಿಗೆ ನಮನಗಳು.
     ಹಣಬಲ, ತೋಳ್ಬಲ, ಜಾತಿಬಲ, ಅಧಿಕಾರಬಲ, ಒಡೆದು ಆಳುವ ನೀತಿಯ ಬಲದಿಂದ ಅಧಿಕಾರಕ್ಕೇರಿದ, ಸ್ವಾರ್ಥವೇ ಪ್ರಧಾನವಾದ ರಾಜಕಾರಣಿಗಳಿಂದ, ನೈತಿಕ ಶಿಕ್ಷಣವನ್ನು ಇಲ್ಲವಾಗಿಸಿ ಮೌಲ್ಯಗಳನ್ನು ಗಾಳಿಗೆ ತೂರುವ ಕೇವಲ ಹಣಕೇಂದ್ರಿತ ಶಿಕ್ಷಣ ಪದ್ಧತಿಯಿಂದ, ಭ್ರಷ್ಟಾಚಾರದ ಕೂಪದಿಂದ, ಅನ್ಯಾಯ, ಅತ್ಯಾಚಾರಗಳಿಂದ ದೇಶವನ್ನು ರಕ್ಷಿಸಿ ಮೇಲೆತ್ತಬಲ್ಲ ವಿದ್ಯಾರಣ್ಯರಂತಹ ಧೀಮಂತ ಮಾರ್ಗದರ್ಶಕರ ಅಗತ್ಯ ದೇಶಕ್ಕೆ ಇಂದು ತುರ್ತಾಗಿ ಬೇಕಾಗಿದೆ. ನವಯುವಕ-ಯುವತಿಯರೇ, ನೀವೇ ಏಕೆ ಅಭಿನವ ವಿದ್ಯಾರಣ್ಯರುಗಳಾಗಬಾರದು? ವಿದ್ಯಾರಣ್ಯರು ವಿಜಯನಗರ ಸಂಸ್ಥಾನಕ್ಕೆ ನಾಂದಿ ಹಾಡಿದಂತೆ ನೀವೇ ಏಕೆ ನವಭಾರತ ನಿರ್ಮಾಣಕ್ಕೆ ಅಡಿಗಲ್ಲುಗಳಾಗಬಾರದು? 
-ಕ.ವೆಂ.ನಾಗರಾಜ್.
**********************
ಆಧಾರ ಮತ್ತು ಪೂರಕ ಮಾಹಿತಿಗಳ ಸಂಗ್ರಹ:
1. ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'
2. http://www.sringeri.net 
3.ಮೋಹಿನಿಪುರಾಣಿಕರ  http://narayankripa.blogspot.in/2012/04/swami-vidyaranya-inspiration-for-all.html 
4. http://www.freeindia.org/biographies/sages/vidyaranya/index.htm 
5. http://www.hampividyaranyamutt.org

