ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಆಗಸ್ಟ್ 9, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -15: ತಿಳಿಯುವುದು ಬಹಳವಿದೆ


ಪ್ರಜ್ಞಾಚಕ್ಷು ವಿರಜಾನಂದರು
      ದಯಾನಂದರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಕುರುಡರು, ಕಣ್ಣಿಲ್ಲ. ಆದರೆ ಪ್ರಜ್ಞಾಚಕ್ಷು ಎಂದು ಅವರನ್ನು ಕರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರ ತಂದೆ-ತಾಯಿ ತೀರಿಹೋಗಿದ್ದರು. ಆಗ ಅವರಿಗೆ ಅವರು ಎಂಟು ವರ್ಷ ವಯಸ್ಸು. ಅವರ ಅತ್ತಿಗೆ, ಅಣ್ಣ ಈ ಕುರುಡ ಹುಡುಗನನ್ನು ಪ್ರತಿ ನಿತ್ಯವೆಂಬಂತೆ 'ಏಕೆ ಇವನನ್ನು ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಈ ಶನಿ ಎತ್ತಲಾದರೂ ಹೋಗಬಾರದೇ' ಅಂತ ಬಯ್ಯಲು ಶುರು ಮಾಡಿದ್ದರು. ಇದನ್ನು ಸಹಿಸದ ಆ ಹುಡುಗ ಒಂದು ದಿನ ಕೈಯಲ್ಲಿ ಲಾಠಿ ಹಿಡಕೊಂಡು ಮನೆ ಬಿಟ್ಟು ಹೊರಟೇಬಿಟ್ಟ. ಅವನು ಇದ್ದುದು ಪಂಜಾಬಿನ  ಕರ್ತಾರಪುರದಲ್ಲಿ. ಅಲ್ಲಿಂದ ಹೊರಟು ಹರಿದ್ವಾರ, ಸುಮಾರು 2000 ಮೈಲಿ ದೂರ ಆಗುತ್ತೆ, ಅಲ್ಲಿಯವರೆಗೆ ಕೋಲೂರಿಕೊಂಡು ಬಂದ. ಆಗ ಈಗಿನ ಕಾಲದಲ್ಲಿದ್ದಂತೆ ರಸ್ತೆಗಳು ಇರಲಿಲ್ಲ. ಕಾಡುರಸ್ತೆಗಳೇ. ಆ ರಸ್ತೆಗಳಲ್ಲೇ ಕೋಲೂರಿಕೊಂಡು ಕಷ್ಟಪಟ್ಟು ಬಂದ. ಅದೇ ದೊಡ್ಡ ಕೆಲಸ, ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಹೀಗೇನೇ ಆ ಪುಣ್ಯಾತ್ಮ ನಾಲ್ಕೂ ವೇದಗಳನ್ನು ಕಲಿತುಬಿಟ್ಟರು. ಬೇರೆಯವರು ಪುಸ್ತಕ ತೆಗೆದು ಇಂಥ ಅಧ್ಯಾಯ, ಇಷ್ಟನೇ ಮಂತ್ರ ಅಂತ ಹೇಳುತ್ತಿದ್ದರೆ, ಕಣ್ಣಿಲ್ಲದಿದ್ದರೂ, ಇಂಥ ವೇದದ, ಇಷ್ಟನೇ ಅಧ್ಯಾಯದ, ಇಷ್ಟನೇ ಮಂತ್ರ ಅಂತ ಹೇಳೇಬಿಡೋರು.
     ಅಷ್ಟು ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಮಾಡುತ್ತಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗ್ತಾ ಇದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗ್ತಾ ಹೋಗ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, 'ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?' ವಿರಜಾನಂದರು ಹೇಳಿದರು, 'ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಸರಿಯೋಕೆ ಆಗ್ತಾ ಇರಲಿಲ್ವಾ?' ಈ ರೀತಿ ಸಮಯಕ್ಕೆ ಸರಿಯಾಗಿ ತಕ್ಷಣ ಉತ್ತರ ಕೊಡೋದು ಬಹಳ ಕಷ್ಟ.
ಫಿಲಾಸಫಿ?
     ನಾನು ಹಿಂದೊಮ್ಮೆ ಸಹ  ಈ ವಿಷಯ ಹೇಳಿದ್ದೆ. ಒಬ್ಬರು ವಿಜ್ಞಾನಿ,  ಶಿಕ್ಷಣ ತಜ್ಞರೂ ಆಗಿದ್ದರು. ಅವರು ಸತ್ಸಂಗಕ್ಕೆ ಪ್ರತಿ ವಾರ ಬರುತ್ತಿದ್ದವರು ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಟ್ಟರು. ಒಂದು ಸಲ ದಾರಿಯಲ್ಲಿ ಅವರು ಸಿಕ್ಕಿದಾಗ ಏಕೆ ಬರುತ್ತಿಲ್ಲವೆಂದು ವಿಚಾರಿಸಿದೆ. ಅವರು ಹೇಳಿದರು, "ನಿಜ ಹೇಳಿಬಿಡಲಾ?"
"ನೀವು ನಿಜ ಹೇಳ್ತೀರಿ ಅಂತಲೇ ಕೇಳ್ತಾ ಇರೋದು".
"ನೀವು ಏನು ಹೇಳ್ತೀರಿ, ಅದೆಲ್ಲಾ ನಮಗೆ ಗೊತ್ತಾಗಿ ಹೋಗಿದೆ. ಯಾವುದು ಗೊತ್ತಾಗಬೇಕೋ ಅದು ನನಗೆ ಸಿಗ್ತಾ ಇಲ್ಲ".
     ಗೊತ್ತಿರೋ ವಿಷಯ ಹೇಳಬಾರದು. ಹೇಳೋ ವಿಷಯ ಅದು ಗೊತ್ತಿರಬಾರದು. ಕೇಳೋರಿಗೆ ಅದೇನು ವಿಷಯ ಅಂತ ಗೊತ್ತಾಗಬಾರದು. ಇವನೊಂದು ತರಹ ಹೇಳ್ತಾ ಇರಬೇಕು, ಅವನೊಂದು ತರಹ ಕೇಳ್ತಾ ಇರಬೇಕು. ನಾನು ಹೇಳಿದೆ: " ದಯವಿಟ್ಟು ಈ ಭಾನುವಾರ ಬನ್ನಿ. ನಿಮ್ಮ ಫಿಲಾಸಫಿಯನ್ನೇ ಮಾತಾಡ್ತೀನಿ."
     ಅವರು ಬಂದರು. ಅವತ್ತು ಏನು ಮಾತಾಡಿದೆ ಅಂತ ನನಗೇ ಗೊತ್ತಾಗಲಿಲ್ಲ. ಏನೇನೋ ಸುತ್ತಿ ಬಳಸಿ ಒಂದು ಗಂಟೆ ಅವರ ತಲೆ ತಿಂದೆ. ಕೊನೆಗೆ ಕೇಳಿದೆ:
 "ಹೇಗಿತ್ತು?"
"ಏನೂ ಗೊತ್ತಾಗಲಿಲ್ಲ, ಸ್ವಾಮಿ".
     ಇದೇನಾ ಫಿಲಾಸಫಿ? ಯಾವುದು ಅರ್ಥವಾಗುವುದಿಲ್ಲವೋ ಅದು ಫಿಲಾಸಫಿ ಅಲ್ಲ. ಫಿಲಾಸಫಿ ಅನ್ನೋದು ಇದೆಯಲ್ಲಾ, ಅದರಲ್ಲಿ ಫಿಲ್ ಅನ್ನೋದು ಮುಖ್ಯ, ಫಿಲ್ ಅಂದರೆ ಸ್ವರೂಪ ಅಂತ. ಯಾವುದಾದರೂ ವಸ್ತುವಿನ ಸ್ವರೂಪವನ್ನು ಯಾವ ಶಾಸ್ತ್ರ ಯಾವ ದರ್ಶನ ಮಾಡಿಸುತ್ತೋ ಅದು ಫಿಲಾಸಫಿ. ನಮ್ಮಲ್ಲಿ ಆರು ಫಿಲಾಸಫಿ(ದರ್ಶನ)ಗಳಿವೆ. ಯಾವುದೂ ಮತ್ತೊಂದಕ್ಕೆ ವಿರೋಧವಾದುದಲ್ಲ. ದಯಾನಂದರನ್ನು ಒಬ್ಬರು ಕೇಳಿದರು, "ಒಂದು ದರ್ಶನ ಸಾಕಾಗ್ತಾ ಇರ್ಲಿಲ್ವಾ ಸ್ವಾಮೀಜಿ, ಆರು ಯಾತಕ್ಕೆ?" ವಿಜ್ಞಾನಿ ಆದರೆ ಒಂದು ಮಾತು ಹೇಳಿದರೆ ತಿಳಿದುಕೊಳ್ಳುತ್ತಾನೆ. ಎಲ್ಲರಿಗೂ ಅರ್ಥವಾಗಬೇಕಲ್ಲಾ, ಅದಕ್ಕೆ" ಎಂದು ಅವರು ಉತ್ತರಿಸಿದ್ದರು.
