ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಫೆಬ್ರವರಿ 4, 2018

ಬದಲಾವಣೆ - ಜಗದ ನಿಯಮ - Change - Rule of the Universe


     ಜಗತ್ತು ಬದಲಾಗುತ್ತಲೇ ಇರುತ್ತದೆ, ನಾವೂ ಬದಲಾಗುತ್ತಲೇ ಇರುತ್ತೇವೆ. ಸದಾ ಬದಲಾವಣೆಯನ್ನು ಬಯಸುತ್ತಲೇ ಇರುತ್ತೇವೆ. ಬದಲಾಗುತ್ತ ಇರುವುದರಿಂದಲೇ ಜಗತ್ತು ನಡೆಯುತ್ತಿದೆ. ಹರಿಯುವ ನದಿಯಿಂದ ಒಂದು ಬೊಗಸೆ ನೀರು ತೆಗೆದುಕೊಂಡು ಮತ್ತೆ ನದಿಗೆ ಬಿಟ್ಟರೆ, ಆ ಬೊಗಸೆ ನೀರು ಮತ್ತೆ ನಮಗೆ ಬೇಕೆಂದರೂ ಸಿಗದು, ಮುಂದೆ ಹರಿದುಹೋಗಿಬಿಡುತ್ತದೆ. ಕಳೆದು ಹೋದ ಕ್ಷಣ ಮತ್ತೆ ಎಂದಿಗೂ ಸಿಗದು, ಕಾಲ ಮುಂದಕ್ಕೆ ಓಡುತ್ತಲೇ ಇರುತ್ತದೆ. ನಾವೂ ಅಷ್ಟೆ. ನಮ್ಮ ಶರೀರ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುತ್ತಿರುತ್ತದೆ. ಮಗು, ಬಾಲ್ಯ, ಯೌವನ, ಪ್ರೌಢ, ವೃದ್ಧ ಸ್ಥಿತಿಯೆಡೆಗೆ ಅನವರತ ಬದಲಾಗುತ್ತಲೇ ಹೋಗುತ್ತದೆ. ಯಾವುದೇ ಸ್ಥಿತಿಯನ್ನು ಯಥಾ ರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸಿಗುತ್ತದೋ ಇಲ್ಲವೋ, ಆದರೆ ನಾವು ಈಗಿಗಿಂತ ಉತ್ತಮ ಸ್ಥಿತಿಗೆ ಬದಲಾವಣೆಯನ್ನು, ಅದು ವೈಯಕ್ತಿಕವಾಗಿರಬಹುದು, ಕೌಟುಂಬಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಏನೇ ಆಗಿರಬಹುದು, ಬಯಸುತ್ತಲೇ ಇರುತ್ತೇವೆ.
     ನಾವು ಇಷ್ಟಪಟ್ಟಂತೆ ಬದಲಾವಣೆ ಆಗದಿದ್ದಾಗ ಬೇಸರವಾಗುತ್ತದೆ, ಅಸಮಾಧಾನವಾಗುತ್ತದೆ ಮತ್ತು ಜೀವನ ಅಸಹನೀಯವೆಂಬ ಭಾವನೆ ಉಂಟಾಗುತ್ತದೆ. ಕೆಲವರು ಗೊಣಗಾಡುವುದನ್ನು ಕೇಳುತ್ತಿರುತ್ತೇವೆ, 'ಅಯ್ಯೋ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪ. ಈಗ ಕಾಲ ಕೆಟ್ಟುಹೋಗಿದೆ. ಈ ಜನ ಬದಲಾಗುವುದಿಲ್ಲ'. ಬದಲಾಗದಿರುವುದು ಜನವೋ ಅಥವ ಬದಲಾವಣೆಗೆ ಹೊಂದಿಕೊಳ್ಳದವರೋ? ಬದಲಾವಣೆಗೆ ಒಗ್ಗದವರು, ಇಚ್ಛೆಯಂತೆ ಬದಲಾವಣೆ ತರಲಾಗದಿದ್ದವರು ದುಃಖಿಗಳಾಗುತ್ತಾರೆ. ಹಿಂದೆ ಹಾಯಿದೋಣಿಗಳು ಇದ್ದ ಕಾಲದಲ್ಲಿ ಬೀಸುತ್ತಿದ್ದ ಗಾಳಿಯನ್ನು ಉಪಯೋಗಿಸಿಕೊಂಡು ದೋಣಿಗಳನ್ನು ನಡೆಸುತ್ತಿದ್ದರು. ದೋಣಿಯ ಅನುಕೂಲಕ್ಕೆ ತಕ್ಕಂತೆ ಗಾಳಿ ಬೀಸದೇ ಇದ್ದಾಗ ಗಾಳಿಯ ದಿಕ್ಕನ್ನು ಬದಲಾಯಿಸಲು ಸಾಧ್ಯವಿರಲಿಲ್ಲವಾದ್ದರಿಂದ ಹಾಯಿಗಳನ್ನೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿ ಪ್ರಯಾಣ ಮುಂದುವರೆಸಿ ಗುರಿ ತಲುಪುತ್ತಿದ್ದರು. ಈ ನೀತಿಯನ್ನೇ ಅನುಸರಿಸಿದರೆ ದುಃಖವನ್ನೇ ಸಂತೋಷವಾಗಿ ಮಾರ್ಪಡಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು. ಆದರೆ ಬದಲಾವಣೆ ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದ್ದರೆ ಅದನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದರಲ್ಲಿ ಜಾಣತನವಿದೆ. ಉದಾಹರಣೆಗೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ಹಕ್ಕಿಗಳ ಹಿಂಡನ್ನು ನೋಡಿ ನಮಗೆ ಸಂತೋಷವಾಗುತ್ತದೆ. ಆ ಹಕ್ಕಿಗಳು ಆ ದಿಕ್ಕಿನಲ್ಲಿ ಹಾರಬಾರದಿತ್ತು, ಹೀಗೆ ಹಾರಬಾರದು, ಹಾಗೆ ಹಾರಬಾರದು ಎಂದು ನಮಗೆ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಇಚ್ಛೆಯಂತೆ ಅದು ನಡೆಯುವುದಿಲ್ಲವೆಂಬುದು ನಮಗೆ ಗೊತ್ತಿರುತ್ತದೆ. ಪ್ರತಿದಿನ ಪೂರ್ಣಚಂದ್ರನೇ ಆಕಾಶದಲ್ಲಿ ಕಾಣಬೇಕು, ಬೆಂಕಿ ಸುಡಬಾರದು, ನೀರು ಕೆಳಗಿನಿಂದ ಮೇಲಕ್ಕೆ ಹರಿಯಬೇಕು, ಕಾಡಿನಲ್ಲಿ ಕೇವಲ ಮಾವು, ಹಲಸು ಇತ್ಯಾದಿ ನಮಗೆ ಇಷ್ಟವಾದ ಗಿಡಮರಗಳು ಮಾತ್ರ ಹುಟ್ಟಬೇಕು ಎಂದೆಲ್ಲಾ ಬಯಸಲು ಸಾಧ್ಯವಿಲ್ಲದೆ ಇರುವುದರಿಂದ ಅವನ್ನು ನಾವು ಒಪ್ಪಿಕೊಳ್ಳುವ ಹಾಗೆ, ಬದಲಾವಣೆ ಸಾಧ್ಯವಿಲ್ಲದ ಸಂಗತಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ನಮಗೆ ಬದುಕು ಸಹನೀಯವಾಗುತ್ತದೆ. 
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನು ಮೊದಲಾಗು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     ಮಕರ ಸಂಕ್ರಮಣದಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆಂಬುದು ಪ್ರಚಲಿತ ವಿಷಯ. ಆದರೆ ನಿಜವಾಗಿ ಹೇಳಬೇಕೆಂದರೆ ಪಥ ಬದಲಾಯಿಸುವುದು ಸೂರ್ಯನಾಗಿರದೆ ಭೂಮಿ ಆಗಿರುತ್ತದೆ. ಭೂಮಿಯ ಪಥ ಬದಲಾಗುವುದರಿಂದ ಸೂರ್ಯ ಪಥ ಬದಲಾಯಿಸಿದಂತೆ ನಮಗೆ ಕಾಣುತ್ತದೆ. ಇದೇ ನಿಯಮ ನಮಗೂ ಅನ್ವಯಿಸುತ್ತದೆ. ಇನ್ನೊಬ್ಬರು ಬದಲಾಗಬೇಕೆಂದು ಬಯಸುವ ನಾವು ಬದಲಾಗಬೇಕಾದುದು ನಾವೇ ಆಗಿರಬಾರದೇಕೆ ಎಂದು ಯೋಚಿಸಬೇಕು. ನಾವು ಬದಲಾದರೆ ನಮಗೆ ಇತರರೂ ಬದಲಾದಂತೆ ಕಂಡೇ ಕಾಣುತ್ತದೆ. ಇದೇ ನಿಜವಾದ ಬದಲಾವಣೆ! ನಮ್ಮ ಚಿಂತನಾಧಾಟಿ ಬದಲಾದರೆ ಜಗತ್ತೇ ಬದಲಾಗಿಬಿಡುತ್ತದೆ! ಇಂತಹ ಬದಲಾವಣೆಯೂ ಸುಲಭವಾಗಿಬರುವುದಿಲ್ಲ. ನಾವು ಯಾರು ಬದಲಾಗಬೇಕೆಂದು ಬಯಸುತ್ತೇವೆಯೋ ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ, ನಮ್ಮ ನ್ಯೂನತೆಗಳು, ದೌರ್ಬಲ್ಯಗಳು ನಮ್ಮ ಅರಿವಿಗೆ ಬರುತ್ತವೆ. ಅಂತಹವುಗಳನ್ನು ನಿವಾರಿಸಿಕೊಳ್ಳಲು ಪ್ರಾರಂಭಿಸಿದರೆ ಬದಲಾವಣೆ ಗೋಚರವಾಗುತ್ತದೆ. ನಮ್ಮ ಮನಸ್ಸು ಆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತದೆ. ನಾವು ಯಾವ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುತ್ತೇವೆಯೋ ಜಗತ್ತು ಅದೇ ಬಣ್ಣದಿಂದ ನಮಗೆ ಕಾಣುತ್ತದೆ. ದೇವರನ್ನು ಕುರಿತು ಮಾಡುವ/ಸಲ್ಲಿಸುವ ಪ್ರಾರ್ಥನೆ ದೇವರನ್ನು ಬದಲಾಯಿಸುತ್ತದೆಯೇ? ಇಲ್ಲ, ಅದು ಪ್ರಾರ್ಥಿಸುವವನನ್ನು ಬದಲಾಯಿಸುತ್ತದೆ!  ಈ ಅರಿವೇ ಸಂಕ್ರಾಂತಿ, ಒಳ್ಳೆಯ ಕ್ರಾಂತಿ, ಒಳ್ಳೆಯ ಬೆಳವಣಿಗೆ! 
     ಜಗತ್ತು ಬದಲಾಗಬೇಕಾದರೆ ನಾವು ಬದಲಾಗಬೇಕು, ನಾವು ಮೊದಲು ಬದಲಾಗಬೇಕು ಎಂದು ಹೇಳುವುದೇನೋ ಸುಲಭ. ಆದರೆ ನಾವು ಬದಲಾಗಬೇಕು ಎಂದು ತಿಳಿದುಕೊಳ್ಳುವುದಾದರೂ ಹೇಗೆ? ಒಂದು ಪ್ರಯೋಗ ಮಾಡಬಹುದು. ನಾವು ಈದಿನ ಯಾವುದೋ ಒಂದು ಕೆಲಸ ಮಾಡಬೇಕೆಂದುಕೊಂಡಿದ್ದೇವೆ ಎಂದುಕೊಳ್ಳೋಣ. ಕನ್ನಡಿಯ ಮುಂದೆ ನಿಂತು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: 'ಇಂದು ನನ್ನ ಬದುಕಿನ ಕೊನೆಯ ದಿನವೆಂದಾದರೆ ಈ ಕೆಲಸವನ್ನು ಮಾಡುತ್ತೇನಾ?' 'ಇಲ್ಲ' ಎಂಬ ಉತ್ತರ ಹಲವು ದಿನಗಳವರೆಗೆ ಸತತವಾಗಿ ಬರುವುದಾದರೆ ನಾವು ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ನಾವು ಏನಾಗಿದ್ದೇವೆಯೋ ಅದನ್ನು ಬದಲಾಯಿಸಲಾರೆವು. ಆದರೆ, ನಮ್ಮ ತಲೆಯೊಳಗೆ ಯಾವ ವಿಚಾರವಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿದೆ. ಹೊಸ ವಿಚಾರಗಳು, ಒಳ್ಳೆಯ ವಿಚಾರಗಳನ್ನು ನಮ್ಮ ತಲೆಯಲ್ಲಿ ಸೇರಿಸಲು ಅವಕಾಶವಿದೆ.
     ನಾವು ಹಲವಾರು ಸಂಗತಿಗಳಲ್ಲಿ ಬದಲಾವಣೆ ಬಯಸುತ್ತೇವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತ ಒಂದು ಸಮಾಜವಾದಿ ಜಾತ್ಯಾತೀತ ರಾಷ್ಟ್ರ ಎಂದು ತಿದ್ದುಪಡಿ ಮಾಡಿದರು. ಆದರೆ ವಾಸ್ತವದಲ್ಲಿ ಈಗ ಏನಾಗಿದೆ? ಹೆಸರಿಗೆ ಜಾತ್ಯಾತೀತ ಎಂದು ಬಾಯಿಯಲ್ಲಿ ಜಪ ಮಾಡುವ ರಾಜಕಾರಣಿಗಳು ಜಾತಿಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಜಾತೀಯತೆಯ ವಿಷಬೀಜವನ್ನು ಮತ್ತಷ್ಟು ಬಲಗೊಳಿಸುತ್ತಿದ್ದಾರೆ, ಜಾತಿಯ ಹೆಸರಿನಲ್ಲಿ ಕಿತ್ತಾಟ ಮಾಡುತ್ತಾರೆ, ಒಬ್ಬರನ್ನೊಬ್ಬರ ವಿರುದ್ದ ಎತ್ತಿಕಟ್ಟುತ್ತಾರೆ, ಜಾತಿಗಳ ಆಧಾರದಲ್ಲೇ ಅಸ್ತಿತ್ವ ಕಂಡುಕೊಂಡಿದ್ದಾರೆ. ಸಾಹಿತ್ಯಿಕವಾಗಿ ಎಡ, ಬಲ, ದಲಿತ, ಮಹಿಳಾ, ಪ್ರಗತಿಪರ, ಪ್ರಗತಿವಿರೋಧಿ, ಇತ್ಯಾದಿ ಹಣೆಪಟ್ಟಿಗಳನ್ನು ಹಚ್ಚುತ್ತಾ ಆ ಕ್ಷೇತ್ರವನ್ನೂ ಮಲಿನಗೊಳಿಸಿದ್ದಾರೆ. ಎಲ್ಲರ ಹಿತವನ್ನು ಬಯಸುವುದೇ ಸಾಹಿತ್ಯವಾಗಿರುವಾಗ ಅದನ್ನೂ ಕೆಸರೆರಚುವ ಸಾಧನ ಮಾಡಿಕೊಂಡಿರುವುದು ವಿಷಾದದ ಸಂಗತಿ. ಭಾಷೆಯ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡು ಮೆರೆಯುತ್ತಿರುವ ಸಂಘಟನೆಗಳು ಭಯ ಹುಟ್ಟಿಸುವ ಮಟ್ಟಕ್ಕೆ ಬೆಳೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಹಿತಕ್ಕೆ ಧಕ್ಕೆ ತರುವ, ದೇಶದ ಮಾನವನ್ನೇ ಹರಾಜು ಹಾಕುವವರು ಗಣ್ಯರೆನಿಸಿಕೊಂಡಿದ್ದಾರೆ. ಇದನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರೆ ದಿಗಿಲಾಗುತ್ತದೆ. ಆದರೆ ಬದಲಾವಣೆಯ ದಿನಗಳು ಬರಲೇಬೇಕು, ಬರುತ್ತವೆ! ಈ ಆಶಾವಾದ ನಮ್ಮನ್ನು ಹತಾಶೆಯಿಂದ ಹೊರಬರುವಂತೆ ಮಾಡುತ್ತದೆ.
     ನಿಜ, ಬದಲಾವಣೆ ಆಗಬೇಕು. ಯಾರು ಮಾಡಬೇಕು? ಬೇರೆ ಯಾರಾದರೂ ಮಾಡಲಿ ಎಂದು ಕಾಯುತ್ತಾ ಕೂರಬೇಕೇ? ನಮಗೆ ಬೇಕಾದ ಬದಲಾವಣೆ ಮಾಡಬೇಕಾದವರು ನಾವೇ ಆಗಿದ್ದೇವೆ. ಬದಲಾವಣೆ ಮಾಡಲೆಂದು ಯಾರನ್ನು ಕಾಯುತ್ತಿದ್ದೇವೆಯೋ ಆ ಅವರು ಬೇರೆ ಯಾರೂ ಅಲ್ಲ, ನಾವೇ ಆಗಿದ್ದೇವೆ. ನಾವು ಬಯಸುವ ಬದಲಾವಣೆಯನ್ನು ಮೊದಲು ನಮ್ಮಲ್ಲಿ ತಂದುಕೊಳ್ಳೋಣ. ಆಗ ಕ್ರಮೇಣ ಬದಲಾವಣೆ ಬರುತ್ತಾ ಹೋಗುತ್ತದೆ. ಮೊದಲು ಕ್ಷೀಣವಾಗಿ ಪ್ರಾರಂಭವಾಗುವ ಬದಲಾವಣೆ ಬರಬರುತ್ತಾ ದಟ್ಟವಾಗುತ್ತೆ. ಬದಲಾವಣೆಯ ತಂಗಾಳಿ ಬೀಸತೊಡಗುತ್ತದೆ. ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಬೇರೆ ಏನನ್ನೂ ಬದಲಾವಣೆ ಮಾಡಲಾರೆವು. ಸರ್ವರ ಹಿತ ಬಯಸುವ ಕೆಲವೇ ಸಜ್ಜನರು ಜಗತ್ತಿನಲ್ಲಿ ಬದಲಾವಣೆಯ ಬೆಳಕು ತರಬಲ್ಲರು. ಆ ಕೆಲವರಲ್ಲಿ ನಾವೂ ಒಬ್ಬರಾಗೋಣ.
-ಕ.ವೆಂ.ನಾಗರಾಜ್.

ಸೋಮವಾರ, ಜನವರಿ 22, 2018

ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!


     ಮಿತ್ರ ಅಶೋಕಕುಮಾರರು ಅಶ್ವತ್ಥಾಮನ್ ನಾಟಕದಲ್ಲಿ ಬರುವ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ಅರ್ಥ ವಿವರಿಸಲು ಕೇಳಿದಾಗ ನನಗೆ ಹಳೆಯ ಘಟನೆಯೊಂದು ನೆನಪಾಯಿತು. ಕೆಲವು ವರ್ಷಗಳ ಹಿಂದೆ ಹಾಸನದ ವಿಜಯನಗರ ಬಡಾವಣೆಗೆ ಹೋಗುವ ಸಲುವಾಗಿ ಸಂತೆಪೇಟೆಯ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಸಿಗ್ನಲ್ಲಿಗಾಗಿ ಕಾಯುತ್ತಿದ್ದೆ. ಹಸಿರು ನಿಶಾನೆ ಕಂಡ ಕೂಡಲೇ ವಾಹನಗಳು ಆತುರದಿಂದ ಮುಂದೆ ಹೊರಟ ಸಮಯದಲ್ಲಿಯೇ ಒಂದು ನಾಯಿಯ ಕೊನೆಯ ಚೀತ್ಕಾರ ಕೇಳಿಸಿ ಕಣ್ಣು ಹಾಯಿಸಿದೆ. ಲಾರಿಯ ಹಿಂಬದಿಯ ಚಕ್ರಕ್ಕೆ ಸಿಕ್ಕಿದ್ದ ನಾಯಿ ಕೊನೆಯುಸಿರೆಳೆದಿತ್ತು. ಹಾಗೆಂದು ಆ ನಾಯಿ ಇದ್ದಕ್ಕಿದ್ದಂತೆ ಸಿಕ್ಕಿ ಸತ್ತಿದ್ದಾಗಿರಲಿಲ್ಲ. ಆ ಲಾರಿ ಬಹಳ ಸಮಯದಿಂದ ಅಲ್ಲಿ ನಿಂತಿತ್ತು. ಮಟ ಮಟ ಮಧ್ಯಾಹ್ನದ ಉರಿಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಆ ನಾಯಿ ಲಾರಿಯ ಹಿಂಬದಿಯ ಚಕ್ರಗಳ ಮುಂದೆ ನೆರಳಿನಲ್ಲಿ ಹಿತವಾಗಿ ಮಲಗಿ ನಿದ್ರಿಸಿತ್ತು. ನಾನು ಸಿಗ್ನಲ್ಲಿಗಾಗಿ ಕಾಯುತ್ತಿದ್ದಾಗ ಅದನ್ನು ಗಮನಿಸಿದ್ದೆ. ಚಾಲಕನ ಹೊರಡುವ ಸಮಯ ಬಂದಿದ್ದ ಸಮಯಕ್ಕೆ ಸರಿಯಾಗಿ ಸಿಗ್ನಲ್ ಬಂದುದರಿಂದ ತಕ್ಷಣ ಆತ ಲಾರಿಯನ್ನೇರಿ ನಾಯಿಯನ್ನು ಗಮನಿಸದೆ ಲಾರಿ ಚಲಿಸಿದ್ದರಿಂದ ಅದು ಪರಲೋಕವಾಸಿಯಾಗಿಬಿಟ್ಟಿತ್ತು. ಕೆಲವೇ ಸಮಯದ ಹಿಂದೆ ನೆರಳಿನಲ್ಲಿ ಮಲಗಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ ನಾಯಿ ಚಿರನಿದ್ರೆಗೆ ಜಾರಿತ್ತು. ಈ ಕ್ಷಣಕ್ಕೆ ಏನೋ, ಮುಂದಿನ ಕ್ಷಣಕ್ಕೆ ಏನೋ ಎಂಬುದನ್ನು ತಿಳಿಯದ ನಶ್ವರ ಜೀವನದ ದರ್ಶನವನ್ನು ಆ ನಾಯಿಯ ಅಂತ್ಯ ನನಗೆ ತೋರಿಸಿತ್ತು. ಆ ನಾಯಿಗೇನೋ ವಿವೇಚನಾ ಶಕ್ತಿ ಇರಲಿಲ್ಲ. ಇದ್ದಿದ್ದರೆ ಲಾರಿಯ ಚಕ್ರದ ಮುಂದೆ ಮಲಗುತ್ತಿರಲಿಲ್ಲ. ಬೇರೆಲ್ಲೋ ಸುರಕ್ಷ್ಷಿತವೆನ್ನಿಸಿದ ಸ್ಥಳದಲ್ಲಿ ಮಲಗುತ್ತಿತ್ತು. ಆದರೆ, ವಿವೇಚನಾ ಶಕ್ತಿ ಇರುವ ಮನುಷ್ಯರೇ ಅವಿವೇಕತನದಿಂದ ವರ್ತಿಸುತ್ತಾರೆ ಎಂದರೆ ಚೋದ್ಯವೆನಿಸುವುದಾದರೂ ಸತ್ಯವಾಗಿದೆ. ಲಾರಿಯ ಚಾಲಕ ವಿವೇಕತನದಿಂದ ವರ್ತಿಸಿದ್ದರೆ ನಾಯಿಯ ಪ್ರಾಣ ಉಳಿಯುತ್ತಿತ್ತು.
     ನಮ್ಮ ಬದುಕು ಶಾಶ್ವತವಲ್ಲವೆಂದು ತಿಳಿದಿದ್ದರೂ ನಾವು ಚಿರಂಜೀವಿಗಳೆಂದು ಭಾವಿಸುವಂತೆ ಮಾಡುವ ಅದೆಂತಹುದೋ ನಮ್ಮೊಳಗೆ ಇದೆ! ಅದೇ ನಮ್ಮ ವಿವೇಚನಾ ಶಕ್ತಿಗೆ ತಡೆ ಒಡ್ಡುವ ಕೆಲಸ ಮಾಡುತ್ತದೆ. 'ಖ' ಎಂದರೆ ಇಂದ್ರಿಯ. ಸುಖ ಎಂದರೆ ಇಂದ್ರಿಯಗಳಿಗೆ ಯಾವುದು ಹಿತವೆನ್ನಿಸುವುದೋ ಅದು ಮತ್ತು ದುಃಖವೆಂದರೆ ಇಂದ್ರಿಯಗಳಿಗೆ ಯಾವುದು ಅಹಿತವೆನಿಸುವುದೋ ಅದು ಎಂದು ಅಂದುಕೊಳ್ಳುತ್ತೇವೆ. ಇಲ್ಲೂ ಸಮಸ್ಯೆಯಿದೆ. ಈಗ ಸುಖವೆಂದುಕೊಂಡಿದ್ದು ಮುಂದೆ ದುಃಖವಾಗಿ ಕಾಡುವುದಿದೆ. ಈಗ ದುಃಖವಾಗಿ ಕಂಡಿದ್ದು ಮುಂದೆ ಸುಖವಾಗಿ ಪರಿಣಮಿಸಬಹುದಾದುದೂ ಇದೆ. ಔಷಧಿ ನಾಲಿಗೆಗೆ ಕಹಿಯಾದರೂ ದೇಹಕ್ಕೆ ಉಪಕಾರಿ. ಆದರೆ ಹಿತವೆಂದು ಭಾವಿಸಿ ಕುಡಿಯುವ ಮಾದಕ ದ್ರವ್ಯ? ಮಜಾ ಇದೆ ಎಂದು ಕುಡಿಯುತ್ತಾರೆ, ದೊಡ್ಡಸ್ತಿಕೆಗಾಗಿ ಕುಡಿಯುತ್ತಾರೆ, ಕೊನೆಗೆ ದುಃಖ ಮರೆಯುವ ಸಲುವಾಗಿ ಎನ್ನುತ್ತಲೂ ಕುಡಿಯುತ್ತಾರೆ. ಆದರೆ ಮೆದುಳಿನ ಮೇಲೆ ಪ್ರಭಾವ ಬೀರುವ ಆ ದ್ರವ ಕ್ರಮೇಣ ಶರೀರದ ಆರೋಗ್ಯವನ್ನೇ ಹದಗೆಡಿಸಿ ನಾನಾ ರೋಗಗಳಿಗೆ ಆಸ್ಪದ ನೀಡಿ ಜೀವನವನ್ನೇ ನರಕ ಮಾಡಬಹುದು. ಕುಡಿತವೇ ಚಟವಾಗಿರಿಸಿಕೊಂಡವರು ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಲ್ಪಡುತ್ತಾರೆ ಎಂಬುದೂ ಸತ್ಯ. ಎಲ್ಲವೂ ಗೊತ್ತಿದ್ದೂ ಕುಡಿಯುತ್ತಾರೆಂದರೆ, ಅವರ ವಿವೇಚನಾ ಶಕ್ತಿಯ ಬಗ್ಗೆ ಸಂದೇಹ ಬರುತ್ತದೆ. ಶೋಕಿಗಾಗಿ ಸೇದುವ ಸಿಗರೇಟು, ಬೀಡಿಗಳು ಸೇದುವವರದು ಮಾತ್ರವಲ್ಲ, ಜೊತೆಗಿರುವವರ ಆರೋಗ್ಯವನ್ನೂ ಕೆಡಿಸುತ್ತದೆ. 'ಇರುವುದು ಎರಡು ದಿನ, ಮಜಾ ಮಾಡಿ ಹೋಗೋಣ' ಎಂಬ ಮನೋಭಾವದ ಅವರು, "ಕುಡಿಯುವುದಿಲ್ಲ, ಸೇದುವುದಿಲ್ಲ, ಮಜಾ ಮಾಡುವುದಿಲ್ಲ ಎನ್ನುವುದಾದರೆ ಬದುಕಿರುವುದಾದರೂ ಏಕೆ?" ಎಂಬ ಪ್ರಶ್ನೆಯನ್ನೂ ಮುಂದೊಡ್ಡುತ್ತಾರೆ. ಜಗತ್ತಿನಲ್ಲಿ ಇದು ಬೇಕೇ ಬೇಕು ಅಥವ ಇದು ಬೇಡವೇ ಬೇಡ ಎಂಬಂತಹ ಯಾವುದೇ ಸಂಗತಿಗಳಿಲ್ಲ. ಆದರೆ ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಎಲ್ಲವೂ ಕಷ್ಟವೇ. ಇಂದಿನ ಕ್ಷಣಿಕ ಸುಖಕ್ಕಾಗಿ ವರ್ಷಗಟ್ಟಲೇ ನರಳುತ್ತಾ, ಕೊರಗುತ್ತಾ ಸಾಯುವ ಸ್ಥಿತಿ ಬಂದರೆ ಅದು ಬದುಕುವ ಪರಿಯಂತೂ ಖಂಡಿತಾ ಅಲ್ಲ. 
     ವಿವೇಚನಾ ಶಕ್ತಿಯನ್ನು ಸಮರ್ಪಕವಾಗಿ ಬಳಸಿದ್ದರೆ ನಮಗೆ ನೂರು ವರ್ಷಗಳ ಆಸುಪಾಸಿನವರೆಗೆ ಮಾತ್ರ ಜೀವಿಸಿರಬಲ್ಲೆವು ಎಂಬ ಅರಿವು ಜಾಗೃತವಾಗಿರುತ್ತಿತ್ತ್ತಲ್ಲದೆ, ನಾಲ್ಕು ಜನರಿಗೆ ಉಪಕಾರಿಯಾಗಿಯೂ ಇರುತ್ತಿದ್ದವು. ಈ ಭೂಮಿಯಲ್ಲಿ ಎಂತೆಂತಹ ರಾಜ, ಮಹಾರಾಜರುಗಳು, ಚಕ್ರವರ್ತಿಗಳು ಆಳಿಹೋಗಿದ್ದಾರೆ. ಇಡೀ ಜಗತ್ತನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವಿದ್ದ ಅವರು ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಈಗಲೂ ನಮ್ಮ ಎಷ್ಟೋ ರಾಜಕಾರಣಿಗಳು, ಅಧಿಕಾರಿಗಳು, ಪುಂಡರು, ಗೂಂಡಾಗಳ ಹತ್ತಿರ ಅದೆಷ್ಟು ಕೋಟಿ ಕೋಟಿ ಬೆಲೆಬಾಳುವ ಹಣ, ಆಸ್ತಿಗಳಿವೆಯೋ ಗೊತ್ತಿಲ್ಲ. ಆದರೂ ಅವರುಗಳಿಗೆ ಅಜೀರ್ಣವಾಗಿಲ್ಲ. ಕೊನೆಯಲ್ಲಿ ಒಂದು ದಿನ ಒಂದು ಸಣ್ಣ ಗುಂಡುಸೂಜಿಯನ್ನೂ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಿಲ್ಲ. ದೇವರು ಅದ್ಭುತ ಸಮಾನತಾವಾದಿ. ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬರಲು ಅವಕಾಶ ಕೊಡುವುದಿಲ್ಲ. ಹಾಗೆಯೇ ಹೋಗುವಾಗಲೂ ಏನನ್ನೂ ಕೊಂಡುಹೋಗಲು ಬಿಡುವುದಿಲ್ಲ.
     ಇನ್ನೂ ಬೇಕು, ಬೇಕು ಎಂಬ ಅನಂತ ಅತೃಪ್ತತೆಯನ್ನು ಹೊಂದಿರುವ ಮನುಷ್ಯ ತಾನು ಈಗಲೇ ಸಾಯುವುದಿಲ್ಲ ಎಂದು ಭಾವಿಸಿ ಕೊನೆಯವರೆಗೂ ಬೇಕು ಅನ್ನುತ್ತಲೇ ಒಂದು ದಿನ ಕಂತೆ ಒಗೆಯುತ್ತಾನೆ. ಅವಧೂತರೊಬ್ಬರು ಭಕ್ತರ ಮನೆಯೊಂದಕ್ಕೆ ಬಂದಾಗ ಆ ಮನೆಯಲ್ಲಿದ್ದ 90ರ ಆಸುಪಾಸಿನ ವಯಸ್ಸಿನ ವೃದ್ಧೆಯೊಬ್ಬರು ಅವರಿಗೆ, "ಸ್ವಾಮಿ, ಜೀವನದಲ್ಲಿ ನಾನು ಅನುಭವಿಸಬೇಕಾದದ್ದೆಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ. ಇನ್ನು ಏನೂ ಉಳಿದಿಲ್ಲ.  ನಿಮ್ಮ ಪಾದದ ಬಳಿಯಲ್ಲಿ ಪ್ರಾಣ ಬಿಡಲು ಅವಕಾಶವಾದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ" ಎಂದರಂತೆ. ಆ ಅವಧೂತರು, "ಅದಕ್ಕೇನಂತೆ, ಹಾಗೆಯೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಬಿಟ್ಟರಂತೆ. ಗಾಬರಿಯಾದ ಆ ವೃದ್ಧೆ, "ಈಗಲೇ ಅಲ್ಲ ಸ್ವಾಮೀಜಿ, ನನ್ನ ಮೊಮ್ಮಗಳ ಮದುವೆ ನೋಡಬೇಕು. ಅವಳ ಮಕ್ಕಳನ್ನು ಆಡಿಸಬೇಕು. ಈ ಆಸೆ ಪೂರೈಸಿಕೊಂಡು ಕಣ್ಣು ಮುಚ್ಚುತ್ತೇನೆ" ಎಂದಳಂತೆ! ಇಂತಹ ಉದಾಹರಣೆಗಳು ಸಾಕಷ್ಟು ಕಂಡುಬರುತ್ತವೆ. 
     ನಾನು ಇಂತಹ ದಿನ ಸಾಯುತ್ತೇನೆ ಎಂಬುದು ಗೊತ್ತಾದರೆ ಮನುಷ್ಯನ ನಡವಳಿಕೆಯೇ ಬದಲಾಗಿಬಿಡುತ್ತದೆ. ಈಗಿನ ಸ್ಥಿತಿ ಹೇಗಿದೆಯೆಂದರೆ ನಮ್ಮ ಎಲ್ಲಾ ಒಳ್ಳೆಯ ನಡವಳಿಕೆಗಳನ್ನು ಕೊನೆಗಾಲಕ್ಕೆ ಮೀಸಲಿರಿಸುತ್ತೇವೆ. ಅಂತಹ ಸಮಯ ಬಂದಾಗ ನೂರೆಂಟು ಕಾಯಿಲೆ, ಕಸಾಲೆಗಳಿಂದ ನರಳುತ್ತಾ, ಪರಾಧೀನರಾಗಿ ಮಾಡುವ ಮನಸ್ಸಿದ್ದರೂ ಮಾಡಲಾಗದ ಸ್ಥಿತಿಗೆ ಬಂದಿರುತ್ತೇವೆ. ಜನಿಸಿದ ನಂತರ ಉಸಿರಾಡಲು ಪ್ರಾರಂಭಿಸಿದ ನಂತರದಲ್ಲಿ ಆ ಉಸಿರು ನಿಲ್ಲುವವರೆಗೂ ಬೇಕು, ಬೇಕು ಎಂತಲೇ ಒದ್ದಾಡುತ್ತಿರುತ್ತೇವೆ. ಹೀಗಾಗಿ ನಾವೂ ನೆಮ್ಮದಿಯಿಂದ ಇರುವುದಿಲ್ಲ, ಇತರರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಪ್ರತಿಯೊಂದು ಸಲ ಉಸಿರಾಡಿದಾಗಲೂ, ಉಸಿರು ನಿಲ್ಲುವ ಸಮಯಕ್ಕೆ ಹತ್ತಿರ ಹೋಗುತ್ತಿರುತ್ತೇವೆ ಎಂಬ ಪರಿಜ್ಞಾನ ಬಂದರೆ, ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವ ಬಂದರೆ ಸಂತೋಷ ನಮ್ಮದಾಗುತ್ತದೆ, ಇನ್ನೊಬ್ಬರಿಗೂ ಸಂತೋಷ ಹಂಚಬಲ್ಲವರಾಗುತ್ತೇವೆ. ಅಶ್ವತ್ಥಾಮನ್ ನಾಟಕದ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ನಂತರದಲ್ಲಿ ಬರುವ ಈ ಸಾಲು ಸಹ ಅರ್ಥಗರ್ಭಿತವಾಗಿದೆ: 'ಬಂದುದನೆ ಕೊಂಡುಂಡು ತಾಳ್ದವನೆ ಜಾಣನ್!'
-ಕ.ವೆಂ. ನಾಗರಾಜ್.


