ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 13, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -15

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ|
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ|| (ಋಕ್.10.62.4)

     [ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

     ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇದಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.
-ಪಂ.ಸುಧಾಕರ ಚತುರ್ವೇದಿ.

2 ಕಾಮೆಂಟ್‌ಗಳು: