ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ಆಯುರ್ಧಾರಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಯುರ್ಧಾರಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 19, 2014

ಆಯುರ್ಧಾರಾ-೭: ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

 ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

       ನಮ್ಮ ಶರೀರದ ರಚನೆ ಹಾಗೂ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ವಿಶಿಷ್ಟ ಸಿದ್ಧಾಂತಗಳನ್ನು ಆಯುರ್ವೇದದ ಶಾಸ್ತ್ರ ಗ್ರಂಥಗಳು ಪ್ರಸ್ತುತ ಪಡಿಸುತ್ತವೆ. ಅಂತಹ ಅನೇಕ ಮೂಲಭೂತ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದದ್ದು ದೋಷ-ಧಾತು-ಮಲ ಸಿದ್ಧಾಂತ.
       'ದೋಷ ಧಾತು ಮಲಾ ಮೂಲಂ ಹಿ ಶರೀರಂ ||'(ಸುಶ್ರುತ ಸಂಹಿತಾ) ಎಂದು ಸುಶ್ರುತನು ತನ್ನ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾನೆ. ಯಾವ ರೀತಿ ವೃಕ್ಷಗಳ ಸಂಭವ, ಸ್ಥಿತಿ ಹಾಗೂ ನಾಶಕ್ಕೆ ಅವುಗಳ ಮೂಲ ಅಥವಾ ಬೇರುಗಳು ಕಾರಣವೋ, ಅದೇ ರೀತಿ ನಮ್ಮಶರೀರದ ಸಂಭವ, ಸ್ಥಿತಿ ಹಾಗೂ ಲಯಗಳಿಗೆ ದೋಷ, ಧಾತು ಹಾಗು ಮಲಗಳು ಕಾರಣವಾಗಿವೆ. ಅಂದರೆ, ನಮ್ಮ ಶರೀರವು ದೋಷ-ಧಾತು-ಮಲಮಯವಾಗಿದೆ.
       ಈ ಸಂಚಿಕೆಯಲ್ಲಿ ತ್ರಿದೋಷ ಸಿದ್ಧಾಂತದ ಬಗ್ಗೆ ಪರಿಚಯ ಮಾಡಿಕೊಳ್ಳೋಣ.
       ನಮ್ಮ ಶರೀರದಲ್ಲಿ ವಾತ, ಪಿತ್ತ ಹಾಗು ಕಫ ಎಂಬ ಮೂರು ದೋಷಗಳು ಕಾರ್ಯಪ್ರವೃತ್ತವಾಗಿವೆ. ಅಂದರೆ ಶರೀರದ ಎಲ್ಲಾ ಕ್ರಿಯೆಗಳಿಗೂ ಈ ತ್ರಿದೋಷಗಳೇ ಕಾರಣವಾಗಿವೆ. ಈ ದೋಷಗಳು ಸಮಾವಸ್ಥೆಯಲ್ಲಿರುವಾಗ ಶರೀರವು ಸ್ವಸ್ಥವಾಗಿದ್ದು ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳು ಸುವ್ಯವಸ್ಥಿತವಾಗಿ ನಡೆಯುತ್ತವೆ. ಇವು ವಿಕೃತಾವಸ್ಥೆಯಲ್ಲಿರುವಾಗ, ಶರೀರದ ಕ್ರಿಯೆಗಳೂ ವಿಕೃತಿ ಹೊಂದಿ, ವಿಕಾರ ಅಥವಾ ರೋಗವು ಉಂಟಾಗುತ್ತದೆ. ಆದ್ದರಿಂದ ಆಯುರ್ವೇದದಲ್ಲಿಯ ಶಾರೀರ ವಿಜ್ಞಾನ, ರೋಗ ಕಾರಣ, ನಿದಾನ, ದ್ರವ್ಯಗುಣ, ಆಹಾರ ವಿಜ್ಞಾನ, ಋತುಚರ್ಯೆ ಇತ್ಯಾದಿ ಪ್ರತಿಯೊಂದು ವಿಚಾರದಲ್ಲಿಯೂ ತ್ರಿದೋಷ ಜ್ಞಾನವು ಓತಪ್ರೋತವಾಗಿ ತುಂಬಿರುವುದು.
       ದೋಷಗಳು ಭೌತಿಕ ತತ್ವಗಳಾಗಿದ್ದು, ಪಂಚಮಹಾಭೂತಗಳಿಂದ ಇವುಗಳ ರಚನೆಯು ಉಂಟಾಗಿದೆ. ವಾತ ದೋಷವು ಆಕಾಶ ಹಾಗೂ ವಾಯು ಮಹಾಭೂತಗಳ ಪ್ರಾಬಲ್ಯದಿಂದಲೂ, ಪಿತ್ತ ದೋಷವು ಅಗ್ನಿ ಮಹಾಭೂತದ ಪ್ರಾಬಲ್ಯದಿಂದಲೂ, ಕಫ ದೋಷವು ಪೃಥ್ವಿ ಹಾಗೂ ಜಲ  ಮಹಾಭೂತಗಳ ಪ್ರಾಬಲ್ಯದಿಂದಲೂ ರಚಿಸಲ್ಪಟ್ಟಿವೆ.
              ವಿಸರ್ಗಾದಾನ ವಿಕ್ಷೇಪೈಃ ಸೋಮಸೂರ್ಯಾನಿಲಾ ಯಥಾ |
              ಧಾರಯಂತಿ ಜಗದ್ದೇಹಂ ಕಫ ಪಿತ್ತ ಅನಿಲಾಸ್ತಥಾ || (ಸುಶ್ರುತ)      
       ಚಂದ್ರನು ತನ್ನ ಸ್ವಭಾವ ಜನ್ಯವಾದ ಶೈತ್ಯ ಸಾಮರ್ಥ್ಯದಿಂದ, ಸೂರ್ಯನು ತನ್ನ ಸ್ವಭಾವ ಜನ್ಯವಾದ ಉಷ್ಣ ಸಾಮರ್ಥ್ಯದಿಂದ, ವಾಯುವು ತನ್ನ ಸ್ವಭಾವ ಜನ್ಯವಾದ ಗತಿ ಸಾಮರ್ಥ್ಯದಿಂದ, ಪ್ರಪಂಚದ ಬಲವನ್ನು ಕ್ರಮವಾಗಿ ಹೆಚ್ಚಿಸುವುದು, ಹ್ರಾಸ ಮಾಡುವುದು ಹಾಗೂ ಪ್ರಸರಿಸುವುದು ಈ ಕಾರ್ಯಗಳಿಂದ ಜಗತ್ತನ್ನು ಧಾರಣೆ ಮಾಡುವಂತೆ, ಕಫ, ಪಿತ್ತ ಹಾಗೂ ವಾತಗಳು ಶರೀರವೆಂಬ ಜಗತ್ತನ್ನು ಧಾರಣೆ ಮಾಡಿಕೊಂಡಿರುವವು.
       ಮೇಲಿನ ಶ್ಲೋಕದಲ್ಲಿ ಪ್ರಕೃತ್ಯಾರಂಭಕ ಶಕ್ತಿಗಳು ಬ್ರಹ್ಮಾಂಡ ಪಿಂಡಾಂಡಗಳೆರಡಲ್ಲಿಯೂ ಹೇಗೆ ಒಂದೇ ವಿಧವಾಗಿ ಕಾರ್ಯ ಮಾಡುವವೆಂಬುದನ್ನು ಹೇಳಿರುವರು.
       ಆಯುರ್ವೇದ ಶಾಸ್ತ್ರ ಗ್ರಂಥಗಳಲ್ಲಿ ತ್ರಿದೋಷಗಳು ಕೇವಲ ಶಕ್ತಿಗಳೇ ಎಂದಾಗಲೀ ಅಥವಾ ಕೇವಲ ದ್ರವ್ಯಗಳೇ ಎಂದಾಗಲೀ ಎಲ್ಲಿಯೂ ಹೇಳಿಲ್ಲ. ಎರಡೂ ಅರ್ಥ ಬರುವತೆ ಇವುಗಳ ಗುಣಕರ್ಮಗಳನ್ನು ವರ್ಣನೆ ಮಾಡಲಾಗಿದೆ. ಹಾಗಾದರೆ ಇವುಗಳ ಗುಣಗಳೇನು, ವಿಧಗಳೇನು, ಸ್ವರೂಪವೇನು, ಕಾರ್ಯಗಳೇನು ಇತ್ಯಾದಿ ವಿಚಾರವಾಗಿ ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

ಗುರುವಾರ, ನವೆಂಬರ್ 1, 2012

ಆಯುರ್ಧಾರಾ - ೬


ಆಹಾರ ವಿಧಿ ವಿಧಾನಗಳು :

ಹಿಂದಿನ ಸಂಚಿಕೆಯಲ್ಲಿ ನಾವು ಆಹಾರದ ಗುಣ ಮತ್ತು ಪ್ರಮಾಣದ ಬಗ್ಗೆ ತಿಳಿದುಕೊಂಡೆವು. ಈಗ ಆಹಾರವನ್ನು ಸೇವಿಸುವ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಆಹಾರ ಸೇವಿಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಅವಶ್ಯಕ :
ಬಿಸಿಯಾಗಿರುವ ಆಹಾರವನ್ನೇ ಸೇವಿಸಬೇಕು.
  • ಆಹಾರವು ಸ್ನಿಗ್ಧವಾಗಿರಬೇಕು (ತುಪ್ಪ ಮುಂತಾದ ಜಿಡ್ಡುಯುಕ್ತ ಆಹಾರ)
  • ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ  ನಂತರವಷ್ಟೇ ಮತ್ತೆ ಆಹಾರ ಸೇವಿಸಬೇಕು.
  • ಪರಸ್ಪರ ವಿರುದ್ಧಾಹಾರವನ್ನು ಸೇವಿಸಬಾರದು.
  • ಉತ್ತಮ ಪರಿಸರದಲ್ಲಿ ಆಹಾರವನ್ನು ಸೇವಿಸಬೇಕು.
  • ಅತಿ ವೇಗವಾಗಿ ಅಥವಾ ಅತಿ ವಿಳಂಬವಾಗಿ ಆಹಾರ                        ಸೇವಿಸಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ಮಾತನಾಡಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ನಗಬಾರದು.
  • ತನ್ಮಯತೆಯಿಂದ, ಏಕಾಗ್ರಚಿತ್ತರಾಗಿ, ಪ್ರಸನ್ನವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
                 ಈ ಮೇಲಿನ ನಿಯಮಾವಳಿಗಳನ್ನು ಪಾಲಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ :
  • ಬಿಸಿಯಾಗಿ ತಯಾರಿಸಿದ ಆಹಾರವು ಹೆಚ್ಚು ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಆರಿದ, ತಂಗಳು ಹಾಗು ಹಳಸಿದ ಪದಾರ್ಥವು ಪಚನ ಶಕ್ತಿಯನ್ನು ಕುಗ್ಗಿಸಿ, ಆಮವನ್ನು ಉಂಟುಮಾಡಿ ರೋಗಗಳಿಗೆ ಕಾರಣವಾಗುತ್ತದೆ. 
  • ಸ್ನಿಗ್ಧವಾದ ಆಹಾರವು (ತುಪ್ಪ, ಬೆಣ್ಣೆ ಮುಂತಾದ ಜಿಡ್ಡು ಪದಾರ್ಥ ಬೆರೆಸಿದ ಆಹಾರ) ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ, ಬೇಗ ಜೀರ್ಣವಾಗುತ್ತದೆ, ವಾತಾನುಲೋಮನ ಮಾಡುತ್ತದೆ, ಶರೀರಕ್ಕೆ ಪುಷ್ಟಿ ನೀಡುತ್ತದೆ, ಇಂದ್ರಿಯಗಳನ್ನು ದೃಢಮಾಡುತ್ತದೆ, ಅಂಗ-ಪ್ರತ್ಯಂಗಗಳ ಬಲವನ್ನು ವೃದ್ಧಿಸುತ್ತದೆ ಹಾಗು ಯೌವನವನ್ನು ಕಾಪಾಡುತ್ತದೆ. ಆದ್ದರಿಂದ ಸ್ನಿಗ್ಧಾಹಾರವನ್ನೇ ಸೇವಿಸಬೇಕು.  ಇತ್ತೀಚೆಗೆ ಜಿಡ್ಡು ತಿನ್ನುವುದರಿಂದ ಕೊಲೆಸ್ಟ್ರಾಲ್   ಹೆಚ್ಚಾಗಿ ರೋಗ ಬರುತ್ತದೆ ಎಂದು ಎಲ್ಲರೂ ಭಾವಿಸಿ ಜಿಡ್ಡು ತಿನ್ನುವುದನ್ನೇ ಬಿಟ್ಟಿದ್ದಾರೆ. ಇದು ತಪ್ಪು ಕಲ್ಪನೆಯಾಗಿದ್ದು, ತುಪ್ಪ ತಿನ್ನುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಬದಲಾಗಿ ಮೇಲೆ ತಿಳಿಸಿದ ಪ್ರಯೋಜನಗಳು ದೊರಕುತ್ತವೆ. ಆದ್ದರಿಂದ ಧೈರ್ಯವಾಗಿ, ಯಾವುದೇ ಅಂಜಿಕೆಯಿಲ್ಲದೆ ಸ್ನಿಗ್ಧಾಹಾರವನ್ನು ಸೇವಿಸಬಹುದು. 
  • ಪ್ರಮಾಣವು ಹೆಚ್ಚು ಕಡಿಮೆಯಾಗದಂತೆ ಊಟ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಪಚನ ಶಕ್ತಿಯು ಕುಗ್ಗದೆ ಸುಖ ಪರಿಣಾಮವಾಗಿ(ಸುಖವಾಗಿ ಜೀರ್ಣವಾಗಿ) ಮಲ ಪ್ರವೃತ್ತಿಯು ಯಾವುದೇ ಕಷ್ಟವಿಲ್ಲದೇ ಆಗುವುದು. ಆದ್ದರಿಂದ ಸರಿಯಾದ ಪ್ರಮಾಣದಲ್ಲೇ ಊಟ ಮಾಡಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ ನಂತರವಷ್ಟೇ ಮತ್ತೆ ಆಹಾರ ಸೇವಿಸುವುದರಿಂದ  ಆಹಾರ ಪಚನ ಕ್ರಿಯೆಯು ಸುಲಭವಾಗಿ ಆಗಿ, ಆಹಾರದ ರಸ ಭಾಗವು ಸರ್ವ ಧಾತುಗಳಿಗೂ ಒದಗಿ , ಆಯಸ್ಸಿನ ವೃದ್ಧಿಯಾಗುತ್ತದೆ. ಉದ್ಗಾರ(ತೇಗು) ಶುದ್ಧಿ ಹಾಗು ಹೃದಯ ಶುದ್ಧಿಯಾಗಿ(ಎದೆ ಭಾಗದಲ್ಲಿ ಉರಿ ಮುಂತಾದ ತೊಂದರೆ ಆಗುವುದಿಲ್ಲ) ದೇಹವು ಹಗುರವೆನಿಸುತ್ತದೆ. ಹೀಗೆ ಮಾಡದಿದ್ದಲ್ಲಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗದ ಹಿಂದಿನ ಆಹಾರದೊಡನೆ ಬೆರೆತು ದೋಷ ಪ್ರಕೋಪವನ್ನುಂಟು ಮಾಡಿ ರೋಗಗಳನ್ನು ಉದ್ಭವಿಸುತ್ತದೆ.
  • ಪರಸ್ಪರ ವಿರುದ್ಧವಾದ ಆಹಾರಗಳು ಗರ ವಿಷದಂತೆ ಕೆಲಸ ಮಾಡುತ್ತದೆ. ಆದ್ದರಿಂದ ವಿರುದ್ಧಾಹಾರವು ನಿಷಿದ್ಧ. ವಿರುದ್ಧ ಆಹಾರಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
  • ಉತ್ತಮ, ಶುಚಿಯಾದ ಪರಿಸರದಲ್ಲಿ ಆಹಾರವನ್ನು ಸೇವಿಸುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಕೊಳಕು ವಾತಾವರಣದಲ್ಲಿ ಮನಸ್ಸಿಗೆ ಅಸಹ್ಯ ಉಂಟಾಗಿ, ಊಟ ಸೇರುವುದಿಲ್ಲ ಹಾಗು ಸರಿಯಾಗಿ ಪಚನವಾಗುವುದಿಲ್ಲ.
  • ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಹಾರ ಪದಾರ್ಥವು ಮೂಗು ಮುಂತಾದ ರಂಧ್ರಗಳಿಗೆ ಹೋಗಿ ತೊಂದರೆ ಉಂಟುಮಾಡುತ್ತದೆ(ನೆತ್ತಿ ಹತ್ತುವುದು) ಹಾಗು ಆಹಾರದ ಸಂಪೂರ್ಣ ಸಾದ್ಗುಣ್ಯ ದೇಹಕ್ಕೆ ದೊರಕುವುದಿಲ್ಲ. ಆದ್ದರಿಂದ ಆತಿ ವೇಗವಾಗಿ ಊಟ ಮಾಡಬಾರದು.
  • ಅತಿ ನಿಧಾನವಾಗಿ ತಿನ್ನುವುದರಿಂದ ಸರಿಯಾಗಿ ತೃಪ್ತಿಯಾಗದೆ ಹೆಚ್ಚು ತಿನ್ನುತ್ತಾರೆ. ಆಹಾರವು ತಣ್ಣಗಾಗಿ ವಿಷಮವಾಗಿ ಪಚನಗೊಳ್ಳುತ್ತದೆ. ಆದ್ದರಿಂದ ಆತಿ ನಿಧಾನವಾಗಿ ಊಟ ಮಾಡಬಾರದು.
  • ಮಾತನಾಡುತ್ತಾ, ನಗುತ್ತಾ, ತನ್ಮಯತೆಯಿಲ್ಲದೆ ತಿನ್ನುವುದರಿಂದಲೂ ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಗುವ ತೊಂದರೆಗಳು ಉಂಟಾಗುತ್ತವೆ.
  • ಅಂತಿಮವಾಗಿ ನಮ್ಮ ಆತ್ಮಸಮೀಕ್ಷೆಯಂತೆ ಅಂದರೆ ನಮಗೆ ಯಾವ ಆಹಾರವು ಹೆಚ್ಚು ಸೂಕ್ತ, ಹೆಚ್ಚು ಒಗ್ಗುತ್ತದೆ ಮತ್ತು ಯಾವುದು ಒಗ್ಗುವುದಿಲ್ಲ ಎಂಬುದನ್ನು ನಿರ್ಧರಿಸಿಯೇ ಊಟ ಮಾಡಬೇಕು.
   ಹೀಗೆ ಮೇಲೆ ತಿಳಿಸಿದ ವಿಧಿ ವಿಧಾನಗಳನ್ನು ಅನುಸರಿಸಿ ಆಹಾರ ಸೇವಿಸಿದಾಗ ಖಂಡಿತ ಉತ್ತಮ ಆರೋಗ್ಯ ಭಾಗ್ಯ ಲಭಿಸಿ, ಸುದೀರ್ಘಾಯಸ್ಸು ನಮ್ಮದಾಗುತ್ತದೆ. 

ಮಂಗಳವಾರ, ಜನವರಿ 17, 2012

ಆಯುರ್ಧಾರಾ - ೫: ಹೀಗಿರಬೇಕು ನಮ್ಮ ಆಹಾರ

ಆಯುರ್ಧಾರಾ - ೫

    ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಜನಪ್ರಿಯ ಗಾದೆ. ಇದರ ಅರ್ಥ - ಯಾರು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸಬಲ್ಲರೋ ಅವರು ಆರೋಗ್ಯವಂತರಾಗುವರು ಎಂದು. ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ಆಯುರ್ವೇದ ಬಹು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತದೆ.
    ಪ್ರಪ್ರಥಮವಾಗಿ ನಮ್ಮ ಆಹಾರ ಷಡ್ರಸೋಪೇತವಾಗಿರಬೇಕು. ಅಂದರೆ ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು - ಈ ಆರೂ ರಸಗಳು ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಇರಬೇಕು. ಇದರಿಂದ ಮನುಷ್ಯನ ಬಲವು ವೃದ್ಧಿಯಾಗುತ್ತದೆ. ಕೇವಲ ಒಂದೇ ತರಹದ ಅಥವಾ ಒಂದೆರಡು ತರಹದ ರಸಗಳನ್ನೇ ಬಳಸುವುದರಿಂದ ದೌರ್ಬಲ್ಯವುಂಟಾಗುತ್ತದೆ. ಷಡ್ರಸಭರಿತ ಆಹಾರ ಸೇವನೆ ಆರೋಗ್ಯದ ಪ್ರಥಮ ಮೂಲ.
ಆಹಾರದ ಪ್ರಮಾಣ: ಆಹಾರದ ಪ್ರಮಾಣದ ನಿಗದಿ ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಇಷ್ಟೇ ಆಹಾರ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಅದರ ಪ್ರಮಾಣ ಅವರವರ ಅಗ್ನಿಬಲ ಅಂದರೆ ಪಚನಶಕ್ತಿಯನ್ನು ಅವಲಂಬಿಸಿರುತ್ತದೆ. ಆಹಾರವನ್ನು ಲಘು ಮತ್ತು ಗುರು ಎಂದು ವಿಂಗಡಿಸಬಹುದು. ಲಘು ಆಹಾರವು ಅಗ್ನಿ, ವಾಯು ಮಹಾಭೂತ ಪ್ರಧಾನವಾಗಿದ್ದು ಸುಲಭವಾಗಿ ಪಚನಗೊಳ್ಳುತ್ತದೆ. ಗುರು ಆಹಾರವು ಪೃಥ್ವಿ, ಜಲ ಮಹಾಭೂತ ಪ್ರಧಾನವಾಗಿದ್ದು ಪಚನಕ್ಕೆ ಕಷ್ಟಕರವಾಗಿರುತ್ತದೆ. ಅಕ್ಕಿ, ಹೆಸರು ಬೇಳೆ, ಜೇನುತುಪ್ಪ, ಮೃಗಮಾಂಸ, ಮೊಲದ ಮಾಂಸ ಮುಂತಾದವು ಲಘು ಆಹಾರಕ್ಕೆ ಉದಾಹರಣೆ. ಹಿಟ್ಟಿನ ಪದಾರ್ಥಗಳು, ಕ್ಷೀರ ವಿಕೃತಿ (ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದವು), ಇಕ್ಷು ವಿಕೃತಿ (ಸಕ್ಕರೆ, ಬೆಲ್ಲ ಮುಂತಾದವು), ಉದ್ದು, ಎಳ್ಳು ಮುಂತಾದ ಪದಾರ್ಥಗಳು ಗುರು ಆಹಾರಕ್ಕೆ ಉದಾಹರಣೆ. ಗುರು ಆಹಾರವನ್ನು ಅರ್ಧ ತೃಪ್ತಿಯವರೆಗೆ ಮಾತ್ರ ತಿನ್ನಬೇಕು. ಹಾಗೆಂದು ಲಘು ಆಹಾರವನ್ನು ಅತಿ ಹೆಚ್ಚು ತಿನ್ನಬಹುದೆಂದು ಭಾವಿಸಬಾರದು. ತಿನ್ನುವಾಗ ಹೊಟ್ಟೆಯ ಅರ್ಧ ಭಾಗದಲ್ಲಿ ಘನ ಆಹಾರ, ಕಾಲುಭಾಗದಲ್ಲಿ ದ್ರವ, ಉಳಿದ ಕಾಲು ಭಾಗ ದೋಷ ಸಂಚಾರಕ್ಕೆ ಅನುಕೂಲವಾಗುವಂತಹ ಕ್ರಮದಲ್ಲಿ ತಿನ್ನಬೇಕು.
ನಿತ್ಯ ಬಳಸಬಹುದಾದ ಪದಾರ್ಥಗಳು: ಅಕ್ಕಿ, ಹೆಸರು ಬೇಳೆ, ಸೈಂಧವ ಲವಣ, ಬೆಟ್ಟದ ನೆಲ್ಲಿ,  ಅಂತರೀಕ್ಷ ಜಲ (ಮಳೆ ನೀರು), ತುಪ್ಪ, ಜಾಂಗಲ ಪಶು ಮಾಂಸ (ಮಾಂಸಾಹಾರಿಯಾಗಿದ್ದಲ್ಲಿ), ಜೇನುತುಪ್ಪ ಮುಂತಾದವು.
ನಿತ್ಯ ಬಳಸಬಾರದ ಪದಾರ್ಥಗಳು: ಮೊಸರು, ಉದ್ದು, ಮೀನು, ಹಂದಿ, ಹಸು, ಎಮ್ಮೆ ಮಾಂಸ, ಶುಷ್ಕ ಶಾಕ (ಒಣಗಿದ ಸೊಪ್ಪು ತರಕಾರಿ), ಒಣಗಿಸಿದ ಮಾಂಸ ಮುಂತಾದವು. ವಿಶೇಷವಾಗಿ ಕ್ಷಾರ, ಉಪ್ಪು, ಹಿಪ್ಪಲಿ ಇವನ್ನು ಹೆಚ್ಚು ಬಳಸಬಾರದು.
     ವಿಶೇಷ ಆಹಾರವಿಧಿಗಳ ಬಗ್ಗೆ ಮುಂದಿನ ಆಯುರ್ಧಾರಾ ಸಂಚಿಕೆಯಲ್ಲಿ ತಿಳಿಸಲಾಗುವುದು.

ಮಂಗಳವಾರ, ಜನವರಿ 3, 2012

ಆಯುರ್ಧಾರಾ - ೪

SUSHRUTHA
               ಈ ಹಿಂದಿನ ಧಾರೆಗಳಲ್ಲಿ ಆಯುರ್ವೇದವು ೮ ಅಂಗಗಳನ್ನು ಹೊಂದಿದೆ ಎಂದು ತಿಳಿಸಲಾಗಿತ್ತು.ಈಗ ಅವುಗಳ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ .
೧. ಕಾಯಚಿಕಿತ್ಸಾ  ಕಾಯಚಿಕಿತ್ಸಾ ನಾಮ ಸರ್ವಾಂಗ    ಸಂಶ್ರಿತಾನಾಂ ವ್ಯಾಧೀನಾಂ ಜ್ವರ ರಕ್ತಪಿತ್ತ ಶೋಷ ಉನ್ಮಾದ ಅಪಸ್ಮಾರ ಕುಷ್ಠ ಮೇಹಾತಿಸಾರಾದೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
         ಕಾಯ ಚಿಕಿತ್ಸೆಯೆಂದರೆ ಸಕಲ ಶರೀರವನ್ನೂ ಆಶ್ರಯಿಸಿ ಹುಟ್ಟಿರುವ ಜ್ವರ, ರಕ್ತಪಿತ್ತ, ಶೋಷ, ಉನ್ಮಾದ, ಅಪಸ್ಮಾರ, ಕುಷ್ಠ, ಪ್ರಮೇಹ, ಅತಿಸಾರ ಮೊದಲಾದ ರೋಗಗಳನ್ನು ನಿವಾರಿಸುವ ಕ್ರಮಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "General medicine" ನನ್ನು ಒಳಗೊಂಡಿದೆ. 
೨. ಕೌಮಾರ ಭೃತ್ಯ : 
ಕೌಮಾರ ಭೃತ್ಯಂ ನಾಮ ಕುಮಾರ ಭರಣ ಧಾತ್ರೀಕ್ಷೀರದೋಷಸಂಶೋಧನಾರ್ಥಂ ದುಷ್ಟಸ್ತನ್ಯಗ್ರಹಸಮುತ್ಥಾನಾಂ ಚ ವ್ಯಾಧೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
     ಕೌಮಾರ ಭೃತ್ಯವೆಂದರೆ ಆಗ ತಾನೇ ಜನಿಸಿದ ಮತ್ತು ಜನನವಾದನಂತರ ಕ್ಷೀರಪಾನದಿಂದ ಹಿಡಿದು ಅನ್ನವನ್ನು ತಿನ್ನುವವರೆಗೂ ಬೆಳೆದಿರುವ ಮಕ್ಕಳನ್ನು ಕ್ರಮವರಿತು ಪೋಷಿಸುವುದು, ಧಾತ್ರಿಯ (ಹಾಲನ್ನುಣಿಸುವಾಕೆ) ಹಾಲಿನ ದೋಷಗಳನ್ನು ಶೋಧಿಸಿ ಉತ್ತಮಗೊಳಿಸುವುದು, ದುಷ್ಟ ಸ್ತನ್ಯಪಾನದಿಂದುಂಟಾಗುವ ಮಕ್ಕಳ ಶಾರೀರಿಕ ವ್ಯಾಧಿಗಳನ್ನು ಬಾಲಕರಿಗೆ ಗ್ರಹಾದ್ಯಾವೇಶದಿಂದುಂಟಾಗುವ (ಗ್ರಹಗಳ ಪ್ರಭಾವದಿಂದ) ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳನ್ನು ಪರಿಹಾರ ಮಾಡತಕ್ಕ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "Pediatrics" ನನ್ನು ಒಳಗೊಂಡಿದೆ.
೩.  ಭೂತ ವಿದ್ಯಾ :
ಭೂತವಿದ್ಯಾ ನಾಮ ದೇವಾಸುರಗಂಧರ್ವ ಯಕ್ಷರಕ್ಷಃಪಿತೃ ಪಿಶಾಚನಾಗಗ್ರಹಾದ್ಯುಪಸೃಷ್ಟಚೆತಸಾಂ ಶಾಂತಿಕರ್ಮಬಲಿಹರಣಾದಿ ಗ್ರಹೋಪಶಮನಾರ್ಥಂ: ||ಸು.ಸಂ.ಸೂ.೧/೮ ||
     ಭೂತ ವಿದ್ಯೆಯೆಂದರೆ ದೇವತೆ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪಿತೃ, ಪಿಶಾಚ, ನಾಗ ಮೊದಲಾಗ ಗ್ರಹಗಳಿಂದ ಪೀಡಿತರಾದ ಜನರ ವಿಕಾರಗಳನ್ನು ಶಾಂತಿಕರ್ಮ, ಬಲಿದಾನ ಮುಂತಾದ ಕ್ರಮಗಳಿಂದ ಗ್ರಹಪೀಡೆಯನ್ನು ನಿವಾರಿಸಿ ಸುಖವನ್ನುಂಟು ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಆಯುರ್ವೇದವು ಆಸ್ತಿಕ ದರ್ಶನವಾಗಿರುವುದರಿಂದ ಈ ವಿಭಾಗಕ್ಕೆ ಮಾನ್ಯತೆ ಕೊಟ್ಟಿದೆ.  ಆಧುನಿಕ ಚಿಕಿತ್ಸಾಕ್ರಮದವರಿಗೆ ಇದರ ಬಗೆಗಿನ ಜ್ಞಾನ ಇಲ್ಲ.
೪. ಶಾಲಾಕ್ಯ ತಂತ್ರ :
ಶಾಲಾಕ್ಯಂನಾಮೋರ್ಧ್ವಜತ್ರುಗತಾನಾಂ ಶ್ರವಣ ನಯನ ವದನ ಘ್ರಾಣಾದಿ ಸಂಶ್ರಿತಾನಾಂ ವ್ಯಾಧೀನಾಂ ಉಪಶಮನಾರ್ಥಂ, ಶಲಾಕಾ ಯಂತ್ರ ಪ್ರಣಿಧಾನಾರ್ಥಂ ಚ: ||ಸು.ಸಂ.ಸೂ.೧/೮ ||
     ಕತ್ತಿನ ಬುಡದ ಮೇಲೆ ಇರುವ ಕಿವಿ, ಕಣ್ಣು, ಬಾಯಿ, ಮೂಗು ಮೊದಲಾದ ಅವಯವಗಳಲ್ಲಿ ಉಂಟಾಗುವ ರೋಗಗಳನ್ನು ನಿವಾರಿಸುವ ಮತ್ತು ಶಲಾಕೆಯೆಂಬ ಯಂತ್ರಗಳನ್ನು ಪ್ರಯೋಗ ಮಾಡುವ ವಿಧಾನಗಳನ್ನು ತಿಳಿಸುವ ಆಯುರ್ವೇದ ಭಾಗವೇ ಶಾಲಾಕ್ಯ ತಂತ್ರವು.