ಮಂಗಳವಾರ, ಜನವರಿ 2, 2018

ಹೊಟ್ಟೆಕಿಚ್ಚು


     ಹೊಟ್ಟೆ ಹಸಿದಿರುವಾಗ ನಮಗೆ ಆಹಾರ ಬೇಕೆನಿಸುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಸಂಗತಿ, ಅದು ನಮಗೆ ಎಷ್ಟೇ ಪ್ರಿಯವಾದುದಾಗಿದ್ದರೂ, ನಮಗೆ ಬೇಕು ಅನ್ನಿಸುವುದಿಲ್ಲ. ಇದೇ ಹಸಿವಿನ ಮಹಿಮೆ. ಒಬ್ಬ ಹಸಿದಿರುವವನ ಮುಂದೆ ಒಣ ಉಪದೇಶ ವ್ಯರ್ಥ. ಬಲವಂತವಾಗಿ ಅವನಿಗೆ, ಅದು ಎಷ್ಟೇ ಉನ್ನತವಾದ ವಿಚಾರವಾಗಿದ್ದರೂ, ಹೇಳತೊಡಗಿದರೆ ಹೇಳುವವನಿಗೆ ಒದೆ ಬಿದ್ದಾವು ಅಥವ ಹಸಿದವನು ಅಲ್ಲಿಂದ ಕಂಬಿ ಕಿತ್ತಾನು! ಆದರೆ ಒಮ್ಮೆ ಹೊಟ್ಟೆ ತುಂಬಿತೋ, ಮುಗಿಯಿತು! ನಮಗೆ ಬೇಕಾದುದು, ಬೇಡವಾದುದೂ ಎಲ್ಲವೂ ನಮಗೇ ಬೇಕು ಎಂದು ಬಯಸುತ್ತೇವೆ. ಇಷ್ಟೇ ಆದರೆ ಏನೂ ಸಮಸ್ಯೆಯಿಲ್ಲ. ನಮಗೆ ಬೇಕು, ಆದರೆ ಅದು ಇನ್ನೊಬ್ಬರಿಗೆ ಬೇಡ ಎನ್ನುವ ಭಾವ ಉಂಟಾದರೆ? ಅದೇ ಹೊಟ್ಟೆಕಿಚ್ಚು! ತಿಂದ ಆಹಾರವನ್ನು ಜೀರ್ಣಿಸುವ ಕಿಚ್ಚು ಒಂದಿದೆ, ಅದನ್ನು ವೈಶ್ವಾನರ ಅನ್ನುತ್ತಾರೆ. ಅದು ಪಚನಕ್ರಿಯೆಗೆ, ಆ ಮೂಲಕ ನಮ್ಮ ಆರೋಗ್ಯಕ್ಕೆ ಹಿತಕಾರಿ. ಆದರೆ ಹೊಟ್ಟೆಗೇ ಕಿಚ್ಚು ಬಿದ್ದರೆ, ಆ ಕಿಚ್ಚು ನಮ್ಮನ್ನಷ್ಟೇ ಅಲ್ಲ, ಇತರರನ್ನೂ ಸುಡುತ್ತದೆ. ಆ ಹೊಟ್ಟೆಕಿಚ್ಚಿಗೆ ಇನ್ನೊಂದು ಹೆಸರೂ ಇದೆ, ಮತ್ಸರ! ಡಿವಿಜಿಯವರು "ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್| ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ||" ಎಂದಿರುವುದು ಈ ಕಾರಣಕ್ಕಾಗಿಯೇ ಆಗಿದೆ. 
     ನನ್ನಲ್ಲಿ ಇರದಿರುವುದು ಅವನಲ್ಲಿ ಇರಬಾರದು; ನನಗಿಂತ ಹೆಚ್ಚು- ಅದು ಶ್ರೀಮಂತಿಕೆಯಿರಬಹುದು, ಅಂತಸ್ತಿರಬಹುದು, ಅಧಿಕಾರವಿರಬಹುದು, ಹೆಸರು ಇರಬಹುದು- ಅವನಲ್ಲಿ ಇರಲೇಬಾರದು ಎಂದು ಬಯಸುವಂತೆ ಮಾಡುವುದೇ ಈ ಹೊಟ್ಟೆಕಿಚ್ಚು! ನಾನು ಎಷ್ಟೋ ವಿಷಯಗಳಲ್ಲಿ ಅವನಿಗಿಂತ ಮುಂದೆ ಇರಬಹುದು, ಆದರೆ ಯಾವುದಾದರೂ ಒಂದು ವಿಷಯದಲ್ಲಿ ಅವನು ಮುಂದುವರೆದರೆ ನನಗೆ ಹೊಟ್ಟೆ ಉರಿಯುವಂತೆ ಅನುಭವ ಉಂಟುಮಾಡುವುದೇ ಈ ಹೊಟ್ಟೆಕಿಚ್ಚು. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಎದುರಾಳಿಯ ಎರಡು ಕಣ್ಣೂ ಹೋಗಬೇಕು ಎಂದು ಬಯಸುವುದನ್ನು ಕಾಣುತ್ತಿರುತ್ತೇವೆ. ಎದುರಾಳಿಯ ಸರ್ವನಾಶವಾಗಲಿ ಎಂದು ನಾನಾ ವಿಧದ ತಂತ್ರ ಕುತಂತ್ರಗಳನ್ನು ಮಾಡುವವರಿಗೇನೂ ಕಡಿಮೆಯಿಲ್ಲ. ಅವರು ಏಕೆ ಹಾಳಾಗಬೇಕು? ಅವರು ಏಕೆ ತೊಂದರೆಗೆ ಒಳಗಾಗಬೇಕು? ಅದರಿಂದ ಇವರಿಗೆ ಏನು ಲಾಭ? ಏನೂ ಲಾಭವಿಲ್ಲ. ಅವರ ಕಷ್ಟ-ನಷ್ಟಗಳನ್ನು ಕಂಡು ಅನುಭವಿಸುವ ವಿಕೃತ ಆನಂದವೇ ಇವರಿಗಾಗುವ ಲಾಭ. ಇದು ವೈಯಕ್ತಿಕ ಅಧಃಪತನಕ್ಕೆ ಒಯ್ಯುವ ಮಾರ್ಗವಲ್ಲದೆ ಮತ್ತೇನು? ಮನುಷ್ಯನ ಅನೇಕ ಗುಣವಿಶೇಷಗಳಲ್ಲಿ ಕೇವಲ ಕೆಡುಕನ್ನೇ ತರುವ ಏಕೈಕ ಗುಣವೆಂದರೆ ಅದು ಈ ಹೊಟ್ಟೆಕಿಚ್ಚು ಮಾತ್ರ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ.
     ಶ್ರೀರಾಮ ರಾಜನಾಗಿಬಿಡುತ್ತಾನೆ, ಭರತನಿಗೆ ಅವಕಾಶ ತಪ್ಪುತ್ತದೆ ಎಂಬ ಕಾರಣಕ್ಕಾಗಿ ಕೈಕೇಯಿಯಲ್ಲಿ ಉಂಟಾದ ಹೊಟ್ಟೆಕಿಚ್ಚು ರಾಮಾಯಣಕ್ಕೆ ಕಾರಣವಾಯಿತು. ಪಾಂಡವರು ರಾಜ್ಯ-ಕೋಶಗಳನ್ನು ಅನುಭವಿಸಬಾರದು, ಅವರಿಗೆ ಸೂಜಿಮೊನೆಯಷ್ಟೂ ಭೂಮಿ ಸಿಗಬಾರದು ಎಂಬ ದುರ್ಯೋಧನನ ಮತ್ಸರ ಮಹಾಭಾರತಕ್ಕೆ ನಾಂದಿಯಾಯಿತು. ಪೃಥ್ವೀರಾಜ ಜಯಚಂದ್ರನ ಮೇಲಿನ ಮತ್ಸರದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದರಿಂದ ಭಾರತ ಅನೇಕ ಶತಮಾನಗಳ ಕಾಲ ಮುಸ್ಲಿಮ್ ಆಕ್ರಮಣಕಾರರ ದಾಸ್ಯಕ್ಕೆ ಒಳಗಾಗಬೇಕಾಯಿತು. ಇಂದಿನ ನಿಜಜೀವನದ ರಾಮಾಯಣ, ಮಹಾಭಾರತದ ಕಥೆಗಳಿಗೂ ಮತ್ಸರವೇ ಮೂಲಕಾರಣವಾಗಿದೆ. ಇಂದು ಪ್ರಸಾರವಾಗುತ್ತಿರುವ ಅನೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವನ್ನು ವೈಭವೀಕರಿಸಿ ಇತರರನ್ನು ಹೇಗೆ ಹಾಳು ಮಾಡಬೇಕು, ಹೇಗೆ ತುಳಿಯಬೇಕು ಎಂಬುದನ್ನು ತೋರಿಸುತ್ತಾ ಋಣಾತ್ಮಕ ಅಂಶಗಳಿಗೆ ನೀರೆರೆಯುತ್ತಿರುವುದು ವಿಷಾದಕರ. ಯಾವುದೇ ವ್ಯಕ್ತಿಯ ಹತ್ಯೆಯಂತಹ ಭೀಕರ ಕೃತ್ಯಗಳಲ್ಲೂ ಜಾತಿ, ವಿಚಾರ, ರಾಜಕೀಯ ಪಕ್ಷ ಇತ್ಯಾದಿ ಪ್ರೇರಿತ ಮತ್ಸರಗಳೇ ಪ್ರಧಾನವಾಗಿ ನ್ಯಾಯ, ಮಾನವೀಯ ಅಂಶಗಳು ಮೂಲೆಗುಂಪಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹದಾಯಿ ನೀರಿನ ವಿವಾದದ ವಿಷಯವೂ ಸಹ ರಾಜಕೀಯ ಪಕ್ಷಗಳ ಲಾಭದ ಸಲುವಾಗಿ ಬಳಕೆಯಾಗುತ್ತಿದೆ. ಪರ-ವಿರೋಧದ ಹೋರಾಟಗಳಲ್ಲೂ ಸಹ ನ್ಯಾಯಕ್ಕಿಂತ ಹೆಚ್ಚಾಗಿ ಯಾರಿಗೋ ನಷ್ಟ ಉಂಟುಮಾಡುವುದು ಅಥವ ಲಾಭ ಗಳಿಸುವುದೇ ಪ್ರಧಾನ ಅಂಶವಾಗಿದೆ. ಇಂತಹ ವಿಷಯಗಳಲ್ಲಾದರೂ ಪಕ್ಷಾತೀತವಾಗಿ ವರ್ತಿಸುವ ಪ್ರಜ್ಞೆ ಹೋರಾಟಗಾರರಲ್ಲೂ ಕಾಣದಿರುವುದು ಸಮಸ್ಯೆಯ ಇತ್ಯರ್ಥಕ್ಕೆ ಪ್ರಮುಖ ಅಡ್ಡಿಯಾಗಿದೆ. ಪರಸ್ಪರರ ಮತ್ಸರ ವಿವೇಕವನ್ನು ನುಂಗಿಬಿಟ್ಟಿದೆ.
     ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಹೊಟ್ಟೆಕಿಚ್ಚು ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಹುಡುಕುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಹೊಟ್ಟೆಕಿಚ್ಚು ನಮ್ಮ ಬೆಳವಣಿಗೆಯನ್ನು ತಿನ್ನುತ್ತದೆ. ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ.
     ಒಟ್ಟಾರೆಯಾಗಿ ಹೇಳಬೇಕೆಂದರೆ ಹೊಟ್ಟೆಕಿಚ್ಚು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ನಮ್ಮ ಶಕ್ತಿಯನ್ನು ಇತರರಿಗೆ ಕೇಡು ಮಾಡುವ ಸಲುವಾಗಿ ಬಳಸದೆ, ಬೇರೆ ಒಳ್ಳೆಯ ಸಂಗತಿಗಳಿಗೆ ಬಳಸಿದರೆ ನಮಗೆ ನಾವೇ ಉಪಕಾರ ಮಾಡಿಕೊಂಡಂತೆ ಆಗುತ್ತದೆ. ಈ ವೇದಮಂತ್ರ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪). ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. 
-ಕ.ವೆಂ.ನಾಗರಾಜ್.