ಸೋಮವಾರ, ಜನವರಿ 14, 2013

ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ






"ಬೈ ಡ್ಯಾಡ್, ಬೈ ಮಾಮ್, ಬೈ ತಾತ್"
     ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ ಕೊಟ್ಟಿದ್ದ ವಿವರಣೆ: "ತಾತಾ, ಗ್ರ್ಯಾಂಡ್ ಫಾದರ್, ಗ್ರ್ಯಾಂಡ್ ಪಾ ಈಸ್ ಟೂ ಲಾಂಗ್. ಸೋ ಐ ಕಾಲ್ ಯು ತಾತ್!" ಲಕ್ಷಗಟ್ಟಲೆ ಡೊನೇಶನ್ ಕೊಟ್ಟು ಸೇರಿಸಿದ್ದ ಆ ಪ್ರತಿಷ್ಠಿತ  ಶಾಲೆಯಲ್ಲಿ ಕನ್ನಡ ಮಾತನಾಡುವಂತಿರಲಿಲ್ಲ. ಎಲ್ಲಾ ಇಂಗ್ಲಿಷಿನಲ್ಲೇ ಆಗಬೇಕು. ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಮಕ್ಕಳು ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದವು. ಈಗ ಆ ಮಕ್ಕಳೂ ದೊಡ್ಡವರಾಗಿದ್ದಾರೆ. ಈಗ ಎಲ್ಲರೂ, ಎಲ್ಲೆಲ್ಲೂ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅವಿದ್ಯಾವಂತರೂ ಸಹ ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಅದೇ ಕನ್ನಡ ಮಾತನಾಡಬೇಕಾದರೆ ಕನ್ನಡಿಗರೇ ಬಹಳ ಕಷ್ಟಪಡುತ್ತಾರೆ. ಕನ್ನಡ ಬಾರದಿದ್ದವರು ಮಾತನಾಡುವ ಕನ್ನಡದ ಉಚ್ಛಾರದಂತೆ ಕನ್ನಡಿಗರೇ ಮಾತನಾಡುವುದನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಹಿಂದೆ ಲಾರ್ಡ್ ಮೆಕಾಲೆ ಹೇಳಿದ್ದ, "ಈ ರೀತಿಯ ವಿದ್ಯಾಭ್ಯಾಸ ಕ್ರಮದಿಂದ ಇನ್ನು ಕೆಲವು ದಶಕಗಳಲ್ಲಿ ಇಂಡಿಯಾದಲ್ಲಿ ಕರಿಚರ್ಮದ ಬ್ರಿಟಿಷರು ಇರುತ್ತಾರೆ" ಎಂಬ ಮಾತು ನಿಜವಾಗಿದೆ. ಆದರೆ ಯಾವ ದೇಶದ ಗುಲಾಮಗಿರಿಯ ಕಾಣಿಕೆಯಾದ ಇಂಗ್ಲಿಷನ್ನು ಹೆಮ್ಮೆಯಿಂದ ಆಡುತ್ತೇವೋ, ಆ ದೇಶದ ರಾಜಧಾನಿ ಲಂಡನ್ನಿಗೆ ಸಂಬಂಧಿಸಿದ ಸಂಗತಿಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
     ಅದು ಲಂಡನ್ನಿನ ಸೈಂಟ್ ಜೇಮ್ಸ್ ಜೂನಿಯರ್ ಸ್ಕೂಲ್. ಅಲ್ಲಿ ೧೯೭೫ರಿಂದಲೂ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಇಂಗ್ಲೆಂಡಿನಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಗ್ಲಿಷ್ ಮಾತನಾಡುವವರಿಗೆ ಸಂಸ್ಕೃತದ ಉಚ್ಛಾರ ಕಷ್ಟವಾದರೂ ಅಲ್ಲಿ ಸಂಸ್ಕೃತ ಕಲಿಯಲು ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಂಸ್ಕೃತ ಸಂಭಾಷಣಾ ಸ್ಪರ್ಧೆಯಲ್ಲಿ ತಮ್ಮ ಪುಟಾಣಿಗಳು ಭಾಗವಹಿಸಿ, ವೇದ ಮಂತ್ರ, ಉಪನಿಷತ್ತಿನ ಶ್ಲೋಕಗಳನ್ನು ಹೇಳುತ್ತಿದ್ದರೆ ಅದನ್ನು ಕೇಳುವ ಪೋಷಕರು, ತಂದೆ-ತಾಯಿಗಳು ಹೆಮ್ಮೆಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಸಂಸ್ಕೃತ ವಿಭಾಗದ ಮುಖ್ಯಸ್ಥ ವಾರ್ವಿಕ್ ಜೆಸೊಪ್, "ಸಂಸ್ಕೃತ ಭಾಷೆ ಅದ್ಭುತವಾಗಿದೆ. ಸಂಸ್ಕೃತದ ಸಾಹಿತ್ಯ ಸ್ಫೂರ್ತಿದಾಯಕವಾಗಿದೆ ಮತ್ತು ತತ್ವಾದರ್ಶಗಳಿಂದ ಕೂಡಿದೆ. ಅದಕ್ಕಾಗಿ ಅದನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ" ಎನ್ನುತ್ತಾರೆ. ಇದೇ ಮಾತನ್ನು ಇಲ್ಲಿ ಯಾರಾದರೂ ಹೇಳಿದರೆ ವಿಚಾರವಂತರೆಂದು ಹಣೆಪಟ್ಟಿ ಹಚ್ಚಿಕೊಂಡವರು ಏನು ಹೇಳಬಹುದೆಂಬುದು ನಿಮಗೇ ಬಿಟ್ಟ ವಿಷಯ. ಸಂಸ್ಕೃತ ಕಲಿಯುವ ಮಕ್ಕಳನ್ನು ಕೇಳಿದರೆ ಅವರು ಹೇಳುವುದೇನೆಂದರೆ, "ಅದು ನಮಗೆ ಬಹಳ ಖುಷಿ ಕೊಡುತ್ತದೆ. ಅದು ನಮ್ಮ ಮೆಚ್ಚಿನ ಭಾಷೆ!"
     ಸಂಸ್ಕೃತ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹೃದಯದ ಮಾತಿದು: "ಸಂಸ್ಕೃತ ಕಲಿಯುವುದು ಒಂದು ವಿಶೇಷ ಅನುಭವ. ಅದನ್ನು ಕಲಿಯಲು ನನಗೆ ಬಹಳ ಆನಂದವಾಗುತ್ತದೆ, ಏಕೆಂದರೆ ಸಂಸ್ಕೃತ ಕಲಿಸುತ್ತಿರುವ ಕೆಲವೇ ಶಾಲೆಗಳಿದ್ದು, ಅದರ ಪೈಕಿ ನಾವೂ ಒಬ್ಬರು ಎಂಬುದು. ಅದು ನಮಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿದೆ. ನಮ್ಮ ಉಚ್ಚಾರಣೆ ಸುಧಾರಿಸುತ್ತದೆ ಮತ್ತು ಪದಸಂಪತ್ತನ್ನು ಹೆಚ್ಚಿಸುತ್ತದೆ. ಪಾರಮಾರ್ಥಿಕ ಅನುಕೂಲಗಳೂ ಇವೆ. ರಾಮಾಯಣ ಮತ್ತು ಮಹಾಭಾರತದಂತಹ ಹಲವಾರು ಕಥೆಗಳಿದ್ದು, ಹಿಂದೆ ಪ್ರಪಂಚದಲ್ಲಿ ಏನೆಲ್ಲಾ ಆಯಿತು ಎಂಬುದನ್ನೂ ತಿಳಿಯಲು ಸಹಾಯ ಮಾಡುತ್ತದೆ."
     ಈ ಶಾಲೆಯಲ್ಲಿ ೪ ರಿಂದ ೧೮ ವರ್ಷಗಳವರೆಗೆ ಸಂಸ್ಕೃತ ಕಲಿಯಲು ಸೌಲಭ್ಯವಿದೆ. ನಂತರದಲ್ಲಿ ಪ್ರತಿಷ್ಠಿತ ಶಾಲೆಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಎಡಿನ್ ಬರೋ ಮುಂತಾದ ಶಾಲೆಗಳಲ್ಲಿ ಮುಂದುವರೆದ ಸಂಸ್ಕೃತ ವಿದ್ಯಾಭಾಸ ಮಾಡಬಹುದಾಗಿದೆ. ಲಂಡನ್ ಶಾಲೆಗೆ ಸಂಬಂಧಿಸಿದ ಒಂದು ಕಿರುವಿಡಿಯೋ ಅನ್ನು ಈ ಲಿಂಕಿನಲ್ಲಿ ನೋಡಬಹುದು.
     ನಾನು ಕೇವಲ ಇಂಗ್ಲೆಂಡಿನ ಉದಾಹರಣೆ ನೀಡಿದ್ದರೂ, ಅಮೆರಿಕಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಸಂಸ್ಕೃತ ಕಲಿಕೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಲ್ಲ. ಊರು ಕೊಳ್ಳೆ ಹೋದ ನಂತರದಲ್ಲಿ ನಮ್ಮವರಿಗೆ ಎಚ್ಚರವಾಗಬಹುದು.
-ಕ.ವೆಂ.ನಾಗರಾಜ್.