ಪ್ರಾಣಿಗಳಿಂದಲೂ ಕಲಿಯುವುದಿದೆ
     ಮಗು ಇದೆಯಲ್ಲಾ, ಹುಟ್ಟಿದ ಕೂಡಲೇ ಅಳುತ್ತೆ, ಅದೂ ಒಂದು ವಿದ್ಯೆ, ಅದೂ ಒಂದು ಕಲೆ. ಅದೇ ತಾನೇ ಹುಟ್ಟಿದೆ, 'ಸದ್ಯೋಜಾತಸ್ಯ ಹರ್ಷ ಶೋಕ ಭಯ . . . ' ಅದೇ ತಾನೇ ಹುಟ್ಟಿದ ಮಗು ಸಂತೋಷ ತೋರಿಸುತ್ತೆ, ನಗುತ್ತೆ, ಅಳುತ್ತೆ, ಇದನ್ನೆಲ್ಲಾ ತೋರಿಸುತ್ತೆ, ಅದು ಎಲ್ಲಿಂದ ಕಲಿಯಿತು? ಹಿಂದಿನ ಜನ್ಮದ ಅರಿವಿರಬೇಕು. 'ಪೂರ್ವಾಭ್ಯಾಂ ಕೃತಾಂ . . . ' ಕರು ಇದೆ, ಅದು ಹುಟ್ಟಿದ ಕೂಡಲೇ ತಾಯ ಮೊಲೆ ಹುಡುಕಿಕೊಂಡು ಹೋಗುತ್ತೆ. ಯಾಕೆ? ಅದು ಹಿಂದೆ ಇತ್ತದು, ಹಾಲು ಕುಡಿದಿತ್ತು. ಅದರ ಸ್ಮರಣೆ ಅದಕ್ಕಿದೆ. ಹೀಗೆ ಪ್ರಾಣಿಗಳನ್ನು ನೋಡಿ ಕೂಡಾ ನಾವು ಕಲಿಯುವುದಿದೆ. ಬಹಳ ಕಲಿಯುವುದಿದೆ. ನಾಯಿಯನ್ನು ಬೈತೀರೋ, ಹೊಗಳುತ್ತೀರೋ? ತನ್ನ ಯಜಮಾನನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಕೊಡುತ್ತೆ ಅದು. ಅಷ್ಟು ಇದೆ. ಆದರೆ ಆ ನಾಯಿಯಲ್ಲಿ ಒಂದು ಅವಗುಣವೂ ಇದೆ. ಅದೇ ದೈನ್ಯ, ವಿಪರೀತ ದೀನತ್ವ ಅದಕ್ಕೆ.
ಲಾಂಗೂಲ ಚಾಲನಮಧಶ್ವರಣಾವಪಾತಂ ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು ಧೀರಂ ವಿಲೋಕಯತಿ ಚೌಟುಶತೈಶ್ಚ ಭುಂಕ್ತೇ || (ನೀತಿ ಶತಕ)
ಯಾವನು ಅನ್ನ ಹಾಕುತ್ತಾನೋ ಅವನನ್ನು ಕಂಡು ನಾಯಿ ಬಾಲ ಆಡಿಸುತ್ತದೆ, ಬೆನ್ನು ಮೇಲೆ ಮಲಗಿ ಹೊಟ್ಟೆ ತೋರಿಸುತ್ತೆ, ಆದರೆ ಆನೆ ಇದೆಯಲ್ಲಾ, ಅದು ಹಾಗಲ್ಲ, ಗಾಂಭೀರ್ಯದಿಂದ ನೋಡ್ತಾ ಇರುತ್ತೆ, ನೂರು ಸಲ ತಿನ್ನು ತಿನ್ನು ಅಂತ ಪುಸಲಾಯಿಸಿದ ಮೇಲೇ ತಿನ್ನುತ್ತೆ. ನಾಯಿ ಆಗಬೇಡ, ಆನೆ ಆಗು ಅಂತ ನೀತಿ ಶಾಸ್ತ್ರದಲ್ಲಿ ಹೇಳಿದೆ. ನಾಯಿಯಲ್ಲಿ ಒಳ್ಳೆ ಗುಣ ಇಲ್ಲ ಅಂತಲೇ? ಇದೆ. ಆನೆಯಲ್ಲಿ ಎಲ್ಲಾ ಒಳ್ಳೆ ಗುಣ ಇದೆ ಅಂತಲೂ ಅಲ್ಲ. ದಯಾನಂದರು ಒಂದು ಉದಾಹರಣೆ ಕೊಡುತ್ತಿದ್ದರು, ಸಕ್ಕರೆ ಇದೆ, ಮರಳಿನ ಜೊತೆ ಮಿಶ್ರವಾಗಿದೆ,  ಆನೆಯನ್ನು ಕರೆದುಕೊಂಡು ಬಂದು ಸಕ್ಕರೆ ತಿನ್ನು ಅಂದರೆ ಅದಕ್ಕೆ ತಿನ್ನಕ್ಕಾಗುತ್ತಾ? ಒಂದು ಇರುವೆ ಬಿಡಿ ಅಲ್ಲಿ, ಮರಳನ್ನು ಬಿಟ್ಟು ಸಕ್ಕರೆ ತೆಗೆದುಕೊಳ್ಳುತ್ತೆ. ಅದಕ್ಕೆ ಅದು ಸಾಧ್ಯವಿದೆ. ಇಲಿ ಬಿಲ ಇದೆಯಲ್ಲಾ, ಅದರೊಳಗೆ ನೋಡಿದರೆ ಅದ್ಭುತ, ಬೆಡ್ ರೂಮೇ ಬೇರೆ ಇದೆ, ಆಹಾರ ಇಡಕ್ಕೆ ಸ್ಟೋರ್ ಹೌಸೇ ಬೇರೆ. ಮತ್ತೆ ಕೆಲವು ಪಕ್ಷಿಗಳಿವೆ. ದೀಪದ ಹುಳ, ಮಿಂಚು ಹುಳ ಅಂತಾರಲ್ಲಾ ಅದನ್ನು ತೆಗೆದುಕೊಂಡು ಹೋಗಿ ಗೂಡಿನಲ್ಲಿ ಇಟ್ಟುಕೊಂಡಿರುತ್ತವೆ, ಬೆಳಕಿಗಾಗಿ! ಹೀಗೆ ಪ್ರಾಣಿಗಳನ್ನು ನೋಡಿ ಕಲಿಯುವುದೂ ಬಹಳವಿದೆ.