ಸೋಮವಾರ, ಡಿಸೆಂಬರ್ 18, 2017

ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಸಲ್ಲದು! (No importance to the caste by birth)


     ಪುನರ್ಜನ್ಮ ನಂಬುವವರಿಗೆ ಒಂದು ಪ್ರಶ್ನೆ: "ನೀವು ಹಿಂದಿನ ಜನ್ಮದಲ್ಲಿ ಮನುಷ್ಯರಾಗಿಯೇ ಹುಟ್ಟಿದ್ದಿರಾ? ಮನುಷ್ಯರಾಗಿಯೇ ಹುಟ್ಟಿದ್ದಿದ್ದರೂ ಈಗಿನ ಜಾತಿಯಲ್ಲೇ ಹುಟ್ಟಿದ್ದಿರಾ?" ಈ ಪ್ರಶ್ನೆಗೆ ಯಾರೂ ಉತ್ತರ ಕೊಡಲಾರರು. ಏಕೆಂದರೆ ಹಿಂದೆ ಏನಾಗಿ ಹುಟ್ಟಿದ್ದೆವೋ, ಎಲ್ಲಿ ಹುಟ್ಟಿದ್ದೆವೋ, ನಮ್ಮ ಅಪ್ಪ-ಅಮ್ಮ ಯಾರಾಗಿದ್ದರೋ ಯಾರಿಗೆ ಗೊತ್ತು? ಮುಂದೆ ಸತ್ತ ಮೇಲೆ ಮತ್ತೆ ಏನಾಗಿ ಹುಟ್ಟುತ್ತೇವೋ, ಯಾವ ಜಾತಿಯಲ್ಲಿ ಹುಟ್ಟುತ್ತೇವೋ ಅದೂ ಸಹ ಗೊತ್ತಿಲ್ಲ. ಏಕೆಂದರೆ ಸತ್ತವರು ಯಾರೂ ತಾವು ಎಲ್ಲಿದ್ದೇವೆ, ಹೇಗಿದ್ದೇವೆ ಎಂದು ತಮ್ಮ ವಿಳಾಸ ತಿಳಿಸಿ ಯಾರಿಗೂ ಏನೂ ಹೇಳುವುದೇ ಇಲ್ಲ. ಅಷ್ಟಿದ್ದೂ ಜಾತಿ, ಜಾತಿ ಎಂದು ಸಾಯುವ, ಮೇಲು-ಕೀಳು ಎಂದು ಹೊಡೆದಾಡುವ ಜನರೇ ಜಾಸ್ತಿ. ಪುನರ್ಜನ್ಮ ನಂಬದಿದ್ದವರಿಗೂ ಒಂದು ಪ್ರಶ್ನೆ: "ನೀವು ಹಿಂದೆ ಹುಟ್ಟಿರಲಿಲ್ಲ ಮತ್ತು ಮುಂದೆ ಹುಟ್ಟುವುದಿಲ್ಲ ಎಂದಾದರೆ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದೇವೆ ಎಂದು ಬೊಬ್ಬೆ ಹೊಡೆಯುವುದಾದರೂ ಏಕೆ? ಈಗ ಏನಾಗಿದ್ದೇವೆ ಅದನ್ನು ಮಾತ್ರ ಗಣನೆಗೆ ತೆಗೆದುಕೊಂಡು ವ್ಯವಹರಿಸಬೇಕಲ್ಲವೇ?" ಹಿಂದೆ ಯಾರೋ ಯಾರಿಗೋ ಅನ್ಯಾಯ ಮಾಡಿದ್ದರು ಎಂದು ಈಗ ಮತ್ಯಾರೋ ಮತ್ಯಾರನ್ನೋ ಟೀಕಿಸಿದರೆ, ಹೊಣೆ ಮಾಡಿದರೆ ಅದಕ್ಕೆ ಅರ್ಥವಿದೆಯೇ? ಬ್ರಾಹ್ಮಣ ಬ್ರಾಹ್ಮಣನಾಗಿಯೇ ಹುಟ್ಟುತ್ತಾನೆ, ಜೈನ ಜೈನನಾಗಿಯೇ ಹುಟ್ಟುತ್ತಾನೆ, ಮುಸ್ಲಿಮ ಮುಸ್ಲಿಮನಾಗಿಯೇ ಹುಟ್ಟುತ್ತಾನೆ, ಯಾವುದೇ ಜಾತಿಯವರು ಅದೇ ಜಾತಿಯಲ್ಲೇ ಹುಟ್ಟುತ್ತಾರೆ ಎಂದು ಯಾರಾದರೂ ಖಚಿತಪಡಿಸಿದರೆ, ಪ್ರಮಾಣ ಪಡಿಸಿದರೆ ಜಾತಿ ಲೆಕ್ಕಾಚಾರಗಳನ್ನು ಒಪ್ಪಿಕೊಳ್ಳೋಣ. ಇಲ್ಲವೆಂದರೆ ರಾಜಕೀಯದ ಕಾರಣಕ್ಕಾಗಿ, ಕ್ಷುಲ್ಲಕ ಸ್ವಾರ್ಥಗಳಿಗಾಗಿ ಹುಟ್ಟಿನ ಜಾತಿಗಳನ್ನು ಉಳಿಸಿಕೊಂಡು ಬಂದಿದ್ದೇವೆಂದು ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡೋಣ.
     ಈ ಜಾತಿಗಳು ದೇವರ ಸೃಷ್ಟಿಯಂತೂ ಅಲ್ಲ. ಮಾನವಸೃಷ್ಟಿ ಎಂಬುದು ನಿರ್ವಿವಾದ. ಜಗತ್ತಿನಲ್ಲಿ ವ್ಯಾಪಕವಾಗಿರುವ ಕ್ರಿಶ್ಚಿಯನ್ ಧರ್ಮ 2000 ವರ್ಷಗಳಿಗೂ ಹಿಂದೆ ಇರಲೇ ಇಲ್ಲ. ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬೇಕು ಎಂದು ಕಟಿಬದ್ಧರಾಗಿರುವ ಜನರು ಇರುವ, ಭಯೋತ್ಪಾದನೆಗೂ ಕಾರಣವಾಗಿರುವ ಇಸ್ಲಾಮ್ 1500 ವರ್ಷಗಳಿಗೂ ಹಿಂದೆ ಯಾರಿಗೂ ಗೊತ್ತೇ ಇರಲಿಲ್ಲ. ಈ ಮಾನವಬ್ರಹ್ಮ ಸಾಮಾನ್ಯನಲ್ಲ. ಅವನು ಕೇವಲ ಜಾತಿಗಳನ್ನು ಮಾತ್ರ ಅಲ್ಲ, ದೇವರುಗಳನ್ನೂ ಸೃಷ್ಟಿ ಮಾಡಿಬಿಟ್ಟಿದ್ದಾನೆ. ಹೊಸ ಹೊಸ ಜಾತಿಗಳು, ಹೊಸ ಹೊಸ ದೇವರುಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಜಾತಿ, ಜಾತಿಗಳಿಗೂ ಬೇರೆ ಬೇರೆ ದೇವರುಗಳು! ಕ್ರಿಶ್ಚಿಯನರ ದೇವರು ಏಸು, ಮುಸ್ಲಿಮರ ದೇವರು ಅಲ್ಲಾಹು, ಹಿಂದೂಗಳ ದೇವರುಗಳಂತೂ ಲೆಕ್ಕವೇ ಇಲ್ಲದಷ್ಟು ಇದ್ದಾರೆ. ದೇವರು ಒಬ್ಬನೇ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಆ ದೇವರು ನಮ್ಮ ದೇವರು ಮಾತ್ರ ಎಂದು ಬಡಿದಾಡುತ್ತೇವೆ. ನಮ್ಮ ದೇವರನ್ನು ಒಪ್ಪದಿದ್ದವರು ಕಾಫಿರರು, ಬದುಕಲು ಅರ್ಹರಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಏಸುವನ್ನು ಒಪ್ಪದಿದ್ದವರು ನರಕಕ್ಕೆ ಹೋಗುತ್ತಾರೆ ಎಂದು ಕ್ರಿಶ್ಚಿಯನರು ಹೇಳುತ್ತಾರೆ. ಹಿಂದೂಗಳಂತೂ ತಮ್ಮ ದೇವರನ್ನು ನಂಬಿದರೆ ಕೈಲಾಸಕ್ಕೋ, ವೈಕುಂಠಕ್ಕೋ, ಸ್ವರ್ಗಕ್ಕೋ ಹೋಗುತ್ತೇವೆಂದು ನಂಬುತ್ತಾರೆ. ಈಗ ಪ್ರಚಲಿತವಾಗಿರುವ ಮನುಷ್ಯರಲ್ಲಿನ ಹುಟ್ಟಿನ ಜಾತಿಗಳು ಮಾನವಸೃಷ್ಟಿ ಅಲ್ಲ ಎಂದು ಯಾರಾದರೂ ಆಧಾರಪೂರ್ವಕವಾಗಿ ಸಾಬೀತುಪಡಿಸಿದರೆ ಜಾತಿಗಳನ್ನು ಒಪ್ಪಿಕೊಳ್ಳೋಣ. ಇಲ್ಲದಿದ್ದರೆ ನಮ್ಮ ವೈಚಾರಿಕತೆಗೆ, ವಿವೇಚನಾಶಕ್ತಿಗೆ ಸ್ವಲ್ಪ ಕೆಲಸ ಕೊಡೋಣ. ಸರಿ ಯಾವುದು, ತಪ್ಪು ಯಾವುದು ಎಂದು ತರ್ಕಿಸೋಣ. 
     ಮಾನವನ ಉಗಮವಾದ ಅದೆಷ್ಟೋ ಸಹಸ್ರ ಸಹಸ್ರ ವರ್ಷಗಳ ನಂತರದಲ್ಲಿ ಈ ಜಾತಿಯ ಪಿಡುಗು ಮಾನವಕುಲಕ್ಕೆ ಮಾರಕವಾಗಿ ಕಾಡುತ್ತಿದೆ. ಸುಮಾರು ಐದು ಸಹಸ್ರ ವರ್ಷಗಳ ಹಿಂದಿನ ವೇದ ಸಾಹಿತ್ಯ ಅತ್ಯಂತ ಪುರಾತನವಾದ ಲಭ್ಯ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂಲ ವೇದಮಂತ್ರಗಳು ಸಕಲ ಚರಾಚರ ಜೀವಿಗಳೆಲ್ಲರ ಶಾಂತಿ, ನೆಮ್ಮದಿ ಬಯಸುವ ಸದಾಶಯಗಳಿಂದ ಕೂಡಿವೆ. ಅದರಲ್ಲಿನ ಯಾವುದೇ ವಿಷಯ ವಿರೋಧಾಭಾಸಗಳಿಂದ ಕೂಡಿಲ್ಲವೆಂಬುದು ವಿಶೇಷ. ವೇದೋತ್ತರ ಸಾಹಿತ್ಯಗಳೆಂದು ಹೇಳುವ ಪುರಾಣಗಳು ಇತ್ಯಾದಿಗಳಲ್ಲಿ ವಿರೋಧಾಭಾಸದ ಸಂಗತಿಗಳು, ವಿವಾದದ ವಿಚಾರಗಳು ಇರಬಹುದಾದರೂ, ವಿವಾದ, ಸಂಶಯ ಬಂದ ಸಂದರ್ಭಗಳಲ್ಲಿ ಮೂಲವೇದಮಂತ್ರಗಳು ಹೇಳುವ ಅಂಶವೇ ಪರಮಪ್ರಮಾಣವಾಗಿವೆ. ವೇದಗಳ ಹೆಸರಿನಲ್ಲಿ ಇಂದು ಆಚರಣೆಯಲ್ಲಿರುವ ಅನೇಕ ಸಂಪ್ರದಾಯಗಳು ಅವೈದಿಕವಾಗಿವೆ ಎಂದರೆ ಕಹಿ ಅನ್ನಿಸಿದರೂ ಅದು ಸತ್ಯದ ಮಾತಾಗಿದೆ. ನೈಜ ವೇದಾಧ್ಯಾಯಿಗಳು, ವೇದಪಂಡಿತರುಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸತ್ಯಶೋಧ ಮತ್ತು ಸತ್ಯಪ್ರಚಾರಕ್ಕೆ ತೊಡಗುವುದು ಒಳ್ಳೆಯದು. ವೇದಕಾಲದಲ್ಲಿ ಪ್ರಚಲಿತವಿದ್ದ ವರ್ಣಾಶ್ರಮ ಪದ್ಧತಿಯ ಬಗೆಗೂ ಸಂಕ್ಷಿಪ್ತವಾಗಿ ಗಮನಿಸೋಣ.
     ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಇಂದಿನ ಜಾತಿವ್ಯವಸ್ಥೆಗೂ ಅಂದಿನ ವರ್ಣಾಶ್ರಮ ಪದ್ಧತಿಗೂ ಸಂಬಂಧವಿಲ್ಲ. ಈಗ ಹುಟ್ಟಿನಿಂದ ಬರುವುದೆಂದು ಭಾವಿಸಲಾಗಿರುವ ಜಾತಿ ಪದ್ಧತಿಯು, ಸ್ವಾರ್ಥಿಗಳು ಮೇಲು-ಕೀಳು ಎಂಬ ನೀಚ ಭಾವನೆಗಳಿಗೆ ಅವಕಾಶ ಕೊಡುವುದಾಗಿದೆ ಮತ್ತು ವರ್ಣಾಶ್ರಮ ವ್ಯವಸ್ಥೆಗೆ ಸುದೀರ್ಘ ಕಾಲಾನಂತರದಲ್ಲಿ ಹಚ್ಚಿರುವ ಕಳಂಕವಾಗಿದೆ, ವಿರೂಪಗೊಳಿಸಿರುವುದಾಗಿದೆ. ಸರಿಯಾಗಿ ವಿವೇಚಿಸಿದರೆ, ಕಾಣುವ ದೃಷ್ಟಿಯಿದ್ದರೆ ವರ್ಣಾಶ್ರಮದಲ್ಲಿದ್ದ ಶ್ರೇಷ್ಠತೆಯನ್ನು ಗುರುತಿಸಬಹುದು.  ವರ್ಣಾಶ್ರಮ ಪದ್ಧತಿಯಲ್ಲಿ ನಾಲ್ಕು ವರ್ಣಗಳನ್ನು ಗುರುತಿಸಿದ್ದಾರೆ - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಈ ಪದಗಳನ್ನು ಒಪ್ಪಿಕೊಳ್ಳುವುದು ಬೇಡವೆಂದಾದರೆ ಬೌದ್ಧಿಕ ಪರಿಶ್ರಮ, ಬಾಹುಬಲ ಆಧಾರಿತ ಕಾರ್ಯ, ವ್ಯಾಪಾರೋದ್ಯಮ ಮತ್ತು ಕೃಷಿ ಹಾಗೂ ಶಾರೀರಿಕ ಪರಿಶ್ರಮದ ವೃತ್ತಿಗಳು ಎಂದಿಟ್ಟುಕೊಳ್ಳಬಹುದು. ವರ್ಣ ಎಂಬ ಪದದ ಅರ್ಥ 'ಆರಿಸಿಕೊಳ್ಳುವ ತತ್ವ' ಎಂದು. ಹುಟ್ಟಿನ ಜಾತಿಗೂ ವರ್ಣಕ್ಕೂ ಸಂಬಂಧವಿಲ್ಲ. ಅವರವರ ವ್ಯಕ್ತಿಗತ ಸಾಮರ್ಥ್ಯ, ಅಭಿರುಚಿ, ಗುಣ, ಸ್ವಭಾವಗಳಿಗೆ ತಕ್ಕಂತೆ ಆರಿಸಿಕೊಳ್ಳುವ ವೃತ್ತಿಯೇ ವರ್ಣ. ಇದರಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಎಲ್ಲರ ಅಭಿರುಚಿ, ಸಾಮರ್ಥ್ಯಗಳೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಕುಟುಂಬದಲ್ಲಿ ನಾಲ್ಕು ವರ್ಣಗಳವರೂ ಇರುವ ಸಾಧ್ಯತೆಯಿದೆ. ಒಬ್ಬ ಬ್ರಾಹ್ಮಣನ ಮಗ ಬ್ರಾಹ್ಮಣನೂ ಆಗಬಹುದು, ಆಗದೆಯೂ ಇರಬಹುದು; ಕ್ಷತ್ರಿಯನೂ ಆಗಬಹುದು, ಕಾರ್ಮಿಕನೂ ಆಗಬಹುದು. ಹಾಗೆಯೇ ಒಬ್ಬ ಕ್ಷತ್ರಿಯ, ವೈಶ್ಯ, ಶೂದ್ರರು ಬ್ರಾಹ್ಮಣರಾಗಲೂ ಅಭ್ಯಂತರವಿರಲಿಲ್ಲ. ಇಲ್ಲಿ ಅಭಿರುಚಿ, ಗುಣ, ಸ್ವಭಾವ ಮತ್ತು ಸಾಮರ್ಥ್ಯಕ್ಕಷ್ಟೇ ಪ್ರಾಧಾನ್ಯತೆ. 
     ಜಗತ್ತಿನ ಯಾವುದೇ ದೇಶವಿರಲಿ, ಆಸ್ತಿಕ ದೇಶವಾಗಿರಲಿ, ನಾಸ್ತಿಕ ದೇಶವಾಗಿರಲಿ, ನಾಲ್ಕು ಬಗೆಯ ಜನರು ಇದ್ದೇ ಇರುತ್ತಾರೆ - ಬೌದ್ಧಿಕ ಪ್ರಾಧಾನ್ಯರು, ಸೈನಿಕರು ಮುಂತಾದ ಶಕ್ತಿ ಪ್ರಾಧಾನ್ಯರು, ವ್ಯಾಪಾರಿಗಳು ಮತ್ತು ಶ್ರಮಿಕರು! ಯಾರು ಒಪ್ಪಲಿ, ಬಿಡಲಿ ಈ ಸಹಜ ವಿಂಗಡಣೆ ಇದ್ದೇ ಇರುತ್ತದೆ. ಇದನ್ನು ವಿರೋಧಿಸಿ ಎಲ್ಲರೂ ಬುದ್ಧಿಜೀವಿಗಳಾಗಲಿ, ಎಲ್ಲರೂ ಸೈನಿಕರಾಗಲಿ, ಎಲ್ಲರೂ ವ್ಯಾಪಾರಿಗಳಾಗಲಿ ಅಥವ ಎಲ್ಲರೂ ಕಾರ್ಮಿಕರಾಗಲಿ, ಎಲ್ಲರೂ ಒಂದೇ ವೃತ್ತಿಯನ್ನು ಆರಿಸಿಕೊಳ್ಳಲಿ ಎಂದು ಬಯಸಿದರೂ ಅದು ಸಾಧ್ಯವಾಗದು. ಈ ನಾಲ್ಕು ವರ್ಗಗಳೂ ದೇಶದ ಅಭಿವೃದ್ದಿಗೆ ಅತ್ಯಗತ್ಯ ಮತ್ತು ಪರಸ್ಪರ ಪೂರಕ; ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಇಂತಹ ವರ್ಗಗಳನ್ನು ಸಮಾನ ಗೌರವದಿಂದ ಕಾಣುವುದು ಮತ್ತು ಹುಟ್ಟಿನ ಜಾತಿಗೆ ಅನಗತ್ಯ ಪ್ರಾಮುಖ್ಯತೆ ನೀಡುವುದು ತಪ್ಪಿದಲ್ಲಿ ಸಧೃಢ ಸಮಾಜ ನಿರ್ಮಾಣ ಸಾಧ್ಯ. ಸಮಾನತೆ ಸಾರುವ ವೇದಮಂತ್ರದ ಕರೆ ನಮ್ಮನ್ನು ಎಚ್ಚರಿಸಲಿ:
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ | ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.5.60.5.) 
     ಅರ್ಥ: ಈ ಮಾನವರು ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರೂ ಅಲ್ಲ, ಪರಸ್ಪರ ಸಹೋದರರು. ಸೌಭಾಗ್ಯಪ್ರಾಪ್ತಿಗಾಗಿ ಮುಂದುವರೆಯುತ್ತಾರೆ. ಶಿಷ್ಟರಕ್ಷಕ, ದುಷ್ಟಶಿಕ್ಷಕ ಪರಮಾತ್ಮ ಇವರೆಲ್ಲರ ತಂದೆ. ಭೂಮಾತೆ ಈ ಮರ್ತ್ಯರಿಗೆಲ್ಲಾ ಉತ್ತಮ ಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
-ಕ.ವೆಂ.ನಾಗರಾಜ್.