ಭಾನುವಾರ, ಜನವರಿ 13, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು


     ಪಂ. ಸುಧಾಕರ ಚತುರ್ವೇದಿಯವರು ಯಜ್ಞಗಳ ಕುರಿತು ಹೇಳಿರುವ ಈ ವಿಚಾರಯೋಗ್ಯ ಸಂಗತಿಗಳು ತಪ್ಪು ಕಲ್ಪನೆಗಳನ್ನು ದೂರ ಮಾಡದೇ ಇರಲಾರವು:
     ವೇದಗಳಲ್ಲಿ 'ಯಜ್ಞ' ಎಂಬ ಶಬ್ದಕ್ಕೆ ಕೊಟ್ಟಿರುವಷ್ಟು ಪ್ರಾಧಾನ್ಯವನ್ನು ಪ್ರಾಯಶಃ ಬೇರಾವ ಶಬ್ದಕ್ಕೂ ಕೊಟ್ಟಿಲ್ಲ. ಯಜ್ಞ ಸಂಸ್ಥೆ ಅತಿವಿಶಾಲ. ಧರ್ಮದ ತತ್ವಗಳು ವಿಚಾರವಾದರೆ, ಅದರ ಆಚಾರ, ಅಂದರೆ ಕ್ರಿಯಾತ್ಮಕ ರೂಪ ಯಜ್ಞ. ಯಜ್ಞ ಒಂದು ಬಗೆಯಲ್ಲ, ಒಂದು ರೂಪವಲ್ಲ, ಮಾನವನ ಸಂಪೂರ್ಣ ಜೀವನವೇ ಯಜ್ಞರೂಪವಾಗಿರಬೇಕೆಂದು ವೇದಾದೇಶವಿದೆ. ಯಜ್ಞದ ಮಹಿಮೆ ಕುರಿತು ವೇದ ಹೇಳುತ್ತದೆ:-