ನೆನಪಿನಲ್ಲಿಡೋಣ
     ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು ಪ್ರತಿ ಜೀವಿ ಉದ್ಧಾರವಾಗುವುದಕ್ಕೆ, ಹಾಳಾಗುವುದಕ್ಕೆ ಅವನೇ ಕಾರಣ. ಬೇರೆಯವರಲ್ಲ.
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ| ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು. 23.15.)
     ಓ ಜೀವಾತ್ಮನೇ, ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. ಸ್ವತಃ ಸತ್ಕರ್ಮ ಮಾಡು. ಸ್ವತಃ ಸಂತೋಷಪಡು. ನಿನ್ನ ಮಾಹಾತ್ಮ್ಯ ಬೇರೆಯವರಿಂದ ಸಿದ್ಧಿಸದು ಎಂದು ಇದರ ಅರ್ಥ. ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಉಚ್ಛೃಂಖಲ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. 'ನಾನು ಈ ದಿವ್ಯ ಪುರುಷನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ' ಎಂದು ಯಾರೂ ಹೇಳುವಂತಿಲ್ಲ.
     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ಕೇಳಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ಈ ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನವನ್ನು (ಕರ್ಮಫಲವಿಪಾಕ) ಅಡುಗೆ ಮಾಡಿದವನೇ ತಿನ್ನಲೇಬೇಕಾಗುತ್ತದೆ. ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ, ಮಾಡಿದ್ದುಣ್ಣೋ ಮಹರಾಯ! ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ಮುಕ್ತನಾಗುತ್ತೇನೆಂದು ಭಾವಿಸುವುದಕ್ಕಿಂತ ಆತ್ಮಘಾತಕವಾದ ಘೋರ ಅಜ್ಞಾನ ಮತ್ತೊಂದಿಲ್ಲ.
-ಕ.ವೆಂ. ನಾಗರಾಜ್.
***************
ದಿನಾಂಕ 29.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


1 ಕಾಮೆಂಟ್‌:

  1. Tanuja Shivaram
    ನಿಜ ನಮ್ಮ ನಮ್ಮ ಸ್ಥಿತಿ ಗತಿಗಳಿಗೆ ಸ್ವತಃ ನಾವೇ ಕಾರಣರು.
    ಮತ್ತೊಬ್ಬರನ್ನು ದೂಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

    ಪ್ರತ್ಯುತ್ತರಅಳಿಸಿ