ಸೋಮವಾರ, ಡಿಸೆಂಬರ್ 4, 2017

ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ! (We are the creators of our personality)


     "ಪ್ರತಿಯೊಬ್ಬರೂ ತಾವು ತಾವಾಗಿರಬೇಕು; ಜೀವನದ ಮೂಲ ನಿಯಮವಿದು. ಎಲ್ಲರೂ ತಾವು ತಾವಾಗಿರದೆ ಬೇರಾರೋ ಆಗಬೇಕೆಂಬುದನ್ನೇ ಬಯಸಿ ಬೇರೊಬ್ಬರಂತೆ ಆಗಲು ಪ್ರಯತ್ನಿಸುತ್ತಾರೆ. ಮಹಾವೀರರಂತೆ ಆಗಬೇಕು, ಬುದ್ಧರಂತಾಗಬೇಕು, ಗಾಂಧಿಯಂತಾಗಬೇಕು ಎಂದೆಲ್ಲಾ ಧೋರಣೆಗಳನ್ನೂ ಎಲ್ಲರ ಮೇಲೆ ಆರೋಪಿಸುತ್ತಲೇ ನಾವು ಸಾಗುತ್ತಿರುವೆವು. ಇದು ಅತ್ಯಂತ ಅವಮಾನಕರ ಕೃತ್ಯ. ಪ್ರತಿಯೊಬ್ಬರ ವೈಯಕ್ತಿಕತೆಯ ಮೇಲೂ ನಾವು ದಾಳಿ ಮಾಡುತ್ತಿರುವೆವು. ಯಾರಿಗೇ ಆಗಲಿ, ನೀನು ಗಾಂಧಿಯಂತೆ ಆಗಬೇಕು ಎಂದು ಹೇಳಿದರೆ, ಇದಕ್ಕಿಂತ ಹೆಚ್ಚಿನ ಅವಮಾನ ಬೇರಾವುದೂ ಇಲ್ಲ. ಏಕೆಂದರೆ ಆತ ಗಾಂಧಿಯಾಗಲು ಹುಟ್ಟಿಲ್ಲ. ಒಬ್ಬ ಗಾಂಧಿ ಈಗಾಗಲೇ ಹುಟ್ಟಿ ಆಗಿದೆ. ಇನ್ನೊಬ್ಬ ಗಾಂಧಿಯ ಅಗತ್ಯವೇನಿದೆ? ನೀನು ಗಾಂಧಿಯಾಗು ಎಂದು ಹೇಳಿದರೆ, ಆ ವ್ಯಕ್ತಿ ತನ್ನಂತೆ ತಾನು ಇರಬಾರದೆಂದು, ಆತನಿಗೆ ಆತನಾಗಿರುವ ಹಕ್ಕಿಲ್ಲ ಎಂದಂತಾಯಿತು; ಬೇರಾರನ್ನೋ ಆತ ನಕಲು ಮಾಡಬೇಕೆಂದಾಯಿತು. ಆದ್ದರಿಂದ ಪ್ರತಿಯೊಬ್ಬರೂ ಅವರವರಂತೆಯೇ ಆಗಬೇಕು. ಬೇರೊಬ್ಬರಂತಲ್ಲ" - ಇವು ಓಶೋರವರ ಮಾತುಗಳು. ಸತ್ಯ  ಕಠಿಣವಾಗಿರುತ್ತದೆ. ಈ ಜಗತ್ತಿನಲ್ಲಿ ಯಾರೇ ಇಬ್ಬರು ವ್ಯಕ್ತಿತ್ವಗಳಲ್ಲಿ ಸಾಮ್ಯತೆ ಕಾಣುವುದು ಕಷ್ಟ. ಸ್ವಲ್ಪವಾದರೂ ಭಿನ್ನತೆ ಇದ್ದೇ ಇರುತ್ತದೆ. ಹಾಗಿರುವಾಗ ನಮ್ಮತನವನ್ನು ಉಳಿಸಿಕೊಂಡು ಬೆಳೆಯಲು ಸಾಧ್ಯವಿದೆಯಲ್ಲವೇ? ಗಾಂಧಿಯೇ, ಆಗಲಿ, ವಿವೇಕಾನಂದರೇ ಆಗಲಿ, ಯಾವುದೇ ಮಹಾಪುರುಷರೆಂದು ಗೌರವಿಸುವ ವ್ಯಕ್ತಿಗಳೇ ಆಗಲಿ ಅವರುಗಳು ತಾವು ತಾವೇ ಆಗಿದ್ದರಿಂದಲೇ ಪ್ರಸಿದ್ಧರಾದುದು!  
     ಅದೇನೋ ಸರಿ, ಆದರೆ ಈಗಿರುವ ನಮ್ಮ ವ್ಯಕ್ತಿತ್ವ ಹೇಗಿದೆ? ನಾವು ಹೇಗಿದ್ದೇವೆ ಎಂಬುದನ್ನು ತಿಳಿಯುವುದಾದರೂ ಹೇಗೆ? ನಮ್ಮನ್ನು ನಾವು ಅರಿಯಬೇಕೆಂದರೆ ನಾವು ನಮ್ಮನ್ನು ಹೊರಗಿನವರು ನೋಡುವ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ನಮ್ಮ ಬಗ್ಗೆ ನಾವು ಪ್ರಾಮಾಣಿಕವಾಗಿ ವಿಮರ್ಶಿಸಿಕೊಳ್ಳಲು ಸಾಧ್ಯವಿದೆ. ಬೇರೆಯವರು ಆ ಕೆಲಸ ಮಾಡಲಾರರು. ಏಕೆಂದರೆ ನಾವು ನಿಜಜೀವನದಲ್ಲಿ ನಮ್ಮಂತೆ ನಾವಾಗಿರುವುದಿಲ್ಲ. ನಾವು ಇತರರಿಗೆ ಮೋಸ ಮಾಡಬಲ್ಲೆವು, ಆದರೆ ನಮಗೆ ನಾವೇ ಮೋಸ ಮಾಡಿಕೊಳ್ಳಲಾಗುವುದಿಲ್ಲ. ನಮ್ಮ ಅಂತರಂಗ ನಾವು ಏನು ಅನ್ನುವುದನ್ನು ನಿರ್ಭಿಡೆಯಿಂದ, ನಿರ್ವಂಚನೆಯಿಂದ ನಮಗೆ ಹೇಳಬಲ್ಲದು. ನಮ್ಮನ್ನು ನಾವು ನೋಡಿಕೊಳ್ಳುವುದು ಹೇಗೆ? ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ನಮ್ಮಿಂದ ಬರುವ ಉತ್ತರಗಳೇ ನಾವು ಏನಾಗಿದ್ದೇವೆ ಎಂಬುದನ್ನು ತಿಳಿಸಿಬಿಡುತ್ತದೆ!
೧. ನಮ್ಮ ನಿಜವಾದ ವ್ಯಕ್ತಿತ್ವ ಯಾವುದು?
     ನಮ್ಮ ಈಗಿರುವ ವ್ಯಕ್ತಿತ್ವ ನಮ್ಮ ನಿಜವಾದ ವ್ಯಕ್ತಿತ್ವ ಆಗಿರಲಾರದು. ಅದು ಇನ್ನೊಬ್ಬರನ್ನು ಮೆಚ್ಚಿಸುವ, ಓಲೈಸುವ ಸಲುವಾಗಿ ನಿಜವಾದ ನಮ್ಮತನವನ್ನು ಮುಚ್ಚಿಟ್ಟುಕೊಂಡಿರುವ, ಇತರರ ಅಭಿಪ್ರಾಯ, ಅನಿಸಿಕೆಗಳನ್ನು ಆಧರಿಸಿರುವ ಮುಖವಾಡವಾಗಿರುವ ಸಾಧ್ಯತೆ ಇರುತ್ತದೆ. ಒಬ್ಬ ಸಾಹಿತಿಯೋ, ವಿದ್ವಾಂಸನೋ ಯಾವುದೋ ಪ್ರಶಸ್ತಿಯೋ, ಸವಲತ್ತಿನ ನಿರೀಕ್ಷೆಯೋ, ಮತ್ತಾವುದೋ ಕಾರಣದಿಂದ ತನಗೆ ಇಷ್ಟವಿಲ್ಲದ ರಾಜಕಾರಣಿಯನ್ನೋ, ಅಧಿಕಾರಿಯನ್ನೋ ಓಲೈಸುತ್ತಾನೆ, ಹೊಗಳುತ್ತಾನೆ ಎಂದರೆ ಅದು ಅವನ ನೈಜ ವ್ಯಕ್ತಿತ್ವ ಆಗಿರಲಿಕ್ಕೆ ಸಾಧ್ಯವಿಲ್ಲ ಅಲ್ಲವೆ? ನಾವು ನಿಜವಾಗಿ ಏನು ಎಂಬುದು ನಮ್ಮ ಅಂತರಂಗಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅಯ್ಯೋ, ನಾನು ಹೀಗೇಕೆ ಮಾಡಿದೆ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡು ನಾವೇ ಉತ್ತರಿಸಲು ಪ್ರಯತ್ನಿಸಬೇಕು. ಬರುವ ಉತ್ತರವೇ, ನಾನು ಹೀಗೆ ಮಾಡಬೇಕಿತ್ತು ಎಂಬುದು.
೨. ನಾವು ಗೌರವಿಸುವ ಗುಣಗಳು ಯಾವುವು?
     ನಾವು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಯಾವ ವಿಷಯಗಳಿಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲವೋ ಅವು ನಮ್ಮ ಗುಣಗಳು! ಅಂತಹ ಗುಣಗಳು ಯಾವುವು ಎಂಬ ಬಗ್ಗೆ ನಮಗೆ ನಾವೆ ಸ್ಪಷ್ಟಪಡಿಸಿಕೊಳ್ಳಬೇಕು. ಅದು ಪ್ರಾಮಾಣಿಕತೆಯೇ, ಬದ್ಧತೆಯೇ, ಭದ್ರತೆಯೇ, ಹೊಂದಿಕೊಂಡು ಹೋಗುವುದೇ, ಸಮಯಕ್ಕೆ ತಕ್ಕಂತೆ ಆಡುವ ನಾಟಕವೇ, ಇತ್ಯಾದಿಗಳಲ್ಲಿ ಯಾವುದು? ಮಹತ್ವ ಕೊಡುವುದು ಕಾರ್ಯದಕ್ಷತೆಗೋ, ವಿಧೇಯತೆಗೋ? ಜವಾಬ್ದಾರಿಗೋ, ಆಸೆ-ಆಕಾಂಕ್ಷೆಗೋ? ಉತ್ತರವನ್ನು ನಾವೇ ಕೊಡಬೇಕು. 
೩. ನಮ್ಮ ಶರೀರದ ಅರಿವು ನಮಗಿದೆಯೇ?
     ನಮ್ಮ ಶರೀರದ ಸ್ಥಿತಿ ಬಗ್ಗೆ ನಮಗೆ ತಿಳುವಳಿಕೆ ಇದೆಯೇ? ನಮ್ಮ ಉಸಿರಾಟ, ದೇಹದ ಬಲ, ಇತಿ-ಮಿತಿಗಳ ಅರಿವು ಹೊಂದಿರಬೇಕು. ಅಯ್ಯೋ, ಈ ಕೆಲಸ ನನಗೆ ಮಾಡಲಾಗುವುದಿಲ್ಲ, ಇದು ನನ್ನ ಶಕ್ತಿಗೆ ಮೀರಿದ್ದು ಎಂದು ಪ್ರಯತ್ನ ಮಾಡುವ ಮುನ್ನವೇ ಅಂದುಕೊಳ್ಳುವವರಾದರೆ, ನಾವು ಭೂಮಿಯ ಮೇಲಿನ ಸುಂದರ ದೇವಾಲಯವಾದ ನಮ್ಮ ಶರೀರದ ಉಪಯೋಗ ಪಡೆಯದೆ ಅನೇಕ ಅಮೂಲ್ಯ ಸಂಗತಿಗಳ, ಸಾಧ್ಯತೆಗಳ ಬಾಗಿಲುಗಳನ್ನು ಮುಚ್ಚಿದ್ದೇವೆ ಎಂದೇ ಅರ್ಥ.
೪. ನಮ್ಮ ಕನಸುಗಳ ಬಗ್ಗೆ ನಮ್ಮ ನಿಲುವು ಹೇಗಿದೆ?
     ನಮ್ಮ ಕನಸುಗಳು ಮತ್ತು ಆಸೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ನಾವು ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಲು ಅವು ಸಹಕಾರಿ. ಇಲ್ಲಿ ಪ್ರಸ್ತುತವಾಗುವುದು ನಮ್ಮ ಕನಸುಗಳು! ನಮ್ಮ ಕನಸುಗಳಿಗಿಂತ ಕಡಿಮೆಯಾದವುಗಳನ್ನು ಒಪ್ಪಿಕೊಳ್ಳಲೇಬಾರದು. ನಮ್ಮ ಕನಸುಗಳೇನು ಎಂದು ನಮಗೆ ಸ್ಪಷ್ಟವಾದರೆ ಅದನ್ನು ನನಸಾಗಿಸಲು ಪ್ರಯತ್ನ ಮಾಡಲೇಬೇಕು. ಸಂಗೀತಗಾರನಾಗಬೇಕೋ, ಬರಹಗಾರನಾಗಬೇಕೋ, ಆಟಗಾರನಾಗಬೇಕೋ, ಹೀಗೆ ಯಾವುದೇ ಕನಸಾಗಿರಲಿ. ಅದರ ಕುರಿತು ಸಾಧನೆ ಮಾಡುವುದು ನಮ್ಮ ದಿನನಿತ್ಯದ ಕಾರ್ಯಕ್ರಮದ ಭಾಗವಾಗಬೇಕು. ಧೃತಿಗೆಡದೆ, ಸೋಲುಗಳಿಗೆ, ಅಡ್ಡಿ-ಅಡಚಣೆಗಳಿಗೆ ಅಂಜದೆ ಮುಂದುವರೆಯುವುದಾದರೆ ಯಶಸ್ಸು ಒಲಿಯಲೇಬೇಕು. ಅಂತಹ ನಿಲುವು ನಮ್ಮದಾಗಿದೆಯೇ?
೫. ಇಷ್ಟಪಡುವ, ಇಷ್ಟಪಡದಿರುವ ಸಂಗತಿಗಳು ಯಾವುವು?
     ನಾವು ಇಷ್ಟಪಡುವ ಮತ್ತು ಇಷ್ಟಪಡದಿರುವ ಸಂಗತಿಗಳ ಬಗ್ಗೆ ನಮಗೆ ತಿಳಿದಿರುತ್ತದೆ. ಹಲ್ಲು ಉಜ್ಜಲು ಬಳಸುವ ಟೂತ್ ಪೇಸ್ಟ್ ಇರಬಹುದು, ಸೋಪು ಇರಬಹುದು, ಹೀಗೆ ಯಾವುದೇ ಇರಬಹುದು, ಎಲ್ಲರೂ ಬಳಸುವಂತಹ ಜನಪ್ರಿಯವಾದ ಬ್ರಾಂಡುಗಳ ಪದಾರ್ಥ ಬಳಸುತ್ತೇವೆಯೇ ಅಥವ ಉದ್ದೇಶ ಈಡೇರಿಕೆಗೆ ಅನುಕೂಲವಾದ ಪದಾರ್ಥಗಳನ್ನು ಬಳಸುತ್ತೇವೆಯೇ? ನಮ್ಮ ಇಷ್ಟಾನಿಷ್ಟಗಳ ಸಂಗತಿಗಳಿಗೆ ಸಂಬಂಧಿಸಿದಂತೆ ಧೃಡ ನಿಲುವು ಹೊಂದಿ ಅನುಸರಿಸಿದರೆ ಸಂತೋಷ, ತೃಪ್ತಿ ನಮ್ಮದಾಗುತ್ತದೆ. ನಮ್ಮ ಇಷ್ಟಗಳು ನಮ್ಮವು, ಅವನ್ನು ಬೇರೆಯವರು ಒಪ್ಪಬೇಕಿಲ್ಲ, ನಾವು ಒಪ್ಪಿದರೆ ಸಾಕು! ನಾವು ನಾವಾಗಿದ್ದೇವೆಯೇ? 
     ಮೇಲಿನ ಪ್ರಶ್ನೆಗಳಿಗೆ ನಮ್ಮ ಉತ್ತರಗಳೇನು ಎಂಬುದೇ ನಮ್ಮ ವ್ಯಕ್ತಿತ್ವದ ಅಳತೆಗೋಲಾಗುತ್ತದೆ. ಅದನ್ನು ನಮಗೇ ಒಪ್ಪಿಕೊಳ್ಳಲು ಆಗದಿದ್ದರೆ ನಾವು ಸುಧಾರಣೆಗೊಳ್ಳುವ ಅಗತ್ಯವಿದೆ ಎಂದು ತಿಳಿಯಬೇಕು. ನಮ್ಮ ಅಂತರಂಗವೇ ನಾವು ಹೇಗಿರಬೇಕು ಎಂಬುದಕ್ಕೆ ಸೂಚನೆ ಕೊಡಬಲ್ಲದು. ನಮ್ಮ ಒಳದನಿಯನ್ನು ಹತ್ತಿಕ್ಕಲು ಪ್ರಯತ್ನಿಸದೆ ಅದರ ಮಾತುಗಳನ್ನು ಕೇಳಿದರೆ, ಅದರಂತೆ ನಡೆದರೆ ನಾವೂ ಮಹಾಪುರುಷರೇ ಸರಿ. ಇದನ್ನೇ ಆಧ್ಯಾತ್ಮವಾದಿಗಳು ಆತ್ಮ ಸಾಕ್ಷಾತ್ಕಾರ ಎನ್ನುತ್ತಾರೆ. ಆತ್ಮ ಸಾಕ್ಷಾತ್ಕಾರವೆಂದರೆ ಬೇರೆ ಏನೂ ಅಲ್ಲ, ನಮ್ಮನ್ನು ನಾವು ಅರಿತುಕೊಳ್ಳುವುದು. ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ!
-ಕ.ವೆಂ.ನಾಗರಾಜ್.

ಭಾನುವಾರ, ನವೆಂಬರ್ 12, 2017

ಸಂಕುಚಿತತೆಯ ಬೇಲಿ ಕಿತ್ತೊಗೆಯಬೇಕಿದೆ!