ಊರ್ಜೋ ಭಾಗೋ ನಿಹಿತೋ ಯಃ ಪುರಾ ವ ಋಪ್ರಶಿಷ್ಟಾಪ ಆ ಭರೈತಾ ||
ಅಯಂ ಯಜ್ಞೋ ಗಾತುವಿನ್ನಾಥವಿತ್ಪ್ರಜಾವಿದುಗ್ರಃ ಪಶುವಿದ್ವೀರವಿದ್ವೋ ಅಸ್ತು || (ಅಥರ್ವ.೧೧.೧.೧೫.)
     ಮಾನವರೇ, [ಪುರಾ ವಃ] ನಿಮ್ಮ ಮುಂದೆ, [ಯಃ ಊರ್ಜಃ ಭಾಗಃ ನಿಹಿತಃ] ಯಾವ ಶಕ್ತಿಯ ಹಾಗೂ ಭೋಗ್ಯಪದಾರ್ಥದ ಭಾಗ ಅಥವಾ ಭಾಗ್ಯವು ಮಂಡಿಸಲ್ಪಟ್ಟಿದೆಯೋ, [ಏತಾಃ ಋಪ್ರತಿಷ್ಠಾ ಅಪಃ] ಅಂತಹ ಈ ತತ್ವದ್ರಷ್ಟ್ರಗಳಿಂದ ಆದೇಶಿಸಲ್ಪಟ್ಟ ಶುಭಕರ್ಮಗಳನ್ನು, [ಭರ] ನಿರ್ವಹಿಸಿರಿ. [ಅಯಂ ಯಜ್ಞಃ] ಈ ಯಜ್ಞವು, [ವಃ] ನಿಮಗೆ [ಗಾತುವಿತ್] ಪಥಪ್ರದರ್ಶಕವೂ, [ನಾಥವಿತ್] ವಿಶ್ವನಾಥನಾದ ಪ್ರಭುವನ್ನೂ, ಐಶ್ವರ್ಯವನ್ನೂ ಸಾಧಿಸಿಕೊಡುವಂತಹುದೂ, [ಪ್ರಜಾವಿತ್] ಉತ್ತಮ ಸಂತತಿದಾಯಕವೂ [ಪಶುವಿತ್] ಪಶುಸಂಪದ್ದಾಯಕವೂ, [ವೀರವತ್] ಪ್ರಾಣಶಕ್ತಿದಾಯಕವೂ, [ಉಗ್ರಃ] ಪ್ರಚಂಡಶಕ್ತಿಯೂ, [ಅಸ್ತು] ಆಗಿ ಪರಿಣಮಿಸಲಿ.
     ನಿಜವಾಗಿ ಯಜ್ಞದಿಂದ ಲಭಿಸದ ಭಾಗ್ಯವಿಲ್ಲ. ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ || (ಯಜು.೧.೧.) [ಸವಿತಾ ದೇವಃ] ಪ್ರೇರಕನಾದ ಜ್ಯೋತಿಸ್ವರೂಪ ಪ್ರಭುವು, [ವಃ] ನಿಮ್ಮನ್ನು, [ಶ್ರೇಷ್ಠತಮಾಯ ಕರ್ಮಣೇ] ಶ್ರೇಷ್ಠತಮ ಕರ್ಮಕ್ಕೆ, [ಪ್ರಾರ್ಪಯತು] ಪ್ರೇರೇಪಿಸಲಿ. ಯಜ್ಞಃ ಶ್ರೇಷ್ಠತಮಂ ಕರ್ಮ || - ಯಜ್ಞವೇ ಶ್ರೇಷ್ಠತಮ ಕರ್ಮ ಎಂಬ ಉಕ್ತಿಯ ಬೆಳಕಿನಲ್ಲಿ, ಈ ವಾಕ್ಯ ಚೆನ್ನಾಗಿ ಅರ್ಥವಾಗುತ್ತದೆ. ಸಮಸ್ತ ಶ್ರೇಷ್ಠತಮ ಕರ್ಮಗಳೂ ಯಜ್ಞವೇ ಎಂದ ಮೇಲೆ, ಯಜ್ಞ, ಧರ್ಮದ ಕ್ರಿಯಾತ್ಮಕ ರೂಪ ಎನ್ನುವುದು ಸ್ಪಷ್ಟ. ಸತ್ಯ ಎನ್ನುವುದು ಧರ್ಮವಾದರೆ, ಸತ್ಯಮಯ ವ್ಯವಹಾರ ಯಜ್ಞ. ಅಹಿಂಸೆ ಎನ್ನುವುದು ಧರ್ಮವಾದರೆ, ಅಹಿಂಸಾಮಯ ವ್ಯವಹಾರ ಯಜ್ಞ, ಹೀಗೆ, ಎಲ್ಲ ಧರ್ಮತತ್ತ್ವಗಳ ಅನುಷ್ಠಾನವೂ ಯಜ್ಞವೇ.
     ಆದರೆ, ದುರ್ಭಾಗ್ಯದಿಂದ, ಯಜ್ಞವೆಂಬ ಪವಿತ್ರ ಸಂಸ್ಥೆ, ಮಧ್ಯಯುಗದಲ್ಲಿ ಪ್ರಾಣಿಬಲಿಯಂತಹ ಕ್ರೂರ ಕರ್ಮದೊಂದಿಗೆ ಜೋಡಿಸಲ್ಪಟ್ಟು, ಅಶ್ವಮೇಧ, ಗೋಮೇಧ, ಮೊದಲಾದ ಹೆಸರುಗಳಿಂದ ಆಚರಿಸಲ್ಪಡಲಾರಂಭವಾಯಿತು. ವೇದಧರ್ಮ, ಪರಮ ಅಹಿಂಸಾಧರ್ಮ. ಯಜ್ಞ ಎಂಬ ಶಬ್ದದ ಪರ್ಯಾಯವಾಚಕವಾದ "ಅಧ್ವರ" ಎಂಬ ವೈದಿಕ ಶಬ್ದಕ್ಕೆ "ಅಹಿಂಸಾಮಯ" ಎಂಬ ಪರ್ಯಾಯ ಅರ್ಥವೇ ಇದೆ. ಋಗ್ವೇದದಲ್ಲಿ, 

ಅಗ್ನೇ ಯಂ ಯಜ್ಞಮದ್ವರಂ ವಿಶ್ವತಃ ಪರಿಭೂರಸಿ | ಸ ಇದ್ ದೇವೇಷು ಗಚ್ಛತಿ || (ಋಕ್.೧.೧.೪)
[ಅಗ್ನೇ] ಓ ಜ್ಯೋತಿರ್ಮಯ, [ಯಂ ಅಧ್ವರಂ ಯಜ್ಞಮ್] ಯಾವ ಹಿಂಸಾರಹಿತವಾದ ಯಜ್ಞವನ್ನು, [ತ್ವಂ ವಿಸ್ವತಃ ಪರಿಭೂಃ ಅಸಿ] ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತಿಯೋ, [ಸ ಇತ್] ಅದೇ, [ದೇವೇಷು ಗಚ್ಛತಿ] ದಿವ್ಯತತ್ತ್ವಗಳನ್ನು ಸೇರುತ್ತದೆ ಅಥವಾ ವಿದ್ವಜ್ಜನರ ನಡುವೆ ಆದರಕ್ಕೆ ಪಾತ್ರವಾಗುತ್ತದೆ. ಯಜುರ್ವೇದದಲ್ಲಿ, ಯಜಮಾನಸ್ಯ ಪಶೂನ್ವಾಹಿ || (ಯಜು.೧.೧.)- ಯಜ್ಞಕರ್ತನ ಪಶುಗಳನ್ನು ಪಾಲಿಸು; ಅಶ್ವಂ ಮಾ ಹಿಂಸೀಃ || (ಯಜು.೧೩.೪೨.) -ಕುದುರೆಯನ್ನು ಹಿಂಸಿಸಬೇಡ; ಗಾಂ ಮಾ ಹಿಂಸೀಃ|| - ಹಸುವನ್ನು ಹಿಂಸಿಸಬೇಡ; ಅವಿಂ ಮಾ ಹಿಂಸೀಃ|| (ಯಜು.೧೩.೪೪.) - ಮೇಕೆಯನ್ನು ಹಿಂಸಿಸಬೇಡ; ಇಮಂ ಮಾ ಹಿಂಸೀರ್ದ್ವಿಪಾದಂ ಪಶುಮ್|| (ಯಜು.೧೩.೪೭.) ದ್ವಿಪಾದ ಪಶುವನ್ನು ಹಿಂಸಿಸಬೇಡ; ಇಮಂ ಮಾ ಹಿಂಸೀರೇಕ ಶಘಂ ಪಶುಮ್|| (ಯಜು.೧೩.೪೮.) - ಈ ಸೀಳಿಲ್ಲದ ಗೊರಸಿನ ಪಶುವನ್ನು ಕೊಲ್ಲಬೇಡ; ಉತ್ಸಂ ಮಾ ಹಿಂಸೀ|| (ಯಜು.೧೩.೪೯.) ಎತ್ತನ್ನು ಹಿಂಸಿಸಬೇಡ; ಊರ್ಣಾಯುಂ ಮಾ ಹಿಂಸೀ|| (ಯಜು.೧೩.೫೦.) - ಕುರಿಯನ್ನು ಹಿಂಸಿಸಬೇಡ - ಹೀಗೆ ಯಜುರ್ವೇದದಲ್ಲಿ ಅತಿ ಸ್ಪಷ್ಟವಾದ ಆದೇಶಗಳಿವೆ. ಯಾವುದೇ ಪ್ರಾಣಿಯನ್ನು ಕೊಲ್ಲುವುದೂ ತಪ್ಪೇ. ಅನಾಗೋ ಹತ್ಯಾ ವೈ ಭೀಮಾ|| (ಅಥರ್ವ.೧೦.೧.೨೯.) - ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು ಭಯಂಕರ ಪಾಪ ಎನ್ನುತ್ತಿದೆ ಅಥರ್ವ. ಹೀಗಿರುವಾಗ, ಯಜ್ಞದಂತಹ ಪವಿತ್ರಕರ್ಮದಲ್ಲಿ ರಕ್ತ ಹರಿಸುವುದು ಎಂತಹ ಘೋರಪಾತಕ?!
     ಪ್ರಾಣಿಬಲಿ ವೈದಿಕ ಧರ್ಮದ ತತ್ವವೇ ಅಲ್ಲ. ಗ್ರೀಕರು, ರೋಮನರು, ಮೊದಲಾದವರ ಸಂಪರ್ಕದಿಂದ ಭಾರತಕ್ಕೆ ಬಂದ ಅಭಿಶಾಪವದು. ವೈದಿಕ ಶಬ್ದಗಳ ಹಾಗೂ ಪಾರಿಭಾಕ ಜ್ಞಾನವಿಲ್ಲದೆ, ಅರ್ಥಕ್ಕೆ ಅನರ್ಥ ಮಾಡಿ, ಬ್ರಾಹ್ಮಣಗ್ರಂಥಗಳ ಕಾಲಕ್ಕೆ ರಕ್ತಪ್ರವಾಹ ಯಜ್ಞದ ಅಭಿನ್ನ ಅಂಗ ಎಂಬ ಪರಿಸ್ಥಿತಿಯನ್ನು ತಂದಿಟ್ಟರು ವಾಮಪಂಥದ ವಿದ್ವಾಂಸರು. ಅಶ್ವಮೇಧ, ಗೋಮೇಧ, ಅಜಮೇಧಾದಿ ಯಜ್ಞಗಳು ರಾಷ್ಟ್ರವರ್ಧನ, ಇಂದ್ರಿಯವರ್ಧನ, ಆತ್ಮವರ್ಧನ - ಮೊದಲಾದ ಉದ್ದೇಶಗಳಿಗಾಗಿ ಮಾಡಲ್ಪಡುವ ಹಿಂಸಾರಹಿತ ಕರ್ಮಗಳು, ಯಜ್ಞಗಳೇ ಹೊರತು, ನಿರೀಹ, ಮೂಕಪಶುಗಳ ನಿರ್ದಯ ರಕ್ತಪಾತದ ರಾಕ್ಷಸಕೃತ್ಯಗಳಲ್ಲ.
     ಯಜ್ಞ, ಹಿಂಸಾರಹಿತ ಸತ್ಕರ್ಮ. ವಿಶೇಷಯಜ್ಞಗಳು ಬೇಕಾದಷ್ಟಿವೆ.. ಆದರೆ ಪ್ರತಿದಿನವೂ ಆಚರಿಸಬೇಕಾದ ಐದು ಮಹಾಯಜ್ಞಗಳಿವೆ. ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಅತಿಥಿಯಜ್ಞ, ಬಲಿವೈಶ್ವದೇವಯಜ್ಞ - ಇವೇ ಆ ಐದು ಮಹಾಯಜ್ಞಗಳಾಗಿವೆ.