ಇದು ಆಧುನಿಕ ಚಿಕಿತ್ಸಾಕ್ರಮದ "E.N.T" ಹಾಗೂ "Opthalmology" ಯನ್ನು ಒಳಗೊಂಡಿದೆ. 
೫. ಶಲ್ಯ ತಂತ್ರ :
ಶಲ್ಯಂ ನಾಮ ವಿವಿಧತೃಣಕಾಷ್ಠಪಾಷಾಣಪಾಂಶುಲೋಹಲೋಷ್ಟಾಸ್ಥಿ
ಬಾಲನಖಪೂಯಾಸ್ರಾವದುಷ್ಟವ್ರಣಾಂತರ್ಗರ್ಭಶಲ್ಯೋದ್ಧರಣಾರ್ಥಂ,
ಯಂತ್ರಶಸ್ತ್ರಕ್ಷಾರಾಗ್ನಿಪ್ರಣಿಧಾನವ್ರಣವಿನಿಶ್ಚಯಾರ್ಥಂ ಚ:  ||ಸು.ಸಂ.ಸೂ.೧/೮ ||
  ಶಲ್ಯತಂತ್ರವೆಂದರೆ ಅನೇಕ ವಿಧಗಳಾದ ಹುಲ್ಲು, ಕಡ್ಡಿ, ಕಲ್ಲು, ಧೂಳುಮಣ್ಣು, ಲೋಹದ ಚೂರು, ಮಣ್ಣಿನಹೆಂಟೆ, ಮೂಳೆಯ ಚೂರು, ಕೂದಲು, ಉಗುರು, ಕೀವು ಸೇರುವುದು, ದುಷ್ಟ ವ್ರಣವನ್ನು, ಮೂಢಗರ್ಭವನ್ನು ಅಥವಾ ಬದುಕಿರುವ ಶಿಶುವನ್ನೇ ಜೀವಸಹಿತವಾಗಿ ಮೃತ ಗರ್ಭಿಣಿಯ ಉದರದಿಂದ ಹೊರಕ್ಕೆ ತೆಗೆಯ ಬೇಕಾಗುವಾಗ ಉಪಯೋಗಿಸತಕ್ಕ ಯಂತ್ರ, ಶಸ್ತ್ರ, ಕ್ಷಾರ, ಅಗ್ನಿ ಇವುಗಳ ಪ್ರಯೋಗವನ್ನೂ ಮತ್ತು ಇವುಗಳಿಂದ ವ್ರಣವನ್ನು ನಿರ್ಧರಿಸಿ ತಿಳಿಯುವ ವಿಧಾನಗಳನ್ನೂ ತಿಳಿಸುವ ಭಾಗ.
ಇದು ಆಧುನಿಕ ಚಿಕಿತ್ಸಾಕ್ರಮದ  "Surgery" ಯನ್ನು ಒಳಗೊಂಡಿದೆ.
೬. ಅಗದ ತಂತ್ರ :
 ಅಗದ ತಂತ್ರಂ ನಾಮ ಸರ್ಪಕೀಟಲೂತಾ ಮೂಷಕಾದಿ ದಷ್ಟವಿಷವ್ಯಂಜನಾರ್ಥಂ ವಿವಿಧ  ವಿಷಸಂಯೋಗೋಪಶಮನಾರ್ಥಂ ಚ: ||ಸು.ಸಂ.ಸೂ.೧/೮ ||
     ಅಗದ ತಂತ್ರವೆಂದರೆ ಹಾವು, ಕೀಟ, ಜೇಡ, ಇಲಿ ಮೊದಲಾದ ಪ್ರಾಣಿಗಳ ಕಡಿತದಿಂದ ದೇಹದಲ್ಲಿ ಕಾಣಬರುವ ವಿಷಲಕ್ಷಣಗಳನ್ನು ನಿರ್ಧರಿಸತಕ್ಕ ವಿಧಾನಗಳನ್ನೂ, ಸ್ಥಾವರ-ಜಂಗಮಾದಿ ವಿವಿಧ ವಿಷಯಗಳ ಸಂಯೋಗದಿಂದುಂಟಾಗುವ ವಿಷಬಾಧೆಗಳನ್ನೂ ಮತ್ತು ಅವನ್ನು ನಿವಾರಿಸುವ ವಿಧಾನಗಳನ್ನೂ ಬೋಧಿಸುವ ಆಯುರ್ವೇದ ಭಾಗವು.
 ಇದು ಆಧುನಿಕ ಚಿಕಿತ್ಸಾಕ್ರಮದ  "Toxicology" ನನ್ನು ಒಳಗೊಂಡಿದೆ.
೭. ರಸಾಯನ ತಂತ್ರ :
ರಸಾಯನ ತಂತ್ರಂ ನಾಮ ವಯಃಸ್ಥಾಪನಮಾಯುರ್ಮೇಧಾ ಬಲಕರಂ ರೋಗಾಪಹರಣ ಸಮರ್ಥಂ ಚ: ||ಸು.ಸಂ.ಸೂ.೧/೮ ||
     ರಸಾಯನ ತಂತ್ರವೆಂದರೆ ದೀರ್ಘ ಕಾಲ ಬದುಕುವಂತೆಯೂ, ಬುದ್ಧಿಶಕ್ತಿ, ಬಲಗಳನ್ನೂ ಹೆಚ್ಚಿಸಿ ರೋಗನಿವಾರಣಾ ಶಕ್ತಿಯನ್ನು ವೃದ್ಧಿಸಿ, ಮುದಿತನವನ್ನು ನಿವಾರಿಸಿ ಬಹುಕಾಲ ತಾರುಣ್ಯಾವಸ್ಥೆಯಲ್ಲೇ ಇರುವಂತೆ ಮಾಡುವ ಉಪಾಯವನ್ನು ತಿಳಿಸುವ ಆಯುರ್ವೇದ ಭಾಗವು.
     ಆಯುರ್ವೇದದಲ್ಲಿ ಈ ತಂತ್ರದ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಆದರೆ  ಆಧುನಿಕ ಚಿಕಿತ್ಸಾಕ್ರಮದಲ್ಲಿ ಇದು ಇನ್ನೂ ಅಂಬೆಗಾಲಿಡುತ್ತಿರುವ ಕೂಸು ಎಂದೇ ಹೇಳಬಹುದು.
೮. ವಾಜೀಕರಣ ತಂತ್ರ :
ವಾಜೀಕರಣ ತಂತ್ರಂ ನಾಮಾಲ್ಪದುಷ್ಟಕ್ಷೀಣವಿಶುಷ್ಕರೇತಸಾಂ ಆಪ್ಯಾಯನ ಪ್ರಸಾದೋಪಚಯಜನನನಿಮಿತ್ತಂ ಪ್ರಹರ್ಷಜನನಾರ್ಥಂ ಚ|||ಸು.ಸಂ.ಸೂ.೧/೮ ||   
     ವಾಜೀಕರಣ ತಂತ್ರವೆಂದರೆ ಅಲ್ಪಪ್ರಮಾಣದ, ದೋಷದೂಷಿತವಾದ, ರೋಗಾದಿಗಳಿಂದ ಕ್ಷೀಣಿಸಿದ ಮತ್ತು ಬತ್ತಿಹೋದ ಶುಕ್ರಧಾತುವನ್ನುಳ್ಳ ಜನರಿಗೆ ಕ್ರಮವಾಗಿ ಅಲ್ಪಶುಕ್ರವುಳ್ಳವರಿಗೆ ಅತಿಯಾಗಿ ಹೆಚ್ಚುವಂತೆಯೂ, ವಾತಾದಿ ದೋಷ-ದೂಷಿತ ರೇತಸ್ಸುಳ್ಳವರಿಗೆ ಶುದ್ಧಿಮಾಡತಕ್ಕ ವಿಧಾನಗಳನ್ನು ಪ್ರಯೋಗಿಸುವಂತೆಯೂ, ಪ್ರಮಾಣದಿಂದ ಕ್ಷೀಣವಾಗಿರುವ ಶುಕ್ರವುಳ್ಳವರಿಗೆ ವೃದ್ಧಿಯಾಗುವಂತೆಯೂ, ಅತ್ಯಂತ ಕ್ಷೀಣವಾಗಿರುವವರಿಗೆ ಹೆಚ್ಚಾಗಿ ಉತ್ಪತ್ತಿಯಾಗುವಂತೆಯೂ ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು. ಇದು ಆಧುನಿಕ ಚಿಕಿತ್ಸಾಕ್ರಮದ  "Reproductive Medicine" ನನ್ನು ಒಳಗೊಂಡಿದೆ.