     "ಈಗಲೂ ನಮ್ಮ ರೀತಿ-ನೀತಿಗಳನ್ನು ಬದಲಾಯಿಸಿಕೊಳ್ಳಲು ಸಮಯವಿದೆ. ಅರ್ಥವಿಲ್ಲದ, ಸ್ವಭಾವತಃ ವಿವೇಕಯುತವಲ್ಲದ ಸಂಗತಿಗಳ ಕುರಿತು ಎಲ್ಲಾ ಹಳೆಯ ಚರ್ಚೆಗಳನ್ನು, ಹಳೆಯ ಸಂಘರ್ಷಗಳನ್ನು ಬಿಟ್ಟುಬಿಡಬೇಕು. ಹಿಂದಿನ ಆರು ಅಥವ ಏಳು ಶತಮಾನಗಳಲ್ಲಿ ಆಗಿರುವ ಕೆಳಗೆ ಜಾರುವ ಪ್ರಕ್ರಿಯೆಗಳ ಬಗ್ಗೆ, ನಾವು ಒಂದು ಲೋಟ ನೀರನ್ನು ಬಲಗೈಯಿಂದ ಕುಡಿಯಬೇಕೋ, ಎಡಗೈಯಿಂದ ಕುಡಿಯಬೇಕೋ, ನಾವು ಐದು ಸಲ ಬಾಯಿ ಮುಕ್ಕಳಿಸಬೇಕೋ, ಆರು ಸಲವೋ, ಎಂಬಂತಹ ಚರ್ಚೆಗಳ ಬಗ್ಗೆ ಹಿರಿಯರು ಹಲವಾರು ವರ್ಷಗಳವರೆಗೆ ನಡೆಸಿದ ಚರ್ಚೆಗಳ ಬಗ್ಗೆ  ಯೋಚಿಸಿ, ಇಂತಹ ಕ್ಷುಲ್ಲಕ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಂಡು ಜೀವಿಸಿದ ಮತ್ತು ಅವುಗಳ ಕುರಿತು ದರ್ಶನ ಗ್ರಂಥಗಳನ್ನು ಬರೆದಂತಹ ಜನರಿಂದ ನಾವು ಏನು ತಾನೇ ನಿರೀಕ್ಷಿಸಬಲ್ಲೆವು? ನಮ್ಮ ಧರ್ಮ ಅಡುಗೆಮನೆಯನ್ನು ಸೇರಿಕೊಳ್ಳುವ ಅಪಾಯವಿದೆ. ನಾವು ಹೆಚ್ಚಿನವರು ವೇದಾಂತಿಗಳೂ ಅಲ್ಲ, ಅತ್ತ ಪುರಾಣಿಕರೂ ಅಲ್ಲ ಅಥವ ತಾಂತ್ರಿಕರೂ ಅಲ್ಲ. ನಾವು ಕೇವಲ ಅಸ್ಪೃಷ್ಯರು. ನಮ್ಮ ಧರ್ಮ ಅಡುಗೆಮನೆಯಲ್ಲಿದೆ. ನಮ್ಮ ದೇವರೆಂದರೆ ಅಡುಗೆ ಮಾಡುವ ಪಾತ್ರೆ ಮತ್ತು ನಮ್ಮ ಧರ್ಮವೆಂದರೆ, 'ನನ್ನನ್ನು ಮುಟ್ಟಬೇಡ, ನಾನು ಪವಿತ್ರ'. ಇದು ಇನ್ನು ಒಂದು ಶತಮಾನದವರೆಗೆ ಮುಂದುವರೆದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಹುಚ್ಚಾಸ್ಪತ್ರೆಯಲ್ಲಿರಬೇಕಾಗುತ್ತದೆ. ಜೀವನದ ದೊಡ್ಡ ಸಮಸ್ಯೆಗಳ ಬಗ್ಗೆ ಗ್ರಹಿಸಲಾಗದಿರುವುದು ನಮ್ಮ ಮೆದುಳು ಬಲಹೀನವಾಗುತ್ತಿರುವ ಸ್ಪಷ್ಟ ಚಿಹ್ನೆ; ನಮ್ಮ ಮೂಲಸ್ವಭಾವ ಕಳೆದುಹೋಗುತ್ತದೆ, ಮೆದುಳು ತನ್ನೆಲ್ಲಾ ಶಕ್ತಿಯನ್ನು, ಚಟುವಟಿಕೆಗಳನ್ನು ಕಳೆದುಕೊಳ್ಳುತ್ತದೆ ಮತ್ತು ಅದು ತಾನು ಕಾಣುವ ಕೇವಲ ಅತ್ಯಂತ ಸಣ್ಣ ತಿರುವಿನ ಸುತ್ತಲೇ ಸುತ್ತುತ್ತಿರಲು ಹವಣಿಸುತ್ತದೆ."
     ಮೇಲಿನ ಮಾತುಗಳನ್ನು ಆಡಿದವರು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರು! ಅವರು ಈ ಮಾತುಗಳನ್ನು ಹೇಳಿ ಒಂದೂವರೆ ಶತಮಾನವೇ ಕಳೆದಿದೆ. ಅವರ ಮಾತು ನಿಜವಾಗುತ್ತಿದೆಯೆಂಬಂತೆ ಇಂದು ವಿಚಾರಗಳನ್ನು ಬದಿಗಿಟ್ಟು ಕುರುಡು ಆಚಾರಗಳನ್ನೇ ಪಾಲಿಸಿಕೊಂಡು ಬರುತ್ತಾ, ಅದನ್ನೇ ಇತರರ ಮೇಲೆ ಹೇರುವ ಪ್ರಯತ್ನಗಳು ಬಲವಾಗಿ ಮಾನವತ್ವ ಕಡೆಗಣಿತವಾಗುತ್ತಿದೆ ಮತ್ತು ಮೆದುಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಧರ್ಮವೇ ಬೇರೆ, ನಾವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಮತವೇ ಬೇರೆ, ನಮ್ಮ ರೀತಿಯೇ ಬೇರೆ ಇತ್ಯಾದಿ ವಾದಗಳಲ್ಲಿ ಎಲ್ಲವನ್ನೂ ಬೇರೆ ಬೇರೆ ಮಾಡುತ್ತಾ ಸಮಾಜವನ್ನು ಒಗ್ಗೂಡಿಸಬೇಕಾದ ಸಂಗತಿಗಳೇ ಸಮಾಜವನ್ನು ವಿಘಟಿಸುವ ಹಂತಕ್ಕೆ ತಂದಿವೆ. ಇಷ್ಟೇ ಆದರೆ ಪರವಾಗಿಲ್ಲ, ಎಲ್ಲರೂ ನಮ್ಮ ವಾದವನ್ನೇ ಒಪ್ಪಬೇಕು, ನಮ್ಮ ವಿಚಾರವನ್ನೇ ಅಂಗೀಕರಿಸಬೇಕು ಎನ್ನುವ ಹಟ ಎಲ್ಲಾ ಕೂಪಮಂಡೂಕ ಪ್ರಭೃತಿಗಳಿಗೂ ಇರುವುದು ಪರಿಸ್ಥಿತಿಯನ್ನು ಜಟಿಲಗೊಳಿಸುತ್ತಿದೆ. ಮತೀಯ ಹುಚ್ಚಾಟ ಭಯೋತ್ಪಾದಕತೆ, ಮಾನವ ಜೀವಗಳ ಮಾರಣಹೋಮಕ್ಕೆ ಕಾರಣವಾಗಿದೆ. ಮಾನವ ಹತ್ಯೆಯನ್ನೂ ಧರ್ಮಸಮ್ಮತ ಎಂದು ನಂಬುವವರು, ಪಾಲಿಸುವವರು ವಿಚಾರ ಮಾಡುವ ಶಕ್ತಿಯನ್ನು ಕಳೆದುಕೊಂಡ ಮಾನವರೂಪಿ ರಾಕ್ಷಸರಲ್ಲದೇ ಮತ್ತೇನೂ ಅಲ್ಲ. ವೈಚಾರಿಕತೆಯನ್ನು ಒಪ್ಪದ ಯಾವುದೇ ಧರ್ಮ ಧರ್ಮವೇ ಅಲ್ಲ, ಧರ್ಮಶಾಸ್ತ್ರಗಳು ಧರ್ಮಶಾಸ್ತ್ರಗಳೇ ಅಲ್ಲ.   
     ಭಾರತೀಯ ಸನಾತನ ಧರ್ಮ ತನ್ನಲ್ಲಿ ಅನೇಕ ವೈಚಾರಿಕ ಭೇದಗಳನ್ನು ಹೊಂದಿರುವವರಿಗೂ ಆಶ್ರಯ ನೀಡಿದೆ. ವಿವಿಧ ಮತ, ಪಂಥಗಳಿದ್ದರೂ ಅವರವರ ವಿಚಾರ, ರೀತಿ-ನೀತಿಗಳನ್ನು ಗೌರವಿಸುವ ಮನೋಭಾವವನ್ನು ಜನರಲ್ಲಿ ಬಿತ್ತಿದೆ. ದೇವರಿಲ್ಲ ಎನ್ನುವ ಚಾರ್ವಾಕರನ್ನೂ ಅದು ತನ್ನ ಮಡಿಲಿನಲ್ಲಿ ಹೊಂದಿದೆ. ಕಾಲಕ್ಕೆ ತಕ್ಕಂತೆ ಅನೇಕ ರೂಢಿಗತ ಸಂಪ್ರದಾಯಗಳೂ ಬದಲಾವಣೆ ಕಂಡಿವೆ. ಇಷ್ಟಿದ್ದೂ ಸಹ ಅನೇಕ ಸಂಪ್ರದಾಯವಾದಿಗಳು ಹಿಂದಿನ ರೀತಿ-ನೀತಿಗಳಿಗೇ ಜೋತುಬಿದ್ದು, ಅದನ್ನು ಅನುಸರಿಸದವರನ್ನು ನಿಕೃಷ್ಟವಾಗಿ ಕಾಣುವುದೂ ಇದೆ. ಇಂತಹ ಮನೋಭಾವದವರೇ ತಮ್ಮ ಧರ್ಮ, ಜಾತಿ, ಮತಗಳಿಗೆ ಕೆಟ್ಟ ಹೆಸರು ತರುವವರು ಮತ್ತು ಇದರಿಂದಾಗಿ ಇಡೀ ಸಮೂಹವನ್ನೇ ದೂಷಣೆಗೆ ಒಳಪಡಿಸುವವರು ಎಂಬ ಮಾತಿನಲ್ಲಿ ಹುರುಳಿದೆ. ಅಂತಹ ಒಂದು ಸಂಗತಿಯನ್ನು ಸಂಕ್ಷಿಪ್ತ ಮತ್ತು ಸೂಕ್ಷ್ಮವಾಗಿ ಇಲ್ಲಿ ಚರ್ಚಿಸಿದೆ.