ಶುಕ್ರವಾರ, ಜನವರಿ 11, 2013

ನವಯುಗಾಚಾರ್ಯ ವಿವೇಕಾನಂದರಿಗೆ 150 ವರ್ಷಗಳು




ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ

ರಾಮಕೃಷ್ಣರ ಭೀಮ ಶಿಷ್ಯನೆ ವೀರವೇದಾಂತೀ

ಭಾರತಾಂಬೆಯ ಧೀರಪುತ್ರನೆ ಸಾಧು ಭೈರವನೇ

ಸ್ಥೈರ್ಯದಚಲನೆ ಧೈರ್ಯದಂಬುಧಿ ಜಯತು ಜಯ ಜಯತು ||

-ಕುವೆಂಪು.


ಇಂದಿಗೆ ಶ್ರೀ ವಿವೇಕಾನಂದರು ಜನಿಸಿ ೧೫೦ ವರ್ಷಗಳಾಗಿವೆ. ೩೨ನೆಯ ಕಿರಿ 


ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಅವರು ತಮ್ಮ ನಡೆ-ನುಡಿಗಳಿಂದ ಇಂದಿಗೂ


ನಮ್ಮೊಡನಿದ್ದಾರೆ. ಅವರ ಕನಸಿನ ಭವ್ಯ ಭಾರತ ನಿರ್ಮಾಣವನ್ನು


ಸಾಕಾರಗೊಳಿಸಲು ಸಂಕಲ್ಪಿಸೋಣ.




ವಿವೇಕವಾಣಿ 





ಎಲ್ಲಕ್ಕಿಂತ ಹೆಚ್ಚಾಗಿ, ರಾಜಿಯಾಗುವ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ 


ತತ್ವ, ಧ್ಯೇಯಗಳಿಗೆ ಅಂಟಿಕೊಂಡಿರಿ ಮತ್ತು ಬೆಂಬಲಿಗರನ್ನು ಗಳಿಸುವ 


ಆಸೆಯಿಂದ, ಇತರರ "ಹುಚ್ಚು ಭ್ರಮೆ"ಗಳೊಡನೆ ಹೊಂದಾಣಿಕೆ 


ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವೇ ವಿಶ್ವಕ್ಕೆ ಆಧಾರವಾಗಿದೆ, ನಿಮಗೆ ಇನ್ನು


ಯಾವ ಆಧಾರದ ಅಗತ್ಯವಿದೆ? 

-ಸ್ವಾಮಿ ವಿವೇಕಾನಂದ.