ಗುರುವಾರ, ಜುಲೈ 7, 2011

ಆಯುರ್ಧಾರಾ - ೩: ಆಯುರ್ವೇದ ಅವತರಣ:



ಚತುರ್ಮುಖ ಬ್ರಹ್ಮ

         ಚರಕ ಸಂಹಿತೆಯಲ್ಲಿ ಆಯುರ್ವೇದ ಶಾಶ್ವತ ಹಾಗೂ ಅನಾದಿ ಎಂದು ವರ್ಣಿಸಲಾಗಿದೆ. ಎಲ್ಲಾ ಸಂಹಿತೆಗಳಲ್ಲೂ ಆಯುರ್ವೇದದ ಮೂಲ ಕರ್ತೃ ಬ್ರಹ್ಮ ಎಂದು ಹೇಳಲಾಗಿದೆ. ಸುಶ್ರುತ ಸಂಹಿತೆಯಲ್ಲಿ, ಬ್ರಹ್ಮನು ಸೃಷ್ಠಿ ರಚನೆಗೂ ಮುನ್ನ ಪ್ರಜೆಗಳ ಹಿತಕ್ಕಾಗಿ ಶತಸಹಸ್ರ (೧೦೦೦೦೦) ಶ್ಲೋಕ, ಸಹಸ್ರ(೧೦೦೦) ಅಧ್ಯಾಯಗಳನ್ನುಳ್ಳ ’ಆಯುರ್ವೇದ’ ಎಂಬ ಅಥರ್ವ ವೇದದ ಉಪಾಂಗವನ್ನು ರಚಿಸಿದನು ಎಂದು ಉಲ್ಲೇಖಿಸಲಾಗಿದೆ. 
         ಆಯುರ್ವೇದದ ಅವತರಣದಲ್ಲಿ ಮುಖ್ಯವಾಗಿ ಎರಡು ಸಂಪ್ರದಾಯಗಳಿವೆ. ೧. ಆತ್ರೇಯ ಸಂಪ್ರದಾಯ. ೨. ಧನ್ವಂತರಿ ಸಂಪ್ರದಾಯ. 

     ಆತ್ರೇಯ ಸಂಪ್ರದಾಯದ ಪ್ರಕಾರ, ಬ್ರಹ್ಮನು ಆಯುರ್ವೇದವನ್ನು ದಕ್ಷ ಪ್ರಜಾಪತಿಗೆ ತಿಳಿಸಿದನು. ಅವನಿಂದ ಅದು ಕ್ರಮವಾಗಿ ಅಶ್ವಿನಿ ಕುಮಾರರು, ಇಂದ್ರ, ಭಾರದ್ವಾಜ ಮುನಿ, ಪುನರ್ವಸು ಆತ್ರೇಯ, ಅಗ್ನಿವೇಶಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು. ಈ ಸಂಪ್ರದಾಯ ಕಾಯ ಚಿಕಿತ್ಸಾ ಪದ್ಧತಿಗೆ ಒತ್ತು ನೀಡುತ್ತದೆ.
ಪುನರ್ವಸು ಆತ್ರೇಯ ಹಾಗು ಅಗ್ನಿವೇಶಾದಿ ೬ ಶಿಶ್ಯಂದಿರು
     ಧನ್ವಂತರಿ ಸಂಪ್ರದಾಯದ ಪ್ರಕಾರ ಬ್ರಹ್ಮನಿಂದ ಇಂದ್ರನವರೆಗಿನ ಅವತರಣ ಕ್ರಮ ಹಾಗೇ ಇದ್ದು, ನಂತರ ಅದು ಕಾಶಿರಾಜ ದಿವೋದಾಸ ಧನ್ವಂತರಿಗೆ ತಿಳಿಸಲ್ಪಟ್ಟಿತು. ಅವನಿಂದ ಅದನ್ನು (ಆಯುರ್ವೇದದ ಜ್ಞಾನವನ್ನು) ಸುಶ್ರುತಾದಿ ಮುನಿಗಳು ಗ್ರಹಿಸಿದರು. ಈ ಸಂಪ್ರದಾಯ ಶಲ್ಯ ಚಿಕಿತ್ಸಾ(surgery) ಪದ್ಧತಿಗೆ ಒತ್ತು ನೀಡುತ್ತದೆ.
ಸುಶ್ರುತ
ಆಯುರ್ವೇದದ ಮೂಲ ಉದ್ದೇಶ :
          ಆಯುರ್ವೇದ ಮುಖ್ಯವಾಗಿ ಎರಡು ಉದ್ದೇಶಗಳನ್ನು ಹೊಂದಿದೆ .

೧. ’ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’- ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು.
೨. ’ಆತುರಸ್ಯ ವಿಕಾರ ಪ್ರಶಮನಂ ಚ’- ರೋಗಿಗಳ ರೋಗವನ್ನು ಗುಣಪಡಿಸುವುದು.
      

ಶನಿವಾರ, ಜೂನ್ 4, 2011

ಆಯುರ್ಧಾರಾ-೨: ಆಯುಗಳು


ಡಾ||ಬಿ.ಎಸ್.ಆರ್.ದೀಪಕ್
     ಈ ಹಿಂದಿನ ಆಯುರ್ಧಾರೆಯಲ್ಲಿ, ಆಯುರ್ವೇದದ ಪರಿಭಾಷೆಯ ಬಗೆಗೆ ಹೀಗೆ ತಿಳಿಸಲಾಯಿತು :
“ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ|
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ||” ಚ.ಸಂ.ಸೂ. ೧/೪೧
     ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ(ಪಥ್ಯಾಪಥ್ಯಗಳ) ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು.
     ಈಗ ಹಿತಾಯು ಮತ್ತು ಅಹಿತಾಯು, ಸುಖಾಯು ಮತ್ತು ದುಃಖಾಯು, ಆಯುವಿನ ಪ್ರಮಾಣ, ಇವುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಯೋಣ.
ಹಿತಾಯು:

“ಹಿತೈಷಿಣಃ ಪುನರ್ಭೂತಾನಾಂ ಪರಸ್ವಾದುಪರತಸ್ಯ ಸತ್ಯವಾದಿನಃ ಶಮಪರಸ್ಯ ಪರೀಕ್ಷ್ಯಕಾರಿಣೋ ಅಪ್ರಮತ್ತಸ್ಯ ತ್ರಿವರ್ಗಂ ಪರಸ್ಪರೇಣ ಅನುಪಹತಮುಪಸೇವಮಾನಸ್ಯ ಪೂಜಾರ್ಹ ಸಂಪೂಜಕಸ್ಯ ಜ್ಞಾನವಿಜ್ಞಾನೋಪಶಮಶೀಲಸ್ಯ ವೃದ್ಧೋಪಸೇವಿನಃ ಸುನಿಯತರಾಗರೋಷೇರ್ಷ್ಯಾಮದಮಾನವೇಗಸ್ಯ ಸತತಂ ವಿವಿಧಪ್ರದಾನಪರಸ್ಯ ತಪೋಜ್ಞಾನಪ್ರಶಮನಿತ್ಯಸ್ಯಾಧ್ಯಾತ್ಮವಿದಸ್ತತ್ಪರಸ್ಯ ಲೋಕಮಿಮಂ ಚಾಮುಂ ಚಾವೇಕ್ಷಮಾಣಸ್ಯ ಸ್ಮೃತಿಮತಿಮತೋ ಹಿತಮಾಯುರುಚ್ಯತೆ..” ಚ.ಸೂ.೩೦/೨೪
     ಸದಾ ಸರ್ವ ಜೀವಿಗಳ ಹಿತವನ್ನೇ ಬಯಸುವವರು, ಪರರ ಧನವನ್ನು ಆಶಿಸದವರು, ಸತ್ಯವಾದಿಗಳು, ಶಾಂತಿಪ್ರಿಯರು, ವಿವೇಚನಾ ಪೂರ್ವಕವಾಗಿ ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗಗಳನ್ನು ಪರಸ್ಪರ ತೊಡಕಾಗದಂತೆ ಅನುಭವಿಸುವವರು, ಪೂಜಾರ್ಹರನ್ನು ಪೂಜಿಸುವವರು, ಜ್ಞಾನವಿಜ್ಞಾನಶೀಲರು, ವೃದ್ಧರ ಸೇವೆ ಮಾಡುವವರು, ರಾಗ, ರೋಷ, ಈರ್ಷ್ಯ, ಮದ ಮುಂತಾದ ವೇಗಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವರು, ಸತತ ದಾನಪರರು, ನಿತ್ಯ ತಪೋಜ್ಞಾನ, ಪ್ರಶಮ, ಆಧ್ಯಾತ್ಮಪರರು, ಇಹ ಹಾಗೂ ಪರಲೋಕಗಳಲ್ಲಿ ಹಿತವನ್ನೇ ಬಯಸುವವರು, ಸ್ಮೃತಿ ಹಾಗೂ ಮತಿಯುಳ್ಳವರು - ಹೀಗೆ ಯಾರು ಮೇಲೆ ತಿಳಿಸಿದಂತೆ ಜೀವನವನ್ನು ನಡೆಸುತ್ತಾರೋ, ಅಂಥಹವರ ಆಯು ಅಥವಾ ಜೀವಿತವು ‘ಹಿತಾಯು’ ಎಂದು ಕರೆಯಲ್ಪಡುತ್ತದೆ.
ಅಹಿತಾಯು :

ಅಹಿತಮತೋ ವಿಪರ್ಯಯೇಣ ||” ಚ.ಸೂ.೩೦/೨೪
     ಮೇಲೆ ತಿಳಿಸಿದ್ದಕ್ಕೆ ವಿರುದ್ಧವಾಗಿ ಯಾರು ಜೀವನವನ್ನು ನಡೆಸುತ್ತಾರೋ, ಅಂಥಹವರ ಆಯು ಅಥವಾ ಜೀವಿತವು ‘ಅಹಿತಾಯು’ ಎಂದು ಕರೆಯಲ್ಪಡುತ್ತದೆ.
ಸುಖಾಯು :
ತತ್ರ ಶಾರೀರಮಾನಸಾಭ್ಯಾಂ ರೋಗಾಭ್ಯಾಂ ಅನಭಿದ್ರುತಸ್ಯ ವಿಶೇಷೇಣ ಯೌವನವತಃ ಸಮರ್ಥಾನುಗತ ಬಲವೀರ್ಯಯಶಃಪೌರುಷಪರಾಕ್ರಮಸ್ಯ ಜ್ಞಾನವಿಜ್ಞಾನ ಇಂದ್ರಿಯ ಇಂದ್ರಿಯಾರ್ಥಬಲಸಮುದಯೇ ವರ್ತಮಾನಸ್ಯ ಪರಮರ್ದ್ಧಿರುಚಿರವಿವಿಧೋಪಭೋಗಸ್ಯ ಸಮೃದ್ಧಸರ್ವಾರಂಭಸ್ಯ ಯಥೇಷ್ಟವಿಚಾರಿಣಃ ಸುಖಮಾಯುರುಚ್ಯತೆ ... ” .ಸೂ.೩೦/೨೪
     ಶಾರೀರ ಹಾಗೂ ಮಾನಸಿಕ ರೋಗಗಳಿಂದ ಮುಕ್ತರು, ವಿಶೇಷವಾಗಿ ಯೌವನ ಉಳ್ಳವರು, ಸರ್ವ ಕಾರ್ಯಗಳನ್ನು ಮಾಡಲು ಸಮರ್ಥರು, ಬಲ, ವೀರ್ಯ, ಯಶಃ, ಪೌರುಷ, ಪರಾಕ್ರಮಗಳನ್ನು ಹೊಂದಿರುವವರು, ಜ್ಞಾನ, ವಿಜ್ಞಾನ, ಇಂದ್ರಿಯ ಹಾಗೂ ಇಂದ್ರಿಯಾರ್ಥಗಳ ಉಪಭೋಗದಲ್ಲಿ ಸಮರ್ಥರು, ಉತ್ತಮ ಸಂಪತ್ತು ಹೊಂದಿರುವವರು, ಆರಂಭಿಸಿದ ಕಾರ್ಯದಲ್ಲಿ ಸಿದ್ಧಿ ಪಡೆಯುವವರು, ಸ್ವತಂತ್ರರು - ಈ ರೀತಿಯಾಗಿ ಯಾರ ಜೀವಿತವು ಇರುವುದೋ, ಅಂಥಹವರ ಆಯು ಅಥವಾ ಜೀವಿತವು ‘ಸುಖಾಯು’ ಎಂದು ಕರೆಯಲ್ಪಡುತ್ತದೆ.
ದುಃಖಾಯು/ಅಸುಖಾಯು :
“ಅಸುಖಮತೋ ವಿಪರ್ಯಯೇಣ || ” ಚ.ಸೂ.೩೦/೨೪
     ಮೇಲೆ ತಿಳಿಸಿದ್ದಕ್ಕೆ ವಿರುದ್ಧವಾಗಿ ಯಾರ ಜೀವಿತವು ಇರುವುದೋ, ಅಂಥಹವರ ಆಯು ಅಥವಾ ಜೀವಿತವು ‘ದುಃಖಾಯು’ ಎಂದು ಕರೆಯಲ್ಪಡುತ್ತದೆ.
ಆಯುವಿನ ಮಾನ ಅಥವಾ ಪ್ರಮಾಣ :
     ಮಾನವನ ಸಾವು ಸಮೀಪಿಸಿದಾಗ ಅವನ ಇಂದ್ರಿಯ, ಇಂದ್ರಿಯಾರ್ಥ, ಮನ, ಬುದ್ಧಿ, ಕಾರ್ಯಗಳಲ್ಲಿ ಕೆಲವು ವಿಕೃತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವನ್ನು ಆಯುರ್ವೇದದಲ್ಲಿ ‘ಅರಿಷ್ಟ ಲಕ್ಷಣಗಳು’ ಎಂದು ಕರೆಯುತ್ತಾರೆ. ಇವುಗಳ ಆಧಾರದ ಮೇಲೆ ಒಬ್ಬ ಇಷ್ಟೇ ಸಮಯ ಬದುಕುತ್ತಾನೆ ಎಂದು ನಿರ್ದಿಷ್ಟವಾಗಿ ಹೇಳಬಹುದು ಎಂದು ಆಯುರ್ವೇದ ಶಾಸ್ತ್ರ ಪ್ರತಿಪಾದಿಸುತ್ತದೆ. ಇವು ಮರಣದ ಒಂದು ವರ್ಷಕ್ಕೂ ಮುನ್ನ ಕಾಣಿಸಿಕೊಳ್ಳುವುದಿಲ್ಲ. ಒಬ್ಬನಲ್ಲಿ ವ್ಯಕ್ತವಾದ ಅರಿಷ್ಟ ಲಕ್ಷಣಗಳ ಆಧಾರದ ಮೇಲೆ ಅವನು ಒಂದು ಕ್ಷಣ, ಮುಹೂರ್ತ, ಒಂದು, ಮೂರು, ಐದು, ಏಳು, ಹತ್ತು ಅಥವಾ ಹನ್ನೆರಡು ದಿನ, ಪಕ್ಷ, ಮಾಸ, ಆರು ತಿಂಗಳು ಅಥವಾ ಒಂದು ವರ್ಷ ಬದುಕುತ್ತಾನೆ ಎಂದು ಹೇಳಬಹುದು. ಹೀಗೆ ಆಯುವಿನ ಪ್ರಮಾಣದ ಬಗ್ಗೆಯೂ ಆಯುರ್ವೇದದಲ್ಲಿ ತಿಳಿಸಲಾಗಿದೆ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2011/05/blog-post_27.html
                                                                                                        [ಮುಂದುವರೆಯುವುದು]