     ಅಪೌರುಷೇಯವೆನ್ನಲಾಗುವ ವೇದಗಳು ಕೇವಲ ಮಾನವ ಮಾತ್ರರಲ್ಲ, ಸಕಲ ಚರಾಚರ ಜೀವ ಸಂಕುಲವೆಲ್ಲದರ ಹಿತ, ಸುಖ, ಶಾಂತಿ, ನೆಮ್ಮದಿ ಬಯಸುವ ಅತ್ಯುನ್ನತ ಮತ್ತು ಅತ್ಯುತ್ತಮ ಜ್ಞಾನಭಂಡಾರ. ಈ ಜ್ಞಾನ ಕೇವಲ ಕೆಲವರ ಸ್ವತ್ತಲ್ಲ ಮತ್ತು ಆಗಬಾರದು ಕೂಡಾ. ವೇದಗಳಲ್ಲಿನ ವಿಶಾಲತೆಯನ್ನು ಪೌರಾಣಿಕರು, ಸಾಂಪ್ರದಾಯಿಕರು ಸಂಕುಚಿತಗೊಳಿಸಿದ್ದಾರೆ, ಬೇಲಿ ಹಾಕಿ ಸೀಮಿತಗೊಳಿಸಿದ್ದಾರೆ ಎಂದರೆ ಅದು ಕಟುವಾದ ಸತ್ಯವೇ ಸರಿ. ಅನೇಕ ಸಂಪ್ರದಾಯಗಳು, ರೀತಿ ನೀತಿಗಳು ಪ್ರಾರಂಭಗೊಂಡ ಸಮಯದಲ್ಲಿ ಅಂದಿನ ಜೀವನ ಪದ್ಧತಿಗೆ, ರೀತಿ-ನೀತಿಗಳಿಗೆ, ಸಮಾಜದ ಹಿತಕ್ಕೆ ಪೂರಕವಾಗಿದ್ದಿರಬಹುದು. ಆದರೆ ಸಮಾಜ ಬದಲಾದಂತೆ, ಸಮಾಜದ ರೀತಿ-ನೀತಿಗಳು ಬದಲಾದಂತೆ ಸಂಪ್ರದಾಯಗಳೂ ಸೂಕ್ತವಾಗಿ ಬದಲಾಗಬೇಕಾಗುವುದು ಅಗತ್ಯ ಮತ್ತು ಅನಿವಾರ್ಯ. ಅನೇಕ ಸಂಪ್ರದಾಯಗಳು ಬದಲಾದ ರೀತಿಯಲ್ಲಿ ಆಚರಿಸಲ್ಪಡುತ್ತಿರುವುದೂ ವಾಸ್ತವ. ಆದರೂ ಕೆಲವು ಸಂಗತಿಗಳು, ಸಂಪ್ರದಾಯಗಳು ಇನ್ನೂ ಬದಲಾಗದ ಭದ್ರ ಚೌಕಟ್ಟಿನ ಒಳಗೇ ಇರುವುದೂ ವಾಸ್ತವವೇ. ಅಂತಹ ಒಂದು ಸಂಗತಿಯೇ ವೇದಾಭ್ಯಾಸ. ವೇದಗಳನ್ನು ಉಪನಯನವಾದವರು ಮಾತ್ರ ಅಧ್ಯಯನ ಮಾಡಬಹುದು, ಉಪನಯನಕ್ಕೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮೂರು ವರ್ಣದವರು ಮಾತ್ರ ಅರ್ಹರು, ಶೂದ್ರರು ಮತ್ತು ಸ್ತ್ರೀಯರು ವೇದಾಧ್ಯಯನ ಮಾಡುವಂತಿಲ್ಲ ಎಂಬುದು ಸಾಂಪ್ರದಾಯಿಕರ ಸಿದ್ಧಾಂತವಾಗಿದೆ. ಈ ಸಾಂಪ್ರದಾಯಿಕರ ನಿಲುವಿಗೆ ವಿರುದ್ಧವಾದ ಅಂಶಗಳು ಮತ್ತು ಸಂಗತಿಗಳು ವೇದಗಳಲ್ಲೇ, ವೇದಕಾಲದ ಸಾಕ್ಷ್ಯಗಳಿಂದಲೇ ಲಭ್ಯವಿವೆ. ಇಂದಿನ ವಸ್ತುಸ್ಥಿತಿಯೇ ಭಿನ್ನವಾಗಿದೆ. ಇಂದಿನ ಪರಿಸ್ಥಿತಿಗೆ ತಕ್ಕಂತೆ ನಮ್ಮ ನಿಲುವನ್ನು ವೇದಗಳು ಸಾರುವ ವಿಶಾಲತೆಯ ಹಿನ್ನೆಲೆಯಲ್ಲಿ ಮಾರ್ಪಡಿಸಿಕೊಳ್ಳದಿದ್ದರೆ ಅಮೂಲ್ಯವಾದ ಜ್ಞಾನಭಂಡಾರವನ್ನು ನಾವು ಕಳೆದುಕೊಳ್ಳುವ ದಿನಗಳು ದೂರವಿಲ್ಲ.
     ಇಂದಿನ ವಸ್ತುಸ್ಥಿತಿಯೆಂದರೆ ಮಾಡುವ ವೃತ್ತಿ ಅನುಸರಿಸಿ ನಿರ್ಧರಿತವಾಗುವ ವರ್ಣಾಶ್ರಮ ಪದ್ಧತಿ ನಶಿಸಿಹೋಗಿ ಯಾವುದೋ ಕಾಲವಾಗಿದೆ. ಈಗ ಇರುವುದು ಮತ್ತು ಜೀವಂತವಾಗಿ ಉಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಕಟಿಬದ್ಧರಾಗಿ ನಿಂತಿರುವುದು ಹುಟ್ಟಿನ ಆಧಾರದ ಜಾತಿಪದ್ಧತಿ ಮಾತ್ರ. ಈಗ ಇರುವುದು ಹುಟ್ಟಿನ ಬ್ರಾಹ್ಮಣರು, ಹುಟ್ಟಿನ ವೈಶ್ಯರು ಮತ್ತು ಹುಟ್ಟಿನ ಆಧಾರದ ಅಸಂಖ್ಯ ಜಾತಿಗಳು! ಈಗ ವರ್ಣಾಶ್ರಮದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರಿಲ್ಲ. ಆದ್ದರಿಂದ ಉಪನಯನ, ವೇದಾಧ್ಯಯನಗಳ ಆಧಾರಸ್ತಂಭಗಳೇ ಮೂಲರೀತಿಯಲ್ಲಿ ಅಸ್ತಿತ್ವದಲ್ಲಿ ಇಲ್ಲ. ಗುರುಕುಲ ಪದ್ಧತಿ ಅಳಿದು ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿ ಬಂದ ಮೇಲಂತೂ ಉಪನಯನದ ಮಹತ್ವವೂ ಅಳಿದುಹೋಗಿದೆ. ವೇದಾಧ್ಯಯನ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ಕೆಲವು ಪೂಜಾ ಮಂತ್ರಗಳು, ಹೋಮ-ಹವನದ ಮಂತ್ರಗಳು, ಇತ್ಯಾದಿಗಳನ್ನು ಕಲಿಸುವವರು ಮತ್ತು ಕಲಿಯುವವರು ಕಂಡುಬರುತ್ತಾರೆ. ಬ್ರಾಹ್ಮಣ್ಯದ ನಿಜವಾದ ಅರ್ಥವನ್ನು ತಿಳಿದು ಅದರಂತೆ ಇರುವ ಎಷ್ಟು ಬ್ರಾಹ್ಮಣರಿದ್ದಾರೆ? ವೇದಗಳನ್ನು ಅರ್ಥಸಹಿತವಾಗಿ ಅಧ್ಯಯನ ಮಾಡಿ ಇನ್ನೊಬ್ಬರಿಗೆ ಹೇಳಿಕೊಡಬಲ್ಲ ಸಾಮರ್ಥ್ಯ ಇರುವವರ ಸಂಖ್ಯೆ ಎಷ್ಟು? ಕಲಿಯಲು ಆಸಕ್ತಿ ಮತ್ತು ಸಮಯ ಇರುವವರೆಷ್ಟು? ಸಾಂಪ್ರದಾಯಿಕರು ಹೇಳುವಂತೆ ಸ್ವತಃ ಉಪನಯನ ಮಾಡಿಕೊಂಡು, ಸ್ವಸಾಮರ್ಥ್ಯದಿಂದ ವೇದಾಧ್ಯಯನ ಮಾಡುವವರದು ಲೌಕಿಕ ಸಾಮರ್ಥ್ಯವಾಗುತ್ತದೆ, ಶಾಸ್ತ್ರೀಯ ಸಾಮರ್ಥ್ಯವಾಗುವುದಿಲ್ಲವೆಂದರೂ, ಇಂದು ಲೌಕಿಕವಾಗಿಯಾದರೂ ವೇದದ ಜ್ಞಾನಭಂಡಾರದ ಪ್ರಯೋಜನವನ್ನು ಪಡೆಯುವುದು ಅಮೂಲ್ಯ ಜ್ಞಾನಸಂಪತ್ತಿನ ಉಳಿಕೆಗೆ ಅತ್ಯಗತ್ಯವಾಗಿದೆ. ಕಲಿತಿರುವ ಜ್ಞಾನವನ್ನು ಆಸಕ್ತರಿಗೆ ಕಲಿಸದವರು ಕಳ್ಳರೇ ಸರಿ ಎಂಬುದು ವೇದ ಸಾರುವ ನೀತಿಯೇ ಆಗಿದೆ. ಸಾಂಪ್ರದಾಯಿಕರು, ಮಠ-ಮಂದಿರಗಳ ಪೀಠಾಧಿಪತಿಗಳು ಲೋಕಹಿತದ ದೃಷ್ಟಿಯಿಂದ ವೇದಗಳು ಸಾರುವ ವಿಶಾಲ ಮನೋಭಾವವನ್ನು ಮೈಗೂಡಿಸಿಕೊಂಡು, ಪಟ್ಟಭದ್ರರು ನಿರ್ಮಿಸಿರುವ ಬೇಲಿಗಳನ್ನು ಕಿತ್ತೊಗೆದು, ವೇದಾಧ್ಯಯನ ಮಾಡಲಿಚ್ಛಿಸುವ ಎಲ್ಲರಿಗೂ ಉಪನಯನ ಸಂಸ್ಕಾರ ನೀಡುವ, ಲೌಕಿಕವಾಗಿಯಾಗಲೀ, ಶಾಸ್ತ್ರೀಯವಾಗಿಯಾಗಲೀ ವೇದಾಧ್ಯಯನಕ್ಕೆ ಮುಕ್ತ ಅವಕಾಶ ನೀಡುವ ಮನಸ್ಸು ಮಾಡಿದರೆ ಅದೊಂದು ಲೋಕಕಲ್ಯಾಣಕ್ಕೆ ಬಹು ದೊಡ್ಡ ಕಾಣಿಕೆಯಾಗುತ್ತದೆ. 
-ಕ.ವೆಂ.ನಾಗರಾಜ್.