ಶುಕ್ರವಾರ, ಮೇ 27, 2011

ಆಯುರ್ಧಾರಾ - 1

ಆತ್ಮೀಯರೇ,
                 ಈ ತಾಣದಲ್ಲಿ ಶಿವಮೊಗ್ಗದ ಡಾ. ಬಿ.ಎಸ್.ಆರ್. ದೀಪಕ್ ರವರು 'ಆಯುರ್ಧಾರಾ' ಶೀರ್ಷಿಕೆಯಲ್ಲಿ ಆಯುರ್ವೇದದ ಮಹತ್ವ ಮತ್ತು ಚಿಕಿತ್ಸಾ ಕ್ರಮಗಳ ಕುರಿತು ತಿಳಿಸಲಿದ್ದಾರೆ. ಈ ತಾಣದ ಲೇಖಕರಾದ ಕವಿ ಸುರೇಶರ ಪುತ್ರರಾದ ಇವರು ಕಳೆದ ಬಿ.ಎ.ಎಮ್.ಎಸ್. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರಾಂಕ್ ಪಡೆದು ಉತ್ತೀರ್ಣರಾಗಿದ್ದಾರೆಂದು ತಿಳಿದುಬಂದಿದೆ. ಇವರು ವಯೊಲಿನ್ ವಿದ್ವತ್ ಪರೀಕ್ಷೆಯಲ್ಲಿ ಸಹ ಕಳೆದ ವರ್ಷ ರಾಜ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾಗಿರುವುದು ಅಭಿನಂದನೀಯ ಸಂಗತಿ. ಓದುಗರು ಇವರ ಲೇಖನಗಳ ಕುರಿತು ಸೂಕ್ತ ಸಲಹೆ, ಅಭಿಪ್ರಾಯ ನೀಡಲು ಕೋರಲಾಗಿದೆ.
-ಕ.ವೆಂ.ನಾಗರಾಜ್. 
***************************** 
ಆಯುರ್ವೇದದ ಪರಿಚಯಾತ್ಮಕ ಲೇಖನ ಮಾಲಿಕೆ - ೧
     ಆಯುರ್ವೇದವು ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ವೈದ್ಯ ವಿಜ್ಞಾನ. ಇದು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ. ಆಯುರ್ವೇದ ಪದವು ಆಯುಃ ಮತ್ತು ವೇದ ಎಂಬ ಎರಡು ಪದಗಳ ಜೋಡಣೆಯಿಂದ ಉಂಟಾಗಿದೆ. ಮೊದಲು ಈ ಎರಡು ಪದಗಳ ಅರ್ಥಗಳನ್ನು ಗಮನಿಸೋಣ. ಚರಕ ಸಂಹಿತೆಯಲ್ಲಿ ಆಯುಃ ಪದದ ವ್ಯಾಖ್ಯಾನ ಇಂತಿದೆ :
ಶರೀರೇಂದ್ರಿಯ ಸತ್ವಾತ್ಮ ಸಂಯೋಗೋ ಧಾರಿ ಜೀವಿತಂ |
ನಿತ್ಯಗಶ್ಚಾನುಬಂಧಶ್ಚ ಪರ್ಯಾಯೈಃ ಆಯುರುಚ್ಯತೆ || (ಚ.ಸಂ.ಸೂ. ೧/೪೨)
     ಶರೀರ, ಇಂದ್ರಿಯಗಳು, ಸತ್ವ(ಮನಸ್ಸು) ಹಾಗೂ ಆತ್ಮ, ಇವುಗಳ ಸಂಯೋಗವನ್ನು ಆಯು ಎಂದು ಕರೆಯುತ್ತಾರೆ. ಆಯು ಪದವು ಧಾರಿ, ಜೀವಿತ, ನಿತ್ಯಗ, ಅನುಬಂಧ ಎಂಬ ಪರ್ಯಾಯಗಳನ್ನೂ ಹೊಂದಿದೆ. ಮೇಲಿನ ನಾಲ್ಕೂ ಅಂಶಗಳು ಸಂಯುಕ್ತವಾಗಿರುವವರೆಗೂ ಮಾತ್ರ ಜೀವಿತಾವಧಿಯು. ವೇದ- ವೇದ ಎಂದರೆ ಜ್ಞಾನ ಎಂದರ್ಥ. ಮೇಲೆ ವಿವರಿಸಿರುವ ಆಯು ಅಥವಾ ಜೀವಿತದ ಬಗೆಗಿನ ಜ್ಞಾನವೇ ಆಯುರ್ವೇದ.
     ಆಯುರ್ವೇದದ ಪರಿಭಾಷೆಯನ್ನು ಚರಕ ಸಂಹಿತೆಯಲ್ಲಿ ಹೀಗೆ ವಿವರಿಸಲಾಗಿದೆ:
ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ |
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ || ಚ.ಸಂ.ಸೂ. ೧/೪೧
     ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು.
ಆಯುರ್ವೇದದ ಚಿಕಿತ್ಸಾಕ್ರಮವನ್ನು ೮ ಅಂಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ :
೧. ಕಾಯ ಚಿಕಿತ್ಸಾ.
೨. ಬಾಲ ಚಿಕಿತ್ಸಾ / ಕೌಮಾರ ಭೃತ್ಯ.
೩. ಗ್ರಹ ಚಿಕಿತ್ಸಾ.
೪. ಊರ್ಧ್ವಾಂಗ ಚಿಕಿತ್ಸಾ / ಶಾಲಾಕ್ಯ ತಂತ್ರ.
೫. ಶಲ್ಯ ತಂತ್ರ.
೬. ದಂಷ್ಟ್ರಾ ಚಿಕಿತ್ಸಾ / ವಿಷ ಚಿಕಿತ್ಸಾ.
೭. ಜರಾ ಚಿಕಿತ್ಸಾ / ರಸಾಯನ ಚಿಕಿತ್ಸಾ.
೮. ವಾಜೀಕರಣ ಚಿಕಿತ್ಸಾ.
**************
-ಡಾ.ಬಿ.ಎಸ್.ಆರ್.ದೀಪಕ್, ಬಿ.ಎ.ಎಮ್.ಎಸ್..ಶಿವಮೊಗ್ಗ