ಶುಕ್ರವಾರ, ನವೆಂಬರ್ 10, 2017

ಅಸೂಯೆಗೆ ಮದ್ದೇನು?


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ |
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ ||
     ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಕಾರಿಯಾಗಿರುವ ಜಠರಾಗ್ನಿಯನ್ನು ವೈಶ್ವಾನರ ಎನ್ನುತ್ತಾರೆ. ವೈಶ್ವಾನರ ತಿಂದ ಆಹಾರವನ್ನು ಜೀರ್ಣಿಸಿದರೆ, ಅಸೂಯೆಯಿಂದ ನರಳುವವನು ಕಂಡ ಕಂಡವರನ್ನೆಲ್ಲಾ ಸುಡುತ್ತಾನೆ. ಮಂಕರೊಡನೆ ಮೌನವಾಗಿರುವುದಾದರೂ ಒಳ್ಳೆಯದು, ಆದರೆ ಮತ್ಸರಿಸುವವರೊಂದಿಗೆ ಸ್ನೇಹವೂ ಅಪಾಯಕಾರಿಯೇ ಸರಿ. ಈ ಅಸೂಯೆ ಒಂದು ಋಣಾತ್ಮಕ ಗುಣ. ಮನುಷ್ಯನನ್ನು ಕುಬ್ಜನನ್ನಾಗಿಸುವ ಈ ಗುಣ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ, ಪ್ರಮಾಣ ಹೆಚ್ಚು ಕಡಿಮೆಯಿರಬಹುದು. ಯಾರಾದರೂ ತಾನು ಪಡೆದುಕೊಳ್ಳಬಯಸುವ ಗುಣ, ಸಾಧನೆ, ಗೌರವ, ವಸ್ತು, ಇತ್ಯಾದಿಗಳನ್ನು  ತನಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರೆ ಮತ್ತು ತನಗೆ ಅದು ಸಾಧ್ಯವಾಗದಿದ್ದ ಸಂದರ್ಭಗಳಲಿ ಅಸೂಯೆ ತಲೆ ತೂರಿಸುತ್ತದೆ ಮತ್ತು ಆ ರೀತಿ ಹೊಂದಿದಾತ ಅವುಗಳನ್ನು ಕಳೆದುಕೊಳ್ಳಬೇಕೆಂದು ಬಯಸುತ್ತದೆ ಮತ್ತು ಅವನ ನಾಶವನ್ನು ಬಯಸುತ್ತದೆ. ತನಗೆ ಸಾಧ್ಯವಾಗದಿದ್ದುದು ಅವನಿಗೂ ಸಾಧ್ಯವಾಗಬಾರದು ಎಂದು ಕುತ್ಸಿತ ಕ್ರಿಯೆಗಳನ್ನು ಮಾಡಲು, ಅಡ್ಡಿ ಮಾಡಲು ಪ್ರೇರಿಸುತ್ತದೆ. ಸಾಧಕರು ಮಾತ್ರ ಇಂತಹ ಭಾವನೆಗಳಿಂದ ದೂರವಿದ್ದು ಸತತ ಪ್ರಯತ್ನ, ಶ್ರಮಗಳಿಂದ ತಮ್ಮ ಸಾಧನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ, ಜೀವನದ ಎಲ್ಲಾ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ಅಸೂಯಾಪರರು ಸಾಮಾನ್ಯವಾಗಿ ಕಂಡುಬರುತ್ತಾರೆ.
     ಅಸಂತೋಷದ ಬಲಿಷ್ಠವಾದ ಕಾರಣವೇ ಅಸೂಯೆ. ಅಸೂಯೆಯ ಕಾರಣದಿಂದ ಅಸಂತುಷ್ಟನಾಗಿರುವ ವ್ಯಕ್ತಿ ಇತರರೂ ಅಸಂತೋಷದಿಂದ ನರಳಬೇಕು, ಅವರಿಗೆ ಕೆಡುಕಾಗಬೇಕು ಎಂದು ಹಂಬಲಿಸುತ್ತಾನೆ. ಮನೋವಿಶ್ಲೇಷಕರು ಇತ್ತೀಚೆಗೆ ಎರಡು ವಿಧದ ಅಸೂಯೆಗಳಿದ್ದು, ಒಂದು ದುರುದ್ದೇಶದ ಮತ್ತು ಇನ್ನೊಂದು ಪ್ರೇರಕ ಅಸೂಯೆಯೆಂದು ಗುರುತಿಸಿದ್ದಾರೆ. ದುರುದ್ದೇಶದ ಅಸೂಯೆ ಹೊಂದಿರುವವರು ಯಾರ ಬಗ್ಗೆ ಅಸೂಯೆ ಹೊಂದಿದ್ದಾರೋ ಅವರ ಪತನವನ್ನು ಬಯಸುತ್ತಾರೆ ಮತ್ತು ಅವರ ನೋವು, ದುಃಖಗಳನ್ನು ಸಂಭ್ರಮಿಸುವ ಮನೋಭಾವದವರಾಗಿರುತ್ತಾರೆ. ಇನ್ನೊಂದು ರೀತಿಯವರಿಗೆ ತಾವೂ ಅವರಂತೆಯೇ ಆಗಬೇಕೆಂದು ಪ್ರಯತ್ನಿಸಲು ಅಸೂಯೆ ಪ್ರೇರಕವಾಗುತ್ತದೆ.
     ತಾನು ಹೊಂದಿಲ್ಲದ ಐಷಾರಾಮಿ ಕಾರನ್ನು ಪಕ್ಕದ ಮನೆಯವನು ಹೊಂದಿರುವುದು, ತಾನು ಬಯಸಿದ ಹುದ್ದೆಯಲ್ಲಿ ಇನ್ನೊಬ್ಬರು ಇರುವುದು, ತನಗಿಲ್ಲದ ಪ್ರಾಧಾನ್ಯತೆ ಇನ್ನೊಬ್ಬರಿಗೆ ಸಿಗುವುದು, ಯಾವುದೋ ಸಂಘ-ಸಂಸ್ಥೆಯ ಪದಾಧಿಕಾರ ತನಗೆ ಸಿಗದೆ ಇನ್ನೊಬ್ಬರ ಪಾಲಾಗುವುದು ಅಸೂಯೆ ಹುಟ್ಟಲು ಕಾರಣಗಳಾಗುತ್ತವೆ. ನಾನು ಸರ್ಕಾರಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ನನಗೆ ವರ್ಗಾವಣೆ ಆಗಿದ್ದ ಸ್ಥಳಕ್ಕೆ ಪ್ರಯತ್ನಿಸಿದ್ದ ನನ್ನ ಮಿತ್ರ ಅಧಿಕಾರಿ ನನ್ನ ಮೇಲೆ ವಿನಾಕಾರಣ ದ್ವೇಷ ಸಾಧಿಸತೊಡಗಿದ್ದುದು ನನಗೆ ಆಶ್ಚರ್ಯವಾಗಿತ್ತು. ನಾನು ಬಯಸಿ ಆ ಸ್ಥಳಕ್ಕೆ ಬಂದಿಲ್ಲವೆಂದು, ಬೇಕಿದ್ದರೆ ಇದೇ ಹುದ್ದೆಗೆ ಪ್ರಯತ್ನಿಸಿ ಹಾಕಿಸಿಕೊಳ್ಳಲು ಆತನಿಗೆ ಹೇಳಿದುದನ್ನೂ ಆತ ತಪ್ಪಾಗಿಯೇ ಭಾವಿಸಿದ್ದ. ಅಸೂಯೆ ಬುದ್ಧಿಗೆ ಮಂಕು ಕವಿಸುತ್ತದೆ ಮತ್ತು ಮಿತ್ರತ್ವವನ್ನೂ ನಾಶಪಡಿಸುತ್ತದೆ. ಈ ಅಸೂಯೆಯನ್ನು ನಿಯಂತ್ರಿಸುವ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡ್ತಿ ಸೂಕ್ತ ಪರಿಹಾರಗಳನ್ನು ಮನೋವಿಜ್ಞಾನಿಗಳು ಸೂಚಿಸುವುದು ಅಗತ್ಯವಾಗಿದೆ. ಇಂತಹ ವಿಷಯದಲ್ಲಿ ಯಾರೂ ಆಪ್ತ ಸಮಾಲೋಚಕರ ಸಲಹೆ ಪಡೆಯುವುದಕ್ಕೆ ಹೋಗುವುದಿಲ್ಲ. ಅಸೂಯಾಪರರು ಇತರರು ತಮ್ಮ ಬಗ್ಗೆ ಅಸೂಯೆ ಹೊಂದಿದ್ದಾರೆಂದು ಭಾವಿಸುತ್ತಾರೆ. ತಾವು ಅವರಿಗಿಂತ ಮೇಲಿನವನು ಎಂಬ ಭಾವನೆ ಹೊಂದಿದ ಅಸೂಯಾಪರ ತನ್ನ ಪ್ರತಿಸ್ಪರ್ಧಿಯ ಬಲವನ್ನು ಕುಗ್ಗಿಸಲು ಕೀಳು ಪ್ರಯತ್ನವನ್ನೂ ಮಾಡಲು ಹೇಸುವುದಿಲ್ಲ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ |
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ ||
     'ಇತರರ ಒಳ್ಳೆಯ ಅಭಿವೃದ್ಧಿಯನ್ನು ಕಂಡು ಅನುಭವವಾಗುವ ನೋವೇ ಅಸೂಯೆ' ಎಂದು ಅರಿಸ್ಟಾಟಲ್ ಹೇಳಿರುವುದು ಅರ್ಥವತ್ತಾಗಿದೆ. ಇನ್ನೊಬ್ಬರಿಗಿಂತ ಹೆಚ್ಚು ಅಥವ ಮೇಲು ಅನ್ನಿಸುವ ಎಷ್ಟೋ ಸಂಗತಿಗಳು ಇದ್ದರೂ, ಯಾವುದೋ ಒಂದರಲ್ಲಿ ಇನ್ನೊಬ್ಬರು ತನಗಿಂತ ಮೇಲಾಗಿದ್ದರೆ ಅದು ಅಸಹನೆಗೆ ಕಾರಣವಾಗಿಬಿಡುತ್ತದೆ. ಇದು ಇರುವ ಸಂತೋಷವನ್ನೂ ಕಿತ್ತುಕೊಳ್ಳುತ್ತದೆ. ಮನುಷ್ಯನ ವೈರಿಯಾದ ಮತ್ಸರ ಯಾವುದೇ ರೀತಿಯ ಒಳಿತನ್ನು ಮಾಡದ, ಕೆಡುಕನ್ನೇ ತರುವ ಋಣಾತ್ಮಕ ಗುಣವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ವೈರಿಯ ಎರಡು ಕಣ್ಣೂ ಹೋಗಲಿ ಎಂದು ಬಯಸುವುದೇ ಈ ಮತ್ಸರ. ಇದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಅಸೂಯೆ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ?
     ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪) ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಸೂಯೆ ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
-ಕ.ವೆಂ.ನಾಗರಾಜ್.